ಅಂಗದಲ್ಲಿ ಕಟ್ಟಿದ ವಸ್ತ್ರವ ಬಿಟ್ಟು ನೋಡಲಾಗಿ, ಲಿಂಗದ ಕುರುಹು ಇಲ್ಲದಿರೆ, ಇದೇನು ಅಂಗ ನಾಸ್ತಿಯಾದೆ, ಐಘಟವ ಬಿಟ್ಟು ಘಟ ನಾಸ್ತಿಯಾದೆ ಎಂಬುದಕ್ಕೆ ಮೊದಲೇ ಅಂಗ ಬಯಲಾಯಿತ್ತು, [ಐಘಟದೂರ] ರಾಮೇಶ್ವರಲಿಂಗದಲ್ಲಿ.
ಉದಯ ಮುಖದ ಪ್ರಸಾದ ಸದಮಲದ ಬೆಳಗೇ ಸದ್ರೂಪವಾಗಿ ಸರ್ವಾಂಗವನೊಳಕೊಂಡಿತ್ತು ನೋಡಾ. ಆ ಪ್ರಸಾದ ಸರ್ವಾಂಗವನೊಳಕೊಂಡು ಮೂರ್ತಿಯಾಗಿ ಆ ಪ್ರಸಾದವೆ ತದಾಕಾರವಾಗಿ ನಿಲ್ಲಲು, ಆ ಪ್ರಸಾದದೊಳಗೆ ಆ ಅಂಗ ಬಯಲಾಯಿತ್ತು ನೋಡಾ. ಮಧ್ಯಾಹ್ನ ಮುಖದ ಪ್ರಸಾದ ಶುದ್ಧ ಸ್ವಯಂಜ್ಯೋತಿ ಚಿದ್ರೂಪವಾಗಿ ಮನವನೊಳಕೊಂಡಿತ್ತು. ಆ ಪ್ರಸಾದದಲ್ಲಿ ಆ ಮನ ಬಯಲಾಯಿತ್ತು ನೋಡಾ. ಅಸ್ತಮಯ ಮುಖದ ಪ್ರಸಾದ ಪ್ರಸನ್ನಿಕೆ ಶತಕೋಟಿ ಸೋಮ ಸೂರ್ಯರ ಉದಯದಂತೆ ಆನಂದ ಸ್ವರೂಪವಾಗಿ ಪ್ರಜ್ವಲಿಸುತ್ತಿದೆ ನೋಡಾ. ಆ ಪ್ರಸಾದವೆನ್ನ ಭಾವವ ನುಂಗಿತ್ತಾಗಿ, ಭಾವ ಬಯಲಾಯಿತ್ತು ನೋಡಾ. ಭಾವ ಬಯಲಾಯಿತ್ತಾಗಿ, ಆ ಪ್ರಸಾದ ನಿರ್ಭಾವ ಪ್ರಸಾದತ್ವನೆಯ್ದಿ, ನಿರ್ವಯಲಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದಡೆ ಆ ಬಲ್ಲ ಬಲ್ಲವರೆಲ್ಲ ಆ ಬಲ್ಲೆಯಲ್ಲಿ ಅಲ್ಲತ್ತಗೊಳುತ್ತಿದ್ದರು. ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದಲ್ಲೇ ಬಯಲಾಯಿತ್ತು, ಗುರುಸಿದ್ಧಮಲ್ಲಾ
ಜಂಬೂದ್ವೀಪದ ಮಧ್ಯದಲ್ಲಿ ಹುಟ್ಟಿ ಬೆಳೆದ ವಂಶದ ಏಕವಿಂಶತಿಗ್ರಂಥಿಯ ಕೊರೆದು ಮೇಲಕ್ಕೆ ಹೋದ ಅಗ್ನಿಯ ಒಡಲೊಳಗೆ ಈರೇಳು ಲೋಕವ ನುಂಗಿದ ತುಂಬಿಯ ಅಂಗಕ್ಕಳಿವಿಲ್ಲದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಬಯಲಾಯಿತ್ತು.