ನಿತ್ಯ ಗುರುಲಿಂಗಜಂಗಮಕ್ಕೆ ಪೂಜೆಯ ಮಾಡಿ ನಿತ್ಯ ಮುಕ್ತಿಯ ಪಡೆಯಲರಿಯದೆ, ಮತ್ತತನದಿಂದೆ ಅನಿತ್ಯ ಫಲಭೋಗವ ಪಡೆದು ಮರ್ತ್ಯದ ಭವಜಾಲದಲ್ಲಿ ಸುತ್ತಿ ಸುತ್ತಿ ಸುಳಿದು ತೊಳಲಿ ಬಳಲುವ ವ್ಯರ್ಥರ ನೋಡಿ ನಗುತಿರ್ದನು ನಮ್ಮ ಅಖಂಡೇಶ್ವರನು.
ವಿಷ್ಣು ಬಲ್ಲಿದನೆಂಬೆನೆ ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ. ಬ್ರಹ್ಮ ಬಲ್ಲಿದನೆಂಬೆನೆ ಶಿರ ಹೋಗಿ ನಾನಾ ವಿಧಿಯಾದ. ವೇದ ಬಲ್ಲಿತ್ತೆಂಬೆನೆ ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ ಲಿಂಗದ ನಿಲುಕಡೆಯ ಕಾಣದು. ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ. ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ. ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು. ಇದು ಕಾರಣ ಕೂಡಲಸಂಗಯ್ಯನೆ ನಿತ್ಯ, ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
ಇವು ಮೂರೂ ನಿತ್ಯವಾದಡೆ, ಮಾಯೆಯೂ ಆತ್ಮನು ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗುತ್ತಿಪ್ಪವು ನೋಡಾ. ಶಿವನೆ ಉತ್ಪತ್ತಿ ಸ್ಥಿತಿ ಪ್ರಳಯರಹಿತನಾಗಿ ನಿತ್ಯನಾಗಿಪ್ಪನು ನೋಡಾ. ಇದು ಕಾರಣ, ಅನಿತ್ಯವಾದ ಪಶುಪಾಶಂಗಳ ನಿತ್ಯವೆಂಬುದು ಅದು ಅಜ್ಞಾನ ನೋಡಾ. ಶಿವಜ್ಞಾನೋದಯದಿಂದ ತಿಳಿದುನೋಡಿದರೆ, ಶಿವತತ್ವವೊಂದೇ ನಿತ್ಯವು; ಉಳಿದವೆಲ್ಲವು ಅನಿತ್ಯ ಕಾಣ. ಹೀಂಗೆಂದು ಕಂಡ ಕಾಣಿಕೆ ನೀನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಅಯ್ಯಾ, ನಿಮ್ಮ ಶರಣರೆನಗೆ ಭಕ್ತಿಯಿಲ್ಲೆಂಬುವರು ಅದು ದಿಟವೆಂಬುದೇ ನಿಷೆ*: ದ್ವೈತಾದ್ವೈತ ಯೋಗ ಮಾರ್ಗಿಗಳಲ್ಲಿ. ಅಯ್ಯಾ, ನಿಮ್ಮ ಪ್ರಮಥರೆನಗೆ ಜ್ಞಾನವಿಲ್ಲೆಂಬುವರು. ಅದು ಸಹಜವೆಂಬುದೇ ನಿಷೆ*: ಅನಿತ್ಯ ನಿತ್ಯವೆಂಬುವ ಮನದಲ್ಲಿ. ಅಯ್ಯಾ, ನಿಮ್ಮ ಭಕ್ತರು ಎನಗೆ ವೈರಾಗ್ಯವಿಲ್ಲೆಂಬುವರು ಅದು ಬದ್ಧವೆಂಬುದೇ ನಿಷೆ*: ತನ್ನ ಸತ್ಕ್ರಿಯಾನುಕೂಲೆಯಾದ ಸತಿಸುತಾಲಯಂಗಳಲ್ಲಿ. ಅಯ್ಯಾ, ನಿಮ್ಮ ಶರಣರಿದು ಸತ್ಯವೆಂಬುವರು, ಅದು ನಿತ್ಯವೆಂಬುದೆ ನಿಷೆ*: ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಂದಂತಿಪ್ಪುದು.