ತನ್ನ ಪ್ರೀತಿಯ ಪುತ್ರ ಮಿತ್ರಾದಿಗಳು ಪರದೇಶದೊಳಗಿಪ್ಪರೆಂಬ ಭಾವದಲ್ಲಿ
ಅಡಗಿದ ಆನಂದಕ್ಕಿಂತ
ಮನಮುಟ್ಟಿ ನೆನೆವುದರಿಂದಾದ ಆನಂದ ಮಿಗಿಲಾಗಿಪ್ಪುದು ನೋಡಾ !
ಮನಮುಟ್ಟಿ ನೆನೆವುದರ ಸುಖಕ್ಕಿಂತ, ಅವರನಪ್ಪಿ ಆಲಂಗಿಸುವುದರಿಂದಾದ ಸುಖ
ಅಧಿಕವಾಗಿ ತೋರ್ಪುದು ನೋಡಾ !
ಒಮ್ಮೆ ಅಪ್ಪಿ ಆಲಂಗಿಸಿದ ಆನಂದಕ್ಕಿಂತ ಅವರೊಡನೆ ಸದಾ ಕೂಡಿಪ್ಪ ಹರ್ಷ
ಹಿರಿದಾಗಿಪ್ಪುದು ನೋಡಾ !
ಇಂತೀ ದೃಷ್ಟಾಂತದಂತೆ, ಪರಶಿವಲಿಂಗವ ಭಾವದಲ್ಲಿ ಭಾವಿಸುವುದಕ್ಕಿಂತ
ಮನಮುಟ್ಟಿ ನೆನೆವುದು, ಮನಮುಟ್ಟಿ ನೆನೆವುದಕ್ಕಿಂತ ಕಣ್ಮುಚ್ಚಿ ಕಾಣುವುದು,
ಕಣ್ಮುಚ್ಚಿ ಕಾಣುವುದಕ್ಕಿಂತ ಕರಮುಟ್ಟಿ ಪೂಜಿಸುವುದು,
ಕರಮುಟ್ಟಿ ಪೂಜಿಸುವುದಕ್ಕಿಂತ ಸದಾ ಅಂಗದಲ್ಲಿ ಹಿಂಗದೆ ಧರಿಸುವ ಹರ್ಷವು,
ಪರಮಾವಧಿಯಾಗಿಪ್ಪುದು ನೋಡಾ !
ಇದು ಕಾರಣ_ಕೂಡಲಚೆನ್ನಸಂಗಯ್ಯನ ಶರಣರು
ಭಾವದಿಂದ ಮನಕ್ಕೆ, ಮನದಿಂದ ನೇತ್ರಕ್ಕೆ, ನೇತ್ರದಿಂದ ಕರಕ್ಕೆ
ಆ ಶಿವಲಿಂಗವ ಬಿಜಯಂಗೈಸಿಕೊಂಡು
ಪೂಜಾದಿ ಸತ್ಕ್ರಿಯೆಗಳನಗಲದೆ ಆಲಸದೆ ಆಚರಿಸುತಿಪ್ಪರು