ಅಥವಾ

ಒಟ್ಟು 17 ಕಡೆಗಳಲ್ಲಿ , 9 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಮೊದಲಿಗೆ ಮರ ನೀರನೆರೆದಡೆ ಎಳಕುವುದಲ್ಲದೆ, ಕಡೆ ಕಿಗ್ಗೊಂಬಿಗೆರೆದವರುಂಟೆ ? ಅರಿದು ಪೂಜಿಸುವಲ್ಲಿ ಹರಿವುದು ಮನಪಾಶ. ಅರಿದು ಅರ್ಪಿಸುವಲ್ಲಿ ಲಿಂಗದ ಒಡಲೆಲ್ಲ ತೃಪ್ತಿ. ತನ್ನನರಿದಲ್ಲಿ ಸಕಲಜೀವವೆಲ್ಲ ಮುಕ್ತಿ. ತನ್ನ ಸುಖದುಃಖ ಇದಿರಿಗೂ ಸರಿಯೆಂದಲ್ಲಿ, ಅನ್ನಬ್ಥಿನ್ನವಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ರೂಪನರಿದು ರುಚಿಯನುಂಡು ಅವರ ನಿಹಿತಂಗಳ ಕಂಡು ಮತ್ತೆ ಲಿಂಗಕ್ಕೆ ಅರ್ಪಿಸಿ ಪ್ರಸಾದ ಮುಂತಾಗಿ ಕೊಂಡೆಹೆನೆಂಬ ವರ್ತಕಭಂಡರ ನೋಡಾ. ಕಟ್ಟಿ ಹುಟ್ಟದ ರತ್ನ, ಸುಗುಣ ಅಪ್ಪು ತುಂಬದ ಮುತ್ತು ಕಳೆ ತುಂಬದ ಬೆಳಗು, ಹೊಳಹುದೋರದ ಸೂತ್ರ ಲವಲವಿಕೆಯಿಲ್ಲದ ಚಿತ್ತ, ಇದಿರಗುಣವನರಿಯದ ಆತ್ಮ. ಇಂತಿವು ಫಲಿಸಬಲ್ಲವೆ ? ಕ್ರೀಯನರಿದು ಅರ್ಪಿಸಬೇಕು. ಅರ್ಪಿಸುವಲ್ಲಿ ದೃಷ್ಟಾಂತದ ಸಿದ್ಧಿ ಪ್ರಸಿದ್ಧವಾಗಬೇಕು. ಕಾಣದವಗೆ ತಾ ಕಂಡು ಕುರುಹಿನ ದಿಕ್ಕ ಅರುಹಿ ತೋರುವನ ತೆರನಂತೆ ತಾ ಲಕ್ಷಿಸಿದಲ್ಲಿ, ತಾ ದೃಷ್ಟಿಸಿದಲ್ಲಿ, ತಾ ಮುಟ್ಟಿದಲ್ಲಿ ಅರ್ಪಿತವಾದ ಪ್ರಸಾದಿಯ ಕಟ್ಟು. ದಹನ ಚಂಡಿಕೇಶ್ವರಲಿಂಗವು ತಾನಾದ ಚಿತ್ತದವನ ಮುಟ್ಟು.
--------------
ಪ್ರಸಾದಿ ಲೆಂಕಬಂಕಣ್ಣ
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ* ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಟದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತ್ರಿವಿಧವ ಮಲವೆಂದರಿತು ತನ್ನ ಸುಖಕ್ಕೋಸ್ಕರವಾಗಿ ವಸ್ತುವಿನಿಂದ ನಿರ್ಮಲವಾಯಿತ್ತೆಂದು ಮುಟ್ಟಬಹುದೆ ? ಲಿಂಗಭೋಗೋಪಭೋಗಂಗಳೆಂದು ಬಿಟ್ಟ ನಿರ್ಮಾಲ್ಯವನರ್ಪಿಸಬಹುದೆ ? ಇಂತಿವನರಿದು ಅರ್ಪಿಸುವಲ್ಲಿ ಸಲ್ಲದೆಂಬುದ ತಾನರಿತು ಮತ್ತೆ ಸಲುವುದೆಂಬಲ್ಲಿ ಅನರ್ಪಿತ ಅರ್ಪಿತವುಂಟೆ ? ಇಂತಿವ ದೃಷ್ಟದಿಂದ ಲಕ್ಷಿತನಾಗಿ ಮುಟ್ಟುವ ತೆರನ ನೀವೆ ಬಲ್ಲಿರಿ ನಾವರಿಯೆವು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ಬಲ್ಲ.
--------------
ಪ್ರಸಾದಿ ಭೋಗಣ್ಣ
ಸಕಲಪದಾರ್ಥದ್ರವ್ಯಂಗಳೆಲ್ಲವ ಲಿಂಗಕ್ಕೆ ಮುಟ್ಟಿಸಿ ಪ್ರಸಾದ ಮುಂತಾಗಿ ತಾ ಮುಟ್ಟಿಹೆನೆಂಬಲ್ಲಿ ತನ್ನ ಸಂಕಲ್ಪದ ಗುಣವೊ? ಘನಲಿಂಗಕ್ಕೆ ತೃಪ್ತಿಮಾಡಿ ಒಕ್ಕುದ ಕೊಂಡಿಹೆನೆಂಬ ಕಟ್ಟಳೆಯ ಗುಣವೊ ? ಇಂತೀ ಸತ್ಕ್ರೀಮಾರ್ಗಂಗಳನರಿದು ಅರ್ಪಿಸುವಲ್ಲಿ ಲಿಂಗಮುಂತಾಗಿ ತಾ ಕೊಂಬನಾಗಿ ಲಿಂಗಕ್ಕೆ ಮರೆದು ತಾ ಕೊಂಡಿಹೆನೆಂಬಲ್ಲಿ ಲಿಂಗಕ್ಕೆ ತಾನೊಳಗೊ ಹೊರಗೊ - ಎಂಬುದ ತಿಳಿದು, ಸಂದುದ ಕೈಕೊಂಡು, ಸಲ್ಲದೆ ಮರವೆಯಿಂದ ಬಂದುದ ಚರಲಿಂಗದ ಮುಖದಿಂದ ಸಂದುದ ಕೈಕೊಂಬುದು ಅಂಗಸೋಂಕು, ಆತ್ಮಸೋಂಕು, ಅರಿವುಸೋಂಕು, ಈ ತ್ರಿವಿಧ ಸೋಂಕು ಪರಿಪೂರ್ಣವಾದುದು ಅರ್ಪಿತ, ಅವಧಾನಿಯ ಕಟ್ಟು. ಹೀಂಗಲ್ಲದೆ ಮಿಕ್ಕಾದುದೆಲ್ಲವೂ ವಾಚಾಲಕರ ಕಟ್ಟುಕದ ಮಾತು. ಆ ಮಾತಿನ ಮಾಲೆಯೆಲ್ಲವೂ ಭ್ರಷ್ಟ, ಭೋಗಬಂಕೇಶ್ವರಲಿಂಗದಲ್ಲಿ ನಿಹಿತಾಚಾರಿಗಳ ಕಟ್ಟು.
--------------
ಶ್ರೀ ಮುಕ್ತಿರಾಮೇಶ್ವರ
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ ಸತ್ಯ ಸದೈವರ ಸಹಪಙ್ಞ್ತಯಲ್ಲಿ ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ? ಭರಿತಾರ್ಪಣದ ಯುಕ್ತಿಯ ಭಿತ್ತಿಯೊ? ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ? ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ? ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ, ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ, ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು, ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ. ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು, ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು. ಇಂತೀ ವಿಷಯ ವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ? ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ ಚಲನೆಯ ಗುಣ ಹೆರೆಹಿಂಗದು. ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ, ಲಿಂಗಾಂಗ ಪರಿಪೂರ್ಣನೆಂಬೆ. ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು ಈ ವ್ರತವನಂಗೀಕರಿಸಿದನಾದಡೆ ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ. ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ ಚೆನ್ನಬಸವಣ್ಣನ ಕೋರಡಿಯ ಕೊಡುವೆ. ಸಂಗನಬಸವಣ್ಣನ ಮೆಚ್ಚಿಸುವೆ. ಪ್ರಭು ನಿಜಗುಣದೇವರ ತಲೆದೂಗಿಸುವೆ. ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು, ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಕಾಷ*ಪದಾರ್ಥವನರಿದು, ಕರ್ಮಪದಾರ್ಥವ ಶೋಧಿಸಿಕೊಂಡು, ವರ್ಮಪದಾರ್ಥವ ನಿರ್ಧರಿಸಿ, ಇಂತೀ ಪದಾರ್ಥಂಗಳ ಅರ್ಪಿಸುವಲ್ಲಿ ಬಂದ ಬಟ್ಟೆ, ಮುಂದಣ ಪಯಣ. ನಿಂದ ಮಧ್ಯದಲ್ಲಿ ಕಾಬ ಸುಖಂಗಳ ಸಂದನಳಿದುದು, ಭರಿತಾರ್ಪಣ ಸಂದಿಗೊಂದಿಯ ಸಂಸಾರಿಗಳಲ್ಲಿ ಬೆಂಬಳಿಯಾಗಿಹುದೆ ? ಅವರ ಮಂದಿರಂಗಳಲ್ಲಿ ಸ್ತುತಿನಿಂದ್ಯಾದಿಗಳ ತಂದುಕೊಳ್ಳದೆ, ಅವರಿಗೆ ಬಂಧ ಮೋಕ್ಷ ಕರ್ಮಂಗಳ ಭಾವಕ್ಕೆ ಸಂದನಿಕ್ಕದೆ, ತಾ ಬಂದನಲ್ಲದಿಪ್ಪುದೆ ಭರಿತಾರ್ಪಣ. ಇಂತೀ ನಿಹಿತ ತಿಳಿದು, ಸಂಸಾರ ಘಾತಕವ ಬಿಟ್ಟು, ಪರದೇಶಿಕತ್ವವಾದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ದೃಷ್ಟಿಯಿಂದ ನೋಡಿದ ಮತ್ತೆ ಕಂಡಡೆ ಭರಿತಾರ್ಪಣವೆತ್ತಣ ಮುಟ್ಟು ? ಮುಟ್ಟಿದುದ ಮುಟ್ಟಿ ಅರ್ಪಿಸುವಲ್ಲಿ ಲಿಂಗಾರ್ಪಿತವಿಲ್ಲದೆ ಸಲ್ಲದೆಂದು ಗುರುಚರ ಮುಖದಿಂದ ಪ್ರಸಾದಿಸಿ ತಾಯೆಂದ ಭರಿತಾರ್ಪಣ ಅದೆಲ್ಲಿಯ ತೊಟ್ಟು ? ಮತ್ತೆ ಗುರುಚರದಲ್ಲಿ ತ್ರಿವಿಧಮಲಕ್ಕೆ ಕಟ್ಟಿನಿಕ್ಕಿ, ತಪ್ಪಿ ಮುಟ್ಟಿದಲ್ಲಿ ವಂದಿಸಿ ನಿಂದಿಸುವದು. ಮತ್ತೆ ಪ್ರಸಾದವೆಂದು ಕೈಯೊಡ್ಡಿ ಕೊಂಬ ಭ್ರಷ್ಟನೆತ್ತಣ ಕೊಟ್ಟಿ. ಲಿಂಗಕ್ಕಿಂದವೂ ಗುರುಚರ ಭಕ್ತಿಸಂಗಗುಣವಿಶೇಷವೆಂಬುದನರಿದು ಗುರುಚರ ಪ್ರಸಾದವನಂಗೀಕರಿಸಿದ ಮತ್ತೆ ಆ ಲಿಂಗದ ಅಂಗವೆ ಘಟ. ಆ ಗುರುಚರಲಿಂಗಕ್ಕೆ ಪ್ರಾಣಸ್ವರೂಪವಾದ ಮತ್ತೆ ಆ ಲಿಂಗ ತನ್ನ ಸರ್ವಾಂಗದಲ್ಲಿ, ತಾ ವ್ಯವಹರಿಸುವಲ್ಲಿ ಹೆರೆಹಿಂಗದ ತೆರನ ತಿಳಿದು, ಆ ಲಿಂಗದಾದಿ ಗುರುಚರವಿಲ್ಲಾ ಎಂದು ಕಂಡ ಮತ್ತೆ ಗುರುವಿನ ಮುಖದಿಂದ ಲಿಂಗ ಸೋಂಕಿದ ಜಂಗಮದ ತೃಪ್ತಿಯಿಂದ ತ್ರಿವಿಧದ ವರ್ಮವನರಿದು, ಮುಂದಕ್ಕೆ ಕುಳವಿಲ್ಲದೆ, ಹಿಂದಕ್ಕೆ ನಷ್ಟವಾಗಿ, ಅಂದಂದಿಗೆ ಬಂಧ ಮೋಕ್ಷ ಕರ್ಮ ಹಿಂಗಿ ನಿಂದ ನಿಜಲಿಂಗಾಂಗಿಗೆ ಭರಿತಾರ್ಪಣ. ಇಂತಿವನೊಂದುವ ಸಂಧಿಸಿ ಕಾಣಿಸಿಕೊಳ್ಳದೆ ಭರಿತಾರ್ಪಣವೆಂದು ರಸಾಮೃತ ಮೃಷ್ಟಾನ್ನವ ಸುರಿಯಿಸಿಕೊಂಡು, ಯಥೇಷ್ಟವಾಗಿಟ್ಟುಕೊಂಡು, ಮಿಕ್ಕಾದುದ ಚೆಲ್ಲಿ ಸೂಸುವ ಕ್ರೀ ಭ್ರಷ್ಟಂಗೆ, ತ್ರಿವಿಧನಷ್ಟಂಗೆ, ವಿರಕ್ತಂಗೆ, ಕ್ಷಣಿಕ ಪಾರದ್ವಾರ ಹುಸಿ ಕೊಲೆ ಅತಿಕಾಂಕ್ಷೆ ಇಂತಿವು ಮೊದಲಾದ ಕಿಸುಕುಳವ ಬಿಟ್ಟವರಿಗೆ, ಭರಿತಾರ್ಪಣದ ಅರ್ಪಣದ ಅರ್ಪಿತವ ಬಲ್ಲವ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗಕ್ಕೆ ಕೊಟ್ಟು ಕೊಳಬಲ್ಲವ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಸದ್ಗುರು ಕಾರುಣ್ಯವ ಪಡೆದು, ಪೂರ್ವಗುಣವಳಿದು, ಪುನರ್ಜಾತನಾದ ಬಳಿಕ ಆ ಸದ್ಗುರು, ಪರಶಿವ, ಪ್ರಾಣಾತ್ಮ -ಈ ತ್ರಿವಿಧವು ಏಕಾರ್ಥವಾಗಿ ಲಿಂಗ ಪ್ರವೇಶವಂ ಮಾಡಿ, ಆ ಮಹಾಲಿಂಗವನು ಸದ್ಭಕ್ತಂಗೆ ಕರುಣಿಸಿ ಪ್ರಾಣಲಿಂಗವಾಗಿ ಬಿಜಯಂಗೆಯಿಸಿ ಕೊಟ್ಟು, ಲಿಂಗಪ್ರಾಣ ಪ್ರಾಣಲಿಂಗ ಲಿಂಗವಂಗ ಅಂಗಲಿಂಗವೆನಿಸಿ ಭಕ್ತಕಾಯ ಮಮಕಾಯವಾಗಿ ಅಂಗದ ಮೇಲೆ ಲಿಂಗಸ್ಥಾಪ್ಯವಂ ಮಾಡಿ, ``ಆ ಮಹಾಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವನು ಮಾಡು' ಎಂದು ಶ್ರೀ ಗುರುವಾಜ್ಞೆಯಂ ಮಾಡಲು, ``ಮಹಾಪ್ರಸಾದ'ವೆಂದು ಆಜ್ಞೆಯಂ ಕೈಕೊಂಡು ಕ್ರಿಯಾಮಾರ್ಗದಿಂ ಮಾಡುವಲ್ಲಿ, ದೀಪಾರಾಧನೆ ಪರಿಯಂತರ ಆಗಮಮಾರ್ಗದಲು ಮಾಡಿ ನೈವೇದ್ಯ ಕ್ರಿಯಮಾಡುವಲ್ಲಿ, ಸರ್ವ ರಸ ಫಲ-ಪುಷ್ಪ ಪಾಕಾದಿ ಮಹಾದ್ರವ್ಯಂಗಳನು ಪಂಚೇಂದ್ರಿಯಂಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ ಅರ್ಪಿಸುವಲ್ಲಿ ದ್ರವ್ಯಂಗಳ ಸುರೂಪವನು ಶ್ವೇತ ಪೀತ ಹರಿತ ಮಾಂಜಿಷ್ಟ ಕೃಷ್ಣ ಕಪೋತ ಷಡುವರ್ಣ ಮಿಶ್ರವಾದ ಮೂವತ್ತಾರು ಬಹುವಿಧ ವರ್ಣಂಗಳನು, ಕಂಗಳಲ್ಲಿ ನೋಡಿ, ಕಂಡು, ಅರಿದು, ಕುರೂಪವ ಕಳೆದು, ಸುರೂಪವನು ಕಂಗಳಿಂದ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋ? ಲಿಂಗಭಾಜನವೋ? ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ; ರೂಪು ಲಿಂಗಕ್ಕರ್ಪಿತವಾಯಿತ್ತು. ನಾದ ಮಂತ್ರಂಗಳಾದಿಯಾದ ಶಬ್ದವನು ಶ್ರೋತ್ರದಿಂ ಕೇಳಿ, ಕುಶಬ್ದವನೆ ಕಳೆದು ಸುಶಬ್ದವನು ಶ್ರೋತ್ರದಿಂ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋ? ಲಿಂಗಭಾಜನವೋ? ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ, ಸುಶಬ್ದದ್ರವ್ಯಂಗ?ು ಶ್ರೋತ್ರದಿಂ ಲಿಂಗಕ್ಕರ್ಪಿತವಾಯಿತ್ತು. ದ್ರವ್ಯಂಗ? ಸುಗಂಧ ದುರ್ಗಂಧಗ?ನು ಘ್ರಾಣವರಿದು, ಘ್ರಾಣ ವಾಸಿಸಿ ದುರ್ಗಂಧವ ಕಳೆದು ಸುಗಂಧವನು ಘ್ರಾಣದಿಂ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋ? ಲಿಂಗ ಭಾಜನವೋ? ಆ ಕಾಲದಲು ಸೂತಕವಿಲ್ಲ ದೋಷವಿಲ್ಲ; ಘ್ರಾಣದಿಂ ಸುಗಂಧ ಲಿಂಗಾರ್ಪಿತವಾಯಿತ್ತು. ದ್ರವ್ಯಂಗಳ ಮೃದು ಕಠಿಣ ಶೀತೋಷ್ಣಂಗಳನು ಪರುಶನದಿಂ ಪರುಶಿಸಿ ಸುಪರುಶನವರಿದು ತತ್ಕಾಲೋಚಿತ ದ್ರವ್ಯಂಗಳನು ಅನುವರಿದು ಪರುಶಿಸಿ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋಳ ಲಿಂಗಭಾಜನವೋ? ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ, ದ್ರವ್ಯಂಗಳ ಮೃದುಕಠಿಣ ಶೀತೋಷ್ಣಂಗಳು ಪರುಶನದಿಂ ಲಿಂಗಾರ್ಪಿತವಾಯಿತ್ತು. ಮಹಾದ್ರವ್ಯಂಗಳ ರೂಪು ಶಬ್ದ ಗಂಧ ರಸ ಮೃದುರಿಠಣ ಶೀತೋಷ್ಣ ಮೊದಲಾದುವು ಇಂದ್ರಿಯಂಗಳಿಂದ ಲಿಂಗಾರ್ಪಿತವಾಯಿತ್ತು. ದ್ರವ್ಯಂಗಳ ಸುರೂಪವನು ಕಂಗಳಿಂದರ್ಪಿಸುವಂತೆ ಶ್ರೋತ್ರಘ್ರಾಣ ಸ್ಪರ್ಶ ಜಿಹ್ವೆ ಮೊದಲಾದ ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು, ಕಂಗಳಲ್ಲಿ ರೂಪನರ್ಪಿಸಬೇಕು. ಸುಶಬ್ದವನು ಶ್ರೋತ್ರದಿಂದರ್ಪಿಸುವಂತೆ, ಚಕ್ಷು ಘ್ರಾಣ ಜಿಹ್ವೆ ಪರುಶ ಮೊದಲಾದ ನಾಲ್ಕು ಇಂದ್ರಿಯಂಗಳಿಂದರ್ಪಿಸಬಾರದು, ಸುಶಬ್ದವನು ಶ್ರೋತ್ರದಿಂದವೆ ಅರ್ಪಿಸಬೇಕು. ಸುಗಂಧವನು ಘ್ರಾಣದಿಂದರ್ಪಿಸುವಂತೆ ನೇತ್ರ ಶ್ರೋತ್ರ ಸ್ಪರ್ಶ ಜಿಹ್ವೆ ಮೊದಲಾದ ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು, ಸುಗಂಧವನು ಘ್ರಾಣದಿಂದವೆ ಅರ್ಪಿಸಬೇಕು. ಮೃದು ಕಠಿಣ ಶೀತೋಷ್ಣಂಗಳನು ಸ್ಪರುಶನದಿಂದರ್ಪಿಸುವಂತೆ ನೇತ್ರ ಶ್ರೋತ್ರ ಘ್ರಾಣಜಿಹ್ವೆ ಮೊದಲಾದ ನಾಲ್ಕು ಇಂದ್ರಿಯಂಗಳಿಂದ ಅರ್ಪಿಸಬಾರದು, ಮೃದು ಕಠಿಣ ಶೀತೋಷ್ಣ ದ್ರವ್ಯಂಗಳನು ಸ್ಪರುಶನದಿಂದರ್ಪಿಸಬೇಕು. ನಾಲ್ಕು ಇಂದ್ರಿಯದಿಂ ರೂಪು ಶಬ್ದಗಂಧ ಮೃದುಕಠಿಣ ಶೀತೋಷ್ಣ [ದ್ರವ್ಯಂಗಳ ಲಿಂಗಾರ್ಪಿತವಾಯಿತ್ತು] ಮಹಾದ್ರವ್ಯಂಗಳ ಸುರಸವನು ಮಹಾರುಚಿಯನು ಜಿಹ್ವೆಯಿಂದರ್ಪಿಸುವಂತೆ ನೇತ್ರ ಶ್ರೋತ್ರ ಘ್ರಾಣ ಸ್ಪರುಶನ ಮೊದಲಾದ ಈ ನಾಲ್ಕು ಇಂದ್ರಿಯಂಗಳಿಂದರ್ಪಿಸಬಹುದೆ ಹೇಳಿರಣ್ಣಾ. ಮಹಾರಸವನು ಮಹಾರುಚಿಯನು ಜಿಹ್ವೆಯಿಂದವೆ ಅರ್ಪಿಸಬೇಕು. ಅಹಂಗಲ್ಲದೆ ಲಿಂಗಾರ್ಪಿತವಾಗದು, ಆ ಲಿಂಗದ ಆರೋಗಣೆಯಾಗದು. ಮಹಾರಸವನು ರುಚಿಯನು ಜಿಹ್ವೆಯಿಂದರ್ಪಿಸುವಲ್ಲಿ ಸೂತಕವೆಂದು ದೋಷವೆಂದು ಸ್ವಯಭಾಜನವಾಗದೆಂದು ಭಿನ್ನಭಾಜನವಾಗಬೇಕೆಂದು ದೇವರ ಆರೋಗಣೆಗೆ ಮುನ್ನವೇ ಇದ್ದ ಪರಿಯಾಣವ ತೆಗೆದ ಕಷ್ಟವ ನೋಡಾ! ಅಗಲನಾರಡಿಗೊಂಬ ಪಾಪವ ನೋಡಾ ಅಕಟಕಟಾ! ಈ ಪರಿಯೆ ಲಿಂಗಾರ್ಚನೆ? ಈ ಪರಿಯೆ ಲಿಂಗಾರ್ಪಿತವ ಮಾಡಿ ಪ್ರಸಾದವ ಪಡೆವ ಪರಿ? ಈ ಪರಿಯೆ ಭಕ್ತಿ? ಈ ಪರಿಯೆ ಜ್ಞಾನ? ಇಂತಲ್ಲ ಕೇಳಿರಣ್ಣಾ, ಕರ್ತೃ ಭೃತ್ಯ ಸಂಬಂಧದ ಪರಿ. ದೇವರ ಪರಿಯಾಣದಲು ದೇವರಿಗೆ ಬಂದ ಸರ್ವದ್ರವ್ಯಮಹಾರಸಂಗಳನು, ಮಹಾರುಚಿಯನು ಭಕ್ತದೇಹಿಕ ದೇವನಾಗಿ ದೇವರ ಜಿಹ್ವೆಯಲ್ಲಿ ದೇವಾದಿದೇವ ಮಹಾದೇವಂಗರ್ಪಿಸಬೇಕು. ಸ್ಮೃತಿ: ರೂಪಂ ಸಮರ್ಪಿತಂ ಶುದ್ಧಂ ರುಚಿಃ ಸಿದ್ಧಂ ತು ವಿಶ್ರುತಂ ಏ ತತ್ಸಮಾಗತಾ ತೃಪ್ತಿಃ ಪ್ರಸಿದ್ಧಂತುಪ್ರಸಾದಕಂ ದರ್ಪಣಂ ಧೂಪದೀಪೌ ಚ ನಾನಾರುಚಿ ಸುಖಂ ಬಹು ಪ್ರಸಾದ ಏವ ಭೋಕ್ತವ್ಯೋ ಅನ್ಯದ್ಗೋಮಾಂಸಸನ್ನಿಭಂ ರೂಪಂ ಸಮರ್ಪಯೇದ್ದ್ರವ್ಯಂ ರುಚಿಮಪ್ಯರ್ಪಯೇತ್ತತಃ ಉಭಯಾರ್ಪಣಹೀನಶ್ಚೇತ್ ಪ್ರಸಾದೋ ನಿಷ್ಫಲೋ ಭವೇತ್ ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ ಸ್ವೀಕೃತಂ ಮಯಾ ರಸಾನ್ ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧೋ ಮಹಾರುಚಿಃ ತತ್ತಲ್ಲಿಂಗಮುಖೇನೈವ ಅರ್ಪಿತಂ ಸ್ಯಾತ್ಸಮರ್ಪಣಂ ಅರ್ಪಿತಾನರ್ಪಿತಂ ಸ್ಥಾನಂ ಇಂದ್ರಿಯಾದಿಂದ್ರಿಯಂ ಯಥಾ ಇಂದ್ರಿಯಸ್ಥಾನತತ್ಕರ್ಮ ಸಮರ್ಪಿತಕ್ರಿಯಾರ್ಪಿತಂ ..................ಜ್ಞಾನಾರ್ಪಣಕ್ರಿಯಾರ್ಪಣೇ ಉಭಯಾರ್ಪಣಹೀನಸ್ಯ ಪ್ರಸಾದೋ ನಿಷ್ಫಲೋ ಭವೇತ್ ಗರ್ಭಿಣ್ಯಾ ಗರ್ಭದೇಹಸ್ಯ ಸರ್ವಭೋಗಸ್ಸಮೋ ಭವೇತ್ ಲಿಂಗಿನಾಂ ಲಿಂಗಭೋಗೇನ ಪ್ರಸಾದಃ ಸಹ ಸಂಭವೇತ್ ಗರ್ಭಿಣೀ ಸರ್ವಭೋಗೇಷು ಶಿಶೂನಾಂ ತೃಪ್ತಿಸಂಭವಃ ಲಿಂಗಿನಾಂ ಲಿಂಗಭೋಗೇಷು ಪ್ರಸಾದಸ್ಸಂಭವೇತ್ತಥಾ ಯಥಾ ಚ ಗರ್ಭಿಣೀ ಭೋಗೇ ಶಿಶೂನಾಂ ತೃಪ್ತಿಸಂಭವಃ ತಥಾ ಲಿಂಗಸ್ಯ ಭೋಗೇಷು ಅಂಗಸ್ತೈಪ್ತಿಮವಾಪ್ನು ಯಾತ್ ಗರ್ಭೀಕೃತಸ್ಯ ಪ್ರಾಣಸ್ತು ಗರ್ಭಣೀಭೋಗಮಾಶ್ರಿತಃ ಲಿಂಗಗರ್ಭೀಕೃತೋ ಲಿಂಗೀ ಲಿಂಗಭೋಗಸಮಾಶ್ರಿತಃ ಮತ್ತೊಂದಾಗಮದಲ್ಲಿ: ಭಕ್ತಕಾಯೋ ಮಹಾದೇವೋ ಭಕ್ತಾತ್ಮಾ ಚ ಸದಾಶಿವಃ ಭಕ್ತಭೋಗೋಪಭೋಗಶ್ಚ ಭೋಗಸ್ತಸ್ಯ ವಿಧೀಯತೇ ಲಿಂಗದೇಹೀ ಶಿವಾತ್ಮಾಯಂ ಲಿಂಗಾಚಾರೋ ನ ಲೌಕಿಕಃ ಸರ್ವಲಿಂಗಮಯಂ ರೂಪಂ ಲಿಂಗೇನ ಸಮಮಶ್ನುತೇ ಘ್ರಾಣಸ್ತಸ್ಯೈವ ಘ್ರಾಣಶ್ಚ ದೃಷ್ಟಿರ್ದೃಷ್ಟಿಃ ಶ್ರುತಿಃ ಶ್ರುತಿಃ ಸ್ಪರ್ಶನಂ ಸ್ಪರ್ಶನಂ ವಿಂದ್ಯಾದ್ ಗ್ರಾಹ್ಯಂ ತದ್ಗ್ರಾಹ್ಯಮೇವ ಚ ಭುಕ್ತಂ ತದ್ಭುಕ್ತಮಾಖ್ಯಾತಂ ತೃಪ್ತಿಸ್ತತ್ತೃಪ್ತಿರೇವ ಚ ತಸ್ಯೈಕಃ ಪ್ರಾಣ ಆಖ್ಯಾತ ಇತ್ಯೇತತ್ಸಹವರ್ತಿನಾಂ ಲಿಂಗದೃಷ್ಟಿನಿರೀಕ್ಷಾ ಸ್ಯಾಲ್ಲಿಂಗಹಸ್ತೋಪಸ್ಪರ್ಶನಂ ಲಿಂಗಶ್ರೋತ್ರೇಣ ಶ್ರವಣಂ ಲಿಂಗಜಿಹ್ವಾರಸಾನ್ನವಾನ್ ಲಿಂಗಘ್ರಾಣಸ್ತು ಘ್ರಾಣಶ್ಚ ಲಿಂಗೇನ ಸಹ ವರ್ತತೇ ಲಿಂಗಂ ಮನೋಗತಂ ವಾಪಿ ಇತ್ಯೇತೈಃ ಸಹಭೋಜನಂ ಲೋಕಾಚಾರನಿಬದ್ಧಸ್ತು ಲೋಕಾಲೋಕವಿವರ್ಜಿತಃ ಲೋಕಾಚಾರಪರಿತ್ಯಾಗೀ ಪ್ರಾಣಲಿಂಗೀತಿ ಸಂಸ್ಮøತಃ ನ ಪ್ರಾಣಲಿಂಗಿನಃ ಕಾಲೋ ನ ಲಿಂಗಪ್ರಾಣಿನಃ ಕ್ರಿಯಾ ಕಾಲಕರ್ಮದ್ವಯಂ ನಾಸ್ತಿ ಶರಣಸ್ಯ ಪ್ರಸಾದತಃ ಇಂತೆಂದುದಾಗಿ ಇದು ಲಿಂಗಾರ್ಚನೆಯ ಪರಿ, ಇಂತಲ್ಲದೆ ರುಚಿಯರ್ಪಿತಕ್ಕೆ ಮುನ್ನವೆ ಪರಿಯಾಣವ ತೆಗೆಯಲು ಲಿಂಗಾರ್ಚನೆಯ ಕ್ರೀ ತಪ್ಪಿತ್ತು. ಶ್ರೀ ಗುರುವಾಜ್ಞೆಯ ಮೀರಿದವನು ಜ್ಞಾನಿಯಲ್ಲ, ಭಕ್ತನಲ್ಲ ಕೇಳಿರೇ. ಆವನಾನು ಮಹಾರಾಜಂಗೆ ಆರೋಗಣೆಗೆ ಮುನ್ನವೆ ಪರಿಯಾಣವ ತೆಗೆಯಲು ದ್ರೋಹ, ಶಾಸ್ತಿಗೊಳಗಾದರು, ಇದು ದೃಷ್ಟ ನೋಡಿರೆ. ರಾಜಾಧಿರಾಜ ಮಹಾರಾಜ ದೇವಾಧಿದೇವ ಮಹಾದೇವಂಗೆ ಆರೋಗಣೆಗೆ ಮುನ್ನ ಪರಿಯಾಣವ ತೆಗೆಯಲು ಮಹಾದ್ರೋಹ. ಇದನರಿದು ಶ್ರೀ ಗುರುವಾಜ್ಞೆಯ ತಪ್ಪದೆ, ಲಿಂಗಾರ್ಚನೆಯ ಕ್ರೀ ತಪ್ಪದೆ ದೇವರ ಪರಿಯಾಣದಲು ಮಹಾರಸ ದ್ರವ್ಯ ಪದಾರ್ಥಂಗಳನಿಟ್ಟು ಶ್ರೀಗುರು ಸಹಿತ ಜಂಗಮಸಹಿತ ಲಿಂಗಾರ್ಪಿತ ಮಾಡುವುದು. ಪಂಚೇಂದ್ರಿಯಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ, ಶಬ್ದ ಸ್ಪರ್ಶ ರೂಪ ರಸ [ಗಂಧಂಗಳನು]ಮನೋವಾಕ್ಕಾಯದಲ್ಲಿ ಭೋಗಿಸುವ ಭೋಗವೆಲ್ಲವನು ಅರ್ಪಿಸುವುದು. ಮೇಲೆ ತಾಂಬೂಲದಿಂ ಅಷ್ಟವಿಧಾರ್ಚನೆ ಷೋಡಶೋಪಚಾರವನು ಮಾಡಿ, ಲಿಂಗಾರ್ಚನೆಯಂ ಮಾಡಿ, ಪ್ರಸಾದವ ಹಡದು, ಆ ಮಹಾಪ್ರಸಾದದಿಂ ಪ್ರಸಾದಿಯಪ್ಪುದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸರ್ವವ ಮುಟ್ಟಿ ಅರ್ಪಿಸುವಲ್ಲಿ ಅರ್ಪಿಸಿಕೊಂಬ ವಸ್ತು ಹಿಂಚೊ ಮುಂಚೊ ಎಂಬುದನರಿದಲ್ಲದೆ ಅರ್ಪಿತಾವಧಾನಿಗಳಲ್ಲ. ಅರ್ಪಿಸಿಕೊಂಬ ದ್ರವ್ಯ ವಸ್ತುವ ಅರಿಯಬೇಕೊ ವಸ್ತು ದ್ರವ್ಯವ ತಾನರಿತು ಅರ್ಪಿಸಿಕೊಳಬೇಕೊ? ಈ ಉಭಯವನರಿತಡೆ ಅರ್ಪಿತ ಅವಧಾನಿ. ಪುರುಷಂಗೆ ಸತಿ ಸಂಯೋಗದಿಂದಲ್ಲದೆ ಸತಿಗೆ ಪುರುಷನ ಸಂಯೋಗದಿಂದಲ್ಲದೆ ಈ ಉಭಯ ಸುಖವಿಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
-->