ಹೊಲೆಯ ಕುಲಜನಾದುದ ಕಂಡೆ, ಗುರು ಶಿಷ್ಯಂಗೆ ಶಿಷ್ಯನಾದುದ ಕಂಡೆ. ಪೂಜಿಸುವ ತಮ್ಮಡಿ ಲಿಂಗವಾದುದ ಕಂಡೆ. ಅರಸು ಬಂಟನ ಕೆಳಗೆ ಹರಿದಾಡುವುದ ಕಂಡೆ. ಗಂಡನ ಮುಂದೆ ಹೆಂಡತಿ ಮತ್ತೊಬ್ಬನ ಸಂಗ ಮಾಡುವುದ ಕಂಡೆ. ಇಂತಿವೆಲ್ಲವನೂ ನಿಂದು ನೋಡುತ್ತಿರಲಾಗಿ, ನೀರು ಬೆಂಕಿಯ ಸುಟ್ಟು ಮರದೊಳಗಡಗಿತ್ತು. ಆ ಮರದ ತೆಪ್ಪದಲ್ಲಿ ಈ ಧರೆಯರು ಹೋಗಿ, ಆಚೆಯ ಧರೆಯ ಬೆವಹಾರವ ತಂದು, ಮತ್ತೆ ಈಚೆಯಲ್ಲಿ ಕಡನ ಕೊಡಲಾಗಿ, ಕೊಂಡವ ಸತ್ತ, ಕೊಟ್ಟವ ಕೆಟ್ಟ. ಆ ಭಂಡ ಎಲ್ಲಿ ಹೋಯಿತ್ತೆಂದರಿಯೆ. ಆ ಬೆಂಬಳಿಯ ಬಲ್ಲಡೆ, ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.