ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ ; ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು ಮತ್ತಾಚೆಯಲ್ಲಿ ಬೆರೆಸುವನ ಭಕ್ತನಲ್ಲ ; ಆತನ ಇದಿರಿನಲ್ಲಿ ಆತನ ಸತಿಯ ಅವ್ವಾ ಎಂದು, ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತ ನೇಮ ನಿತ್ಯ ? ಇಂತಿವರಲ್ಲಿ ಕಳೆದುಳಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
--------------
ಅಕ್ಕಮ್ಮ
ಶಕ್ತಿರೂಪು ವಿಷ್ಣುವಿನ ಅವತಾರವಾಯಿತ್ತು. ಅಸ್ಥಿಮಯ ರುದ್ರನ ವಂಶೀಭೂತವಾಯಿತ್ತು. ಆತ್ಮಮಯ ವಸ್ತ್ರಸಂಬಂಧವಾದಲ್ಲಿ ಮಾಯೆಯ ಮರೆದು ಕಲ್ಪಿತವ ಹರಿದು ಏಕಮಯವಾಗಿ, ಖಂಡನಪತ್ರದಲ್ಲಿ ತೋರುವ ಚಂಡಿಕಾಕಿರಣದಂತೆ. ಒಂದು ಹಲವಾದ ವಸ್ತುವನರಿತಲ್ಲಿ ಹಿಂಗಿತು ಮಲ ಈಚೆಯಲ್ಲಿ, ಆ ಮಲದ ಆಚೆಯಲ್ಲಿ ನಿಂದು ನೋಡಲಾಗಿ, ಸದಾಶಿವಮೂರ್ತಿಲಿಂಗದ ಕಳೆ ಕಾಣಬಂದಿತ್ತು.
--------------
ಅರಿವಿನ ಮಾರಿತಂದೆ
ಬೇರು ಒಣಗಿದಲ್ಲಿ ಅಂಕುರವುಂಟೆ ? ಆರನರಿಯದೆ ಮೂರ ಪ್ರಮಾಣಿಸದೆ, ಮೀರಿ ಇಪ್ಪಾತನ ಭೇದವನರಿಯದೆ, ಮತ್ತೆ ತೋರಿಕೆಗೆ ಇನ್ನಾವುದು ಹೇಳಾ ? ಯುಗ ಪ್ರಮಾಣಿಸುವುದಕ್ಕೆ ಮುನ್ನ, ಆಚೆಯಲ್ಲಿ ನಾನರಿಯೆ, ಈಚೆಯಲ್ಲಿ ನಾ ಬಲ್ಲ ಇಷ್ಟ, ಆವ ಸ್ಥಲದಲ್ಲಿಯೂ ಸ್ಥಲಭರಿತನಾಗಿ, ಹಿಡಿವಲ್ಲಿ ಕ್ರೀ ಶುದ್ಧವಾಗಿ, ಅರಿವಲ್ಲಿ ಆತ್ಮಶುದ್ಧವಾಗಿ. ಇಂತೀ ಉಭಯದ ಒಡಲನರಿದು ಒಡಗೂಡಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ಹೊಲೆಯ ಕುಲಜನಾದುದ ಕಂಡೆ, ಗುರು ಶಿಷ್ಯಂಗೆ ಶಿಷ್ಯನಾದುದ ಕಂಡೆ. ಪೂಜಿಸುವ ತಮ್ಮಡಿ ಲಿಂಗವಾದುದ ಕಂಡೆ. ಅರಸು ಬಂಟನ ಕೆಳಗೆ ಹರಿದಾಡುವುದ ಕಂಡೆ. ಗಂಡನ ಮುಂದೆ ಹೆಂಡತಿ ಮತ್ತೊಬ್ಬನ ಸಂಗ ಮಾಡುವುದ ಕಂಡೆ. ಇಂತಿವೆಲ್ಲವನೂ ನಿಂದು ನೋಡುತ್ತಿರಲಾಗಿ, ನೀರು ಬೆಂಕಿಯ ಸುಟ್ಟು ಮರದೊಳಗಡಗಿತ್ತು. ಆ ಮರದ ತೆಪ್ಪದಲ್ಲಿ ಈ ಧರೆಯರು ಹೋಗಿ, ಆಚೆಯ ಧರೆಯ ಬೆವಹಾರವ ತಂದು, ಮತ್ತೆ ಈಚೆಯಲ್ಲಿ ಕಡನ ಕೊಡಲಾಗಿ, ಕೊಂಡವ ಸತ್ತ, ಕೊಟ್ಟವ ಕೆಟ್ಟ. ಆ ಭಂಡ ಎಲ್ಲಿ ಹೋಯಿತ್ತೆಂದರಿಯೆ. ಆ ಬೆಂಬಳಿಯ ಬಲ್ಲಡೆ, ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂದ್ರಿಯಂಗಳ ಹಿಂಗಿ ನೋಡಿಹೆನೆಂಬ ಎಡೆಯಲ್ಲಿ, ಇಂದ್ರಿಯಂಗಳ ಕೂಡಿ, ಸನ್ಮತನಾಗಿ ನಿಂದು ನೋಡಿಹೆನೆಂದಡೆ, ತಿಲ ತೈಲದಂತೆ ಅಂಗವಳಿದು, ಆ ತಿಲದ ಬಿಂದು ದ್ವಂದ್ವವಳಿದು, ಈಚೆಯಲ್ಲಿ ಬಂದು ನಿಂದಲ್ಲಿ, ಅಂಗದ ಕರ್ಮ, ಇಂದ್ರಿಯಂಗಳ ಸಂದು, ಆತ್ಮನ ಸಂದೇಹದ ಗುಣವೆಂಬೀ ಭೇದವ ತಿಳಿದಲ್ಲಿ, ಕಾಮಧೂಮ ಧೂಳೇಶ್ವರನು ನಿರಂಗದ ಭಾವ.
--------------
ಮಾದಾರ ಧೂಳಯ್ಯ
ಆಚೆಯಲ್ಲಿ ಸ್ಥಾವರಭಕ್ತಿ ಈಚೆಯಲ್ಲಿ ಜಂಗಮಭಕ್ತಿ ಮನವೆರಡಿಲ್ಲವಯ್ಯಾ. ಮತ್ತೆಯಿತ್ತ ಕೇಳು ಸ್ಥಾವರ ಜಂಗಮಕ್ಕೆ ಸೈದಾನ ಪಾಕ ಸುಯಿದಾನ ಭಾವರುಚಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೂಜಿಸುವವರ ಕಂಡವರ ಕಂಡು, ಆ ಗುಣವ ತಾ ಕೈಕೊಂಡು ಪೂಜಿಸದೆ ವಾಗ್ಬ್ರಹ್ಮವ ನುಡಿವವರ ಕಂಡು, ಶೇಷವನು ಈಚೆಯಲ್ಲಿ ನುಡಿಯದೆ, ತನ್ನ ಸ್ವಯಾನುಭಾವ ಪೂಜೆ, ತನ್ನ ಸ್ವಯಸಿದ್ಭವಾದ ನುಡಿ, ಇಂತೀ ಉಭಯಸ್ಥಲಗೂಡಿ, ಕ್ಷೀರ ನೀರಿನಂತೆ ಹೊರೆಯಿಲ್ಲದೆ ವರ್ಣಭೇದವಿಲ್ಲದೆ ಕೂಡಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
-->