ಅಥವಾ

ಒಟ್ಟು 12 ಕಡೆಗಳಲ್ಲಿ , 4 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಅಖಂಡಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹ ಮಹಾಘನಲಿಂಗದಲ್ಲಿ ವಿಶ್ವತೋ ಮುಖ, ವಿಶ್ವತೋ ಚಕ್ಷು, ವಿಶ್ವತೋ ಹಸ್ತ, ವಿಶ್ವತೋ ಪಾದ, ವಿಶ್ವತೋ ಬಾಹುವನುಳ್ಳ ಅನಾದಿ ಸದಾಶಿವತತ್ವ ಉತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಅನಾದಿ ಶಿವತತ್ವದಿಂದ ಅನೇಕ ಮುಖ, ಅನೇಕ ಚಕ್ಷು, ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಈಶ್ವರತತ್ವದಲ್ಲಿ ಸಹಸ್ರ ಶಿರ, ಸಹಸ್ರ ಅಕ್ಷ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಮಹೇಶ್ವರತತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ ಆದಿ ಸದಾಶಿವ ಉತ್ಪತ್ಯವಾಯಿತ್ತು. ಆ ಆದಿ ಸದಾಶಿವತತ್ವದಲ್ಲಿ ಷಷ್ಠ ವಕ್ತ್ರ, ದ್ವಾದಶಭುಜ, ತ್ರಿಪಾದವನುಳ್ಳ ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಆದಿ ಈಶ್ವರತತ್ವದಲ್ಲಿ ಪಂಚವಿಂಶತಿ ಮುಖ, ಪಂಚದಶಭುಜವನುಳ್ಳ ಸದಾಶಿವತತ್ವ ಉತ್ಪತ್ಯವಾಯಿತ್ತು. ಇದಕ್ಕೆ ಅತಿ ಮಹಾಗಮೇ : ``ಅಖಂಡಲಿಂಗ ಸಂಭೂತಾ ಅನಾದಿ ಸಾದಾಖ್ಯಸ್ತಥಾ | ಅನಾದಿ ವಿಶ್ವತೋಮುಖತತ್ವೇ ಚ ಅನಾದಿ ಈಶ್ವರೋದ್ಭವಃ || ಅನಾದಿ ಈಶ್ವರತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ | ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ || ಆದಿ ಸಾದಾಖ್ಯತತ್ವೇ ಚ ಆದಿ ಈಶ್ವರೋದ್ಭವಂ | ಆದಿ ಈಶ್ವರತತ್ವೇ ಚ ಆದಿ ಮಾಹೇಶ್ವರೋ ಭವೇತ್ || ಆದಿ ಮಾಹೇಶ್ವರ ಶಂಭುತೊ ಶಿವಸದಾಶಿವಾಯುವೋ | ಇತಿ ತತ್ವೋದ್ಭವಜ್ಞಾನಂ ದುರ್ಲಭಂ ಕಮಲಾನನೇ|| '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ, ತೇಜಸ್ತತ್ವ ಅರಿವುಭೇದವಾಗಿ, ಇಂತೀ ತ್ರಿವಿಧಭೇದ ವರ್ತುಳ ಗೋಮುಖ ಗೋಳಕಾಕಾರ ಕೂಡಿ ಲಿಂಗವಾದಲ್ಲಿ, ಈಶ್ವರತತ್ವ ವಾಯುಭೇದವಾಗಿ, ಸದಾಶಿವತತ್ವ ಆಕಾಶಭೇದವಾಗಿ, ಉಭಯ ಏಕವಾಗಿ, ಅಗ್ನಿತತ್ವ ಕೂಡಲಿಕ್ಕೆ ಆ ತ್ರಿವಿಧ ಏಕವಾಗಿ, ಅಪ್ಪುತತ್ವವ ಕೂಡಲಿಕ್ಕೆ ಆ ಚತುರ್ಭಾವ ಏಕವಾಗಿ, ಪೃಥ್ವಿತತ್ವ ಕೂಡಲಾಗಿ, ಉತ್ಪತ್ಯವೆಲ್ಲಿ ಅಡಗಿತ್ತು ? ಸ್ಥಿತಿಯೆಲ್ಲಿ ನಡೆಯಿತ್ತು ? ಲಯವೆಲ್ಲಿ ಸತ್ತಿತ್ತು ? ಲಿಂಗ ಮಧ್ಯ ಸಚರಾಚರವೆಂದಲ್ಲಿ, ಕಂಡು ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆ ಮಹಾಸದಾಶಿವತತ್ವದಲ್ಲಿ ಸದಾಶಿವನುತ್ಪತ್ಯವಾಗಿ ಆಕಾಶಕ್ಕೆ ಅದ್ಥಿದೇವತೆಯಾಗಿಹನು. ಆಕಾಶತತ್ವದಲ್ಲಿ ಏಕಶಿರ ದ್ವಿಭುಜ ತ್ರಿನೇತ್ರವನುಳ್ಳ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಂಗೆ ಅದ್ಥಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ಪಂಚಮುಖರುದ್ರನುತ್ಪತ್ಯವಾಗಿ ಅಗ್ನಿಗೆ ಅದ್ಥಿದೇವತೆಯಾಗಿಹನು. ಆ ಪಂಚಮುಖರುದ್ರನಲ್ಲಿ ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್‍ಪುರುಷನುತ್ಪತ್ಯವಾದನು. ಆ ವಿರಾಟ್ಪುರುಷನಲ್ಲಿ ಏಕಶಿರ ದ್ವಿಭುಜವನುಳ್ಳ ವಿಷ್ಣು ಉತ್ಪತ್ಯವಾಗಿ ಅಪ್ಪುವಿಗೆ ಅದ್ಥಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಚತುರ್ಮುಖಬ್ರಹ್ಮ ಉತ್ಪತ್ಯವಾಗಿ ಪೃಥ್ವಿಗೆ ಅದ್ಥಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜೀವಂಗಳುತ್ಪತ್ಯ ನೋಡಾ. ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ : ಶ್ರೀ ಮಹಾದೇವ ಉವಾಚ- ``ಪಂಚವಕ್ತ್ರಸದಾಖ್ಯಾನಾಂ ಈಶ್ವರಶ್ಚ ಸಜಾಯತೇ | ತಥಾ ಈಶ್ವರತತ್ವೇ ಚ ಕಾಲರುದ್ರ ಸಮುದ್ಭವಃ | ಪಂಚವಕ್ತ್ರಃ ಮಹಾರುದ್ರ ವಿರಾಟ್ಪುರುಷ ಜಾಯತೇ | ವಿರಾಟ್ಪುರುಷ ಮಹಾತತ್ವೇ ಆದಿ ವಿಷ್ಣುಸಮುದ್ಭವಃ | ವಿಷ್ಣುತತ್ವಾತ್‍ಮಹಾದೇವಿ ವಿರಿಂಚಿತತ್ವಃ ಜಾಯತೇ | ಚತುರ್ಮುಖಬ್ರಹ್ಮತತ್ವೇ ಸರ್ವಜೀವಸ್ತವೋಸ್ತಥಾ | ಇತಿ ತತ್ವೋದ್ಭವಂ ಜ್ಞಾನಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಆನಂದಭೈರವಿ : ``ಪೃಥ್ವೀ ಬ್ರಹ್ಮಾ ಜಲಂ ವಿಷ್ಣು ಸ್ತಥಾ ರುದ್ರೋ ಹುತಾಶನಃ | ಈಶ್ವರೋ ಪವನೋ ದೇವಾಃ ಆಕಾಶಶ್ಚ ಸದಾಶಿವಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ | ಭೂಮ್ಯಾದಿ ದೈವಮಿತ್ಯುಕ್ತಂ ಇತಿ ಭೇದಂ ವರಾನನೇ ||'' ಇತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಓಂ ಎಂಬುದು ಬ್ರಹ್ಮಾಕ್ಷರ. ನ ಎಂಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ. ಇಂತೀ ಕ್ರೀಮಾರ್ಗದ ನಿಜ ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ.
--------------
ಪ್ರಸಾದಿ ಭೋಗಣ್ಣ
ಪರಶಕ್ತಿ ಶಾಂತಿಯೆನಲು ಪರಶಿವಶಕ್ತಿಯ ನಾಮವೀಗ. ನಾದ ಬಿಂದು ಕಳೆ ಕಳಾನ್ವಿತ ಈ ನಾಲ್ಕು ನಿಃಕಲತತ್ವಯೋಗಿಗಳ ಧ್ಯಾನ, ಭಕ್ತರ ಪೂಜೆ, ವೇದಾಗಮಂಗಳ ಶ್ರುತಕ್ಕೆ ಅತೀತವಾಗಿ, ವಾಙ್ಮನಾತೀತವಾಗಿ, ಆ ವಾಙ್ಮನಕ್ಕಗೋಚರವಾದ ನಿಃಕಲತತ್ವವೇ ಸಕಲ ನಿಃಕಲವಾಗಿ ತೋರಿತ್ತದೆಂತೆಂದೊಡೆ ಸದಾಶಿವತತ್ವ, ಈಶ್ವರತತ್ವ, ಮಹೇಶ್ವರತತ್ವ ಈ ಮೂರು ಸಕಲ ನಿಃಕಲತತ್ವಯೋಗಿಗಳ ಧ್ಯಾನವ ಕೈಕೊಂಡು, ಭಕ್ತರ ಪೂಜೆಯ ಕೈಕೊಂಡು, ಜಪ ತಪ, ನೇಮ ನಿತ್ಯ, ವೇದಾಗಮಂಗಳ ಸ್ತುತಿಯನು ಕೈಕೊಂಡು, ಜಗದುತ್ಪತ್ತಿಕಾರಣ ಪರಶಿವನ ಸಂಕಲ್ಪದಿಂದ, ನಾದ ಬಿಂದು ಕಳೆ ಸಮೇತವಾಗಿ ಲಿಂಗವೆನಿಸಿತ್ತು. ಅದಕ್ಕೆ ಕರ ಚರಣಾದ್ಯವಯವಂಗಳಿಲ್ಲ. ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಸ್ವರೂಪನುಳ್ಳದು. ವ್ಯಕ್ತ ಅವ್ಯಕ್ತ ಆನಂದ ಸುಖಮಯವಾಗಿದ್ದಂತಾದು. ಅನಂತಕೋಟಿ ಬ್ರಹ್ಮಾಂಡಗಳ ತನ್ನಲ್ಲಿ ಗರ್ಭೀಕರಿಸಿಕೊಂಡು, ಅನಂತಕೋಟಿ ಸೋಮ ಸೂರ್ಯಪ್ರಕಾಶವನುಳ್ಳ ಪರಂಜ್ಯೋತಿರ್ಲಿಂಗವು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನಾದಿ ಸದಾಶಿವತತ್ವ, ಅನಾದಿ ಈಶ್ವರತತ್ವ, ಅನಾದಿ ಮಹೇಶ್ವರತತ್ವವೆಂಬ, ಅನಾದಿ ತ್ರಿತತ್ವಂಗಳು ತಾನಲ್ಲ. ಆದಿ ಸದಾಶಿವತತ್ವ, ಆದಿ ಈಶ್ವರತತ್ವ, ಆದಿ ಮಹೇಶ್ವರತತ್ವವೆಂಬ ಆದಿ ತ್ರಿತತ್ವಂಗಳು ತಾನಲ್ಲ. ಶಂಕರ ಶಶಿಧರ ಗಂಗಾಧರ ಗೌರೀಶ ಕಳಕಂಠ ರುದ್ರ, ಕಪಾಲಮಾಲಾಧರ ರುದ್ರ,ಕಾಲಾಗ್ನಿರುದ್ರ, ಏಕಪಾದರುದ್ರ, ಮಹಾಕಾಲರುದ್ರ, ಮಹಾನಟನಾಪಾದರುದ್ರ, ಊಧ್ರ್ವಪಾದರುದ್ರ, ಬ್ರಹ್ಮಕಪಾಲ ವಿಷ್ಣುಕಂಕಾಳವ ಪಿಡಿದಾಡುವ ಪ್ರಳಯಕಾಲರುದ್ರರು, ತ್ರಿಶೂಲ ಖಟ್ವಾಂಗಧರರು ವೃಷಭವಾಹನರು ಪಂಚಮುಖರುದ್ರರು, ಶೂನ್ಯಕಾಯನೆಂಬ ಮಹಾರುದ್ರ, ಅನೇಕಮುಖ ಒಂದುಮುಖವಾಗಿ ವಿಶ್ವರೂಪರುದ್ರ, ವಿಶ್ವಾಧಿಕಮಹಾರುದ್ರ, ಅಂಬಿಕಾಪತಿ ಉಮಾಪತಿ ಪಶುಪತಿ ಮೊದಲಾದ ಗಣಾಧೀಶ್ವರರೆಂಬ ಮಹಾಗಣಂಗಳು ತಾನಲ್ಲ. ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್ಪುರುಷನು ತಾನಲ್ಲ. ವಿಶ್ವತೋಮುಖ ವಿಶ್ವತೋಚಕ್ಷು ತಾನಲ್ಲ. ವಿಶ್ವತೋಪಾದವನುಳ್ಳ ಮಹಾಪುರುಷ ತಾನಲ್ಲ. ಪತಿ-ಪಶು-ಪಾಶಂಗಳೆಂಬ ಸಿದ್ಧಾಂತಜ್ಞಾನತ್ರಯಂಗಳು ತಾನಲ್ಲ. ತ್ವಂ ಪದ ತತ್‍ಪದ ಅಸಿಪದವೆಂಬ ವೇದಾಂತಪದತ್ರಯ ಪದಾರ್ಥಂಗಳು ತಾನಲ್ಲ. ಜೀವಹಂಸ ಪರಮಹಂಸ ಪರಾಪರಹಂಸನೆಂಬ ಹಂಸತ್ರಯಂಗಳು ತಾನಲ್ಲ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಮೂರ್ತಿಗಳು ತಾನಲ್ಲ. ಆ ಸದಾಶಿವತತ್ವದಲ್ಲುತ್ಪತ್ಯವಾದ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯಾತ್ಮರೆಂಬ ಅಷ್ಟತನುಮೂರ್ತಿಗಳು ತಾನಲ್ಲ. ಅಸ್ಥಿ ಮಾಂಸ ಚರ್ಮ ನರ ರೋಮ -ಈ ಐದು ಪೃಥ್ವಿಯಿಂದಾದವು. ಪಿತ್ಥ ಶ್ಲೇಷ್ಮ ರಕ್ತ ಶುಕ್ಲ ಮೂತ್ರ -ಈ ಐದು ಅಪ್ಪುವಿನಿಂದಾದವು. ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ -ಈ ಐದು ಅಗ್ನಿಯಿಂದಾದವು. ಪರಿವ ಪಾರುವ ಸುಳಿವ ಕೂಡುವ ಅಗಲುವ -ಈ ಐದು ವಾಯುವಿನಿಂದಾದವು. ವಿರೋಧಿಸುವ ಅಂಜಿಸುವ ನಾಚುವ ಮೋಹಿಸುವ ಅಹುದಾಗದೆನುವ -ಈ ಐದು ಆಕಾಶದಿಂದಾದವು. ಇಂತೀ ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ ದೇಹವು ತಾನಲ್ಲ. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಲ್ಲ. ವಾಕು ಪಾದ ಪಾಣಿ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳು ತಾನಲ್ಲ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚವಿಷಯಂಗಳು ತಾನಲ್ಲ, ವಚನ ಗಮನ ದಾನ ವಿಸರ್ಗ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರೆಗಳು ತಾನಲ್ಲ, ಇಡೆ ಪಿಂಗಳೆ ಸುಷುಮ್ನಾ ಗಾಂಧಾರೀ ಹಸ್ತಿಜಿಹ್ವಾ ಪೂಷೆ ಪಯಸ್ವಿನೀ ಅಲಂಬು ಲಕುಹ ಶಂಕಿನೀ-ಎಂಬ ದಶನಾಡಿಗಳು ತಾನಲ್ಲ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯವೆಂಬ ದಶವಾಯುಗಳು ತಾನಲ್ಲ. ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು, ಆನಂದತನು, ಚಿನ್ಮಯತನು, ಚಿದ್ರೂಪತನು, ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ. ಜೀವಾತ್ಮ ಅಂತರಾತ್ಮ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಜ್ಞಾನಾತ್ಮ ಭೂತಾತ್ಮ ಮಹಾತ್ಮವೆಂಬ ಅಷ್ಟ ಆತ್ಮಂಗಳು ತಾನಲ್ಲ. ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ ಅತಿಚಾರಿಣಿ ಗಂಧಚಾರಿಣಿ ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳು ತಾನಲ್ಲ. ಕುಲ ಛಲ ಧನ ರೂಪ ಯೌವ್ವನ ವಿದ್ಯೆ ರಾಜ್ಯ ತಪವೆಂಬ ಬಹಿರಂಗ ಅಷ್ಟಮದಂಗಳು ತಾನಲ್ಲ. ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ. ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮಿಗಳು ತಾನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳು ತಾನಲ್ಲ. ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ ಷಟ್‍ಭ್ರಮೆಗಳು ತಾನಲ್ಲ. ಆಸ್ತಿ, ಜಾಯತೇ, ಪರಿಣಮತೇ, ವರ್ಧತೇ, ವಿನಶ್ಯತಿ, ಅಪಕ್ಷೀಯತೇ ಎಂಬ ಷಡ್ಭಾವವಿಕಾರಂಗಳು ತಾನಲ್ಲ. ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯವೆಂಬ ಪಂಚಕೋಶಂಗಳು ತಾನಲ್ಲ. ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ. ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪತ್ರಯಂಗಳು ತಾನಲ್ಲ. ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯಂಗಳು ತಾನಲ್ಲ. ವಾತ ಪಿತ್ಥ ಕಫಂಗಳೆಂಬ ದೋಷತ್ರಯಂಗಳು ತಾನಲ್ಲ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳು ತಾನಲ್ಲ. ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ. ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ. ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಲ್ಲ. ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೆ ಎಂಬ ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ. ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತಗಳೆಂಬ ಪಂಚಾವಸ್ಥೆಗಳು ತಾನಲ್ಲ. ಜಾಗ್ರದಲ್ಲಿಯ ಜಾಗ್ರ, ಜಾಗ್ರದಲ್ಲಿಯ ಸ್ವಪ್ನ, ಜಾಗ್ರದಲ್ಲಿಯ ಸುಷುಪ್ತಿ, ಜಾಗ್ರದಲ್ಲಿಯ ತೂರ್ಯ, ಜಾಗ್ರದಲ್ಲಿಯ ತೂರ್ಯಾತೀತವೆಂಬ ಜಾಗ್ರಪಂಚಾವಸ್ಥೆಗಳು ತಾನಲ್ಲ. ಸ್ವಪ್ನದಲ್ಲಿಯ ಜಾಗ್ರ, ಸ್ವಪ್ನದಲ್ಲಿಯ ಸ್ವಪ್ನ, ಸ್ವಪ್ನದಲ್ಲಿಯ ಸುಷುಪ್ತಿ, ಸ್ವಪ್ನದಲ್ಲಿಯ ತೂರ್ಯ, ಸ್ವಪ್ನದಲ್ಲಿಯ ತೂರ್ಯಾತೀತವೆಂಬ ಸ್ವಪ್ನಪಂಚಾವಸ್ಥೆಗಳು ತಾನಲ್ಲ. ಸುಷುಪ್ತಿಯಲ್ಲಿಯ ಜಾಗ್ರ, ಸುಷುಪ್ತಿಯಲ್ಲಿಯ ಸ್ವಪ್ನ, ಸುಷುಪ್ತಿಯಲ್ಲಿಯ ಸುಷುಪ್ತಿ , ಸುಷುಪ್ತಿಯಲ್ಲಿಯ ತೂರ್ಯ, ಸುಷುಪ್ತಿಯಲ್ಲಿಯ ತೂರ್ಯಾತೀತವೆಂಬ ಸುಷುಪ್ತಿಯ ಪಂಚಾವಸ್ಥೆಗಳು ತಾನಲ್ಲ. ತೂರ್ಯದಲ್ಲಿಯ ಜಾಗ್ರ, ತೂರ್ಯದಲ್ಲಿಯ ಸ್ವಪ್ನ, ತೂರ್ಯದಲ್ಲಿಯ ಸುಷುಪ್ತಿ, ತೂರ್ಯದಲ್ಲಿಯ ತೂರ್ಯ, ತೂರ್ಯದಲ್ಲಿಯ ತೂರ್ಯಾತೀತವೆಂಬ ತೂರ್ಯಪಂಚಾವಸ್ಥೆಗಳು ತಾನಲ್ಲ. ತೂರ್ಯಾತೀತದಲ್ಲಿಯ ಜಾಗ್ರ, ತೂರ್ಯಾತೀತದಲ್ಲಿಯ ಸ್ವಪ್ನ , ತೂರ್ಯಾತೀತದಲ್ಲಿಯ ಸುಷುಪ್ತಿ, ತೂರ್ಯಾತೀತದಲ್ಲಿಯ ತೂರ್ಯ, ತೂರ್ಯಾತೀತದಲ್ಲಿಯ ತೂರ್ಯಾತೀತವೆಂಬ ತೂರ್ಯಾತೀತಪಂಚಾವಸ್ಥೆಗಳು ತಾನಲ್ಲ. ಸಕಲ-ಶುದ್ಧ-ಕೇವಲಾವಸ್ಥೆಗಳು ತಾನಲ್ಲ. ಸಕಲದಲ್ಲಿಯ ಸಕಲ, ಸಕಲದಲ್ಲಿಯ ಶುದ್ಧ, ಸಕಲದಲ್ಲಿಯ ಕೇವಲವೆಂಬ ಸಕಲತ್ರಿಯಾವಸ್ಥೆಗಳು ತಾನಲ್ಲ. ಶುದ್ಧದಲ್ಲಿಯ ಸಕಲ, ಶುದ್ಧದಲ್ಲಿಯ ಶುದ್ಧ, ಶುದ್ಧದಲ್ಲಿಯ ಕೇವಲವೆಂಬ ಶುದ್ಧತ್ರಿಯಾವಸ್ಥೆಗಳು ತಾನಲ್ಲ. ಕೇವಲದಲ್ಲಿಯ ಸಕಲ, ಕೇವಲದಲ್ಲಿಯ ಶುದ್ಧ, ಕೇವಲದಲ್ಲಿಯ ಕೇವಲವೆಂಬ ಕೇವಲತ್ರಿಯಾವಸ್ಥೆಗಳು ತಾನಲ್ಲ. ಜ್ಞಾತೃ ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ. ಧರ್ಮ ಅರ್ಥ ಕಾಮ ಮೋಕ್ಷಂಗಳೆಂಬ ಚತುರ್ವಿಧ ಪುರುಷಾರ್ಥಂಗಳು ತಾನಲ್ಲ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದಂಗಳು ತಾನಲ್ಲ. ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಕಾವ್ಯ ಇಶಿತ್ವ ವಶಿತ್ವ ಎಂಬ ಅಷ್ಟಮಹದೈಶ್ವರ್ಯಂಗಳು ತಾನಲ್ಲ. ರಾಜಸಹಂಕಾರ ತಾಮಸಹಂಕಾರ ಸ್ವಹಂಕಾರವೆಂಬ ಅಹಂಕಾರತ್ರಯಂಗಳು ತಾನಲ್ಲ. ಅಂಜನಾಸಿದ್ಧಿ, ಘುಟಿಕಾಸಿದ್ಧಿ, ರಸಸಿದ್ಧಿ, ಪಾದೋದಕಸಿದ್ಧಿ, ಪರಕಾಯ ಪ್ರವೇಶ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನವೆಂಬ ಅಷ್ಟಮಹಾಸಿದ್ಧಿಗಳು ತಾನಲ್ಲ. ಉದರಾಗ್ನಿ ಮಂದಾಗ್ನಿ ಶೋಕಾಗ್ನಿ ಕ್ರೋಧಾಗ್ನಿ ಕಾಮಾಗ್ನಿಯೆಂಬ ಪಂಚಾಗ್ನಿಗಳು ತಾನಲ್ಲ. ಪ್ರಕೃತಿ, ಪುರುಷ, ಕಾಲ, ಪರ, ವ್ಯೋಮಾಕಾಶಂಗಳು ತಾನಲ್ಲ. ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯ, ಸರ್ವಶೂನ್ಯವಾಗಿಹ ಸಹಜನಿರಾಲಂಬವೇ ತಾನೆಂದರಿದ ಮಹಾಶರಣಂಗೆ ನಾಮ ರೂಪ ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು ನೋಡಾ. ದಿವ್ಯಜ್ಞಾನವೇ ತನ್ನ ಚಕ್ಷು, ಅಚಲಪದವೇ ತನ್ನ ಪುರ್ಬು, ಅಚಲಾತೀತವೇ ತನ್ನ ಹಣೆ ನೋಡಾ. ನಿರಾಕುಳಪದವೇ ತನ್ನ ನಾಸಿಕ, ನಿರಂಜನಾತೀತವೆ ತನ್ನ ಉಶ್ವಾಸ-ನಿಶ್ವಾಸ ನೋಡಾ. ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ ತನ್ನ ಕರ್ಣದ್ವಾರ ನೋಡಾ. ಅಮಲ ನಿರ್ಮಲವೇ ತನ್ನ ಗಲ್ಲ, ಅಮಲಾತೀತವೇ ತನ್ನ ಗಡ್ಡಮೀಸೆ ಕೋರೆದಾಡೆ ನೋಡಾ. ನಾದಬಿಂದುಕಳಾತೀತವೆ ತನ್ನ ತಾಳೋಷ*ಸಂಪುಟ ನೋಡಾ. ಅಕಾರ, ಉಕಾರ, ಮಕಾರ, ನಾದ ಬಿಂದು ಅರ್ಧಚಂದ್ರ ನಿರೋದಿನಾದಾಂತ ಶಕ್ತಿವ್ಯಾಪಿನಿ ವ್ಯೋಮರೂಪಿಣಿ ಅನಂತ ಆನಂದ ಅನಾಶ್ರಿತ ಸುಮನೆ ಉನ್ಮನಿ ಇಂತೀ ಪ್ರಣವದಲ್ಲಿ ಉತ್ಪತ್ಯವಾದ ಷೋಡಶಕಳೆ ತನ್ನ ಷೋಡಶ ದಂತಂಗಳು ನೋಡಾ. ಆ ದಂತಂಗಳ ಕಾಂತಿ ಅನೇಕಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ತನ್ನ ಕೊರಳೆ ನಿರಾಕುಳ, ತನ್ನ ಭುಜಂಗಳೆ ಅಪ್ರಮಾಣ ಅಗೋಚರ ನೋಡಾ. ತನ್ನ ಹಸ್ತಾಂಗುಲಿ ನಖಂಗಳೆ ಪರತತ್ವ, ಶಿವತತ್ವ, ಗುರುತತ್ವ, ಲಿಂಗತತ್ವಂಗಳು ನೋಡಾ. ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನಪ್ರಣವ ಅವಾಚ್ಯಪ್ರಣವವೆಂಬ ಸಣ್ಣ ಕುಚಂಗಳು ನೋಡಾ. ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾಶ್ರ್ವಂಗಳು ನೋಡಾ. ಬಿಂದ್ವಾಕಾಶವೇ ತನ್ನ ಬೆನ್ನು ನೋಡಾ. ಮಹಾಕಾಶವೇ ತನ್ನ ಬೆನ್ನ ನಿಟ್ಟೆಲವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾಕಾರಲಿಂಗವೆ ತನ್ನ ಗರ್ಭ ನೋಡಾ. ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದುನೋಡಾ. ಆ ಗರ್ಭದಲ್ಲಿ ಅನೇಕಕೋಟಿತತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿರುದ್ರರು, ಅನೇಕಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು ಅನೇಕಕೋಟಿ ಚಂದ್ರಾದಿತ್ಯರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಗಳು, ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ. ತನ್ನ ನಡುವೆ ವ್ಯೋಮಾತೀತವು, ತನ್ನ ಕಟಿಸ್ಥಾನವೇ ಕಲಾಪ್ರಣವ, ತನ್ನ ಪಚ್ಚಳವೆ ಅನಾದಿಪ್ರಣವ ಆದಿಪ್ರಣವ ನೋಡಾ. ತನ್ನ ಉಪಸ್ಥವೇ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ಸಮಸ್ತ ದೇವರ್ಕಗಳಿಗೂ ಜನನಸ್ಥಳವಾಗಿಹ ನಿರ್ವಾಣಪದ ನೋಡಾ. ಶಿವಸಂಬಂಧ, ಶಕ್ತಿಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ ನೋಡಾ. ಸಚ್ಚಿದಾನಂದ ಪರಮಾನಂದವೆ ತನ್ನ ಒಳಪಾದ ಕಂಬಗಳು ನೋಡಾ. ಚಿದಾತ್ಮ ಪರಮಾತ್ಮನೆ ತನ್ನ ಹರಡು, ಅತಿಸೂಕ್ಷ್ಮಪಂಚಾಕ್ಷರವೆ ತನ್ನ ಪಾದಾಂಗುಷಾ*ಂಗುಲಿಗಳೆಂಬ ಸಾಯುಜ್ಯಪದ ನೋಡಾ. ತನ್ನ ಸ್ವರವೆ ಪರಾಪರ, ತನ್ನ ಮಾತೇ ಮಹಾಜ್ಯೋತಿರ್ಮಯಲಿಂಗ, ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ವಪೆ ನೋಡಾ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ ಇನ್ನೂರ ಹದಿನಾರು ಷಡುಸ್ಥಲಲಿಂಗವೆ ತನ್ನಂತಃಸ್ಥಾನದಲ್ಲಿ ಧರಿಸಿಹ ಆಭೂಷಣಂಗಳು ನೋಡಾ. ಮಹಾಲಿಂಗವೇ ತುರುಬು, ಶಿವಜ್ಞಾನವೆ ಶೃಂಗಾರವಾಗಿಹ ತನ್ನ ತಾನರಿದು ಅಂತಃಶೂನ್ಯ, ಅಧಃಶೂನ್ಯ, ಬಹಿಃಶೂನ್ಯ, ದಶದಿಶಾಶೂನ್ಯ ನಿರಾಕಾರವಾಗಿಹ ತನ್ನ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ತಿಳಿದು ಮಹಾಶರಣನು ತಾನೆ ಗುರು, ತಾನೆ ಲಿಂಗ, ತಾನೆ ಜಂಗಮ, ತಾನೆ ಪರಮಪಾದೋದಕಪ್ರಸಾದ ನೋಡಾ. ತಾನೆ ನಾದಬಿಂದುಕಳಾತೀತ ನೋಡಾ. ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ. ತಾನೆ ಬಯಲು ನಿರ್ಬಯಲು, ತಾನೆ ನಿರುಪಮ ನಿರಾಕಾರ ತಾನೆ ನಿರಾಳ ನಿರಾಲಂಬ ನೋಡಾ. ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣನು, ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಕಾರವೇ ಪೃಥ್ವಿ:ಮಃಕಾರವೇ ಅಪ್ಪು, ಶಿಕಾರವೇ ಅಗ್ನಿ, ವಾಕಾರವೇ ವಾಯು, ಯಕಾರವೇ ಆಕಾಶ, ಓಂಕಾರವೇ ಆತ್ಮಸ್ವರೂಪು ನೋಡಾ. ಮತ್ತೆ ನಕಾರವೇ ಬ್ರಹ್ಮ, ಮಃಕಾರವೇ ವಿಷ್ಣು, ಶಿಕಾರವೇ ರುದ್ರ, ವಾಕಾರವೇ ಈಶ್ವರ, ಯಕಾರವೇ ಸದಾಶಿವ, ಓಂಕಾರವೇ ಮಹಾತ್ಮನು ನೋಡಾ. ಮತ್ತೆ ಅಂತ್ರರ್ಯಾಮಿಯೇ ನಕಾರ, ಚೈತನ್ಯ ಮಃಕಾರ, ಭಾವನೇ ಶಿಕಾರ, ಕರ್ತಾರನೇ ವಾಕಾರ, ಕ್ಷೇತ್ರಜ್ಞನೇ ಯಕಾರ, ಶಿವನೆ ಓಂಕಾರ ನೋಡ. ಮತ್ತೆ ಕರ್ಮಾಂಗ ಸ್ವರೂಪನಪ್ಪ ಭಕ್ತನೇ ನಕಾರ. ವಿದ್ಯಾಂಗ ಸ್ವರೂಪನಪ್ಪ ಮಾಹೇಶ್ವರನೇ ಮಃಕಾರ. ಕಾಮಾಂಗ ಸ್ವರೂಪನಪ್ಪ ಪ್ರಸಾದಿಯೇ ಶಿಕಾರ. ಯೋಗಾಂಗ ಸ್ವರೂಪನಪ್ಪ ಪ್ರಾಣಲಿಂಗಿಯೇ ವಾಕಾರ. ಭೂತಾಂಗ ಸ್ವರೂಪನಪ್ಪ ಶರಣನೆ, ಯಕಾರ. ಶಿವಾಂಗ ಸ್ವರೂಪನಪ್ಪ ಐಕ್ಯನೇ ಓಂಕಾರ ನೋಡಾ. ಮತ್ತೆ ನಕಾರವೇ ಸದ್ಭಕ್ತಿ, ಮಃಕಾರವೇ ನೈಷಿ*ಕಾಭಕ್ತಿ, ಶಿಕಾರವೇ ಅವಧಾನಭಕ್ತಿ, ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ, ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ, ಶಿಕಾರವೇ ಶಿವತತ್ವ ನೋಡಾ. ವಾಕಾರವೇ ಅನುಭಾವಭಕ್ತಿ, ಯಕಾರವೇ ಆನಂದಭಕ್ತಿ, ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ, ವಿದ್ಯಾತತ್ವವೇ ಮಃಕಾರ, ಶಿಕಾರವೇ ಶಿವತತ್ವ ನೋಡ. ವಾಕಾರವೇ ಈಶ್ವರತತ್ವ, ಯಕಾರವೇ ಸದಾಶಿವತತ್ವ, ಓಂಕಾರವೇ ಪರತತ್ವ ನೋಡಾ. ಮತ್ತೆ ನಕಾರವೇ ಸುಚಿತ್ತ ಹಸ್ತ, ಮಃಕಾರವೇ ಸುಬುದ್ಧಿ ಹಸ್ತ, ಶಿಕಾರವೇ ನಿರಹಂಕಾರ ಹಸ್ತ, ವಾಕಾರವೇ ಸುಮನ ಹಸ್ತ, ಯಕಾರವೇ ಸುಜ್ಞಾನ ಹಸ್ತ, ಓಂಕಾರವೇ ಸದ್ಭಾವ ಹಸ್ತ, ಇಂತಿವು ಅಂಗಷಡಕ್ಷರ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಕಲಾಗಮ ಶಿಖಾಮಣಿಯನು, ಅಪ್ರಮಾಣ ಕೂಡಲಸಂಗಯ್ಯನ ನಿರೂಪದಿಂದ ಪರ ಮೊದಲಾಗಿ ಬ್ರಹ್ಮ ಕಡೆಯಾಗಿ ಸೃಷ್ಟಿ ಮಾರ್ಗವ ನಿರೂಪಿಸಿಹೆನು, ಚಿತ್ತೈಸುವದು ಶರಣಜನಂಗಳು. ಪರಾಪರವಾಗಿಹ ಪರಬ್ರಹ್ಮ ಲೋಕಾದಿ ಲೋಕಗಳ ಸೃಜಿಸಬೇಕೆಂದು ನೆನಹುಮಾತ್ರದಲ್ಲಿಯೇ ಆ ಪರಾಪರವಾಗಿಹ ಪರಬ್ರಹ್ಮದಲ್ಲಿ ಪರ ಉತ್ಪತ್ಯವಾಯಿತ್ತು, ಆ ಪರದಲ್ಲಿ ಶಿವನುತ್ಪತ್ಯವಾದನು, ಆ ಶಿವನಲ್ಲಿ ಶಕ್ತಿ ಉತ್ಪತ್ಯವಾದಳು, ಆ ಶಕ್ತಿಯಲ್ಲಿ ಬಿಂದು ಉತ್ಪತ್ಯವಾಯಿತ್ತು. ಆ ಬಿಂದುವಿನಲ್ಲಿ ನಾದ ಉತ್ಪತ್ಯವಾಯಿತ್ತು. ಆ ನಾದದಲ್ಲಿ ಸದಾಶಿವನುತ್ಪತ್ಯವಾದನು. ಆ ಸದಾಶಿವನ ಗೌಪ್ಯವಕ್ತ್ರದಲ್ಲಿ ಆತ್ಮನುತ್ಪತ್ಯವಾದನು. ಆ ಸದಾಶಿವನ ಈಶಾನವಕ್ತ್ರದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಸದಾಶಿವನ ತತ್ಪುರುಷವಕ್ತ್ರದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಸದಾಶಿವನ ವಾಮದೇವವಕ್ತ್ರದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಸದಾಶಿವನ ಸದ್ಯೋಜಾತವಕ್ತ್ರದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಆ ಸದಾಶಿವನ ಹೃದಯದಲ್ಲಿ ಚಂದ್ರನುತ್ಪತ್ತಿಯಾದನು. ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ತಿಯಾದನು. ಆ ಸದಾಶಿವನು ಆಕಾಶಕ್ಕೆ ಅಧಿದೇವತೆಯಾಗಿಹನು. ಆ ಸದಾಶಿವನಲ್ಲಿ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಗಧಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ರುದ್ರನುತ್ಪತ್ತಿಯಾಗಿ ಅಗ್ನಿಗಧಿದೇವತೆಯಾಗಿಹನು. ಆ ರುದ್ರನಲ್ಲಿ ವಿಷ್ಣು ಉತ್ಪತ್ತಿಯಾಗಿ ಅಪ್ಪುವಿಗಧಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಬ್ರಹ್ಮನುತ್ಪತ್ತಿಯಾಗಿ ಪೃಥ್ವಿಗಧಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜಗಂಗಳು ಉತ್ಪತ್ಯವಾಯಿತ್ತು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತ ಬ್ರಹ್ಮತತ್ವ, ಮಾಹೇಶ್ವರ ವಿಷ್ಣುತತ್ವ ಪ್ರಸಾದಿ ರುದ್ರತತ್ವ, ಪ್ರಾಣಲಿಂಗಿ ಈಶ್ವರತತ್ವ ಶರಣ ಸದಾಶಿವತತ್ವ, ಐಕ್ಯ ಮಹಾಭೇದತತ್ವ. ಇಂತೀ ಷಡ್ಭಾವದ ಆದ್ಯಂತದಿಂದ ಭೇದವ ಹಂಚಿಹಾಕಿ ನೀನು ಅಸಾಧ್ಯನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ರುದ್ರತತ್ವ ಲಿಂಗಮೂರ್ತಿಯಾಗಿ, ಈಶ್ವರತತ್ವ ಶರಣಮೂರ್ತಿಯಾಗಿ, ಸದಾಶಿವತತ್ವ ಐಕ್ಯಕೂಟಸ್ಥವಾಗಿ, ನಾಮರೂಪ ಭಾವವಳಿದಲ್ಲಿ, ಪರಶಿವಮೂರ್ತಿ ಪರಾಪರದೊಳಗಾಯಿತ್ತು. ಅದು ಅವರೋಹಾರೋಹವಾದಲ್ಲಿ, ಬಸವಣ್ಣ ಚೆನ್ನಬಸವಣ್ಣನೆಂದು ಒಂದು ಮೂರಾಗಿ, ಮೂರು ಆರಾಗಿ, ಆರು ಮಿಶ್ರವಾಗಿ, ನೂರೊಂದರಲ್ಲಿ ತೋರಿಹ ಸ್ಥಲ ಕುಳಂಗಳೆಲ್ಲ ಸುವರ್ಣದ ಸಾರದಂತೆ ಉರಿಗೆ ಕರಗಿ, ಉರಿಯಡಗೆ ಮುನ್ನಿನಂತಿರವು. ಆ ತೆರವಾದ ಸ್ಥಲಕುಳ ವಿವರ, ಸ್ಫಟಿಕದ ಬಹುವರ್ಣದಂತೆ. ವರ್ಣವಳಿಯೆ ಘಟವುಳಿದ ಮತ್ತೆ, ಮುನ್ನಿನಂದ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->