ಅಥವಾ

ಒಟ್ಟು 10 ಕಡೆಗಳಲ್ಲಿ , 5 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ, ಸಮಾಧಾನವಾಯಿತ್ತು ಸದಾಚಾರ._ ಇಂತೀ ತ್ರಿವಿಧವು ಏಕಾರ್ಥವಾಗಿ, ಅರುಹಿನ ಹೃದಯ ಕಂದೆರೆದು, ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು, ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು, ಪರಮಾನಂದವೆಂಬ ಮಠದೊಳಗೆ, ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು, ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ ನಮೋನಮೋ ಎಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಮತ್ತಂ,ಆ ಶಿಷ್ಯನು ಸದ್ಗುರುಸ್ವಾಮಿಗೆ ದೀರ್ಘದಂಡ ನಮಸ್ಕಾರವಂ ಮಾಡಿ ಭಯ ಭಕ್ತಿಯಿಂದ `ಎಲೆ ಸದ್ಗುರುಸ್ವಾಮಿ ಆದಿಮೂಲ ಆನಾದಿಮೂಲಂಗಳಿಗತ್ತತ್ತವಾಗಿಹ ಚಿದ್ಬ ್ರಹ್ಮಾಂಡ ಮೊದಲಾಗಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಬ್ರಹ್ಮಾಂಡಗಳೇನೂ ಇಲ್ಲದಂದು, ಇನ್ನೂರಿಪ್ಪತ್ನಾಲ್ಕು ಭುವನಂಗಳು ಮೊದಲಾಗಿ ಮಹಾಭುವನ, ಅತಿಮಹಾಭುವನಂಗಳು ಕಡೆಯಾಗಿ, ಅತಿಮಹಾತೀತ ಮಹಾ ಅನಂತಕೋಟಿ ಭುವನಾದಿಭುವನಂಗಳೇನೂ ಎನಲಿಲ್ಲದಂದು, ಆದಿಮೂಲ ಆನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲ ಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿಯ ರೂಪು-ಲಾವಣ್ಯ-ಸೌಂದರ್ಯ-ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳು ಹೇಗಿರ್ದವೆಂಬುದನು, ನಿರಂಜನಾತೀತ ಪ್ರಣವದುತ್ಪತ್ಯವನು, ಅವಾಚ್ಯ ಪ್ರಣವದುತ್ಪತ್ಯವನು ಕಲಾಪ್ರಣವದುತ್ಪತ್ಯದ ಭೇದವನು, ಅನಾದಿಪ್ರಣವದುತ್ಪತ್ಯದ ಭೇದವನು, ಅನಾದಿ ಅಕಾರ ಉಕಾರ ಮಕಾರದುತ್ಪತ್ಯವನು, ಆದಿಪ್ರಣವದುತ್ಪತ್ಯದ ಭೇದವನು, ಆದಿ ಅಕಾರ ಉಕಾರ ಮಕಾರಂಗಳುತ್ಪತ್ಯವನು, ನಾದ ಬಿಂದುಕಳೆಗಳ ಭೇದವನು, ಆ ಆದಿ ಅಕಾರ ಉಕಾರ ಮಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದುತ್ಪತ್ಯ ಲಯದ ಭೇದವನು, ಅದಕ್ಕೆ ಅಧಿದೇವತೆಯನು, ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಕಾರ ಉಕಾರ ಮಕಾರದಲ್ಲಿ ಅಡಗಿದ ಭೇದವನು, ಅಕಾರ-ಉಕಾರ-ಮಕಾರ-ನಾದ-ಬಿಂದು-ಕಳೆ-ಪ್ರಕೃತಿ-ಪ್ರಾಣ ಆಧಾರಂಗಳ ಭೇದವನು, ನಾದಬಿಂದುಕಳೆ ಪ್ರಕೃತಿ ಪ್ರಾಣಂಗಳ ಆಧಾರಂಗಳ ಭೇದವನು, ನಾದ-ಬಿಂದು-ಕಳೆ-ಅಕಾರ-ಉಕಾರ-ಮಕಾರವು ಕೂಡಿ ಓಂಕಾರದುತ್ಪತ್ಯವನು, ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದುತ್ಪತ್ಯದ ಭೇದವನು, ಅಖಂಡ ಸ್ವಯಂಭುಲಿಂಗದುತ್ಪತ್ಯವನು, ಅನಾದಿ ಸದಾಶಿವದುತ್ಪತ್ಯದ ಭೇದವನು, ಅನಾದಿ ಈಶ್ವರತತ್ವದುತ್ಪತ್ಯವನು, ಅನಾದಿ ಮಹೇಶ್ವರತತ್ವದುತ್ಪತ್ಯದ ಭೇದವನು, ಆದಿ ಸದಾಶಿವತತ್ವದುತ್ಪತ್ಯದ ಭೇದವನು, ಆದಿ ಈಶ್ವರತತ್ವದುತ್ಪತ್ಯದ ಭೇದವನು, ಆದಿ ಮಹೇಶ್ವರತತ್ವದುತ್ಪತ್ಯದ ಭೇದವನು, ದಶಚಕ್ರದ ಉತ್ಪತ್ಯಭೇದವನು, ದಶಚಕ್ರದ ನ್ಯಾಸವನು, ದಶಚಕ್ರದ ನಿವೃತ್ತಿಯನು, ನವಪದ್ಮದ ನಿವೃತ್ತಿಯನು, ನವಪದ್ಮದ ನೆಲೆಯನು, ನವಪದ್ಮದ ನಿವೃತ್ತಿಯನು, ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಅಕಾರ ಉಕಾರ ಮಕಾರದುತ್ಪತ್ಯವನು, ಆ ಅಕಾರ ಉಕಾರ ಮಕಾರದಲ್ಲಿ ಪೃಥ್ವಿ ಅಗ್ನಿ ಋಗ್ವೇದ ಭೂಲೋಕ ಬ್ರಹ್ಮಾಂಡ ಅಂತರೀಕ್ಷ ಯಜುರ್ವೇದ ವಾಯು ಭುವರ್ಲೋಕ, ವಿಷ್ಣು ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ ಮಹೇಶ್ವರನುತ್ಪತ್ಯ ಲಯವನು, ಆ ಅಕಾರ ಉಕಾರ ಮಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾದ ಭೇದವನು, ಆ ಓಂಕಾರ ತಾರಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದ ಕಾಂತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಉತ್ಪತ್ಯವನು, ಅತಿಸೂಕ್ಷ್ಮ ಪಂಚಾಕ್ಷರಿಯ ನೆಲೆಯನು, ಅತಿಸೂಕ್ಷ್ಮ ಪಂಚಾಕ್ಷರಿಯ ನಿವೃತ್ತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಕಾಂತಿಯನು, ಚಿದಾತ್ಮ ಪರಮಾತ್ಮನುತ್ಪತ್ಯವನು, ಚಿದಾತ್ಮ ಪರಮಾತ್ಮನ ನೆಲೆಯನು, ಚಿದಾತ್ಮ ಪರಮಾತ್ಮನ ನಿವೃತ್ತಿಯನು, ಏಕಾಕ್ಷರದುತ್ಪತ್ಯವನು, ತ್ರಿಯಾಕ್ಷರದುತ್ಪತ್ಯವನು, ಸಹಸ್ರಾಕ್ಷರದುತ್ಪತ್ಯವನು, ಏಕಾಕ್ಷರದ ನೆಲೆಯನು, ತ್ರಿಯಾಕ್ಷರದ ನೆಲೆಯನು, ಸಹಸ್ರಾಕ್ಷರದ ನೆಲೆಯನು, ಏಕಾಕ್ಷರದ ನಿವೃತ್ತಿಯನು, ತ್ರಿಯಾಕ್ಷರದ ನಿವೃತ್ತಿಯನು, ಸಹಸ್ರಾಕ್ಷರದ ನಿವೃತ್ತಿಯನು, ಷಡ್ವಿಧಮುಖಂಗಳುತ್ಪತ್ಯವನು, ಷಡ್ವಿಧಮುಖಂಗಳ ನೆಲೆಯನು, ಷಡ್ವಿಧಮುಖಂಗಳ ನಿವೃತ್ತಿಯನು, ಷಡ್ವಿಧಭೂತಂಗಳುತ್ಪತ್ಯವನು, ಷಡ್ವಿಧಭೂತಂಗಳ ನೆಲೆಯನು, ಷಡ್ವಿಧಭೂತಂಗಳ ನಿವೃತ್ತಿಯನು, ಷಡ್ವಿಧಲಿಂಗದುತ್ಪತ್ಯವನು, ಷಡ್ವಿಧಲಿಂಗಗಳ ನೆಲೆಯನು, ಷಡ್ವಿಧಲಿಂಗಗಳ ನಿವೃತ್ತಿಯನು, ಷಡ್ವಿಧಕಲೆಗಳುತ್ಪತ್ಯವನು, ಷಡ್ವಿಧಕಲೆಗಳ ನೆಲೆಯನು, ಷಡ್ವಿಧಕಲೆಗಳ ನಿವೃತ್ತಿಯನು, ಷಡ್ವಿಧಸಾದಾಖ್ಯದುತ್ಪತ್ಯವನು, ಷಡ್ವಿಧಸಾದಾಖ್ಯದ ನೆಲೆಯನು, ಷಡ್ವಿಧಸಾದಾಖ್ಯದ ನಿವೃತ್ತಿಯನು, ಷಡ್ವಿಧಹಸ್ತಂಗಳುತ್ಪತ್ಯವನು, ಷಡ್ವಿಧಹಸ್ತಂಗಳ ನೆಲೆಯನು, ಷಡ್ವಿಧಹಸ್ತಂಗಳ ನಿವೃತ್ತಿಯನು, ನವಶಕ್ತಿಯ ಉತ್ಪತ್ಯವನು, ನವಶಕ್ತಿಯ ನೆಲೆಯನು, ನವಶಕ್ತಿಯ ನಿವೃತ್ತಿಯನು, ನವ ಅಧಿದೇವತೆಗಳುತ್ಪತ್ಯವನು, ನವ ಅಧಿದೇವತೆಗಳ ನೆಲೆಯನು, ನವ ಅಧಿದೇವತೆಗಳ ನಿವೃತ್ತಿಯನು, ಅಷ್ಟನಾದದುತ್ಪತ್ಯವನು, ಅಷ್ಟನಾದದ ನೆಲೆಯನು, ಅಷ್ಟನಾದದ ನಿವೃತ್ತಿಯನು, ಷಡ್ವಿಧಭಕ್ತಿಯ ಉತ್ಪತ್ಯವನು, ಷಡ್ವಿಧಭಕ್ತಿಯ ನೆಲೆಯನು, ಷಡ್ವಿಧಭಕ್ತಿಯ ನಿವೃತ್ತಿಯನು, ಷಡ್ವಿಧಪರಿಣಾಮದುತ್ಪತ್ಯವನು, ಷಡ್ವಿಧಪರಿಣಾಮದ ನೆಲೆಯನು, ಷಡ್ವಿದ ಪರಿಣಾಮದ ನಿವೃತ್ತಿಯನು, ಚತುರ್ವೇದದುತ್ಪತ್ಯವನು, ಚತುರ್ವೇದದ ನೆಲೆಯನು, ಚತುರ್ವೇದದ ನಿವೃತ್ತಿಯನು, ಅಜಪೆ ಗಾಯತ್ರಿ ಉತ್ಪತ್ಯವನು, ಅಜಪೆ ಗಾಯತ್ರಿ ನೆಲೆಯನು, ಅಜಪೆ ಗಾಯತ್ರಿಯ ನಿವೃತ್ತಿಯನು, ಷಡ್ವಿಧ ಚಕ್ರಾರ್ಪಣದ ಭೇದವನು, ಮಿಶ್ರಾರ್ಪಣ ಷಡುಸ್ಥಲ ಭೇದವನು, ಇಷ್ಟ-ಪ್ರಾಣ-ಭಾವಲಿಂಗದ ಭೇದವನು, ಇಷ್ಟ-ಪ್ರಾಣ-ಭಾವಲಿಂಗದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಡಗಿಹ ಭೇದವನು ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿ ಅಖಂಡಜ್ಯೋತಿರ್ಮಯಲಿಂಗವಾದ ಭೇದವನು. ಆತ್ಮನುತ್ಪತ್ಯವನು, ಆತ್ಮನ ನೆಲೆಯನು, ಆತ್ಮನ ನಿವೃತ್ತಿಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನೆಲೆಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನಿವೃತ್ತಿಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನುತ್ಪತ್ಯವನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನೆಲೆಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿಯನು, ಷಡ್ವಿಧ ಅರ್ಪಿತ ಅವಧಾನದ ಭೇದವನು, ನಿರಾಳ ದಶಚಕ್ರಂಗಳ ಭೇದವನು, ನಿರಾಮಯ ಷಟ್ಸ್ಥಲದ ಭೇದವನು, ನಿರಂಜನ ದಶಚಕ್ರಂಗಳ ಭೇದವನು, ನಿರಾಮಯಾತೀತ ಷಟ್ಸ್ಥಲದ ಭೇದವನು, ಷಟ್ಸ್ಥಲ ಬ್ರಹ್ಮದುತ್ಪತ್ಯವನು, ಆ ಷಟ್ಸ್ಥಲಬ್ರಹ್ಮದಲ್ಲಿ ಮೂವತ್ತಾರು ತತ್ತ್ವಂಗಳುತ್ಪತ್ಯವನು, ಷಡುಶಕ್ತಿಗಳುತ್ಪತ್ಯವನು, ಷಡಂಗಂಗಳುತ್ಪತ್ಯವನು, ಶಿವಶಕ್ತಿಗಳುತ್ಪತ್ಯವನು, ಪ್ರೇರಕಾವಸ್ಥೆಯ ದರ್ಶನದ ಭೇದವನು, ಮಧ್ಯಾವಸ್ಥೆಯ ದರ್ಶನದ ಭೇದವನು, ಕೆಳಗಾದವಸ್ಥೆಯ ದರ್ಶನವನು, ಮೇಲಾದವಸ್ಥೆಯ ದರ್ಶನದ ಭೇದವನು, ಕೇವಲಾವಸ್ಥೆಯ ದರ್ಶನವನು, ಸಕಲಾವಸ್ಥೆಯ ದರ್ಶನದ ಭೇದವನು, ಶುದ್ಧಾವಸ್ಥೆಯ ದರ್ಶನದ ಭೇದವನು, ಪಂಚಮಲಂಗಳ ದರ್ಶನವನು, ನಿರ್ಮಲಾವಸ್ಥೆಯ ದರ್ಶನದ ಭೇದವನು, ನಿರಾಳವಸ್ಥೆಯ ದರ್ಶನವನು, ನಿರಂಜನಾವಸ್ಥೆಯ ದರ್ಶನದ ಭೇದವನು, ಜ್ಞಾನವಸ್ಥೆಯ ದರ್ಶನವನು, ಶಿವಾವಸ್ಥೆಯ ದರ್ಶನದ ಭೇದವನು, ಮಂತ್ರಾಧ್ವದುತ್ಪತ್ಯವನು, ಮಂತ್ರಾಧ್ವದ ವರ್ತನೆಯನು, ಪದಾಧ್ವದುತ್ಪತ್ಯವನು, ಪದಾಧ್ವದ ವರ್ತನೆಯನು, ವರ್ಣಾಧ್ವದುತ್ಪತ್ಯವನು, ವರ್ಣಾಧ್ವದ ವರ್ತನೆಯನು, ಭುವನಾಧ್ವದುತ್ಪತ್ಯವನು, ಭುವನಾಧ್ವದ ವರ್ತನೆಯನು, ತತ್ವಾಧ್ವದುತ್ಪತ್ಯವನು, ತತ್ವಾಧ್ವದ ವರ್ತನೆಯನು, ಕಲಾಧ್ವದುತ್ಪತ್ಯವನು, ಕಲಾಧ್ವದ ವರ್ತನೆಯನು, ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳ, ತಾಮಸನಿರಸನವ ಮಾಡಿ ನುಡಿದ ವಚನದ ಭೇದವನು, ತತ್‍ಪದ ತ್ವಂಪದ ಅಸಿಪದಂಗಳ ಭೇದವನು, ಆ ತ್ವಂಪದ ತತ್ಪದ ಅಕಾರ ಉಕಾರ ಮಕಾರಂಗಳಲ್ಲಿ ಅಡಗಿಹ ಭೇದವನು, ಆ ಆಕಾರ ಉಕಾರ ಮಕಾರ ಏಕವಾಗಿ ಷಟ್ಸ್ಥಲಬ್ರಹ್ಮವಾದ ಭೇದವನು, ವಚನಾನುಭಾವದ ಭೇದವನು ಅರಿಯೆನು, ಎಲೆ ಸದ್ಗುರುಸ್ವಾಮಿ ನಿರೂಪಿಸೆಂದು, ಆ ಶಿಷ್ಯನು ಬಿನ್ನವಿಸಲು ಆ ಸದ್ಗುರುಸ್ವಾಮಿ ನಿರೂಪಿಸಿದ ವಚನವೆಂತೆಂದಡೆ : ಅನಂತಕೋಟಿ ಮಹಾಬ್ರಹ್ಮಾಂಡ ಮೊದಲಾಗಿ ಅನಂತಕೋಟಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಅತಿಮಹಾಬ್ರಹ್ಮಾಂಡಂಗಳೇನೂಯೇನೂ ಎನಲಿಲ್ಲದಂದು, ಅನಂತಕೋಟಿ ಮಹಾಬ್ರಹ್ಮಾಂಡಂಗಳನೊಳಕೊಂಡು ಇನ್ನೂರಿಪ್ಪತ್ನಾಲ್ಕು ಮಹಾಭುವನ ಮೊದಲಾಗಿ ಅತಿಮಹಾಭುವನಂಗಳು ಅತಿಮಹಾತೀತವೆಂಬ ಮಹಾಭುವನಂಗಳು ಕಡೆಯಾಗಿ ಅನಂತಕೋಟಿ ಅತಿಮಹಾತೀತ ಭುವನಂಗಳು ಏನೂಯೇನೂ ಇಲ್ಲದಂದು ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಮಹಾಘನವ ಮೀರಿದತ್ತತ್ತವಾಗಿಹ ಅಖಂಡ ಅಖಂಡಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ರುದ್ರ ಈಶ್ವರ ಸದಾಶಿವ ಬ್ರಹ್ಮ ನಾರಾಯಣರಳಿದುಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ದೇವರ್ಕಳಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳನರಿಯದೆ ಅನಂತಕೋಟಿ ವೇದಂಗಳು, ಅನಂತಕೋಟಿ ಮುನಿಗಳು, ಅನಂತಕೋಟಿ ಲೋಕಾದಿಲೋಕಂಗಳೆಲ್ಲ ಪ್ರಳಯಕ್ಕೊಳಗಾದರು ನೋಡಾ. ಆ ಅಖಂಡಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ಈ ಲೋಕದ ಜಡರುಗಳೆತ್ತ ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸದ್ಗುರು ಕಾರುಣ್ಯವ ಪಡೆದು, ಪೂರ್ವಗುಣವಳಿದು, ಪುನರ್ಜಾತನಾದ ಬಳಿಕ ಆ ಸದ್ಗುರು, ಪರಶಿವ, ಪ್ರಾಣಾತ್ಮ -ಈ ತ್ರಿವಿಧವು ಏಕಾರ್ಥವಾಗಿ ಲಿಂಗ ಪ್ರವೇಶವಂ ಮಾಡಿ, ಆ ಮಹಾಲಿಂಗವನು ಸದ್ಭಕ್ತಂಗೆ ಕರುಣಿಸಿ ಪ್ರಾಣಲಿಂಗವಾಗಿ ಬಿಜಯಂಗೆಯಿಸಿ ಕೊಟ್ಟು, ಲಿಂಗಪ್ರಾಣ ಪ್ರಾಣಲಿಂಗ ಲಿಂಗವಂಗ ಅಂಗಲಿಂಗವೆನಿಸಿ ಭಕ್ತಕಾಯ ಮಮಕಾಯವಾಗಿ ಅಂಗದ ಮೇಲೆ ಲಿಂಗಸ್ಥಾಪ್ಯವಂ ಮಾಡಿ, ``ಆ ಮಹಾಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವನು ಮಾಡು' ಎಂದು ಶ್ರೀ ಗುರುವಾಜ್ಞೆಯಂ ಮಾಡಲು, ``ಮಹಾಪ್ರಸಾದ'ವೆಂದು ಆಜ್ಞೆಯಂ ಕೈಕೊಂಡು ಕ್ರಿಯಾಮಾರ್ಗದಿಂ ಮಾಡುವಲ್ಲಿ, ದೀಪಾರಾಧನೆ ಪರಿಯಂತರ ಆಗಮಮಾರ್ಗದಲು ಮಾಡಿ ನೈವೇದ್ಯ ಕ್ರಿಯಮಾಡುವಲ್ಲಿ, ಸರ್ವ ರಸ ಫಲ-ಪುಷ್ಪ ಪಾಕಾದಿ ಮಹಾದ್ರವ್ಯಂಗಳನು ಪಂಚೇಂದ್ರಿಯಂಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ ಅರ್ಪಿಸುವಲ್ಲಿ ದ್ರವ್ಯಂಗಳ ಸುರೂಪವನು ಶ್ವೇತ ಪೀತ ಹರಿತ ಮಾಂಜಿಷ್ಟ ಕೃಷ್ಣ ಕಪೋತ ಷಡುವರ್ಣ ಮಿಶ್ರವಾದ ಮೂವತ್ತಾರು ಬಹುವಿಧ ವರ್ಣಂಗಳನು, ಕಂಗಳಲ್ಲಿ ನೋಡಿ, ಕಂಡು, ಅರಿದು, ಕುರೂಪವ ಕಳೆದು, ಸುರೂಪವನು ಕಂಗಳಿಂದ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋ? ಲಿಂಗಭಾಜನವೋ? ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ; ರೂಪು ಲಿಂಗಕ್ಕರ್ಪಿತವಾಯಿತ್ತು. ನಾದ ಮಂತ್ರಂಗಳಾದಿಯಾದ ಶಬ್ದವನು ಶ್ರೋತ್ರದಿಂ ಕೇಳಿ, ಕುಶಬ್ದವನೆ ಕಳೆದು ಸುಶಬ್ದವನು ಶ್ರೋತ್ರದಿಂ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋ? ಲಿಂಗಭಾಜನವೋ? ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ, ಸುಶಬ್ದದ್ರವ್ಯಂಗ?ು ಶ್ರೋತ್ರದಿಂ ಲಿಂಗಕ್ಕರ್ಪಿತವಾಯಿತ್ತು. ದ್ರವ್ಯಂಗ? ಸುಗಂಧ ದುರ್ಗಂಧಗ?ನು ಘ್ರಾಣವರಿದು, ಘ್ರಾಣ ವಾಸಿಸಿ ದುರ್ಗಂಧವ ಕಳೆದು ಸುಗಂಧವನು ಘ್ರಾಣದಿಂ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋ? ಲಿಂಗ ಭಾಜನವೋ? ಆ ಕಾಲದಲು ಸೂತಕವಿಲ್ಲ ದೋಷವಿಲ್ಲ; ಘ್ರಾಣದಿಂ ಸುಗಂಧ ಲಿಂಗಾರ್ಪಿತವಾಯಿತ್ತು. ದ್ರವ್ಯಂಗಳ ಮೃದು ಕಠಿಣ ಶೀತೋಷ್ಣಂಗಳನು ಪರುಶನದಿಂ ಪರುಶಿಸಿ ಸುಪರುಶನವರಿದು ತತ್ಕಾಲೋಚಿತ ದ್ರವ್ಯಂಗಳನು ಅನುವರಿದು ಪರುಶಿಸಿ ಲಿಂಗಕ್ಕರ್ಪಿಸುವಲ್ಲಿ ಸ್ವಯಭಾಜನವೋಳ ಲಿಂಗಭಾಜನವೋ? ಆ ಕಾಲದಲು ಸೂತಕವಿಲ್ಲ, ದೋಷವಿಲ್ಲ, ದ್ರವ್ಯಂಗಳ ಮೃದುಕಠಿಣ ಶೀತೋಷ್ಣಂಗಳು ಪರುಶನದಿಂ ಲಿಂಗಾರ್ಪಿತವಾಯಿತ್ತು. ಮಹಾದ್ರವ್ಯಂಗಳ ರೂಪು ಶಬ್ದ ಗಂಧ ರಸ ಮೃದುರಿಠಣ ಶೀತೋಷ್ಣ ಮೊದಲಾದುವು ಇಂದ್ರಿಯಂಗಳಿಂದ ಲಿಂಗಾರ್ಪಿತವಾಯಿತ್ತು. ದ್ರವ್ಯಂಗಳ ಸುರೂಪವನು ಕಂಗಳಿಂದರ್ಪಿಸುವಂತೆ ಶ್ರೋತ್ರಘ್ರಾಣ ಸ್ಪರ್ಶ ಜಿಹ್ವೆ ಮೊದಲಾದ ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು, ಕಂಗಳಲ್ಲಿ ರೂಪನರ್ಪಿಸಬೇಕು. ಸುಶಬ್ದವನು ಶ್ರೋತ್ರದಿಂದರ್ಪಿಸುವಂತೆ, ಚಕ್ಷು ಘ್ರಾಣ ಜಿಹ್ವೆ ಪರುಶ ಮೊದಲಾದ ನಾಲ್ಕು ಇಂದ್ರಿಯಂಗಳಿಂದರ್ಪಿಸಬಾರದು, ಸುಶಬ್ದವನು ಶ್ರೋತ್ರದಿಂದವೆ ಅರ್ಪಿಸಬೇಕು. ಸುಗಂಧವನು ಘ್ರಾಣದಿಂದರ್ಪಿಸುವಂತೆ ನೇತ್ರ ಶ್ರೋತ್ರ ಸ್ಪರ್ಶ ಜಿಹ್ವೆ ಮೊದಲಾದ ನಾಲ್ಕು ಇಂದ್ರಿಯಂಗಳಲ್ಲಿ ಅರ್ಪಿಸಬಾರದು, ಸುಗಂಧವನು ಘ್ರಾಣದಿಂದವೆ ಅರ್ಪಿಸಬೇಕು. ಮೃದು ಕಠಿಣ ಶೀತೋಷ್ಣಂಗಳನು ಸ್ಪರುಶನದಿಂದರ್ಪಿಸುವಂತೆ ನೇತ್ರ ಶ್ರೋತ್ರ ಘ್ರಾಣಜಿಹ್ವೆ ಮೊದಲಾದ ನಾಲ್ಕು ಇಂದ್ರಿಯಂಗಳಿಂದ ಅರ್ಪಿಸಬಾರದು, ಮೃದು ಕಠಿಣ ಶೀತೋಷ್ಣ ದ್ರವ್ಯಂಗಳನು ಸ್ಪರುಶನದಿಂದರ್ಪಿಸಬೇಕು. ನಾಲ್ಕು ಇಂದ್ರಿಯದಿಂ ರೂಪು ಶಬ್ದಗಂಧ ಮೃದುಕಠಿಣ ಶೀತೋಷ್ಣ [ದ್ರವ್ಯಂಗಳ ಲಿಂಗಾರ್ಪಿತವಾಯಿತ್ತು] ಮಹಾದ್ರವ್ಯಂಗಳ ಸುರಸವನು ಮಹಾರುಚಿಯನು ಜಿಹ್ವೆಯಿಂದರ್ಪಿಸುವಂತೆ ನೇತ್ರ ಶ್ರೋತ್ರ ಘ್ರಾಣ ಸ್ಪರುಶನ ಮೊದಲಾದ ಈ ನಾಲ್ಕು ಇಂದ್ರಿಯಂಗಳಿಂದರ್ಪಿಸಬಹುದೆ ಹೇಳಿರಣ್ಣಾ. ಮಹಾರಸವನು ಮಹಾರುಚಿಯನು ಜಿಹ್ವೆಯಿಂದವೆ ಅರ್ಪಿಸಬೇಕು. ಅಹಂಗಲ್ಲದೆ ಲಿಂಗಾರ್ಪಿತವಾಗದು, ಆ ಲಿಂಗದ ಆರೋಗಣೆಯಾಗದು. ಮಹಾರಸವನು ರುಚಿಯನು ಜಿಹ್ವೆಯಿಂದರ್ಪಿಸುವಲ್ಲಿ ಸೂತಕವೆಂದು ದೋಷವೆಂದು ಸ್ವಯಭಾಜನವಾಗದೆಂದು ಭಿನ್ನಭಾಜನವಾಗಬೇಕೆಂದು ದೇವರ ಆರೋಗಣೆಗೆ ಮುನ್ನವೇ ಇದ್ದ ಪರಿಯಾಣವ ತೆಗೆದ ಕಷ್ಟವ ನೋಡಾ! ಅಗಲನಾರಡಿಗೊಂಬ ಪಾಪವ ನೋಡಾ ಅಕಟಕಟಾ! ಈ ಪರಿಯೆ ಲಿಂಗಾರ್ಚನೆ? ಈ ಪರಿಯೆ ಲಿಂಗಾರ್ಪಿತವ ಮಾಡಿ ಪ್ರಸಾದವ ಪಡೆವ ಪರಿ? ಈ ಪರಿಯೆ ಭಕ್ತಿ? ಈ ಪರಿಯೆ ಜ್ಞಾನ? ಇಂತಲ್ಲ ಕೇಳಿರಣ್ಣಾ, ಕರ್ತೃ ಭೃತ್ಯ ಸಂಬಂಧದ ಪರಿ. ದೇವರ ಪರಿಯಾಣದಲು ದೇವರಿಗೆ ಬಂದ ಸರ್ವದ್ರವ್ಯಮಹಾರಸಂಗಳನು, ಮಹಾರುಚಿಯನು ಭಕ್ತದೇಹಿಕ ದೇವನಾಗಿ ದೇವರ ಜಿಹ್ವೆಯಲ್ಲಿ ದೇವಾದಿದೇವ ಮಹಾದೇವಂಗರ್ಪಿಸಬೇಕು. ಸ್ಮೃತಿ: ರೂಪಂ ಸಮರ್ಪಿತಂ ಶುದ್ಧಂ ರುಚಿಃ ಸಿದ್ಧಂ ತು ವಿಶ್ರುತಂ ಏ ತತ್ಸಮಾಗತಾ ತೃಪ್ತಿಃ ಪ್ರಸಿದ್ಧಂತುಪ್ರಸಾದಕಂ ದರ್ಪಣಂ ಧೂಪದೀಪೌ ಚ ನಾನಾರುಚಿ ಸುಖಂ ಬಹು ಪ್ರಸಾದ ಏವ ಭೋಕ್ತವ್ಯೋ ಅನ್ಯದ್ಗೋಮಾಂಸಸನ್ನಿಭಂ ರೂಪಂ ಸಮರ್ಪಯೇದ್ದ್ರವ್ಯಂ ರುಚಿಮಪ್ಯರ್ಪಯೇತ್ತತಃ ಉಭಯಾರ್ಪಣಹೀನಶ್ಚೇತ್ ಪ್ರಸಾದೋ ನಿಷ್ಫಲೋ ಭವೇತ್ ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ ಸ್ವೀಕೃತಂ ಮಯಾ ರಸಾನ್ ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧೋ ಮಹಾರುಚಿಃ ತತ್ತಲ್ಲಿಂಗಮುಖೇನೈವ ಅರ್ಪಿತಂ ಸ್ಯಾತ್ಸಮರ್ಪಣಂ ಅರ್ಪಿತಾನರ್ಪಿತಂ ಸ್ಥಾನಂ ಇಂದ್ರಿಯಾದಿಂದ್ರಿಯಂ ಯಥಾ ಇಂದ್ರಿಯಸ್ಥಾನತತ್ಕರ್ಮ ಸಮರ್ಪಿತಕ್ರಿಯಾರ್ಪಿತಂ ..................ಜ್ಞಾನಾರ್ಪಣಕ್ರಿಯಾರ್ಪಣೇ ಉಭಯಾರ್ಪಣಹೀನಸ್ಯ ಪ್ರಸಾದೋ ನಿಷ್ಫಲೋ ಭವೇತ್ ಗರ್ಭಿಣ್ಯಾ ಗರ್ಭದೇಹಸ್ಯ ಸರ್ವಭೋಗಸ್ಸಮೋ ಭವೇತ್ ಲಿಂಗಿನಾಂ ಲಿಂಗಭೋಗೇನ ಪ್ರಸಾದಃ ಸಹ ಸಂಭವೇತ್ ಗರ್ಭಿಣೀ ಸರ್ವಭೋಗೇಷು ಶಿಶೂನಾಂ ತೃಪ್ತಿಸಂಭವಃ ಲಿಂಗಿನಾಂ ಲಿಂಗಭೋಗೇಷು ಪ್ರಸಾದಸ್ಸಂಭವೇತ್ತಥಾ ಯಥಾ ಚ ಗರ್ಭಿಣೀ ಭೋಗೇ ಶಿಶೂನಾಂ ತೃಪ್ತಿಸಂಭವಃ ತಥಾ ಲಿಂಗಸ್ಯ ಭೋಗೇಷು ಅಂಗಸ್ತೈಪ್ತಿಮವಾಪ್ನು ಯಾತ್ ಗರ್ಭೀಕೃತಸ್ಯ ಪ್ರಾಣಸ್ತು ಗರ್ಭಣೀಭೋಗಮಾಶ್ರಿತಃ ಲಿಂಗಗರ್ಭೀಕೃತೋ ಲಿಂಗೀ ಲಿಂಗಭೋಗಸಮಾಶ್ರಿತಃ ಮತ್ತೊಂದಾಗಮದಲ್ಲಿ: ಭಕ್ತಕಾಯೋ ಮಹಾದೇವೋ ಭಕ್ತಾತ್ಮಾ ಚ ಸದಾಶಿವಃ ಭಕ್ತಭೋಗೋಪಭೋಗಶ್ಚ ಭೋಗಸ್ತಸ್ಯ ವಿಧೀಯತೇ ಲಿಂಗದೇಹೀ ಶಿವಾತ್ಮಾಯಂ ಲಿಂಗಾಚಾರೋ ನ ಲೌಕಿಕಃ ಸರ್ವಲಿಂಗಮಯಂ ರೂಪಂ ಲಿಂಗೇನ ಸಮಮಶ್ನುತೇ ಘ್ರಾಣಸ್ತಸ್ಯೈವ ಘ್ರಾಣಶ್ಚ ದೃಷ್ಟಿರ್ದೃಷ್ಟಿಃ ಶ್ರುತಿಃ ಶ್ರುತಿಃ ಸ್ಪರ್ಶನಂ ಸ್ಪರ್ಶನಂ ವಿಂದ್ಯಾದ್ ಗ್ರಾಹ್ಯಂ ತದ್ಗ್ರಾಹ್ಯಮೇವ ಚ ಭುಕ್ತಂ ತದ್ಭುಕ್ತಮಾಖ್ಯಾತಂ ತೃಪ್ತಿಸ್ತತ್ತೃಪ್ತಿರೇವ ಚ ತಸ್ಯೈಕಃ ಪ್ರಾಣ ಆಖ್ಯಾತ ಇತ್ಯೇತತ್ಸಹವರ್ತಿನಾಂ ಲಿಂಗದೃಷ್ಟಿನಿರೀಕ್ಷಾ ಸ್ಯಾಲ್ಲಿಂಗಹಸ್ತೋಪಸ್ಪರ್ಶನಂ ಲಿಂಗಶ್ರೋತ್ರೇಣ ಶ್ರವಣಂ ಲಿಂಗಜಿಹ್ವಾರಸಾನ್ನವಾನ್ ಲಿಂಗಘ್ರಾಣಸ್ತು ಘ್ರಾಣಶ್ಚ ಲಿಂಗೇನ ಸಹ ವರ್ತತೇ ಲಿಂಗಂ ಮನೋಗತಂ ವಾಪಿ ಇತ್ಯೇತೈಃ ಸಹಭೋಜನಂ ಲೋಕಾಚಾರನಿಬದ್ಧಸ್ತು ಲೋಕಾಲೋಕವಿವರ್ಜಿತಃ ಲೋಕಾಚಾರಪರಿತ್ಯಾಗೀ ಪ್ರಾಣಲಿಂಗೀತಿ ಸಂಸ್ಮøತಃ ನ ಪ್ರಾಣಲಿಂಗಿನಃ ಕಾಲೋ ನ ಲಿಂಗಪ್ರಾಣಿನಃ ಕ್ರಿಯಾ ಕಾಲಕರ್ಮದ್ವಯಂ ನಾಸ್ತಿ ಶರಣಸ್ಯ ಪ್ರಸಾದತಃ ಇಂತೆಂದುದಾಗಿ ಇದು ಲಿಂಗಾರ್ಚನೆಯ ಪರಿ, ಇಂತಲ್ಲದೆ ರುಚಿಯರ್ಪಿತಕ್ಕೆ ಮುನ್ನವೆ ಪರಿಯಾಣವ ತೆಗೆಯಲು ಲಿಂಗಾರ್ಚನೆಯ ಕ್ರೀ ತಪ್ಪಿತ್ತು. ಶ್ರೀ ಗುರುವಾಜ್ಞೆಯ ಮೀರಿದವನು ಜ್ಞಾನಿಯಲ್ಲ, ಭಕ್ತನಲ್ಲ ಕೇಳಿರೇ. ಆವನಾನು ಮಹಾರಾಜಂಗೆ ಆರೋಗಣೆಗೆ ಮುನ್ನವೆ ಪರಿಯಾಣವ ತೆಗೆಯಲು ದ್ರೋಹ, ಶಾಸ್ತಿಗೊಳಗಾದರು, ಇದು ದೃಷ್ಟ ನೋಡಿರೆ. ರಾಜಾಧಿರಾಜ ಮಹಾರಾಜ ದೇವಾಧಿದೇವ ಮಹಾದೇವಂಗೆ ಆರೋಗಣೆಗೆ ಮುನ್ನ ಪರಿಯಾಣವ ತೆಗೆಯಲು ಮಹಾದ್ರೋಹ. ಇದನರಿದು ಶ್ರೀ ಗುರುವಾಜ್ಞೆಯ ತಪ್ಪದೆ, ಲಿಂಗಾರ್ಚನೆಯ ಕ್ರೀ ತಪ್ಪದೆ ದೇವರ ಪರಿಯಾಣದಲು ಮಹಾರಸ ದ್ರವ್ಯ ಪದಾರ್ಥಂಗಳನಿಟ್ಟು ಶ್ರೀಗುರು ಸಹಿತ ಜಂಗಮಸಹಿತ ಲಿಂಗಾರ್ಪಿತ ಮಾಡುವುದು. ಪಂಚೇಂದ್ರಿಯಗಳ ಪಂಚಸ್ಥಾನ ಪ್ರವೇಶವಾದ ಮಹಾಲಿಂಗಕ್ಕೆ, ಶಬ್ದ ಸ್ಪರ್ಶ ರೂಪ ರಸ [ಗಂಧಂಗಳನು]ಮನೋವಾಕ್ಕಾಯದಲ್ಲಿ ಭೋಗಿಸುವ ಭೋಗವೆಲ್ಲವನು ಅರ್ಪಿಸುವುದು. ಮೇಲೆ ತಾಂಬೂಲದಿಂ ಅಷ್ಟವಿಧಾರ್ಚನೆ ಷೋಡಶೋಪಚಾರವನು ಮಾಡಿ, ಲಿಂಗಾರ್ಚನೆಯಂ ಮಾಡಿ, ಪ್ರಸಾದವ ಹಡದು, ಆ ಮಹಾಪ್ರಸಾದದಿಂ ಪ್ರಸಾದಿಯಪ್ಪುದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪ್ರವೃತ್ತಿ ನಿವೃತ್ತಿಯೆಂದು ಎರಡು ತೆರನಾಗಿಹುದೆಂಬರು. ಪ್ರವೃತ್ತಿಯೇ ಶಕ್ತಿಮಯವೆಂದೆಂಬರು. ನಿವೃತ್ತಿಯೇ ಭಕ್ತಿಮಯವೆಂದೆಂಬರು. ಪ್ರವೃತ್ತಿಯೇ ಮಾಯೆಯೆಂದೆಂಬರು. ನಿವೃತ್ತಿಯೇ ನಿರ್ಮಾಯೆಯೆಂದೆಂಬರು. ಪ್ರವೃತ್ತಿ ನಿವೃತ್ತಿಗೆ ಪರಮ ಕಾರಣವಾಗಿ ಪರಶಿವನೆಂದೆಂಬರು. ಇದುಕಾರಣ, ಎನಗೆ ಪ್ರವೃತ್ತಿಯೂ ಇಲ್ಲ; ನಿವೃತ್ತಿಯೂ ಇಲ್ಲ; ಪರಮ ಕಾರಣನೆಂಬುದೂ ಇಲ್ಲ. ಶಿವ ಶರಣನೆಂಬೆರಡೂ ಏಕಾರ್ಥವಾಗಿ ನಿರಾಕಾರ ಪರವಸ್ತು ತಾನೊಂದೆಯಾಯಿತ್ತಾಗಿ ತನ್ನಿಂದನ್ಯರಾಗಿ ಉಂಟೆಂಬುದೇನನು ಹೇಳಲಿಲ್ಲ. ತಾನೆ ಪರಾಪರವಸ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನು ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇದಿಸಿಕೊಟ್ಟ ಪರಿಯೆಂತೆಂದೊಡೆ ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ, ಆ ಅಂಗಕ್ಕೆ ಕಲೆಗಳನೆ ಷಡುಶಕ್ತಿಗಳೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವಜ್ಞಾನಮನಬುದ್ಧಿಚಿತ್ತ ಅಹಂಕಾರಗಳನೆ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಂಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯ ಪದಾರ್ಥಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾ ಮುಖದ ಲಿಂಗಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ ಅಂಗಸ್ಥಲಂಗಳಡಗಿ, ತ್ರಿವಿಧ ಲಿಂಗಾಂಗ ಸ್ಥಲಂಗಳುಳಿದು, ಕಾಯಗುರು, ಪ್ರಾಣಲಿಂಗ, ಜ್ಞಾನ ಜಂಗಮ, ಗುರುವಿನಲ್ಲಿ ಶುದ್ಧ ಪ್ರಸಾದ ಲಿಂಗದಲ್ಲಿ ಸಿದ್ಧಪ್ರಸಾದ ಜಂಗಮದಲ್ಲಿ ಪ್ರಸಿದ್ಧ ಪ್ರಸಾದ ಇಂತೀ ತ್ರಿವಿಧ ಪ್ರಸಾದ ಏಕಾರ್ಥವಾಗಿ ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೆ ಅಲ್ಲ, ಶೂನ್ಯನಲ್ಲ, ನಿಶ್ಶೂನ್ಯನಲ್ಲ, ದ್ವೈತಿಯಲ್ಲ, ಅದ್ವೈತಿಯಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ಇದು ಕಾರಣ, ಇದರಾಗುಹೋಗು ಸಕಲಸಂಬಂಧವ ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರೆ ಬಲ್ಲರು.
--------------
ಅಕ್ಕಮಹಾದೇವಿ
ಪ್ರಥಮದಲ್ಲಿ ವಸ್ತು ಏನೂ ಏನೂ ಇಲ್ಲದ ಮಹಾಘನಶೂನ್ಯಬ್ರಹ್ಮವಾಗಿದ್ದಿತ್ತು. ಅಂತಿರ್ದ ಪರವಸ್ತು ತಾನೆ, ತನ್ನ ಲೀಲೆಯಿಂದ, ತನ್ನ ದಿವ್ಯಾನಂದ ಸ್ವಲೀಲಾ ಸ್ವಭಾವದಿಂದಾದುದು ಆತ್ಮನೆಂಬಂಗಸ್ಥಲ. ಅಂತಾದ ಜೀವಾತ್ಮನೆಂಬ ಅಂಗಸ್ಥಲಕ್ಕೆ ಸೇರಿದ ತತ್ವಂಗಳಿಪ್ಪತ್ತೈದು. ಅವಾವುವಯ್ಯಾ ಎಂದಡೆ: ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು, ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಪ್ರಾಣಾದಿ ವಿಷಯಂಗಳೈದು, ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು._ ಅಂತು ಅಂಗ ತತ್ವಂಗಳಿಪ್ಪತ್ತೈದು. ಇಂತು ಅಂಗತತ್ವ ಇಪ್ಪತ್ತೈದು ತನ್ನೊಳಗೆ ಸಮರಸತ್ವನೆಯ್ದಿಸಲೋಸುಗ, ಭಕ್ತಿ ತದರ್ಥವಾಗಿ, ಆ ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು ಹನ್ನೊಂದು ತತ್ವವಾಯಿತ್ತು. ಇಂತೀ ಹನ್ನೊಂದು ತತ್ವದ ಪರಿಕ್ರಮವೆಂತೆಂದೊಡೆ: ಶಾಂತ್ಯಾದಿ ಶಕ್ತಿಗಳೈದು, ಶಿವಾದಿ ಸಾದಾಖ್ಯಗಳೈದು, ಪರಶಿವತತ್ವವೊಂದು._ ಇಂತೀ ಲಿಂಗತತ್ತ್ವ ಹನ್ನೊಂದು. ಆ ಅಂಗತತ್ತ್ವ ಲಿಂಗತತ್ತ್ವವೆಂಬ ಉಭಯತತ್ತ್ವ ಮೂವತ್ತಾರು. ಇಂತಿವರ ಸಮರಸೈಕ್ಯವೆಂತುಂಟಯ್ಯಾ ಎಂದಡೆ: ನಿವೃತ್ತಿಶಕ್ತಿಯನೈದಿ, ವಾಗಾದಿ ಕರ್ಮೇಂದ್ರಿಯಂಗಳೈದು ಕರ್ಮ ಸಾದಾಖ್ಯವನೊಡಗೂಡಿದಲ್ಲಿ, ಪೃಥ್ವಿ ತತ್ತ್ವ ಬಯಲಾಯಿತ್ತು. ಪ್ರತಿಷಾ*ಶಕ್ತಿಯನೈದಿ, ಶಬ್ದಾದಿ ವಿಷಯಂಗಳೈದು ಕರ್ತುಸಾದಾಖ್ಯವನೊಡಗೂಡಿದಲ್ಲಿ, ಅಪ್ಪು ತತ್ತ್ವ ಬಯಲಾಯಿತ್ತು. ವಿದ್ಯಾಶಕ್ತಿಯನೈದಿ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು ಮೂರ್ತಿ ಸಾದಾಖ್ಯವನೊಡಗೂಡಿದಲ್ಲಿ, ತೇಜತತ್ತ್ವ ಬಯಲಾಯಿತ್ತು. ಶಾಂತಿಶಕ್ತಿಯನೈದಿ, ಪ್ರಾಣಾದಿವಾಯುಗಳೈದು ಅಮೂರ್ತಿಸಾದಾಖ್ಯವನೊಡಗೂಡಿದಲ್ಲಿ, ವಾಯುತತ್ತ್ವ ಬಯಲಾಯಿತ್ತು. ಶಾಂತ್ಯತೀತ ಶಕ್ತಿಯನೈಯ್ದಿ, ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು ಶಿವಸಾದಾಖ್ಯವನೊಡಗೂಡಿದಲ್ಲಿ, ಆಕಾಶತತ್ತ್ವ ಬಯಲಾಯಿತ್ತು. ಇಂತೀ ಪಂಚವಿಂಶತಿತತ್ತ್ವಂಗಳು ಲಿಂಗೈಕ್ಯವಾಗಲೊಡನೆ, ಲಿಂಗತತ್ತ್ವ ಹನ್ನೊಂದು ತಾವು ಒಂದೊಂದನೊಡಗೂಡಿ ಏಕಾರ್ಥವಾದಲ್ಲಿ, ಕುಳಸ್ಥಲವಡಗಿತ್ತು. ಇಂತು ಕುಳಸ್ಥಲ_ಸ್ಥಲಕುಳವಡಗಲೊಡನೆ, ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು, ವಾರಿಕಲ್ಲು ಕರಗಿ ನೀರಾದಂತೆ ತನ್ನ ಪರಮಾನಂದದಿಂದವೆ ಸರ್ವಶೂನ್ಯವಾಯಿತ್ತು. ಅದೆಂತೆನಲು, ಸಾಕ್ಷಿ: ಅನಾದಿಸಿದ್ಧಸಂಸಾರಂ ಕರ್ತೃ ಕರ್ಮ ವಿವರ್ಜಯೇತ್ ಸ್ವಯಂಮೇವ ಭವೇದ್ದೇಹೀ ಸ್ವಯಂಮೇವ ವಿಲೀಯತೇ ಅಂತಃ ಶೂನ್ಯಂ ಬಹಿಃ ಶೂನ್ಯಂ ಶೂನ್ಯಶೂನ್ಯಾ ದಿಶೋ ದಶ ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ _ಎಂದುದಾಗಿ, ಇಂತೀ ಅಂಗ ತತ್ತ ್ವವಿಪ್ಪತ್ತೈದು ಲಿಂಗತತ್ತ್ವ ಹನ್ನೊಂದು, ಇಂತೀ ಉಭಯತತ್ತ್ವ ಏಕಾರ್ಥವಾಗಿ, ಸರ್ವಶೂನ್ಯವನೆಯ್ದಿದ ಪರಿಕ್ರಮದ ನಿರ್ಣಯದ ಬೆಡಗು, ತತ್ತ್ವಮಸ್ಯಾದಿ ವಾಕ್ಯಾರ್ಥಂಗಳಲ್ಲಿ ಕಾಣಲಾಯಿತ್ತು._ಅದೆಂತೆಂದಡೆ: ತತ್ಪದವೇ ಲಿಂಗ, ತ್ವಂ ಪದವೇ ಅಂಗ, ಈ ಎರಡರ ಐಕ್ಯವೇ ಅಸಿ ಎಂದುದಾಗಿ . ಇಂತು ಸಕಲನಾಗಬಲ್ಲ, ಸಕಲ ನಿಃಕಲನಾಗಬಲ್ಲ, ಸಕಲ ನಿಃಕಲಾತೀತನಾಗಿ ಏನೂ ಏನೂ ಇಲ್ಲದ ಮಹಾ ಘನಶೂನ್ಯಬ್ರಹ್ಮವಾಗಿ ಇರಬಲ್ಲನಯ್ಯಾ ನಮ್ಮ ಗುಹೇಶ್ವರಲಿಂಗವು !
--------------
ಅಲ್ಲಮಪ್ರಭುದೇವರು
ಮನಕ್ಕೆ ಮನ ಏಕಾರ್ಥವಾಗಿ, ಕಾಯಕ್ಕೆ ಕಾಯ ಸಮದರ್ಶನವಾಗಿ ಪ್ರಾಣಕ್ಕೆ ಪ್ರಾಣ ಸಮಕಳೆಯಾಗಿ ಇದ್ದವರಲ್ಲಿ_ ಮನ ವಚನ ಕಾಯದಲ್ಲಿ ಶಬ್ದಸೂತಕ ಹುಟ್ಟಿದಡೆ ಸೈರಿಸಬಾರದು ಕೇಳಾ. ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಭಕ್ತನಾದ ಕಾರಣ, ಮುಳಿಸು ಮೊಳೆದೋರಿತ್ತು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನಿರಂಜನ ಪ್ರಣವದುತ್ಪತ್ಯ : ಏನೂ ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿ ಕಲಾಪ್ರಣವ ಉತ್ಪತ್ಯವಾಯಿತ್ತು . ಆ ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅಕಾರ ಉಕಾರ ಮಕಾರದ ರೂಪಾಂಗಭೇದದಿಂದ ಒಂಬತ್ತು ಪ್ರಣವ ಉತ್ಪತ್ಯವಾಯಿತ್ತು. ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಸಂಬಂಧವಾಗಿಹವು. ಆ ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಶಕ್ತಿರಹಿತವಾಗಿಹುದು. ಆ ಶಿವಸಂಬಂಧವಾಗಿಹ ಅಖಂಡಗೋಳಕಾಕಾರಪ್ರಣವದಲ್ಲಿ ಜ್ಯೋತಿಸ್ವರೂಪಪ್ರಣವವೆಂದು, ದರ್ಪಣಾಕಾರಪ್ರಣವವೆಂದು, ಕುಂಡಲಾಕಾರಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು, ತಾರಕಕಾಸ್ವರೂಪಪ್ರಣವವೆಂದು ಆರುಪ್ರಕಾರವಾಗಿಹುದು. ಶಕ್ತಿಸಂಬಂಧವಾದ ಪರಂಜ್ಯೋತಿಸ್ವರೂಪವಾಗಿಹ ಪರಮಪ್ರಣವದಲ್ಲಿ ತಾರಕಸ್ವರೂಪಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಕುಂಡಲಾಕಾರಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು ದರ್ಪಣಾಕಾರಪ್ರಣವವೆಂದು ಜ್ಯೋತಿಸ್ವರೂಪಪ್ರಣವವೆಂದು ಆರು ಪ್ರಕಾರವಾಗಿಹುದು. ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವದಲ್ಲಿ ಮೂರ್ತಿಬ್ರಹ್ಮಪ್ರಣವವೆಂದು, ಪಿಂಡಬ್ರಹ್ಮಪ್ರಣವವೆಂದು, ಕಲಾಬ್ರಹ್ಮಪ್ರಣವವೆಂದು, ಬ್ರಹ್ಮಾನಂದಬ್ರಹ್ಮಪ್ರಣವವೆಂದು, ವಿಜ್ಞಾನಬ್ರಹ್ಮಪ್ರಣವವೆಂದು ಪರಬ್ರಹ್ಮಪ್ರಣವವೆಂದು ಈ ಆರು ಪ್ರಣವಂಗಳು ಷಟ್‍ಸ್ಥಲಬ್ರಹ್ಮ ತಾನೆ ಷಷ*ಪ್ರಣವವಾಗಿಹುದೆಂದು ನಿರಾಮಯಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳಿಹುದು. ಇನ್ನು ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ದರ್ಪಣಾಕಾರದ ಪ್ರಣವದಲ್ಲಿ ಈಶಾನ್ಯಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕಪ್ರಣವದಲ್ಲಿ ತತ್ಪುರುಷಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರಪ್ರಣವದಲ್ಲಿ ಅಘೋರಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪಪ್ರಣವದಲ್ಲಿ ವಾಮದೇವಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪಪ್ರಣವದಲ್ಲಿ ಸದ್ಯೋಜಾತಮುಖವು ಉತ್ಪತ್ಯವಾಯಿತ್ತು. ಈಶಾನ್ಯಮುಖದಲ್ಲಿ ಸಾಯುಜ್ಯಪ್ರಣವ ಉತ್ಪತ್ಯವಾಯಿತ್ತು. ತತ್ಪುರುಷಮುಖದಲ್ಲಿ ಸಾಕಲ್ಯಪ್ರಣವ ಉತ್ಪತ್ಯವಾಯಿತ್ತು. ಅಘೋರಮುಖದಲ್ಲಿ ಶಾಂಭವಪ್ರಣವ ಉತ್ಪತ್ಯವಾಯಿತ್ತು. ವಾಮದೇವಮುಖದಲ್ಲಿ ಸ್ವಾಸ್ಯಪ್ರಣವ ಉತ್ಪತ್ಯವಾಯಿತ್ತು. ಸದ್ಯೋಜಾತಮುಖದಲ್ಲಿ ಸೌಖ್ಯಪ್ರಣವ ಉತ್ಪತ್ಯವಾಯಿತ್ತು. ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವು, ಶಕ್ತಿಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪರಬ್ರಹ್ಮಪ್ರಣವವು, ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವ ಈ ಮೂರು ಪ್ರಣವಂಗಳು ಕೂಡಿ ಏಕಾರ್ಥವಾಗಿ ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ ವಾಚಾಮಗೋಚರಕತ್ತತ್ತವಾದ ಮಹಾಘನಕ್ಕೆ ಘನವನೇನೆಂದುಪಮಿಸಬಾರದ ಉಪಮಾತೀತಕತ್ತತ್ತವಾಗಿಹನು ನೋಡಾ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ವಯಾಧೀನಮುಕ್ತನೆಂಬವನೊಬ್ಬ; ಪರಾಧೀನ ಮುಕ್ತನೆಂಬುವನೊಬ್ಬ. ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು ಅದು ಅಜ್ಞಾನ ನೋಡ. ಆತ್ಮನು ಪಶುಪಾಶಬದ್ಧನು, ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ. ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ ಶಿವನೊಬ್ಬನು ಬೇರುಂಟೆಂದೆ. ಮಲ ಮಾಯಾ ಕರ್ಮವನುಂಡು ತೀರಿಸಿ ಶಿವನ ಪ್ರಸಾದದಿಂದ ಮುಕ್ತನೆಂಬೆ. ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ. ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ. ಮಸಿಯೆಂದಾದರೂ ಬೆಳ್ಪಾದುದುಂಟೆ? ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ, ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ? ಇದು ಕಾರಣ, ದ್ವೆ ೈತಕ್ಕೆ ಎಂದೂ ಮುಕ್ತಿಯಿಲ್ಲಯೆಂದೆ. ಇತರ ಮತಂಗಳಂತಿರಲಿ. ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು. ಆ ಸುಜ್ಞಾನಶಕ್ತಿಯು ಗರ್ಭದಲ್ಲಿ ಶಿವಶರಣನುದಯವಾದ. ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ, ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು, ತಾನೆ ಪರಶಿವತತ್ವದೊಳಗೆ ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ ನಿತ್ಯ ಮುಕ್ತನಾದ ನಿಜಲಿಂಗೈಕ್ಯನು ದ್ವೆ ೈತಿಯಲ್ಲ; ಅದ್ವೆ ೈತಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->