ವ್ಯಸನವುಳ್ಳನ್ನಕ್ಕ ಪ್ರಸಾದಿಯಲ್ಲ .
ವಿಷಯವುಳ್ಳನ್ನಕ್ಕ ಪಾದೋದಕಸಂಬಂಧಿಯಲ್ಲ .
ಭಾವವುಳ್ಳನ್ನಕ್ಕ ಭವವಿರಹಿತನಲ್ಲ , ಬಯಕೆಯುಳ್ಳನ್ನಕ್ಕ ಐಕ್ಯನಲ್ಲ .
ಇಂತೀ ಐಕ್ಯಸ್ಥಲವೆಲ್ಲರಿಗೆಲ್ಲಿಯದೊ ?
ಐಕ್ಯನಾದರೆ ಅನ್ನಪಾನಾದಿಗಳ ಇಚ್ಛೆ ನಿಂದು,
ಅನಲ, ಪವನನ ಗುಣ ಕೆಟ್ಟು, ಆಕಾಶದ ಗುಣವರತು,
ಆತ್ಮನೊಳು ಬೆರೆದವರ ಐಕ್ಯರೆಂಬೆ.
ಆತ್ಮ ಅನಾತ್ಮನೊಳು ಅಡಗಿದರೆ ನಿರವಯಲನೆಂಬೆ.
ಇಂತಪ್ಪ ಶರಣ ಬಯಲು ಬಯಲಾಗಿಪ್ಪನಲ್ಲದೆ,
ವಿವರಿಸಿ ನೋಡಿದರೆ ಏನೆಂದರಿಯಬಾರದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .