ಅಥವಾ

ಒಟ್ಟು 20 ಕಡೆಗಳಲ್ಲಿ , 12 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ ವ್ಯಾದ್ಥಿಯ ಚಿಕಿತ್ಸೆಯನಾರು ಅರಿಯರಲ್ಲಾ ! ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ , ಆತ್ಮಂಗೆ ಆಣವ, ಮಾಯಾ, ಕಾರ್ಮಿಕ. ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ, ಬಂಧನದಲ್ಲಿ ಸಾವುತ್ತಿದೆ ಅಂಗ. ಈ ರೋಗ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ. ಒಂದ ಅಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ, ಒಂದ ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು. ಇದಕ್ಕನುಪಾನ ಇದಿರೆಡೆಯಿಲ್ಲ , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಅಂದು ಬಸವಣ್ಣ ಬಂದು ಜರಿದು ಹೋದುದ ಮರೆದೆನೆ ಆ ನೋವ! ಜರಿದುದೆ ಎನಗೆ ದೀಕ್ಷೆಯಾಯಿತ್ತು! ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಬಸವಣ್ಣನೆನ್ನ ಪರಮಾರಾಧ್ಯ!
--------------
ಸಿದ್ಧರಾಮೇಶ್ವರ
ಹಿಂದೆ ಪರೀಕ್ಷಿಸಿ ತಿಳಿದು ನೋಡುವಡೆ, ಪರಿಯಾಯ ಪರಿಯಾಯದಿಂದ ಬಂದಂಗವ ನೀ ಬಲ್ಲೆ ಬಸವಣ್ಣಾ. ನಾ ನೊಂದ ನೋವನು ನೀ ಬಲ್ಲೆ ಬಸವಣ್ಣಾ. ನಾನಂದು ಕಾಲನ ಕಮ್ಮಟಕ್ಕೆ ಗುರಿಯಾಗಿ ಇಪ್ಪಂದು ನೀನು ಶೂನ್ಯರುದ್ರನು ಬಸವಣ್ಣಾ. ನಾನಂದು ಹಲವು ಪರಿಯ ಬಹುರೂಪನಾಡುವಲ್ಲಿ ನೀನು ವಿಚಿತ್ರವಿನೋದನೆಂಬ ಗಣೇಶ್ವರನು ಬಸವಣ್ಣಾ, ಎನ್ನಾದ್ಯಂತವ ನೀ ಬಲ್ಲೆ. ಬಲ್ಲ ಕಾರಣ ಎನ್ನ ಪಾಲಿಸಿದೆ ಬಸವಣ್ಣಾ. ನೀ ಪಾಲಿಸಿದ ಗುಣದಿಂದ ಪಾವನನಾದೆನು ಬಸವಣ್ಣಾ; ಶುದ್ಧ ಸಿದ್ಧ ಪ್ರಸಿದ್ಧವನರಿದೆ ಬಸವಣ್ಣಾ. ಎಲೆ ಗುರುವೆ ಬಸವಣ್ಣಾ, ನೀ ಪಾಸಿದ ಗುಣದಿಂದ ಜೀವನ್ಮುಕ್ತನಾದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ನಿನ್ನವರಿಗೆಯೂ ನಿನಗೆಯೂ ಯೋಗ್ಯನಾದೆ ಬಸವಣ್ಣಾ.
--------------
ಸಿದ್ಧರಾಮೇಶ್ವರ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಗುಣದಿಂದ ಹಾರುವನಲ್ಲದೆ, ಅಗಣಿತ ವಿದ್ಯಾಭ್ಯಾಸದಿಂದ ಹಾರುವನಲ್ಲ. ಹಾರುಬೇಕು ಮಲತ್ರಯಂಗಳ; ಹಾರಬೇಕು ಸೃಷ್ಟಿ-ಸ್ಥಿತಿ ಲಯವ; ಹಾರಬೇಕು, ಸರ್ಪಹಾರ ಕಪಿಲಸಿದ್ಧಮಲ್ಲಿಕಾರ್ಜುನನ ಆ ಹಾರದಲಿ
--------------
ಸಿದ್ಧರಾಮೇಶ್ವರ
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ, ಬೇರೊಂದಕ್ಕೆಲ್ಲಿಯೂ ತೆರಪಿಲ್ಲ. ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ ಜೀವಗುಣದಿಂದ ಭವಕ್ಕೆ ಬೀಜವಾಗಿ ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ. ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು ನಿಜಗುಣ ಯೋಗಿಯ ಯೋಗಕ್ಕೆ ಭಾವವಿಲ್ಲದ ಸೂತ್ರದ ಬಿಂಬ.
--------------
ನಿಜಗುಣಯೋಗಿ
ಉದಕ ಒಂದಾದಡೆ ಕೂಟದ ಗುಣದಿಂದ ಜಾತಿ ಉತ್ತರವಾಯಿತ್ತು. ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ ಅವರವರಲ್ಲಿ ಅವ ಬೆರಸಿದಡೆ ಅವರವರ ಭಾವಕ್ಕೆ ತಕ್ಕಂತೆ ಇಪ್ಪ ಜಲಭೇದದ ವಸ್ತು ನಿರ್ದೇಶ. ಆನೆಯ ಮಾನದಲ್ಲಿ ಇರಿಸಬಹುದೆ? ಕಿರಿದು ಘನದಲ್ಲಿ ಅಡಗುವುದಲ್ಲದೆ ಘನ ಕಿರಿದಿನಲ್ಲಿ ಅಡಗುವುದೆ? ಅಮೃತದ ಕೆಲದಲ್ಲಿ ಅಂಬಲಿಯುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ ಸತ್ಯ ಸದೈವರ ಸಹಪಙ್ಞ್ತಯಲ್ಲಿ ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ? ಭರಿತಾರ್ಪಣದ ಯುಕ್ತಿಯ ಭಿತ್ತಿಯೊ? ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ? ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ? ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ, ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ, ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು, ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ. ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು, ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು. ಇಂತೀ ವಿಷಯ ವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ? ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ ಚಲನೆಯ ಗುಣ ಹೆರೆಹಿಂಗದು. ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ, ಲಿಂಗಾಂಗ ಪರಿಪೂರ್ಣನೆಂಬೆ. ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು ಈ ವ್ರತವನಂಗೀಕರಿಸಿದನಾದಡೆ ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ. ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ ಚೆನ್ನಬಸವಣ್ಣನ ಕೋರಡಿಯ ಕೊಡುವೆ. ಸಂಗನಬಸವಣ್ಣನ ಮೆಚ್ಚಿಸುವೆ. ಪ್ರಭು ನಿಜಗುಣದೇವರ ತಲೆದೂಗಿಸುವೆ. ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು, ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಭರಿತಾರ್ಪಣದ ಚೆನ್ನಬಸವಣ್ಣ
`ನಾಟಿ ಭುಕ್ತಂ ಕ್ಷೀಯತೇ ಕರ್ಮ' ಎಂದುದಾಗಿ ಬಾಳದಕ್ಷರವ ತೊಡೆಯಲಿಕೆ ಆರಳವಯ್ಯಾ, ಗುರುಕಾರುಣ್ಯವುಳ್ಳವರಿಗಲ್ಲದೆ? ಗುರವೆ, ಎನ್ನ ಭವಕ್ಕೆ ಬಾರದಂತೆ ತಪ್ಪಿಸಿದೆ; ತೋರಿಸಿದೆ ಉರುತರ ಪಾದೋದಕ-ಪ್ರಸಾದವ; ನಿನ್ನ ಗುಣದಿಂದ ತನುಗುಣ ನಾಸ್ತಿಯಾದೆ. `ನಾಟಿಭುಕ್ತಂ' ಎಂಬುದ ಮೀರಿ ಶಿವಭೋಕ್ತೃವಾದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿನ್ನ ಕೂಡಿದೆ.
--------------
ಸಿದ್ಧರಾಮೇಶ್ವರ
ಅಂಗವೆಂಬ ವಾಕುಳದ ಕುಂಭದಲ್ಲಿ ತೋರಿ ಅಡಗುವ ಮರೀಚಿಕಾ ಜಲವ ತುಂಬಿದಂತೆ. ಚಿತ್ತ ಸಾಳಿವನವೆಂಬ ತಂಡುಲ ತೊಳೆಯದೆ, ಥಳಿಸದೆ, ಕುಂಭದೊಳಗೆ ಹಾಕಿ ವಾಯುವಿನ ದೂಮ್ರದಿಂದ ಬೇಯಿಸಿ ಅದು ಬೆಂದುದಿಲ್ಲ. ಅದು ಮೂರು ಗುಂಡಿನ ಗುಣದಿಂದ ಗುಂಡಿನ ಚಂದ ತುಂಬಿಹ ಮಡಕೆಯಂತೆ. ಮತ್ತೊಂದರ ಇರವು ತಿರುಗುವ ಚಕ್ರದಗೊಂದಣದಂದದ ದ್ವಂದ್ವವ, ಹಿಂಗಿ ನಿಂದ ಕುಂದಿನಿರವು, ಕೂರಲಗಿನ ಬಾಯ ಧಾರೆಯಂತೆ ಉಭಯವ ಕೂಡಿಕೊಂಡು ನಿಂದ ಗುಂಡು. ಇದು ಬೇಯದು, ಮಡಕೆಯನೊಡೆ, ಜಲವ ತಡಹು, ತಂಡುಲವ ಚೆಲ್ಲು, ಮಾರುತನ ಬೆಂಕಿಯ ಕೆಡಿಸು, ಓಗರದೂಟದ ಬಿಡು, ಭವಸಾಗರದ ಸಾಧನೆಯನೆ ಗೈ, ಕಾಹುರದ ಕಮ್ಮಟವ ಪರರುವ ಬೋಧಿಸುವ ರಸನವ ಕೀಳು, ಕಿತ್ತ ಮತ್ತೆ ಇನ್ನರಿ. ಸಕಲೇಂದ್ರಿಯದ ಹುತ್ತದ ಹಾವ ಹಾಡಿ. ಮೊತ್ತದ ಮನೆ ವಿಕಾರದ ಚಿತ್ತದ ಹುಲಿಯ ಮುರಿ. ಭಕ್ತಿಗೆ ಸಹ ಕರ್ತುವ ಚಿತ್ತದಲ್ಲಿ ಅಚ್ಚೊತ್ತಿದಂತಿರು. ಸಚ್ಚಿದಾನಂದ ಹೃದಯಪೂರಿತನಾಗಿ ಬೆಚ್ಚಂತಿರು. ವಿರಳವಿಲ್ಲದೆ ಅವಿರಳನಾಗಿ ಎನಗೊಂದು ತೊಡುಗೆಯಿಲ್ಲ, ನಿನ್ನಡಿಯಲ್ಲಿ ಅಡಗಿದೆನಾಗಿ ನಿನ್ನ ಒಡಗೂಡುವ ಕಡೆಯಾವುದು? ಎನ್ನ ಕಾಯಕದ ಬಿಡುವಾವುದು? ಅಂದಾಡಿದ ಮಾತಿನ ಕಡಿವೆಂಗೆ ಬಂದ ಮೊಡತದ ನಗೆಯ ಕಾಯಕ ಸಂದಿತ್ತು. ನಿನ್ನಯ ಕೂಪಳ ಬಯಲಾಗಿ ಅಜಾತನೆ ಸಲಹು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಂಗಸಂಬಂಧ ಲಿಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು. ಲಿಂಗಸಂಬಂಧ ಅಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು, ಇದಾವ ಸಂಬಂಧವಿಲ್ಲದೆ ಆಶ್ರಯ ಗುಣದಿಂದ ಲಾಂಛನವಾದುದೇನಯ್ಯಾ ? ಲಾಂಛನಂ ದುರ್ಲಭಂ ಚೈವ ಸ್ವಾನುಭಾವೋಹ್ಯತಃ ಪರಂ ದುರ್ಲಭಂ ಶಿವತತ್ವಂ ಚ ಪ್ರಾಣಲಿಂಗಮತಃ ಪರಂ ಎಂದುದಾಗಿ, ಆಶ್ರಯದ ಪರಿಯಲ್ಲ; ನಿರಾಶ್ರಯದ ಪರಿಯಲ್ಲ, ಲಿಂಗಸಾರಾಯ ಶರಣ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
--------------
ಚನ್ನಬಸವಣ್ಣ
ಲಿಂಗದ ಗುಣದಿಂದ ಲಿಂಗೈಕ್ಯವೆಂಬರು; ಲಿಂಗದ ಗುಣದಿಂದ ಲಿಂಗೈಕ್ಯವಿಲ್ಲ ನೋಡಾ. `ಭಾವಾದ್ವೈತಂ ಪರಂ (ಹಿ?)ತಂ' ಕೂಡಲಚೆನ್ನಸಂಗಾ ಲಿಂಗೈಕ್ಯವು
--------------
ಚನ್ನಬಸವಣ್ಣ
ಅಂಗದ ಗುಣದಿಂದ ಲಿಂಗೈಕ್ಯವೆಂಬರು, ಲಿಂ(ಅಂ?)ಗದಗುಣದಿಂದ ಲಿಂಗೈಕ್ಯವಿಲ್ಲ ನೋಡಾ. ಭಾವಾದ್ವೈತಂ ಪರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಪೃಥ್ವಿಶೂನ್ಯ ಅಪ್ಪುಶೂನ್ಯ ತೇಜಶೂನ್ಯ ವಾಯುಶೂನ್ಯ ಆಕಾಶಶೂನ್ಯ. ಇಂತೀ ಪಂಚಭೌತಿಕ ಶೂನ್ಯದ ಗುಣದ ವಿವರದ ಪರಿಭೇದದ ದೇವರ, ಸದ್ಯೋಜಾತ ಮುಖದಲ್ಲಿ ಉದಕ ಉರಿದು ಬೆಂಕಿ ನುಂಗಿತ್ತ ಕಂಡೆ, ನಿಧಾನ ನೆಲನ ನುಂಗಿತ್ತ ಕಂಡೆ. ಮಡಕೆ ಕರಗಿ ಬೆಣ್ಣೆ ಉಳಿಯಿತ್ತು ನೋಡಾ. ಉಳಿದುದ ಮತ್ತೆಣಿಸಲುಂಟೆ ಅಯ್ಯಾ ? ಬೀಜದೊಳಗಣ ವೃಕ್ಷ ಗಾಳಿಗೆ ಉರುಳಿ ಬೀಳುವ ತೆರನುಂಟೆ ? ಶಿಲೆಯೊಳಗಣ ಪಾವಕ ಸುಡಬಲ್ಲುದೆ ಅಯ್ಯಾ ? ಜೀವ ಸತ್ತು, ಕಾಯವಳಿದ ಮತ್ತೆ ಕಾಯ ಸತ್ತು, ಜೀವ ಉಳಿದ ಮತ್ತೆ ಕಾಬುದಿನ್ನೇನೋ ? ಕಾಯದ ಗುಣದಿಂದ ಜೀವವ ಮರೆದು ಕಾಬುದಿನ್ನೇನೊ ? ಜೀವಗುಣದಲ್ಲಿ ಕಾಯದ ಜೀವದ ಹಂಗಿನೊಳಗಿದ್ದು ಸಾವ ಲಿಂಗವ ದೇವರೆಂದು ಪೂಜಿಸುತಿಪ್ಪರು ನೋಡಾ. ಕರ್ತಾರನ ಕಮ್ಮಟದಲ್ಲಿ ಚಿಕ್ಕಮಕ್ಕಳ ಕೈಯ ಇಕ್ಕುಗೋಳಿನೊಳಗಾಯಿತ್ತು ನೋಡಾ. ನಿತ್ಯತೃಪ್ತನೆಂಬ ಲಿಂಗ ಸಿಕ್ಕಿತ್ತಯ್ಯ. ಭವದಾಶೆಗೊಡಲಾಗಿ ನಿತ್ಯತ್ವವನರಿಯದೆ, ಇಷ್ಟದೊಳಗೆ ಸಿಕ್ಕಿ ಕೆಟ್ಟರಲ್ಲ. ಜಗವೆಲ್ಲ ಕೆಟ್ಟ ಕೇಡ ನೋಡಾ. ತುಟ್ಟತುದಿಯಲ್ಲಿ ನಿಂದು ಬಿಟ್ಟೆನಯ್ಯಾ. ಮತ್ರ್ಯದ ಮಹಾಗಣಂಗಳ ಕಟ್ಟಿಗೆಯ ಹೊತ್ತು ಸತ್ತವರಿಗನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->