ಅಥವಾ

ಒಟ್ಟು 17 ಕಡೆಗಳಲ್ಲಿ , 9 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರವನೊಪ್ಪಿಸಿದ ನಿರ್ವಾಣಿಗೊಮ್ಮೆ ಮಠವೆಂದಲ್ಲಿ ಗುರುದ್ರೋಹ. ಮಾನಿನಿಯೆಂದಲ್ಲಿ ಲಿಂಗದ್ರೋಹ, ಬಂಗಾರವೆಂದಲ್ಲಿ ಜಂಗಮದ್ರೋಹ. ಎನಲಿಲ್ಲದಿರ್ದಲ್ಲಿ ಅನಿಮಿಷನಾದ ಅನುಪಮಶರಣನೆಂದರಿವುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವರ್ಪಿತವೆಂದಡೆ ಗುರುದ್ರೋಹ. ಮನವರ್ಪಿತವೆಂದಡೆ ಲಿಂಗದ್ರೋಹ. ಧನವರ್ಪಿತವೆಂದಡೆ ಜಂಗಮದ್ರೋಹ_ ಇಂತೀ ತನುಮನಧನಗಳೆಂಬ ಅನಿತ್ಯವನು ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ. ಒಡೆಯರಿಗೆ ಉಂಡೆಯ ಮುರಿದಿಕ್ಕಿ ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ? ನಮ್ಮ ಗುಹೇಶ್ವರಲಿಂಗಕ್ಕೆ, ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ:``ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ_ ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಗುರುವೆಂದು ಇದಿರಿಟ್ಟಲ್ಲಿ ಗುರುದ್ರೋಹ. ಲಿಂಗವೆಂದು ಸಂದೇಹಿಸಿದಲ್ಲಿ ಲಿಂಗದ್ರೋಹ. ಜಂಗಮವೆಂದು ಉಭಯದಲ್ಲಿಕಂಡಡೆ ಜಂಗಮದ್ರೋಹ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆಂದು ಇದಿರೆಡೆಯಾಡಿದಡೆ ಮಹಾದ್ರೋಹ.
--------------
ಪ್ರಸಾದಿ ಭೋಗಣ್ಣ
ಕ್ರಿಯಾಘನಗುರುವಿರ್ದಂತೆ ದರ್ಶನ ಸ್ಪರ್ಶನ ಸಂಭಾಷಣೆಯೆಂಬ ಸತ್ಪೇಮ ಪ್ರಸಾದವ ಸಮವೇಧಿಸಿಕೊಂಡಾಚರಿಸುವುದೇ ಸರ್ವಜ್ಞತ್ವ. ನಿಜಾನಂದಪರಿಪೂರ್ಣತ್ವ ನಿತ್ಯತೃಪ್ತತ್ವ ಮತ್ತೆಂತೆಂದೊಡೆ, ಗ್ರಾಮೊಂದರಲ್ಲಿರ್ದಡೆ ತ್ರಿಕಾಲದಲ್ಲಿ ಕಂಡು ಬದುಕುವುದು. ಗಾವುದದಾರಿಯ ಗ್ರಾಮದಲ್ಲಿರ್ದಡೆ ಎಂಟುದಿವಸಕೊಂದುವೇಳೆ ಕಂಡು ಬದುಕುವುದು. ಮೂಗಾವುದ ದೂರದಲ್ಲಿರ್ದಡೆ ಮಾಸಕ್ಕೊಮ್ಮೆ ಕಂಡು ಬದುಕುವುದು. ಹನ್ನೆರಡುಗಾವುದ ಮೇಲೆಯಿರ್ದಡೆ ಆರುಮಾಸಕ್ಕೊಮ್ಮೆ ಕಂಡು ಬದುಕುವುದು. ಎತ್ತಣಾಗಿ ದೂರದಿಂದಿರ್ದಡೆ ವರುಷಕೊಂದುವೇಳೆ ಕಂಡು ಬದುಕುವುದು. ತಪ್ಪಲಾಗದು,ಮತ್ತೆ ತಪ್ಪಿದರೆ ಗುರುದ್ರೋಹ. ಗುರುದ್ರೋಹಿಯಾದಲ್ಲಿ ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿದ್ರೋಹವೆಡೆಗೊಂಬುವುದು. ಇಂತು ಅಷ್ಟಾವರಣದ್ರೋಹಿಗೆ ನಿರಂತರ ಹಿರಿಯ ನರಕ ತಪ್ಪದು. ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಗನ ಮದುವೆಯ ತೊಡಗಿದಾಗ ಬಡಬಡನೆ ಹೋಗಿ ಹಾರುವನ ಕರೆವಿರಿ. ಅವನೇನು ನಿಮ್ಮ ಗುರುವೆ ? ನಿಮ್ಮ ಮನೆದೇವರೆ ? ನಿಮ್ಮ ಅಣ್ಣ ತಮ್ಮನೆ ? ನಿಮ್ಮ ಕುಲಬಾಂಧವನೆ ? ನಿಮ್ಮ ಹೊಂದಿ ಹೊರದವನೆ ? ಶಿವ ಸಹೋದರನೆ ? ನಿಮ್ಮ ಅಜ್ಜ ಮುತ್ತೈನೆ? ಛೀ ಛೀ ಎಲೊ ಶಿವದ್ರೋಹಿ ಕೇಳೊ. ಬಣ್ಣಗಾರ ಬಾಯಿಬಡಕ ಭ್ರಷ್ಟಮಾದಿಗ ವಿಪ್ರಜೋಯಿಸನ ಮಾತ ಕೇಳಿ ಮದುವೆಯಾದ ಪಂಚಪಾಂಡವರು ಕೆಟ್ಟರು. ಹರಿವಿರಂಚಿ ಹರಿಶ್ಚಂದ್ರ ದೇವೇಂದ್ರ ನಾಗಾರ್ಜುನ ಕಂಸರಾಜ ನಳಚಕ್ರವರ್ತಿ ಚಂದ್ರ ಸೂರ್ಯ ಮಂಗಳ ಬುಧ ಶುಕ್ರ ಸುರಸ್ತೋಮ ಮುನಿಸ್ತೋಮ ಕೆಟ್ಟಿತು. ಪಂಚಾಂಗ ಕೇಳಿದ ದಕ್ಷನ ಪಡೆಯೆಲ್ಲ ಕೆಟ್ಟು ನಷ್ಟವಾಗಿಹೋದ ದೃಷ್ಟವ ಕಂಡು ಕೇಳಿ, ಶಿವನ ಹಳಿವ ಹೊಲೆಮನದ ವಿಪ್ರಜೋಯಿಸನ ಕರೆಸಿ, ಕೈಮುಗಿದು ಕಾಣಿಕೆಯ ಕೊಟ್ಟು ಪಂಚಾಂಗವ ಕೇಳಿದ ಶಿವಭಕ್ತರಿಗೆ ತಾ ಗುರುದ್ರೋಹ, ಲಿಂಗದ್ರೋಹ, ಜಂಗಮದ್ರೋಹವು ಒದಗಿ, ತಾವು ಹಿಂದೆ ಮಾಡಿದ ದಾನಧರ್ಮ ಪರೋಪಕಾರವು ಕೆಟ್ಟು ನರಕಸಮುದ್ರದೊಳಗೆ ಮುಳುಗಾಡುತ್ತೇಳುತ್ತ ತಾವೇ ಸೇರಲರಿಯದೆ ಕೆಟ್ಟರು ನೋಡಾ ಹಲಕೆಲಬರು ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ತನುಲೋಭಿಯ ಭಕ್ತಿ ಗುರುದ್ರೋಹ; ಮನಲೋಭಿಯ ಪೂಜೆ ಲಿಂಗದ್ರೋಹ. ಧನಲೋಭಿಯ ದಾಸೋಹ ಜಂಗಮದ್ರೋಹ. ಈ ತ್ರಿವಿಧಲೋಭಿಯ ಸಂಗಸಂಭಾಷಣೆಯಿಂದೆ, ಭವದ ಬಲೆ ಹರಿಯದು ನೋಡಾ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ, ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ ಆಚಾರದ್ರೋಹ ಪ್ರಸಾದದ್ರೋಹ. ಇಂತೀ ಪಂಚಮಹಾಪಾತಕಂಗಳು ಭಕ್ತಂಗಲ್ಲದೆ ಭವಿಗೆಲ್ಲಿಯದೊ ಗುರುವಿದು, ಲಿಂಗವಿದು, ಜಂಗಮವಿದು ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ ಕುಂಭಿಪಾತಕ ನಾಯಕನರಕ ಕೂಡಲಸಂಗಮದೇವಾ.
--------------
ಬಸವಣ್ಣ
ಗುರುವಿನ ಉಪಾಧಿಕೆಯ ಶಿಷ್ಯನರಿತಲ್ಲಿ ಆ ಗುರುವಿಂಗೆ ಹೇಳದೆ ಸುಮ್ಮನಿದ್ದಲ್ಲಿ ಗುರುದ್ರೋಹ ತನಗಾಯಿತ್ತು. ಹೇಳಿದ ಮಾತ ಕೇಳಿ ಆ ಸ್ಥಲಕ್ಕೆ ಭಿನ್ನಭಾವಿಯಾಗಲಾಗಿ, ಲಿಂಗಜಂಗಮದ ದ್ರೋಹ ಆ ಗುರುವಿಂಗಾಯಿತ್ತು. ಆ ಭಕ್ತಂಗೆ ಚಿತ್ತ ಮುಟ್ಟಿದಲ್ಲಿ ಗುರುವೆಂದು ಪ್ರಮಾಳಿಸಲಿಲ್ಲ. ಪ್ರಮಾಳಿಸದಿದ್ದಲ್ಲಿ ಆಚರಣೆಯ ತೊಡಕು. ಇಂತೀ ಉಭಯದ ಏರಿನಲ್ಲಿ ನೋವುತ್ತಿದೇನೆರಿ ಭಾವದ ಭ್ರಮೆಯ ಬಿಡಿಸು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಗುರುವ ನುಡಿಯಬಾರದೆಂದು ಅಡಗಿಪ್ಪುದೆ ಗುರುದ್ರೋಹ. ಅಪ್ಪು ನಷ್ಟವಾದಲ್ಲಿ ತಪ್ಪದೆ ಬೆಳೆ? ಘಟವಳಿದಲ್ಲಿ ಆತ್ಮಂಗೆ ಮಠವಿಲ್ಲ. ಗುರುವಿನ ಮರವೆ ಶಿಷ್ಯನ ವಿಶ್ವಾಸದ ಕೇಡು. ಕೈಗೆ ಕಣ್ಣು ಮನ ಅಂಗಕ್ಕೆ ಬೇರೆ ನೋವುಂಟೆ? ಬಿತ್ತು ನಷ್ಟವಾದಲ್ಲಿ ಅಂಕುರವುಂಟೆ? ನೋವ ಗುರು ಇದಕ್ಕಂಜಿ ಹೇಳದ ಶಿಷ್ಯ ಕಿವಿಮೂಳ ಮೌಕ್ತಿಕದ ಜಾವಳಿಯ ಗಳಿಸಿದಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
>ಶೈವ ಸೈವೆರಗಾದ, ಪಾಶುಪತಿ ಪಥವನರಿಯ ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ. ಈ ಆರು ಭಕ್ತಿಸ್ಥಲಕ್ಕೆ ಸಲ್ಲವು ಕೇಳಿರಣ್ಣಾ- ಏಳೇಳು ಭವದಲ್ಲಿ ಭವಿಯಾಗಿ ಬಂದು, ಶ್ರೀಗುರುಕಟಾಕ್ಷ ನಿರೀಕ್ಷಣೆಯಿಂದ ಪ್ರಾಣದಮೇಲೆ ಲಿಂಗಪ್ರತಿಷೆ*ಯಂ ಮಾಡಿಕೊಂಡು ಆರರಿಂದ ಮೀರಿದ ಸ್ಥಲವಿಟ್ಟು ವೀರಮಾಹೇಶ್ವರತ್ವಮಂ ಪಡೆದು ಮರಳಿ ತನ್ನ ಕುಲವನರಿಸಿದರೆ ಒಡೆದ ಮಡಕೆಯ ಓಡಿನಂತಹನು ಕೇಳಿರಣ್ಣಾ. ತನ್ನ ಕುಲವೆಂದು ಪ್ರಾಣಸ್ನೇಹ ಮಾಯಾಮೋಹ ಕಿಂಚಿತ್ ಮಾತ್ರ ಬೆರಸಿದರೆ, ಅವ ಪಂಚಮಹಾಪಾತಕಿ, ರೌರವ ನಾರಕಿ. ಅವನ ಭಕ್ತನೆಂದು ನೋಡಿದಡೆ, ನುಡಿಸಿದಡೆ, ಸಪಂಕ್ತಿಯಲ್ಲಿ ಕುಳಿತಡೆ, ಸಂಭಾಷಣೆಯ ಮಾಡಿದಡೆ, ಕೈವೊಡ್ಡಿ ಬೇಡಿದಡೆ ಅವಂಗೆ ಕುಂಭೀಪಾತಕ ನಾಯಕನರಕ ಕೇಳಿರಣ್ಣಾ. ಭಕ್ತಂಗೆ ಭವಿನೇಮಸ್ತರು ಸಲಲಾಗದು. ಭವಿ ಶ್ವಪಚ, ನೇಮಸ್ತ ಸಮ್ಮಗಾರ- ಇವರಿಬ್ಬರನು ಸತಿಸುತ ಮಿತ್ರರೆಂದು ಮಠಮಂ ಹೊಗಿಸಿದಡೆ ಅನ್ನಮನಿಕ್ಕಿದಡೆ; ಸುರೆಯ ಮಡಕೆಯಂ ತೊಳೆದು ಘೃತಮಂ ತುಂಬಿ ಶ್ವಾನನಂ ಕರೆದು ತಿನಿಸಿ, ಮಿಕ್ಕುದನು ತಾನು ಭುಂಜಿಸಿದಂತೆ ಕೇಳಿರಣ್ಣಾ. ಭಕ್ತ ಲಿಂಗಾರ್ಚನೆಯ ಮಾಡಿದ ಪವಿತ್ರ ಭಾಜನಮಂ ಶ್ವಾನ ಸೂಕರ ಕುಕ್ಕುಟ ಮಾರ್ಜಾಲಂಗಳು ಮುಟ್ಟಿದಡೆ ಅವರ ಕೂಡೆ ಸಹಭೋಜನವ ಮಾಡಿದಂತೆ. ಗುರುಲಿಂಗಜಂಗಮಕ್ಕೆ ಅರ್ಪಿತವ ಮಾಡಿ, ಒಕ್ಕುಮಿಕ್ಕ ಪ್ರಸಾದವ ಭೋಗಿಸುವಲ್ಲಿ ಪದಾರ್ಥವೆಂದು ಭಾವಿಸಿದಡೆ ಪ್ರಸಾದದ್ರೋಹ. ಜಂಗಮದಲ್ಲಿ ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ಉದಾಸೀನ, ನಿರ್ದಯೆ, ಇಷ್ಟು (ಇರ್ದಡೆ) ಜಂಗಮದ್ರೋಹ. ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಸ್ನೇಹ ಮೋಹ -ಇಂತೀ ಐದು ಇಲ್ಲದಿರುವದೆ ಲಿಂಗದ್ರೋಹ ಗುರುವಿನಲ್ಲಿ ಅಹಂಕಾರ, ಭಯವಿಲ್ಲದಿಹುದು, ಸಮಪಂಕ್ತಿಯಲ್ಲಿ ಕುಳ್ಳಿರುವುದು ಸಂಭಾಷಣೆಯ ಮಾಡುವುದು, ಕೈವೊಡ್ಡಿ ಬೇಡುವುದು- ಇಷ್ಟು ಗುರುದ್ರೋಹ. ಇದು ಕಾರಣ ಗುರುಲಿಂಗಜಂಗಮಕ್ಕೆ, ತನುಮನಧನವ ಸಮರ್ಪಿಸಿ ಏಕಲಿಂಗನಿಷಾ*ಪರನಾಗಿ, ಭಕ್ತಕಾಯ ಮಮಕಾಯವೆಂಬ ಶಬ್ದಕ್ಕೆ ಸಂದು, ಪ್ರಸಾದವೆಂದು ಕೊಂಡು ಎಂಜಲೆಂದು ಕೈತೊಳೆದಡೆ ಅಘೋರನರಕ ತಪ್ಪದು ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ ಶ್ರೀಗುರುವಿನ ಕರುಣಾಕಟಾಕ್ಷದಿಂದ ಪ್ರಾಣಲಿಂಗೋಪದೇಶವ ಪಡೆದು ಸದ್ಭಕ್ತರಾಗಿ ಶಿವಲಿಂಗ ದರ್ಶನ ಸ್ಪರ್ಶನವ ಮಾಡಿ ಆ ಲಿಂಗವನಂಗದಲ್ಲಿ ಧರಿಸಿಕೊಂಡು ಅಂಗವೇ ಲಿಂಗ ಲಿಂಗವೇ ಅಂಗ ಪ್ರಾಣವೇ ಲಿಂಗ ಲಿಂಗವೇ ಪ್ರಾಣವಾಗಿ ಅಂತರಂಗ ಬಹಿರಂಗ ಸರ್ವಾಂಗವೆಲ್ಲವೂ ಲಿಂಗವಾದ ಬಳಿಕ ಇಂತೀ ಶ್ರೀಗುರು ಕೊಟ್ಟ ಲಿಂಗವ ಬಿಟ್ಟು ಬೋರೆ ಮತ್ತೆ ಆತ್ಮತತ್ತ್ವವ ವಿಚಾರಿಸಿ ನೋಡಬೇಕೆಂದು ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾಗಿ ಮುಕ್ತರಾದೆವೆಂಬಿರಿ. ಶಿವಶಿವಾ, ಆತ್ಮನನು ಪರಮಾತ್ಮನನು ಶ್ರೀ ಗುರುಸ್ವಾಮಿ ಒಂದು ಮಾಡಿ ಇದೇ ನಿನ್ನ ನಿಜತತ್ತ್ವವೆಂದು ಅರುಹ ಹೇಳಿ ತೋರಿಸಿಕೊಟ್ಟ ಬಳಿಕ ಇಂತಹ ಗುರುಸ್ವಾಮಿಯ ಆಜ್ಞೆಯ ಮೀರಿ ಲಿಂಗವನರಿಯದೆ ಲಿಂಗಬಾಹಿರರಾದ ದ್ವಿಜರನು ಯೋಗಿಯನು ಸನ್ಯಾಸಿಯನು ಗುರುವೆಂದು ಭಾವಿಸಬಹುದೆ ? ಶಿವ ಶಿವಾ, ಅದು ಗುರುದ್ರೋಹ. ಪರಶಿವಮೂರ್ತಿಯಾದ ಗುರುಸ್ವಾಮಿಯು ಷಡ್ದರ್ಶನಗಳಿಗೂ ಸಮಸ್ತಮತಂಗಳಿಗೂ ಸಮಸ್ತಾಗಮಂಗಳಿಗೆಯೂ ಶಿವನೊಬ್ಬನೇ ಕರ್ತನೆಂದು, ಶಿವದರ್ಶನವೇ ವಿಶೇಷವೆಂದು, ಅಧಿಕವೆಂದು ಹೇಳಿ ತೋರಿ ಕೊಟ್ಟ ಬಳಿಕ ಶೈವವೆಂದು ಶಾಕ್ತೇಯವೆಂದು ವೈಷ್ಣವವೆಂದು ಗಾಣಪತ್ಯವೆಂದು ¸õ್ಞರವೆಂದು ಕಾಪಾಲಿಕವೆಂದು ಇಂತೀ ಷಡ್ದರ್ಶನಂಗಳಿಗೆಯೂ ಶಿವನೊಬ್ಬನೇ ಕರ್ತ, ಇಂತೀ ಷಡ್ದರ್ಶನಕ್ಕೆ ಶಿವದರ್ಶನವೇ ಅಧಿಕವೆಂದು, ಇಂತೀ ಶಿವದರ್ಶನ ಮಾರ್ಗವಿಲ್ಲದೆ ಮುಕ್ತಿಯಿಲ್ಲವೆಂದು, ಆ ಪರಶಿವನೆಂಬ ಗುರುಮೂರ್ತಿ ಅರುಹಿ ಕಾಣಿಸಿ ಹೇಳಿ ತೋರಿ ಕೊಟ್ಟ ಬಳಿಕ ಅದೆಂತೆಂದಡೆ ಶಿವಧರ್ಮೇ_ ದರ್ಶನ ಷಡ್ವಿಧಂ ಪ್ರೋಕ್ತಂ ಶೈವಂ ಶಾಕ್ತಂ ವೈಷ್ಣವಂ ಗಣಾಪತ್ಯಂ ಚ ¸õ್ಞರಂ ಚ ಕಾಪಾಲಿಕಮಿತಿ ಸ್ಮೃತಮ್ ಮತ್ತಂ ಷಡ್ದರ್ಶನಾದಿ ದೇವೋ ಹಿ ಮಹಾದೇವೋ ನ ಸಂಶಯಃ ಮಂತ್ರಪೂಜಾದಿ ಭಿನ್ನಾನಾಂ ಮೂಲಂ ಪರಶಿವಸ್ತಥಾ ಎಂಬುದಾಗಿ, ಇನ್ನು ವೈಷ್ಣವವೆಂದು ಆತ್ಮಯೋಗವೆಂದು ಶಾಕ್ತಿಕವೆಂದು ವೈದಿಕವೆಂದು ಇಂತೀ ಭ್ರಾಂತಿನ ದರ್ಶನಮತಂಗಳನು ಕೇಳಿ, ಅಲ್ಲಿಯ ಧರ್ಮಾಧರ್ಮಂಗಳನು ಕೇಳಿ, ಅಲ್ಲಿ ಉಪದೇಶವ ಮಾಡಿಸಿಕೊಳ್ಳಬಹುದೇ ? ಶಿವಶಿವಾ, ಅದು ಗುರುದ್ರೋಹ, ಆ ಶ್ರೀಗುರುವಿನಾಜ್ಞೆಯ ಮೀರದಿರಿ. ಆ ಪರಶಿವಮೂರ್ತಿತತ್ತ್ವವೇ ಗುರುಸ್ವಾಮಿಯಾಗಿ ಚೆನ್ನಾಗಿ ಅರುಹಿ ತೋರಿ ಹೇಳಿ ಕೊಟ್ಟನಲ್ಲದೆ ಆ ಗುರುಸ್ವಾಮಿ ಏನು ತಪ್ಪಿ ಹೇಳಿದುದಿಲ್ಲ. ಶ್ರುತಿ ``ಏಕೋ ದೇವೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ ಶಿವನೊಬ್ಬನೇ ದೈವವೆಂದು ತೋರಿಕೊಟ್ಟ ಶ್ರೀಗುರು. ಶ್ರುತಿ ``ಏಕೋ ಧ್ಯೇಯಃ' ಎಂದು ಶಿವನೊಬ್ಬನನ್ನೇ ಧ್ಯಾನಿಸಿ ಪೂಜಿಸೆಂದು ಹೇಳಿ ತೋರಿಕೊಟ್ಟನು ಶ್ರೀಗುರು. ಶ್ರುತಿ ``ನಿರ್ಮಾಲ್ಯಮೇವ ಭಕ್ಷಯಂತಿ' ಎಂದುದಾಗಿ ಶಿವಪ್ರಸಾದವನೆ ಗ್ರಹಿಸಿಯೆಂದು ಪ್ರಸಾದವ ಕರುಣಿಸಿದ ಶ್ರೀಗುರು ಇಂತಹ ಶ್ರೀಗುರು ಮರುಳನು, ನೀನು ಬುದ್ಧಿವಂತನೇ ? ಕೇಳಾ, ನಿಮ್ಮ ಗುರುವ ಮರುಳ ಮಾಡಿದಿರಿ, ಅದೆಂತೆಂದಡೆ: ನಿಮ್ಮಿಚ್ಛೆಯಲ್ಲಿಯೇ ಬಂದುದಾಗಿ, ಅದಲ್ಲದೆ ಮತ್ತೆ ಕೇಳು: ಪೂರ್ವದ ಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತ ? ಕೇಳೋ: ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ ಮೊದಲಾದ ಋಷಿಗಳೆಲ್ಲ ಶಿವಾರ್ಚನೆಯಂ ಮಾಡಿದರು. ಬ್ರಹ್ಮವಿಷ್ಣು ಮೊದಲಾದವರೆಲ್ಲರೂ ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ನೋಡಿರೇ ದೃಷ್ಟವನು. ಮತ್ಸ್ಯಕೇಶ್ವರ ಕೂರ್ಮೇಶ್ವರ ವರಾಹೇಶ್ವರ ನಾರಸಿಂಹೇಶ್ವರ ರಾಮೇಶ್ವರ ಎಂಬ ದಶಾವತಾರಗಳಲ್ಲಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚಾನೆಯಂ ಮಾಡಿದರು. ಅನೇಕ ವೇದಶಾಸ್ತ್ರಾಗಮಪುರಾಣಂಗಳ ಕೇಳಿರೇ ನೋಡಿರೇ. ಯಂ ಯಂ ಕಾಮಯತೇ ಕಾಮಂ ತಂ ತಂ ಲಿಂಗಾರ್ಚನಾಲ್ಲಭೇತ್ ನ ಲಿಂಗೇ [ನ] ವಿನಾ ಸಿದ್ದಿದುರ್ಲಭಂ ಪರಮಂ ಪದಂ ಮತ್ತಂ ಅಸುರಾ ದಾನವಾಶ್ಚೈವ ಪಿಶಾಚೋರಗರಾಕ್ಷಸಾಃ ಆರಾಧ್ಯಂ ಪರಮಂ ಲಿಂಗಂ ಪ್ರಾಪುಸ್ತೇ ಸಿದ್ಧಿಮುತ್ತಮಾಮ್ ಮತ್ತಂ ಅಗ್ನಿಹೋತ್ರಶ್ಚವೇದಶ್ಚ ಯಜ್ಞಾಶ್ಚ ಬಹುದಕ್ಷಿಣಾಃ ಶಿವಲಿಂಗಾರ್ಚನಸ್ಯೈತೇ ಕೋಟ್ಯಂಶೇನಾಪಿ ನೋ ಸಮಾಃ ಎಂದುದಾಗಿ, ಇಂತು ಇದು ಮೊದಲಾದ ದೇವಜಾತಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದುದಕ್ಕೆ ದೃಷ್ಟ ನೋಡಿರೇ: ಕಾಶೀಕ್ಷೇತ್ರದಲ್ಲಿ ಬ್ರಹ್ಮೇಶ್ವರ ಇಂದ್ರೇಶ್ವರ ಯಕ್ಷಸಿದ್ದೇಶ್ವರ ಎಂಬ ಲಿಂಗಂಗಳಂ ಪ್ರತಿಷಿ*ಸಿ ಶಿವಲಿಂಗಾರ್ಚನೆಯಂ ಮಾಡಿದರು. ತಾರಕ ರಾವಣಾದಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದರು. ಇಂತವರೆಲ್ಲರು ಮರುಳರು, ನೀನೊಬ್ಬನೇ ಬುದ್ಧಿವಂತನೆ ? ಅದು ಕಾರಣ, ಆ ಶ್ರೀಗುರುವಿನಾಜ್ಞೆಯಂ ಮೀರಿ ಕೆಡದಿರಿ ಕೆಡದಿರಿ. ಆ ಮಹಾ ಶ್ರೀಗುರುವಿನ ವಾಕ್ಯವನೇ ನಂಬಿ, ಗುರುಲಿಂಗಜಂಗಮವನೊಂದೇಯೆಂದು ನಿಶ್ಚಯಿಸಿ, ಇದೇ ಅಧಿಕ, ಇದರಿಂದ ಬಿಟ್ಟು ಮತ್ತಾವುದು ಅಧಿಕವಿಲ್ಲ. ಅಂದು ಗುರುಲಿಂಗಜಂಗಮದಲ್ಲಿಯ ಭಕ್ತಿಯೆ ಭಕ್ತಿ, ಅರ್ಚನೆಯೇ ಅರ್ಚನೆ, ಆ ಸಂಗವೇ ಶಿವಯೋಗ, ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ಧಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ನೆಲ ಗಗನಕ್ಕೆ ನಿಲುಕದ ಗಂಭೀರ ಮಹಾಘನ ಪರಬ್ರಹ್ಮಮೂರುತಿ ಕರಸ್ಥಲದಲ್ಲಿ ಬಂದಿರಲು, ಭವಿಬೆರಸಿದುದಕವ ಮಜ್ಜನಕ್ಕೆರೆದರೆ ಗುರುದ್ರೋಹ. ಭವಿಬೆಳೆದ ಪತ್ರಿ ಪುಷ್ಪಂಗಳ ಧರಿಸಿದರೆ ಲಿಂಗದ್ರೋಹ. ಭವಿಬೆರಸಿದ ಗಂಧಾಕ್ಷತೆ ಪರಿಮಳದ್ರವ್ಯಂಗಳ ಧರಿಸಿದರೆ ಜಂಗಮದ್ರೋಹ. ಭವಿಬೆರಸಿದ ಪಾಕಪದಾರ್ಥವನರ್ಪಿಸಿದರೆ ಪ್ರಸಾದದ್ರೋಹ. ಭವಿಸೋಂಕಿದ ಹಾಲು ತುಪ್ಪ ಸಕ್ಕರೆ ಮಧು ಮೊಸರು ಮೊದಲಾದವನರ್ಪಿದರೆ ಪಾದೋದಕದ್ರೋಹ. ಇಂತು ಪಂಚವಿಧವನರಿಯದೆ ಪಂಚಮಹಾಪಾತಕಕ್ಕಿಳಿವ ಪಾಶಬದ್ಧರಿಗೆ ದೂರವಾಗಿಪ್ಪ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜನ್ಮಾಂತರಸಹಸ್ರೇಷು ತಪೋಧ್ಯಾನಸಮಾಧಿಭಿಃ ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ ಇಂತೆಂದುದಾಗಿ, ಅನೇಕ ಜನ್ಮದ ಪಾಪಂಗಳು ಸವೆದು, ಶ್ರೀಗುರುಕಾರುಣ್ಯಮಂ ಪಡೆದು ಶಿವಭಕ್ತನಾಗಿ ಶಿವಲಿಂಗವಂ ಧರಿಸಿ, ಶಿವಲಿಂಗದರ್ಶನಸ್ಪರ್ಶನಂ ಮಾಡಿ ಇಷ್ಟಲಿಂಗ ಪ್ರಾಣಲಿಂಗಸಂಬಂಧ, ಅಂತರಂಗ ಬಹಿರಂಗ ಸರ್ವಾಂಗವಾದ ಬಳಿಕ ಮರಳಿ ಆತ್ಮತತ್ತ್ವವ ವಿಚಾರಿಸಿ, ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾದೆವೆಂಬಿರಿ. ಅದೇನು ಕಾರಣ, ಆತ್ಮನೇ ಪ್ರಾಣ, ಪರಮಾತ್ಮನೇ ಶಿವಲಿಂಗ. ಇಂತೀ ಪ್ರಾಣಾತ್ಮನನೂ ಪರಮಾತ್ಮನಪ್ಪ ಶಿವಲಿಂಗವನೂ ಶ್ರೀಗುರು ಯೋಗವ ಮಾಡಿ ತೋರಿಕೊಟ್ಟು, ಕರುಣಿಸಿದ ಬಳಿಕ ಗುರ್ವಾಜ್ಞೆಯಂ ಮೀರಿ, ದ್ವಿಜರನು ಸನ್ಯಾಸಿಯನು ಶ್ರೀಗುರ್ವಾಜ್ಞೆಯನರಿಯದ, ಶಿವನ ಮಹಾತ್ಮೆಯನರಿಯದ ಶಿವಲಿಂಗವೇ ಪರಮಾತ್ಮನೆಂಬ ತಾತ್ಪರ್ಯವನರಿಯದ ಈ ಭ್ರಷ್ಟರ ಮರಳಿ ಮರಳಿ ಗುರುವೆಂದು ಮಾಡಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ! ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರು ಸರ್ವಧರ್ಮಂಗಳಿಗೆಯೂ ಅಧಿಕಾಧಿಕವೆಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಆತ್ಮಯೋಗವೆಂದು ವೈದಿಕವೆಂದು ಸಕಲವೆಂದು ನಿಷ್ಕಲವೆಂದು ವೈಷ್ಣವವೆಂದು ಮಾಯಾವಾದಿಗಳೆಂದು ಚಾರ್ವಾಕರೆಂದು ಬೌದ್ಧರೆಂದು ಇತ್ಯಾದಿ ಭಿನ್ನದರ್ಶನಂಗಳಲ್ಲಿ ಧರ್ಮಶಾಸ್ತ್ರಂಗಳ ಕೇಳಿ ಮರಳಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರುವೇ ಪರಶಿವನಾಗಿ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂದುದಾಗಿ, `ಶಿವ ಏಕೋ ಧ್ಯೇಯಃ ಎಂದುದಾಗಿ, ಶಿವನನೇ ಪೂಜಿಸಿ ಶಿವನನೇ ಧ್ಯಾನಿಸಿ _ಎಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಶಿವನಿರ್ಮಾಲ್ಯಕಂ ಶುದ್ಧಂ ಭುಂಜೀಯಾತ್ ಸರ್ವತೋ ದ್ವಿಜ ಅನ್ಯದೈವಸ್ಯ ನಿರ್ಮಾಲ್ಯಂ ಭುಕ್ತ್ಯಾಚಾಂದ್ರಾಯಣಂ ಚರೇತ್ ಇಂತೆಂದುದಾಗಿ, ಪ್ರಸಾದವ ಕರುಣಿಸಿದನು ಶ್ರೀಗುರು. ಆ ಶ್ರೀಗುರುವ ಭ್ರಷ್ಟನ ಮಾಡುವಿರಿ, ಗುರು ನಿಮ್ಮಿಚ್ಛೆಗೆ ಬಾರನಾಗಿ, ಪೂರ್ವಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ದೂರ್ವಾಸ, ಅಗಸ್ತ್ಯ. ಭೃಗು, ದಧೀಚಿ, ಮಾರ್ಕಂಡೇಯ ಮೊದಲಾದ ಋಷಿಜನಂಗಳೆಲ್ಲರೂ ಶಿವಲಿಂಗಪ್ರತಿಷೆ*ಯ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರು ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಮತ್ತೆ ವಿಷ್ಣು ಬ್ರಹ್ಮ ಇಂದ್ರ ಮೊದಲಾಗಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಮತ್ಸ್ಯಕೇಶ್ವರ, ಕೂರ್ಮೇಶ್ವರ, ಮಾಹೇಶ್ವರ, ರಾಮೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರುಗಳೆಲ್ಲರು ಮರಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳು ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಕಾಶೀಪುರದಲ್ಲಿ ಇಂದ್ರೇಶ್ವರ, ಬ್ರಹ್ಮೇಶ್ವರ, ಯಕ್ಷಸಿದ್ಧೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು, ಕೆಡದಿರು. ತಾರಕಾಸುರ ರಾವಣಾದಿಗಳೆಲ್ಲರೂ ಶಿವಲಿಂಗಪ್ರತಿಷೆ*ಯಂ ಮಾಡಿ, ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಇದು ಕಾರಣ, ಶ್ರೀಗುರುವೆ ಅಧಿಕ, ಶಿವಲಿಂಗವೇ ಅಧಿಕ ಶಿವಲಿಂಗಾರ್ಚನೆಯೇ ಅಧಿಕ, ಆ ಸಂಗವೇ ಸಂಗ, ಶ್ರೀಗುರುಲಿಂಗಜಂಗಮದ ಪೂಜೆಯೇ ಪೂಜೆ, ಅರ್ಚನೆಯೇ ಅರ್ಚನೆ, ಆ ಸಂಗವೇ ಸಂಗ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರುಹೆಂಬ ಗುರುವಿನ ಕೈಯಲ್ಲಿ, ವಿರತಿಯೆಂಬ ಶಿವದಾರಮಂ ಕೊಟ್ಟು, ಸುಮತಿಯೆಂಬ ಸಜ್ಜೆಯಂ ಪವಣಿಸಿ, ಸಮತೆಯೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು, ಸರ್ವಜೀವದಯಾಪರನೆಂದು ಲಿಂಗಾರ್ಚನೆಯಂ ಮಾಡುವ ಭಕ್ತನ ಕರಾಧಾರದ ಲಿಂಗವು ತಪ್ಪಿ ಆಧಾರಸ್ಥಾಪ್ಯವಾದಡೇನು ? ಶಂಕೆಗೊಳಲಿಲ್ಲ. ತೆಗೆದುಕೊಂಡು ಮಜ್ಜನಕ್ಕೆರೆವುದೇ ಸದಾಚಾರ. ಮುನ್ನ ಶ್ರೀಗುರು ಷಟ್‍ಸ್ಥಲವನು ಅಂತರಂಗದಲ್ಲಿ ನಿಕ್ಷೇಪಿಸಿದನಾಗಿ ದೃಶ್ಯಕ್ಕೆ ತ್ಯಾಗವಲ್ಲದೆ ಅದೃಶ್ಯಕ್ಕೆ ತ್ಯಾಗವುಂಟೆ ?ಇಲ್ಲ. ಉಂಟೆಂದನಾದಡೆ ಗುರುದ್ರೋಹ. ಆ ಭಕ್ತನಿಂತವನಂತನೆಂದು ದೂಷಿಸಿ ನುಡಿದವರಿಗೆ ಅಘೋರನರಕ ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->