ಅಥವಾ

ಒಟ್ಟು 27 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀವಿಡಿದು ಗುರುಸಂಬಂದ್ಥಿಯಾಗಿ, ಜಾÕನವಿಡಿದು ಲಿಂಗಸಂಬಂದ್ಥಿಯಾಗಿ. ಘನವಿಡಿದು ಮಹಾಜಾÕನಿಯಾಗಿ, ಅರಿವು ಆಚರಣೆಯ ಕಂಡು, ಜಾÕನ ಮುಕುರವೆಂಬ ಮುಂದಣ ಶ್ರೀಸಂಬಂದ್ಥಿಯಾಗಿ, ಆಚಾರದಲ್ಲಿ ಸಂಪನ್ನನಾಗಿ, ಮಹೇಶ್ವರಸ್ಥಲವನರಿದು, ಅದೇ ಜಂಗಮವಾದ ಬಳಿಕ ನಿರಾಕುಳನಾಗಿ ಆಚರಿಸಿದರೆ ಅನಾದಿ ಜಂಗಮವೆಂಬೆ. ಸಾಮವೇದೇ- ವಿವಚಾಸೋವಿಚಾ ಲಿಂಗಾಲಿಂಗಿ ಚ ಫಲಾದಿ ಬ್ರಹ್ಮರಾಕ್ಷಸ ಸೋವಿಸಂಗಶ್ಚ | ಸೂಕರ ಶತಕೋಟಿ ಜನ್ಮ ಚ ಸೋಪಿ ಕ್ರೀಡಾಲಿಂಗ ಮಲಮೂತ್ರ ಮಾಂಸ ಭುಂಜಿತಃ | ಬ್ರಹ್ಮೇನ ಕೋಟಿ ರಾಕ್ಷಸಃ ಸೋಸಂಗೇನ ಶತಕೋಟಿಗಾರ್ದಭ ಜನ್ಮ ಚ | ಅದೇ ದಾಸಿ ದಾಸೇ ಸೂಕರ ಸಂಗಶಃ ಚ ನಾಃ | ಸೋವ ಮಾತ್ರವೆಂದು ತಂದ ಸ್ತ್ರೀಗಳನು ಶಿಷ್ಯಾದಿ ಪುತ್ರರ ಕೈಯ ಗುರು ತಾಯಿ ಎಂಬ ನಾಮಕರಣಂಗಳನುಂಟುಮಾಡಿ, ತನ್ನ ಅಂಗವಿಕಾರಕ್ಕೆ ತಂದ ಸಂತೆಯ ಡೊಂಬಿತಿಯ ತಂದು, ಹಿರಿಯರಲ್ಲಿ ಸರಿಮಾಡುವ ಜಂಗಮವೆ ಗುರುವೆ? ಅಜಾÕನ ಪುರುಷನಲ್ಲ, ಅವ ಹಿರಿಯತನಕ್ಕೆ ಸಲ್ಲ, ಅವಂಗೆ ಗುರುವಿಲ್ಲ ಲಿಂಗವಿಲ್ಲ, ಜಂಗಮ ಮುನ್ನವೆಯಿಲ್ಲ. ಅವ ಘಟಾತ್ಮನು ಸೋವಿಯ ಸಂಗ ಬೇಡ ಬಿಡಿರಣ್ಣಾ, ಸೋವಿಯ ಸಂಗವ ಮಾಡಿದರೆ ಶತಕೋಟಿ ದಾಸಿಯ ಬಸುರಲ್ಲಿ ಬಂದು, ಹೇಸಿಕೆಯಿಲ್ಲದೆ ಮಲಮೂತ್ರವನು ಹೇಗೆ ಸೂಕರ ಭುಂಜಿಸುವುದೊ ಹಾಂಗೆ ಭುಂಜಿಪನು. ನಾನಾ ಯೋನಿಯ ನರಕುವದು. ಸೋವಿ ಮಾತ್ರೇಣ ಆ ಲಿಂಗನಂ ಗುರು ತಾಯ ಅಪಮಾನ ಸಾಮಾನ್ಯವೆಂದು ಸೋವಿಯ ಸಂಗವ ಮಾಡಿದಡೆ ಎಪ್ಪತ್ತೇಳುಕೋಟಿ ಶ್ವಪಚಯೋನಿ ತಪ್ಪದಯ್ಯ. ಹನ್ನೆರಡು ಕಂಬ ಸಾಕ್ಷಿಯಾಗಿ, ಕಳಕನ್ನಡಿ ಸಾಕ್ಷಿಯಾಗಿ, ತೆಳೆಮಲು ಕಟ್ಟಿ ಸಾಕ್ಷಿಯಾಗಿ, ಆಯಿರಣೆಕೋಲು ಸಾಕ್ಷಿಯಾಗಿ, ಮುತ್ತೈದೆತನದಲ್ಲಿ ಶ್ರೇಷ್ಠಯಾಗಿ, ಜಾÕನ ದೃಕ್ಕಿನಿಂ ತಿಳಿದು, ಅನುಭಾವದ ಮುಖವನರಿದಂತೆ, ಆ ಜಾÕನನೇತ್ರವ ಅರಿದು ಧಾರೆಯನೆರೆಸಿಕೊಂಡು, ಅರಿವಿನಲ್ಲಿ ಇರದೆ ಕುರಿಯ ಹೇಲ ತಿಂಬಂತೆ, ಬಾಯಿಗೆ ಬಂದಂತೆ ಸೋವಿಯ ಸಂಗವ ಮಾಡುವವರ ಸರ್ವಾಂಗವೆಲ್ಲ ಗಣಿಕೆಯ ಯೋನಿಯ ಬಸುರ ನೋಡಾ. ಧಾರೆಯನೆರೆಸಿಕೊಂಡು ಕ್ರೀವಿಡಿದು ನಡೆಯದೆ, ತೊತ್ತಿನ ಮಗನಿಗೆ ಪಟ್ಟ ಕಟ್ಟಿದರೆ ಹಾದಿಯ ಎಲುವ ಕಂಡು ಓಡಿಹೋಗಿ ಗಡಗಡನೆ ಕಡಿವಂತೆ, ಸೋವಿಯ ಎಂಜಲ ತಿಂದವಂಗೆ ಗುರುವಿಲ್ಲ. ಅವ ದೇವಲೋಕ ಮತ್ರ್ಯಲೋಕ ಎರಡಕ್ಕೆ ಸಲ್ಲ. ಆವಾಗಮದಲ್ಲಿ ಉಂಟು, ಗಳಹಿ ಹೇಳಿರೊ, ಮಕ್ಕಳಿರಾ. ನೀವು ಬಲ್ಲರೆ ಕಾಳನಾಯ ಹೇಲ ತಿಂಬಂಗೆ ಹಿರಿಯನೆಂದು, ಹೋತನಂತೆ ಗಡ್ಡವ ಬೆಳಸಿಕೊಂಡು ಗುಡರಗುಮ್ಮನಂತೆ ಸುಮ್ಮನಿರುವಿರಿ. ಗರ್ವತನಕ್ಕೆ ಬಂದು ಹಿರಿಯರೆಂದು ಆಚರಣೆ ನ್ಯಾಯವ ಬಗಳುವಿರಿ. ಸೋವಿಸಂಗದಿಂದ ಕನಿಷ್ಠ ನರಕ ಕಾಣಿರಣ್ಣಾ. ಸೋವಿಯ ಸಂಗವ ಬಿಟ್ಟು ಧಾರೆಯ ಸ್ತ್ರೀಯಳ ನೆರದರೆ, ಆಚಾರವಿಡಿದು ನಡೆದು ಆಚರಣೆಯ ನುಡಿದರೆ ಶುದ್ಧವಾಗುವದಲ್ಲದೆ ತೊತ್ತಿನ ಮಗನಾಗಿ ಎಡೆಯ ಸಮಗಡಣವ ಬೇಡುವ ಪಾತಕರ, ಅವರ ಜಂಗಮವೆಂಬೆನೆ? ಸೋವಿಯ ಸಂಗದಿಂದ ಬಂದುದು ಬ್ರಹ್ಮೇತಿ. ಅಥರ್ವಣ ಸಾಮವೇದ ಯಜುರ್ವೇದ ಋಗ್ವೇದ ಇಂತಪ್ಪ ನಾಲ್ಕು ವೇದದಲ್ಲಿ ಶ್ರುತಿ ಸ್ಮøತಿಗಳಲ್ಲಿ ಆಗಮ ಪುರಾಣಂಗಳಲ್ಲಿ ಸೋವಿಯ ವಾಚ್ಯವೆಂಬುದುಂಟೆ ಪರಮಪಾತಕರಿರಾ? ನೂತನವ ಗಂಟಿಕ್ಕಿ ಜಗಲಿಯೆನ್ನದೆ ಪಟ್ಟಶಾಲೆಯೆಂಬಿಂ ತೊಂಡರಿರಾ. ತೊತ್ತನೊಯ್ದು ತೊತ್ತೆದಾಸಿ ಬಾಯೆನ್ನದೆ ಹೋವಿಯೆಂದು ಬಗಳುವಿರಿ. ಕಲಿಯುಗದಲ್ಲಿ ನೂತನದ ಸೂಳೆಯ ಮಕ್ಕಳು ನೀವು. ಸೋವಿಯ ಸಂಗವ ಮಾಡಿದವನು ಅರಿವುಳ್ಳ ಪುರುಷನಾದರೂ ಆಗಲಿ, ಅರಿದು ಮತ್ತೆ ಅರೆಮರುಳಾದ ಹಿರಿಯರನೇನೆಂಬೆನಯ್ಯಾ. ಅವನು ಪಾತಕನಘೋರಿಗಳು. ಅವರು ಇವರುವನರಿಯದ ಅಘೋರಿಗಳೆಂಬ ಇಂತಪ್ಪ ಸೋವಿಯ ಸಂಗವ ಮಾಡುವ ಬ್ರಹ್ಮೇತಿಕಾರ ಪಂಚಮಹಾಪಾತಕರು ಇಹಪರಕ್ಕೆ ಸಲ್ಲರೆಂದುದು. ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಇಹವಿಲ್ಲ ಪರವಿಲ್ಲ, ಮುಕ್ತಿಯ ಫಲವಿಲ್ಲ, ಅಘೋರವಲ್ಲದೆ ಮತ್ತೇನೂ ಇಲ್ಲ. ನಿಮ್ಮಾಣೆ ಬ್ಥೀಮಬಂಕೇಶ್ವರಾ.
--------------
ಭೀಮಬಂಕೇಶ್ವರ
ತನುವಿಗೊಳಗಾದಾತ ಗುರುವೆ? ಮನಕ್ಕೊಳಗಾದಾತ ಲಿಂಗವೆ? ಧನಕ್ಕೊಳಗಾದಾತ ಜಂಗಮವೆ? ತನು-ಮನ-ಧನ ತನ್ನ ಮನಕ್ಕಲ್ಲದೆ ಗುರು-ಲಿಂಗ-ಜಂಗಮದಲ್ಲುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹರಬೀಜ ನಾನಾದಡೆ ಹದನವರಿಯದಿರ್ಪೆನೆ ಗುರುವೆ? ಪರಮ ಭೃತ್ಯ ನಾನಾದಡೆ ಪ್ರಾಣದಿಂದಿರ್ಪೆನೆ ಗುರುವೆ? ನರಬೀಜ ನಾನಾದೆ, ಗುರುದ್ರೋಹಿ ನಾನಾದೆ, ಇನ್ನೆಂತು ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ, ಹಂದಿಯ ತಂದು ಅಂದಣವನೇರಿಸಿದಂತೆ, ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ?. ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು. ಕೈವಿಡಿದ ಸ್ತ್ರೀಯ ಕಡಿಖಂಡವಮಾಡಿದೆ. ಒಡನಾಡಿದವರ ಕಡುಕೋಪದಿನಿರಿದುಕೊಂದೆ. ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ. ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ. ಗೋವ ಕೊಂದವರ ವಹಿಸಿಕೊಂಡೆ. ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ. ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು. ಇಂತಪ್ಪ ಮಹಾಪಾತಕಂಗಳ ಮಾಡಿದ್ದ ಹೊಲೆಯನಿವನೆಂದು ನೀನರಿದ ಬಳಿಕ, ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು, ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ. ಅದೇನು ಕಾರಣವೆಂದೊಡೆ- ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ, ನಾಳೆ ಶೂಲಕ್ಕೆ ತೆಗಸುವರೆ, ಇಂದು ಕಳ್ಳಬಂಟಂಗೆ, ಪುನುಗು ಜವಾಜಿಯ ಲೇಪಿಸಿ, ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ, ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು, ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು ವೀರವೃಂದದ ಹಲಗೆ ಕಹಳೆಯಂ, ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ, ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು, ಎನ್ನ ಎಕ್ಕಲನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ ಸಟೆಯುಪಚಾರಕ್ಕಾದ ಲಾಂಛನವಲ್ಲದೆ, ದಿಟದೊಲವಲ್ಲವಯ್ಯ ದೇವನೆ. ನಾನು ಮುಂದನರಿಯದಂಧಕನಯ್ಯ. ನಿನ್ನ ಬಾಗಿಲ ಕಾವ ಗೊಲ್ಲನಯ್ಯ. ನಿನ್ನ ಕುದುರೆಯ ಸಾಕುವ ಗೋವನಯ್ಯ. ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ. ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ. ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ. ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ. ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಭೂಮಿಗೆ ಹುಟ್ಟಿದ ಕಲ್ಲು, ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ ಶಿಲೆಯನೆಂತು ಲಿಂಗವೆಂದೆಂಬೆನಯ್ಯ? ಕೊಟ್ಟಾತ ಗುರುವೆ? ಕೊಂಡಾತ ಶಿಷ್ಯನೆ? ಅಲ್ಲ ಕಾಣಿರಯ್ಯ. ಶಿಲಾಲಿಖಿತವ ಕಳೆದು, ಕಳಾಭೇದವನರಿದು ಕಳೆಯ ತುಂಬಿಕೊಡಬಲ್ಲರೆ ಗುರುವೆಂಬೆ; ಕೊಂಡಾತ ಶಿಷ್ಯನೆಂಬೆನಯ್ಯ `ಯಥಾ ಕಲಾ ತಥಾ ಭಾವೋ| ಯಥಾ ಭಾವಸ್ತಥಾ ಮನಃ|| ಯಥಾ ಮನಸ್ತಥಾ ದೃಷ್ಟಿ| ರ್ಯಥಾ ದೃಷ್ಟಿಸ್ತಥಾ ಸ್ಥಲಂ||' ಎಂದುದಾಗಿ ಈ ಭೇದವನರಿಯದೆ ಇಷ್ಟವ ಮಾರುವಾತಂಗೂ ಕೊಂಬಾತಂಗೂ ನಾಯಕನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ? ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ? ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ? ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ ದೇವದಾನವ ಮಾನವರೆಲ್ಲರು ನೀವೆಲ್ಲರು ಆವ ಪರಿಯಲ್ಲಿ ಗುರು ಹೇಳಿರಣ್ಣಾ? ಗುರುವಾರು ಲಘುವಾರೆಂದರಿಯರಿ, ಮನ ಬಂದಂತೆ ನುಡಿದು ಕೆಡುವಿರಾಗಿ. ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು. ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು ಮಹಾಸಂವಾದದಿಂದ ಅತಿತರ್ಕವ ಮಾಡಿ ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ, ಆ ಸಭಾಮಧ್ಯದಿ ಪರಮಾಕಾಶದಿ `ಅತ್ಯತಿಷ*ದ್ದಶಾಂಗುಲನೆನಿಪ' ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ*ದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು. ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ, `ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು `ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ ಎಂದುದಾಗಿ. `ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, `ಈಶಾನಸ್ಸರ್ವವಿದ್ಯಾನಾಂ ಎಂದುದಾಗಿ, ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ ವಿದ್ಯೆಯಲ್ಲಿ ಗುರು ಕಾಣಿರೆ, ದೀಕ್ಷೆಯಲ್ಲಿ ಗುರುವೇರಿ ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ `ಜನಿತೋಥವಿಷ್ಣೋಃ ಎಂದುದಾಗಿ, `ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ, ಮಹಾಘನತರವಪ್ಪ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು. ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ ಎಮ್ಮ ಗಣನಾಥದೇವರೇ ಗುರು ಕಾಣಿರೆ. ಇದು ಕಾರಣ, ಶರಣಮೂರ್ತಿ ಶ್ರೀಗುರು. ಶ್ರೀಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು, ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು. ತನು ಮನ ಧನವನರ್ಪಿಸುವುದು, ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ, ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ ಲಿಂಗವನು ಭಕ್ತಿಯಿಂದ ಪೂಜಿಸಿ ಲಿಂಗದಲ್ಲಿ ವರವ ಪಡೆದು, ಶಿವಪದವ ಪಡೆದರು ಪುರಾತನರು. ಅದೆಂತೆನಲು ಕೇಳಿರೆ: ಬಳ್ಳ ಲಿಂಗವೆ? ಅಲ್ಲ, ಅದು ಸಟೆ, ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ. ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ. ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ. ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು ಸಿರಿಯಾಳನಿಂದ. ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು ಕೆಂಭಾವಿಯ ಭೋಗಣ್ಣನಿಂದ. ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ. ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ. ಇಂತು ಸಟೆಯ ದಿಟವ ಮಾಡಿ ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು. ದಿಟ ಶಿವನ ಸಟೆಯ ಮಾಡಿ ಕಂಡು ಸನತ್ಕುಮಾರನೊಂಟೆಯಾದನು. ದಿಟ ಶಿವನ ಸಟೆಯ ಮಾಡಿ ಕಂಡು ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ದಕ್ಷನು ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ನರಸಿಂಹನು ವಧೆಗೊಳಗಾದನು. ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು. ಮಹಾಲಿಂಗದ ಸದ್ಭಕ್ತರು, ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು. ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ. ಅದಂತಿರಲಿ, ದಿಟವ ಸಟೆಯ ಮಾಡಿ ದೋಷಿಗಳಾದಿರಿ ಅಭಕ್ತರಂತೆ. ಅದಂತಿರಲಿ, ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ. ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ ಅವಿಶ್ವಾಸದಿಂ ಕೆಡಬೇಡ, ಕೆಡಬೇಡ. ಸಹಜವಹ ದೃಷ್ಟವಹ ಪರಶಿವನು ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವಮೂರ್ತಿ ಜಂಗಮವು ವಿಶ್ವಾಸವ ಮಾಡಿ ನಂಗಿರಣ್ಣಾ, ಮತ್ತೆಯೂ ನಂಬಿರಣ್ಣಾ. ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ. ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.
--------------
ಉರಿಲಿಂಗಪೆದ್ದಿ
ಮಹಾಘನ ಶ್ರೀಗುರುಲಿಂಗವೆ ಗುರುವಲ್ಲದೆ, ಪಿತನೊಂದು ಗುರುವೆ? ಮಾತೆಯೊಂದು ಗುರುವೆರಿ ಭ್ರಾತನೊಂದು ಗುರುವೆ? ಸತಿಯೊಂದು ಗುರುವೆರಿ ಸುತನೊಂದು ಗುರುವೆ? ಗುರುಗುರುವೆಂದೇನೊ ಒಮ್ಮರ (ಒಮ್ಮ?) ಗುರುವೆ? ಆ ಮಹಾಘನ ಗುರುಲಿಂಗಕ್ಕೆ ಇವರೆಲ್ಲರ ಸರಿಗಂಡಡೆ ಅಘೋರ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು? ಹಸಿವು ಹೋಹುದೆ? ಅಂಗದ ಮೇಲೆ ಲಿಂಗಸ್ವಾಯತವಾದಡೇನು? ಭಕ್ತನಾಗಬಲ್ಲನೆ? ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ, ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ? ಇಂತಪ್ಪವರ ಕಂಡಡೆ ನಾಚುವೆನಯ್ಯಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗೇಣುದ್ದ ಒಡಲೊಳಗೆ ಬೆಟ್ಟದುದ್ದ ಮಾತು ಹುಟ್ಟಿತ್ತು ನೋಡ. ಬೆಟ್ಟದುದ್ದ ಮಾತೆಲ್ಲ ಏತಕಯ್ಯಯೆಂದರೆ- ಗೇಣುದ್ದ ಒಡಲ ಹೂಣುವದಕ್ಕಾಗಿ ಕಾಣಾ. ವಾಚಾಳತ್ವದಿಂದ ಉದರವ ಹೊರೆವವರೆಲ್ಲಾ ಗುರುವೆ? ಇಂದ್ರಿಯಂಗಳಿಗೊಂದೊಂದು ಮಾತಕಲಿತು ಸದಾಶಿವನ ಸಂಧಿಸಿ ಸರ್ವರಿಗೆ ತೋರಿಹೆನೆಂಬರು, ತಾವೇಕೆ ಕಾಣರೋ? ತಾವು ಕಾಣದೆ, ತಮ್ಮಲ್ಲಿ ವಸ್ತು ವಿವೇಕವಿಲ್ಲದೆ ಅನ್ಯರಿಗೆ ಹೇಳುವ ಬೋಧೆ, ಅದು ಅವಿಚಾರ ಕಾಣ. ಗುರುತತ್ವದ ಬಲ್ಲ ಗುರು ಶುದ್ಧ ಚಿದ್ರೂಪನು. ಚಿನ್ಮಯನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->