ಅಥವಾ

ಒಟ್ಟು 10 ಕಡೆಗಳಲ್ಲಿ , 9 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ ? ಅದು ಕಾರಣ_ ಆ ಗೋವ ಪೋಷಿಸಿ ಕರೆದು ಕಾಸಿ, ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ ಆ ಗೋವು ದಿನದಿನಕ್ಕೆ ಪುಷ್ಟವಹುದು. ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ ? ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು, ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು. ಕೂಡಲಚೆನ್ನಸಂಗಯ್ಯನಲ್ಲಿ, ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇದ್ಥಿಸಿ, ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ ಪ್ರಾಣಲಿಂಗಸಂಬಂಧವಾಗಬಾರದು
--------------
ಚನ್ನಬಸವಣ್ಣ
ಇಕ್ಷುವಿನೊಳಗೆ ಶರ್ಕರವ ಕಾಣಬಹುದಲ್ಲದೆ, ಶರ್ಕರದೊಳಗೆ ಇಕ್ಷುವಿನ ಕಂಡವರುಂಟೆ ? ಕ್ಷೀರದೊಳಗೆ ಘೃತವ ಕಾಣಬಹುದಲ್ಲದೆ, ಘೃತದೊಳಗೆ ಕ್ಷೀರವ ಕಂಡವರುಂಟೆ ? ಶುಕ್ತಿಯೊಳಗೆ ಮೌಕ್ತಿಕವ ಕಾಣಬಹುದಲ್ಲದೆ, ಮೌಕ್ತಿಕದೊಳಗೆ ಶುಕ್ತಿಯ ಕಂಡವರುಂಟೆ ? ಸಂಸಾರದೊಳಗೆ ಶರಣನ ಕಾಣಬಹುದಲ್ಲದೆ, ಶರಣನೊಳಗೆ ಸಂಸಾರವ ಕಂಡವರುಂಟೆ? ಮೂರು ಲೋಕದೊಳಗೆ ಇಲ್ಲ ಇಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗ ಸಂಸಾರ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ತಾರಕ ನುಂಗಿದ ಜಲವ, ಬೇರೆ ಶೋಧಿಸಲುಂಟೆ ಅಯ್ಯಾ ? ಉರಿಯುಂಡ ಘೃತವ ಅಳೆವುದಕ್ಕೆ ಈಡುಂಟೆ ಅಯ್ಯಾ ? ನಿಶ್ಚಯ ನಿಜವ ಗೊತ್ತಿಂಗೆ ತರಬಹುದೆ ಅಯ್ಯಾ ? ಇಷ್ಟ ವಸ್ತುವಿನಲ್ಲಿ ಲೇಪವಾಗಿ ಮತ್ತೊಂದು ಕುರುಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು. ಊರೊಳಗೆ ಪಂಥ ರಣದೊಳಗೆ ಓಟವೆ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ, ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಲಿಂಗದಿಂದ ಶರಣರುದಯಯವಾಗದಿರ್ದಡೆ, ಬಸವ ಚೆನ್ನಬಸವ ಪ್ರಭುದೇವರು ಮುಖ್ಯವಾದ ಏಳುನೂರುಯೆಪ್ಪತ್ತು ಅಮರಗಣಂಗಳು ಎಲ್ಲರೂ ಕ್ಷೀರ ಕ್ಷೀರವ ಬೆರಸಿದಂತೆ, ನೀರು ನೀರು ಬೆರಸಿದಂತೆ, ಘೃತ ಘೃತವ ಬೆರಸಿದಂತೆ, ಬಯಲು ಬಯಲ ಬೆರಸಿದಂತೆ ಲಿಂಗವ ಬೆರಸಿ ಮಹಾಲಿಂಗವೆಯಾದರು ನೋಡ. ಲಿಂಗದಿಂದ ಶರಣರುದಯವಾಗದಿರ್ದಡೆ, ನೀಲಲೋಚನೆಯಮ್ಮ ಲಿಂಗದೊಳಗೆ ತನ್ನಂಗವನೇಕೀಕರಿಸಿ, ಕೇವಲ ಪರಂಜ್ಯೋತಿರ್ಲಿಂಗದಲ್ಲಿ ನಿರವಯವಾದಳು ನೋಡಾ. ಇಂತಪ್ಪ ದೃಷ್ಟವ ಕಂಡು ನಂಬದಿರ್ಪುದು ಕರ್ಮದ ಫಲ. ಅದು ಇವರ ಗುಣವೆ? ಶಿವನ ಮಾಯಾಪ್ರಪಂಚಿನ ಗುಣ ನೋಡಾ. ಈ ಪ್ರಪಂಚುಜೀವಿಗಳು ಅಲ್ಲ ಎಂಬುದು, ಅಹುದೆಂಬುದು ಪ್ರಮಾಣೆ? ಅಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಘೃತ ಘೃತವ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಬಸವಣ್ಣ. ಕ್ಷೀರ ಕ್ಷೀರವ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಚೆನ್ನಬಸವಣ್ಣ. ಜ್ಯೋತಿ ಜ್ಯೋತಿಯ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಪ್ರಭು[ದೇವ]. ಬಯಲು ಬಯಲ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಮಡಿವಾಳಯ್ಯ. ಬೆಳಗು ಬೆಳಗ ಬೆರಸಿದಂತೆ ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಸಿದ್ಧರಾಮಯ್ಯ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ ಶ್ರೀಪಾದದಲ್ಲಿ ಉರಿ ಕರ್ಪುರ ಬೆರಸಿದಂತೆ ಬೆರಸಿದೆನಯ್ಯಾ, ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಲಿಂಗವೆ.
--------------
ಸತ್ಯ ಕರಂಡಮೂರ್ತಿ ಸದಾಶಿವಲಿಂಗ
ಭಕ್ತಂಗೆ ಮಾಹೇಶ್ವರಸ್ಥಲ, ಪ್ರಸಾದಿಗೆ ಭಕ್ತಸ್ಥಲ. ಮಾಹೇಶ್ವರಂಗೆ ಪ್ರಾಣಲಿಂಗಿಸ್ಥಲ, ಶರಣಂಗೆ ಪ್ರಸಾದಿಸ್ಥಲ. ಪ್ರಾಣಲಿಂಗಿಗೆ ಐಕ್ಯಸ್ಥಲ, ಐಕ್ಯಂಗೆ ಭಕ್ತನ ವಿಶ್ವಾಸವನರಿತು ಮಾಹೇಶ್ವರನ ಪ್ರಸನ್ನತೆಯ ಕಂಡು ಪ್ರಸಾದಿಯ ಪರಿಪೂರ್ಣತ್ವವನರಿದು ಪ್ರಾಣಲಿಂಗಿಯ ಉಭಯವ ತಿಳಿದು ನಿಂದುದ ಕಂಡು, ಇಂತೀ ಚತುಷ್ಟಯ ಭಾವ ಏಕವಾಗಿ ಶರಣನ ಸನ್ಮತದಲ್ಲಿ ಅಡಗಿ, ಒಡಗೂಡಿದಲ್ಲಿ ಐಕ್ಯಂಗೆ ಬೀಜನಾಮ ನಿರ್ಲೇಪ, ಇಂತೀ ಸ್ಥಲಭಾವ. ಪಶುವಿನ ಪಿಸಿತದ ಕ್ಷೀರವ, ಶಿಶುವಿನ ಒಲವರದಿಂದ ತೆಗೆವಂತೆ ಆ ಕ್ಷೀರದ ಘೃತವ, ನಾನಾ ಭೇದಂಗಳಿಂದ ವಿಭೇದಿಸಿ ಕಾಬಂತೆ ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ಫಲ, ಪ್ರಸಾದಿಗೆ ನಿಷೆ*, ಪ್ರಾಣಲಿಂಗಿಗೆ ಮೂರ್ತಿಧ್ಯಾನ, ಶರಣಂಗೆ ನಿಬ್ಬೆರಗು, ಐಕ್ಯಂಗೆ ಈ ಐದು ಲೇಪವಾದ ನಿರ್ನಾಮ. ಇಂತೀ ಷಟ್‍ಸ್ಥಲವ ನೆಮ್ಮಿ ಕಾಬುದು ಒಂದೆ ವಿಶ್ವಾಸ. ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು ಅರಿದವನಿಗಲ್ಲದೆ ಸಾಧ್ಯವಲ್ಲ ನೋಡಾ.
--------------
ಬಾಹೂರ ಬೊಮ್ಮಣ್ಣ
ಕಾಳಗದೊಳು ಜೆಡೆದಲೆಗೆ ಮುಡಿದಲೆಯಕೊಟ್ಟ. ಭಾಳಾಂಬಕನ ಪಾದವ ಕಂಡು ಚೋಳರಾಯ, ಏಳುನೂರುಯೆಪ್ಪತ್ತೇಳು ಚಿನ್ನದ ಹರಿವಾಣದಲ್ಲಿ ಮೇಳೈಸಿ ಪಂಚಪಾಯಸ ಪಂಚಕಜ್ಜಾಯ ಪರಿಪರಿ ಪದಾರ್ಥ ಭಕ್ಷ್ಯನ್ನವನೆಡೆ ಮಾಡಿ ಘೃತವ ನೀಡಿ ಕಣ್ಣುತುಂಬಿ ನೋಡಿ ಹಮ್ಮನಾಡಿದರೆ ಅವನ ಜರದು ಮಾದಾರ ಚೆನ್ನಯ್ಯನಲ್ಲಿಗೆ ಹೋಗಿ ಜುರುಜುರುತ ಅಂಬಲಿ ಸೊಂಡಿಲಿಕ್ಕೆನೆ ಸುರುಕು ಸುರುಕು ಸುರುಕೆನೆ ಸುರಿದು ಅಮೃತಕ್ಕೆ ಸರಿಯೆಂದು ಪರಿಶಿವನೊಲಿದುಕೊಂಡಾಡಿದ ಮಾದಾರ ಚೆನ್ನಯ್ಯಂಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಘೃತ ಘೃತವ ಬೆರಸಿದಂತೆ, ಕ್ಷೀರ ಕ್ಷೀರವ ಬೆರಸಿದಂತೆ, ತೈಲ ತೈಲವ ಬೆರಸಿದಂತೆ, ನೀರು ನೀರ ಬೆರಸಿದಂತೆ, ಜ್ಯೋತಿ ಜ್ಯೋತಿಯ ಕೂಡಿದಂತೆ, ಬಯಲು ಬಯಲ ಬೆರಸಿದಂತೆ, ಪ್ರಾಣ ಪ್ರಾಣ ಸಂಯೋಗವಾದ ಶರಣ ಲಿಂಗ ಸಮರಸವನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ? ಬೆಣ್ಣೆಯ ಬಿಟ್ಟು ಘೃತವ ತೆಗೆಯಬಹುದೆ? ಭೂಮಿಯ ಬಿಟ್ಟು ಜಗವ ಮಾಡಬಹುದೆ? ಜಂಗಮವಿರಹಿತ ಲಿಂಗವಿಲ್ಲ, ಲಿಂಗವಿರಹಿತ ಜಂಗಮವಿಲ್ಲ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->