ಅಥವಾ

ಒಟ್ಟು 25 ಕಡೆಗಳಲ್ಲಿ , 14 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯಾ, ಬಸವಣ್ಣನು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯಾ, ಚನ್ನಬಸವಣ್ಣನು ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯಾ, ಘಟ್ಟಿವಾಳ ಮುದ್ದಯ್ಯನು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯಾ, ಸಿದ್ಧರಾಮಯ್ಯನು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯಾ, ಮರುಳಶಂಕರದೇವರು, ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯಾ, ಪ್ರಭುದೇವರು. ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು ಪ್ರಮಥರು. ಗವರೇಶ್ವರಲಿಂಗದಲ್ಲಿ ಸುಖಿಯಾಗಿ ಬದುಕಿದೆನು ಕಾಣಾ, ಮಡಿವಾಳ ಮಾಚಯ್ಯ.
--------------
ಮೇದರ ಕೇತಯ್ಯ
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಹಾಜ್ಞಾನಿ ಜಂಗಮಲಿಂಗ ತಾನು ಲೋಕಪಾವನವಾಗಿ ನಡೆನುಡಿಗಳರಿದಾಚರಿಸುವಲ್ಲಿ, ಜಿಹ್ವೆಯಲ್ಲಿ ಹುಸಿನುಡಿಯಿಲ್ಲದೆ ತನ್ನ ತಾ ನುಡಿಯುತಿರ್ದ ಕಾಣಾ. ಕಂಗಳಲ್ಲಿ ಬ್ಥಿನ್ನದೃಷ್ಟಿಯಿಲ್ಲದೆ ತನ್ನ ತಾ ನೋಡುತಿರ್ದ ಕಾಣಾ. ಶ್ರೋತ್ರದಲ್ಲಿ ಬ್ಥಿನ್ನಶಬ್ದವಿಲ್ಲದೆ ತನ್ನ ತಾ ಕೇಳುತಿರ್ದ ಕಾಣಾ. ತ್ವಕ್ಕಿನಲ್ಲಿ ಬ್ಥಿನ್ನ ಸೋಂಕಿಲ್ಲದೆ ತನ್ನ ತಾ ಸೋಂಕುತಿರ್ದ ಕಾಣಾ. ಘ್ರಾಣದಲ್ಲಿ ಬ್ಥಿನ್ನವಾಸನೆಯಿಲ್ಲದೆ ತನ್ನ ತಾನ್ವಾಸಿಸುತಿರ್ದ ಕಾಣಾ. ಹೃದಯದಲ್ಲಿ ಮಾಯಾಸುಖವಿಲ್ಲದೆ ತನ್ನ ತಾ ಸುಖದಲ್ಲಿರ್ದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ಮತ್ತೆ ಮರಣವಿಲ್ಲದೆ ನಿಮ್ಮಲ್ಲಿ ತನ್ನೊಳೈಕ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರ, ಶಿಖಾ, ಪಶ್ಚಿಮವೆಂಬ ನವಚಕ್ರಸ್ಥಾನವ ಗುದ ಗುಹ್ಯ ನಾಬ್ಥಿ ಹೃದಯ ಕಂಠ ಉತ್ತಮಾಂಗ ಅಳ್ಳನೆತ್ತಿ ನಡುನೆತ್ತಿ ಹಿಂಭಾಗದ ಕಳ್ಳಕುಣಿಕೆಯೆಂದು ಪೇಳುವಿರಿ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗ ಇರ್ಪುದೇ? ಇಲ್ಲ. ಮತ್ತಂ, ಬಲ್ಲಾದರೆ ಪೇಳಿರಿ, ಇಲ್ಲವಾದರೆ ನಮ್ಮ ಶಿವಗಣಂಗಳ ಕೇಳಿರಿ. ಅದೆಂತೆಂದಡೆ : ಆಧಾರಚಕ್ರವೆಂಬುದೇ ಘ್ರಾಣ. ಸ್ವಾದ್ಥಿಷ್ಠಾನಚಕ್ರವೆಂಬುದೇ ಜಿಹ್ವೆಸ್ಥಾನ. ಮಣಿಪೂರಕಚಕ್ರವೆಂಬುದೇ ನೇತ್ರಸ್ಥಾನ. ಅನಾಹತಚಕ್ರವೆಂಬುದೇ ತ್ವಕ್ಕಿನಸ್ಥಾನ. ವಿಶುದ್ಧಿಚಕ್ರವೆಂಬುದೇ ಕರ್ಣಸ್ಥಾನ. ಆಜ್ಞಾಚಕ್ರವೆಂಬುದೇ ಹೃದಯಸ್ಥಾನ. ಬ್ರಹ್ಮಸ್ಥಾನವೆಂಬುದೇ ಕರಸ್ಥಲ. ಶಿಖಾಸ್ಥಾನವೆಂಬುದೇ ಮನಸ್ಥಲ. ಪಶ್ಚಿಮಸ್ಥಾನವೆಂಬುದೇ ಪ್ರಾಣಸ್ಥಲ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗವು ಸಂಬಂಧವಾಗಿರುವುದಲ್ಲದೆ ಅಂತಪ್ಪ ಜಡದೇಹಿ ನವಸ್ಥಾನದ ಮಾಂಸರಕ್ತದಲ್ಲಿ ಪರಶಿವಲಿಂಗವು ಇರ್ಪುದೆ? ಇಲ್ಲ. ಅದೇನು ಕಾರಣವೆಂದಡೆ : ಘ್ರಾಣದಲ್ಲಿ ಆಚಾರಲಿಂಗಸ್ವಾಯತವಿಲ್ಲದೆ ಗಂಧ ದುರ್ಗಂಧ ಮೊದಲಾದ ಆವ ಗಂಧದ ವಾಸನೆಯು ತಿಳಿಯದು. ಜಿಹ್ವೆಯಲ್ಲಿ ಗುರುಲಿಂಗಸ್ವಾಯತವಿಲ್ಲದೆ ಸವಿ ಕಹಿ ಮೊದಲಾದ ಆವ ರುಚಿಸ್ವಾದವು ತಿಳಿಯದು. ನೇತ್ರದಲ್ಲಿ ಶಿವಲಿಂಗಸ್ವಾಯತವಿಲ್ಲದೆ ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ ಮೊದಲಾದ ಷಡ್ವರ್ಗದ ರೂಪು ಲಕ್ಷಣ ತಿಳಿಯದು. ತ್ವಕ್ಕಿನಲ್ಲಿ ಜಂಗಮಲಿಂಗಸ್ವಾಯತವಿಲ್ಲದೆ ಮೃದು ಕಠಿಣ ಮೊದಲಾದ ಆವ ಸುಖವು ತಿಳಿಯದು. ಶ್ರೋತ್ರದಲ್ಲಿ ಪ್ರಸಾದಲಿಂಗಸ್ವಾಯತವಿಲ್ಲದೆ ಸುಸ್ವರ ಅಪಸ್ವರ ಮೊದಲಾದ ಆವ ಸ್ವರಲಕ್ಷಣವು ತಿಳಿಯದು. ಹೃದಯದಲ್ಲಿ ಮಹಾಲಿಂಗಸ್ವಾಯತವಿಲ್ಲದೆ ಷಡಿಂದ್ರಿಸುಖತೃಪ್ತಿ ಮೊದಲಾದ ಸಕಲೇಂದ್ರಿಯ ಸುಖತೃಪ್ತಿ ಸಂತೋಷವು ತಿಳಿಯದು. ಕರಸ್ಥಲದಲ್ಲಿ ನಿರಾಕಾರವಾದ ನಿಷ್ಕಲಲಿಂಗವೆಂಬ ಇಷ್ಟಲಿಂಗ ಸ್ವಾಯತವಿಲ್ಲದೆ ಷಡ್ವಿಧಾಂಗದಲ್ಲಿ ಷಡ್ವಿಧಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಮನದಲ್ಲಿ ಶೂನ್ಯಲಿಂಗವೆಂಬ ಪ್ರಾಣಲಿಂಗಸ್ವಾಯತವಿಲ್ಲದೆ ಸರ್ವೇಂದ್ರಿಯಲ್ಲಿ ಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಪ್ರಾಣವೆಂಬಾತ್ಮನಲ್ಲಿ ಭಾವಲಿಂಗಸ್ವಾಯತವಿಲ್ಲದೆ ಸರ್ವಾಂಗಲಿಂಗಮಯ ಪರವಸ್ತುಸ್ವರೂಪ ತಾನೆಂದು ತಿಳಿಯದು. ಇಂತಪ್ಪ ವಿಚಾರವನು ತಿಳಿಯಬಲ್ಲಾತನೇ ಅನಾದಿಶರಣನು. ಅಂತಪ್ಪ ಪರಶಿವಲಿಂಗದ ಸ್ವಾಯತಸಂಬಂಧವಾದ ಭೇದವ ತಿಳಿಯದೆ ಅಂಗಭಾವ ಮುಂದುಗೊಂಡು ಇರ್ಪಾತನೇ ಭವಭಾರಿಕನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ ಎಂಬುದನರಿಯರು. ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು. ನೇತ್ರದಲ್ಲಿ ತನ್ನ ರೂಪು ತುಂಬಿ ನೇತ್ರವ ಗುರು ಮಾಡಿದನು. ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ ಶ್ರೋತ್ರವ ಗುರು ಮಾಡಿದನು. ಘ್ರಾಣದಲ್ಲಿ ಮಹಾಗಂಧವ ತುಂಬಿ ಘ್ರಾಣವ ಗುರು ಮಾಡಿದನು. ಜಿಹ್ವೆಯಲ್ಲಿ ಕರುಣಪ್ರಸಾದವ ತುಂಬಿ ಜಿಹ್ವೆಯ ಗುರು ಮಾಡಿದನು. ಕಾಯವ ಮಹಾಕಾಯವೆನಿಸಿ, ಪ್ರಸಾದಕಾಯವೆನಿಸಿ, ಕಾಯವ ಗುರು ಮಾಡಿದನು. ಪ್ರಾಣವನೂ ಲಿಂಗಪ್ರಾಣಸಂಬಂಧವ ಮಾಡಿ ಪ್ರಾಣವ ಗುರು ಮಾಡಿದನು. ಇಂತು ಅಂತರಂಗ ಬಹಿರಂಗವನು ಗುರು ಮಾಡಿದನು. ಸರ್ವಾಂಗವನು ಗುರುವ ಮಾಡಿದ ಗುರುವಿಂಗೆ ನಾನಿನ್ನೇನ ಮಾಡುವೆನಯ್ಯಾ? ಗುರುಪೂಜೆಗನುವಾದ ದ್ರವ್ಯಂಗಳನೂ, ಆವಾವ ಪದಾರ್ಥಂಗಳನೂ ಆವಾವ ಪುಷ್ಪಫಲಾದಿಗಳನೂ ವಿಚಾರಿಸಿ ನೋಡಿದಡೆ ಆವುವು ಗುರುತ್ವವಿಲ್ಲ. ಸರ್ವದ್ರವ್ಯಮೂಲವೂ ಸರ್ವಪದಾರ್ಥಮೂಲವೂ ಸರ್ವರಸಪುಷ್ಪಫಲಾದಿಗಳಿಗೆ ಎಲ್ಲದಕ್ಕೂ ಮೂಲಿಗ ಮನವು ಗುರುತ್ವವನ್ನುಳ್ಳದ್ದು. ತನ್ನ ಮನೋವಾಕ್‍ಸಹಿತ ಕಾಯವನೂ ಸದ್ಗುರುವಿಂಗಿತ್ತು ಶ್ರೀಗುರು ದರ್ಶನ ಸ್ಪರ್ಶನ ಮಾಡಿ ಸುಖಿಯಪ್ಪೆ ನಾನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಚಾರಲಿಂಗವ ಅಂಗೈಯೊಳಗಳವಡಿಸಿ ಮಜ್ಜನಕ್ಕೆರೆದು ತ್ರಿಪುಂಡ್ರಮಂ ಧರಿಯಿಸಿ ಪುಷ್ಪಜಾತಿಗಳಿಂದರ್ಚಿಸಿ ಪೂಜೆಮಾಡುವ ಕರವು ಆ ಪೂಜೆಗೆ ಮೆಚ್ಚಿ ಪಂಚಸ್ಫರ್ಷನಂಗಳಂ ಮರೆಯಲೊಡನೆ ಆ ಕರದಲ್ಲಿ ಜಂಗಮಲಿಂಗ ನೆಲೆಗೊಂಡಿತ್ತು. ಆ ಲಿಂಗದ ಪ್ರಕಾಶಮಂ ನೋಡುವ ನೇತ್ರಂಗಳು ಆ ಪ್ರಕಾಶಕ್ಕೆ ಮೆಚ್ಚಿ ಪಂಚವರ್ಣಂಗಳಂ ಮರೆಯಲೊಡನೆ ಅ ನೇತ್ರಂಗಳಲ್ಲಿ ಶಿವಲಿಂಗವೆ ನೆಲೆಗೊಂಡಿತ್ತು. ಆ ಲಿಂಗದ ಸದ್ವಾಸನೆಯಂ ವಾಸಿಸುವ ಘ್ರಾಣ ಆ ವಾಸನೆಗೆ ಮೆಚ್ಚಿ ಪಂಚಗಂಧಂಗಳಂ ಮರೆಯಲೊಡನೆ ಆ ಘ್ರಾಣದಲ್ಲಿ ಆಚಾರಲಿಂಗ ನೆಲೆಗೊಂಡಿತ್ತು. ಆ ಲಿಂಗದ ಮಂತ್ರಸ್ವರೂಪವನೆತ್ತಿ ಕೊಂಡಾಡುವ ಜಿಹ್ವೆ ಆ ಮಂತ್ರಕ್ಕೆ ಮೆಚ್ಚಿ ಪಂಚರಸಂಗಳಂ ಮರೆಯಲೊಡನೆ ಆ ಜಿಹ್ವೆಯಲ್ಲಿ ಗುರುಲಿಂಗ ನೆಲೆಗೊಂಡಿತ್ತು. ಆ ಲಿಂಗಮಂ ಮನವೊಲಿದು ಹಾಡುವ ನಾದಮಂ ಕೇಳುವ ಶ್ರೋತ್ರ ಆ ನಾದಕ್ಕೆ ಮೆಚ್ಚಿ ಪಂಚನಾದಂಗಳಂ ಮರೆಯಲೊಡನೆ ಆ ಶ್ರೋತ್ರದಲ್ಲಿ ಪ್ರಸಾದಲಿಂಗ ನೆಲೆಗೊಂಡಿತ್ತು. ಆ ಲಿಂಗವ ನೆನೆವ ಮನ ಆ ನೆನಹಿಂಗೆ ಮೆಚ್ಚಿ ಪಂಚಪರಿಣಾಮಂಗಳಂ ಮರೆಯಲೊಡನೆ ಆ ಮನದಲ್ಲಿ ಮಹಾಲಿಂಗ ನೆಲೆಗೊಂಡಿತ್ತು. ಈ ಷಡಿಂದ್ರಿಯಂಗಳೂ ಲಿಂಗವನಪ್ಪಿ ಅಗಲದ ಕಾರಣ ಆ ಲಿಂಗವೊಲಿದು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ನೆಲೆಗೊಂಡಿತ್ತು. ಇಂತಪ್ಪ ಇಷ್ಟಲಿಂಗದಲ್ಲಿ ಶರಣಂ ನಿಷ್ಠೆ ನಿಬ್ಬೆರಗಾಗಿ ಧ್ಯಾನಯೋಗಮಂ ಕೈಕೊಂಡು ಷಡುವರ್ಣಮಂ ಮರೆಯಲೊಡನೆ ಆ ಲಿಂಗವೊಲಿದು ಅಂಗವೇದ್ಥಿಸಿ ಜ್ಞಾನಕ್ರೀಗಳಲ್ಲಿ ಷಡ್ವಿಧ ಪ್ರಾಣಲಿಂಗವಾಗಿ ನೆಲೆಗೊಂಡಿತ್ತು. ಆ ಪ್ರಾಣಲಿಂಗಳಂ ಶರಣ ಮಂತ್ರಮಾಲೆಯಂ ಹೃದಯದೊಳಿಂಬಿಟ್ಟು ಮನವೆಂಬರಳ್ದ ತಾವರೆಯಲ್ಲಿ ಜಾಗ್ರತ್ ಸ್ವಪ್ನದಲ್ಲಿ ಪೂಜಿಸುವ ಧಾರಣಯೋಗದೊಳಿರ್ದು ಕ್ರೀಯ ಮರೆಯಲೊಡನೆ ಆ ಲಿಂಗವೊಲಿದು ಮನವೇದ್ಥಿಸಿ ಭಾವಂಗಳಡಗಿ ತ್ರಿವಿಧ ಭಾವಲಿಂಗವಾಗಿ ನೆಲೆಗೊಂಡಿತ್ತು. ಆ ಭಾವಲಿಂಗಗಳ ಶರಣನೊಡೆವೆರೆಯಲೊಡನೆ ಕರ್ಪೂರ ಹೋಗಿ ಉರಿಯ ಹಿಡಿದಂತಾದ ಸಮಾದ್ಥಿಯೋಗದೊಳಿರ್ದು ಜ್ಞಾನವ ಮರೆಯಲೊಡನೆ ಆ ಶರಣಂಗೆ ಆ ಲಿಂಗವೊಲಿದು ಸರ್ವಾಂಗಲಿಂಗವಾಯಿತು. ಆತನೇ ಪರಬ್ರಹ್ಮ. ಇದನರಿಯದೆ ಜ್ಞಾನಕ್ರೀಗಳಿಂದಾಚರಿಸಿ ಲಿಂಗಾಂಗ ಸಂಯೋಗವಾಗದೆ ಕೆರಹಿನಟ್ಟೆಗೆ ನಾಯಿ ತಲೆದೂಗುವಂತೆ ತಮ್ಮ ಅರಿವಿಂಗೆ ತಾವೇ ತಲೆದೂಗಿ `ಅಹಂ ಬ್ರಹ್ಮ'ವೆಂಬ ಚೌರಾಶಿ ಹೊಲೆಯರ ಎನಗೆ ತೋರದಿರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು. ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು. ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು. ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು. ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು. ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು. ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು. ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು. ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು. ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು. ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು. ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು. ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು. ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು. ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು. ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು. ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು. ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಹಾವಿನಹಾಳ ಕಲ್ಲಯ್ಯ
ಪರಶಿವನಾಮಾಮೃತವೆಂಬ ಪಂಚಾಕ್ಷರವನು ಅವ್ಯಕ್ತಮುಖದಿಂದೆ ಸ್ವೀಕರಿಸಿದೆನಾಗಿ, ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ತೋರುತಿರ್ಪುದು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ತೋರುತಿರ್ಪುದು. ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ತೋರುತಿರ್ಪುದು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ತೋರುತಿರ್ಪುದು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ತೋರುತಿರ್ಪುದು. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ತೋರುತಿರ್ಪುದು. ಎನ್ನ ಬ್ರಹ್ಮಸ್ಥಾನದಲ್ಲಿ ನಿಷ್ಕಲಲಿಂಗವಾಗಿ ತೋರುತಿರ್ಪುದು. ಎನ್ನ ಶಿಖಾಗ್ರದಲ್ಲಿ ನಿಶ್ಶೂನ್ಯಲಿಂಗವಾಗಿ ತೋರುತಿರ್ಪುದು. ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ತೋರುತಿರ್ಪುದು. ಎನ್ನ ಸರ್ವಾಂಗದಲ್ಲಿ ತೋರಿ ತನ್ನಂತೆ ಮಾಡಿಕೊಂಡಿರ್ಪುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತ ಮಾಹೇಶ್ವರ ಪ್ರಸಾದಿಯೆಂದು ಈ ಮೂರು ಕ್ರಿಯಾಂಗವಯ್ಯ. ಪ್ರಾಣಲಿಂಗಿ ಶರಣ ಐಕ್ಯವೆಂದು ಈ ಮೂರು ಜ್ಞಾನಾಂಗವಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು ಈ ಮೂರು ಕ್ರಿಯಾಲಿಂಗವಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಈ ಮೂರು ಜ್ಞಾನಲಿಂಗವಯ್ಯ. ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೇಶವ ಹೇಳಿಹೆನು. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಆ ಆರು ಕ್ರಿಯಾಂಗವು. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಲಿಂಗವಾರು ತೆರನಾಗಿಪ್ಪುದಯ್ಯ. ಇನ್ನು ಸಂಗವಾರು ತೆರನದೆಂತೆಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು ಸಂಗವಾರು ತೆರನಾಗಿಪ್ಪುದಯ್ಯ. ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ; ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ; ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ. ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ. ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ: ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ ಆ ಆರು ಪ್ರಾಣಾಂಗಗಳು. ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧಲಿಂಗವು ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು ಜ್ಞಾನಗಮ್ಯವಾಗಿ ಸಂಗದನುವನರಿದು ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ. ಹಿಂದೆ ಹೇಳಿದ ಕ್ರಿಯಾಂಗವಾರು ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು. ಈ ಉಭಯಾಂಗವು ಲಿಂಗಸಂಗದಿಂದ ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ ನಿರುಪಮ ಮಹಿಮ ಶರಣ ತಾನೆ ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನ ಶಿವಪ್ರಸಾದಿಯ ಉಭಯಸಂಬಂಧ ಸಹಭೋಗವೆಂತೆಂದೊಡೆ: ಶಿವ ತನ್ನ ನೇತ್ರಂಗಳನು ಪ್ರಸಾದಿಯ ನೇತ್ರದಲ್ಲಿ ಕೂಡಿ ರೂಪವನರಿವನು. ಶಿವ ತನ್ನ ಶ್ರೋತ್ರಂಗಳನು ಪ್ರಸಾದಿಯ ಶ್ರೋತ್ರದಲ್ಲಿ ಕೂಡಿ ಶಬ್ದವನರಿವನು. ಶಿವ ತನ್ನ ಘ್ರಾಣವನು ಪ್ರಸಾದಿಯ ಘ್ರಾಣದಲ್ಲಿ ಕೂಡಿ ಗಂಧವನರಿವನು. ಶಿವ ತನ್ನ ಜಿಹ್ವೆಯನು ಪ್ರಸಾದಿಯ ಜಿಹ್ವೆಯಲ್ಲಿ ಕೂಡಿ ರಸವನರಿವನು. ಶಿವ ತನ್ನ ಅಂಗವನು ಪ್ರಸಾದಿಯ ಅಂಗದಲ್ಲಿ ಕೂಡಿ ಸ್ಪರ್ಶವನರಿವನು. ಶಿವ ತಾನು ಬೇರೆ ಭೋಗಿಸಲೊಲ್ಲದೆ, ಪ್ರಸಾದಿಯ ಹೊಕ್ಕು ಭೋಗಿಸುವನಾಗಿ, ಸೋಹಂ ಎನ್ನದೆ ದೈತಾದ್ವೆತವ ಮೀರಿದ ಪ್ರಸಾದಿ ಸಂಗನಬಸವಣ್ಣನ ಸುಖಾತಿಶಯವನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ನೇತ್ರಮಧ್ಯದಲ್ಲಿ ಸೂಸುವ ತ್ರಿಣೇತ್ರನ ರೂಪವೆ ಸಿದ್ಧರಾಮಯ್ಯನಾದ. ಜಿಹ್ವೆಯಮಧ್ಯದಲ್ಲಿ ಸೂಸುವ ರುಚಿಯೆ ಸಿದ್ಧರಾಮಯ್ಯನಾದ. ಶ್ರೋತ್ರದಲ್ಲಿ ತುಂಬಿ ಪೂರೈಸುವ ಶಬ್ದವೆ ಸಿದ್ಧರಾಮಯ್ಯನಾದ. ಘ್ರಾಣದಲ್ಲಿ ತುಂಬಿತುಳುಕುವ ಮೂರ್ತಿಯೆ ಸಿದ್ಧರಾಮಯ್ಯನಾದ. ತ್ವಕ್ಕಿನಲ್ಲಿ ಅರಿವ ಮೂರ್ತಿಯೆ ಅಚ್ಚೊತ್ತಿದ ಸಿದ್ಧರಾಮಯ್ಯನಾದ. ಇಂತಪ್ಪ ಪರಶಿವಮೂರ್ತಿ ಸಿದ್ಧರಾಮಯ್ಯನ ಪಾದೋದಕವ ಕೊಂಡು ಪರವಸ್ತು ನಾನಾದೆ, ಗಂಗಾಪ್ರಿಯ ಕೂಡಲಸಂಗಮದೇವಾ.
--------------
ಗಂಗಾಂಬಿಕೆ
ಗುರು ಕರುಣಿಸೆ ಇಷ್ಟಲಿಂಗವೆನ್ನ ಕರವ ಸೇರಲು ಸರ್ವಾಂಗವೆಲ್ಲ ಲಿಂಗಮಯವಾದುದು ನೋಡಾ ! ಅದು ಎಂತೆಂದರೆ : ಇಷ್ಟಲಿಂಗದಿಂದ ಪ್ರಾಣಲಿಂಗ, ಪ್ರಾಣಲಿಂಗದಿಂದ ಭಾವಲಿಂಗತ್ರಯಗಳಾದವು. ಒಂದೊಂದು ಲಿಂಗದಲ್ಲಿ ಎರಡು ಲಿಂಗ ಹುಟ್ಟಿದವು : [ಇಷ್ಟಲಿಂಗದಿಂದ ಆಚಾರಲಿಂಗ ಗುರುಲಿಂಗ ಹುಟ್ಟಿದವು. ಪ್ರಾಣಲಿಂಗದಿಂದ ಶಿವಲಿಂಗ ಜಂಗಮಲಿಂಗ ಹುಟ್ಟಿದವು. ಭಾವಲಿಂಗದಿಂದ ಪ್ರಸಾದಲಿಂಗ ಮಹಾಲಿಂಗವೆಂಬೆರಡು ಲಿಂಗ ಹುಟ್ಟಿದವು.] ಇಂತೀ ಷಡ್ವಿಧಲಿಂಗದಲ್ಲಿ ಷಡ್ವಿಧಸಂಬಂಧ : ಘ್ರಾಣದಲ್ಲಿ ಆಚಾರಲಿಂಗ ಸಂಬಂಧ. ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ. ನೇತ್ರದಲ್ಲಿ ಶಿವಲಿಂಗ ಸಂಬಂಧ. ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ. ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ. ಹೃದಯದಲ್ಲಿ ಮಹಾಲಿಂಗ ಸಂಬಂಧ. ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು, ಜಂಗಮಲಿಂಗದರಿವು ಸ್ಪರುಶನ, ಪ್ರಸಾದಲಿಂಗದರಿವು ಶಬ್ದ, ಮಹಾಲಿಂಗದರಿವು ಪರಿಣಾಮ. ಒಂದೊಂದು ಲಿಂಗದಲ್ಲಿ ಆರುಲಿಂಗವಾದವು : ಆಚಾರಲಿಂಗದಲ್ಲಿ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಗುರುಲಿಂಗದಲ್ಲಿ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಶಿವಲಿಂಗWದಲ್ಲಿಘೆ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಪ್ರಸಾದಲಿಂಗದಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಇಂತಿವೆಲ್ಲ ಕೂಡಲ್ಕೆ ಮೂವತ್ತಾರು ಲಿಂಗ. ಆ ಮೂವತ್ತಾರು ಲಿಂಗದಲ್ಲಿ ಒಂದೊಂದು ಲಿಂಗದಲ್ಲಿ ಆರುಲಿಂಗ ಕೂಡಲ್ಕೆ ಇನ್ನೂರ ಹದಿನಾರು ಲಿಂಗವಾದವು. ಅಂಗಪ್ರಭೆಯಲ್ಲಿ ಲಿಂಗಪ್ರಭೆಯಾಗಿ, ಲಿಂಗಪ್ರಭೆಯಲ್ಲಿ ಅಂಗಪ್ರಭೆಯಾಗಿ, ಅಂಗಲಿಂಗಸಂಬಂಧಿಯಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ ಘ್ರಾಣದಲ್ಲಿ ನಿಂದು ಗಂಧವ ಗ್ರಹಿಸಿ ಗಂಧಪ್ರಸಾದವನೀವುತ್ತಿರ್ಪಿರಯ್ಯ. ಜಿಹ್ವೆಯಲ್ಲಿ ನಿಂದು ರಸವ ಗ್ರಹಿಸಿ ರಸಪ್ರಸಾದವನೀವುತ್ತಿರ್ಪಿರಯ್ಯ. ನೇತ್ರದಲ್ಲಿ ನಿಂದು ರೂಪದ ಗ್ರಹಿಸಿ ರೂಪಪ್ರಸಾದವ ನೀವುತ್ತಿರ್ಪಿರಯ್ಯ. ತ್ವಕ್ಕಿನಲ್ಲಿ ನಿಂದು ಸ್ವರ್ಶನವ ಗ್ರಹಿಸಿ ಸ್ಪರ್ಶನಪ್ರಸಾದವನೀವುತ್ತಿರ್ಪಿರಯ್ಯ. ಶ್ರೋತ್ರದಲ್ಲಿ ನಿಂದು ಶಬ್ದವ ಗ್ರಹಿಸಿ ಶಬ್ದಪ್ರಸಾದವನೀವುತ್ತಿರ್ಪಿರಯ್ಯ. ಮನದಲ್ಲಿ ನಿಂದು ಪರಿಣಾಮವ ಗ್ರಹಿಸಿ ಪರಿಣಾಮಪ್ರಸಾದವ ನೀವುತ್ತಿರ್ಪಿರಯ್ಯ. ಇಂತು ಸರ್ವೇಂದ್ರಿಯಂಗಳಲ್ಲಿ ನಿಂದು, ಸರ್ವಪದಾರ್ಥವ ಗ್ರಹಿಸಿ ಎನಗೆ ಪ್ರಸಾದವ ಕರುಣಿಸುತ್ತಿರ್ಪಿರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->