ಅಥವಾ

ಒಟ್ಟು 74 ಕಡೆಗಳಲ್ಲಿ , 30 ವಚನಕಾರರು , 63 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುಲ್ಲವೆ? ಅಯ್ಯಾ. ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು ಭಾವಶುದ್ಧವಾಗಿರ್ಪನು.
--------------
ಸಿದ್ಧರಾಮೇಶ್ವರ
ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ ಅರುದ್ವಾರ ಕೂಡಿದ ಠಾವಿನಲ್ಲಿ, ನಾದ ಬಿಂದು ಕಲೆಯೆಂಬ ಸಿಂಹಾಸನದ ಮೇಲೆ ಮೂರ್ತಿಗೊಂಡು, ಶಬ್ದ ರೂಪು ಗಂಧಂಗಳ ಗ್ರಹಿಸುವಾತ ನೀನಲ್ಲದೆ ಮತ್ತಾರು ಹೇಳಾ? ಗಳದಲ್ಲಿ ನಿಂದು ಷಡುರಸ್ನಾನದ ರುಚಿಯ ಜಿಹ್ವೆಯಲ್ಲಿ ಸ್ವಾದಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾಂಗದಲ್ಲಿ ನಿಂದು, ತ್ವಗಿಂದ್ರಿಯ ಮುಖದಲ್ಲಿ ಸ್ಪರ್ಶನವ ತಳೆದುಕೊಂಬಾತ ನೀನಲ್ಲದೆ ಮತ್ತಾರು ಹೇಳಾ? ಮನವೆಂಬ ಮುಖದಲ್ಲಿ ನಿಂದು ಪರಿಣಾಮವನನುಭವಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾವಯವಂಗಳಲ್ಲಿ ಸರ್ವಮುಖವಾಗಿ ಭೋಗಿಸಿ ಪ್ರಸಾದವ ಕರುಣಿಸಿದ ಕೃಪಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನೀನಲ್ಲದೆ ಮತ್ತಾರು ಹೇಳಾ?
--------------
ಸ್ವತಂತ್ರ ಸಿದ್ಧಲಿಂಗ
ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
ಮುಟ್ಟಿಯೂ ಮುಟ್ಟಬಾರದ ಠಾವಿನಲ್ಲಿ, ಹುಟ್ಟಿಯೂ ಹುಟ್ಟದೊಂದು ಶಿಶುವಾಯಿತ್ತು. ಅವ ದಿಟ್ಟನಲ್ಲ, ದ್ಥೀರ ವೀರ, ಕೊಟ್ಟದವನಲ್ಲ, ಕೊಟ್ಟುದ ಬೇಡ, ಅವನ ಮುಟ್ಟಿ ಒಡನೆರೆದವರು ನಿತ್ಯನಿತ್ಯಲಿಂಗೈಕ್ಯರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತನುವ ಪಡದು, ಧನವ ಗಳಿಸಬೇಕೆಂದು ಮನುಜರ ಮನೆಯ ಬಾಗಿಲಿಗೆ ಹೋಗಿ, ಮನಬಂದ ಪರಿಯಲ್ಲಿ ನುಡಿಸಿಕೊಂಡು, ಮನನೊಂದು ಬೆಂದು ಮರುಗುತ್ತಿರಲಾರೆ. ಸಕಳೇಶ್ವರದೇವಾ, ನೀ ಕರುಣಿಸಿ ಇದ ಠಾವಿನಲ್ಲಿ ಇಹಂಥಾ ಪರಮಸುಖ ಎಂದು ದೊರಕೊಂಬುದೊ ?
--------------
ಸಕಳೇಶ ಮಾದರಸ
ಶಿವತತ್ವ ಐದು ಅವಾವೆಂದಡೆ; ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ- ಇಂತು ಶಿವತತ್ವ ಐದು. ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ - ಇಂತು ವಿದ್ಯಾತತ್ತ್ವ ಏಳು. ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ - ಇವು ಕರಣತತ್ತ್ವ ನಾಲ್ಕು. ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ - ಇಂತು ಬುದ್ಧೀಂದ್ರಯಂಗಳು ಐದು. ಇನ್ನು ಕರ್ಮೇಂ್ರಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು - ಇಂತು ಕರ್ಮೇಂ್ರಯಂಗಳು ಐದು. ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ ಗಂಧ - ಇಂತು ಜ್ಞಾನೇಂದ್ರಿಯ ವಿಷಯ ಐದು. ಇನ್ನು ಕರ್ಮೇಂ್ರಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ ಇಂತು ಕರ್ಮೇಂ್ರಯ ವಿಷಯ ಐದು. ಇನ್ನು ವಾಕ್ಕುಗಳಾವುವೆಂದಡೆ: ಪರಾ, ಪಶ್ಯಂತಿ, ಮಧ್ಯಮೆ, ವೈಖರಿ - ಇಂತು ವಾಕ್ಕು ನಾಲ್ಕು. ಸಾತ್ಪಿ, ರಾಜಸ, ತಾಮಸ - ಇಂತು ಗುಣ ಮೂರು. ರಾಜಸಹಂಕಾರ, ವೈಖರಿಯಹಂಕಾರ, ಭೂತಾಯಹಂಕಾರ -ಇಂತು ಅಹಂಕಾರ ಮೂರು. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ - ಇಂತು ಭೂತಂಗಳು ಐದು. ಭೂತಕಾರ್ಯ ಇಪ್ಪತ್ತೈದು - ಅವಾವೆಂದಡೆ: ಅಸ್ಥಿ, ಮಾಂಸ, ತ್ವಕ್, ನಾಡಿ, ರೋಮ - ಈ ಐದು ಪೃಥ್ವೀಪಂಚಕ. ಲಾಲಾ, ಮೂತ್ರ, ಸ್ವೇದ, ಶುಕ್ಲ, ಶೋಣಿಕ - ಈ ಐದು ಅಪ್ಪುವಿನ ಪಂಚಕ. ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸ್ತ್ರೀಸಂಗ - ಈ ಐದು ಅಗ್ನಿಪಂಚಕ. ಪರಿವ, ಪಾರುವ, ಸುಳಿವ, ನಿಲುವ, ಅಗಲುವ - ಈ ಐದು ವಾಯುಪಂಚಕ. ರಾಗ, ದ್ವೇಷ, ಭಯ, ಲಜ್ಜೆ, ಮೋಹ - ಈ ಐದು ಆಕಾಶವಂಚಕ. ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು. ಇನ್ನು ದಶವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ - ಈ ಹತ್ತು ವಾಯುಗಳು, ಇನ್ನು ದಶನಾಡಿಗಳು: ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿ, ಜಿಹ್ವೆ, ಪುಷ್ಕರ, ಪಯಸ್ವಿನಿ, ಆಲಂಬು, ಲಕುಹ, ಶಂಕಿನಿ - ಇಂತೀ ಹತ್ತು ನಾಡಿಗಳು. ಇಂತು ತತ್ವ ತೊಂಬತ್ತಾರು ಕೂಡಿಕೊಂಡು ಆತ್ಮನು ಭೂಮಧ್ಯದಲ್ಲಿರ್ದು ಅವಸ್ಥೆಬಡುವುದನು ಹೇಳಿಹೆನು. ಅದೆಂತೆಂದಡೆ ಅವಸ್ಥೆಯ ಕ್ರಮ: ಪ್ರೇರಕಾವಸ್ಥೆ ಒಂದು, ಅಧೋವಸ್ಥೆ ಐದು, ಊಧ್ರ್ವಾವಸ್ಥೆ ಐದು, ಮಧ್ಯಾವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು, ಶುದ್ಧಾವಸ್ಥೆ ಒಂದು, ನಿರ್ಮಲಾವಸ್ಥೆ ಐದು, ಅಂತೂ ಅವಸ್ಥೆ ಇಪ್ಪತ್ತನಾಲ್ಕು, ಅವರಲ್ಲಿ ಪ್ರೇರಕಾವಸ್ಥೆಯೆಂತೆಂದಡೆ: ತತ್ತ್ವಸಮೂಹಂಗಳನು ಕೂಡಿಕೊಂಡು ಇರ್ದಲ್ಲಿ ಆ ಪುರುಷನು ಪಂಚೇಂ್ರಯಂಗಳಲ್ಲಿ ವಿಷಯಂಗಳು ಅತಿ ಚಮತ್ಕಾರದಲ್ಲಿ ಅರಿವವೇಳೆ ಪ್ರೇರಕಾವಸ್ಥೆಯೆಂದು. ಅದಕ್ಕೆ ಪ್ರೇರಿಸುವ ತತ್ತ್ವಂಗಳಾವುವೆಂದಡೆ- ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು, ಭೂತಂಗಳಲ್ಲಿ ಒಂದು, ಇಂದ್ರಿಯಂಗಳಲ್ಲಿ ಒಂದು -ಇಂತೀ ಹದಿನೆಂಟು ತತ್ವಂಗಳಲ್ಲಿ ವಿಷಯಂಗಳನರಿವನು. ಅದು ಹೇಗೆಂದಡೆ - ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು - ಇಂತು ಹದಿನಾರು ತತ್ತ್ವ. ಆಕಾಶಭೂತವೂ ಶ್ರೋತ್ರೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನದಲ್ಲಿರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಸೋಂಕನರಿವ; ತೇಜಭೂತವೂ ನಯನೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರೂಪವನರಿವ; ಅಪ್ಪುಭೂತವೂ ಜಿಹ್ವೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರಸವನರಿವ; ಪೃಥ್ವಿಭೂತವೂ ಪ್ರಾಣೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಗಂಧವನರಿವ. ಇಂತೀ ವಿಷಯಂಗಳನರಿವುದು. ಇದು ಪ್ರೇರಕಾವಸ್ಥೆಯೆಂದೆನಿಸುವದು. ಇನ್ನು ಅಧೋವಸ್ಥೆ ಐದಕ್ಕೆ ವಿವರ: ಪ್ರಥಮದಲ್ಲಿ ಜಾಗ್ರಾವಸ್ಥೆ ಅದಕ್ಕೆ ಪ್ರೇರಿಸುವ ತತ್ತ್ವಂಗಳು ಬಿಟ್ಟಿಹವಾವುವೆಂದಡೆ: ಶಿವತತ್ತ್ವ ಐದು, ಮಾಯಾತತ್ತ್ವ ಒಂದು, ವಿದ್ಯಾತತ್ತ್ವ ಆರು, ಭೂತಂಗಳು ಐದು ಇಂತು ಹದಿನೇಳು ಬಿಟ್ಟಿಹುದು. ಇನ್ನು ಜಾಗ್ರಾವಸ್ಥೆಯಲ್ಲಿಹ ತತ್ತ್ವಗಳೆಷ್ಟೆಂದಡೆ: ಕರಣ ನಾಲ್ಕು, ಬುದ್ಧೀಂದ್ರಿಯ ಐದು, ಕರ್ಮೇಂದ್ರಿಯ ಐದು, ವಿಷಯ ಹತ್ತು, ವಾಯು ಹತ್ತು. ಇಂತು ಮೂವತ್ತನಾಲ್ಕು ತತ್ತ್ವಂಗಳಲ್ಲಿ ಆ ತನು ಕೇಳದೆ ಕೇಳುವ, ಮಾತಾಡದ ಹಾಂಗೆ ಆಲಸ್ಯದಲ್ಲಿ ಮಾತನಾಡುತ್ತಿಹನು, ಇಂತು ಜಾಗ್ರಾವಸ್ಥೆ. ಇನ್ನು ಸ್ವಪ್ನಾವಸ್ಥೆ. ಅದಕ್ಕೆ ಹತ್ತು ತತ್ತ್ವಂಗಳು ಬಿಟ್ಟಿಹವು. ಅವಾವುವೆಂದಡೆ:ಬುದ್ಧೀಂ್ರಯ ಐದು, ಕರ್ಮೇಂದ್ರಿಯ ಐದು. ಲಲಾಟದಲ್ಲಿ ನಿಲುವು ಕಂಠಸ್ಥಾನದಲ್ಲಿ ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡಿಹುದು. ಅದೆಂತೆಂದಡೆ:ಮಾಯೆ ಒಂದು, ವಾಯು ಹತ್ತು, ವಿಷಯ ಹತ್ತು, ಕರಣ ನಾಲ್ಕು ಇಂತು ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡು ಸ್ವಪ್ನಂಗಳ ಕಾಣುತಿಹನು. ಇದು ಸ್ವಪ್ನಾವಸ್ಥೆ. ಇನ್ನು ಸುಷುಪ್ತಾವಸ್ಥೆಗೆ ಬಹಲ್ಲಿ ಕಂಠಸ್ಥಾನದಲ್ಲಿ ನಿಂದ ತತ್ತ್ವಂಗಳಾವಾವವೆಂದಡೆ- ಮಾಯೆ ಒಂದು, ವಾಯು ಒಂಬತ್ತು ವಿಷಯ ಹತ್ತು, ಕರಣ ಮೂರು- ಇಂತು ಇಪ್ಪತ್ತಮೂರು ತತ್ತ್ವ. ಇನ್ನು ಹೃದಯಸ್ಥಾನದಲ್ಲಿ ಕೂಡಿಹ ತತ್ತ್ವ ಆವಾವೆಂದಡೆ: ಪ್ರಾಣವಾಯು ಒಂದು, ಪ್ರಕೃತಿ ಒಂದು, ಚಿತ್ತ ಒಂದು -ಇಂತು ಸುಷುಪ್ತಾವಸ್ಥೆಯಲ್ಲಿ ತತ್ತ್ವ. ಇನ್ನು ತೂರ್ಯಾವಸ್ಥೆಗೆ ಬಹಾಗ ಹೃದಯದಲ್ಲಿ ನಿಂದ ತತ್ತ್ವ ಚಿತ್ತ ಒಂದು. ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿಹ ತತ್ತ್ವ ಪ್ರಾಣವಾಯು ಒಂದು, ಪ್ರಕೃತಿ ಒಂದು. ಅತೀತಾವಸ್ಥೆಗೆ ಹೋಹಾಗ ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿ ಪ್ರಾಣವಾಯುವುಳಿದು ಅತೀತಾವಸ್ಥೆಯಲ್ಲಿ ಪ್ರಕೃತಿಗೂಡಿ ಮೂಲಾಧಾರದಲ್ಲಿ ಆಣವಮಲಯುಕ್ತವಾಗಿ ಏನೆಂದರಿಯದೆ ಇಹುದು, ಇಂತಿದು ಅಧೋವಸ್ಥೆ. ಇನ್ನು ಊಧ್ರ್ವಾವಸ್ಥೆ, ಅತೀತದಲ್ಲಿ ಪ್ರಕೃತಿಕಾರ್ಯಂಗಳೆಲ್ಲವನೂ ಬಿಟ್ಟು, ತತ್ತ್ವಂಗಳೊಂದೂ ಇಲ್ಲದೆ, ಅಣವಮಲಸ್ವರೂಪವಾಗಿ ಮೂಲಾಧಾರದಲ್ಲಿ ಬ್ದಿರ್ದ ಆತ್ಮನಿಗೆ ಪರಮೇಶ್ವರನ ಕರುಣದಿಂದ ಕ್ರಿಯಾಶಕ್ತಿ, ಶಕ್ತಿತತ್ತ್ವಮಂ ಪ್ರೇರಿಸುವುದು. ಆ ಶಕ್ತಿ ಕಲೆ, ಕಾಲ, ನಿಯತಿಗಳಂ ಪ್ರೇರಿಸುವುದು. ಆ ವೇಳೆಯಲ್ಲಿ ಸೂಕ್ಷೆ ್ಮಯೆಂಬ ವಾಕ್ಕು ಕೂಡುವುದು. ಇಂತು ಅತೀತದಲ್ಲಿ ಅರುಹಿಸುವ ತತ್ತ್ವಂಗಳು: ಶಕ್ತಿತತ್ತ್ವ, ಕಲೆ, ಕಾಲ, ನಿಯತಿ, ಸೂಕ್ಷೆ ್ಮ ಇಂತು ತತ್ತ್ವಂಗಳು ಐದು. ಇನ್ನು ತೂರ್ಯಾವಸ್ಥೆಗೆ ಬಹಾಗ ಹಿಂದೆ ಹೇಳಿದ ತತ್ತ್ವ ಐದು, ಪಶ್ಯಂತಿಯೆಂಬ ವಾಕ್ಕು, ಪ್ರಾಣವಾಯು ಕೂಡಿ ತತ್ತ್ವ ಏಳು ತೂರ್ಯಾವಸ್ಥೆಯಲ್ಲಿ ಪ್ರೇರಿಸುವುದು: ಹಿಂದೆ ಹೇಳಿದ ತತ್ತ್ವ ಏಳು ಕೂಡಿ, ಹೃದಯಸ್ಥಾನದಲ್ಲಿ ಮಧ್ಯಮೆ, ಚಿತ್ತ - ಎರಡು ಕೂಡುತ್ತಿಹವು. ಆ ವೇಳೆಯಲ್ಲಿ ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಪ್ರೇರಿಸುವುದು. ಆ ಶುದ್ಧವಿದ್ಯಾತತ್ತ್ವ ಆತ್ಮಂಗೆ ಅರಿವನೆಬ್ಬಿಸುವುದು. ಇಚ್ಛಾಶಕ್ತಿ ಈಶ್ವರತತ್ತ್ವಮಂ ಪ್ರೇರಿಸುವುದು; ಈಶ್ವರತತ್ತ್ವ ರಾಗತತ್ತ್ವಮಂ ಪ್ರೇರಿಸುವುದು; ರಾಗತತ್ತ್ವ ಆತ್ಮಂಗೆ ಇಚ್ಛೆಯನೆಬ್ಬಿಸುವುದು. ಆಶಕ್ತಿ ಸಾದಾಖ್ಯತತ್ತ್ವಮಂ ಪ್ರೇರಿಸುವುದು; ಸಾದಾಖ್ಯತತ್ತ್ವ ಪ್ರಕ್ಕೃತಿತ್ತ್ವಮಂ ಪ್ರೇರಿಸುವುದು; ಪರಾಶಕ್ತಿ ಶಿವತತ್ತ್ವಮಂ ಪ್ರೇರಿಸುವುದು; ಶಿವತತ್ತ್ವ ಗುಣತತ್ತ್ವಮಂ ಪ್ರೇರಿಸುವುದು. ಇಂತು ಹದಿನೆಂಟು ತತ್ತ್ವ ಆವಾವವೆಂದಡೆ: ಪಂಚಶಕ್ತಿ ಹೊರಗಾಗಿ ಶಿವತತ್ತ್ವ ಐದು, ವಿದ್ಯಾತತ್ತ್ವ ಐದು, ಪ್ರಾಣವಾಯು ಒಂದು, ಪ್ರಕೃತಿ ಒಂದು, ಗುಣ ಮೂರು, ಚಿತ್ತ ಒಂದು, ಪುರುಷ ಒಂದು. ಇಂತು ತತ್ತ್ವ ಹದಿನೇಳು ಸುಷುಪ್ತಾವಸ್ಥೆಯಲ್ಲಿ ಅರುಹಿಸುವುವು. ಇನ್ನು ಸ್ವಪ್ನಾವಸ್ಥೆಯ ಕಂಠದಲ್ಲಿಹ ತತ್ತ್ವ: ಜ್ಞಾನೇಂದ್ರಿಯ ವಿಷಯ ಹತ್ತು, ಕರ್ಮೇಂದ್ರಿಯ ವಿಷಯ ಹತ್ತು, ಪ್ರಾಣವಾಯು ಉಳಿಯೆ, ವಾಯುಚಿತ್ತ ಉಳಿಯೆ, ತ್ರಿಕರಣ ಅಹಂಕಾರ ಮೂರು, ವೈಖರಿಯ ವಾಕ್ಕು ಒಂದು ಇಂತು ಇಪ್ಪತ್ತನಾಲ್ಕು ತತ್ತ್ವ. ಸುಷುಪ್ತಾವಸ್ಥೆಯಲ್ಲಿ ಹಿಂದೆ ಹೇಳಿದ ತತ್ತ್ವ ಹದಿನೇಳು ಕೂಡಿ ತತ್ತ್ವ ನಲವತ್ತೊಂದು ಸ್ವಪ್ನಾವಸ್ಥೆಯಲ್ಲಿ ಕೂಡಿಹವು. ಆಗ ತನ್ನೊಳಗೆ ಅರುಹಿಸುವ ಪ್ರಕಾರವೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ, ಹೃದಯ ಈ ಐದು. ಚಿತ್ತವನು ಆಕಾರ ಪ್ರೇರಿಸುವುದು. ಆ ಅಕಾರವನು ಬ್ರಹ್ಮ ಪ್ರೇರಿಸುವನು, ಬುದ್ಧಿಯನು ಉಕಾರ ಪ್ರೇರಿಸುವುದು; ಉಕಾರವನು ವಿಷ್ಣು ಪ್ರೇರಿಸುವನು, ಅಹಂಕಾರವನು ಮಕಾರ ಪ್ರೇರಿಸುವುದು; ಮಕಾರವನು ರುದ್ರ ಪ್ರೇರಿಸುವನು, ಮನವನು ಬಿಂದು ಪ್ರೇರಿಸುವುದು; ಬಿಂದುವನು ಈಶ್ವರ ಪ್ರೇರಿಸುವನು; ಹೃದಯವನು ನಾದ ಪ್ರೇರಿಸುವುದು; ನಾದವನು ಸದಾಶಿವ ಪ್ರೇರಿಸುವನು. ಈ ಹದಿನೈದು ತನ್ನೊಳಗೆ ಸೂಕ್ಷ ್ಮಶರೀರದಲ್ಲಿಹುದು. ...........ಗೀ(?) ಅಷ್ಟತನುವಿನಿಂದ ಸ್ವರ್ಗನರಕವನರಿವನು. ಮುಂದೆ ಜಾಗ್ರಾವಸ್ಥೆಯಲ್ಲಿ ಅರುಹಿಸುವ ತತ್ತ್ವ ಅವಾವವೆಂದಡೆ- ಭೂತ ಐದು, ಉಭಯೇಂದ್ರಿಯ ಹತ್ತು, ಭೂತಕಾರ್ಯ ಇಪ್ಪತ್ತೈದು, ನಾಡಿ ಹತ್ತು, ಅಂತು ತತ್ತ್ವ ನಲವತ್ತೊಂದು. ಅಂತು ಕೂಡಿ ತತ್ತ್ವ ತೊಂಬತ್ತೊಂದು. ಇಂತಿದು ಊಧ್ರ್ವಾವಸ್ಥೆ. ಇನ್ನು ಸಕಲಾವಸ್ಥೆಯೆಂತೆಂದಡೆ: ತೊಂಬತ್ತೊಂದು ತತ್ತ್ವ ಅವರಲ್ಲಿ ಪ್ರೇರಕತತ್ವವೊಂದು ಪ್ರೇರಿಸುವಲ್ಲಿ ಸಕಲಾವಸ್ಥೆ. ಅದು ಶಿವನನೂ ತನ್ನನೂ ಪಾಶಪಂಚಕವನು ಅರಿಯದೆ ಎಲ್ಲ ವಿಷಯಂಗಳನು ಅರಿವುತ್ತಿಹುದು. ಇನ್ನು ಮಧ್ಯಮಾವಸ್ಥೆಯೆಂತೆಂದಡೆ- ಹಿಂದೆ ಕಂಡವನ ಈಗಲೆಂದು ಅರಿಯಹುದೀಗ ಜಾಗ್ರ ಅತೀತ. ಹಿಂದೆ ಕಂಡವನ ಅರಿದ ಹಾಂಗಿಹುದೀಗ ಜಾಗ್ರ ತುರೀಯ. ಹಿಂದೆ ಕಂಡವನ ಮೆಲ್ಲನೆಚ್ಚತ್ತು ಅರಿವುದು ಜಾಗ್ರದ ಸುಷುಪ್ತಿ. ಹಿಂದೆ ಕಂಡವನ ಕಂಡಾಗಲೆ ಅರಿವುದು ಜಾಗ್ರದ ಸ್ವಪ್ನ. ಹಿಂದೆ ಕಂಡವನ ಹೆಸರು, ಇದ್ದ ಸ್ಥಲ, ಅವನ ಕಾಯಕ ಮುಂತಾಗಿ ಚೆನ್ನಾಗಿ ಅರಿವುದು ಜಾಗ್ರದ ಜಾಗ್ರ. ಅದೆಂತೆಂದಡೆ, ಜಾಗ್ರದಲ್ಲಿ ಪುರುಷತತ್ತ್ವದಲ್ಲಿ ಎಲ್ಲ ತತ್ತ್ವಗಳು ಕೂಡಿದ ಕಾರಣಂದ ತಾನೇನ ನೆನೆದಿದ್ದುದನು ಮರೆವುದು ಜಾಗ್ರ ಅತೀತ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಕೂಡಲು ನೆನೆದುದನು ಹೇಳಿಹೆನೆಂದಡೆ ತೋರುವ ಹಾಂಗೆ ಇಹುದು ತೋರದಿಹುದು ಜಾಗ್ರದ ತುರೀಯ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಚಿತ್ತವು ಕೂಡಲು ನೆನೆದುದನು ಮೆಲ್ಲನೆಚ್ಚತ್ತು ಅರಿದು ಹೇಳುವುದು ಜಾಗ್ರದ ಸುಷುಪ್ತಿ, ಆ ಪುರುಷತತ್ತ್ವದಲ್ಲಿ ಕರಣ ನಾಲ್ಕು, ಇಂದ್ರಿಯ ಹತ್ತು, ವಾಯು ಹತ್ತು, ವಿಷಯ ಹತ್ತು ಅಂತೂ ತತ್ತ್ವ ಮೂವತ್ತನಾಲ್ಕು ಕೂಡಲಾಗಿ, ತಾ ನೆನೆದುದನು ಇದ್ದುದನು ಚೆನ್ನಾಗಿ ಅರಿದು ವಿವರದಿಂದ ಹೇಳುವುದು ಇದು ಜಾಗ್ರದ ಜಾಗ್ರ. ಇಂತಿದು ಮಾಧ್ಯಮಾವಸ್ಥೆ. ಇನ್ನು ಕೇವಲಾವಸ್ಥೆಯೆಂತೆಂದಡೆ: ಶುದ್ಧತತ್ತ್ವ ವಿದ್ಯಾತತ್ತ್ವವನೆಲ್ಲವ ಬಿಟ್ಟು ಆಣವಮಲದಲ್ಲಿ ಆಣವಸ್ವರೂಪಾಗಿ ಕಣ್ಗತ್ತಲೆಯಲ್ಲಿ ಏನೂ ಕಾಣದ ಕಣ್ಣಿನ ಹಾಂಗೆ ಇದ್ದುದೀಗ ಕೇವಲಾವಸ್ಥೆ. ಇನ್ನು ಶುದ್ಧಾವಸ್ಥೆಯೆಂತೆಂದಡೆ: ಕರ್ಮಸಮಾನದಲ್ಲಿ ಶಕ್ತಿಪಾತವಾಗಿ,ತ್ರಿಪದಾರ್ಥಜ್ಞಾನವಾಗಿ, ದಿಟವೆಂಬಂತೆ ತೋರುತ್ತಿಹ ದೇಹಾಪ್ರಪಂಚುವನು ಸಟೆಯೆಂದು ಕಸವ ಕಳೆವ ಹಾಂಗೆ ಕಳೆದು, ತತ್ತ್ವಂಗಳೊಳಗೆ ಇದ್ದು ತತ್ತ್ವಂಗಳಿಗೆ ಅನ್ಯವಾಗಿ, ಆ ತತ್ತ್ವಂಗಳನು ಅರಿದ ಸಕಲಾವಸ್ಥೆಯೆಂಬ ಕೇವಲಾವಸ್ಥೆಯೆಂಬ ಈ ಎರಡು ಅವಸ್ಥೆಗಳೂ ತನ್ನನು ಶಿವನನು ಅರಿವುದಕ್ಕೆ ಪ್ರಯೋಜನವಲ್ಲವೆಂದು ಎರಡವಸ್ಥೆಯನೂ ಬಿಟ್ಟು ಸಕಲವನೂ ಹೊದ್ದದೆ ಕೇವಲವನೂ ಹೊದ್ದದೆ ತ್ರಾಸಿನ ಮುಳ್ಳು ನಿಂದ ಹಾಂಗೆ ನಿಂದುದು ಶುದ್ಧಾವಸ್ಥೆ. ಇದು ಶಿವನ ಶರಣರಿಗಲ್ಲದೆ ಇಲ್ಲ. ಇನ್ನು ನಿರ್ಮಲಾವಸ್ಥೆ ಎಂತೆಂದಡೆ- ಶಿವಜ್ಞಾನದಲ್ಲಿ ಬೋಧವನಳಿದು ಜ್ಞೇಯದೊಳು ಕೂಡಿಹ ಜೀವನ್ಮುಕ್ತರಿಗೆ ಪಂಚಾವಸ್ಥೆಗಳು. ಆ ಅವಸ್ಥೆಗಳಲ್ಲಿ ತತ್ತ್ವಗಳಾವಾವೆಂದಡೆ: ಶಿವತತ್ತ್ವ, ಶಕ್ತಿತತ್ತ್ವ, ಸಾದಾಖ್ಯತತ್ತ್ವ, ಈಶ್ವರತತ್ತ್ವ, ಶುದ್ಧ ವಿದ್ಯಾತತ್ತ್ವ ಈ ಐದು ಮೊದಲಾಗಿ ಪರಾ, ಆದಿ, ಇಚ್ಛೆ, ಜ್ಞಾನ, ಕ್ರಿಯೆಯೆಂಬ ಶಕ್ತಿ ಪಂಚಕಗಳು ಉಸುರಾಗಿ ಜಾಗ್ರಾವಸ್ಥೆಯಲ್ಲಿ ಅರಿವುತ್ತಿಹನು. ಕ್ರಿಯಾಶಕ್ತಿ ಶಕ್ತಿತತ್ತ್ವಮಂ ಬಿಟ್ಟು ಉಳಿದ ಶಕ್ತಿ ನಾಲ್ಕು ಒಡಲುಸುರಾಗಿ ಅರಿಯೆ ಸ್ವಪ್ನಾವಸ್ಥೆ. ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಮೂರರಲ್ಲಿ ಅರಿಯೆ ಸುಷುಪ್ತಾವಸ್ಥೆ. ಇಚ್ಛಾಶಕ್ತಿ ಈಶ್ವರತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಎರಡರಲ್ಲಿ ಅರಿವುದು ತೂರ್ಯಾವಸ್ಥೆ. ಆಶಕ್ತಿ ಸಾದಾಖ್ಯತತ್ತ್ವವೂ ಬಿಟ್ಟು ಕಳೆದು ಉಳಿದ ಪರಾಶಕ್ತಿ ಒಂದು ಶಿವತತ್ತ್ವ ಒಂದರಲ್ಲಿ ಅರಿಯೆ ನಿರ್ಮಲದ ಅತೀತಾವಸ್ಥೆ. ಇನ್ನು ಈ ಶಕ್ತಿ ಶಿವತತ್ತ್ವಂಗಳೆ ಒಡಲುಸುರಾಗಿ ಇದ್ದಲ್ಲಿ ಶಿವನಲ್ಲದೆ ಮತ್ತೊಂದು ಏನೂ ತೋರದು. ಅಂಥ ಜೀವನ್ಮುಕ್ತರು ನಿರ್ಮಲಜಾಗ್ರದಲ್ಲಿ ಎಂತು ಅರಿವುತ್ತಿಪ್ಪರೆಂದಡೆ ಆ ಪರಮಾವಸ್ಥೆಯನೂ ಅನುಭವದಲ್ಲಿ ಅರಿವುದು, ಮಲಪಂಚಕಗಳನು ಅರುಹಿಸುವ ಸದಮಲ ಶಿವಜ್ಞಾನ ಪರೆ ಮೊದಲಾದ ಪೂರ್ಣ ಬೋಧದಲ್ಲಿ ಕೂಡಿ ತಾನು ಇಲ್ಲದಿರುವಂಧು ಏನೂ ತೋರದ ಪೂರ್ಣ ಬೋಧವಾಗಿ ನಿಂದುದು ನಿರ್ಮಲಜಾಗ್ರ. ಇನ್ನು ಪರಾಶಕ್ತಿಯನೂ ಶಿವತತ್ತ್ವವನೂ ಮೀರಿ, ಪರದಲಿ ಬೆರೆದು, ಅದ್ವೆ ೈತವೂ ಅಲ್ಲದೆ, ದ್ವೆ ೈತವೂ ಅಲ್ಲದೆ, ದ್ವೆ ೈತಾದ್ವೆ ೈತವೂ ಅಲ್ಲದೆ ಇನತೇಜದಲ್ಲಿ ಕಣ್ಣು ತೇಜ ಕೂಡಿದ ಹಾಂಗೆ ಆಣವದ ಅಣುವಿನ ಹಾಂಗೆ ತಾನು ಇಲ್ಲದೆ ಇಹನು. ಇದು ಶಿವಾದ್ವೆ ೈತ. ಇಂತಲ್ಲದೆ ಆತ್ಮ ಆತ್ಮ ಕೆಟ್ಟಡೆ, ಆತ್ಮವರ್ಗ ಮುಕ್ತಿಸುಖವಿಲ್ಲ, ಅಳಿದ ಠಾವಿನಲ್ಲಿ ಹುಟ್ಟುವುದಾಗಿ, ಶಿವ ತಾನೆ ಆತ್ಮನಾಗಿ ಹುಟ್ಟುವನಹುದು: ಶಿವನಲ್ಲಿ ಹುಟ್ಟಿ ಮಲ ಉಳ್ಳದಹುಲ್ಲ. ಶಿವ ತಾನೆ ಹುಟ್ಟಿಸಿ ನರಕ - ಸ್ವರ್ಗದ ಮಾನವನಹನು, ಪಕ್ಷಪ್ಕಾಯಹನು, ನಿಃಕರುಣಿಯಹನು, ವಿಕಾರಿಯಹನು. ಶಿವನ್ಲ ಕೂಡದೆ ಬೇರಾಗಿ ಇಹನೆಂದಡೆ, ಮುಕ್ತಿಯೆಂಬ ಮಾತು ಇಲ್ಲವಹುದು. ಪಂಚಕೃತ್ಯವ ಮಾಡಲು ಕಾರಣವಿಲ್ಲ ಒಂದಾಗೆ! ಎರಡಾಗದೆ ಭೇದಾಭೇದವಾಗಿಹನೆಂದಡೆ ಶಿವಭಕ್ತಿಯನೂ ಶಿವಕ್ರಿಯೆಗಳನೂ ಮಾಡಿ ಶಿವನ ಕೂಡಿಹನೆಂದೆನ್ನಬೇಡ! ಮುನ್ನವೆ ಒಂದಾಗಿ ಇದ್ದನಾಗಿ, ಈ ಭೇದವ ತಿಳಿಯಬಲ್ಲಡೆ ಆತನೆ ಶರಣ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಪಂಚೇಂದ್ರಿಯಂಗಳು ಲಿಂಗಲಿಕ್ತದಲ್ಲಿಂದ ಹರು(ರಿ?)ವ ಸಂಚವನರಿಯದೆ ತೋಟದ ಕೊಜೆಯನಾಗಿ ಕರಣಂಗಳ ಮೇಲೆ ಮಣಿಹವಾಗಿ ಬಂದೆನಯ್ಯಾ ಯೋಗಿ ವಿಯೋಗಿಯಾಗಿ ಕುಂಡಲಿಯನೆ ಬಿಗಿದು ಇಂದ್ರಿಯ ಷಡಂಗವ ಮಡ(ಡಿರಿ)ದಲ್ಲಿ ಇಂದ್ರಿಯನಿಗ್ರಹವಂ ಮಾಡಿ ಮಂತ್ರ ಮಂತ್ರ ಮಥನದ ಹೋಮದ ಹೊಗೆಯ ತೆಗೆದು ಚಂದ್ರಸೂರ್ಯರನಾಣೆಯಿಟ್ಟಂತೆ ಒಂದೆ ಠಾವಿನಲ್ಲಿ ನಿಲಿಸಿದೆ ರುದ್ರಪದದಲ್ಲಿ_ ಇಂತು ಕ್ರೀಯಳಿದು ನಿಃಕ್ರಿಯದಲ್ಲಿ ನಿಂದ ಕೂಡಲಚೆನ್ನಸಂಗಯ್ಯನು ಎನ್ನ ಪ್ರಾಣನಾಥನೆಂದರಿದು ಎನ್ನ ಕಾಯವ ಬಾಧಿಪುದಂ ಬಿಟ್ಟು ನಿಜದಲ್ಲಿ ನಿಂದೆನು.
--------------
ಚನ್ನಬಸವಣ್ಣ
ಅಪರಾಧವ ಮಾಡಿದ ಭಟ ಅರಸಿಂಗೆ ಸಜ್ಜನನಪ್ಪನೆ ? ವ್ರತಭ್ರಷ್ಟ, ನೇಮಕ್ಕೆ ಹಾನಿಯಾದವ. ನಿತ್ಯಕೃತ್ಯವೆಂದು ಹಿಡಿದು ಬಿಟ್ಟವ. ತ್ರಿವಿಧಮಲವನೊಲ್ಲೆನೆಂದು ತೊಟ್ಟವ. ಇಂತೀ ಕಷ್ಟಗುಣದಲ್ಲಿ ನಡೆವ ದೃಷ್ಟಗಳ್ಳರ ನೋಡಾ. ಇದು ಬಾಯೊಳಗಣ ಹುಣ್ಣು ಹೇವರಿಸಿದ ಮತ್ತೆ ಇನ್ನಾವ ಠಾವಿನಲ್ಲಿ ನುಂಗುವ ? ಈ ಹೇಹ[ಯ]ವ ಬಿಡಿಸಾ ಎನಗೆ ಸಂಗನಬಸವಣ್ಣಾ. ಬ್ರಹ್ಮೇಶ್ವರಲಿಂಗವಿಪ್ಪ ಠಾವ ತೋರಾ.
--------------
ಬಾಹೂರ ಬೊಮ್ಮಣ್ಣ
ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು. ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ. ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು. ಗಾರಾದೆನಯ್ಯಾ ಈ ಹಾವ ಕಂಡು. ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ]. ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು. ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನುಭಾವಿಗೆ ಅಂಗಶೃಂಗಾರವುಂಟೆ ? ಅನುಭಾವಿಗೆ ಕಾಮಕ್ರೋಧವುಂಟೆ ? ಅನುಭಾವಿಗೆ ನಾಹಂ ಕೋಹಂ ಸೋಹಂ ಎಂಬ ಭ್ರಾಂತಿನ ಭ್ರಮೆಯುಂಟೆ ? ಅನುಭಾವಿಗೆ ನನ್ನವರು ತನ್ನವರೆಂಬ ಗನ್ನಗದಕಿನ ಮಾತುಂಟೆ ? ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ ತಮ್ಮ ಅನುಭಾವಂಗಳ ಬೀರುವರೆ ? ಅನುಭಾವಿಗಳ ಪರಿಯ ಹೇಳಿಹೆ ಕೇಳಿರಣ್ಣಾ ; ನೀರಮೇಲಣ ತೆಪ್ಪದಂತೆ, ಸಮುದ್ರದೊಳಗಣ ಬೆಂಗುಂಡಿನಂತೆ ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ. ವಚನಂಗಳ ಓದಿ ವಚನಂಗಳ ಕೇಳಿ ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ, ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು ಅನುಭಾವಿಗಳೆಂದಡೆ ಅಘೋನರಕ ತಪ್ಪದು ಕಾಣಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ದೊರೆಯವನ... ವನ್ನ ಬರವ, ದೊರೆಯವೆ ಇರಲಿಕೆ ಕಾಯ ಬವರಕ್ಕೆ ಗುರಿಯಹುದು. ಕುರುಹಿಗೆ ಬಾರದೆ ಆಲಿನಿಂದ ಠಾವಿನಲ್ಲಿ ನಿಜಗುಣನಿಹನು.
--------------
ನಿಜಗುಣಯೋಗಿ
ಊರನೆಲ್ಲ ಸುಟ್ಟು ಬೆಂಕಿಯಲ್ಲಿ ಕಾಯವನರಸಲತಿ ಚೋದ್ಯ ಕಾಣಾ. ಭೂತಾದಿ ಸಕಲಗುಣನಿಕರವನುರುಹಿ ಭಸ್ಮೀಕೃತವ ಮಾಡಿದ ಚಿದಾರ್ಯನ ಅಪೂರ್ವಪ್ರಕೃತಿಯನರಸಲದು ಅತಿಚೋದ್ಯ ನೋಡಾ. ತನ್ನ ಶೋಧನಮಾಡಿದ ಠಾವಿನಲ್ಲಿ ಅಶುದ್ಧವನರಸಿದರೆ ಭವಬಂಧನ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸೂತ್ರವನರಿಯದ ಭ್ರಾಂತರಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆತ್ಮ ನಿಸ್ಸಂಗತ್ವದ ಇರವು : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ಮಧ್ಯದಲ್ಲಿ ಪುದಿದಿಪ್ಪ ಆತ್ಮನ ಒಡೆಯನನರಿವಾಗ, ಪೃಥ್ವಿ ಪೃಥ್ವಿಯ ಕೂಡಿತ್ತು, ಅಪ್ಪು ಅಪ್ಪುವ ಕೂಡಿತ್ತು. ತೇಜ ತೇಜವ ಕೂಡಿತ್ತು, ವಾಯು ವಾಯುವ ಕೂಡಿತ್ತು. ಆಕಾಶ ಆಕಾಶವ ಕೂಡಿತ್ತು. ಆ ಪಂಚತತ್ವವು ಒಂದರೊಳಗೊಂದು ಕೂಡಿದಲ್ಲಿ, ಆತ್ಮನ ಪಾಪ ಪುಣ್ಯವಾವುದು ? ಬೇರೊಂದು ಠಾವಿನಲ್ಲಿ ನಿಂದು ಅರಿವ ತೆರನಾವುದು ? ಅದರ ಕುರುಹು ಕೇಳಿಹರೆಂದು ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ !
--------------
ವಚನಭಂಡಾರಿ ಶಾಂತರಸ
ಇನ್ನಷ್ಟು ... -->