ಕಣ್ಗೆಡಿಸಿತ್ತು ಮಾಯಾಕಾವಳ, ಕಾಲ್ಗೆಡಿಸಿತ್ತು ಮಾಯಾಕಾವಳ,
ತನುಗೆಡಿಸಿತ್ತು ಮಾಯಾಕಾವಳ.
ದಿನಕ್ಕೊಮ್ಮೆ ಕತ್ತಲೆಗವಿದರೆ,
ಎನಗೆ ಗಳಿಗೆ ಗಳಿಗೆಗೆ ಮಾಯಾತಮಂಧ ಕತ್ತಲೆ.
ಸಮುದ್ರಕ್ಕೆ ದಿನಕ್ಕೊಮ್ಮೆ ತೆರೆ ಬಂದರೆ,
ಎನ್ನ ಮನವಿಕಾರದ ತೆರೆ ವೇಳೆವೇಳೆಗೆ ಕವಿದವು.
ವರುಷವರುಷಕೊಂದು ಜೋಳದ ಬೆಳೆಯಾದರೆ
ಎನ್ನ ತನುವಿಕಾರದ ಚಿಂತೆ ಕರ್ಮದ ಬೆಳೆಯು
ಸದಾ ಬೆಳೆಯುತಿಪ್ಪುದು.
ಈ ಮಾಯಾತಮಂಧವೆಂಬ ವಿದ್ಥಿಗೆನ್ನ ಗುರಿಮಾಡಿ
ಬಿಟ್ಹೋಗದಿರು, ತೊಲಗದಿರು.
ಕಾಳಿ ಹೊಲೆಯನದಾದಡೇನು, ಬಿರಿದು ಒಡೆಯನದು.
ಕರ್ಮದ ಬಾಯಿ ಹೊಲೆಯಾದಡೇನು
ಸುಜ್ಞಾನದ ಮರ್ಮವನಿತ್ತು ಸಲಹಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.