ಅಥವಾ

ಒಟ್ಟು 39 ಕಡೆಗಳಲ್ಲಿ , 21 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು, ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ ಮೂರ್ತಿಗೊಳಿಸಿ_ ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂಧಿಸಿ ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ ಝಲ್ಲಿ ಪಟ್ಟೆಯನಲಂಕರಿಸಿ ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ ಮಹಾನಾದವೆಂಬ ಭೇರಿ ವಾದ್ಯಂಗಳಿಂ ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ_ಪಿಡಿಸಿ,_ ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ_ ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ ಪ್ರವೇಶವಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆರೈದು ಕಾಣುವುದಕ್ಕೆ ಸ್ಥಾಣು ಕರ್ತನಲ್ಲ. ನೋಯಿಸದೆ ಕಾಬುದಕ್ಕೆ ಆರಡಿಯಲ್ಲ. ನೋಯದೆ ಕೊಂಬುದಕ್ಕೆ ಪಿಪೀಲಿಕನಲ್ಲ, ಬಂಧಿಸಿ ಕಾಬುದಕ್ಕೆ ಚಂದನ ಶಿಲೆಯಲ್ಲ. ಭಕ್ತಿಯೆಂಬ ಅಂಗದ ಸತಿ ನಾನಾಗಿ, ವಿರಕ್ತಿಯೆಂಬ ಘನಲಿಂಗದ ಕೂಟಪುರುಷ ನೀನಾಗಿ, ಇಂತೀ ಉಭಯದಿಂದ ಒದಗಿದ ರೂಪು ನಾಮವ ಏನೆಂಬೆ ? ಅಲೇಖನಾದ ಶೂನ್ಯ ಕಲ್ಲಿನ ಹಂಗು ಬಿಡು, ಬೇಡಿಕೊಂಬೆ.
--------------
ವಚನಭಂಡಾರಿ ಶಾಂತರಸ
ಶರಣಲಿಂಗಸಂಬಂಧಿಯಾದಾತನು ತನ್ನಂಗದ ಲಿಂಗದಲ್ಲಿ ಗೋಳಕ ಕಟಿ ಭಿನ್ನವಾದಲ್ಲಿ ಒಡನೆ ಪ್ರಾಣವಂ ಬಿಡು[ವುದ]ಲ್ಲದೆ ಬಂಧಿಸಿ ಧರಿಸಿಕೊಂಡನಾದಡೆ, ಜನ್ಮಜನ್ಮಾಂತರ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪ್ರಸಾದ ಪ್ರಸಾದವೆಂದು ನುಡಿದುಕೊಂಡುಂಬಿರಿ. ಎಲ್ಲರಿಗೆಲ್ಲಿಹುದೊ ಶಿವಪ್ರಸಾದ ? ಇಂತಪ್ಪ ಪ್ರಸಾದದ ಘನವಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರೋ. ಪ್ರಸಾದವೆಂಬುದು, ಪರಾಪರನಾಮವುಳ್ಳ ಪರಮಾನಂದವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಮನಿರಂಜನ ಪರಬ್ರಹ್ಮವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಅಖಿಳಕೋಟಿ ಬ್ರಹ್ಮಾಂಡಗಳ ಗಮಿಸುವುದಕ್ಕೆ ಲಯಿಸುವುದಕ್ಕೆ ಮಾತೃಸ್ಥಾನವಾದ ಚಿತ್ಪ್ರಕಾಶವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಶಿವತತ್ವ ಪರಿಪೂರ್ಣತ್ವ ಪರಂಜ್ಯೋತಿ ಪರಮಪ್ರಕಾಶವೇ ಪ್ರಸಾದ ಕಾಣಿರೋ. ಇಂತಪ್ಪ ವಿಚಾರವ ತಿಳಿದು ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮರೆಂದೆನ್ನಬಹುದು. ಇಂತಪ್ಪ ನಿರ್ಣಯವ ತಿಳಿದು ಪ್ರಸಾದವ ಕೊಳಬಲ್ಲಡೆ ಪ್ರಸಾದಿಗಳೆನ್ನಬಹುದು; ಪ್ರಳಯವಿರಹಿತರೆಂದೆನ್ನಬಹುದು. ಸತ್‍ಸದ್ಭಕ್ತರೆಂದೆನ್ನಬಹುದು. ಇಂತೀ ಭೇದವ ತಿಳಿಯದೆ ನೀರು ಕೂಳಿಗೆ ಪಾದೋದಕ ಪ್ರಸಾದವೆಂದು ಒಡಲಹೊರವುದು ಪ್ರಸಾದವಲ್ಲ. ಅಂತಪ್ಪ ಘನಮಹಾಪ್ರಸಾದದ ಸಕೀಲಸಂಬಂಧವನರಿದು ನಿರ್ಧರಿಸಿದವರಾರೆಂದರೆ, ಹಿಂದಕ್ಕೆ ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರಾ ಎಪ್ಪತ್ತು ಪ್ರಮಥಗಣಂಗಳು ಕೊಂಡುದು ಇದೇ ಪ್ರಸಾದ. ಇನ್ನು ಮುಂದಿನವರಿಗಾದಡು ಇದೇ ಪ್ರಸಾದ. ಇಂತಪ್ಪ ಪರತತ್ವಪ್ರಸಾದಕ್ಕೆ ಸುಜ್ಞಾನಿಗಳಾಗಿ ಸತ್ಕ್ರಿಯಾ ಸಮ್ಯಜ್ಞಾನವೆಂಬ ಎರಡುಕಾಲಿಗೆ ಷಡ್ವಿಧಭಕ್ತಿ ಎಂಬ ಹಲ್ಲು ಜೋಡಿಸಿ, ಏಣಿಯ ಹಚ್ಚಿ, ನಿರ್ವಯಲಪದವನೈದಲರಿಯದೆ, ಅಹಂಕಾರ ಮಮಕಾರವೆಂಬ ಎರಡುಕಾಲಿಗೆ ಅಷ್ಟಮದವೆಂಬ ಹಲ್ಲುಜೋಡಿಸಿ ಸಪ್ತವ್ಯಸನಗಳೆಂಬ ಕೀಲುಜಡಿದು ಷಡ್ವರ್ಗಗಳೆಂಬ ಹಗ್ಗದ ಬಿರಿಯ ಬಂಧಿಸಿ, ಏಣಿಯ ಯಮಲೋಕಕ್ಕೆ ಹಚ್ಚಿ, ನರಕವ ಭುಂಜಿಸುವ ನರಕಜೀವಿಗಳಿಗೆ ಪ್ರಸಾದಿಗಳೆಂದಡೆ ನಿಮ್ಮ ಶರಣ ಚೆನ್ನಬಸವಣ್ಣ ಕಂಡು, ಇಂತಪ್ಪ ಮೂಳಹೊಲೆಯರ ಮೂಗಕೊಯ್ದು ಮೆಣಸಿನ ಹಿಟ್ಟು ತುಂಬಿ ಮೂಡಲದಿಕ್ಕಿಗೆ ಅಟ್ಟೆಂದ ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಪಿಡಿದು, ಮೈಯಲ್ಲಿ ಬೂದಿಯ ಧರಿಸಿ, ಗುಡ್ಡಗಂಹರ ಗುಹೆಗಳಲ್ಲಿ ಕಲ್ಲಪಡಿಯಲ್ಲಿ ಪರ್ಣಶಾಲೆಯ ಬಂಧಿಸಿ, ಅನ್ನ ಉದಕ ನಿದ್ರೆಯ ತೊರೆದು, ಪರ್ಣಾಹಾರವ ಭಕ್ಷಿಸಿ, ತನುವನೊಣಗಿಸಿ, ಮನವ ಬಳಲಿಸಿ, ಆತ್ಮನ ಸತ್ವಗುಂದಿ, ಚಳಿ ಮಳಿ ಗಾಳಿ ಬಿಸಿಲುಗಳಿಂದ, ಕಲ್ಲುಮರದಂತೆ ಕಷ್ಟಬಟ್ಟರೆ, ಇಂತಪ್ಪವರು ಲಿಂಗೈಕ್ಯವಾಗಲರಿಯರು ; ಕಡೆಯಲ್ಲಿ ಭವಭಾರಿಗಳು. ಮತ್ತೆಂತೆಂದಡೆ : ತಮ್ಮ ನಿಲವ ತಾವರಿಯದೆ ಎಲ್ಲಿ ಕುಳಿತರೂ ಇಲ್ಲ ; ಎಲ್ಲಿ ಹೋದಡೆಯೂ ಇಲ್ಲ. ಏನು ಮಾಡಿದಡೆಯು ವ್ಯರ್ಥವಲ್ಲದೆ ಸ್ವಾರ್ಥವಿಲ್ಲ. ಅದೇನು ಕಾರಣವೆಂದಡೆ : ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದು, ಆ ಘನಮಹಾ ಇಷ್ಟಬ್ರಹ್ಮದಲ್ಲಿ ಬೇರೆಯಲ್ಲದೆ ಕೂಡಬಲ್ಲರೆ ಅದೇ ಲಿಂಗೈಕ್ಯ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪೂರ್ವದ್ವಾರಮಂ ಬಂಧಿಸಿ ಅಧೋದ್ವಾರವ ಬಲಿದು ಊಧ್ರ್ವದ್ವಾರವ ತೆಗೆದು ಎವೆ ಹಳಚದೆ ಒಳಗೆ ನಿಮ್ಮ ನೋಡುತ್ತಿದ್ದೆನಯ್ಯಾ. ಬಂದುದ ಹೋದುದನರಿಯದೆ ನಿಮ್ಮ ನೋಡುತ್ತಿದ್ದೆನಯ್ಯಾ. ಮನ ನಿಂದುದು ನಿಮ್ಮಲ್ಲಿ. ಹೆರೆಹಿಂಗದ ಪರಮ ಸುಖ ದೊರೆಕೊಂಡಿತ್ತು. ಇನ್ನಂಜೆನಂಜೆ ಜನನ ಮರಣವೆರಡೂ ಹೊರಗಾದವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ನಿಜಸುಖ ಸಮನಿಸಿತ್ತಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ. ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ ದಾಸೋಹವ ಮಾಡುವುದೆ ಮಾಟ. ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
--------------
ನುಲಿಯ ಚಂದಯ್ಯ
ಕೊಲುವಂಗೆ ಜೀವದ ದಯವಿಲ್ಲ. ಪರಾಂಗನೆಯ ಬೆರಸುವಂಗೆ ಪರಮೇಶ್ವರನ ಒಲವರವಿಲ್ಲ. ಪರರುವ ಬಂಧಿಸಿ ಬೇಡುವಂಗೆ ಧನದ ಒಲವರವಿಲ್ಲ. ಪ್ರಾಣತ್ಯಾಗಿಗೆ ಕಾಣಿಯಾಚಿಯ ಕೇಣಸರವಿಲ್ಲ. ಅಘಹರನ ಶರಣನಾಗಿ, ಜಗವ ಬೋಧಿಸದೆ ಜಗಭರಿತನಾಗಿ ಇರಬೇಕು. ಆತ ಅಘಹರಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನೆ.
--------------
ಮನುಮುನಿ ಗುಮ್ಮಟದೇವ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಕಟ್ಟಿದೆ ಘಟದಟ್ಟೆಯ ಹೊಲಿದು, ಇಕ್ಕಿದೆ ಚತುರ್ವಿಧದ ನಾಲ್ಕು ಗುಂಟವ ಬಲಿದು. ಗುಂಟದ ದ್ವಾರದಲ್ಲಿ, ಉಭಯಸಂಚದ ಬಾರ ತೆಗೆದು, ತೊಡಕು ಬಂಧವನಿಕ್ಕಿ, ಅಡಿಯ ಬಿಡದಂತೆ, ಹಿಂದಣ ಮಡ ಮುಂದಣ ಉಂಗುಷ*ಕ್ಕೆ ಒಂದನೊಂದು ಜಾರದಂತೆ ಬಂಧಿಸಿ, ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ, ಕಾಮದ ಒಡಲ ಮಾದಿಗ ಬಂದೆ, ಘಟ ತೋಕುಳು ತೊಗಲು ಹದಬಂದಿತ್ತು. ಹೊತ್ತು ಹೋದಿಹಿತಣ್ಣಾ. ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ. ಒಪ್ಪಿದರಿರಲಿ, ಒಪ್ಪದಿದ್ದಡೆ ಮೂರು ಮುಖದಪ್ಪಗೆ ಕೊಟ್ಟೆಹೆ. ತಪ್ಪಡಿಯ ಮೆಟ್ಟೆ ಹೋಗುತ್ತಿದ್ದೇನೆ, ಚನ್ನಯ್ಯಪ್ರಿಯ ಧೂಳನ ಧೂಳಿಗೊಳಗಾಗಿ.
--------------
ಮಾದಾರ ಧೂಳಯ್ಯ
ಹಠಯೋಗ ಲಂಬಿಕಾಯೋಗ ಆತ್ಮಯೋಗ ಸಿದ್ಧಯೋಗ ಪಿಶಾಚಯೋಗ ಅಷ್ಟಾಂಗಯೋಗಂಗಳೆಂಬ ಷಡುವಿಧ ಕರ್ಮಯೋಗಂಗಳೊಳು ಶೋಷಣೆ, ದಾಹನೆ, ಪ್ಲಾವನೆ, ಚಾಲನೆ ಖಾಳಾಪಖಾಳಮಂ ಮಾಡಿ ತ್ರಿದೋಷಾದಿಗಳಂ ಪ್ರವರ್ತಿಸಲೀಯದೆ ಮಲಯುಗಮಂ ನೆಲೆಗೊಳ್ಳಲೀಯದೆ ಗಜಕರಣಂಗಳಿಂ ಪವನಧಾರಣೆಯಿಂ ಕಲ್ಪಯೋಗಂಗಳಿಂ ಮೂಲಿಕಾಬಂಧದಿಂ ಬಂಧಿಸಿ, ಘಟಮಂ ನಟಿಸುವುದು ಹಠಯೋಗ. ಪವನಾಭ್ಯಾಸಂಗಳಿಂದಭ್ಯಾಸಯೋಗ, ಕ್ರಮಕ್ರಮಂಗಳಿಂ ಜಿಹ್ವೆಯಂ ಬೆಳಸಿ ಹಠಸಮ್ಮಿಶ್ರದಿಂ ಷಡಾಧಾರದ ಪಶ್ಚಿಮಪಥವಿಡಿದು ಪ್ರಾಣಪವನನ ಮಸ್ತಕಕ್ಕೇರಿಸಿ ಜಿಹ್ವೆಯ ಸುಷುಮ್ನೆಯಲ್ಲಿಟ್ಟು ಸೋಮಪಾನಮಂ ಸೇವಿಸಿ ಸಪ್ತಸ್ಥಾನ ನವಚಕ್ರದಲ್ಲಿ ನಿಂದು ಮುಕ್ತ್ಯಂಬಿಕೆಯೊಡಗೂಡುನವುದು ಲಂಫಬಿಕಾಯೋಗ. ಆತ್ಮನಂ ಭೇದಿಸಿ ಪ್ರಾಣವಾಯು ನಾಡಿಗಳನರಿತು ಹಿಡಿವ ಭೇದಮಂ ತಿಳಿದು, ತೆಗೆವ ಬಿಗಿವ ಸಂಚಮಂ ಕಂಡು ಒಡ್ಡಿಯಾಣಬಂಧ ಜಾಳಾಂಧರಬಂಧ ಠಾಣಿಕಾಮುದ್ರೆ ಭ್ರೂಸಂಕೋಚ ಬ್ರಹ್ಮಸ್ಥಾನದುತ್ತರನಾಡಿಯಿಂದ ಆತ್ಮನನಾತ್ಮಲಿಂಗದಲ್ಲಿ ಸಂಯೋಗಮಾಡುವದಾತ್ಮಯೋಗ. ಅಂಜನಾಸಿದ್ಧಿ ಘುಟಿಕಾಸಿದ್ಧಿ ಶರೀರಸಿದ್ಧಿ ಪರಕಾಯಪ್ರವೇಶ ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ ಅಷ್ಟಮಹಾಸಿದ್ಧಿಯಂ ಪಡೆದು, ರಸಸಿದ್ಧಿ ಪಾಷಾಣಸಿದ್ಧಿ ಲೋಹಸಿದ್ಧಿ ವಯಸ್ತಂಭ ಸ್ವರವಂಚನೆ ಕಾಯವಂಚನೆ ವೇದಶಾಸ್ತ್ರಸಿದ್ಧಿ ಭರತಸಿದ್ಧಿ ಗಾಂಧರ್ವಸಿದ್ಧಿ ಕಿನ್ನರಸಿದ್ಧಿ ವಾಚಾಸಿದ್ಧಿ ಖೇಚರತ್ವ ಮಹೇಂದ್ರಜಾಲದೊಳಗಾದ Zõ್ಞಷಷ್ಟಿವಿದ್ಯಾಸಿದ್ಧಿ ಅಣಿಮಾದಿ ಮಹಿಮಾ ದಿ ಈಶಿತ್ವ ವಶಿತ್ವ ಪ್ರಾಪ್ತಿ ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯಸಿದ್ಧಿ ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ಧಿಬುದ್ಧಿಗಳಿಂ ಲಿಂಗವನರಿಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ. ಪಿಶಾಚತ್ವದಿಂ ತ್ರಿಭುವನಿಯಂ ಸೇವಿಸಿ ಅಮರಿಗಳಂ ಸೇವಿಸಿ ಅಮರೀ ಭ್ರಮರಾದೇವಿ ಅಮರೀ ತ್ರಿಪುರಾಂತಕೀ ಅಮರೀ ಕಾಲಸಂಹಾರೀ ಅಮರೀ ತ್ರೈಲೋಕ್ಯಸಾಧನೀ ಇಂತೆಂಬ ಶ್ರುತಿಗೇಳ್ದು, ವಜ್ರಿ ಅಮರಿಗಳನಂಗಲೇಪಂ ಮಾಡಿ ಶುಕ್ಲಮಂ ಸೇವಿಸಿ ಭೂತಸಂಕುಳಂಗಳೊಡನಾಡಿ ಅಜ್ಞಾನವಶದಿಂ ಲಿಂಗವನೇನೆಂದರಿಯದ ಕ್ಷೀಣವೃತ್ತಿಯ ಪಿಶಾಚತ್ವದಿಂದಿಪ್ಪುದು ಪಿಶಾಚಯೋಗ. ಹಿಂಸೆಯನುಳಿದ ±õ್ಞಚತ್ವದಿಂ ಬ್ರಹ್ಮಚರ್ಯದಿಂ ತತ್ವಂಗಳನಾಹ್ವಾನಿಸುತ್ತಿಪ್ಪುದು ಯಮಯೋಗ. ವಿವೇಕ ವಿಚಾರದಿಂ ತತ್ವಂಗಳನರಿತು ಆಚರಿಸಿ ಅಡಿುಟ್ಟು ನಡೆವುದು ನಿಯಮಯೋಗ. ಪದ್ಮಾಸನ ಸಿದ್ಧಾಸನ ಬದ್ಧಾಸನ ವಜ್ರಾಸನ ಮಯೂರಾಸನ ಕೂರ್ಮಾಸನ ಕಕ್ಕುಟಾಸನ ಅರ್ಧಾಸನ ವೀರಾಸನ ಶ್ಮಶಾನಾಸನ ಹಸ್ತಾಸನ ಮಸ್ತಕಾಸನ ಕುಠಾರಾಸನ ಸಿಂಹಾಸನ ಮಧ್ಯಲವಣಿ ಶಿರೋಲವಣಿಯೊಳಗಾದ ಆಸನಬಂಧಂಗಳಿಂದಾಚರಿಸುವುದಾಸನಯೋಗ. ತತ್ವ ಮೂವತ್ತಾರಕ್ಕೆ ಪ್ರಣವ ಮೂಲವೆಂದರಿತು ಷಡಾಧಾರಚಕ್ರಂಗಳ ಅಕ್ಷರವರ್ಣಂಗಳಿಂ ತಿಳಿದು ಮೇರಣ ಅಜನಾಳ ಬ್ರಹ್ಮಸ್ಥಾನ ತುರೀಯಾತೀತದ ಓಂಕಾರಮಪ್ಪ ಪ್ರಣವವನರಿವುದು ಪ್ರಾಣಾಯಾಮಯೋಗ. ಪ್ರತ್ಯಾಹಾರಯೋಗಕ್ರಮಗಳಿಂದ ಸತ್ಪ್ರಣವವನಾಹಾರಿಸುವುದು ಪ್ರತ್ಯಾಹಾರಯೋಗ. ಪ್ರಣವಕ್ಕೆ ಅತೀತವಾದ ಪರಶಿವಮೂರ್ತಿ ಮನದಲ್ಲಿ ಚಿಗುರ್ತು ಅಂತರಂಗದಲ್ಲಿ ಧ್ಯಾನಾರೂಢನಾಗಿ ಧ್ಯಾನಿಸುವುದು ಧ್ಯಾನಯೋಗ. ಆ ಪರಶಿವಮೂರ್ತಿಯೆ ಇಷ್ಟಲಿಂಗವೆಂಬ ಭಾವನೆಯಿಂದ ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದಿಷ್ಟಲಿಂಗಧಾರಣದಿಂದ ಇಪ್ಪುದು ಧಾರಣಯೋಗ. ಅಪ್ರಶಿಖಾಸ್ಥನದಿಂದುತ್ತರವಿಭಾಗೆಯ ಅಜಪೆಯಿಂದತ್ತಣ ಚಿತ್‍ಪ್ರಭೆಯಿಂದುಜ್ವಳತೇಜ ಸ್ವಯಂಪ್ರಕಾಶ ದಿವ್ಯತೇಜದಿಂದೊಪ್ಪಿಪ್ಪ ಮಹಾಘನ ಪರವಸ್ತುವನಿದಿರಿಟ್ಟೀಕ್ಷಿಸಿ ಆಮಹಾಪ್ರಕಾಶದಲ್ಲಿ ಒಡಗೂಡಿ ತಾನು ತಾನಾಗಿ ಜಗದ್ವಿಹರಣೀಯನೇನೆಂದರಿಯದ ಪರಮಕಾಷೆ*ಯ ಸಮಾಧಿಯಲ್ಲಿಪ್ಪುದು ಸಮಾಧಿಯೋಗ. ಇಂತಪ್ಪ ಅಷ್ಟಾಂಗವೊಳಗಾದ ಷಡುವಿಧಕರ್ಮಯೋಗಂಗಳಂ ಮೆಟ್ಟಿ ಚತುರ್ವಿಧಪದವಿಯಂ ಹೊದ್ದದೆ ಫಲಭೋಗಂಗಳಂ ಮುಟ್ಟದೆ ಖ್ಯಾತಿ ಲಾಭ ಪೂಜೆಯಂ ತಟ್ಟದೆ ಇಹಪರಂಗಳಂ ಸಾರದೆ, ಭವಬಂಧನಕ್ಕೆ ಬಾರದೆ ಗೆಲ್ಲ ಸೋಲಕ್ಕೆ ಹೋರದೆ, ತನುವಿನಿಚ್ಛೆಯಲ್ಲಿ ಸುಳಿಯದೆ ಮನದಿಚ್ಛೆಯಲ್ಲಿ ಹರಿಯದೆ, ಪ್ರಾಣನ ಸುಳುಹಿನಲ್ಲಿ ಸಿಕ್ಕದೆ ಪ್ರಕೃತಿವಶಕ್ಕೊಳಗಾಗದೆ, ಇಂದ್ರಿಯಂಗಳಿಗೆ ಮೈಯೊಡ್ಡದೆ ಸರ್ವಸಂದೇಹನಿವೃತ್ತಿಯಾಗಿ, ನಿಂದಲ್ಲಿ ನಿರಾಳ, ನಡೆದಲ್ಲಿ ನಿರ್ಗಮನಿ, ನುಡಿದಲ್ಲಿ ನಿಶ್ಶಬ್ದಿ, ಸುಳಿದಲ್ಲಿ ಒಡಲಿಲ್ಲದುಪಾಧಿಯರತು ಅಂಗವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪರಿಪೂರ್ಣವಾಗಿ ನಿಜಲಿಂಗೈಕ್ಯವಾಗಿ ನಿಜಸುಖಸಂಬಂಧಿಯಾಗಿ ನಿಜಯೋಗ ಸನ್ನಿಹಿತವಾಗಿ ಕಾಯವಿದ್ದಂತೆ ಬಯಲಾಗಿಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಕೆಚ್ಚ[ಲಿನ] ಹಾಲಲ್ಲಿ ತುಪ್ಪವಿಪ್ಪ ಭೇದವ ಬಲ್ಲಡೆ ಬಲ್ಲರೆಂಬೆ. ಬೆಂಕಿಯೊಳಗಣ ಬೇಗೆಯ ಬಲ್ಲಡೆ ಬಲ್ಲರೆಂಬೆ. ವಾಯುವಿನೊಳಗಿರ್ಪ ಸಂಚಾರವ ಬಲ್ಲಡೆ ಬಲ್ಲರೆಂಬೆ. ಬೀಜದೊಳಗಿರ್ಪ [ರ]ಸಾಂಕುರ[ವ] ಬಲ್ಲಡೆ ಬಲ್ಲರೆಂಬೆ. ಕಾಯದೊಳಗಿರ್ಪ ಪ್ರಾಣನ ನೆಲೆಯ ಬಲ್ಲಡೆ ಬಲ್ಲರೆಂಬೆ. ಚಂದನದೊಳಗಿಪ್ಪ ಗಂಧವ ಬಂಧಿಸಿ ಹಿಡಿಯಬಲ್ಲಡೆ. ಲಿಂಗವಿಪ್ಪೆಡೆಯ ಬಲ್ಲರೆಂಬೆ. ಶಿಲೆಯೊಳಗಿಪ್ಪ ಕುಲಹೀನನ ಬೆಳಗಿ ತೋರುವ [ಆ]ಮಲಿನ[ರ] ಮುಖವ ಕಂಡು ಮತ್ತೆ ದಿಂಗು[ವಿ]ಡಿಯಲೇಕೊ? ದಿಂ[ಗ ವಿ]ಡಿದು ಭಂಡರಹ ಲಂಡರಿಗೇಕೆ ಲಿಂಗದ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೂರಾರು ಬಾಗಿಲಲ್ಲಿ ಹೋಹ ಕರುವ ಹುರಿಯಿಲ್ಲದ ಕಣ್ಣಿಯಲ್ಲಿ ಬಂಧಿಸಿ, ಅನ್ನ ಉದಕವಿಲ್ಲದೆ ಬದುಕಿ, ಕಂಡವರ ನುಂಗಿ, ಅಂಗೈಯಲ್ಲಿ ಅಡಗಿತ್ತು. ಈ ಭೇದವ ತಿಳಿಯಬಲ್ಲರೆ ಶಿವಶರಣನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯಲ್ಲಿ ಲಿಂಗಸ್ಥಾಪನೆಯಿಲ್ಲದೆ ಶ್ಮಶಾನಭೂಮಿಯಲ್ಲಿ ಶವವ ಸಂಚಗರಿಸಲಾಗದು ಎಂಬಿರಿ. ಭೂಮಿಯ ಶುದ್ಧಮಾಡಿ ಸಂಚಗರಿಸುವ ಕ್ರಮವಂ ಪೇಳ್ವೆ, ಅದೆಂತೆಂದೊಡೆ : ಆರೂ ಇಲ್ಲದ ಅರಣ್ಯದ ಬೆಟ್ಟವನೊಡದು, ಚಂದ್ರ ಸೂರ್ಯ ಅಗ್ನಿ ಪ್ರಕಾಶವನುಳ್ಳ ನಾನಾ ವರ್ಣದ ಕಲ್ಲು ತಂದು, ಸಪ್ತಚರಣದ ಭೂಮಿಯ ಮೂರಾರು ಕೋಣೆಗೆ ಹಾಕಿ, ಹಂಚು ಹರಳು ಎಲುವು ನೋಡಿ ತೆಗೆದು, ಹುಲ್ಲುಕೊಯ್ದು ಭೂಮಿಯ ಹಸನ ಮಾಡಿ, ಕಳ್ಳಿ ಮುಳ್ಳ ಹಚ್ಚದೆ ಬೇಲಿಯ ಬಂಧಿಸಿ, ಆ ನಿರ್ಮಳವಾದ ಭೂಮಿಯಲ್ಲಿ ಶವಸಂಚಗರಿಸಿದಾಕ್ಷಣವೇ ಬಯಲಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಿವಿನ ಕುರುಹನರಿಯದೆ ತನುವ ಕರಗಿಸಿ ಮನವ ಬಳಲಿಸಿದರೆ ಏನು ಪ್ರಯೋಜನವೋ? ಇಂದ್ರಿಯವ ನಿಗ್ರಹ ಮಾಡಿ ವಿಷಯಂಗಳ ಬಂಧಿಸಿ ಆತ್ಮಂಗೆ ಬಂಧನವ ಮಾಡಿದರೆ ಆತ್ಮದ್ರೋಹ ಕಾಣಿಭೋ. ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ. ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು. ಮನದ ಮಲಿನ ಹಿಂಗದನ್ನಕ್ಕರ ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->