ಅಥವಾ

ಒಟ್ಟು 35 ಕಡೆಗಳಲ್ಲಿ , 18 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಸ್ಥಲದ ಲಿಂಗ ಕೈಸೇರಿ ಇರು ತಿರಲನ್ಯ ಭಯಗಳುಂಟೆ ಗುರುವೆ ? ಪದ :ಕಂಠೀರ[ವ]ನಿಹ ವನದೊಳು ಕರಿಯಭಯ ವುಂಟೇ ಇನ್ನಾ ತೆರದೊಳು ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ ತುಂಟಕದ ಭಯಗಳುಂಟೆ ಗುರವೆ ? | 1 | ಕರಿಯನೇರಿ ಪೋಗುತಿರಲು ಶುನಿ ಬಗುಳುತ ಬರುತಿರುವ ಭಯಗಳುಂಟೆ ನೋಡಾ. ಹರನೆನ್ನ ಕರದೊಳಿರಲು ಪಂಚೇಂದ್ರಿ ದುರಿತ ಭಯದಂಜಿಕೆಯುಂಟೆ ಗುರುವೆ ? | 2 | ದ್ಯುಮಣಿಗುರಿಯ ಭಯಗಳುಂಟೆ ? ಅಷ್ಟದಳ ಕಮಲದೊಳು ಸುಳಿವ ಹಂಸ ತಾನೆ ಭ್ರಮರನಂತೆ ಕರಕಮಲದ ಲಿಂಗವ ತಾ ಭ್ರಮಿಸೆರಗೆ ಭಯಗಳುಂಟೆ ಗುರುವೆ ? | 3 | ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು ಬರುವ ಬ್ಥೀತಿಯುಂಟೆ ನೋಡಾ. ಪರಂಜ್ಯೋತಿರ್ಲಿಂಗಯೆನ್ನ ಅಂಗಾಕಾರದೆ ಇರೆ ಮಾಯದ ಬ್ಥೀತಿಯುಂಟೆ ಗುರುವೆ ? | 4 | ಉರಗ ಮುಟ್ಟಲು ಓರ್ವನ ತನು ವಿಷದಿ ಭರಿತವಾದಂತೆ ಶರಣ ಶರೀರವನು ಸೊಮ್ಮು ಸೋಂಕಿ ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ ? | 5 | ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ ಝಗಝಗಿಸುತಿದೆ ಕೋಯೆಂದು ನುಡಿದು ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ | 6
--------------
ಹೇಮಗಲ್ಲ ಹಂಪ
ವಿರಕ್ತನಾದೆನೆಂಬರು, ವಿರಕ್ತನ ಬಗೆಯ ಪೇಳ್ವೆ. ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿ ಇರಲಾಗದು. ವಿರಕ್ತನಾದಡೆ ಊರನಾಶ್ರಯಿಸಿ ಮನೆಮನೆಯ ತಿರುಗಿ ಬ್ಥಿಕ್ಷವ ಬೇಡಲಾಗದು. ವಿರಕ್ತನಾದಡೆ ದೇಶ ಬಿಟ್ಟು ಪರದೇಶಕ್ಕೆ ಹೋಗಲಾಗದು. ವಿರಕ್ತನಾದಡೆ ಅರಣ್ಯಪರ್ವತದಲ್ಲಿರಲಾಗದು. ವಿರಕ್ತನಾದಡೆ ಮೇರುಪರ್ವತದ ಕಮಲಸರೋವರದಲ್ಲಿರಲಾಗದು. ವಿರಕ್ತನಾದಡೆ ಊರೂರು ತಿರುಗಲಾಗದು. ಪುಣ್ಯದೇಶಕ್ಕೆ ಹೋಗಲಾಗದು. ಇಂತಿಲ್ಲದಿರಬಲ್ಲರೆ ವಿರಕ್ತನೆಂಬೆನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುನ್ನಿನ ಪರಿಯಂತುಟಲ್ಲ. ಆದಡೆಂತಹುದು? ಆಗದಡೆಂತಾಯಿತ್ತು ? (ಆದಡಿಂತಹುದೆ ? ಆಗದಡಿಂತಾಯಿತ್ತು) ಹಲವು ಪರಿ ಬಗೆಯ ಬಯಕೆ ತಾರ್ಕಣೆಯಾದಂತೆ ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ದನು.
--------------
ಅಲ್ಲಮಪ್ರಭುದೇವರು
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ? ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ, ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ? ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ | ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮøತಂ || ಇಂತೆಂದುದಾಗಿ, ಅರಿಯಬಾರದು, ಕುರುಹ ತೋರದು, ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ.
--------------
ಹಾವಿನಹಾಳ ಕಲ್ಲಯ್ಯ
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶುದ್ಧದಲ್ಲಿ ಪ್ರವೇಶಿಸಿ, ಸಿದ್ಧದಲ್ಲಿ ಪ್ರಕಟಿಸಿ, ಪ್ರಸಿದ್ಧದಲ್ಲಿ ಭೇದಿಸಿಯಿಪ್ಪ ಸಜ್ಜನ ಶುದ್ಧಶಿವಾಚಾರಂಗೆ ನಿತ್ಯ ಲಿಂಗಾರ್ಚನೆ, ನಿತ್ಯ ಜಂಗಮಾರ್ಚನೆ, ನಿತ್ಯ ಕೊಂಬುದು ಪಾದೋದಕ, ನಿತ್ಯ ಕೊಂಬುದು ಪ್ರಸಾದ. ತಾಂ ನಿತ್ಯನಾಗಿ ಅನ್ಯದೈವಕ್ಕೆರಗ, ಅನನ್ಯತವ ಬಗೆಯ, ಪಾದೋದಕಕ್ಕಲ್ಲದೆ ಬಾಯ್ದೆರೆಯ, ಪ್ರಸಾದವನಲ್ಲದೆ ಗ್ರಹಿಸ, ಪಾದೋದಕ ಪ್ರಸಾದವಲ್ಲದೆ ಕೊಂಡಡೆ ಅನಾಚಾರ ಹೊದ್ದೀತೆಂದು ಕಪಿಲಸಿದ್ಧಮಲ್ಲಿಕಾರ್ಜುನನ ಏಕೀಭವಿಸಿದ ಲಿಂಗತ್ರಯದಲ್ಲಿ ನಿತ್ಯ ಪ್ರಸಾದಿ
--------------
ಸಿದ್ಧರಾಮೇಶ್ವರ
ಕೇಳು ಕೇಳಯ್ಯ ಪ್ರಾಣನಾಥನೆ, ಎನ್ನ ಪ್ರಾಣಪೂಜೆಯ ಬಗೆಯ ಬಣ್ಣಿಸುತಿರ್ಪೆನು ಅವಧರಿಸಯ್ಯಾ ಸ್ವಾಮಿ. ಎನ್ನ ಕಾಯವೆ ಕೈಲಾಸವಯ್ಯ ನಿಮಗೆ. ಎನ್ನ ಮನವೆ ಶೃಂಗಾರಮಂಟಪವಯ್ಯ ನಿಮಗೆ. ಎನ್ನ ಭಾವವೆ ಶೂನ್ಯಸಿಂಹಾಸನವಯ್ಯಾ ನಿಮಗೆ. ಎನ್ನ ಪರಮಾನಂದವೆ ಮಜ್ಜನವಯ್ಯಾ ನಿಮಗೆ. ಎನ್ನ ಪರಮಶಾಂತಿಯೆ ಗಂಧವಯ್ಯಾ ನಿಮಗೆ. ಎನ್ನ ನಿರಹಂಕಾರವೆ ಅಕ್ಷತೆಯಯ್ಯಾ ನಿಮಗೆ. ಎನ್ನ ಅವಿರಳವೆ ಪುಷ್ಪದ ಮಾಲೆಯಯ್ಯಾ ನಿಮಗೆ. ಎನ್ನ ಸ್ವಾನುಭಾವವೆ ಧೂಪವಯ್ಯಾ ನಿಮಗೆ. ಎನ್ನ ದಿವ್ಯಜ್ಞಾನವೆ ದೀಪದ ಗಡಣವಯ್ಯಾ ನಿಮಗೆ. ಎನ್ನ ಸುಚರಿತ್ರವೆ ಸರ್ವವಸ್ತ್ರವಯ್ಯಾ ನಿಮಗೆ. ಎನ್ನ ಸುವಿವೇಕವೆ ಸಕಲಾಭರಣವಯ್ಯಾ ನಿಮಗೆ. ಎನ್ನ ಆತ್ಮವೆ ಪರಮಾಮೃತದ ನೈವೇದ್ಯವಯ್ಯಾ ನಿಮಗೆ. ಎನ್ನ ಪರಿಣಾಮವೆ ಹಸ್ತೋದಕವಯ್ಯಾ ನಿಮಗೆ. ಎನ್ನ ಸದ್ಭಕ್ತಿರಾಗರಸವೆ ತಾಂಬೂಲವಯ್ಯಾ ನಿಮಗೆ. ಎನ್ನ ನಿರ್ಮಲವೆ ದರ್ಪಣವಯ್ಯಾ ನಿಮಗೆ. ಎನ್ನ ಸತ್ಯವೆ ಘಂಟೆಯಯ್ಯಾ ನಿಮಗೆ. ಎನ್ನ ಸದಾನಂದವೆ ಶಂಖವಾದ್ಯವಯ್ಯಾ ನಿಮಗೆ. ಎನ್ನ ಸಮತೆಯೆ ಚಾಮರವಯ್ಯಾ ನಿಮಗೆ. ಎನ್ನ ಕ್ಷಮೆಯೆ ಆಲವಟ್ಟವಯ್ಯಾ ನಿಮಗೆ. ಎನ್ನ ಸುಮನವೆ ವಾಹನವಯ್ಯಾ ನಿಮಗೆ. ಎನ್ನ ಸುಬುದ್ಧಿಯೆ ಜಗಜಂಪನವಯ್ಯಾ ನಿಮಗೆ. ಎನ್ನ ಸುಚಿತ್ತವೆ ನಂದಿಧ್ವಜವಯ್ಯಾ ನಿಮಗೆ. ಎನ್ನ ಸುಜ್ಞಾನವೆ ಶೃಂಗಾರದ ಪಲ್ಲಕ್ಕಿಯಯ್ಯಾ ನಿಮಗೆ. ಎನ್ನ ನುಡಿಗಡಣವೆ ಮಂಗಳಸ್ತೋತ್ರವಯ್ಯಾ ನಿಮಗೆ. ಎನ್ನ ಸುಳುಹಿನ ಸಂಚಾರವೆ ಪ್ರದಕ್ಷಿಣೆಯಯ್ಯಾ ನಿಮಗೆ. ಎನ್ನ ಮಂತ್ರೋಚ್ಚರಣವೆ ನಮಸ್ಕಾರವಯ್ಯಾ ನಿಮಗೆ. ಎನ್ನ ಸಕಲಕರಣಂಗಳಿಂದೆ ಮಾಡುವ ಸೇವೆಯೆ ನಾನಾ ತೆರದ ಉಪಚಾರವಯ್ಯಾ ನಿಮಗೆ. ಇಂತೀ ಪ್ರಾಣಪೂಜೆಯ ನಿರಂತರ ತೆರಹಿಲ್ಲದೆ ನಿಮಗಳವಡಿಸಿ ನಾ ನಿಮ್ಮೊಳಡಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು ಕಂಡ ಕಂಡ ಪುರುಷನನಪ್ಪಲು ಅಪ್ಪಿನ ಸುಖ ಸಂತಾನವಾಯಿತ್ತೆನಗೆ. ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು ಕರಣಿಕ ಹೇಳಿದನಯ್ಯಾ ಮೂವತ್ತಾರು ಕುಮಾರರನು. ಆ ಕುಮಾರನ ಕೂಟದಲ್ಲಿರಲು, ಹೆತ್ತ ಮಕ್ಕಳ ಕೂಟವೆಂದಡೆ, ಹುಟ್ಟಿದರಯ್ಯಾ, ಇನ್ನೂರ ಹದಿನಾರು ರಾಜಕುಮಾರರು. ಆ ಕುಮಾರರ ಚೆಲುವಿಕೆಯ ಕಂಡು, ಆ ಚೆಲುವಿಕೆಯ ಮಕ್ಕಳ ನೆರೆಯಲು ಪತಿವ್ರತೆಯೆನಿಸಿಕೊಂಡು, ಒಬ್ಬನೆ ಪುರುಷನೆಂದಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಹೆಂಡ್ಕ
--------------
ಸಿದ್ಧರಾಮೇಶ್ವರ
ಪಾದೋದಕ ಪ್ರಸಾದಗಳೆಂದೆಂಬಿರಿ, ಪಾದೋದಕ ಪ್ರಸಾದದ ಬಗೆಯ ಪೇಳ್ವೆ. ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ, ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ, ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ, ಕೆರೆ ಬಾವಿ ಹಳ್ಳ ಕೊಳ್ಳ ನದಿ ಮೊದಲಾದವುಗಳ ನೀರ ತಂದು- ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ, ಆ ಜಂಗಮದ ಉಭಯಪಾದದ ಮೇಲೆರೆದು, ಪಾದೋದಕವೇ ಪರಮತೀರ್ಥವೆಂದು ಲಿಂಗ ಮುಂತಾಗಿ ಸೇವಿಸಿ, ನವಖಂಡಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ, ತಂದು ಜಂಗಮಕ್ಕೆ ಎಡೆಮಾಡಿ, ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ, ಕೊಂಡು ಸಲಿಸುವರಯ್ಯ. ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ. ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು, ಮುಕ್ತಿದೋರದು. ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ, ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ. ಇಂತಪ್ಪವರಿಗೆ ಭವ ಹಿಂಗುವದು, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಈ ಪಾದೋದಕದ ಭೇದವ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕಡುಪಾತಕರಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತಿ ಜ್ಞಾನವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ `ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ. ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ ನಿಜಮುಕ್ತಿಯನರಸುವ ಅಣ್ಣಗಳಿರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಉಂಡು ಕೊಂಡಾಡುವನ್ನ ಬರ, ವೇಶಿಯ ಮನೆಯ ದಾಸಿಯ [ಬರಿಹುಂಡವೆಂಬೆ], ಈಶ್ವರನ ರೂಪ ತೊಟ್ಟು ಕೈಯಾಂತು ಬೇಡಿದಡೆ, ವೇಷದ ಮರೆಯ ಬಲೆಯ ಬೀಸುವ ಬೇಟೆಗಾರನೆಂಬೆ, ಆಗಮವ ಕಲಿತು ಅವರಿಗೆ ಆಗಹೇಳಿ, ಹೋಗಿನ ದ್ರವ್ಯಕ್ಕೆ ಕೈಯಾನುವ ಈ ಲಾಗಿನ ಅಣ್ಣಗಳ ಬಗೆಯ ಭಕ್ತಿಯಲ್ಲಿ ಇದ್ದೆಹೆನೆಂಬವರಿಗೆ ಸತ್ತು ಸಾಯದ ಕುದುರೆಗೆ ಹುಲ್ಲನಡಕುವಂತಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಲೆ ಮನ ಬುದ್ಧಿ ಚಿತ್ತ ಅಹಂಕಾರವೆಂಬ, ಎನ್ನ ಚತುರ್ವಿಧ ಮಂತ್ರಿ ಪ್ರಧಾನರು ಕೇಳಿರಯ್ಯ, ನಾನು ಕೆಟ್ಟು ಭ್ರಷ್ಟನಾಗಿ ಹೋದ ಕರ್ಮದ ಅಂಡಲೆಯ ಬಗೆಯ. ನಾನು ಸ್ವರ್ಗ ಮತ್ರ್ಯ ಪಾತಾಳದೊಳಗುಳ್ಳ ಭೋಗರಾಜ್ಯಕ್ಕೆ ಅರಸಾಗಿ ಅನಂತಕಾಲ ಪಟ್ಟವನಾಳಿ ಎನ್ನ ಚತುರಂಗಬಲಕ್ಕೆ ಬೇಡಿದ ಪಡಿ ಕಂದಾಯಮಂ ಕೊಟ್ಟು ಕೊಟ್ಟು ನಷ್ಟವಾಗಿ ಎನಗೆ ಎರಡುನಲವತ್ತೆರಡುಲಕ್ಷದಭವರಾಟಳದ ಋಣಬಿದ್ದಿತ. ಆ ಋಣಕ್ಕಂಜಿ ಭೋಗರಾಜ್ಯಮಂ ಬಿಟ್ಟು ದರಿದ್ರನಾದೆನು. ಎನಗೆ ನೀವು ಮಾಡುವ ರಾಜಕಾರ್ಯದ ಮಣಿಹ ನಿಮಗೆ ತೆಗೆಯಿತು. ಎನ್ನ ನಂಬಿ ಕೆಡಬೇಡ, ಕೆಡಬೇಡ. ನಿಮ್ಮ ಪೂರ್ವಾಶ್ರಯಕ್ಕೆ ನೀವು ಹೋಗಿರೆಲೆ. ಅಜ್ಞಾನತಮಕ್ಕೆ ಜ್ಯೋತಿಃಪ್ರಕಾಶವನುಳ್ಳ ಸಮ್ಯಜ್ಞಾನವೇ ನೀನು ಕೇಳಯ್ಯ. ಆತ್ಮನು ಜ್ಞಾನಸ್ವರೂಪನೆಂದು ವೇದಾಗಮಂಗಳು ಸ್ಮೃತಿ ಸಾರುತ್ತಿವೆ. ನಾನು ಜೀವತ್ವಮಂ ಅಳಿದು ಶರಣತ್ವಮಂ ಕೈವಿಡಿದೆ. ಎನ್ನೊಳಗೆ ನೀನು, ನನೆಯೊಳಗಣ ಪರಿಮಳದಂತೆ ಹುದುಗಿಪ್ಪೆಯಾಗಿ, ನೀನೂ ನಾನೂ, ಗೋಳಕಾಕಾರಸ್ವರೂಪವಾದ ನಿಷ್ಕಲಬ್ರಹ್ಮದಲ್ಲಿ, ಉದಯವಾದ ಸಹೋದರರು. ಎಂಟುಬೀದಿಯ ಪಟ್ಟಣದ ಚೌದಾರಿಯ ಏಕಾಂತವೀಥಿಯ, ಸುವರ್ಣವರ್ಣದ ಸಿಂಹಾಸನದ ಮೇಲಿಪ್ಪ, ಮನೋನಾಥನೆನಗೆ ಕಾಣಿಸಿ, ``ನಿನ್ನ ಶ್ರೀ ಚರಣಮಂ ಎಂದೆಂದೂ ಪೂಜೆಮಾಡುವ ಭೃತ್ಯ'ನೆಂದು, ಭಯಭಕ್ತಿಯಿಂದ ಬಣ್ಣಿಸಿ, ಎನ್ನ ಮಾಯಾಪಾಶಮಂ ಸುಡುವಂತೆ ಛಲವನ್ನುಂಟು ಮಾಡು. ಚಿದಾಕಾಶದಲ್ಲಿ, ಆರು ಮೂರಾಗಿ, ಮೂರು ಒಂದಾಗಿ, ಎರಡುವೀಥಿಯ ಮಾಣಿಕ್ಯಪುರದ ಸಂಗಮಸ್ಥಾನವೆಂಬ, ಅರಮನೆಯಲ್ಲಿ ನೆಲೆಸಿಪ್ಪ ಮಹಾರಾಯನ ಮುಂದೆ, ಎನ್ನನಿಕ್ಕಿ ``ನಿನ್ನ ಆದಿ ಅನಾದಿಯ ಹಳೆಯ' ನೆಂದು ಬಿನ್ನಪಂಗೈದು ಕರುಣಾರಸಮಂ ಬೀರಿಸಿ, ಎನಗೆ ಮುಕ್ತಿರಾಜ್ಯಮಂ ಕೊಡು'ವಂತೆ ಸಂಧಾನಮಂ ಮಾಡು. ಆ ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿಸಿ ಅಭಯ ಹಸ್ತಮಂ ಕೊಡಿಸಿ ಎನ್ನ ಎಂಬತ್ತುನಾಲ್ಕು ಲಕ್ಷ ಭವರಾಟಾಳದ ಋಣವ ತಿದ್ದುವಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕರಿದೈದು ಬಿಳಿದೈದು ಭಾಸುರವೈದು ಹದಿನೈದು ಬಗೆಯ ಕರಣವ ಸುಟ್ಟು, ಸುರತ ಸುಗ್ಗಿ, ಕಾಲಕಾಮಾದಿಗಳೈವರ ಗೆದ್ದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಧರೆಯಾಗಿ ನಿಂದು, ಹರಿಯಾಗಿ ಹರಿದು, ಉರಿಯಾಗಿ ಉಲಿವ ಅಂಗನೆ, ಬ್ರಹ್ಮ ವಿಷ್ಣು ರುದ್ರರ ನುಂಗಿ ಜಾಲವ ಬೀಸುತಿಪ್ಪಳು ನೋಡಾ ! ಆಕೆಯ ಮಹೇಂದ್ರಜಾಲದ ತೆರೆಯೊಳು ಅನುಮಿಷ ಮೊದಲು ತಲೆಯಿಲ್ಲದ ಏಡಿಯ ನುಂಗಿ, ಆ ಏಡಿಯ ಬೆನ್ನಿನಲ್ಲಿ ಆನೆ ಎಂಟು, ಶ್ವಾನ ಐದು, ಆರು ಮೊಸಳೆಯ ನುಂಗಿ, ಏಳು ಬಗೆಯ ಮಡುವಿಗೆ ಬಿದ್ದು, ತಮ್ಮ ತಾವೆ ಒದ್ದಾಡುತಿವೆ ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಸಮಾಧಿ ಸಮಾಧಿ ಎಂಬರಯ್ಯಾ, ಸಮಾಧಿಯ ಬಗೆಯ ಪೇಳ್ವೆ. ಅದೆಂತೆಂದಡೆ: ಪಂಚಭೂತಮಿಶ್ರವಾದ ದೇಹವೆಂಬುವುದೆ ಸಮಾಧಿ. ಅಂತಪ್ಪ ದೇಹದ ಪೃಥ್ವಿತತ್ವದಲ್ಲಿ ನಕಾರಪ್ರಣವ ಸ್ವಾಯತ. ಅಪ್ಪುತತ್ವದಲ್ಲಿ ಮಕಾರಪ್ರಣವ ಸ್ವಾಯತ. ತೇಜತತ್ವದಲ್ಲಿ ಶಿಕಾರಪ್ರಣವ ಸ್ವಾಯತ. ವಾಯುತತ್ವದಲ್ಲಿ ವಕಾರಪ್ರಣವ ಸ್ವಾಯತ. ಆಕಾಶತತ್ವದಲ್ಲಿ ಯಕಾರಪ್ರಣವ ಸ್ವಾಯತ. ಆತ್ಮದಲ್ಲಿ ಓಂಕಾರಪ್ರಣವ ಸ್ವಾಯತ. ಮತ್ತಂ, ಬಲಪಾದದಲ್ಲಿ ನಕಾರ, ಎಡಪಾದದಲ್ಲಿ ಮಕಾರ, ಮಧ್ಯನಾಭಿಸ್ಥಾನದಲ್ಲಿ ಶಿಕಾರ, ಬಲಹಸ್ತದಲ್ಲಿ ವಕಾರ, ಎಡಹಸ್ತದಲ್ಲಿ ಯಕಾರ, ಮಸ್ತಕದಲ್ಲಿ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಸ್ಥೂಲತನುವಿನಲ್ಲಿ ಬಕಾರಪ್ರಣವ ಸ್ವಾಯತ. ಸೂಕ್ಷ್ಮತನುವಿನಲ್ಲಿ ನಕಾರಪ್ರಣವ ಸ್ವಾಯತ. ಕಾರಣತನುವಿನಲ್ಲಿ ವಕಾರಪ್ರಣವ ಸ್ವಾಯತ. ಮತ್ತಂ, ವಿಶ್ವನಲ್ಲಿ ಅಕಾರಪ್ರಣವಸಂಬಂಧ. ತೈಜಸನಲ್ಲಿ ಉಕಾರಪ್ರಣವಸಂಬಂಧ. ಪ್ರಾಜ್ಞದಲ್ಲಿ ಮಕಾರಪ್ರಣವಸಂಬಂಧ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಬ್ರಹ್ಮರಂಧ್ರದಲ್ಲಿ ಬಕಾರ, ಅಕಾರ, ವಕಾರ, ಶಿಖೆಯಲ್ಲಿ ಕ್ಷಕಾರ, ಉಕಾರ, ಸಕಾರ. ಪಶ್ಚಿಮದಲ್ಲಿ ಹಕಾರ, ಮಕಾರ, ವಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದಲ್ಲಿ ಓಂಕಾರ, ಎಡಭಾಗದಲ್ಲಿ ಮಕಾರ, ಮುಂಭಾಗದಲ್ಲಿ ಅಕಾರ, ಹಿಂಭಾಗದಲ್ಲಿ ಮಕಾರ, ಊಧ್ರ್ವಭಾಗದಲ್ಲಿ ಹಕಾರ. ಮತ್ತಂ, ಬಲಹಸ್ತದ ಮಧ್ಯದಲ್ಲಿ ಓಂಕಾರ, ಹೆಬ್ಬೆರಳಿನಲ್ಲಿ ಯಕಾರ, ಉಳಿದ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಗಳು. ಆ ಹಸ್ತದ ಮೇಲುಭಾಗದಲ್ಲಿ ಅಕಾರ, ಮುಂಗೈಯಲಿ ಬಕಾರ, ಮೊಳಕೈಯಲ್ಲಿ ಉಕಾರ, ರಟ್ಟೆಯಲ್ಲಿ ಸಕಾರ, ಭುಜದಲ್ಲಿ ಮಕಾರ, ಹೆಗಲಲ್ಲಿ ವಕಾರ, ಇಂತೀ ಪರಿಯಲ್ಲಿ ಉಭಯ ಹಸ್ತ ತೋಳಿನಲ್ಲಿ ಹಿಂದೆ ಹೇಳಿದ ಪಂಚಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಉಭಯ ತಳಪಾದದಲ್ಲಿ ಓಂಕಾರ, ಉಭಯ ಪಾದಾಂಗುಷ*ದಲ್ಲಿ ಯಕಾರ, ಉಭಯ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಂಗಳು. ಉಭಯ ಪಾದದ ಮೇಲುಭಾಗದಲ್ಲಿ ಅಕಾರ, ಉಭಯ ಪಾದದ ಬಾಹ್ಯ ಹರಡಿನಲ್ಲಿ ಉಕಾರ, ಉಭಯ ಪಾದದಂತರ ಹರಡಿನಲ್ಲಿ ಬಕಾರ. ಉಭಯ ಪಾದದ ಹಿಂಬಡದಲ್ಲಿ ಮಕಾರ, ಉಭಯ ಕಣಕಾಲಲ್ಲಿ ಸಕಾರ, ಮೊಳಕಾಲಲ್ಲಿ ಪಕಾರ, ಉಭಯ ಕಿರಿದೊಡೆಯಲ್ಲಿ ಅಕಾರ. ಹಿರಿದೊಡೆಯಲ್ಲಿ ಉಕಾರ, ಉಭಯಾಂಗದಲ್ಲಿ ಮಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಉಭಯ ಬರಕಿಯಲ್ಲಿ ಓಂ ನಮಃಶಿವಾಯ ಎಂಬ ಮೂಲ ಷಡಕ್ಷರ. ಉಭಯ ಮೊಲೆಯಲ್ಲಿ ಓಂಕಾರ, ಉಭಯ ಬಗಲಲ್ಲಿ ಬಕಾರ, ಕಕ್ಷೆಯಲ್ಲಿ ಅಕಾರ, ಹೃದಯದಲ್ಲಿ ಉಕಾರ, ಕಂಠದಲ್ಲಿ ಮಕಾರ, ಹೆಡಕಿನಲ್ಲಿ ಸಕಾರ, ಹೆಡಕಿನ ಎಡಬಲದಲ್ಲಿ ವಕಾರ, ಉಭಯ ಕರ್ಣದ ಮಧ್ಯದಲ್ಲಿ ಓಂಕಾರ, ಹಾಲಿಯಲ್ಲಿ ಯಕಾರ, ಕಿರಿಹಾಲಿಯಲ್ಲಿ ವಕಾರ, ಕರ್ಣದ ಊಧ್ರ್ವಭಾಗದಲ್ಲಿ ಶಿಕಾರ, ಬಲ ಎಡಭಾಗದಲ್ಲಿ ಮಕಾರ, ಕರ್ಣದ ಹಿಂಭಾಗದಲ್ಲಿ ನಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದ ನಯನದಲ್ಲಿ ಅಕಾರ, ಬಕಾರ. ಎಡಭಾಗದ ನಯನದಲ್ಲಿ ಉಕಾರ, ಸಕಾರ, ಉಭಯ ನಯನದ ಮಧ್ಯದಲ್ಲಿ ಮಕಾರ, ವಕಾರ, ಉಭಯ ಗಲ್ಲದಲ್ಲಿ ಓಂಕಾರ. ನಾಶಿಕದ ತುದಿಯಲ್ಲಿ ಮಕಾರ. ಬಲಭಾಗದ ಹೊಳ್ಳಿಯಲ್ಲಿ ಅಕಾರ, ಎಡಭಾಗದ ಹೊಳ್ಳಿಯಲ್ಲಿ ಉಕಾರ. ಮೇಲುಭಾಗದ ತುಟಿಯಲ್ಲಿ ಬಕಾರ. ಕೆಳಭಾಗದ ತುಟಿಯಲ್ಲಿ ಸಕಾರ. ಉಭಯಮಧ್ಯದಲ್ಲಿ ವಕಾರ. ನಾಲಿಗೆಯಲ್ಲಿ ಓಂ ನಮಃಶಿವಾಯವೆಂಬ ಮೂಲ ಷಡಕ್ಷರ. ದಂತಪಂಕ್ತಿಗಳೇ ಹಂ ಕ್ಷಂ ಎಂಬ ಶೂನ್ಯಪ್ರಣಮಂಗಳು. ಚರ್ಮವೆ ವಕಾರ, ಅಸ್ತಿಯೇ ಮಕಾರ, ಮಾಂಸವೇ ಶಿಕಾರ, ಮಜ್ಜವೇ ವಕಾರ, ರಕ್ತವೇ ಯಕಾರ, ಪ್ರಾಣವೇ ಓಂಕಾರ. ರೇಚಕ ಪೂರಕ ಕುಂಭಕವೆಂಬ ಸ್ವರದಲ್ಲಿ ಅಕಾರ, ಉಕಾರ, ಮಕಾರ. ಮತ್ತಂ, ಅಪಾದಮಸ್ತಕದ ಪರಿಯಂತರವು ರೋಮನಾಳಂಗಳಲ್ಲಿ ನಿರಂಜನ ಮೂಲಪ್ರಣಮವೆಂಬ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣಮಸಂಬಂಧವಾದುದೇ ಸಮಾಧಿ. ಇಂತೀ ಕ್ರಮದಲ್ಲಿ ಕೀಯವಿಟ್ಟು ಬಾಹ್ಯದಲ್ಲಿ ದೇಹಕ್ಕೆ ಪ್ರಣಮಸಂಬಂಧಿಸಿದಡೆಯು ಆ ದೇಹವು ಭೂಮಿಯ ಮರೆಯಲ್ಲಿ ಒಂದು ಕ್ಷಣಕ್ಕೆ ನಿರ್ವಯಲಾಗುವುದು. ಇಂತೀ ಕ್ರಮದಲ್ಲಿ ಅಂತರಂಗದಲ್ಲಿ ಪ್ರಾಣಕ್ಕೆ ಪ್ರಣಮಸಂಬಂಧವ ಸುಜ್ಞಾನ ಕ್ರಿಯೆಗಳಿಂದ ಸಂಬಂಧಿಸಿದಡೆಯು ದೇಹದಲ್ಲಿರಲಿಕ್ಕೆಯು ಜೀವನ್ಮುಕ್ತನಾಗುವನು. ಅದೆಂತೆಂದಡೆ: ಚಿದಂಶಿಕನಾದ ಜ್ಞಾನಕಲಾತ್ಮಂಗೆ ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿ ಮಾಡಿ, ಶ್ರೀಗುರುಕಾರುಣ್ಯವ ಹಡೆದು ಅಂಗದ ಮೇಲೆ ಇಷ್ಟಲಿಂಗವು ಧಾರಣವಾದಾಕ್ಷಣವೇ ಹಿಂದೆ ಹೇಳಿದ ನಿರ್ಣಯದಲ್ಲಿ ಸರ್ವಾಂಗದಲ್ಲಿ ಮೂಲಪ್ರಣಮಾದಿ ಕ್ಷಕಾರ ಪ್ರಣಮಾಂತ್ಯವಾದ ಸಕಲನಿಃಷ್ಕಲಪ್ರಣಮಂಗಳು ಬೆಲ್ಲದ ಕುಳ್ಳಿಗೆ ಇರುವೆ ಮುತ್ತಿದಂತೆ ತನ್ನಿಂದ ತಾನೆ ಸಂಬಂಧವಾಗಿ ಜೀವನ್ಮುಕ್ತನಾಗಿ ಲೀಲೆಯಲ್ಲಿರುವ ಪರಿಯಂತರದಲ್ಲಿ ಉದಕದೊಳಗೆ ಇರ್ಪ ತಾವರೆಯಂತೆ ನಿರ್ಲೇಪನಾಗಿ ಪ್ರಪಂಚವನಾಚರಿಸುವನು. ಈ ಭೇದವನು ಶಿವಜ್ಞಾನಿ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->