ಅಥವಾ

ಒಟ್ಟು 97 ಕಡೆಗಳಲ್ಲಿ , 6 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಹರ ಶಿವಶಿವ ಜಯಜ ಕರುಣಾಕರ ಮತ್ಪ್ರಾಣಕಳಾಚೈತನ್ಯಸ್ವರೂಪ ಮಹಾಪ್ರಭು ಶ್ರೀಗುರುಲಿಂಗಜಂಗಮದ ಮಹಾಪ್ರಸಾದವೆ ಪರಬ್ರಹ್ಮ ಪರಮಕಳಾಚೈತನ್ಯ ಚಿತ್ಸ್ವರೂಪ ಅನಾದಿ ನಿಷ್ಕಲ ಪರಶಿವಲಿಂಗಸ್ವರೂಪ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿಜಚೈತನ್ಯಸ್ವರೂಪು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಶಿವಾನುಭಾವದ ಶುದ್ಧಿನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರುಪಮ ನಿರಾಲಂಬ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿತ್ಯ ಚಿದೈಶ್ವರ್ಯ ಚಿತ್ಕಾಂತಿ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿಜಮೋಕ್ಷದ ಕಣಿ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಭವರೋಗವೈದ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರ್ಗುಣ ನಿಷ್ಕಳಂಕ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಅಪ್ರಮಾಣ ಅಗೋಚರ ನಿಜಚಿನ್ಮಯರೂಪು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಅಗಣಿತ ನಿರಾತಂಕ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರಾವಯ ನಿಶ್ಶೂನ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರ್ಮಾಯ ನಿಷ್ಕಾಮ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಚಿದ್ಬೆಳಗು ತಾನೆ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಚಿದ್ಘನಮಹಾಲಿಂಗ ತಾನೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ ಭಕ್ತನು ಚಿದ್ರುದ್ರಾಕ್ಷಿಯ ಧರಿಸಿ ಮಂತ್ರಧ್ಯಾನವ ಮಾಡಬೇಕಾದ ನಿಮಿತ್ತ, ಪ್ರಥಮದಲ್ಲಿ ರುದ್ರಾಕ್ಷಿಮಣಿಗಳ ಕ್ರಮವ ಮಾಡದೆ, ಅವರು ಹೇಳಿದಂತೆ ಕ್ರಯವ ಕೊಟ್ಟು ಮುಖಭಿನ್ನವಾದುದನುಳಿದು, ಸ್ವಚ್ಛವಾದ ರುದ್ರಾಕ್ಷಿಗಳ ಶ್ರೀಗುರುಲಿಂಗಜಂಗಮದ ಸನ್ನಿಧಿಗೆ ತಂದು ವೃತ್ತಸ್ಥಾನದ ಪರಿಯಂತರವು ಧೂಳಪಾದೋದಕವ ಮಾಡಿ, ಆ ರುದ್ರಾಕ್ಷಿಯ ಪೂರ್ವಾಶ್ರಯವ ಕಳೆದು, ಲಿಂಗಧಾರಕಭಕ್ತರಿಂದ ಗುರುಪಾದೋದಕ ಮೊದಲಾಗಿ ಶಿವಪಂಚಾಮೃತದಿಂದ ಇಪ್ಪತ್ತೊಂದು ಪೂಜೆಯ ಮಾಡಿಸಿ ಆಮೇಲೆ ಶ್ರೀಗುರುಲಿಂಗಜಂಗಮದ ಪಾದಪೂಜೆಗೆ ಧರಿಸಿ, ಆಮೇಲೆ ಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಂದ ದಯಚಿತ್ತವ ಪಡೆದು, ಶರಣುಹೊಕ್ಕು ಮಹಾಪ್ರಸಾದವೆಂದು ಬೆಸಗೊಂಡು, ಆ ಕರುಣಾಕಟಾಕ್ಷ ಮಾಲೆಗಳ ಭಿನ್ನವಿಟ್ಟು ಅರ್ಚಿಸದೆ, ಅಭಿನ್ನಸ್ವರೂಪು ಮುಂದುಗೊಂಡು ಬಹುಸುಯಿಧಾನದಿಂದ ತನ್ನ ತೊಡೆಯ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಜ್ಞಾನಪ್ರಕಾಶವೆಂದು ಭಾವಿಸಿ ತನ್ನ ತಾನರ್ಚಿಸಿ, ಮಂತ್ರಧ್ಯಾನಾರೂಢನಾಗಿ ತತ್ತತ್ ಸ್ಥಾನದಲ್ಲಿ ಧರಿಸುವುದಯ್ಯಾ. ಇಂತು ವಿಭೂತಿ ರುದ್ರಾಕ್ಷಿಯ ಧರಿಸಿ ಲಿಂಗನಿಷ್ಠಾಪರನಾದ ಭಕ್ತನು ಸ್ಥಲಮೆಟ್ಟಿಗೆಯಿಂದ ಆಯಾಯ ಮಂತ್ರವ ಹೇಳುವುದಯ್ಯಾ. ಅದರ ವಿಚಾರವೆಂತೆಂದಡೆ: ಕ್ರಿಯಾದೀಕ್ಷಾಯುಕ್ತನಾದ ಉಪಾಧಿಭಕ್ತಂಗೆ ಗುರುಮಂತ್ರವ ಹೇಳುವುದಯ್ಯಾ. ಕ್ರಿಯಾದೀಕ್ಷೆಯ ಪಡೆದು ಗುರುಲಿಂಗಜಂಗಮದಲ್ಲಿ ಅರ್ಥಪ್ರಾಣಾಭಿಮಾನಂಗ? ನಿರ್ವಂಚಕತ್ವದಿಂದ ಸಮರ್ಪಿಸಿ ನಡೆನುಡಿ ಸಂಪನ್ನನಾದ ನಿರುಪಾಧಿಭಕ್ತಂಗೆ ಲಿಂಗಮಂತ್ರವ ಹೇ?ುವುದಯ್ಯಾ ಇವರಿಬ್ಬರ ಆಚರಣೆಯ ಪಡೆದು ಸಮಸ್ತ ಭೋಗಾದಿಗಳು ನೀಗಿಸಿ ಸಚ್ಚಿದಾನಂದನಾದ ಸಹಜಭಕ್ತಂಗೆ ಜಂಗಮಮಂತ್ರವ ಹೇ?ುವುದಯ್ಯಾ. ಆ ಮಂತ್ರಂಗಳಾವುವೆಂದಡೆ: ಶಕ್ತಿಪ್ರಣವ ಹನ್ನೆರಡು ಗುರುಮಂತ್ರವೆನಿಸುವುದಯ್ಯಾ, ಶಿವಪ್ರಣವ ಹನ್ನೆರಡು ಲಿಂಗಮಂತ್ರವೆನಿಸುವುದಯ್ಯಾ, ಶಿವಶಕ್ತಿರಹಿತವಾದ ಹನ್ನೆರಡು ಜಂಗಮಮಂತ್ರವೆನಿಸುವುದಯ್ಯಾ. ಇಂತು ವಿಚಾರದಿಂದ ಉಪಾಧಿ ನಿರುಪಾಧಿ ಸಹಜಭಕ್ತ ಮಹೇಶ್ವರರಾಚರಿಸುವುದಯ್ಯಾ. ಇನ್ನು ನಿರಾಭಾರಿ ವೀರಶೈವನಿರ್ವಾಣ ಸದ್ಭಕ್ತಜಂಗಮಗಣಂಗಳು ಶುದ್ಧಪ್ರಸಾದಪ್ರಣವ ಹನ್ನೆರಡು, ಸಿದ್ಧಪ್ರಸಾದಪ್ರಣವ ಹನ್ನೆರಡು, ಪ್ರಸಿದ್ಧಪ್ರಸಾದಪ್ರಣವ ಹನ್ನೆರಡು, ಇಂತು ವಿಚಾರದಿಂದ ಮೂವತ್ತಾರು ಪ್ರಣವವನೊಡಗೂಡಿ, ಶುದ್ಧಪ್ರಸಾದಪ್ರಣವ ಆಚಾರಲಿಂಗ ಗುರುಲಿಂಗ ಇಷ್ಟಲಿಂಗ ಪರಿಯಂತರ ತ್ರಿವಿಧ ಲಿಂಗಕ್ಕೆಂದು ಮಾಡುವುದಯ್ಯಾ. ಸಿದ್ಧಪ್ರಸಾದಪ್ರಣವ ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಪ್ರಸಿದ್ಧಪ್ರಸಾದಪ್ರಣವ ಪ್ರಸಾದಲಿಂಗ ಮಹಾಲಿಂಗ ಭಾವಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಹೀಗೆ ಹರುಕಿಲ್ಲದೆ ಸ್ಥಲಮೆಟ್ಟಿಗೆಯಿಂದ ಕರುಣಿಸಿದ ಗುರುವಿಂಗೆ ಬೆಸಗೊಂಡ ಶಿಷ್ಯೋತ್ತಮಂಗೆ. ಆಯಾಯ ಲಿಂಗಪ್ರಸಾದ ಒದಗುವುದೆಂದಾಂತ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ ಭೃಂಗ ಕೀಡಿಯೋಪಾದಿಯಲ್ಲಿ ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಬ್ಥಿನ್ನಭೇದವನಳಿದು ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ, ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು, ಶರಣೆಂದು ಮನ್ನಣೆಯ ಕೊಡದೆ, ಭೂತಸೋಂಕಿದ ಮನುಜನೋಪಾದಿಯಲ್ಲಿ ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ, ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠದೀಕ್ಷೆ. ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಧೂಳಪಾದೋದಕದಿಂದ ಸಮಸ್ತಲೋಕದ ಪ್ರಾಣಿಗಳನೆಲ್ಲವ ಭವತ್ವವಳಿದು ಭೃತ್ಯಭಕ್ತಿಮಾರ್ಗವ ತೋರುವುದಯ್ಯ, ಶ್ರೀಗುರುಲಿಂಗಜಂಗಮದ ದೀಕ್ಷಾಪಾದೋದಕದಿಂದ ಸಮಸ್ತ ಪದಾರ್ಥಂಗಳೆಲ್ಲವ ಶಿವಗಣಪದಕ್ಕೆ ಯೋಗ್ಯವಾಗುವಂತೆ ಮಾಡುವುದಯ್ಯ. ಶ್ರೀಗುರುಲಿಂಗಜಂಗಮದ ಶಿಕ್ಷಾಪಾದೋದಕದಿಂದ ಬ್ರಹ್ಮನ ಉತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹ ತೊಡದು ಶಿವಶರಣಗಣಂಗಳ ನಿಜನಿವಾಸವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಪಾದೋದಕದಿಂದ ಷಡ್ವಿಧ ದೀಕ್ಷಾತ್ರಯವ ಕರುಣಿಸಿ, ಷಟ್ಸ್ಥಲಮಾರ್ಗವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸ್ಪರ್ಶನೋದಕ, ಅವಧಾನೋದಕ, ಆಪ್ಯಾಯನೋದಕದಿಂದ ತ್ರಿವಿಧಲಿಂಗಾಂಗ ಸಮರಸದ ಸನ್ಮಾರ್ಗಾಚಾರಕ್ರಿಯಾಜ್ಞಾನವ ತೋರುವುದಯ್ಯ. ಶ್ರಿಗುರುಲಿಂಗಜಂಗಮದ ಹಸ್ತೋದಕ-ಪರಿಣಾಮೋದಕ-ನಿರ್ನಾಮೋದಕದಿಂದ ಷಡ್ವಿಧಲಿಂಗಾಂಗ ಸಮರಸಾಚರಣೆಯ ಮಾರ್ಗದ, ಮೀರಿದ ಕ್ರಿಯಾಜ್ಞಾನವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸತ್ಯೋದಕ-ಕರುಣಜಲ- ವಿನಯಜಲ-ಸಮತಾಜಲದಿಂದ ಸಮಸ್ತಪ್ರಮಥಗಣಂಗಳೆಲ್ಲ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾರಾಧ್ಯ ಶರಣಗಣಂಗಳಾಚಾರಸಂಪದಕ್ಕೆ ಪರಬ್ರಹ್ಮ ಜ್ಯೋತಿರ್ಮಯವಸ್ತು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಚರಣ ಸೋಂಕಿನಿಂ ಪವಿತ್ರವಾದ ಚಿದ್ಭಸಿತವ ಧರಿಸಿದವರಿಗೆ ಬಹುಜನ್ಮ ಪಾಪದೋಷವ ತೊಡವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಅಜ್ಞಾನದ ಪಾಶವ ಹರಿವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸಮಸ್ತ ಜನವಶ್ಯ ರಾಜವಶ್ಯವ ಕೊಡುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸದಾಚಾರ ಸದ್ಭಕ್ತಿಸಾರದುನ್ನತಿಯ ಬೆಳಗ ತೋರುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಜನನ-ಮರಣದ ಭಯವ ತೊಡವುದಯ್ಯ. ಶಿವನಿಂದ ಅಗಸ್ತ್ಯ, ಕಸ್ಯಪ, ಜಮದಗ್ನಿ, ಗೌತಮ, ವಶಿಷ್ಠ ಮೊದಲಾದ ಋಷಿ ಸಮೂಹಗಳೆಲ್ಲ ಶ್ರೀ ವಿಭೂತಿಯ ಪಡೆದು ಧರಿಸಿ, ಸದ್ಭಕ್ತಿಪಥವ ಸೇರಿದರಯ್ಯ. ನಮ್ಮ ಶರಣಗಣಂಗಳು ಆ ಶಿವನ ಚಿತ್ಕಾಂತಿಯ ಬಹಿಷ್ಕರಿಸಿ, ಶ್ರೀಗುರುಲಿಂಗಜಂಗಮದ ಚಿದ್ಬೆಳಗನೆ ಹೆಪ್ಪಹಾಕಿ, ಚಿದಾಂಡವೆಂಬ ಘಟ್ಟಿಯ ಮಾಡಿ, ನಿಷ್ಕಲ ನಿಶ್ಶೂನ್ಯಮೂರ್ತಿಯ ಚರಣಜಲವ ವೇದ್ಥಿಸಿ, ಮಹಾಮಂತ್ರವ ಸ್ಥಾಪಿಸಿ, ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ತತ್ವಸ್ಥಾನಂಗಳಲ್ಲಿ ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಶಾಂಭವಲೋಕದ ಶಾಂಭವಗಣಂಗಳು, ಮತ್ರ್ಯಲೋಕದ ಮಹಾಗಣಂಗಳೆಲ್ಲ ಧರಿಸಿ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಭಾಭೂತಿಯೆ ಸರ್ವಾಚಾರಸಂಪದಕ್ಕೆ ಮೋಕ್ಷದ ಕಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಮತ್ತಾ ಗುರುಲಿಂಗಜಂಗಮಸ್ವರೂಪವಾಗಿ, ನಿಜಾಚರಣೆಯಲ್ಲಿ ನಿಂದು, ಅಸತ್ಯವನಳಿದು ಸುಸತ್ಯದಲ್ಲಿ ನಿಂದು, ಅನಾಚಾರವನುಳಿದು ಶಿವಾಚಾರಸನ್ಮಾರ್ಗದಲ್ಲಿ ನಿಂದು, ಭವಿ ನಡೆನುಡಿಗಳನುಳಿದು ಭಕ್ತನ ನಡೆನುಡಿಗಳಲ್ಲಿ ನಿಂದು, ಅಯೋಗ್ಯವಾದ ಭೋಗವನುಳಿದು ಯೋಗ್ಯವಾದ ಭೋಗದಲ್ಲಿ ನಿಂದು, ತನ್ನಾದಿ ಮಧ್ಯಾವಸಾನವ ತಿಳಿದು, ತನ್ನ ನಿಜಾಚರಣೆ ಲೀಲಾವಿನೋದದಿಂದ ತನ್ನ ತಾನರ್ಚಿಸುವ ನಿಲುಕಡೆಯ ವಿಚಾರವ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಶ್ರೀ ಮಹಾಚಿನ್ಮಯ ಚಿಂತಾಮಣಿ ಮಂತ್ರಮಾಲಿಕೆಯ ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ಧರಿಸಿದಾತಂಗೆ ಬ್ರಹ್ಮಹತ್ಯ, ಪುಶುಹತ್ಯ, ಶಿಶುಹತ್ಯ, ಸ್ತ್ರೀಹತ್ಯ ಭ್ರೂಣಹತ್ಯ, ಮಾತೃದ್ರೋಹ, ಪಿತೃದ್ರೋಹ ಮೊದಲಾದ ಮಹಾಪರಮಪಾತಕಂಗಳು ದೂರವಾಗುವವಯ್ಯ. ಶ್ರೀ ಮಹಾರುದ್ರಾಕ್ಷಿಯ ಶ್ರೀಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಗಳ ಸಮರ್ಪಿಸಿ, ಅವರ ಕರುಣಕಟಾಕ್ಷ ನಿರ್ಮಾಲ್ಯ ಮಂತ್ರಮಾಲಿಕೆ ಪ್ರಸಾದ ರುದ್ರಾಕ್ಷಿಯ ಬೆಸಗೊಂಡಾತಂಗೆ ಇಹಲೋಕದಲ್ಲಿ ಪರಶಿವಲಿಂಗಭೋಗಿಯಾಗಿ ಪರಲೋಕದಲ್ಲಿ ಪರಶಿವಜಂಗಮದೊಳಗೆ ಐಕ್ಯತ್ವ ದೊರವುದು ನೋಡ. ಶ್ರೀ ಮಹಾರುದ್ರಾಕ್ಷಿಯ ಗುರುವಚನೋಕ್ತಿಯಿಂದ ಅದರಾದಿ ಅಂತ್ಯವ ತಿಳಿದು, ಆಯಾಯ ಸ್ಥಾನಂಗಳಲ್ಲಿ ಆಯಾಯ ಮಂತ್ರಸ್ಮರಣೆಗಳಿಂದ ಆಯಾಯ ಮುಖಗಳ ಆಯಾಯ ವರ್ಣಗಳ ತಿಳಿದು ಹೆರೆಹಿಂಗದೆ ಧರಿಸಿದ ಮಹಾಭಕ್ತಜಂಗಮಶರಣಗಣಂಗಳೆಲ್ಲ ಜ್ಯೋತಿಮಯವಪ್ಪುದು ತಪ್ಪದು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷ ಚಿತ್ಪ್ರಭಾಪುಂಜರಂಜಿತವಾದ ಶ್ರೀ ಮಹಾರುದ್ರಾಕ್ಷಿಯೆ ಪರಮ ಚಿದೈಶ್ವರ್ಯ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು, ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ, ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ ಮಹಾಪ್ರಭುನಿರಂಜನಜಂಗಮವ ಮೂರ್ತವ ಮಾಡಿಸಿ, ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು, ಅನಾದಿಪ್ರಣಮವ ಸಂಬಂಧವ ಮಾಡಿ, ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ, ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ, ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ, ಕಡಗ-ಕಂಠಮಾಲೆ-ಕರ್ಣಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ, ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ, ಷೋಡಶಗಣ, ತೇರಸಗಣ, ದಶಗಣ, ಮತ್ರ್ಯಲೋಕದ ಮಹಾಗಣ ಸಮೂಹಕ್ಕೆಲ್ಲ ಒರದು ಬೋಧಿಸಿದರು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಮಂತ್ರಮಣಿಯೆ ಶ್ರೀಮಹದೈಶ್ವರ್ಯ ಸ್ವರೂಪ ನೋಡ. ಶ್ರೀ ಮಹದೈಶ್ವರ್ಯ ಮಹಾರುದ್ರಾಕ್ಷಿಯ ಸಂಗದಿಂದ ಪರಮಚಿದೈಶ್ವರ್ಯ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಶಿವಗಣಂಗಳ ಭೃತ್ಯಾಚಾರ ಸದ್ಭಕ್ತಿ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಷ್ಕಲಮಹಾಲಿಂಗದ ರತಿಸಂಯೋಗ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಚತುರ್ವಿಧ, ಷಡ್ವಿಧ, ದಶವಿಧ, ದ್ವಾದಶವಿಧ, ಷೋಡಶ ತೆರದ ಭಕ್ತಿ ಮೊದಲಾಗಿ ನಾಲ್ವತ್ತೆಂಟು ತೆರದ ಸದ್ಭಕ್ತಿ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಕೈವಲ್ಯಪದ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಮೋಕ್ಷದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು ಶಾಂಭವಲೋಕದ ಶಾಂಭವಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಮತ್ರ್ಯಲೋಕದ ಮಹಾಗಣಂಗಳು ಪ್ರತ್ಯಕ್ಷವಾಗಿ ಅವರ ಪಾದೋದಕ ಪ್ರಸಾದಕ್ಕೆ ಯೋಗ್ಯವೆಂದೆನಿಸುವುದಯ್ಯ. ಶ್ರೀ ಮಹಾರುದ್ರಾಕ್ಷಿಯೇ ಘನಕ್ಕೆ ಘನ ಮಹದೈಶ್ವರ್ಯ ನೋಡ ಶ್ರೀ ಗುರುಲಿಂಗಜಂಗಮದ ಕರುಣ ಕಟಾಕ್ಷಮಣಿಯೆ ಪರಮಚಿದಾಭರಣ ನೋಡ, ಸಂಗಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಅನಾದಿ ಮಹಾಪ್ರಭು ಶ್ರೀಗುರುಲಿಂಗಜಂಗಮದ ಚರಣೋದ್ಧೊಳನವೆ ಚಿದ್ಬ್ರಹ್ಮ ಚಿದೈಶ್ವರ್ಯ ನೋಡ. ಶ್ರೀಗುರುಲಿಂಗಜಂಗಮದ ಕ್ರಿಯಾಚಕ್ಷುವಿನ ಕ್ರಿಯಾ ಪ್ರಕಾಶವೆ ಕ್ರಿಯಾಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಜ್ಞಾನಚಕ್ಷುವಿನ ಜ್ಞಾನಪ್ರಕಾಶವೆ ಜ್ಞಾನಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಚಕ್ಷುವಿನ ಮಹಾಜ್ಞಾನಪ್ರಕಾಶವೆ ಮಹಾಜ್ಞಾನಭಸಿತವಾಗಿರ್ಪುದಯ್ಯ. ಇಂಥ ಚಿತ್ಪ್ರಕಾಶಸ್ವರೂಪವಾದ ಚಿದ್ಭಸಿತವ ಅನಾದಿ ಬಸವದಂಡಪ್ರಮಥರು ತಮ್ಮ ಗೋಪ್ಯಮುಖದಲ್ಲಿ ಸಕಲಕ್ರಿಯೆಗಳ ಆಚರಿಸುತ್ತಿರಲು ಆಗ ಶಿವನು ತನ್ನ ಪಂಚಮುಖದಿಂದ ಪಂಚವರ್ಣದ ಗೋವ ನಿರ್ಮಿಸಿ, 'ಎಲೈ ಎನ್ನ ಚಿಚ್ಚೈತನ್ಯಮೂರ್ತಿ ಬಸವದಂಡನಾಯಕರೆ ಈ ಪಂಚಗೋವುಗಳ ಈರೇಳುಲೋಕಕ್ಕೆ ಪಾವನಸ್ವರೂಪವ ಮಾಡಿ, ನಿಮ್ಮ ಶರಣಗಣಂಗಳಿಗರ್ಪಿತವಾಗುವಂತೆ ಮಾಡಿರಯ್ಯ.' ಎಂದು ಅಭಿವಂದಿಸಲು, ಆಗ ಬಸವದಂಡಪ್ರಮಥರು ಆ ಗೋವಿನ ಸಗಣವ ಕ್ರಿಯಾಗ್ನಿಯಿಂದ ದಹಿಸಿ, ಶ್ರೀಗುರುಲಿಂಗಜಂಗಮದ ಚಿತ್ಪ್ರಭೆಯ ವೇಧಿಸಿ ಸಕಲಲೋಕಂಗಳಿಗೆ ಸಕಲ ಮುನಿಜನಕ್ಕೆಲ್ಲ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತ, ಪಾಪಹರಭಸಿತವೆನಿಸಿಕೊಟ್ಟರು ನೋಡ. ಆ ಗೋವಿನ ಜಲಮಲ ವೀರ್ಯದಿಂದ ಭೂಮಿಯ ಸಮ್ಮಾರ್ಜನೆಗೆ ಯೋಗ್ಯವೆಂದೆನಿಸಿದರಯ್ಯ. ಆ ಗೋವಿನ ಕುಚಕ್ಷೀರವ ಸರ್ವಲೋಕಂಗಳಿಗೆ ಪಂಚಾಮೃತವೆಂದೆನಿಸಿದರಯ್ಯ. ಆ ಗೋವಿನ ಪುತ್ರನಿಂದ ಸಕಲಪ್ರಾಣಿಗಳು ಬದುಕುವಂತೆ ಮಾಡಿದರಯ್ಯ. ಆ ಗೋವಿನ ಮಾಂಸವ ದುರಾಚಾರಭವಿಜನ್ಮಾತ್ಮರು ಭುಂಜಿಸುವಂತೆ ಮಾಡಿದರಯ್ಯ. ಆ ಗೋವಿನ ಚರ್ಮವ ಶಿವಗಣಂಗಳ ಪಾದರಕ್ಷೆಯೆಂದೆನಿಸಿದರು ನೋಡಯ್ಯ. ಇತ್ತಲಾಗಿ ಸಕಲಪ್ರಮಥಗಣಂಗಳೆಲ್ಲ ಶ್ರೀ ಬಸವೇಶ್ವರಸ್ವಾಮಿಗಳ ಚಿತ್ಪ್ರಕಾಶಭಸಿತವ ಬೆಸಗೊಂಡು ಆ ವಿಭೂತಿಯ ಶ್ರೀ ಗುರುಲಿಂಗಜಂಗಮದ ದೀಕ್ಷಾಜಲ-ಶಿಕ್ಷಾಜಲದಿಂದ ಸಮ್ಮಿಶ್ರವ ಮಾಡಿ, ಇಪ್ಪತ್ತೊಂದು ದೀಕ್ಷಾಸ್ವರೂಪವಾದ ಮಹಾಪ್ರಣಮವ ಸ್ಥಾಪಿಸಿ, ಸಕಲಾಚಾರಕ್ರಿಯೆಗಳಿಗೆ ಶುಭತಿಲಕವಿದೆ ಚಿದ್ವಿಭೂತಿಯಿದೆಂದು ನಿರಂತರ ಸ್ನಾನ ಧೂಳನ-ಧಾರಣವ ಮಾಡಿದರು ನೋಡ. ಅದರಿಂ ಮೇಲೆ ಆ ಗೋವಿನ ಕುಚಕ್ಷೀರವ ಈ ಭಸಿತದಿಂದ ಪಾವನವ ಮಾಡಿ, ಪರಮಾಮೃತವೆನಿಸಿ, ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಪರಮಾಮೃತ ಶೇಷಪ್ರಸಾದವ ನಿಜನಿಷೆ*ಯಿಂದ ಲಿಂಗಾರ್ಪಿತವ ಮಾಡಿದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶಭಸಿತವ ಬಹಿಷ್ಕರಿಸಿ ಸಕಲಪ್ರಮಥಗಣಂಗಳಿಗೆ ಪರಮಪದ ಮೋಕ್ಷದ ಕಣಿಯೆಂದು ಬೋಧಿಸಿದಂಥ ಬಸವದಂಡನಾಥನ ಚರಣಕ್ಕೆ ನಮೋ ನಮೋ ಎಂಬೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ ತ್ರಿವಿಧದೀಕ್ಷೆ ತ್ರಿವಿಧಾಚಾರ ತ್ರಿವಿಧಲಿಂಗಾರ್ಚನೆ ತ್ರಿವಿಧಲಿಂಗಾರ್ಪಣ ತ್ರಿವಿಧಲಿಂಗಾನುಭಾವ, ತ್ರಿವಿಧಭಕ್ತಿ ಜ್ಞಾನವೈರಾಗ್ಯ ಸತ್ಯಸನ್ಮಾರ್ಗಾಚಾರಾನ್ವಿತ ಸದ್ಭಕ್ತ_ಮಾಹೇಶ್ವರ_ಶರಣಗಣಂಗಳು, ಮೊಟ್ಟಮೊದಲಲ್ಲಿ, ಮಡು ಹೊಂಡ ನದಿ ಹಳ್ಳ ಕೆರೆ ಬಾವಿ ಕೊಳ ಗುಂಡ ಚಿಲುಮೆ ಮೊದಲಾದ ಸ್ಥಾನಂಗಳಲ್ಲಿ ಸ್ವಚ್ಛನಿರ್ಮಲತರವಾದ ಪರಿಣಾಮೋದಕವನ್ನು ಭಾಜನಮುಖಂಗಳಿಗೆ ಕ್ರಿಯಾ_ಜ್ಞಾನಯುಕ್ತವಾದ ಉಭಯಮಡಿಕೆಯ ಪಾವಡವ ಹಾಕಿ ಶೋಧಿಸಿ ಮೇಲುಪಾವಡವ ಬಾಸಣಿಸಿ, ಭವಿಜನಾತ್ಮರ ಸೋಂಕದೆ ತೆಗೆದುಕೊಂಡು ಬಂದು ಶ್ರೀಗುರುಲಿಂಗಜಂಗಮದ ಪಾದ ಪ್ರಕ್ಷಾಲನವಂ ಮಾಡಿ ಆ ಮೇಲೆ ಉಭಯ ಪಾದದ ಅಡಿಯಲ್ಲಿ ಮೂರುವೇಳೆ, ದಶಾಂಗುಲಿ ಒಂದು ವೇಳೆ, ಸ್ಪರ್ಶನವಾದಂಥ ಗುರುಪಾದೋದಕವ ಸಮಸ್ತ ಭಾಂಡ ಭಾಜನಂಗಳಲ್ಲಿ ತುಂಬಿ ಕ್ರಿಯಾಶಕ್ತಿಯರು ಕ್ರಿಯಾಭೃತ್ಯರಾದರು ಸರಿಯೆ ಲಿಂಗಾಭಿಷೇಕ ಲಿಂಗಾರ್ಚನಕ್ರಿಯಗಳ ತೀರ್ಚಿಸಿಕೊಂಡು ಮಂತ್ರಧ್ಯಾನಾರೂಢರಾಗಿ ಲಿಂಗಬಾಹ್ಯರ ಸ್ಪರ್ಶನಸಂಭಾಷಣೆಗಳನುಳಿದು ಸಕಲಪದಾರ್ಥಂಗಳ ಕ್ರಿಮಿಕೀಡೆಕೀಟಕಂಗಳ ಕಾಷ*ಮೃಣ್ ಪಾಷಾಣಂಗಳ ಶೋಧಿಸಿ, ಅತಿ ಸುಯಿದಾನದಿಂದ ಪಾದೋದಕದಲ್ಲಿ ಪಾಕವ ಮಾಡಿ, ಆ ಪಾಕದ ಭಾಜನಂಗಳಿಗೆ, ಹಸ್ತಸ್ಪರ್ಶನ ಮಂತ್ರನ್ಯಾಸ ಲಿಂಗದೃಷ್ಟಿ ವಾಕ್ಶೀಲ ಮಂತ್ರಸ್ಮರಣೆ ಚಿದ್ಭಸ್ಮದಿಂದ, ಆ ಪದಾರ್ಥದ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗಜಂಗಮದ ಶುದ್ಧಪ್ರಸಾದವೆಂದು ಭಾವಿಸಿ ಸಾವಧಾನಭಕ್ತಿಯಿಂದ ಮಹಾನೈಷೆ* ಕರಿಗೊಂಡು ಮಂತ್ರಸ್ಮರಣೆಯಿಂದ ಸತ್ಯಸದಾಚಾರ ಸತ್ಕ್ರಿಯಾಸಮ್ಯಜ್ಞಾನವುಳ್ಳ ಗುರುಲಿಂಗಜಂಗಮಕ್ಕೆ ಸಮರ್ಪಣೆಯಂ ಮಾಡಿ ಅವರ ಕರುಣಪ್ರಸಾದವ ಸಮಸ್ತಶಕ್ತಿ ಭಕ್ತಶರಣಂಗಳೆಲ್ಲ ಪರಿಣಾಮಿಸಿ, ಭಾಂಡಭಾಜನಂಗಳಲ್ಲಿ ಉಳಿದ ಶೇಷಪಾದೋದಕವ ಇಷ್ಟಲಿಂಗಬಾಹ್ಯವಾದ ಭವಿಜನಾತ್ಮರುಗಳಿಗೆ ಹಾಕಲಾಗದು. ಅದಕ್ಕೆ ಹರವಾಕ್ಯವುಂಟು. ಹರಗುರುವಾಕ್ಯವ ಮೀರಿ ವೇದಶ್ರುತಿವಾಕ್ಯವ ಹಿಡಿದು ಗುರುಮಾರ್ಗಾಚಾರಬಾಹ್ಯರಿಗೆ ಲಿಂಗಪದಾರ್ಥವ ಕೊಟ್ಟಾತಂಗೆ ಯಮದಂಡಣೆ ಉಂಟು. ಅಂತ್ಯದಲ್ಲಿ ಕಾಲಕಾಮರಿಗೊಳಗು ನೋಡ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅಯ್ಯ! ಶ್ರೀಗುರುಲಿಂಗಜಂಗಮದ ವೇಧಾಮಂತ್ರಕ್ರಿಯಾದೀಕ್ಷೆಗೆ ಹೊರಗಾದ ಭುವನದ ಶೈವದೈವದಾರ್ಚನೆ ಪೂಜೆಯ ಮಾಡಿ, ಅದರುಚ್ಛಿಷ್ಟವ ಭುಂಜಿಸುವದಂಗಾಚಾರ. ಅದನುಳಿದು ಶುದ್ಧಸಿದ್ಧಪ್ರಸಿದ್ಧಪ್ರಸಾದಸ್ವರೂಪವಾದ ಅನಾದಿಗುರುಲಿಂಗಜಂಗಮದ ಅರ್ಚನೆ ಪೂಜೆಯ ಮಾಡಿ ಕಿಂಕರ್ವಾಣದಿಂದ ಅವರ ಒಕ್ಕುಮಿಕ್ಕ ಪ್ರಸಾದವ ಹಾರೈಸುವುದೆ ಲಿಂಗಾಚಾರ. ಈ ಭೇದವ ತಿಳಿದು ಪಂಚಾಚಾರ ಆಚರಣೆಗೆ ತಂದು, ಸಪ್ತಾಚಾರವ ಸಂಬಂಧವಿಟ್ಟು, ಅಷ್ಟಾವರಣದ ಕಲೆನೆಲೆಗಳ ಒಳಗು-ಹೊರಗು ಎನ್ನದೆ, ಸದ್ಗುರುಮುಖದಿಂದ ಆಚರಣೆ-ಸಂಬಂಧವ ತಿಳಿದು, ಸದ್ಭಕ್ತಿ-ಸಮ್ಯಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು, ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವಲ್ಲದೆ, ಉಳಿದ ವೇಷಧಾರಿಗಳೆಲ್ಲ ಎನ್ನೊಡೆಯ ಪ್ರಮಥಗಣಾಚಾರಕ್ಕೆ ಹೊರಗೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ, ಮತ್ರ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ, ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ ಕ್ರಿಯಾಶಕ್ತಿಯರು ಸದಾವಾಸ ಪರಿಯಂತರ ಇಷ್ಟಮಹಾಲಿಂಗವ ತಮ್ಮ ಅಂಗವ ಬಿಟ್ಟು ಅಗಲಿಸಲಾಗದು. ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ, ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ, ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ. ಈಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು, ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವುಪ್ರಸಂಗ. ಭವಿಜನ್ಮಾತ್ಮರು ತೊಳೆದು ಹೊದಿಕೆ, ಅವರ ಸಂಸರ್ಗ ಮೊದಲಾದ ದುಃಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು. ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡುವದು. ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು. ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು, ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು. ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ, ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ, ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ ಬಪ್ಪುದು ತಪ್ಪದು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ, ಪರಸ್ತ್ರೀಯಳೆಂಬ ಹಡಿಕೆಯ ಯೋನಿದ್ವಾರದಲ್ಲಿ ತೊಳಲುವ ಜಡಜೀವಿಡಂಬಕನಲ್ಲಿ ಸಮಯಾಚಾರವ ಮಾಡುವಾತಂಗೆ ಭವಿಜನ್ಮ ತಪ್ಪದು ನೋಡ! ತಾನಿದ್ದಲ್ಲಿಗೆ ಪ್ರಸಾದಪುಷ್ಪತೀರ್ಥದೆಡೆ ಪ್ರಸಾದವ ತರಿಸಿಕೊಂಡಾತಂಗೆ ಶುನಿಸೂಕರಜನ್ಮ ತಪ್ಪದು ನೋಡ! ಸಮಪಂಕ್ತಿಯಲ್ಲಿ ವಾಮನವಾದ ಉಕ್ಕಳವ ಕೊಟ್ಟುಕೊಂಡಾತಂ- ದೀಕ್ಷಾಹೀನ, ಆಚಾರಭ್ರಷ್ಟ! ತನ್ನ ಪವಿತ್ರಕರ್ತುವಾದ ಗುರುವಿನಾಜ್ಞೆಯ ಮೀರಿ ಗುರುನಿಂದ್ಯವ ಮಾಡುವ ಗುರುದ್ರೋಹಿ, ಪರದೈವ-ಪರದ್ರವ್ಯಾಪಹಾರಕನ ಕೂಡೆ ಪಾದೋದಕ-ಪ್ರಸಾದವ ಏಕಭಾಜನವ ಮಾಡಿದಾತಂU ಶತಸಹಸ್ರಜನ್ಮಾಂತರದಲ್ಲಿ ಕ್ರಿಮಿಕೀಟಕಜನ್ಮ ತಪ್ಪದು ನೋಡ! ಸತ್ಯಸದಾಚಾರದ ವರ್ಮಾವರ್ಮವ ಭೇದಿಸಿ, ಹರಗುರುವಚನೋಕ್ತಿಯಿಂದ ಪ್ರಮಾಣಿಸಿ, ಬುದ್ಧಿಯ ಹೇಳುವಾತನೆ ಮಹಾಪ್ರಭುವೆಂದು ಭಾವಿಸುವಾತನೆ ಸದಾಚಾರಿ ಸನ್ಮಾರ್ಗಿ ನೋಡ! ಇದ ಮೀರಿ ಆಜ್ಞೋಪದೇಶವ ಕೇಳದೆ ತನ್ನ ಮನಬಂದಂತೆ ಚರಿಸುವ ಭ್ರಷ್ಟನ ಮೋರೆಯ ಮೇಲೆ ಶರಣಗಣಂಗಳ ರಕ್ಷೆಯಿಂದ ಹೊಡದು, ಆ ಮೇಲೆ ಗಾರ್ದ[ಭ]ಜನ್ಮದಲ್ಲಿ ಜನಿಸೆಂದಾತನಂಬಿಗರ ಚೌಡಯ್ಯನು. ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->