ಅಥವಾ

ಒಟ್ಟು 22 ಕಡೆಗಳಲ್ಲಿ , 11 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು, ಒಡವೆ ಆಭರಣಂಗಳ ಹಲ್ಲಣಿಸಿಕೊಂಡು ಬಂದು, ಸರ್ವರಿಗೆ ಶಾಸ್ತ್ರೋಪದೇಶವ ಹೇಳುವರು ವೇಷಧಾರಿಗಳು. ಸೂಳೆಯರಂತೆ ತಮ್ಮ ಉಪಾದ್ಥಿಕೆಗೆ ಒಡಲಾಸೆಗೆ ಹಿತವಚನ ನುಡಿವರು. ಇಂತಪ್ಪ ಪ್ರಪಂಚಿನ ವೇಷಡಂಭಕ ಧೂರ್ತಲಾಂಛನಧಾರಿಗಳಿಗೆ ಮಹಂತಿನ ದೇವರೆನ್ನಬಹುದೆ ? ಎನಲಾಗದು. ಅದೇನು ಕಾರಣವೆಂದಡೆ, ತಮ್ಮಾದಿಯ ನಿಲುವ ತಾವರಿಯರು. ಷಟ್‍ಸ್ಥಲದ ನಿರ್ಣಯವ ಏನೆಂದರಿಯರು. ಆಚಾರದನುಭಾವದಂತರಂಗದ ಮೂಲವ ಮುನ್ನವೇ ಅರಿಯರು. ಇಂತಿದನರಿಯದ ಪಶುಪ್ರಾಣಿಗಳಿಗೆ ಜಂಗಮವೆನ್ನಬಹುದೆ ? ಎನ್ನಲಾಗದಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ, ತನ್ನ ತಾನರಿಯದೆ, ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ, ಕಾಮವ ತೊರೆಯದೆ, ಹೇಮವ ಜರೆಯದೆ, ನಾವು ಹರ ಗುರು ಚರ ಷಟ್‍ಸ್ಥಲದ ವಿರಕ್ತರೆಂದು ಚೆನ್ನಾಗಿ ನುಡಿದುಕೊಂಡು, ಕಾವಿ ಕಾಷಾಯಾಂಬರವ ಹೊದ್ದು, ಶಂಖ ಗಿಳಿಲು ದಂಡಾಗ್ರವ ಹೊತ್ತು, ಕೂಳಿಗಾಗಿ ನಾನಾ ದೇಶವ ತಿರುಗಿ, ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು ಕೂಗಿಸುತಿರ್ಪ[ನು] ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನು ಷಟ್ಸ್ಥಲದ ಭೇದವೆಂತೆಂದಡೆ : ಸದಾಚಾರದಲ್ಲಿ ನಡಹ, ಶಿವನಲ್ಲಿ ಭಕ್ತಿಯಾಗಿಹ, ಲಿಂಗಜಂಗಮ ಒಂದೆಯೆಂಬ ಬುದ್ಧಿಯಾಗಿಹ, ಲಾಂಛನಧಾರಿಗಳ ಕಂಡಡೆ ಒಂದಿಸುವುದೀಗ ಭಕ್ತಸ್ಥಲ ನೋಡಾ. ಇದಕ್ಕೆ ಈಶ್ವರ್ದೋವಾಚ : ``ಸದಾಚಾರಂ ಶಿವೇ ಭಕ್ತಿಃ ಲಿಂಗಜಂಗಮೇ ರತಿಃ | ಲಾಂಛನಂ ಚ ಶರಣ್ಯಂ ಚ ಭಕ್ತಿಸ್ಥಲಸುಬುದ್ಧಿಮಾನ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ ಹೇಳಿಹೆ ಕೇಳಿರಣ್ಣ : ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ; ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ; ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ; ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ; ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ; ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ ; ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ ; ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ. ಇನ್ನು ಷಟ್‍ಸ್ಥಲದ ನಿರ್ಣಯವ ಕೇಳಿ : ಭಕ್ತಸ್ಥಲ ಬಸವಣ್ಣಂಗಾಯಿತ್ತು ; ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು ; ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು ; ಪ್ರಾಣಲಿಂಗಿಸ್ಥಲ ಸಿದ್ಭರಾಮಯ್ಯಂಗಾಯಿತ್ತು ; ಶರಣಸ್ಥಲ ಪ್ರಭುದೇವರಿಗಾಯಿತ್ತು; ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.- ಭಕ್ತಸ್ಥಲದ ವಿವರವು : ಗುರುಲಿಂಗಜಂಗಮವು ಒಂದೆಯೆಂದು ಕಂಡು ಸದಾಚಾರದಲ್ಲಿ ನಡೆವನು, ತ್ರಿಕಾಲ ಮಜ್ಜನವ ನೀಡುವನು, ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು, ಆಪ್ಯಾಯನಕ್ಕೆ ಅನ್ನವ ನೀಡುವನು, ಜಂಗಮಕ್ಕೆ ಪ್ರತಿ ಉತ್ತರವ ಕೊಡನು. ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು. ಸಾಕ್ಷಿ : 'ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ | ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ || ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾದ್ಥಿಕಂ | ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||' ಇನ್ನು ಮಾಹೇಶ್ವರಸ್ಥಲದ ವಿವರವು : ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ ಇವು ಪಂಚಮಹಾಪಾತಕವು, ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇರ್ದು ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು. ಸಾಕ್ಷಿ : 'ಪರಸ್ತ್ರೀಯಂ ಪರಾರ್ಥಂ ಚ ವರ್ಜಿತೋ ಭಾವಶುದ್ಧಿಮಾನ್ | ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||' ಇನ್ನು ಪ್ರಸಾದಿಸ್ಥಲದ ವಿವರ : ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು, ಅನರ್ಪಿತವ ವರ್ಜಿಸುವುದು, ಲಿಂಗದೊಡನೆ ಉಂಬುವುದು, ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ. ಇನ್ನು ಪ್ರಾಣಲಿಂಗಿಸ್ಥಲದ ವಿವರವು : ಸುಗುಣ ದುರ್ಗುಣ ಉಭಯವನತಿಗಳೆದು ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ. ಇನ್ನು ಶರಣಸ್ಥಲದ ವಿವರವು : ಸತಿಪತಿಭಾವ ಅಂಗಲಿಂಗವಾಗಿಪ್ಪುದು, ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು, ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು. ಸಾಕ್ಷಿ : 'ಪತಿರ್ಲಿಂಗಂ ಸತೀ ಚಾsಹಂ ಇತಿ ಯುಕ್ತಂ ಸನಾತನಃ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||' ಇನ್ನು ಐಕ್ಯಸ್ಥಲದ ವಿವರವು : ಅರಿಷಡ್ವರ್ಗಂಗಳಿಲ್ಲದಿಹರು, ನಿರ್ಭಾವದಲ್ಲಿಹರು, ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು, ಉರಿಯುಂಡ ಕರ್ಪುರದ ಹಾಗೆ ಇಹರು, ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು. ಸಾಕ್ಷಿ : 'ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಸಯೋಗವತ್||' ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ ಅಂದೇನೊ ಇಂದೇನೊ ? ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಆಯತಲಿಂಗವಿಡಿದು ಸ್ವಾಯತಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಸ್ವಾಯತಲಿಂಗವಿಡಿದು ಸನ್ನಹಿತಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಸನ್ನಹಿತಲಿಂಗವಿಡಿದು ಮಹಾಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಮಹಾಲಿಂಗವಿಡಿದು ಜಂಗಮಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಜಂಗಮಲಿಂಗವಿಡಿದು ಶಿವಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಶಿವಲಿಂಗವಿಡಿದು ಗುರುಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಗುರುಲಿಂಗವಿಡಿದು ಆಚಾರಲಿಂಗವ ಕಾಣಬೇಕು ಸಿದ್ಧರಾಮಯ್ಯಾ_ ಇಂತೀ ಆಚಾರಲಿಂಗವಿಡಿದು ಷಟ್‍ಸ್ಥಲದ ಆದಿ ಮಧ್ಯಾಂತವರಿದು, ಸಂಬಂಧಿಸಿ, ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದನುವ, ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ. ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ, ಕೇವಲಜ್ಞಾನ, ಜ್ಯೋತಿಜ್ರ್ಞಾನ, ಮಹಾಜ್ಯೋತಿಜ್ರ್ಞಾನವೆಂದಿಂತು ಜ್ಞಾನವಾರು ತೆರನು. ಮತಿಜ್ಞಾನದಿಂದ ಶ್ರುತಿಜ್ಞಾನವಹುದು, ಶ್ರುತಿಜ್ಞಾನದಿಂದ ಖಂಡಜ್ಞಾನವಹುದು. ಖಂಡಜ್ಞಾನದಿಂದ ಕೇವಲಜ್ಞಾನವಹುದು, ಕೇವಲಜ್ಞಾನದಿಂದ ಜ್ಯೋತಿಜ್ರ್ಞಾನವಹುದು. ಜ್ಞೋತಿಜ್ರ್ಞಾನದಿಂದ ಮಹಾಜ್ಯೋತಿಜ್ರ್ಞಾನವಹುದು. ಮತಿಜ್ಞಾನವೆ ಭಕ್ತ, ಶ್ರುತಿಜ್ಞಾನವೆ ಮಹೇಶ್ವರ, ಖಂಡಜ್ಞಾನವೆ ಪ್ರಸಾದಿ, ಕೇವಲಜ್ಞಾನವೆ ಪ್ರಾಣಲಿಂಗಿ, ಜ್ಯೋತಿಜ್ರ್ಞಾನವೆ ಶರಣ, ಮಹಾಜ್ಯೋತಿಜ್ರ್ಞಾನವೆ ಐಕ್ಯ. ಈ ಷಟ್‍ಸ್ಥಲದ ನೆಲೆಯ ಬಲ್ಲಾತನೆ- ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯನು
--------------
ಚನ್ನಬಸವಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಜಗದುತ್ಪತ್ಯವೆಂಬುದು ಹುಸಿಮಾತು. ನಾನೆಂಬುದೆ ಐದು, ಆ ಐದರಿಂದ ಒದಗಿದ ಜಗ, ಲಯವಾದ ಮತ್ತೆ ಜಗವಿಲ್ಲವಾಗಿ. ತನ್ನ ಗುಣವೆ ಪೃಥ್ವಿ, ತನ್ನ ಗುಣವೆ ಅಪ್ಪು, ತನ್ನ ಗುಣವೆ ವಾಯು, ತನ್ನ ಗುಣವೆ ಆಕಾಶ, ತನ್ನಿಂದನ್ಯವಪ್ಪುದೊಂದಿಲ್ಲವಾಗಿ. ಅದಕ್ಕೆ ದೃಷ್ಟ: ಮರ್ಕಟ ದರ್ಪಣಸ್ಥಾನವೆಂದರಿವುದು. ಆ ಉಚಿತ ಬೀಜಕ್ಕುಚಿತವಪ್ಪುದೆ ಅದಕ್ಕೆ ದೃಷ್ಟ. ಪರುಷದ ಗಿರಿಯಲ್ಲಿ ಕಬ್ಬುನದ ಮೊರಡಿಯುಂಟೆ ? ಕ್ಷೀರ ಜಲಧಿಯಲ್ಲಿ ಕ್ಷಾರಜಲ ಸ್ಥಾಪ್ಯವುಂಟೆ ? ಕಲ್ಪದ್ರುಮದಗ್ರದಲ್ಲಿ ದತ್ತೂರದ ಫಲವುಂಟೆ ? ನೆರೆ ಸತ್ಯನಲ್ಲಿ [ಹಾ]ರುವ ಮ[ನದವನು]ಂಟೆ ? ಇಂತಿವನರಿದು ನಿಃಶಬ್ದನಾದ ಮಹಾತ್ಮಂಗೆ ಗುರುವೆಂದರರು, ಲಿಂಗವೆಂದರು, ಜಂಗಮವೆಂದರು. ಸ್ಥಾವರವೊಂದಾದಡೆ, ಶಾಖೆಯ ಲಕ್ಷ್ಯದ ತೆರನಂತೆ. ಅದಕ್ಕೆ ಪರಿಯಾಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ. ಇಂತೀ ಷಟ್‍ಸ್ಥಲದ ಎಲ್ಲಾ ಬೆಳಗಿನ ಕಳೆಯನೊಳಕೊಂಡಿಪ್ಪ ಮಹಾತ್ಮನಂ ಶಿವಭೌತಿಕವೆಂದರಿಯದೆ, ಬೀಗವ ತೆಗೆದಲ್ಲಿಯೆ ಕಂಡಿತ್ತು, [ಆಭ]ರಣದ ಇರವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪರ್ಣ ಉದುರಿದ ವೃಕ್ಷ ಕಡಿದು, ಕೊಂಗೆಯ ಸವರದೆ ಮನೆಯ ಕಟ್ಟಿ, ಪಾತಾಳದ ಬೇತಾಳಂಗೆ ರುದ್ರನನಾಹುತಿಯ ಕೊಟ್ಟು, ಸ್ವರ್ಗಲೋಕದ ಮಾರೇಶ್ವರಂಗೆ ವಿಷ್ಣುವಿನ ಆಹುತಿ ಕೊಟ್ಟು, ಮತ್ರ್ಯಲೋಕದ ಜಗಜಟ್ಟಿಗೆ ಬ್ರಹ್ಮನ ಆಹುತಿ ಕೊಟ್ಟು, ಉಳಿದಲೋಕದ ಭೂತಂಗಳಿಗೆ ಷಟ್‍ಸ್ಥಲದ ಭವಿಗಳ ಕೊಟ್ಟು, ಜನಿವಾರ ಹರಿದು ಗಂಧವ ಧರಿಸದೆ, ಜಳಕವ ಮಾಡದೆ, ಮಡಿ ಉಡದೆ, ಮೈಲಿಗೆಯನುಟ್ಟು, ಉಣ್ಣದ ಆಹಾರವನುಂಡು ಕಾಯಕವ ಮಾಡುತ್ತಿರ್ಪರು ನೋಡೆಂದ, ಕಾಡನೋಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಪ್ರತಿಮ ಅಖಂಡ ಪರಶಿವಾನಂದ ಸಕಳನಿಃಕಳನು ತನ್ನ ಸರ್ವಾಚಾರಸಂಪತ್ತಿನೊಳಗಿರ್ದು, ಭಿನ್ನವಿಲ್ಲದೆ ಗುರುಲಿಂಗಜಂಗಮಕ್ಕರಿದು ಮಾಡುವಲ್ಲಿ, ಅತ್ತಣಿತ್ತಣಿಂದೆತ್ತಿ ಬಂದು ಬೆರಸಿದ ಕತ್ತಲೆವೆರಸಿ ಚರಿಸುವ ಷಟ್‍ಸ್ಥಲದ ಭಕ್ತ ಮಹೇಶ್ವರರುಗಳ ಮಿಥ್ಯವ ಜರೆದು ತೊಳೆಯುತ್ತ, ಚಿತ್ತನಿರ್ಮಲಮಾಡೆತ್ತಿ ತೋರುತ್ತ, ನಡೆಸಿ ನಡೆವ ಸತ್ಯಸದಾಚಾರವೆ ಕರ್ತುಮಹೇಶ್ವರ ಅದು ತಾನೆಯೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನಾದಡೆ ನಿರ್ವಂಚಕಭಾವದಿಂದೆ ತ್ರಿವಿಧಕ್ಕೆ ತ್ರಿವಿಧಪದಾರ್ಥವನರ್ಪಿಸಬೇಕು. ಮಹೇಶ್ವರನಾದಡೆ ತ್ರಿವಿಧವ ಬಯಸದಿರಬೇಕು. ಪ್ರಸಾದಿಯಾದಡೆ ಹುಲ್ಲುಕಡ್ಡಿ ದರ್ಪಣ ಮೊದಲಾದ ಸಕಲಪದಾರ್ಥಂಗಳ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳದಿರಬೇಕು. ಪ್ರಾಣಲಿಂಗಿಯಾದಡೆ ಪ್ರಪಂಚ ನಾಸ್ತಿಯಾಗಿರಬೇಕು. ಶರಣನಾದಡೆ ಸಕಲ ಭೋಗೋಪಭೋಗಂಗಳನು ತಾನಿಲ್ಲದೆ ಲಿಂಗಮುಖವನರಿದು ಕೊಡಬೇಕು. ಐಕ್ಯನಾದಡೆ ಸರ್ವವೂ ತನ್ನೊಳಗೆಂದರಿದು ಸರ್ವರೊಳಗೆಲ್ಲ ತನ್ನನೆ ಕಾಣಬೇಕು. ಇಂತೀ ಷಟ್‍ಸ್ಥಲದ ಅನುವನರಿದು ಆಚರಿಸುವ ಮಹಾಶರಣರ ಆಳಿನ ಆಳು ನಾನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜ್ಞಾನೋದಯವಾಗಿ ಷಟ್‍ಸ್ಥಲದ ನಿರ್ಣಯವೆಂತುಟೆಂದು ವಿಚಾರಿಸೆ: ಮೊದಲಲ್ಲಿ ಭಕ್ತಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಮಾಹೇಶ್ವರಸ್ಥಲಕ್ಕೆ ಬಂದು, ಮಾಹೇಶ್ವರಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಪ್ರಸಾದಿಸ್ಥಲಕ್ಕೆ ಬಂದು, ಪ್ರಸಾದಿಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಪ್ರಾಣಲಿಂಗಿಸ್ಥಲಕ್ಕೆ ಬಂದು, ಪ್ರಾಣಲಿಂಗಿಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಶರಣಸ್ಥಲಕ್ಕೆ ಬಂದು, ಶರಣಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ಐಕ್ಯಸ್ಥಲಕ್ಕೆ ಬಂದು, ಐಕ್ಯಸ್ಥಲವೆಂತು ಹೇಳಿತ್ತು_ ಅಂತೆ ನಡೆದು ಪೂರೈಸಿ ನಿರವಯಸ್ಥಲಕ್ಕೆ ಬಂದು ನಿರಾಳಕ್ಕೆ ನಿರಾಳನಾದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮತ್ತಂ,ಆ ಶಿಷ್ಯನು ಸದ್ಗುರುಸ್ವಾಮಿಗೆ ದೀರ್ಘದಂಡ ನಮಸ್ಕಾರವಂ ಮಾಡಿ ಭಯ ಭಕ್ತಿಯಿಂದ `ಎಲೆ ಸದ್ಗುರುಸ್ವಾಮಿ ಆದಿಮೂಲ ಆನಾದಿಮೂಲಂಗಳಿಗತ್ತತ್ತವಾಗಿಹ ಚಿದ್ಬ ್ರಹ್ಮಾಂಡ ಮೊದಲಾಗಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಬ್ರಹ್ಮಾಂಡಗಳೇನೂ ಇಲ್ಲದಂದು, ಇನ್ನೂರಿಪ್ಪತ್ನಾಲ್ಕು ಭುವನಂಗಳು ಮೊದಲಾಗಿ ಮಹಾಭುವನ, ಅತಿಮಹಾಭುವನಂಗಳು ಕಡೆಯಾಗಿ, ಅತಿಮಹಾತೀತ ಮಹಾ ಅನಂತಕೋಟಿ ಭುವನಾದಿಭುವನಂಗಳೇನೂ ಎನಲಿಲ್ಲದಂದು, ಆದಿಮೂಲ ಆನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲ ಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿಯ ರೂಪು-ಲಾವಣ್ಯ-ಸೌಂದರ್ಯ-ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳು ಹೇಗಿರ್ದವೆಂಬುದನು, ನಿರಂಜನಾತೀತ ಪ್ರಣವದುತ್ಪತ್ಯವನು, ಅವಾಚ್ಯ ಪ್ರಣವದುತ್ಪತ್ಯವನು ಕಲಾಪ್ರಣವದುತ್ಪತ್ಯದ ಭೇದವನು, ಅನಾದಿಪ್ರಣವದುತ್ಪತ್ಯದ ಭೇದವನು, ಅನಾದಿ ಅಕಾರ ಉಕಾರ ಮಕಾರದುತ್ಪತ್ಯವನು, ಆದಿಪ್ರಣವದುತ್ಪತ್ಯದ ಭೇದವನು, ಆದಿ ಅಕಾರ ಉಕಾರ ಮಕಾರಂಗಳುತ್ಪತ್ಯವನು, ನಾದ ಬಿಂದುಕಳೆಗಳ ಭೇದವನು, ಆ ಆದಿ ಅಕಾರ ಉಕಾರ ಮಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದುತ್ಪತ್ಯ ಲಯದ ಭೇದವನು, ಅದಕ್ಕೆ ಅಧಿದೇವತೆಯನು, ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಕಾರ ಉಕಾರ ಮಕಾರದಲ್ಲಿ ಅಡಗಿದ ಭೇದವನು, ಅಕಾರ-ಉಕಾರ-ಮಕಾರ-ನಾದ-ಬಿಂದು-ಕಳೆ-ಪ್ರಕೃತಿ-ಪ್ರಾಣ ಆಧಾರಂಗಳ ಭೇದವನು, ನಾದಬಿಂದುಕಳೆ ಪ್ರಕೃತಿ ಪ್ರಾಣಂಗಳ ಆಧಾರಂಗಳ ಭೇದವನು, ನಾದ-ಬಿಂದು-ಕಳೆ-ಅಕಾರ-ಉಕಾರ-ಮಕಾರವು ಕೂಡಿ ಓಂಕಾರದುತ್ಪತ್ಯವನು, ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದುತ್ಪತ್ಯದ ಭೇದವನು, ಅಖಂಡ ಸ್ವಯಂಭುಲಿಂಗದುತ್ಪತ್ಯವನು, ಅನಾದಿ ಸದಾಶಿವದುತ್ಪತ್ಯದ ಭೇದವನು, ಅನಾದಿ ಈಶ್ವರತತ್ವದುತ್ಪತ್ಯವನು, ಅನಾದಿ ಮಹೇಶ್ವರತತ್ವದುತ್ಪತ್ಯದ ಭೇದವನು, ಆದಿ ಸದಾಶಿವತತ್ವದುತ್ಪತ್ಯದ ಭೇದವನು, ಆದಿ ಈಶ್ವರತತ್ವದುತ್ಪತ್ಯದ ಭೇದವನು, ಆದಿ ಮಹೇಶ್ವರತತ್ವದುತ್ಪತ್ಯದ ಭೇದವನು, ದಶಚಕ್ರದ ಉತ್ಪತ್ಯಭೇದವನು, ದಶಚಕ್ರದ ನ್ಯಾಸವನು, ದಶಚಕ್ರದ ನಿವೃತ್ತಿಯನು, ನವಪದ್ಮದ ನಿವೃತ್ತಿಯನು, ನವಪದ್ಮದ ನೆಲೆಯನು, ನವಪದ್ಮದ ನಿವೃತ್ತಿಯನು, ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಅಕಾರ ಉಕಾರ ಮಕಾರದುತ್ಪತ್ಯವನು, ಆ ಅಕಾರ ಉಕಾರ ಮಕಾರದಲ್ಲಿ ಪೃಥ್ವಿ ಅಗ್ನಿ ಋಗ್ವೇದ ಭೂಲೋಕ ಬ್ರಹ್ಮಾಂಡ ಅಂತರೀಕ್ಷ ಯಜುರ್ವೇದ ವಾಯು ಭುವರ್ಲೋಕ, ವಿಷ್ಣು ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ ಮಹೇಶ್ವರನುತ್ಪತ್ಯ ಲಯವನು, ಆ ಅಕಾರ ಉಕಾರ ಮಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾದ ಭೇದವನು, ಆ ಓಂಕಾರ ತಾರಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದ ಕಾಂತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಉತ್ಪತ್ಯವನು, ಅತಿಸೂಕ್ಷ್ಮ ಪಂಚಾಕ್ಷರಿಯ ನೆಲೆಯನು, ಅತಿಸೂಕ್ಷ್ಮ ಪಂಚಾಕ್ಷರಿಯ ನಿವೃತ್ತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಕಾಂತಿಯನು, ಚಿದಾತ್ಮ ಪರಮಾತ್ಮನುತ್ಪತ್ಯವನು, ಚಿದಾತ್ಮ ಪರಮಾತ್ಮನ ನೆಲೆಯನು, ಚಿದಾತ್ಮ ಪರಮಾತ್ಮನ ನಿವೃತ್ತಿಯನು, ಏಕಾಕ್ಷರದುತ್ಪತ್ಯವನು, ತ್ರಿಯಾಕ್ಷರದುತ್ಪತ್ಯವನು, ಸಹಸ್ರಾಕ್ಷರದುತ್ಪತ್ಯವನು, ಏಕಾಕ್ಷರದ ನೆಲೆಯನು, ತ್ರಿಯಾಕ್ಷರದ ನೆಲೆಯನು, ಸಹಸ್ರಾಕ್ಷರದ ನೆಲೆಯನು, ಏಕಾಕ್ಷರದ ನಿವೃತ್ತಿಯನು, ತ್ರಿಯಾಕ್ಷರದ ನಿವೃತ್ತಿಯನು, ಸಹಸ್ರಾಕ್ಷರದ ನಿವೃತ್ತಿಯನು, ಷಡ್ವಿಧಮುಖಂಗಳುತ್ಪತ್ಯವನು, ಷಡ್ವಿಧಮುಖಂಗಳ ನೆಲೆಯನು, ಷಡ್ವಿಧಮುಖಂಗಳ ನಿವೃತ್ತಿಯನು, ಷಡ್ವಿಧಭೂತಂಗಳುತ್ಪತ್ಯವನು, ಷಡ್ವಿಧಭೂತಂಗಳ ನೆಲೆಯನು, ಷಡ್ವಿಧಭೂತಂಗಳ ನಿವೃತ್ತಿಯನು, ಷಡ್ವಿಧಲಿಂಗದುತ್ಪತ್ಯವನು, ಷಡ್ವಿಧಲಿಂಗಗಳ ನೆಲೆಯನು, ಷಡ್ವಿಧಲಿಂಗಗಳ ನಿವೃತ್ತಿಯನು, ಷಡ್ವಿಧಕಲೆಗಳುತ್ಪತ್ಯವನು, ಷಡ್ವಿಧಕಲೆಗಳ ನೆಲೆಯನು, ಷಡ್ವಿಧಕಲೆಗಳ ನಿವೃತ್ತಿಯನು, ಷಡ್ವಿಧಸಾದಾಖ್ಯದುತ್ಪತ್ಯವನು, ಷಡ್ವಿಧಸಾದಾಖ್ಯದ ನೆಲೆಯನು, ಷಡ್ವಿಧಸಾದಾಖ್ಯದ ನಿವೃತ್ತಿಯನು, ಷಡ್ವಿಧಹಸ್ತಂಗಳುತ್ಪತ್ಯವನು, ಷಡ್ವಿಧಹಸ್ತಂಗಳ ನೆಲೆಯನು, ಷಡ್ವಿಧಹಸ್ತಂಗಳ ನಿವೃತ್ತಿಯನು, ನವಶಕ್ತಿಯ ಉತ್ಪತ್ಯವನು, ನವಶಕ್ತಿಯ ನೆಲೆಯನು, ನವಶಕ್ತಿಯ ನಿವೃತ್ತಿಯನು, ನವ ಅಧಿದೇವತೆಗಳುತ್ಪತ್ಯವನು, ನವ ಅಧಿದೇವತೆಗಳ ನೆಲೆಯನು, ನವ ಅಧಿದೇವತೆಗಳ ನಿವೃತ್ತಿಯನು, ಅಷ್ಟನಾದದುತ್ಪತ್ಯವನು, ಅಷ್ಟನಾದದ ನೆಲೆಯನು, ಅಷ್ಟನಾದದ ನಿವೃತ್ತಿಯನು, ಷಡ್ವಿಧಭಕ್ತಿಯ ಉತ್ಪತ್ಯವನು, ಷಡ್ವಿಧಭಕ್ತಿಯ ನೆಲೆಯನು, ಷಡ್ವಿಧಭಕ್ತಿಯ ನಿವೃತ್ತಿಯನು, ಷಡ್ವಿಧಪರಿಣಾಮದುತ್ಪತ್ಯವನು, ಷಡ್ವಿಧಪರಿಣಾಮದ ನೆಲೆಯನು, ಷಡ್ವಿದ ಪರಿಣಾಮದ ನಿವೃತ್ತಿಯನು, ಚತುರ್ವೇದದುತ್ಪತ್ಯವನು, ಚತುರ್ವೇದದ ನೆಲೆಯನು, ಚತುರ್ವೇದದ ನಿವೃತ್ತಿಯನು, ಅಜಪೆ ಗಾಯತ್ರಿ ಉತ್ಪತ್ಯವನು, ಅಜಪೆ ಗಾಯತ್ರಿ ನೆಲೆಯನು, ಅಜಪೆ ಗಾಯತ್ರಿಯ ನಿವೃತ್ತಿಯನು, ಷಡ್ವಿಧ ಚಕ್ರಾರ್ಪಣದ ಭೇದವನು, ಮಿಶ್ರಾರ್ಪಣ ಷಡುಸ್ಥಲ ಭೇದವನು, ಇಷ್ಟ-ಪ್ರಾಣ-ಭಾವಲಿಂಗದ ಭೇದವನು, ಇಷ್ಟ-ಪ್ರಾಣ-ಭಾವಲಿಂಗದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಡಗಿಹ ಭೇದವನು ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿ ಅಖಂಡಜ್ಯೋತಿರ್ಮಯಲಿಂಗವಾದ ಭೇದವನು. ಆತ್ಮನುತ್ಪತ್ಯವನು, ಆತ್ಮನ ನೆಲೆಯನು, ಆತ್ಮನ ನಿವೃತ್ತಿಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನೆಲೆಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನಿವೃತ್ತಿಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನುತ್ಪತ್ಯವನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನೆಲೆಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿಯನು, ಷಡ್ವಿಧ ಅರ್ಪಿತ ಅವಧಾನದ ಭೇದವನು, ನಿರಾಳ ದಶಚಕ್ರಂಗಳ ಭೇದವನು, ನಿರಾಮಯ ಷಟ್ಸ್ಥಲದ ಭೇದವನು, ನಿರಂಜನ ದಶಚಕ್ರಂಗಳ ಭೇದವನು, ನಿರಾಮಯಾತೀತ ಷಟ್ಸ್ಥಲದ ಭೇದವನು, ಷಟ್ಸ್ಥಲ ಬ್ರಹ್ಮದುತ್ಪತ್ಯವನು, ಆ ಷಟ್ಸ್ಥಲಬ್ರಹ್ಮದಲ್ಲಿ ಮೂವತ್ತಾರು ತತ್ತ್ವಂಗಳುತ್ಪತ್ಯವನು, ಷಡುಶಕ್ತಿಗಳುತ್ಪತ್ಯವನು, ಷಡಂಗಂಗಳುತ್ಪತ್ಯವನು, ಶಿವಶಕ್ತಿಗಳುತ್ಪತ್ಯವನು, ಪ್ರೇರಕಾವಸ್ಥೆಯ ದರ್ಶನದ ಭೇದವನು, ಮಧ್ಯಾವಸ್ಥೆಯ ದರ್ಶನದ ಭೇದವನು, ಕೆಳಗಾದವಸ್ಥೆಯ ದರ್ಶನವನು, ಮೇಲಾದವಸ್ಥೆಯ ದರ್ಶನದ ಭೇದವನು, ಕೇವಲಾವಸ್ಥೆಯ ದರ್ಶನವನು, ಸಕಲಾವಸ್ಥೆಯ ದರ್ಶನದ ಭೇದವನು, ಶುದ್ಧಾವಸ್ಥೆಯ ದರ್ಶನದ ಭೇದವನು, ಪಂಚಮಲಂಗಳ ದರ್ಶನವನು, ನಿರ್ಮಲಾವಸ್ಥೆಯ ದರ್ಶನದ ಭೇದವನು, ನಿರಾಳವಸ್ಥೆಯ ದರ್ಶನವನು, ನಿರಂಜನಾವಸ್ಥೆಯ ದರ್ಶನದ ಭೇದವನು, ಜ್ಞಾನವಸ್ಥೆಯ ದರ್ಶನವನು, ಶಿವಾವಸ್ಥೆಯ ದರ್ಶನದ ಭೇದವನು, ಮಂತ್ರಾಧ್ವದುತ್ಪತ್ಯವನು, ಮಂತ್ರಾಧ್ವದ ವರ್ತನೆಯನು, ಪದಾಧ್ವದುತ್ಪತ್ಯವನು, ಪದಾಧ್ವದ ವರ್ತನೆಯನು, ವರ್ಣಾಧ್ವದುತ್ಪತ್ಯವನು, ವರ್ಣಾಧ್ವದ ವರ್ತನೆಯನು, ಭುವನಾಧ್ವದುತ್ಪತ್ಯವನು, ಭುವನಾಧ್ವದ ವರ್ತನೆಯನು, ತತ್ವಾಧ್ವದುತ್ಪತ್ಯವನು, ತತ್ವಾಧ್ವದ ವರ್ತನೆಯನು, ಕಲಾಧ್ವದುತ್ಪತ್ಯವನು, ಕಲಾಧ್ವದ ವರ್ತನೆಯನು, ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳ, ತಾಮಸನಿರಸನವ ಮಾಡಿ ನುಡಿದ ವಚನದ ಭೇದವನು, ತತ್‍ಪದ ತ್ವಂಪದ ಅಸಿಪದಂಗಳ ಭೇದವನು, ಆ ತ್ವಂಪದ ತತ್ಪದ ಅಕಾರ ಉಕಾರ ಮಕಾರಂಗಳಲ್ಲಿ ಅಡಗಿಹ ಭೇದವನು, ಆ ಆಕಾರ ಉಕಾರ ಮಕಾರ ಏಕವಾಗಿ ಷಟ್ಸ್ಥಲಬ್ರಹ್ಮವಾದ ಭೇದವನು, ವಚನಾನುಭಾವದ ಭೇದವನು ಅರಿಯೆನು, ಎಲೆ ಸದ್ಗುರುಸ್ವಾಮಿ ನಿರೂಪಿಸೆಂದು, ಆ ಶಿಷ್ಯನು ಬಿನ್ನವಿಸಲು ಆ ಸದ್ಗುರುಸ್ವಾಮಿ ನಿರೂಪಿಸಿದ ವಚನವೆಂತೆಂದಡೆ : ಅನಂತಕೋಟಿ ಮಹಾಬ್ರಹ್ಮಾಂಡ ಮೊದಲಾಗಿ ಅನಂತಕೋಟಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಅತಿಮಹಾಬ್ರಹ್ಮಾಂಡಂಗಳೇನೂಯೇನೂ ಎನಲಿಲ್ಲದಂದು, ಅನಂತಕೋಟಿ ಮಹಾಬ್ರಹ್ಮಾಂಡಂಗಳನೊಳಕೊಂಡು ಇನ್ನೂರಿಪ್ಪತ್ನಾಲ್ಕು ಮಹಾಭುವನ ಮೊದಲಾಗಿ ಅತಿಮಹಾಭುವನಂಗಳು ಅತಿಮಹಾತೀತವೆಂಬ ಮಹಾಭುವನಂಗಳು ಕಡೆಯಾಗಿ ಅನಂತಕೋಟಿ ಅತಿಮಹಾತೀತ ಭುವನಂಗಳು ಏನೂಯೇನೂ ಇಲ್ಲದಂದು ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಮಹಾಘನವ ಮೀರಿದತ್ತತ್ತವಾಗಿಹ ಅಖಂಡ ಅಖಂಡಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ರುದ್ರ ಈಶ್ವರ ಸದಾಶಿವ ಬ್ರಹ್ಮ ನಾರಾಯಣರಳಿದುಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ದೇವರ್ಕಳಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳನರಿಯದೆ ಅನಂತಕೋಟಿ ವೇದಂಗಳು, ಅನಂತಕೋಟಿ ಮುನಿಗಳು, ಅನಂತಕೋಟಿ ಲೋಕಾದಿಲೋಕಂಗಳೆಲ್ಲ ಪ್ರಳಯಕ್ಕೊಳಗಾದರು ನೋಡಾ. ಆ ಅಖಂಡಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ಈ ಲೋಕದ ಜಡರುಗಳೆತ್ತ ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಂಗೆ ಗುರುಪ್ರಸಾದ, ಮಾಹೇಶ್ವರಂಗೆ ಲಿಂಗಪ್ರಸಾದ, ಪ್ರಸಾದಿಗೆ ಜಂಗಮಪ್ರಸಾದ, ಪ್ರಾಣಲಿಂಗಿಗೆ ಜ್ಞಾನಪ್ರಸಾದ, ಶರಣಂಗೆ ಪ್ರಸನ್ನ ಪ್ರಸಾದ, ಐಕ್ಯಂಗೆ ನಿಜಪ್ರಸಾದ. ಹೀಂಗಲ್ಲದೆ ರಣದ ವೀರರಂತೆ ಸೂರೆಗೂಳಿನಲ್ಲಿ ಅದಾರ ಪ್ರಸಾದ ಹೇಳಾ? ತ್ರಿವಿಧಶೇಷಪ್ರಸಾದವ ಕೊಂಬಲ್ಲಿ ಸಮಭೇದವನರಿತು, ಪ್ರಸಾದದ ಕ್ರಮಭೇದವ ಕಂಡು, ಆಯತ ಸ್ವಾಯತ ಸನ್ನಹಿತವೆಂಬ ತ್ರಿವಿಧ ಕ್ರೀಯ ವಿಚಾರಿಸಿ ನಡೆವುದು ಷಟ್ಸ್ಥಲದ ಕ್ರೀ, ಆಚಾರಕ್ಕೆ ಇಕ್ಕಿದ ಗೊತ್ತು, ಏಲೇಶ್ವರಲಿಂಗವು ವ್ರತಸ್ಥನಾದ ಯುಕ್ತಿ.
--------------
ಏಲೇಶ್ವರ ಕೇತಯ್ಯ
ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ ಭಕ್ತರೆಂತಾದಿರಿ ಭೋ ! ಭಕ್ತಿ ಷಟ್ಸ್ಥಲದ ಭೇದವ ನಿಶ್ಚೈಸಲರಿಯದೆ ಜಂಗಮವೆಂತಾದಿರಯ್ಯಾ ? ನಿಃ ಕಾಮಿಯಾಗಿ ನಿಃ ಪ್ರಿಯನಾಗಿ ನಿರ್ಮೋಹಿಯಾಗಿ, ನಿರಾಶ್ರಿತನಾಗಿ ನಿರ್ಲೇಪನಾಗಿ, ಉಭಯಗುಣ ರಹಿತನಾಗಿ, ಸರ್ವಾಂಗದಲ್ಲಿ ನಿರ್ಮೋಹಿಯಾಗಿ, ತನು ಮನ ಧನ ಸುಖಾದಿಗಳ ನಿರ್ವಹಿಸಿ, ಬಂದುದನೆ ಪರಿಣಾಮಿಸಿ ಇರಬಲ್ಲಡೆ ಜಂಗಮಸ್ಥಲವಹುದು. ಆತನೆ ಜಂಗಮವೆಂಬುದಾಗಿತ್ತಾಗಿ ಗುಹೇಶ್ವರ ಲಿಂಗ ತಾನೆಂಬೆ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->