ಅಥವಾ

ಒಟ್ಟು 37 ಕಡೆಗಳಲ್ಲಿ , 22 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ ! ಎನ್ನಲ್ಲೇನನರಸುವೆ ನಂಬಿಯೂ ನಂಬದ ಡಂಬಕ ನಾನಯ್ಯಾ, ಹಾವ ತೋರಿ ಹವಿಯ ಬೇಡುವಂತೆ- ಕೂಡಲಸಂಗಮದೇವಾ. 283
--------------
ಬಸವಣ್ಣ
ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗ ನಡೆಯಲ್ಲಿ ಹಾವ ಕಂಡು ಮರಳುವ ಗಾವಿಲತನವ ನೋಡಾ! ತನ್ನಿಂದನ್ಯವೆಂದಡೆ ಬ್ಥಿನ್ನ ವ್ಯತಿಕರವಾಯಿತ್ತು. ತನ್ನ ಪರಮಾರ್ಥ ತನ್ನಲ್ಲಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಮಾಯಾಮರ್ಕಟ, ಜಡವೆ!
--------------
ಚಂದಿಮರಸ
ಹಾವ ಹಿಡಿದ ಚೇಳು ತಾನೆದ್ದೂರಲು ಮೂಜಗವೆಲ್ಲವು ಬೇನೆಹತ್ತಿ ಬೇವುತ್ತಿದೆ ನೋಡಾ. ಚೇಳಿನ ಮುಳ್ಳ ಮುರಿಯಲು ಬೇನೆ ಮಾಬುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ, ಕೋಡಗ ಸತ್ತ ಜೋಗಿಯಂತಾದರು. ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ, ಹಾವ ಹಿಡಿದ ಕೋಡಗದಂತಾದರು. ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ. ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಹಾವ ಕೊಂದು ತಿಂದ ಹದ, ತಾ ತಿಂದಡೆ, ಸ್ವಾನುಭಾವಜ್ಞಾನಿ. ಹುಲಿಯ ಕೊಂದ ನಾಯ ಕೊಲ್ಲದೆ ತಂದಡೆ, ಆತ ಪರಂಜ್ಯೋತಿ ಪ್ರಕಾಶ. ಇಂತೀ ಹಾವಿನ ಹಗೆ, ಹುಲಿಯ ವಿರೋಧ. ಇಂತೀ ಉಭಯವ ತಿಂದವನ ತಿಂದು, ವಿಚ್ಛಂದವಿಲ್ಲದೆ ಬದುಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಮಹಾಮಲೆಯ ವ್ಯಾಘ್ರನ ನೀರ ನಕ್ರ ಕಚ್ಚಿ, ನಕ್ರನ ಹಂದಿ ಕಚ್ಚಿ, ಹಂದಿಯ ನಾಯಿ ಕಚ್ಚಿ, ನಾಯಿಯ ಕಾಳೋರಗ ಕಚ್ಚಿ ಹೆಡೆಯೆತ್ತಿ ಆಡಲಾಗಿ, ಆಕಾಶದ ಹದ್ದು ಕಂಡು ಎರಗಲಾಗಿ, ಹೆಡೆಯುಡಿಗಿ ಸುನಿಗಳು ಬಿಟ್ಟು, ಹಂದಿ ಸತ್ತು, ನಕ್ರ ಬಿದ್ದು, ವ್ಯಾಘ್ರ ಪಲಾಯನವಾಗಿ, ಹಾವ ಹದ್ದು ಕಚ್ಚಿ, ಹದ್ದು ಹಾವ ಕಚ್ಚಿ, ಹದ್ದಳಿದು ಹಾವು ಉಳಿದ ಭೇದವ ತಾನೆ ಬಲ್ಲನಲ್ಲದೆ ಈ ಲೋಕದ ಜಡಜೀವಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು. ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ. ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು. ಗಾರಾದೆನಯ್ಯಾ ಈ ಹಾವ ಕಂಡು. ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ]. ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು. ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಸಿದ ಹಾವಿನ ಹೆಡೆಯಲ್ಲಿ ಇಲಿ ಬಿಲನ ತೋಡುತ್ತದೆ. ಹೆಡೆಯಲ್ಲಿ ಹೆಬ್ಬಿಲ, ಕಣ್ಣಿನ ಓಹರಿಯಲ್ಲಿ ಹುಲ್ಲಿನ ಹಾಸಿಕೆಯ ಶಯನದ ಮನೆ, ಮೂಗಿನ ವಾಸದಲ್ಲಿ ತಪ್ಪು ದಾರಿ, ಬಾಲದ ತುದಿಯಲ್ಲಿ ಹುಡುಪ. ಹಾವ ಹಿಡಿದಲ್ಲಿಯೇ ಸಿಕ್ಕಿತ್ತು. ಸದಾಶಿವಮೂರ್ತಿಲಿಂಗವನರಿದಲ್ಲಿ ಚಿತ್ತ ನಿಂದಿತ್ತು.
--------------
ಅರಿವಿನ ಮಾರಿತಂದೆ
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ? ಹುತ್ತವನಗೆದು, ಮಡುವ ಹೂಳಿ, ಕಾನನವ ತರಿದು, ಇಂತಿವ ಹಿಡಿಯಬೇಕು. ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ.
--------------
ಬಿಬ್ಬಿ ಬಾಚಯ್ಯ
ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು, ಸದಾಚಾರಿಗಳೆಲ್ಲಾ ಬನ್ನಿರಿಂದು, ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು ಕೀಲಿಗೆ ದೇವಾಲಯವ ನೋಡುವವನಂತೆ, ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ? ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ ಬೀಗಿ ಬೆಳೆದ ಹೊಲಕ್ಕೆ ಬೇಲಿಯ ಕಟ್ಟಿದಡೆ ಚೇಗೆಯುಂಟೆ? ಹಾವ ಪಶುವಿಂಗೆ ಮಾಣಿಸಿದಡೆ ದೋಷ ಉಂಟೆ ಗಾವಿಲಂಗೆ ಭಾವದ ಬುದ್ಧಿಯ ಹೇಳಿದವಂಗೆ ನೋವುಂಟೆ? ಬೇವ ನೋವ ಕಾಯಕ್ಕೆ ಜೀವವೆಂಬ ಬೆಳಗೇ ವ್ರತ. ಭಾವವೆಂಬ ಬೇಲಿಯ ಸಾಗಿಸಿಕೊಳ್ಳಿ. ಲೂಟಿಗೆ ಮೊದಲೆ ಬಸವ ಚೆನ್ನಬಸವಣ್ಣ ಪ್ರಭುದೇವ ಮೊದಲಾಗಿ ಶಂಕೆಗೆ ಮುನ್ನವೆ ಹೋದೆಹೆನೆಂಬ ಭಾವ ತೋರುತ್ತಿದೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಏಲೇಶ್ವರದ ಗೊತ್ತು ಕೆಟ್ಟಿತ್ತು.
--------------
ಅಕ್ಕಮ್ಮ
ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು ನಾಲ್ಕೂ ದೆಸೆಯಲಟ್ಟುತ ಬರೆ ಕಂಡು ಭಯದಿಂದ ಹೋಗ ದೆಸೆಯಿಲ್ಲದೆ ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ ಜೇನುಹುಳು ಮೈಯನೂರುವಾಗ ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು ನಿರ್ವಿಷಯನಾಗಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇನ್ನಷ್ಟು ... -->