ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು. ಲಿಂಗವ ಕುರಿತು ಮಾಡುವಲ್ಲಿ ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು. ಜಂಗಮವ ಕುರಿತು ಮಾಡುವಲ್ಲಿ ರುದ್ರನ ಪಾಶವ ಹೊದ್ದದಿರಬೇಕು. ಒಂದನರಿದು ಒಂದ ಮರೆದು ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
ಗೋಡೆಯ ತೊಳೆದು ಕೆಸರ ಕೆಡಿಸಿಹೆನೆಂದಡೆ, ಅದಾರ ವಶ? ನೇಮಕ್ಕೆ ಕಡೆ ನಡು ಮೊದಲಿಲ್ಲ. ಒಂದ ಬಿಟ್ಟು ಒಂದ ಹಿಡಿದೆಹೆನೆಂದಡೆ, ಸಂದಿಲ್ಲದ ಸಂಶಯ. ಅದು ಚಂದೇಶ್ವರಲಿಂಗಕ್ಕೆ ದೂರ ಮಡಿವಾಳಯ್ಯಾ.
ಗುರುವರಿದಲ್ಲಿ ಬ್ರಹ್ಮನ ಕಲ್ಪ ಹರಿವುದು. ಲಿಂಗವನರಿದಲ್ಲಿ ವಿಷ್ಣುವಿನ ಸ್ಥಿತಿಯು ಹರಿವುದು. ಜಂಗಮವನರಿದಲ್ಲಿ ರುದ್ರನ ಲಯಕ್ಕೆ ಸಿಕ್ಕ. ಈ ತ್ರಿವಿಧ ಭೇದವನರಿದು, ತನ್ನ ತಾನರಿದಲ್ಲಿ ಬಂಧ ಮೋಕ್ಷ ಕರ್ಮ ಒಂದೂ ಇಲ್ಲ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿದಲ್ಲಿ.
ಗುರುವನರಿತು ಮಾಡುವಲ್ಲಿ ಅಹಂಕಾರವ ಮರೆದುಮಾಡಬೇಕು. ಲಿಂಗವನರಿತು ಮನಮುಟ್ಟುವಲ್ಲಿ ಪ್ರಕೃತಿ ತಲೆದೋರದಿರಬೇಕು ಜಂಗಮವನರಿತು ಮುಟ್ಟಿ ಪೂಜಿಸುವಲ್ಲಿ ಅರ್ಥ ಪ್ರಾಣ ಅಪಮಾನ ಈ ಮೂರರಲ್ಲಿ ನಿಶ್ಚಯವಾಗಿರಬೇಕು ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಬಲ್ಲಡೆ.
ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ ವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ. ಇಂತು ಗುರುಲಿಂಗಕ್ಕೆ ಮಾಡಿ ಹಿಂದಣ ಮುಂದಣ ಸಂದೇಹಕ್ಕೀಡಾದೆ. ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆ ಮನಸಂದು ಮಾಡಲಾಗಿ ಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ.
ಗುರು ಶಿಷ್ಯಂಗೆ ಬೋಧಿಸುವಲ್ಲಿ ತನ್ನನಳಿದು ಲಿಂಗವ ತೋರಿಸಬೇಕು. ಲಿಂಗದ ಸಂಗ ನೆನಹಾದಲ್ಲಿ ಆ ಲಿಂಗಕ್ಕೆ ಉಂಬ ಬಾಯಿ ಜಂಗಮವಾದ ಕಾರಣ, ಆ ಜಂಗಮಲಿಂಗದ ದಾಸೋಹದಿಂದ ಬೇರೊಂದಂಗವಿಲ್ಲ. ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗವು ಹಿಂಗದ ಭಾವ ಕಾಣಾ ಮಡಿವಾಳಯ್ಯಾ.
ಗುರುವಿಂಗೆ ಮೋಹಿತವಾಗಿ ಮಾಡುವಲ್ಲಿ ಮನ ಲಿಂಗವ ಮುಟ್ಟದಿರಬೇಕು. ಲಿಂಗಕ್ಕೆ ಮೋಹಿತವಾಗಿ ಮಾಡುವಲ್ಲಿ ಮನ ಜಂಗಮವ ಮುಟ್ಟದಿರಬೇಕು. ಜಂಗಮಕ್ಕೆ ಮೋಹಿತವಾಗಿ ಮಾಡುವಲ್ಲಿ ಮೂರು ಮಲತ್ರಯವ ಮುಟ್ಟದಿರಬೇಕು. ಆ ಘನವನರಿತು ಮಾಡುವಲ್ಲಿ ಸಂಗನ ಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಅರ್ಪಿತ