ಅಥವಾ

ಒಟ್ಟು 20 ಕಡೆಗಳಲ್ಲಿ , 12 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ : ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ : ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ : ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಬ್ಥಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ : ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, Iೂಕಾರವೆ ಉಗ್ರ, ಲೃಕಾರವೆ ಭೃಂಗಿರೀಟಿ, ಲೂೃಕಾರವೆ ಬ್ಥೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ : ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ : ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀದ್ಥಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.
--------------
ಮುದ್ವೀರ ಸ್ವಾಮಿ
ಹೋಗುವ ಬನ್ನಿರಯ್ಯ ; ಶಕ್ತಿಪಾತವಾದ ಶಿವಯೋಗೀಶ್ವರರು ಶಿವಭಕ್ತರು ಹೋಗುವ ಬನ್ನಿರಯ್ಯ. ಸುಕ್ಷೇತ್ರದಲ್ಲಿರ್ಪ ಮಹಲಿಂಗದರುಶನಕೆ ಹೋಗುವ ಬನ್ನಿರಯ್ಯ. ಜೀವಸಂಚಾರವೆಂಬ ಪ್ರಾಕೃತವೆನಿಸುವ ಅಧೋಕುಂಡಲಿಸ್ವರೂಪಮಾದ ಅಹಂ ಎಂಬ ಹೆಬ್ಬಟ್ಟೆಯಂ ಬಿಟ್ಟು, ಸಜ್ಜೀವವೆಂಬ ವೈಕೃತವೆನಿಸುವ ಮಧ್ಯಕುಂಡಲಿಸ್ವರೂಪಮಾದ ಸೋಹಮೆಂಬ ಸಣ್ಣಬಟ್ಟೆಯ ಹಿಡಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ಕೇವಲ ಶಿವಯೋಗವೆಂಬ ಏಕವೆನಿಸುವ ಊಧ್ರ್ವಕುಂಡಲಿಸ್ವರೂಪಮಾದ ಓಂ ಎಂಬ ನುಸುಳುಗಂಡಿಯಂ ನುಸಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ದ್ವಯಮಂಡಲವ ಭ್ರೂಮಧ್ಯವೆಂಬ ಮಹಾಮೇರುವ ಮಧ್ಯದಲ್ಲಿ ಏಕಮಂಡಲಾಕಾರ ಮಾಡಿ, ಆ ಕಮಲಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಮಹಾಲಿಂಗದಲ್ಲಿ ಜೀವಪರಮರಿಬ್ಬರನೇಕಾರ್ಥವಂ ಮಾಡಿ, ಶಾಂಭವೀಮುದ್ರಾನುಸಂಧಾನದಿಂದೆ ಅಧೋಮುಖಕಮಲವೆಲ್ಲ ಊಧ್ರ್ವಮುಖವಾಗಿ, ಆ ಮಹಾಲಿಂಗವ ನೋಡುತಿರಲು ಆ ಕಮಲಸೂತ್ರವಿಡಿದಿಹ ಷಡಾಧಾರಚಕ್ರಂಗಳ ಊಧ್ರ್ವಮುಖವಾಗಿ ಆ ಕಮಲದಲ್ಲಿ ಅಡಗಿ, ಆ ಕಮಲದ ಎಸಳು ಐವತ್ತೆರಡಾಗಿ ಎಸೆವುತಿರ್ಪವು. ಪರಿಪೂರ್ಣ ಜ್ಞಾನದೃಷ್ಟಿಯಿಂ ಆ ಮಹಾಲಿಂಗಮಂ ನಿರೀಕ್ಷಿಸಲು ಆ ಕಮಲದಲ್ಲಿ ಮಹಾಲಿಂಗಸ್ವರೂಪಮಾಗಿ ಸಕಲ ಕರಣೇಂದ್ರಿಯಂಗಳು ಆ ಮಹಾಲಿಂಗದಲ್ಲಿಯೆ ಅಡಗಿ, ಸುನಾದಬ್ರಹ್ಮವೆಂಬ ಇಷ್ಟವೆ ಮಹಾಲಿಂಗವೆಂದರಿದು ನೋಡುತ್ತಿರಲು, ಜ್ಯೋತಿರ್ಮಯವಾಗಿ ಕಾಣಿಸುತಿಪ್ಪುದು. ಅದೇ ಜೀವಪರಮರೈಕ್ಯವು ; ಅದೇ ಲಿಂಗಾಂಗಸಂಬಂಧವು. ಆ ಮಹಾಲಿಂಗದ ಕಿರಣಂಗಳೆ ಕರಣಂಗಳಾಗಿ ಆ ಕಮಲವು ಅಧೋಮುಖವಾಗಿ ಆ ಮಹಾಲಿಂಗವು ತನ್ನ ನಿಜನಿವಾಸವೆನಿಸುವ `ಅಂತರೇಣ ತಾಲುಕೇ' ಎಂಬ ಶ್ರುತಿ ಪ್ರಮಾಣದಿ ತಾಲುಮೂಲದ್ವಾದಶಾಂತವೆಂಬ ಬ್ರಹ್ಮರಂಧ್ರದ ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪುದೊಂದು ಶಿವಚಕ್ರವು. ಆ ಶಿವಚಕ್ರವೆ ಶಿವಲೋಕವೆನಿಸುವುದು. ಆ ಶಿವಲೋಕವೆ ಶಾಂಭವಲೋಕವೆನಿಸುವುದು. ಶಾಂಭವಲೋಕವೆ ಶಾಂಭವಚಕ್ರವೆನಿಸುವುದು. ಆ ಶಾಂಭವಚಕ್ರದಲ್ಲಿ ಆಧಾರವಾದಿ ಪಶ್ಚಿಮಾಂತ್ಯವಾದ ನವಚಕ್ರಂಗಳು ಸಂಬಂಧವಾಗಿರುತಿರ್ಪವು. ಅದು ಹೇಗೆಂದೊಡೆ ; ಆ ಶಾಂಭವಚಕ್ರಮಧ್ಯದ ಚತುರ್ದಳಾಗ್ರದಲ್ಲಿ ಅಗ್ನಿಮಂಡಲದಲ್ಲಿ ಅಷ್ಟದಳ ಇರ್ಪುವು. ಆ ಅಷ್ಟದಳ ಚತುರ್ದಳದಲ್ಲಿ `ವಶಷಸ' ಎಂಬ ನಾಲ್ಕಕ್ಷರಯುಕ್ತವಾದ ಆಧಾರಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ನ' ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ತಾರಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಗ್ನಿಮಂಡಲದ ಚತುರ್ದಳದ ಈಶಾನ್ಯ ದಳದಲ್ಲಿ `ಬ ಭ ಮ ಯ ರ ಲ' ಎಂಬ ಆರಕ್ಷರಯುಕ್ತವಾದ ಸ್ವಾದ್ಥಿಷ್ಠಾನಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಮ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದಂಡಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳಾಗ್ರದಲ್ಲಿ ಸೂರ್ಯಮಂಡಲವಿರ್ಪುದು. ಆ ಸೂರ್ಯಮಂಡಲದಲ್ಲಿ `ಡಢಣ ತಥದಧನ ಪಫ' ಎಂಬ ದಶಾಕ್ಷರಯುಕ್ತವಾದ ಮಣಿಪೂರಕಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಶಿ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಕುಂಡಲಾಕೃತಿಯಲ್ಲಿ ಸಂಬಂಧವಾಗಿರ್ಪುದು. `ಕಖಗಘಙ ಚಛಜಝಞ ಟಠ' ಎಂಬ ದ್ವಾದಶಾಕ್ಷರಯುಕ್ತವಾದ ಅನಾಹತಚಕ್ರವು ಸೂರ್ಯಮಂಡಲದಲ್ಲಿ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ವ'ಕಾರವು ಆ ಮಹಾಲಿಂಗಸ್ವರೂಪವಾದಪ್ರಣವದ ಅರ್ಧಚಂದ್ರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳದಮಧ್ಯದಲ್ಲಿ ಚಂದ್ರಮಂಡಲವಿರ್ಪುದು. ಆ ಚಂದ್ರಮಂಡಲದಲ್ಲಿ- `ಅ ಆ ಇ ಈ ಉ ಊ ಋ Iೂ ಲೃ ಲೂೃ ಏ ಐ ಓ ಔ ಅಂ ಅಃ' ಎಂಬ ಷೋಡಶಾಕ್ಷರಯುಕ್ತವಾದ ವಿಶುದ್ಧಿಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಯ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಮಹಾಲಿಂಗಕ್ಕೆ ಪೀಠಮಾಗಿರ್ದ ಬಿಂದುಯುಕ್ತಮಾದ ಪ್ರಣವವು ಆ ಮಹಾಲಿಂಗದ ಮುಂದಿರ್ದ `ಹಂ ಳಂ ಹಂ ಕ್ಷಂ' ಎಂಬ ಚುತವರ್ಣಾಕ್ಷರಯುಕ್ತವಾದ ಆಜ್ಞಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಓಂಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಜ್ಯೋತಿರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಚತುರ್ದಳವು ತ್ರಿದಳದಲ್ಲಿ ಕ್ಷ ಉ ಸ ಎಂಬ ತ್ರಯಕ್ಷರಯುಕ್ತವಾದ ಶಿಖಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ಕ್ಷ' ಕಾರವು ಆ ಮಹಾಲಿಂಗಸ್ವರೂಪವಾದ ಕುಂಡಲಾಕೃತಿ ಅರ್ಧಚಂದ್ರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಆ ಚತುರ್ದಳದ ಮಧ್ಯದಲ್ಲಿ ಬಟುವೆ ಏಕದಳವೆನಿಸಿಕೊಂಬುದು. ಆ ಏಕದಳದಲ್ಲಿ ಪಶ್ಚಿಮಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಹ್ರಾಂ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿ ಜ್ಯೋತಿರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಹೀಂಗೆ ಅಷ್ಟಚಕ್ರಂಗಳ ತನ್ನೊಳಗೆ ಗಬ್ರ್ಥೀಕರಿಸಿಕೊಂಡು ಬೆಳಗುತ್ತಿರ್ಪುದೊಂದು ಬ್ರಹ್ಮರಂಧ್ರಚಕ್ರವು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಹ್ರೀಂ ಕಾರಗಳು. ಆ ಹರದನಹಳ್ಳಿಯ ಪ್ರಭುಲಿಂಗಗುರುಸ್ವಾಮಿಯ ಶಿಷ್ಯರು ನಿಜಾನಂದ ಗುರುಚೆನ್ನಯ್ಯನವರು. ಆ ನಿಜಾನಂದ ಗುರುವಿನ [ಶಿಷ್ಯರು] ಗುರುಸಿದ್ಧವೀರೇಶ್ವರದೇವರು. ಆ ಸಿದ್ಧವೀರೇಶ್ವರದೇವರ ಕರಕಮಲದಲ್ಲಿ ಉದಯವಾದ ಬಾಲಸಂಗಯ್ಯನು ನಾನು. ಆ ನಿರಂಜನ ಗುರುವೆ ತಮ್ಮ ಕೃಪೆಯಿಂದ ತಮ್ಮಂತರಂಗದಲ್ಲಿರ್ದ ಅತಿರಹಸ್ಯವಾದ ಶಾಂಭವಶಿವಯೋಗವೆಂಬ ಮಹಾಜ್ಞಾನೋಪದೇಶಮಂ ಹರಗುರು ವಾಕ್ಯಪ್ರಮಾಣಿನಿಂ ಎನ್ನ ಹೃದಯಕಮಲದಲ್ಲಿ ಕರತಳಾಮಳಕದಂತೆ ತೋರಿ, ಆ ಹೃದಯಕಮಲಕರ್ಣಿಕಾಮಧ್ಯದಲ್ಲಿರ್ಪ ನಿರಂಜನಗುರುವೆ ನಿರಂಜನಮಹಾಲಿಂಗವೆಂದರಿದು ಆ ನಿರಂಜನಮಹಾಲಿಂಗವೆ ಕರಸ್ಥಲದಲ್ಲಿರ್ಪ ಸುನಾದಬ್ರಹ್ಮವೆಂಬ ಇಷ್ಟಲಿಂಗವೆಂದರಿದು, ಆ ಕರಸ್ಥಲದಲ್ಲಿರ್ಪ ಇಷ್ಟಲಿಂಗವೆ ತಾನೆಂದರಿದು ``ಮಂತ್ರಮಧ್ಯೇ ಭವೇತ್‍ಲಿಂಗಂ ಲಿಂಗಮಧ್ಯೇ ಭವೇತ್‍ಮಂತ್ರಂ | ಮಂತ್ರಲಿಂಗದ್ವಯಾದೇಕಂ ಇಷ್ಟಲಿಂಗಂತು ಶಾಂಕರಿ ||' ಎಂದುದಾಗಿ, ಎನ್ನ ಹೃತ್ಕಮಲಕರ್ಣಿಕಾಮಧ್ಯದಲ್ಲಿ ಶಾಂಭವೀಮುದ್ರಾನುಸಂಧಾನದಿಂದ ಆ ಲಿಂಗವೆ ಮಂತ್ರ, ಮಂತ್ರವೆ ಲಿಂಗವೆಂದರಿದು ಓಂ ಓಂ ಎಂದು ಶಿವಸಮಾದ್ಥಿಯ ಜಪಮಂ ಜಪಿಸುತ್ತ ಜ್ಯೋತಿರ್ಲಿಂಗಮಂ ಕೇಳುತ, ಜ್ಯೋತಿರ್ಲಿಂಗದೊಳು ಮುಳುಗಾಡುತ್ತಿರ್ದೆನಯ್ಯಾ ಬಸವಣ್ಣಪ್ರಿಯ ಚೆನ್ನಸಂಗಯ್ಯನೆಂಬ ಗುರುವಿನ ಕೃಪೆಯಿಂದ, ನಿಮ್ಮ ಶರಣರ ಪಡುಗ ಪಾದರಕ್ಷೆಯ ಹಿಡಿವುದಕ್ಕೆ ಯೋಗ್ಯನಾದೆನಯ್ಯ ನಿಮ್ಮ ಕೃಪೆಯಿಂದ.
--------------
ಭಿಕ್ಷದ ಸಂಗಯ್ಯ
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗಕ್ಕೆ ಅರ್ಪಿಸುವಾಗ, ಇಷ್ಟಲಿಂಗದಲ್ಲಿ ಮೂಲಮಂತ್ರವ ಧ್ಯಾನಿಸುವ ಕ್ರಮವು: ಓಂ ಹ್ರಾಂ ನಾಂ ಸದ್ಯೋಜಾತ ಆಚಾರಲಿಂಗಾಯನಮಃ ಇಷ್ಟಲಿಂಗದ ಶಕ್ತಿ ಪೀಠದ ಹಿಂದೆಸೆಯಲ್ಲಿ ಸಂಬಂಧ. ಓಂ ಹ್ರೀಂ ಮಾಂ ವಾಮದೇವ ಗುರುಲಿಂಗಾಯನಮಃ ಇಷ್ಟಲಿಂಗದ ಎಡದ ಕೈಯಲ್ಲಿ ಸಂಬಂಧ. ಓಂ ಹ್ರೂಂ ಸಿಂ ಅಘೋರ ಶಿವಲಿಂಗಾಯನಮಃ ಇಷ್ಟಲಿಂಗದ ಬಲಭಾಗದ ವರ್ತುಳದ ಸಂಧಿಲಿ ಸಂಬಂಧ. ಓಂ ಹ್ರೈಂ ವಾಂ ತತ್ಪುರುಷ ಜಂಗಮಲಿಂಗಾಯನಮಃ ಇಷ್ಟಲಿಂಗದ ಎಡದ ಭಾಗದ ಗೋಮುಖದಲ್ಲಿ ಸಂಬಂಧ. ಓಂ ಹ್ರೌಂ ಯಾಂ ಈಶಾನ್ಯ ಪ್ರಸಾದಲಿಂಗಾಯನಮಃ ಇಷ್ಟಲಿಂಗದ ನಾಳದಲ್ಲಿ ಸಂಬಂಧ. ಓಂ ಹ್ರಃ ಓಂ ಗೋಪ್ಯಮುಖ ಮಹಾಲಿಂಗಾಯನಮಃ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧ. ಓಂ ಬಾಂ ಅಂ ಇಷ್ಟಲಿಂಗಾಯನಮಃ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧ. ಓಂ ಸಾಂ ಉಂ ಪ್ರಾಣಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ವರ್ತುಳದಲ್ಲಿ ಸಂಬಂಧ. ಓಂ ವಾಂ ಮಾಂ ಭಾವಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ಗೋಮುಖದ ತುದಿಯಲ್ಲಿ ಸಂಬಂಧ ಶಾಂತಕೂಡಲಸಂಗಮದೇವಾ.
--------------
ಗಣದಾಸಿ ವೀರಣ್ಣ
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮರಲ್ದುಂ, ಮೂರನೆಯ ಸೂರ್ಯಮಂಡಲದ ಮೂವತ್ತೆರಡೆಸಳ್ಗಳಲ್ಲಿ,್ಞ ಆನಂತ ಸೂಕ್ಷ್ಮ ಶಿವೋತ್ತಮೈಕ ನೇತ್ರೈಕ ಏಕರುದ್ರ ತ್ರಿಮೂರ್ತಿ ಶ್ರೀಕಂಠ ಶಿಖಂಡಿಗಳೆಂಬಷ್ಟ ವಿದ್ಯೇಶ್ವರರುದ್ರರು ಇಂದ್ರಾಗ್ನಿ ಯಮ ನಿಋತಿ ವರುಣ ವಾಯು ಕುಬೇರೀಶಾನರೆಂಬಷ್ಟ ಲೋಕಪಾಲರಂ ಧವ ಧ್ರುವಂ ಸೋಮ ನಪ[ನ]ನಿಲಂ ಅನಲ ಪ್ರತ್ಯೂಷ ಪ್ರಭಾಸರೆಂಬೀಯಷ್ಟವಸುಗಳ ಇಂದ್ರ ಸತ್ಯ ಭೃಂಗಿಯಂತರ್ಲಕ್ಷಣನೆಂಬೀಯಿಂದ್ರದಿಕ್ಕಿನ ಚೌದಳ ವಾಸ್ತವದೇವತೆಗಳ ನಗ್ನಿ ಪೂಷ ವಿತಿ ದಮರೆಂಬಗ್ನಿದಿಕ್ಕಿನ ಚೌದಳದ ವಾಸ್ತವದೇವತೆಗಳು, ಯಮ ಭಾಸ್ಕರ ಪುಷ್ಷದತ್ತ ಬಲಾಷ್ಮರೆಂಬೀ ಯಮದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ನೈಋತ್ಯ ದೌವಾರಿಕ ಸುಗ್ರೀವಾರುಣರೆಂಬೀ ನೈಋತ್ಯದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ವರುಣೌಸುರ ಗಹ್ವರರ ವೇದರೆಂಬೀ ವರುಣದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ವಾಯು ನಾಗ ಮುಖ್ಯ ಸೋಮರೆಂಬೀ ವಾಯುದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ಕುಬೇರಅಗ್ಭರಾದಿತ್ಯದಂತಿಗಳೆಂಬ ಕುಬೇರದಿಕ್ಕಿನ ಚೌದಳದ ವಾಸ್ತವದೇವತೆಗಳನು ಈಶಾನ್ಯ ಪರ್ಜನ್ಯ ಜಯಂತ ಸಂಕ್ರಂದರೆಂಬೀ ಈಶಾನ್ಯದಿಕ್ಕಿನ ಚೌದಳದ ವಾಸ್ತವದೇವತೆಗಳನುಮೀ ಪ್ರಕಾರಮಾದ ಮೂವತ್ತೆರಡು ದಳಂಗಳಲ್ಲಿ ಭಾವಿಪುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಚಿದ್‍ವ್ಯೋಮ ಪ್ರಭಾಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಪೃಥ್ವೀಚಕ್ರಕ್ಕೆ ಶರೀರವೇ ಪೂರ್ವ, ಶರೀರದೊಳಗಣ ಪೃಥ್ವಿಯೇ ಪಶ್ಚಿಮ, ಜಿಹ್ವೆಯಲ್ಲಿ ಕೊಂಬ ಆಹಾರಾದಿಪೃಥ್ವಿಯೇ ಉತ್ತರ, ಅಧೋಮುಖದಲ್ಲಿ ವಿಸರ್ಜನರೂಪಮಾದ ಪುತ್ರಾದಿಪೃಥ್ವಿಯೇ ದಕ್ಷಿಣ, ಪೂರ್ವರೂಪವಾದ ಶರೀರಕ್ಕೂ ದಕ್ಷಿಣರೂಪವಾದ ಪುತ್ರಾದಿಗಳಿಗೂ ಸಂಧಿಕಾಲಮಾಗಿರ್ಪ ಅರ್ಥಾದಿಪೃಥ್ವಿಯೇ ಆಗ್ನೇಯ, ಪುತ್ರಾದಿ ದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ಮಲವಿಸರ್ಜನರೂಪಮಾದ ಪೃಥ್ವಿಯೇ ನೈರುತ್ಯ, ಆ ಶರೀರದೊಳಗಣ ಪೃಥ್ವಿಗೂ ಆಹಾರರೂಪವಾದ ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಗೂ ಸಂಧಿಕಾಲದಲ್ಲಿ ಪರಮಪವಿತ್ರಮಾಗಿ ಪರಿಪಕ್ವಮಯವಾಗಿ ಪ್ರಸಾದರೂಪವಾದ ಅನ್ನಾದಿ ಭೋಜನಕ್ರಿಯೆಯೆಂಬ ಪೃಥ್ವಿಯೇ ಈಶಾನ್ಯ. ಜಲಚಕ್ರಕ್ಕೆ ಗುಹ್ಯಜಲವೇ ಪೂರ್ವ, ಶರೀರಜಲವೇ ದಕ್ಷಿಣ, ಜಿಹ್ವಾಜಲವೇ ಪಶ್ಚಿಮ, ನೇತ್ರಜಲವೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಕಾಲದಲ್ಲಿರ್ಪ ಬಿಂದುಜಲವೇ ಆಗ್ನೇಯ, ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಸಂಧಿಯಲ್ಲಿರ್ಪ ವಾತ ಪಿತ್ತ ಶ್ಲೇಷ್ಮಜಲವೇ ನೈರುತ್ಯ, ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಸಂಧಿಯಲ್ಲಿರ್ಪ ಉಚ್ಛ್ವಾಸವಾಯುಮುಖದಲ್ಲಿ ದ್ರವಿಸುತ್ತಿರ್ಪ ಜಲವೇ ವಾಯವ್ಯಜಲ, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯದಲ್ಲಿರ್ಪ ಜಲಕ್ಕೂ ಸಂಧಿಯಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಈಶಾನ್ಯಜಲ. ಅಗ್ನಿಚಕ್ರಕ್ಕೆ ಗುಹ್ಯದಲಿರ್ಪ ತೇಜೊರೂಪಮಾದ ಆಗ್ನಿಯೇ ಪೂರ್ವ, ಉದರದಲ್ಲಿರ್ಪ ಅಗ್ನಿಯೇ ದಕ್ಷಿಣ, ನೇತ್ರದಲ್ಲಿರ್ಪ ಆಗ್ನಿಯೇ ಪಶ್ಚಿಮ, ಹಸ್ತದಲ್ಪಿರ್ಪ ಸಂಹಾರಾಗ್ನಿಯೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಾಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನದಲ್ಲಿರ್ಪ ಕಾಮಾಗ್ನಿಯೇ ಆಗ್ನೇಯಾಗ್ನಿ, ಉದರದಲ್ಲಿರ್ಪ ಅಗ್ನಿಗೂ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಗೂ ಸಂಧಿಯಲ್ಲಿರ್ಪ ಕ್ರೋಧ ಮತ್ಸರ ರೂಪವಾಗಿರ್ಪ ತಾಮಸಾಗ್ನಿಯೇ ನೈರುತ್ಯಾಗ್ನಿ, ನೇತ್ರದಲ್ಲಿರ್ಪ ಅಗ್ನಿಗೂ ಹಸ್ತದಲ್ಲಿರ್ಪ ಉತ್ತರಾಗ್ನಿಗೂ ಸಂಧಿಯಲ್ಲಿ ವಸ್ತುಗ್ರಹಣಚಲನೋದ್ರೇಕಾಗ್ನಿಯೇ ವಾಯವ್ಯಾಗ್ನಿ, ಆ ಹಸ್ತಕ್ಕೂ ಗುಹ್ಯಕ್ಕೂ ಸಂಧಿಯಲ್ಲಿ ಧರ್ಮಪ್ರಜಾಸೃಷ್ಟಿನಿಮಿತ್ತ ಪಾಣಿಗ್ರಹಣಮಪ್ಪಲ್ಲಿ ಸಾಕ್ಷಿರೂಪಮಾದ ಹೋಮಾಗ್ನಿಯೇ ಈಶಾನ್ಯಾಗ್ನಿ. ವಾಯುಚಕ್ರಕ್ಕೆ ನಾಸಿಕಚಕ್ರದಲ್ಲಿರ್ಪ ಪ್ರಾಣವಾಯುವೇ ಪೂರ್ವವಾಯು, ಹೃದಯವೇ ಪಶ್ಚಿಮ, ಚಲನಾತ್ಮಕವಾದ ಚೈತನ್ಯವಾಯುಮುಖವಿಕಸನವೇ ಉತ್ತರವಾಯು, ಗಂಧವಿಸರ್ಜನೆಯೇ ದಕ್ಷಿಣವಾಯು, ನಾಸಿಕದಲ್ಲಿರ್ಪ ಪೂರ್ವವಾಯುವಿಗೂ ಗಂಧದಲ್ಲಿರ್ಪ ದಕ್ಷಿಣವಾಯುವಿಗೂ ಸಂಧಿಯಲ್ಲಿರ್ಪ ಗಂಧವಾಯುವೇ ಆಗ್ನೇಯವಾಯು, ಗುದದಲ್ಲಿರ್ಪ ವಾಯುವಿಗೂ ಹೃದಯದಲ್ಲಿರ್ಪ ಪಶ್ಚಿಮವಾಯುವಿಗೂ ಸಂಧಿಯಲ್ಲಿ ಆದ್ಯನಾದಿವ್ಯಾಧಿಗಳಂ ಕಲ್ಪಿಸಿ ದೀಪನಾಗ್ನಿಯಲ್ಲಿ ಕೂಡಿಸಿ ಅನಂತಮಲವಂ ಮಾಡಿ ಅಧೋಮುಖದಲ್ಲಿ ಕೆಡವುತ್ತಿರ್ಪ ತಾಮಸವಾಯುವೇ ನೈರುತ್ಯವಾಯು, ಹೃದಯವಾಯುವಿಗೂ ವದನದಲ್ಲಿರ್ಪ ಉತ್ತರವಾಯುವಿಗೂ ಸಂಧಿಯಲ್ಲಿರ್ಪ ಕಂಠದಲ್ಲಿ ಹಸನ ರೋದನ ಗರ್ಜನಾದಿಗಳಂ ಮಾಡುತ್ತಿರ್ಪ ವಾಯುವೇ ವಾಯವ್ಯವಾಯು, ವದನದಲ್ಲಿರ್ಪ ವಾಯುವಿಗೂ ನಾಸಿಕದಲ್ಲಿರ್ಪ ವಾಯುವಿಗೂ ಸಂಧಿಯಲ್ಲಿರ್ಪ ಅಕ್ಷರಾತ್ಮಕವಾಯುವೇ ಈಶಾನ್ಯ. ಆಕಾಶಚಕ್ರಕ್ಕೆ ಶ್ರೋತ್ರದಲ್ಲಿರ್ಪ ಆಕಾಶವೇ ಪೂರ್ವ, ಶರೀರದಲ್ಲಿರ್ಪ ಆಕಾಶವೇ ಪಶ್ಚಿಮ, ಪಾದದಲ್ಲಿರ್ಪ ಆಕಾಶವೇ ದಕ್ಷಿಣ, ಜಿಹ್ವೆಯಲ್ಲಿರ್ಪ ಆಕಾಶವೇ ಉತ್ತರ, ಶ್ರೋತ್ರದಲ್ಲಿರ್ಪ ಪೂರ್ವಾಕಾಶಕ್ಕೂ ಪಾದದಲ್ಲಿರ್ಪ ದಕ್ಷಿಣಾಕಾಶಕ್ಕೂ ಕಿವಿಯಲ್ಲಿ ಪಾದದಲ್ಲಿ ಗಮಿಸುತ್ತಿರ್ಪಲ್ಲಿ ಮುಂದೆ ಗಮಿಸುತ್ತಿರ್ಪಾಕಾಶವೇ ಆಗ್ನೇಯಾಕಾಶ, ಪಾದದಲ್ಲಿರ್ಪ ಆಕಾಶಕ್ಕೂ ಶರೀರದಲ್ಲಿರ್ಪ ಪಶ್ಚಿಮಾಕಾಶಕ್ಕೂ ಸಂಧಿಯಲ್ಲಿ ಮಲಮೂತ್ರ ವಿಸರ್ಜನಾಕಾಶವೇ ನೈರುತ್ಯಾಕಾಶ, ಆ ಶರೀರದೊಳಗಿರ್ಪ ಆಕಾಶಕ್ಕೂ ಜಿಹ್ವೆಯಲ್ಲಿರ್ಪ ಉತ್ತರಾಕಾಶಕ್ಕೂ ಸಂಧಿಯಲ್ಲಿ ಗುಣಗ್ರಹಣವಂ ಮಾಡುತ್ತಿರ್ಪ ಹೃದಯವೇ ವಾಯವ್ಯಾಕಾಶ, ಜಿಹ್ವೆಯಲ್ಲಿರ್ಪ ಆಕಾಶಕ್ಕೂ ಶ್ರೋತ್ರದಲ್ಲಿರ್ಪ ಆಕಾಶಕ್ಕೂ ಸಂಧಿಯಲ್ಲಿ ಗುರುವು ಮುಖದಿಂದುಪದೇಶಿಸಲು, ಶಿಷ್ಯನು ಕರ್ಣಮುಖದಲ್ಲಿ ಗ್ರಹಿಸಲು, ತನ್ಮಂತ್ರಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಆಕಾಶವೇ ಈಶಾನ್ಯಾಕಾಶ, ಆತ್ಮಚಕ್ರಕ್ಕೆ ವಾಸನಾಜ್ಞಾನವೇ ಪಶ್ಚಿಮ, ರುಚಿಜ್ಞಾನವೇ ಉತ್ತರ, ಸ್ಪರ್ಶಜ್ಞಾನವೇ ಪೂರ್ವ, ರೂಪಜ್ಞಾನವೇ ದಕ್ಷಿಣ. ಸ್ಪರ್ಶನರೂಪಮಾದ ಪೂರ್ವಜ್ಞಾನವೇ ಜೀವನು, ರೂಪಜ್ಞತ್ವಮುಳ್ಳ ದಕ್ಷಿಣಜ್ಞಾನವೇ ಶರೀರ. ಸ್ಪರ್ಶನದಲ್ಲಿ ಜೀವನು ವ್ಯಾಪ್ತನಾದಂತೆ ರೂಪಜ್ಞಾನದಲ್ಲಿ ಶರೀರವು ವ್ಯಾಪ್ತಮಾಗಿರ್ಪುದರಿಂ ರೂಪಜ್ಞಾನತ್ವವೇ ಶರೀರ, ಸ್ಪರ್ಶನಜ್ಞಾನತ್ವವೇ ಜೀವ. ತತ್ಸಂಧಿಯಲ್ಲಿ ತೇಜೋವಾಯುರೂಪಮಾಗಿರ್ಪ ಮನೋಜ್ಞಾನತ್ವವೇ ಆಗ್ನೇಯಾತ್ಮನು. ಮನೋಜ್ಞಾನಕ್ಕೂ ಪಶ್ಚಿಮದಲ್ಲಿರ್ಪ ವಾಸನಾಜ್ಞಾನಕ್ಕೂ ಸಂಧಿಯಲ್ಲಿ ಜನ್ಮಾಂತರವಾಸನಾಜ್ಞಾನವೇ ಪರೋಕ್ಷಜ್ಞಾನ, ರೂಪಜ್ಞಾನವೇ ಪ್ರತ್ಯಕ್ಷಜ್ಞಾನ. ಈ ಎರಡರ ಮಧ್ಯದಲ್ಲಿ ಭಾವಜ್ಞತ್ವಮಿರ್ಪುದು. ಜಾಗ್ರತ್ಸ್ವಪ್ನಗಳ ಮಧ್ಯದಲ್ಲಿ ಸುಷುಪ್ತಿಯು ಇರ್ಪಂತೆ ಸುಷುಪ್ತಿಗೆ ತನ್ನಲ್ಲಿರ್ಪ ಸ್ವಪ್ನವೇ ಪ್ರತ್ಯಕ್ಷಮಾಗಿ ತನಗೆ ಬಾಹ್ಯಮಾಗಿರ್ಪ ಜಾಗ್ರವು ಪ್ರತ್ಯಕ್ಷಮಾಗಿಹುದು. ಅಂತು ಭಾವಜ್ಞತ್ವಕ್ಕೆ ರೂಪಜ್ಞಾನಪ್ರತ್ಯಕ್ಷಮಾಗಿ ವಾಸನಾಜ್ಞಾನಕ್ಕೆ ತಾನೇ ಮರೆಯಾಗಿರ್ಪುದರಿಂ ಆ ಭಾವಜ್ಞಾನವೇ ನೈರುತ್ಯಾತ್ಮನು. ಆ ವಾಸನಾಜ್ಞಾನಕ್ಕೂ ಉತ್ತರದಲ್ಲಿರ್ಪ ರುಚಿಜ್ಞಾನಕ್ಕೂ ಸಂಧಿಯಲ್ಲಿ ರುಚಿಯೆಂದರೆ ಅನುಭವಪದಾರ್ಥ, ತಜ್ಞಾನವೇ ರುಚಿಜ್ಞಾನ. ವಾಸನಾಜ್ಞಾನವೇ ಪರೋಕ್ಷಜ್ಞಾನ, ಅದೇ ಭೂತಜ್ಞಾನ, ಆ ರುಚಿಜ್ಞಾನವೇ ಭವಿಷ್ಯಜ್ಞಾನ. ಅಂತಪ್ಪ ಭೂತಭವಿಷ್ಯತ್ತುಗಳ ಮಧ್ಯದಲ್ಲಿ ವಾಯುರೂಪಮಾದ ಶಬ್ದಮುಖದಲ್ಲಿ ತಿಳಿವುತ್ತಿರ್ಪ ಶಬ್ದಜ್ಞಾನವೇ ವಾಯವ್ಯಾತ್ಮನು. ರುಚಿಜ್ಞಾನಕ್ಕೂ ಸ್ಪರ್ಶನಜ್ಞಾನಕ್ಕೂ ಮಧ್ಯದಲ್ಲಿ ಜೀವನು ರುಚಿಗಳನನುಭವಿಸುವ ಸಂಧಿಯಲ್ಲಿರ್ಪ ಶಿವಜ್ಞಾನಮಧ್ಯದಲ್ಲಿರುವನೇ ಈಶಾನ್ಯಾತ್ಮನು. ಜ್ಞಾನಾನಂದಮೂರ್ತಿಯೇ ಕರಕಮಲದಲ್ಲಿ ಇಷ್ಟಲಿಂಗಮಾಗಿ, ಆ ಶಿವಜ್ಞಾನವೇ ಹೃತ್ಕಮಲಮಧ್ಯದಲ್ಲಿ ರುಚ್ಯನುಭವಸಂಧಿಯಲ್ಲಿ ಪ್ರಾಣಲಿಂಗಮಾಗಿ, ಪ್ರತ್ಯಕ್ಷ ಪರೋಕ್ಷಂಗಳಿಗೆ ತಾನೇ ಕಾರಣವಾಗಿ, ಆ ಶಿವಜ್ಞಾನಂಗಳು ಭಾವದಲ್ಲೊಂದೇ ಆಗಿ ಪ್ರಕಾಶಿಸಿದಲ್ಲಿ ಭಾವದಲ್ಲಿರ್ಪ ತಾಮಸವಳಿದು, ಪ್ರತ್ಯಕ್ಷ ಪರೋಕ್ಷಂಗಳೊಂದೇ ಆಗಿ, ಪರೋಕ್ಷಜ್ಞಾನದಲ್ಲಿ ಪ್ರತ್ಯಕ್ಷಭಾವಂಗಳಳಿದು, ಭೂತಭವಿಷ್ಯಂಗಳೊಂದೇ ಆಗಿ ಅಖಂಡಮಯಮಾಗಿ ಎಲ್ಲವೂ ಒಂದೆಯಾಗಿರ್ಪುದೇ ಆಗ್ನೇಯ. ಅದಕ್ಕೆ ಇಷ್ಟಪ್ರಾಣಂಗಳೆಂಬೆರಡು ದಳಂಗಳು. ವಿಶುದ್ಧದಲ್ಲಿ ಪ್ರಮಾಣಕ್ಕೆ ಪೂರ್ವಾತ್ಮನಾದ ಜೀವನೇ ಸ್ಥಾನ, ಸಂಶಯಕ್ಕೆ ಆಗ್ನೇಯಾತ್ಮವಾದ ಮನವೇ ಸ್ಥಾನ, ದೃಷ್ಟಾಂತಕ್ಕೆ ದಕ್ಷಿಣಾತ್ಮಕವಾದ ಶರೀರವೇ ಸ್ಥಾನ, ಅವಯವಕ್ಕೆ ನೈರುತ್ಯವಾದ ಭಾವವೇ ಸ್ಥಾನ, ನಿರ್ಣಯಕ್ಕೆ ಪಶ್ಚಿಮಾತ್ಮಕವಾದ ಶಬ್ದಜ್ಞಾನವೇ ಸ್ಥಾನ, ಜಲ್ಪಕ್ಕೆ ವಾಯುವ್ಯಾತ್ಮವಾದ ಶಬ್ದಜ್ಞಾನವೇ ಸ್ಥಾನ, ಹೇತ್ವಭಾವಕ್ಕೆ ರುಚಿಜ್ಞತ್ವವೇ ಸ್ಥಾನ. ಜಾತಿಯೆಂದರೆ ಪದಾರ್ಥನಿಷ*ಧರ್ಮ. ಆ ಧರ್ಮಕ್ಕೆ ಈಶಾನ್ಯಾತ್ಮನಾದ ಶಿವನೇ ಸ್ಥಾನ, ಪ್ರಮೇಯಕ್ಕೆ ಶ್ರೋತ್ರದಲ್ಲಿರ್ಪ ವಿಶುದ್ಧರೂಪಮಾದ ಪೂರ್ವಾಕಾಶವೇ ಸ್ಥಾನ, ಪ್ರಯೋಜನಕ್ಕೆ ಧಾವತೀರೂಪಮಾದ ಆಗ್ನೇಯಾಕಾಶವೇ ಸ್ಥಾನ, ಸಿದ್ಧಾಂತಕ್ಕೆ ಪದದಲ್ಲಿರ್ಪ ದಕ್ಷಿಣಾಕಾಶವೇ ಸ್ಥಾನ, ತರ್ಕಕ್ಕೆ ಮಲವಿಸರ್ಜನರೂಪವಾದ ನೈರುತ್ಯಾಕಾಶವೇ ಸ್ಥಾನ, ಛಲಕ್ಕೆ ಜಿಹ್ವೆಯಲ್ಲಿ ವಾಗ್ರೂಪಮಾಗಿರ್ಪ ಉತ್ತರಾಕಾಶವೇ ಸ್ಥಾನ, ನಿಗ್ರಹಕ್ಕೆ ಉಪದೇಶಮಧ್ಯದಲ್ಲಿರ್ಪ ಈಶಾನ್ಯಾಕಾಶವೇ ಸ್ಥಾನ. ಇಂತು ಆತ್ಮಾಕಾಶಮಾಗಿರ್ಪ ಷೋಡಶದಳಂಗಳಿಂ ಪ್ರಕಾಶಿಸುತ್ತಿರ್ಪುದೇ ವಿಶುದ್ಧಿಚಕ್ರವು. ತದ್ಬೀಜಮಾಗಿರ್ಪ ಷೋಡಶಸ್ವರಂಗಳಲ್ಲಿ ಹ್ರಸ್ವಸ್ವರಂಗಳೆಲ್ಲವೂ ಆತ್ಮಚಕ್ರಬೀಜ ದೀರ್ಘಸ್ವರಂಗಳೆಲ್ಲವೂ ಆಕಾಶಚಕ್ರಬೀಜ, ಮುಕುಳನವೇ ಹ್ರಸ್ವ ; ಅದು ಆತ್ಮರೂಪಮಾದ ಸಂಹಾರಮಯಮಾಗಿಹುದು. ವಿಕಸನವೇ ದೀರ್ಘ; ಅದು ಮಿಥ್ಯಾರೂಪಮಾದ ಸೃಷ್ಟಿಮಯಮಾಗಿಹುದು. ಇಂತಪ್ಪ ಆತ್ಮಾಕಾಶಚಕ್ರಗಳೆರಡೂ ಏಕಾಕಾರಮಾಗಿರ್ಪುದೇ ವಿಶುದ್ಧಿಚಕ್ರವು. ಅನಾಹತದಲ್ಲಿ ತನುವಿಗೆ ಪೂರ್ವರೂಪಮಾದ ವಾಯುವೇ ಸ್ಥಾನ, ನಿಧನಕ್ಕೆ ವಾಸನಾಗ್ರಹಣರೂಪಮಾದ ಆಗ್ನೇಯವಾಯುವೇ ಸ್ಥಾನ, ಸಹಜವೆಂದರೆ ಪ್ರಕೃತಿ, ಆ ಸಹಜಕ್ಕೆ ದಕ್ಷಿಣರೂಪಮಾದ ವಿಸರ್ಜನವಾಯುವೇ ಸ್ಥಾನ, ಸೂಹೃತಿಗೆ ನೈರುತ್ಯರೂಪಮಾದ ಗರ್ಭವಾಯುವೇ ಸ್ಥಾನ, ಸುತಕ್ಕೆ ಪಶ್ಚಿಮದಲ್ಲಿರ್ಪ ಹೃದಯವಾಯುವೇ ಸ್ಥಾನ, ರಿಪುವಿಗೆ ಕಂಠದಲ್ಲಿ ವಾಯವ್ಯರೂಪಮಾಗಿರ್ಪ ಉತ್ಕøಷ್ಟಘೋಷವಾಯುವೇ ಸ್ಥಾನ, ಜಾಯಕ್ಕೆ ಉತ್ತರದಲ್ಲಿರ್ಪ ಜಿಹ್ವಾಚಲನವಾಯುವೇ ಸ್ಥಾನವಾಯಿತ್ತು. ನಾದವಿಸರ್ಜನಸ್ಥಾನವೇ ಜಿಹ್ವಾಚಲನ, ಬಿಂದುವಿಸರ್ಜನಸ್ಥಾನವೇ ಜಾಯೆ, ಜಾಯೆಯಿಂದಾದ ಸುತಾದಿ ರೂಪಗಳಿಗೆ ಜಿಹ್ವಾವಾಯುವಿನಿಂದಾದ ನಾಮವೇ ಕ್ರಿಯಾಸಂಬಂಧಮಾದುದರಿಂದಲೂ ಪತಿವಾಕ್ಯವನನುಸರಿಸುವುದೇ ಸತಿಗೆ ಧರ್ಮವಾದುದರಿಂದಲೂ ಜಾಯಿಗೆ ಜಿಹ್ವಾವಾಯುವೇ ಸ್ಥಾನವಾಯಿತ್ತು . ನಿಧನಕ್ಕೆ ಜಿಹ್ವಾವಾಯುವಿಗೂ ನಾಸಿಕಾವಾಯುವಿಗೂ ಸಂಧಿಯಲ್ಲಿ ಕ್ಷಯರಹಿತಮಾದ ಅಕ್ಷರವಾಯುವೇ ಸ್ಥಾನವಾಯಿತ್ತು. ಪೂರ್ವದಲ್ಲಿರ್ಪ ಅನಾಹತಚಕ್ರದಲ್ಲಿ ಪಶ್ಚಿಮದಲ್ಲಿರ್ಪ ಪೃಥ್ವೀಚಕ್ರದ ನಾಲ್ಕುದಳಂಗಳು ಕೂಡಿರ್ಪುದರಿಂ ಅನಾಹತನಲ್ಲಿ ಹನ್ನೆರಡು ದಶಗಳಾದವು. ಅನಾಹತದಲ್ಲಿ ಬೆರೆದ ನಾಲ್ಕು ದಳಂಗಳಾವುವೆಂದರೆ : ಶರೀರರೂಪಮಾದ ಪೂರ್ವಪೃಥ್ವಿಗೂ ಪುತ್ರಾದಿರೂಪಮಾದ ದಕ್ಷಿಣಪೃಥ್ವಿಗೂ ಮಧ್ಯದಲ್ಲಿರ್ಪ ಧನರೂಪಮಾದ ಆಗ್ನೇಯಪೃಥ್ವಿಯೇ ಧರ್ಮಸ್ಥಾನಮಾಯಿತ್ತು. ಪುತ್ರಾದಿದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ನೈರುತ್ಯಪೃಥ್ವಿಯೇ ಕರ್ಮಸ್ಥಾನಮಾಯಿತ್ತು. ಶೌಚವೇ ಕರ್ಮಕ್ಕೆ ಆದಿಯಾದುದರಿಂದ ಆ ಶರೀರದೊಳಗಿರ್ಪ ಪೃಥ್ವಿಗೂ ಜಿಹ್ವೆಯಲ್ಲಿರ್ಪ ಆಹಾರೋತ್ತರಪೃಥ್ವಿಗೂ ಸಂಧಿಯಲ್ಲಿರ್ಪ ವಾಯವ್ಯಪೃಥ್ವಿಯೇ ಲಯಸ್ಥಾನಮಾಯಿತ್ತು. ಆ ಜಿಹ್ವೆಯಲ್ಲಿರ್ಪ ಪೃಥ್ವಿಗೂ ಶರೀರದಲ್ಲಿರ್ಪ ಪೃಥ್ವಿಗೂ ಸಂಧಿಯಲ್ಲಿರ್ಪ ಅನ್ನರೂಪಮಾದ ಈಶಾನ್ಯಪೃಥ್ವಿಯೇ ವ್ಯಯಸ್ಥಾನಮಾಯಿತ್ತು. ಇಂತು ಭಾವರೂಪಮಾದ ದ್ವಾದಶದಳಗಳುಳ್ಳುದೇ ಅನಾಹತಚಕ್ರವು. ಮಣಿಪೂರಕಚಕ್ರದಲ್ಲಿ ಪೂರ್ವರೂಪಮಾದ ಅಗ್ನಿಯೇ ಸ್ಥಾನವು, ಅದು ಆದಿಯಲ್ಲಿ ಶ್ರೋತ್ರವಿಷಯದಿಂದುತ್ಪನ್ನಮಾಗುತ್ತಿರ್ಪುದರಿಂ ಅದಕ್ಕೆ ಶ್ರೋತ್ರವೇ ಸ್ಥಾನಮಾಯಿತ್ತು. ಗುಹ್ಯೆಯಲ್ಲಿರ್ಪ ಅಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನವಾಗಿ ಪ್ರಕಾಶಿಸುತ್ತಿರ್ಪ ಕಾಮರೂಪಮಾದ ಆಗ್ನೇಯಾಗ್ನಿಗೆ ತ್ವಕ್ಕೇ ಸ್ಥಾನಮಾಯಿತ್ತು , ಉದರದಲ್ಲಿರ್ಪ ದಕ್ಷಿಣಾಗ್ನಿಯು ರೂಪಮಾಗಿಹುದು. ದೀಪನವೆಂದರೆ ವಾಂಛೆ, ಅಂತಪ್ಪ ವಾಂಛೆಯು ನೇತ್ರಮೂಲಕಮಾದುದರಿಂದಲೂ ರೂಪಕ್ಕೆ ನೇತ್ರವೇ ಕಾರಣಮಾದುದರಿಂದಲೂ ರೂಪಮಾಗಿರ್ಪ ಆಹಾರದಿಂದಾ ದೀಪನವೇ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಯಾಗಿ ನಾಸಿಕಾಗ್ರದಲ್ಲೇಕಮಾಗಿ ಕೂಡುತ್ತಿರ್ಪುದರಿಂದ ನಾಸಿಕಾಗ್ರದಲ್ಲಿರ್ಪ ಸಮದೃಷ್ಟಿಯು ಸಕಲಯೋಗಕ್ಕೂ ಕಾರಣಮಾಗಿರ್ಪುದರಿಂ ನೇತ್ರಾಗ್ನಿಗೆ ನಾಸಿಕವೇ ಸ್ಥಾನಮಾಯಿತ್ತು. ಪಾಣಿಗೂ ಗುಹ್ಯಕ್ಕೂ ಸಂಧಿಕಾಲಮಾಗಿರ್ಪ ಸ್ವಸ್ತ್ರೀ ವಿವಾಹಸಾಕ್ಷಿಕವಾದ ಈಶಾನ್ಯಹೋಮಾಗ್ನಿಗೂ ಜಾಯಾಪಾದವೇ ಸ್ಥಾನಮಾಯಿತ್ತು. ಲಾಜಾಹೋಮಕಾಲದಲ್ಲಿ ಜಾಯಾಪಾದದಿಂದಗ್ನಿ ಸಿದ್ಧವಾಗುತ್ತಿರ್ಪುದರಿಂ ಆ ಹೋಮಾಗ್ನಿಯನ್ನು ಪಾದದಲ್ಲಿ ತಂದು ಶಿಲೆಯಲ್ಲಿ ಆವಾಹನೆಯಂ ಮಾಡುತ್ತಿರ್ಪುದರಿಂ ಈಶ್ವರರೂಪಮಾದ ಅಗ್ನಿಗೂ ಗಿರಿಜಾರೂಪಮಾದ ಶಿಲೆಗೂ ಆ ಪಾದವೇ ಕಾರಣಮಾಗಿರ್ಪುದರಿಂ ಈಶಾನ್ಯಾಗ್ನಿಗೆ ಪಾದವೇ ಸ್ಥಾನಮಾಯಿತ್ತು . ಈ ಮಣಿಪೂರಕದಶದಳಗಳಲ್ಲಿ ಅಗ್ನಿದಳಗಳೆಂಟು, ಜಲದಳಗಳೆರಡು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಗುಹ್ಯದಳವೇ ಸ್ಥಾನಮಾಯಿತ್ತು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಯಲ್ಲಿರ್ಪ ಆಗ್ನೇಯಬಿಂದುಜಲಕ್ಕೂ ಗುದವೇ ಸ್ಥಾನಮಾಯಿತ್ತು, ಆ ಬಿಂದುವು ಗುದಸ್ಥಾನದಲ್ಲಿ ನಿಂತು ಗುಹ್ಯಮುಖದಲ್ಲಿ ನಿವೃತ್ತಿಯಾಗುತ್ತಿರ್ಪುದರಿಂ ಆ ಬಿಂದುವಿಗೆ ಗುದವೇ ಸ್ಥಾನಮಾಯಿತ್ತು. ಇಂತಪ್ಪ ದಶದಳಂಗಳುಳ್ಳುದೇ ಮಣಿಪೂರಕ. ಸ್ವಾಧಿಷಾ*ನದಲ್ಲಿ ಯಜನಕ್ಕೆ ಕರ್ಮಾಯಾಸದಿಂದುತ್ಪನ್ನಮಾಗುವ ಪೂರ್ವಜಲವೇ ಸ್ಥಾನಮಾಯಿತ್ತು. ಯಾಜನಕ್ಕೆ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಮಧ್ಯದಲ್ಲಿರ್ಪ ಜಲವೇ ಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಪಶ್ಚಿಮಜಲವೇ ಅಧ್ಯಯನಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಮಧ್ಯದಲ್ಲಿ ನಾಸಿಕದಲ್ಲಿ ವಾಸನಾಮುಖದಿಂ ದ್ರವಿಸುತ್ತಿರ್ಪ ವಾಯವ್ಯಜಲವೇ ಅಧ್ಯಾಪನಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಆನಂದಜಲವೇ ದಾನಕ್ಕೆ ಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯೆಯಲ್ಲಿರ್ಪ ಜಲಕ್ಕೂ ಮಧ್ಯದಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಪ್ರತಿಗ್ರಹಸ್ಥಾನಮಾಯಿತ್ತು. ಇಂತಪ್ಪ ಆರುದಳಂಗಳುಳ್ಳುದೇ ಸ್ವಾಧಿಷಾ*ನಚಕ್ರವು, ಆಧಾರದಲ್ಲಿ ಬ್ರಹ್ಮಚರ್ಯಕ್ಕೆ ತನುವೇ ಸ್ಥಾನಮಾಯಿತ್ತು. ಬ್ರಹ್ಮಚರ್ಯವೆಂದರೆ ಕರ್ಮ. ``ಶರೀರಮಾಧ್ಯಂ ಖಲು ಧರ್ಮಸಾಧನಂ'' ಎಂದಿರುವುದರಿಂದ ಆ ಕರ್ಮಮೂಲವೇ ಶರೀರಮಾದುದರಿಂದದಕ್ಕೆ ದೇಹವೇ ಸ್ಥಾನಮಾಯಿತ್ತು. ಪುತ್ರಾದಿ ದಕ್ಷಿಣಪೃಥ್ವಿಯೇ ಗೃಹಸ್ಥಸ್ಥಾನಮಾಯಿತ್ತು. ಶರೀರದೊಳಗೆ ಮಾಂಸಾದಿಧಾತುರೂಪಮಾಗಿರ್ಪ ಪಶ್ಚಿಮಪೃಥ್ವಿಯೇ ವಾನಪ್ರಸ್ಥಮಾಯಿತ್ತು. ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಯೇ ಪರಿಶುದ್ಧಮಾಗಿ ಶಿವಪ್ರಸಾದಕಾರಣಮಾಗಿರ್ಪುದು. ಜಿಹ್ವೆಯಲ್ಲಿರ್ಪ ಅನ್ನವೇ ದೀಪನಹರಣವೂ ತೃಪ್ತಿಕಾರಣವೂ ಜ್ಞಾನಾನಂದಕಾರಣವೂ ಆಗಿರ್ಪುದು. ಅಂತಪ್ಪ ಅನ್ನವೇ ಕೇವಲ ಸತ್ವಸ್ವರೂಪಮಾಗಿ ರಕ್ಷಣರೂಪಮಾದುದರಿಂದಾ ಸತ್ವವು ಸ್ಥಾನಮಾಗಿರ್ಪುದೇ ಸಂನ್ಯಾಸವು, ಇಂತಪ್ಪ ಚತುರ್ದಳಂಗಳಿಂದೊಪ್ಪುತ್ತಿರ್ಪುದೇ ಆಧಾರಚಕ್ರವು. ಪೃಥ್ವಿಗೆ ಈಶಾನ್ಯರೂಪಮಾಗಿರ್ಪ ಅನ್ನವೇ ಆಧಾರಚಕ್ರದಲ್ಲಿ ಆಚಾರಲಿಂಗಮಾಯಿತ್ತು. ಆ ಅನ್ನವೇ ಪ್ರಾಣಮಾಗಿರ್ಪುದರಿಂ ನಾಸಿಕವನನುಸರಿಸುತ್ತಿರ್ಪುದು. ಜಲಕ್ಕೆ ಈಶಾನ್ಯಮಾಗಿರ್ಪ ದಯಾರಸವೇ ಸ್ವಾಧಿಷಾ*ನದಲ್ಲಿ ಗುರುಲಿಂಗಮಾಯಿತ್ತು. ಅದು ಜಿಹ್ವಾಮುಖದಿಂ ರಕ್ಷಿಸುತ್ತಿರ್ಪುದರಿಂ ಜಿಹ್ವೆಯನನುಸರಿಸುತ್ತಿರ್ಪುದು. ಅಗ್ನಿಗೆ ಈಶಾನ್ಯವಾದ ಹೋಮಾಗ್ನಿಯೇ ಮಣಿಪೂರಕದಲ್ಲಿ ಶಿವಲಿಂಗಮಾಯಿತ್ತು. ಅದು ಯಾವಜ್ಜೀವವೂ ಅಗ್ನಿಗಿಂತಲೂ ಭಿನ್ನಮಾಗದೆ ಪ್ರಕಾಶಿಸುತ್ತಿರುವುದರಿಂ ತೇಜೋಮಯವಾದ ನೇತ್ರವನನುಸರಿಸುತ್ತಿರ್ಪುದು. ವಾಯುವಿಗೆ ಈಶಾನ್ಯರೂಪಮಾದ ಅಕ್ಷರಮಯಮಾದ ಮಂತ್ರವಾಯುವೇ ಅನಾಹತದಲ್ಲಿ ಜಂಗಮಲಿಂಗಮಾಯಿತ್ತು. ಅದು ಕ್ಷಯವಿಲ್ಲದ್ದು ; ಆ ಮಂತ್ರವು ಶರೀರವನ್ನು ಪವಿತ್ರವಂ ಮಾಡಲು, ಶರೀರ ಪೂರ್ವವಾಸನೆಯಳಿದು ಮಂತ್ರಮಯಮಾಗಿರ್ಪುದರಿಂ ತ್ವಕ್ಕನ್ನನುಸರಿಸಿರ್ಪುದು. ಆಕಾಶಕ್ಕೆ ಈಶಾನ್ಯಮಾದ ಉಪದೇಶಾಕಾಶವೇ ವಿಶುದ್ಧದಲ್ಲಿ ಪ್ರಸಾದಲಿಂಗಮಾಯಿತ್ತು. ಅದು ಪರತತ್ವಮಯಮಾಗಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು. ಆತ್ಮನಿಗೆ ಈಶಾನ್ಯದಲ್ಲಿರ್ಪ ಶಿವಜ್ಞಾನವೇ ಆಗ್ನೇಯದಲ್ಲಿ ಮಹಾಲಿಂಗಮಾಯಿತ್ತು . ಅದು ಮನದೊಳ್ಕೂಡಿ ಪಂಚೇಂದ್ರಿಯಂಗಳಿಗೂ ಮನಸ್ಸೇ ಚೈತನ್ಯಮಾಗಿರ್ಪಂತೆ, ಪಂಚಲಿಂಗಂಗಳಿಗೆ ತಾನೇ ಚೈತನ್ಯಮಾಗಿ ದೃಷ್ಟವಶದಿಂದುದಿಸಿದ ಕಾರಣ ಆ ದೃಷ್ಟಕಾರಣಮಾದ ಲಲಾಟವನನುಸರಿಸಿರ್ಪುದು. ಆ ಶಿವಜ್ಞಾನದಿಂ ಗುರುಮುಖದಿಂದುದಿಸಿದ ಕರ್ಮಯೋಗ್ಯಮಾದುದೇ ಇಷ್ಟಲಿಂಗವು. ಆತ್ಮತೇಜಸ್ಸನ್ನೇ ಬಹಿಷ್ಕರಿಸಿ ಹೋಮಾಗ್ನಿಯಂ ಪ್ರಬಲವಂ ಮಾಡಿ ಇಷ್ಟಲಿಂಗಪ್ರಸಾದಸಾಮಗ್ರಿಯನಾಹುತಿಗೊಟ್ಟು, ಆ ತೇಜಸ್ಸನ್ನಾತ್ಮಸಮಾರೋಪಣೆಯಂ ಮಾಡಿ, ತದ್ಯಜನಶೇಷಮಾಗಿರ್ಪ ರುಚಿಮಯದಿವ್ಯತೇಜಸ್ಸೇ ಶಿವಧ್ಯಾನರೂಪಮಾದ ಪ್ರಾಣಲಿಂಗಾನುಭವವು. ಆ ಶಿವಧ್ಯಾನದಿಂದ ಗುರೂಪದೇಶಸಿದ್ಧಮಾಗಿರ್ಪ ಮಹಪ್ರಕಾಶವೇ ಪ್ರಾಣಲಿಂಗವು. ತೃಪ್ತಿರೂಪಮಾದ ತತ್ವಾನುಭಾವವೇ ನಿಜಾನುಭವಮಾಗಿರ್ಪುದೇ ಭಾವಲಿಂಗವು. ಗುರುದತ್ತವಾದಿಷ್ಟಲಿಂಗದಿಂ ಶರೀರವು ಪೂತಮಾಗಿ, ಜಂಗಮದತ್ತ ಶಿವಧ್ಯಾನತೇಜಸ್ಸಿನಿಂ ಪ್ರಾಣವು ಪವಿತ್ರಮಾಗಿ ಮಹಾಚಿದ್ರೂಪಮಾದ ಶಿವಜ್ಞಾನನಿಮಿತ್ತಸಿದ್ಧಿಯಿಂ ಭಾವವು ಪರಿಶುದ್ಧಮಾಗಿ, ಆ ಶರೀರವೇ ಇಷ್ಟಲಿಂಗಕರಣಮಾಗಿಯೂ ಪ್ರಾಣವೇ ಧ್ಯಾನಕರಣಮಾಗಿಯೂ ಭಾವವೇ ಸಿದ್ಧೀಕರಣಮಾಗಿಯೂ ಆ ಕರಣಂಗಳ್ಗೆ ಶಕ್ತಿಯಾಗಿಯೂ ಇರ್ಪುದರಿಂದಾ ಲಿಂಗವೇ ಪತಿ ತಾನೇ ಸತಿಯಾಗಿರ್ಪುದರಿಂದೆರಡರಸಂಗವೇ ಪರಮಾನಂದಮಯಮಾಗಿರ್ಪುದೇ ಪರಿಣಾಮವು. ಅಂತಪ್ಪ ಲಿಂಗಸಂಗಪರಮಾನಂದರಸದಿಂ ಪರವಶನಾಗುವಂತೆನ್ನಂ ಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಬಳಿಕ್ಕೆಯುಮಗ್ನಿ ಮಂಡಲದೀಶಾನದಿಕ್ಕಿನೇಕದಳದಲ್ಲಿ ಮಕಾರಮ ನದರಾಚೆಯ ಚಂದ್ರಮಂಡಲದಳದ್ವಯದಲ್ಲಿ ಈಶಾನ್ಯ ದಳದೊಳಗೆ ಅಕಾರಮ ನೀಶಾನೇಂದ್ರರಪದಿಕ್ಕಿನ ದಳದಲ್ಲಿ ಅಃಕಾರಮಂ, ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ಈಶಾನ್ಯದಳದೊಳಗೆ ಫಕಾರಮ ನೀಶಾನೇಂದ್ರಪದಿಕ್ಕಿನ ದಳದ್ವಯದಲ್ಲಿ ಬಕಾರಂಗಳನಿಟ್ಟು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ತ್ರಿಭುವನಾಧೀಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಪಂಚಬ್ರಹ್ಮ ಮಂತ್ರವೆ ಶಿವನ ದೇಹವೆಂದರಿವುದಯ್ಯಾ. ಶಿರವೆ ಈಶಾನ್ಯ, ಮುಖವೆ ತತ್ಪುರುಷ, ಹೃದಯವೆ ಅಘೋರ, ಗುಹ್ಯವೆ ವಾಮದೇವ, ಪಾದವೆ ಸದ್ಯೋಜಾತಮಂತ್ರವಯ್ಯಾ ! ಇಂತೀ ಪಂಚಮಂತ್ರತನುರೂಪಾದವ ನೀನೆ ಕೂಡಲ[ಚೆನ್ನ]ಸಂಗಮದೇವಾ.
--------------
ಚನ್ನಬಸವಣ್ಣ
ಭೂಲೋಕದ ನಚ್ಚನೆ ಮೀರಿ ನಿಶ್ಚಟನಾಗಿ ಜ್ಞಾನ ಕ್ರೀಗಳಿಂದ ಆಚರಿಸಿ ಅಂಗಲಿಂಗ ಸಂಬಂಧಿಗಳಾದ ಶಿವಲಿಂಗ ಮೋಹಿಗಳು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಹಣ್ಣು, ಮನವೇಟದ ಮಹಾಪಟ್ಟಣವೊಂದು. ಆ ಪಟ್ಟಣದ ಕಡೆ ಮೊದಲಾಗಿಯೂ ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತ್ತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಗಳೆರಡು ಪಟ್ಟಣಗಳು ತುಂಬಿ ತುಳುಕುತವೆ. ಆ ಎರಡು ಪಟ್ಟಣಕ್ಕೆ ಹೋಹಾದಿ ಹೆಬ್ಬೆಟ್ಟಗಳಾಗಿಪ್ಪವು. ಆ ಎರಡು ಪಟ್ಟಣದ ದಿಕ್ಕಿನಲ್ಲಿ ಒಂದು ಭಕ್ತಿಯ ಪುರವಿದೆ. ಆ ಭಕ್ತಿ ಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಳ ಮುಕ್ತಿಪುರದ ಬಟ್ಟೆ ಕಾಣಬಾರದು. ಮುಂದಳ ಪಯಣ ಗತಿಯ ಸಂಚದೋವರಿಯ ಸಂಚಮಾಕರಣ ಮನ ಎಂಬತ್ತು ನಾಲ್ಕು ಲಕ್ಷದ ಪ್ರಕಾರದಲ್ಲಿಪ್ಪರಾ ಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ, ತಮ್ಮವರು ಹೋದ ನಸುದೋಯಲ (?) ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದಿ ನಡುವೆ ಹೋಗುತ್ತಿದ್ದ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಾಳರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಅರಣ್ಯಮಧ್ಯದಲ್ಲಿ ಎಂಟು ಕಳಸದ ಚೌಕಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟವಕಟ್ಟುವ ಸಮರ್ಥಿಕೆಯನ್ನುಳ್ಳ ಜಂಗಮಲಿಂಗವದೆ. ಆ ಲಿಂಗಜಂಗಮಂ ಶರಣ ಕಂಡು ಹರ್ಷಗೊಂಡ ಭಾವದಲ್ಲಿ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂ ಮಾಡಿ ತನ್ನ ಮನದ ಅಭೀಷ್ಟೆಯಂ ಮನ ನೆನದಂತೆ ಮನದಲ್ಲಿ ಭೇದಿಸಿ ದೇಹ ಮನ ಪ್ರಾಣಕುಳ ಸಮಸ್ತ ಶರಣಾದಿಗಳ ಗುಣಕಂಗಳೆಲ್ಲವೂ ಸುಟ್ಟು ಬೊಟ್ಟಿಕ್ಕಿ ನಿರ್ಮಲದ ರೂಪನಾಗಿ ಅಲ್ಲಿಂದ ಮುಂದೆ ನಡೆಸುತ್ತಿದ್ದಾಗ ಉತ್ತರ ದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು, ಆ ತ್ರಿಪುರದ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಅಣುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆಯ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲ ಸತಿಸಾರುವಂತೆ ಶರಣ ಉಪ್ಪರಿಗೆಯ ಬಾಗಿಲಂ ಸಾರಿ ಬಾಗಿಲಲ್ಲಿ ಡಾಕಿಣಿ, ರಾಕಿಣಿ, ಲಾಕಿಣಿ, ಕಾಕಿಣಿ, ಸಾಕಿಣಿ, ಹಾಕಿಣಿಯರೆಂಬ ಪಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು. ಅರ್ಧಕುಂಡಲಿ ಎಂಬ ಜ್ಞಾನಶಕ್ತಿ, ಆ ಶಕ್ತಿಯ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳ ಅಂಗರಂ ತಡವಳು, ನಿರಂಗರಂ ಬಿಡುವಳು ಎಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ, ಸೋಮಸೂರ್ಯರ ಕಾಲಾಟಮಂ ನಿಲ್ಲಿಸಿ, ಕುಂಭಕಮಂ ಇಂಬುಗೊಳಿಸಿ, ಝಂ ಝಂ ಎಂದು ಝೇಂಕರಿಸುತ್ತಿದ್ದ ಪೆಣ್ದುಂಬಿಯ ನಾದಮಂ ಚಿಣಿಮಿಣಿಯೆಂದು ಸಣ್ಣರಾಗದಿ ಘನವ ಸೋಂಕುತಿಪ್ಪ ವೀಣಾನಾದಮಂ ಲಿಂಗಲಿಂಗ ಎಂದು ಕರವುತಿಪ್ಪ ಘಂಟಾನಾದಮಂ ಢಂ ಢಂ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಪಟಲು ಭುಗಿಲು ಭುಗಿಲೆನುತಿಪ್ಪ ಮೇಘನಾದಮಂ ಝಂ ಝಂ ಎಂದು ಎಡವಿಡದೆ ಬಲಿವುತಿಪ್ಪ ಪ್ರಣಮನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೀ ಎಂದು ಬೆಳಗಿ ಬೀರುತಿಪ್ಪ ದಿವ್ಯ ನಾದಮಂ, ಆರಣ್ಯ ಘೀಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರ ನಾದಂಗಳ ಶರಣ ಕೇಳಿ ಮನಂ ದಣಿದು ಹರುಷಣ ಮಿಕ್ಕು ಆ ಬಾಗಿಲ ದಾಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಢೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಬ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾಶ್ರೀಗುರುವಿನ ಒಡ್ಡೋಲಗದ ಪ್ರಭೆ ಆಕಾಶಮಂ ಸಲವುತಿಪ್ಪುದ ಕಂಡು ಬಹಿರಾವರಣದಿ ಎಸೆವ ಪ್ರಾಕಾರದಕೋಟೆ ಎರಡು ಹದಿನಾರು ಕೊತ್ತಳಗಳಲ್ಲಿ ಈಶಾನ್ಯ ಪರ್ಜನ್ಯ ಜಯಂತರೊಳಗಾದಿ ಮೂವತ್ತೆರಡು ತಂಡದ ಅನಂತ ವಸ್ತು ದೇವತೆಗಳ ಕಾವಲ ಅತ್ಯುಗ್ರಮಂ ಕಂಡು ಶರಣರ್ಗೆ ತಡಹಿಲ್ಲವೆಂಬುದಂ ತನ್ನ ಮನೋವೇಗದಿಂದ ಅರಿದು ಕಾವಲಾಗಿಪ್ಪ ವಸ್ತು ದೇವತೆಯ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕೆ ಮೂಲಸೂತ್ರವಾದ ಬ್ರಹ್ಮರಂಧ್ರದ ಪೂರ್ವದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣ ಒಳಹೊಗಲೊಡನೆ ಬಹಿರಾವರಣದ ವೀದಿಯ ಓಲಗದೊಳಿಪ್ಪ ಹರಿಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲಾ ಅಂಜಿ ಕೆಲಸಾರೆ, ಸೋಮವೀದಿಯೊಳಿಪ್ಪ ಅನಂತರ ರುದ್ರರೊಳಗಾದ ಇಪ್ಪತ್ತುನಾಲ್ಕು ತಂಡದ ಅನಂತರು, ಶಿವನ ಒಡ್ಡೋಲಗವ ನಡೆಸುವ ಪರಿಚಾರಕರು, ಅವರು ಬಂದು, ಶರಣಲಿಂಗದ ದೃಷ್ಟಿಸಂಧಾನವಾಗಲೆಂದು ಮುಖವಂ ಮಾಡಿ, ಸೂರ್ಯವೀದಿಯೊಳಿಪ್ಪ ಉಮಾಚಂಡಿಕೇಶ್ವರ ನಂದಿಕೇಶ್ವರರೊಳಗಾದ ಹದಿನಾರು ತಂಡದ ಅನಂತ ರುದ್ರರು ಬಂದು ಶರಣನ ಸನ್ಮಾನವಂ ಮಾಡಿ, ಅಗ್ನಿವೀದಿಯೊಳಿಪ್ಪ ಉಮೆ ಜೇಷೆ*ಯರೊಳಗಾದ ಎಂಟು ತಂಡದ ಅನಂತ ಶಕ್ತಿಯರು [ಕರ್ಪೂ]ರದ ಪುತ್ಥಳಿ ಬಂದು ಉರಿಯ ಪುತ್ಥಳಿಯ ಆಲಂಗಿಸಿದಂತೆ ಶರಣ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ, ಆ ಘನಲಿಂಗ[ವೆ] ತಾನೆಯಾದ ಮಹಾಗುರು ಸಿದ್ಧೇಶ್ವರನ ಶ್ರೀ ಚರಣಮಂ ನಾನು ಕರಸ್ಥಳದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೆ ಪಂಚಬ್ರಹ್ಮ, ಪ್ರಾಣವೆ ಪರಬ್ರಹ್ಮವಾಯಿತ್ತು.
--------------
ಕಲ್ಲಯ್ಯದೇವರು
ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ : ಸದ್ಯೋಜಾತಮುಖದಿಂದಾದ ಪೃಥ್ವಿ ಲಿಂಗಕ್ಕೆ ಪತ್ರಿ ಪುಷ್ಪ ಬೇಕೆಂದು ಅನಂತ ಪತ್ರಿ ಪುಷ್ಪಗಳಿಂದ ಅರ್ಚಿಸುತ್ತಿಹುದು. ವಾಮದೇವಮುಖದಿಂದಾದಪ್ಪು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂದು ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ, ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ, ಮಜ್ಜನ ನೀಡಿಸುತ್ತಿಹುದು. ಅಘೋರಮುಖದಿಂದಾದ ಅಗ್ನಿ ಲಿಂಗಕ್ಕೆ ಧೂಪ ದೀಪ ಆರತಿಗಳಾಗಬೇಕೆಂದು, ಕಾಷ*ದಲ್ಲಿ ಪಾಷಾಣದಲ್ಲಿ ಬೆಳಗುತ್ತಿಹುದು. ತತ್ಪುರುಷಮುಖದಿಂದಾದ ವಾಯು ಲಿಂಗಕ್ಕೆ ಜಪವ ಮಾಡುತ್ತಿಹುದು. ಈಶಾನ್ಯ ಮುಖದಿಂದಾದ ಆಕಾಶ ಲಿಂಗಕ್ಕೆ ಭೇರಿ ಮೊದಲಾದ ನಾದಂಗಳ ಬಾರಿಸುತ್ತಿಹುದು. ಗೋಪ್ಯಮುಖದಿಂದಾದ ಆತ್ಮನು ಲಿಂಗಕ್ಕೆ ಸಿಂಹಾಸನವಾಗಿರ್ಪುದು. ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿಹರು. ಇಂತಪ್ಪ ಘನವಸ್ತು ಎರಡಾಗಿ ತನ್ನ ವಿನೋದಕ್ಕೆ ಅರ್ಪಿಸಿಕೊಂಬಾತನು ತಾನೇ, ಅರ್ಪಿಸುವಾತನು ತಾನೇ. ಇಂತಪ್ಪ ಘನಲಿಂಗವು ಕರಸ್ಥಲದೊಳಗೆ ಚುಳುಕಾಗಿ ನಿಂದ ನಿಲವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇನ್ನು ಲಿಂಗಕ್ಕೆ ಪ್ರಸಾದ ಅರ್ಪಿಸುವ ಕ್ರಮವು. ಓಂ ಬಸವಲಿಂಗಾಯ ನಮಃ ಹ್ರಾಂ ಹ್ರೀಂ ಸದ್ಯೋಜಾತ, ವಾಮದೇವ ಶುದ್ಧಪ್ರಸಾದ, ಆಚಾರಲಿಂಗ, ಗುರುಲಿಂಗ, ಇಷ್ಟಲಿಂಗಕ್ಕೆ ರೂಪು ಅರ್ಪಿತ. ಓಂ ಬಸವಲಿಂಗಾಯ ನಮಃ ಹ್ರಾಂ ಹ್ರೈಂ ಅಘೋರ, ತತ್ಪುರುಷ, ಸಿದ್ಧಪ್ರಸಾದ, ಶಿವಲಿಂಗ, ಜಂಗಮಲಿಂಗ, ಪ್ರಾಣಲಿಂಗಕ್ಕೆ ರುಚಿ ಅರ್ಪಿತ. ಓಂ ಬಸವಲಿಂಗಾಯ ನಮಃ ಹ್ರೌಂ ಹ್ರಃ ಈಶಾನ್ಯ ಗೋಮುಖ, ಪ್ರಸಿದ್ಧಪ್ರಸಾದ, ಪ್ರಸಾದಲಿಂಗ, ಮಹಾಲಿಂಗ, ಭಾವಲಿಂಗಕ್ಕೆ ತೃಪ್ತಿ ಅರ್ಪಿತ. ಈ ಕ್ರಮವ ಅರಿದಾತ ಬಲ್ಲನಲ್ಲದೆ ಅಂಗಭೋಗಿಗಳೆತ್ತ ಬಲ್ಲರು ನಮ್ಮ ಶಾಂತಕೂಡಲಸಂಗಮದೇವಾ.
--------------
ಗಣದಾಸಿ ವೀರಣ್ಣ
ಋಗ್ವೇದ ಕಾಣವಯ್ಯಾ, ಸದ್ಯೋಜಾತನನು. ಯಜುರ್ವೇದ ಕಾಣವಯ್ಯಾ, ವಾಮದೇವನನು. ಸಾಮವೇದ ಕಾಣವಯ್ಯಾ, ತತ್ಪುರುಷನನು. ಅಥರ್ವಣವೇದ ಕಾಣವಯ್ಯಾ, ಅಘೋರನಾಥನು. ಅತೀತಃ ಪಂಥಾನಂ ತವ ಚ ಮಹಿಮಾ ವಾಙ್ಮನಸಯೋ | ರತದ್ವ್ಯಾತ್ಯೇಯಂ ಚಕಿತಮಭಿದತ್ತೇ ಶೃತಿರಪಿ | ಸ ಕಸ್ಯ ಸ್ತೋತವ್ಯಃ ಕತಿ ವಿಧಗುಣಃ ಕಸ್ಯ ವಿಷಯಃ | ಪದೇ ತ್ವರ್ವಾಚೀನೇ ಪತತಿ ನ ಮನಃ ಕಸ್ಯ ನ ವಚಃ || ಎಂದುದಾಗಿ, ಚತುರ್ಮುಖ ಬ್ರಹ್ಮಂಗೆ ಅಗಮ್ಯ ದೇವನಾದನೆಂದು, ಅನಂತವೇದ ಕಾಣಲಾರವು, ಈಶಾನ್ಯ ಸಕಳೇಶ್ವರದೇವನ.
--------------
ಸಕಳೇಶ ಮಾದರಸ
ಸದ್ಯೋಜಾತ ಬದ್ಧಜ್ಞಾನಿ, ವಾಮದೇವ ಆತುರಜ್ಞಾನಿ, ಅಘೋರ ಕೋಪಜ್ಞಾನಿ, ತತ್ಪುರುಷ ಕ್ಷಣಿಕಜ್ಞಾನಿ, ಈಶಾನ್ಯ ಅತೀತಜ್ಞಾನಿ_[ಇದು] ಪರಿಯಲ್ಲ ನೋಡಾ. ಗುಹೇಶ್ವರಲಿಂಗದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣ, [ಆತನ] ಶ್ರೀಪಾದಕ್ಕೆ ನಮೋನಮೋ ಎಂಬೆನು
--------------
ಅಲ್ಲಮಪ್ರಭುದೇವರು
ಕಾರುಕ ಮುಟ್ಟಿ ಗುರುವಿನ ಕೈಗೆ ಬಂದುದಲ್ಲ. ಮನಮುಟ್ಟಿ ನೆನಹಿಂಗೆ ಈಡಾದುದಲ್ಲ. ಅರಿದರುಹಿಸಿಕೊಂಬುದಲ್ಲ, ಮರೆದು ನೆನಹಿಸಿಕೊಂಬುದಲ್ಲ. ಪರುಷರಸದಂತೆ ಮಾಟಕ್ಕೊಳಗಲ್ಲ. ಅದು ಮುಟ್ಟಿ ಲೋಹ ಶುದ್ಧವಲ್ಲದೆ ಪುನರಪಿ ಶುದ್ಧವಾದುದಿಲ್ಲ. ಇಂತೀ ಭೇದಂಗಳಲ್ಲಿ ನಿಂದು ನಿಶ್ಚಯವಾದುದು ಜೀವನ್ಮುಕ್ತಿಲಿಂಗ. ಅದು, ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗ ಸ್ವಯಂಭುವಾಗಿಹುದು
--------------
ಶಿವಲೆಂಕ ಮಂಚಣ್ಣ
ಇನ್ನಷ್ಟು ... -->