ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು,
ಎನಗೆ ಹೇಳಿರಯ್ಯಾ, ಅರ್ಥಕೋ, ಪ್ರಾಣಕ್ಕೋ, ಅಪಮಾನಕ್ಕೋ?
ಅಂತಲ್ಲದೆ, ಉಂಬ ಓಗರಕ್ಕೋ, ಸಂತತ ಸಮಯೋಚಿತವನರಿವುದಕ್ಕೋ?
ಈ ಸಂಚಿತನವರಿಯದೆ ಮುಂಚಿತ್ತಾಗಿ ಉಂಬ,
ಅಶನಕ್ಕೆ ಕೈಯ ನೀಡಿ, ತಾ ಹಿಂಚಾಗಿ ಉಂಬ ಪ್ರಸಾದಿಯ ನೋಡಾ.
ಆಯತವೆಂದರಿಯದೆ, ಸ್ವಾಯತವೆಂದರಿಯದೆ,
ಸನ್ನಹಿತಪ್ರಸಾದವೆಂದರಿಯದೆ, ಹಮ್ಮುಬಿಮ್ಮಿಗೆ ಹೋರುವ ಉನ್ಮತ್ತರನೇನೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ.