ಅಥವಾ

ಒಟ್ಟು 30 ಕಡೆಗಳಲ್ಲಿ , 18 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ, ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ_ ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು. ಅದೇನು ಕಾರಣವೆಂದಡೆ: ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ: ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ, ಅವನು ದಿನದ ಭಕ್ತನು. ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು ಸರಿಯೆಂದು ಹೋಲಿಸಿ ನುಡಿವಂಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಅವ ಭಕ್ತನಲ್ಲ, ಅವಂಗೆ ಅಘೋರನರಕ. ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ. ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ ನಾಯಕನರಕದಲ್ಲಿಕ್ಕುವನು
--------------
ಚನ್ನಬಸವಣ್ಣ
ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ ? ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ? ನಿಜವನರಿದ ಲಿಂಗೈಕ್ಯರೆಂಬೆನೆ ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ?
--------------
ಅಮುಗೆ ರಾಯಮ್ಮ
ಸದ್ಭಕ್ತಿಯೆ ಆರು ಸ್ಥಲಕ್ಕೆ ಮುಖ್ಯ ಸದ್ಭಕ್ತಿಯ ಕೂಡಿಕೊಂಡು ಷಟ್‍ಸ್ಥಲವಿಪ್ಪುದು. ಇದು ಕಾರಣ: ಸದ್ಭಕ್ತಿಯಿಂ ಲಿಂಗದ-ಲಿಂಗವಂತರ ಸುಖವನು, ಮಹಿಮೆಯ ಪೂಜೆಯನು ಅರಿದು ಮರೆದು ವಿಷ್ಣು ಕಷ್ಟಜನ್ಮದಲ್ಲಿ ಬಂದನು. ಅರಿದು ಮರೆದು ಬ್ರಹ್ಮನು ಘನವೆಂದು ಶಿರವ ಹೋಗಾಡಿಕೊಂಡನು. ಅರಿದು ಮರೆದು ಇಂದ್ರನು ಭಂಗಿತನಾಗಿ ಐಶ್ವರ್ಯಮಂ ಹೋಗಾಡಿಕೊಂಡನು. ಅರಿದು ಮರೆದು ದಕ್ಷನು ಭಂಗಿತನಾಗಿ ಶಿರವ ಹೋಗಾಡಿಕೊಂಡನು. ಅರಿದು ಮರೆದು ವ್ಯಾಸನು ಹಸ್ತವ ಹೋಗಾಡಿಕೊಂಡನು. ಈ ದೃಷ್ಟವ ಹಲವು ಪುರಾತನರು ಕೇಳಿರಣ್ಣಾ: ಅರಿದು ಮರೆಯದೆ ನಂಬಲು ಸಿರಿಯಾಳನಿಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಸಿಂಧುಬಲ್ಲಾಳಂಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ನಂಬಿಯಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ನಿಂಬವ್ವೆಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಕೆಂಭಾವಿಯ ಭೋಗಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ಪುರಾತನರೆಲ್ಲರು ಶಿವಪದಂಗಳ ಪಡೆದರು. ಇದನು ಶ್ರುತ ದೃಷ್ಟ ಅನುಮಾನದಿಂ ಕೇಳಿ, ನಿಶ್ಚೈಸಿ, ನಂಬಿ. ಅರಿವಿನ ಹದವಿದು, ಮರವೆಯ ಪರಿಯಿದು ಇಷ್ಟವಾದುದ ಹಿಡಿದು ಅನಿಷ್ಟವಾದುದ ಬಿಟ್ಟು ಅರಿವು ಸಯವಾಗಲು ಶಿವಪದವಪ್ಪುದು ತಪ್ಪದು, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆರೂ ಇಲ್ಲದ ಅಡವಿಯಲ್ಲಿ, ಬೇರೊಂದು ಮನೆಯ ಮಾಡಿ ಐವರು ಹಾರುವರು ಕೂಡಿ, ಮೂವರು ಗೆಯ್ವರು ಕೂಡಿ ಆರಂಬಗೆಯ್ಯುತ್ತಿರಲಾಗಿ ಬೆಳೆ ಬೆಳೆಯಿತ್ತು. ಮೃಗ ಫಲವಾಗಲೀಸವು. ಬೇಡರ [ಅ]ಗಡ ಘನವೆಂದು ಬೀಡ ಬಿಟ್ಟಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಹೇಳಿಹೆನೆಂದು.
--------------
ಬಿಬ್ಬಿ ಬಾಚಯ್ಯ
ತನುವೆಂಬ ಮಹಾಪರ್ವತದಲ್ಲಿ ಒಸರುತ್ತಿಪ್ಪ ನಿರುರ್sುರಿಗಳಿಂದ ಆ ಘನವನೊಡಗೂಡುವಿರ ಹೇಳಿರೆ? ಸ್ಥೂಲಸಮುದ್ರ ಅರವತ್ತುನಾಲ್ಕು ಕೋಟಿಯು ಮೂವತ್ತೆರಡು ಲಕ್ಷವು ಮೂವತ್ತೆರಡು ಸಾವಿರದ ಪರಿಪೂರ್ಣವಾಗಿಪ್ಪುದಾಗಿ ಅವು ತಮ್ಮ ತಮ್ಮ ಘನತೆಗೆ ತಾವೆ ಘನವೆಂದು ಮೊರವುತೈದಾವೆ. ಅವು ನೀವು ಸಿಡಿದುಬೀಳುವ ತುಂತುರುಮಾತ್ರಕ್ಕೆ ಸಮವಪ್ಪುದೆ? ಅಂತಪ್ಪ ಸಮುದ್ರಂಗಳು ಸವಾಲಕ್ಷಕೂಡಿ ನೀನೆಯ್ದುವ ಮಹಾಸಮುದ್ರದ ಒಂದು ಬಿಂದುವಿಗೆ ಸರಿಯೆ? ಅಯ್ಯಾ ನೀವೆಂಬ ಮಹಾಸುಧಾಸಮುದ್ರಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು. ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ. ಅದನು ಮಹಂತರು ಕೇಳಲಾಗದು. ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ, ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ, ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ, ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ? ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ ಅವರುಗಳು ಪ್ರೇತಗಾಮಿಗಳು. ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು ತಾವಾರೆಂದರಿಯರು. ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು. ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ, ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ, ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ, ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು, ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು, ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು. ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು. ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ ನಂದಿಕೇಶ್ವರನ ಉದಾಸೀನಂ ಮಾಡಿ, ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು. ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ, ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ, ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ. ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ, ಸೂರ್ಯನಿಂದಧಿಕವಹ ತೇಜಸ್ಸು, ಗಜ ಪಟೌಳಿ ಸೀತಾಂಗನೆಗತ್ಯಧಿಕವಹ ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು. ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ ! ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ? ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು. ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ, ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ. ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು, ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ. ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು.
--------------
ಹಾವಿನಹಾಳ ಕಲ್ಲಯ್ಯ
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದದಲ್ಲಿ ವಿಶ್ವಾಸ ಸಮನಿಸಿದ ಕಾರಣ, ಶಾಶ್ವತಪದವಿಯ ಪಡೆದರು ಪೂರ್ವಪುರಾತನರು. ಆ ಸದಾಚಾರದ ಹೊಲಬನರಿಯದೆ ದೂಷಕ ನಿಂದಕ ಪರವಾದಿಗಳು ನಾನು ಘನ, ತಾನು ಘನವೆಂದು ದಾಸಿ, ವೇಸಿ, ಹೊಲತಿ, ದೊಂಬತಿ, ಕಬ್ಬಿಲಿಗಿತಿ, ಅಗಸಗಿತಿ, ಬೇಡತಿಯರ ಅಧರರಸವ ಸೇವಿಸುವ ದುರಾಚಾರಿಯರು, ಗುರುಲಿಂಗಜಂಗಮಪ್ರಸಾದವನೆಂಜಲೆಂದು ಹೊಲೆದೈವದೆಂಜಲ ಭುಂಜಿಸಿ, ಮತ್ತೆ ತಮ್ಮ ಕುಲವ ಮೆರೆವ ಕುಜಾತಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಈರೇಳು ಭವನ ಹದಿನಾಲ್ಕು ಲೋಕಕ್ಕೆ ಶ್ರೀ ಮಹಾ ಸಾಂಬಶಿವನೇ ಘನವೆಂದು ನಾಲ್ಕು ವೇದಗಳು ಸಾರುತಿರ್ದವು. ಅಂತಪ್ಪ ಸಾಂಬಶಿವನು ತನ್ನ ಭಕ್ತನ ಏನೆನುತಿರ್ದನಯ್ಯಾ ? 'ಭಕ್ತಂ ಮಹೇಶಗಿನ್ನಧಿಕ', 'ನನಗಿಂತಾ ನನ್ನ ಭಕ್ತನೇ ದೊಡ್ಡವನೆ'ಂದು ಸಾಂಬಶಿವನು ಹೇಳುತ್ತಿಹನು. 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಎಂತಪ್ಪ ಭಕ್ತಂಗೆ ಸಲುವದೆಂದರೆ : ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಇಂತೀ ಆರು ಗುಣಂಗಳಳಿದು, ಅಷ್ಟಮದಂಗಳ ತುಳಿದು, ತ್ರಿವಿಧ ಪದಾರ್ಥವನ್ನು ತ್ರೈಮೂರ್ತಿಗಳಿಗೆ ಕೊಟ್ಟು, ಇಷ್ಟಲಿಂಗನಿಷಾ*ಪರರಾಗಿ, ಜಂಗಮವೇ ಮತ್ಪ್ರಾಣವೆಂದು ನಂಬಿ, ಪೂಜಿಸುವ ಸದ್ಭಕ್ತಂಗೆ 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಸಲುವದು. ಬರಿದೆ ಡಂಬಾಚಾರಕ್ಕೆ ಪ್ರಾತಃಕಾಲಕ್ಕೆ ಎದ್ದು, ಮೇಕೆ ಹೋತಿನ ಬಂಧುಗಳಾಗಿ ಆಡಿನ ಬೀಗಪ್ಪಗಳಾಗಿ ಪತ್ರೆಗಿಡಕೆ ಹಿಡಿಯ ತೊಪ್ಪಲನ ತೆರಕೊಂಡು ಬಂದು ಲಿಂಗದ ಮಸ್ತಕದ ಮೇಲೆ ಇಟ್ಟು, ಮಧ್ಯಾಹ್ನ ಕಾಲದಲ್ಲಿ ಒಂದು ಶಿವಜಂಗಮಮೂರ್ತಿ ಹಸಿದು ಬಂದು 'ಭಿಕ್ಷಾಂದೇಹಿ' ಎಂದರೆ 'ಅಯ್ಯ ಕೈಯಿ ಅನುವು ಆಗಿಯಿಲ್ಲ', 'ಮನೆಯಲ್ಲಿ ಹಿರಿಯರು ಇಲ್ಲ', 'ಮುಂದಲಮನೆಗೆ ದಯಮಾಡಿರಿ' ಎಂಬ ಹಂದಿಮುಂಡೇಮಕ್ಕಳಿಗೆ 'ಭಕ್ತಂ ಮಹೇಶನಿಂದಧಿಕ'ವೆಂಬ ನಾಮಾಂಕಿತ ಸಲ್ಲದೆಂದಾತನಾರು ? ನಮ್ಮ ಕೂಡಲಾದಿ ಚನ್ನಸಂಗಮದೇವ.
--------------
ಕೂಡಲಸಂಗಮೇಶ್ವರ
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿದನೆಂಬುದನರಿದು, ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ ? ಇಂತೀ ಸಪ್ತಋಷಿಯರುಗಳೆಲ್ಲರೂ ಸತ್ಯದಿಂದ ಮುಕ್ತರಾದುದನರಿಯದೆ, ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು ಹೋರುವ ಹೊತ್ತುಹೋಕರ ಮಾತೇತಕ್ಕೆ ? ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.
--------------
ವೀರ ಗೊಲ್ಲಾಳ/ಕಾಟಕೋಟ
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ. ಈ ಕಾಣಬಾರದ ಘನವ ನಾನಾರ ಕೇಳಲಯ್ಯ! ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ. ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು, ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ, ಆ ಕಾಣಬಾರದ ಘನವ ಹೇಳಿದುದು ಇಲ್ಲ. ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ ! ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ, ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ, ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು, ತಾನೊಬ್ಬರಿಗೆ ಹೇಳಲು ಬಾರದು. ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ. ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು, ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ, ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು? ಆ ಲೋಕದಲ್ಲಿ ಹೋದರೇನು? ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ವೇದಾಗಮ ಸಾಕ್ಷಿಯ ಘನವೆಂದು ನುಡಿವರು, ನುಡಿದ ನುಡಿಯೇನೆಂದರಿಯರು. ಇದು ಏನು ಹೇಳಾ ಪಶುಭಾವ ? ಐವತ್ತೆರಡಕ್ಷರವನುದಯಿಸುವುದೇ ವೇದ ? ನುಡಿಯುವುದೇ ಆಗಮ ? ಬೇರರಸಲೇನು ಕಸಮನುಜರಿರಾ, ನಿಮ್ಮ ಕುರುಹು ಕುರುಹನರಿಯದೆ ಕುರಿಗಳಾದವು. ಕಳೆದುಳಿದು ಬನ್ನಿರಿ, ಗುರುನಿರಂಜನ ಚನ್ನಬಸವಲಿಂಗವಾಗಬೇಕಾದಡೆ ಕಳೆ ನಾದ ಬಿಂದುವನರಿಯಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
`ಏಕೋ ದೇವೋ ನ ದ್ವಿತೀಯಃ' ಎಂದೆನಿಸುವ ಶಿವನೊಬ್ಬನೆ, ಜಗಕ್ಕೆ ಗುರುವೆಂಬುದನರಿಯದೆ, ವಿಶ್ವಕರ್ಮ ಜಗದ ಗುರುವೆಂದು ನುಡಿವ ದುರಾಚಾರಿಯ ಮುಖವ ನೋಡಲಾಗದು. ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು ? ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು ? ಅವಂಗೆ ತೊಟ್ಟಿಲವ ಕಟ್ಟಿದರಾರು ? ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು ? ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು ? ಅವಂಗೆ ಅರುಹು ಮರಹು ಹುಟ್ಟಿಸಿದರಾರು ? ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ, ಮೊದಲಾದ ಸಂಪಾದನೆಗಳ ಕೊಟ್ಟವರಾರು ? ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ ದುರಾಚಾರಿಯೆಂದು ಭಾವಿಸುವುದು. ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು. ಅದೆಂತೆಂದಡೆ; ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ, ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ, ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೆ, ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ. ``ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ ಅರಿತರಿತು ಅನಾಚಾರವ ಗಳಹಿ, ಗುರುಲಿಂಗಜಂಗಮವೆ ಘನವೆಂದು ಅರಿಯದ ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಹರಿಕುಲದ ವಿಪ್ರರು ಶ್ರೀ ವಿಭೂತಿಯ ಧರಿಸದೆ ಮೋಕ್ಷಮಾರ್ಗಕ್ಕೆ ತಪ್ಪುಗರಾದರು ನೋಡಾ. ಸಕಲವೇದಂಗಳು ಶ್ರೀ ವಿಭೂತಿಯೇ ಘನವೆಂದು ಕರವೆತ್ತಿ ಕೂಗುತಿಪ್ಪುವು ನೋಡಾ. ಸಕಲಶ್ರುತಿಗಳು ಶ್ರೀ ವಿಭೂತಿಯ ಮಹತ್ವವನೆ ಹೊಗಳುತಿಪ್ಪುವು ನೋಡಾ. ಸಕಲಸ್ಮೃತಿಗಳು ಶ್ರೀ ವಿಭೂತಿಯ ಮಹಿಮೆಯನೆ ಉಗ್ಗಡಿಸುತಿಪ್ಪುವು ನೋಡಾ. ಅಖಿಲ ಪುರಾಣಂಗಳು ಶ್ರೀ ವಿಭೂತಿಯೇ ಅಧಿಕವೆಂದು ಹೊಗಳುತಿಪ್ಪುವು ನೋಡಾ. ಅದೆಂತೆಂದೊಡೆ :ಗಾರುಡೇ ``ಶ್ರುತಯಃ ಸ್ಮೃತಯಃ ಸರ್ವಾಃ ಪುರಾಣಾನ್ಯಖಿಲಾನ್ಯಪಿ | ವದಂತಿ ಭೂತಿಮಹಾತ್ಮ್ಯಂ ತತಸ್ತಾಂ ಧಾರಯೇತ್ ದ್ವಿಜಃ || ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಧರಿಸಲೊಲ್ಲದೆ ಮಣ್ಣು ಮಟ್ಟಿಯ ಹಣೆಗಿಟ್ಟುಕೊಂಬ ಮಧ್ವಮತದ ಚಾಂಡಾಲ ಹೊಲೆಯ ವಿಪ್ರ ಹಾರುವರೆಂಬ ಅಧಮ ಮಾದಿಗರನೆನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->