ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದ್ವೈತವಾದ ಮತ್ತೆ ಪುನರಪಿ ಪುನರ್ದೀಕ್ಷೆಯುಂಟೆ ? ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆ ಕೋಲು ? ಭವಿಗೆ ಮೇಲುವ್ರತ ಪುನರ್ದೀಕ್ಷೆಯಲ್ಲದೆ, ಭಕ್ತರಿಗುಂಟೆ ? ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ.
--------------
ಅಮುಗೆ ರಾಯಮ್ಮ
ಅರಿವುಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ ಅಡಿಗಳಿಗೆ ನಾನೆರಗುವೆನಯ್ಯಾ. ಎಡೆದೆರಹಿಲ್ಲದೆ ಮೃಡನ ನೆನೆವವರ ಅಡಿಗಳಿಗೆ ನಾನೆರಗುವೆನಯ್ಯಾ. ಕಡುಗಲಿಗಳ ಕಂಡಡೆ ಪರಶಿವನೆಂಬೆನಯ್ಯಾ ; ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ.
--------------
ಅಮುಗೆ ರಾಯಮ್ಮ
ಅರಿಯಬಲ್ಲಡೆ ವಿರಕ್ತನೆಂಬೆನು. ಆಚಾರವನರಿದಡೆ ಅಭೇದ್ಯನೆಂಬೆನು. ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು. ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅರೆಯಮೇಲೆ ಮಳೆ ಹೊಯಿದಂತೆ, ಅರಿವುಳ್ಳವರಲ್ಲಿ ಅಗಮ್ಯವುಂಟೆ ? ವಾಯು ರೂಪಾದುದುಂಟೆ ? ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿಕಂಡವರುಂಟೆ ? ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಧವಾದಂತೆ ಇರಬೇಕು. ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ, ಅಭೇದ್ಯರೆಂಬೆನಯ್ಯಾ, ಅಂಗಲಿಂಗ ಸಂಬಂದ್ಥಿಗಳೆಂಬೆನಯ್ಯಾ. ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ. ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ ನಿಜವಿರಕ್ತರೆಂಬರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಅನುಭಾವಿಗೆ ಅಂಗಶೃಂಗಾರವುಂಟೆ ? ಅನುಭಾವಿಗೆ ಕಾಮಕ್ರೋಧವುಂಟೆ ? ಅನುಭಾವಿಗೆ ನಾಹಂ ಕೋಹಂ ಸೋಹಂ ಎಂಬ ಭ್ರಾಂತಿನ ಭ್ರಮೆಯುಂಟೆ ? ಅನುಭಾವಿಗೆ ನನ್ನವರು ತನ್ನವರೆಂಬ ಗನ್ನಗದಕಿನ ಮಾತುಂಟೆ ? ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ ತಮ್ಮ ಅನುಭಾವಂಗಳ ಬೀರುವರೆ ? ಅನುಭಾವಿಗಳ ಪರಿಯ ಹೇಳಿಹೆ ಕೇಳಿರಣ್ಣಾ ; ನೀರಮೇಲಣ ತೆಪ್ಪದಂತೆ, ಸಮುದ್ರದೊಳಗಣ ಬೆಂಗುಂಡಿನಂತೆ ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ. ವಚನಂಗಳ ಓದಿ ವಚನಂಗಳ ಕೇಳಿ ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ, ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು ಅನುಭಾವಿಗಳೆಂದಡೆ ಅಘೋನರಕ ತಪ್ಪದು ಕಾಣಾ, ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ ಮುಖವ ನೋಡಲಾಗದು. ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ, ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ? ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ ತಮ್ಮ ತಮ್ಮ ಹಿರಿಯತನವ ಮುಂದುಗೊಂಡು ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ? ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ, ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ. ಅತ್ಯತ್ತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ. ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಅರಿದಬಳಿಕ ಗರುಡಿಯ ಹೋಗಲೇತಕ್ಕೆ ! ನಿಸ್ಸಾಧಕವ ಸಾಧಿಸಿದ ಬಳಿಕ ಸಾಧಿಸಲೇತಕ್ಕೆ ! ಪಟುಭಟ ಬಂದಲ್ಲಿ ಪರಾಕ್ರಮವ ತೋರದಿರಬೇಕು. ಮೈಯೆಲ್ಲಾ ಕಣ್ಣಾಗಿಪ್ಪವರು ಬಂದು ಮಥನಿಸಿದಡೆ ಮಾತಾಡದೆ ಇರಬೇಕು. ಹೊದ್ದಿಯೂ ಹೊದ್ದದ ಸದ್ಯೋನ್ಮುಕ್ತನಾಗಿರಬಲ್ಲರೆ ಅಮುಗೇಶ್ವರಲಿಂಗವು ಎಂಬೆನು.
--------------
ಅಮುಗೆ ರಾಯಮ್ಮ
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ. ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ. ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ ಮತ್ರ್ಯಕ್ಕೆ ಬಂದವನಲ್ಲ. ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ ಮಾಯಾವಾದದಿಂದ ಮತ್ರ್ಯಕ್ಕೆ ಬಂದನೆಂದು ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು. ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ; ಅದೇನು ಕಾರಣವೆಂದಡೆ ಬಸವಣ್ಣಂಗೆ ಭಕ್ತಿಯ ತೋರಲೆಂದು, ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು, ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ. ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ
--------------
ಅಮುಗೆ ರಾಯಮ್ಮ
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು ! ಕಂಡ ಕನಸರಿಯರು ಅ ಮುಂದಣ ಸುದ್ದಿಯ ನುಡಿವರು. ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.
--------------
ಅಮುಗೆ ರಾಯಮ್ಮ
ಅರಿವು ಆಚಾರವುಳ್ಳ ಸಮ್ಯಜ್ಞಾನಿಗೆ ಹೇಳುವೆನಲ್ಲದೆ, ಜಗದಲ್ಲಿ ನಡೆವ ಜಂಗುಳಿಗಳಿಗೆ ನಾ ಹೇಳುವನಲ್ಲ. ಆರುಸ್ಥಲವನರಿದ ಲಿಂಗೈಕ್ಯಂಗೆ ಅಂಗದಮೇಲಣ ಲಿಂಗ ಭಿನ್ನವಾಗಲು ಸಂದೇಹಗೊಳ್ಳಲಿಲ್ಲ, ಲಿಂಗ ಹೋಯಿತ್ತು ಎಂದು ನುಡಿಯಲಿಲ್ಲ. ವೃತ್ತ ಗೋಳಕ ಗೋಮುಖ ಈ ತ್ರಿವಿಧ ಸ್ಥಾನದಲ್ಲಿ ಭಿನ್ನವಾಗಲು ಲಿಂಗದಲ್ಲಿ ಒಡವೆರೆಯಬೇಕು. ಹೀಂಗಲ್ಲದೆ ಸಂದೇಹವೆಂದು ಘಟವ ಹೊರೆವ ಅಜ್ಞಾನಿ ಕೋಟಿಜನ್ಮದಲ್ಲಿ ಶೂರಕನಾಗಿ ಹುಟ್ಟುವ. ಸಪ್ತಜನ್ಮದಲ್ಲಿ ಕುಷ್ಟನಾಗಿ ಹುಟ್ಟುವ. ದಾಸೀ ಗರ್ಭದಲ್ಲಿ ಹುಟ್ಟಿ, ಹೊಲೆಯರ ಎಂಜಲ ತಿಂದು, ಭವಭವದಲ್ಲಿ ಬಪ್ಪುದು ತಪ್ಪದು ಕಾಣಾ, ಚೆನ್ನಬಸವಣ್ಣ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ ಭಂಡಭವಿಗಳನೇನೆಂಬೆನಯ್ಯಾ ? ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ; ಹಿಡಿದ ಛಲದಲ್ಲಿ ಕಡುಗಲಿಗಳಲ್ಲ. ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ; ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅರಿವು ಉಳ್ಳವರು ನೀವು ಅರಿಯದವರೊಡನೆ ನುಡಿಯದಿರಿ. ಪೊಡವಿಯ ಶರಣರೆಂದು ನಿಮ್ಮ ಅರುವಿನ ಪ್ರಸಂಗವನುಸುರದಿರಿ. ವೇಷಪೂರಿತರಾದವರ ಕಂಡು ನುಡಿಯದಿರಿ, ಅಮುಗೇಶ್ವರನೆಂಬಲಿಂಗವನರಿದವರು.
--------------
ಅಮುಗೆ ರಾಯಮ್ಮ
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ ಲಿಂಗಾರ್ಪಿತವ ಬೇಡಲೇಕೆ ? ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ ಲಿಂಗಾರ್ಪಿತವ ಬಿಡಲೇತಕ್ಕೆ ? ಜಾತಿಗೋತ್ರವನೆತ್ತಿ ನುಡಿಯಲೇಕೆ ? ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು, ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು ಆಚಾರವುಳ್ಳವರು ಅನಾಚಾರಿಗಳು ಎಂದು ಬೇಡುವ ಭಿಕ್ಷವ ಬಿಡಲೇತಕ್ಕೆ ? ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು. ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ.
--------------
ಅಮುಗೆ ರಾಯಮ್ಮ