ಜ್ಯೋತಿಷ್ಯ ಘನವೆಂಬೋ ನೀತಿಗಾರನೇ ನೀ ಕೇಳು :
ಅಷ್ಟಗ್ರಹಂಗಳ ಬಲವು ದೊಡ್ಡಿತೆಂದು ನೀ ಪೇಳುವೆ.
ಗ್ರಹಂಗಳಿಗೆ ವಿಪತ್ತು ಬಂದಡೆ, ಆರೂ ತಿದ್ದಿಕೊಳಲರಿಯರು !
ಸೂರ್ಯನೇ ಘನವೆಂಬುವೆ,
ಚಕ್ರದಂತೆ ತಿರುಗುವನೇಕೆ ?
ಚಂದ್ರನೇ ಘನವೆಂಬುವೆ,
ಕ್ಷಯರೋಗದಿಂದ ಹೊರಳುವನೇಕೆ ?
ಬುಧನೇ ಘನವೆಂಬುವೆ,
ಬುದ್ಧಿಯಿಲ್ಲದನೆನಿಸಿಕೊಂಬನೇಕೆ ?
ಬೃಹಸ್ಪತಿಯೇ ಘನವೆಂಬುವೆ,
ತನ್ನ ಸ್ವಪತ್ನಿಯ ಕಳಕೊಂಡನೇಕೆ ?
ಶುಕ್ರನೇ ಘನವೆಂಬುವೆ,
ಕೊಡುವ ದಾನಕ್ಕಡ್ಡಲಾದನೇಕೆ ?
ಕಣ್ಣಕಳಕೊಂಡನೇಕೆ ?
ಶನಿಯೇ ಘನವೆಂಬುವೆ,
ಸಂಕೋಲೆಯೊಳಗಿರುವನೇಕೆ ?
ರಾಹು ಘನವೆಂಬುವೆ,
ಸೆರೆಮನೆಯೊಳು ಬಿದ್ದಿಹನೇಕೆ ?
ಇಂಥಾ ಜ್ಯೋತಿಷ್ಯ ಮುಖ್ಯವೇ ? ಮುಖ್ಯವಲ್ಲಾ !
ಮುಖ್ಯವು ದಾವುದೆಂದಡೆ,
ನಮ್ಮ ಪ್ರಮಥ ಗಣಾದ್ಥೀಶ್ವರರ ಪ್ರಸಾದ ವಾಕ್ಯವೇ
ಸರ್ವಸಿದ್ಧ ಎಂದು ನಂಬುವೆ ಕಾಣಾ
ಕೂಡಲಾದಿ ಚನ್ನಸಂಗಮದೇವಾ.