ಅಥವಾ

ಒಟ್ಟು 64 ಕಡೆಗಳಲ್ಲಿ , 19 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು, ಹರಿಯ ಕೈ ಮುರಿದು, ಮಾರ್ಜಾಲಗೆ ಮರಣವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನು ಇಷ್ಟಲಿಂಗದ ಸಿಂಹಾಸನ ಗದ್ದಿಗಿ ಉದ್ದರಣೆ: ಕರಕಮಲದೊಳಗೆ ಷಟ್ಕೋಣೆಯಂ ಬರದು ಇಪ್ಪತ್ತು ಮೂರು ಪ್ರಣಮಮಂ ವಿಭೂತಿಯಲ್ಲಿ ಬರದು ಲಿಂಗವ ಮೂರ್ತವ ಮಾಡಿಸಿ, ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿದವರಿಗೆ ರಾಜಭಯ, ಚೋರಭಯ, ಮೃತ್ಯುಭಯ, ಸಿಡಿಲುಭಯ, ಗ್ರಹ ಭಯ, ಕುಟಿಲ ಭಯ, ವ್ಯಾದ್ಥಿ ಭಯ, ಉರಗ ಭಯ, ವೃಶ್ಚಿಕ ಭಯ, ಮೃಗಭಯ, ನೂರೆಂಟು ವ್ಯಾಧಿ ಭಯ, ಸರ್ವವ್ಯಾದ್ಥಿ ಮೊದಲಾದ ಎಲ್ಲವನು ಪರಿಹರವಪ್ಪುದು ತಪ್ಪದು ಎಂದಾತ ನಮ್ಮ ಶಾಂತಕೂಡಲಸಂಗಮದೇವ
--------------
ಗಣದಾಸಿ ವೀರಣ್ಣ
ಹರಹರ ಶಿವಶಿವ ಜಯಜಯ ಹರಗಣಂಗಳಾಚರಿಸಿದ ಸತ್ಕಾಯಕದಿಂದ ಬಹುಜನ್ಮದ ದೋಷ ತೊಲಗುವುದಯ್ಯ. ಸತ್ಕಿøಯದಿಂದ ಕಾಲಕಾಮರ ಭಯ ಹರಿವುದಯ್ಯ. ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ. ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ. ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ. ಸದಾಚಾರದಿಂದ ಮನ ಸಿದ್ಧವಾಗುವುದಯ್ಯ. ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ. ಗಣಾಚಾರದಿಂದ ನಡೆ ಪರುಷವಾಗುವುದಯ್ಯ. ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ. ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ. ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ. ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ. ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ. ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ. ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ. ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ. ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು, ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಭಕ್ತನೊಂದು ಕುಲ, ಭವಿಯೊಂದು ಕುಲವೆಂದೆಂಬರು. ಭಕ್ತಂಗೆ ಕುಲಛಲಂಗಳುಂಟೆ ? ಭಕ್ತಂಗೆ ಯಾಚಕತ್ವವುಂಟೆ ? ಭಕ್ತಂಗೆ ಆಶಾಪಾಶಂಗಳುಂಟೆ ? ಭಕ್ತಂಗೆ ಶೋಕ ಮೋಹ ಭಯ ಲಜ್ಜೆ ಸೇವೆ ರೋಷ ಹರುಷ ಆದ್ಥಿವ್ಯಾದ್ಥಿ ಆಶೆ ಆಮಿಷ ತಾಮಸಂಗಳುಂಟೆ ? ಇಲ್ಲವಾಗಿ, ಇದಕ್ಕೆ ಶ್ರುತಿ: ಯಾಚಕೋ ಲೋಭರಹಿತಃ ಆಶಾಪಾಶಾದಿವರ್ಜಿತಃ ಶೋಕಮೋಹಭಯತ್ಯಾಗೀ ಮದ್ಭಕ್ತಶ್ಚ ಪ್ರಕೀರ್ತಿತಃ ಸೇವಕೋ ರೋಷಹµõ್ರ್ಞ ಚ ಆಶಾಯಾಮಿಷತಾಮ¸õ್ಞ ಆದ್ಥಿವ್ಯಾದ್ಥಿ ಗತೋ ದೂರಂ ಮದ್ಭಕ್ತಶ್ಚ ಪ್ರಕೀರ್ತಿತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಸಹಜಭಕ್ತಿ ಅಪೂರ್ವವಯ್ಯಾ.
--------------
ಆದಯ್ಯ
ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಗರದೊಳಿಪ್ಪ ಊರಿಂಗೆ ದ್ವಾರವತಿಯ ಭಯ. ದ್ವಾರವತಿಗೆ ಅಗ್ರಗಿರಿಯ ಚಂದ್ರ ಸೂರ್ಯರ ಭಯ. ಚಂದ್ರಸೂರ್ಯರಿಬ್ಬರಿಗೆ ನಡೆಗೋಟಿಯ ಭಯ. ನಡೆಗೋಟಿಗೆ ಸ್ಪರುಷನಪುರದ ಭಯ. ಇವು ನಾಲ್ಕನೂ ಮೂರುಮುಖದ ಪಕ್ಷಿ ನುಂಗಿಕೊಂಡಿಪ್ಪುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನ ತನುವಿಕಾರದ ಭಯ, ಎನ್ನ ಮನವಿಕಾರದ ಭಯ, ತನುಮನವನಂಡಲೆವ ಧನವಿಕಾರದ ಭಯ ನೋಡಾ. ಹಗಲು ಹಸಿವಿನ ಚಿಂತೆ, ಇರುಳು ವಿಷಯದ ಚಿಂತೆ; ಹಗಲಿರುಳು ಸಾವವೊಡಲನೆ ಸಂತವಿಡುತಿಹ ಚಿಂತೆಯದಲ್ಲದೆ ಸದಾ ಶಿವನ ಧ್ಯಾನತತ್ಪರನಾಗಿ ಶಿವತತ್ವವಿಚಾರದೊಳಗೆ ಇರಲೊಲ್ಲೆನು ನೋಡಾ. ಸುಧೆಯನೊಲ್ಲದೆ ಹಡಿಕೆಗೆ ಮಚ್ಚಿದ ಸ್ವಾನನ ವಿದ್ಥಿಯಂತಾಯಿತ್ತಯ್ಯ. ಅಮೃತಮಯ ಲಿಂಗಸಂಗವನೊಲ್ಲದೆ ಸಂಸಾರಸಂಗಕ್ಕೆ ಮಯ್ಯಾನುವ ಮರುಳುಮನವೆ ನಿನ್ನ ನಾನೇನೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯಸ್ಥಲ, ಕರಸ್ಥಲ, ಉರಸ್ಥಲ, ಶಿ ಸ್ಥಲ, ಪ್ರಾಣಸ್ಥಲ, ಭಾವಸ್ಥಲವೆಂದು ನುಡಿದಾಡುವರು. ಆ ಸ್ಥಲದೊಳಗಣ ಸ್ವಯಸ್ಥಲವನರಿಯರು ಕಾಣಿರೆ. ಸ್ವಯಸ್ಥಲವೆಂತಿಪ್ಪುದೆಂದರೆ, ಕಾಯಸ್ಥಲವನರಿದರೆ, ಅದು ತಾನೇ ಲಿಂಗವಾಯಿತ್ತು. ಕರಸ್ಥಲವನರಿದರೆ, ಕೈಲಾಸ ಮರ್ತ್ಯ ತನ್ನೊಳಗಾಯಿತ್ತು. ಉರಸ್ಥಲವನರಿದರೆ, ಪರವು ತನ್ನೊಳಗಾಯಿತ್ತು. ಶಿರಸ್ಥಲವನರಿದರೆ ಶಿವನೆಂಬುದಕ್ಕೆ ಇಲ್ಲ. ಪ್ರಾಣಸ್ಥಲವನರಿದರೆ, ಭಯ ಮರಣಾದಿಗಳಿಲ್ಲ. ಭಾವಸ್ಥಲವನರಿದರೆ, ಇನ್ನಾವುದೂ ನೆನಹಿಲ್ಲ. ಇದರ ಭೇದವನರಿಯದ, ಸ್ಥಲನೆಲೆಯುಂಟೆಂಬಿರಿ. ಅದರ ಭೇದವ ನೀವು ಅರಿಯಿರಿ ಕಾಣಿರೊ. ಸ್ಥಲವೆಂದರೆ ಅಂಗ, ನೆಲೆಯೆಂದರೆ ಪ್ರಾಣ. ಇದನರಿಯದೆ ತಲೆ ಕೆಳಗಾಗಿ ಹೋದರು. ಆರು? ದೇವದಾನವರು. ನಿಮ್ಮ ಪಾಡೇನೋ ನರಗುರಿಗಳಿರಾ? ಇದನರಿದು, ಇನ್ನಾದರೂ ನಮ್ಮ ಶರಣರಿಗೆರಗಿ ಬದುಕಿರೊ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಶಿವತತ್ವ ಐದು ಅವಾವೆಂದಡೆ; ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ- ಇಂತು ಶಿವತತ್ವ ಐದು. ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ - ಇಂತು ವಿದ್ಯಾತತ್ತ್ವ ಏಳು. ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ - ಇವು ಕರಣತತ್ತ್ವ ನಾಲ್ಕು. ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ - ಇಂತು ಬುದ್ಧೀಂದ್ರಯಂಗಳು ಐದು. ಇನ್ನು ಕರ್ಮೇಂ್ರಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು - ಇಂತು ಕರ್ಮೇಂ್ರಯಂಗಳು ಐದು. ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ ಗಂಧ - ಇಂತು ಜ್ಞಾನೇಂದ್ರಿಯ ವಿಷಯ ಐದು. ಇನ್ನು ಕರ್ಮೇಂ್ರಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ ಇಂತು ಕರ್ಮೇಂ್ರಯ ವಿಷಯ ಐದು. ಇನ್ನು ವಾಕ್ಕುಗಳಾವುವೆಂದಡೆ: ಪರಾ, ಪಶ್ಯಂತಿ, ಮಧ್ಯಮೆ, ವೈಖರಿ - ಇಂತು ವಾಕ್ಕು ನಾಲ್ಕು. ಸಾತ್ಪಿ, ರಾಜಸ, ತಾಮಸ - ಇಂತು ಗುಣ ಮೂರು. ರಾಜಸಹಂಕಾರ, ವೈಖರಿಯಹಂಕಾರ, ಭೂತಾಯಹಂಕಾರ -ಇಂತು ಅಹಂಕಾರ ಮೂರು. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ - ಇಂತು ಭೂತಂಗಳು ಐದು. ಭೂತಕಾರ್ಯ ಇಪ್ಪತ್ತೈದು - ಅವಾವೆಂದಡೆ: ಅಸ್ಥಿ, ಮಾಂಸ, ತ್ವಕ್, ನಾಡಿ, ರೋಮ - ಈ ಐದು ಪೃಥ್ವೀಪಂಚಕ. ಲಾಲಾ, ಮೂತ್ರ, ಸ್ವೇದ, ಶುಕ್ಲ, ಶೋಣಿಕ - ಈ ಐದು ಅಪ್ಪುವಿನ ಪಂಚಕ. ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸ್ತ್ರೀಸಂಗ - ಈ ಐದು ಅಗ್ನಿಪಂಚಕ. ಪರಿವ, ಪಾರುವ, ಸುಳಿವ, ನಿಲುವ, ಅಗಲುವ - ಈ ಐದು ವಾಯುಪಂಚಕ. ರಾಗ, ದ್ವೇಷ, ಭಯ, ಲಜ್ಜೆ, ಮೋಹ - ಈ ಐದು ಆಕಾಶವಂಚಕ. ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು. ಇನ್ನು ದಶವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ - ಈ ಹತ್ತು ವಾಯುಗಳು, ಇನ್ನು ದಶನಾಡಿಗಳು: ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿ, ಜಿಹ್ವೆ, ಪುಷ್ಕರ, ಪಯಸ್ವಿನಿ, ಆಲಂಬು, ಲಕುಹ, ಶಂಕಿನಿ - ಇಂತೀ ಹತ್ತು ನಾಡಿಗಳು. ಇಂತು ತತ್ವ ತೊಂಬತ್ತಾರು ಕೂಡಿಕೊಂಡು ಆತ್ಮನು ಭೂಮಧ್ಯದಲ್ಲಿರ್ದು ಅವಸ್ಥೆಬಡುವುದನು ಹೇಳಿಹೆನು. ಅದೆಂತೆಂದಡೆ ಅವಸ್ಥೆಯ ಕ್ರಮ: ಪ್ರೇರಕಾವಸ್ಥೆ ಒಂದು, ಅಧೋವಸ್ಥೆ ಐದು, ಊಧ್ರ್ವಾವಸ್ಥೆ ಐದು, ಮಧ್ಯಾವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು, ಶುದ್ಧಾವಸ್ಥೆ ಒಂದು, ನಿರ್ಮಲಾವಸ್ಥೆ ಐದು, ಅಂತೂ ಅವಸ್ಥೆ ಇಪ್ಪತ್ತನಾಲ್ಕು, ಅವರಲ್ಲಿ ಪ್ರೇರಕಾವಸ್ಥೆಯೆಂತೆಂದಡೆ: ತತ್ತ್ವಸಮೂಹಂಗಳನು ಕೂಡಿಕೊಂಡು ಇರ್ದಲ್ಲಿ ಆ ಪುರುಷನು ಪಂಚೇಂ್ರಯಂಗಳಲ್ಲಿ ವಿಷಯಂಗಳು ಅತಿ ಚಮತ್ಕಾರದಲ್ಲಿ ಅರಿವವೇಳೆ ಪ್ರೇರಕಾವಸ್ಥೆಯೆಂದು. ಅದಕ್ಕೆ ಪ್ರೇರಿಸುವ ತತ್ತ್ವಂಗಳಾವುವೆಂದಡೆ- ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು, ಭೂತಂಗಳಲ್ಲಿ ಒಂದು, ಇಂದ್ರಿಯಂಗಳಲ್ಲಿ ಒಂದು -ಇಂತೀ ಹದಿನೆಂಟು ತತ್ವಂಗಳಲ್ಲಿ ವಿಷಯಂಗಳನರಿವನು. ಅದು ಹೇಗೆಂದಡೆ - ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು - ಇಂತು ಹದಿನಾರು ತತ್ತ್ವ. ಆಕಾಶಭೂತವೂ ಶ್ರೋತ್ರೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನದಲ್ಲಿರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಸೋಂಕನರಿವ; ತೇಜಭೂತವೂ ನಯನೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರೂಪವನರಿವ; ಅಪ್ಪುಭೂತವೂ ಜಿಹ್ವೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರಸವನರಿವ; ಪೃಥ್ವಿಭೂತವೂ ಪ್ರಾಣೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಗಂಧವನರಿವ. ಇಂತೀ ವಿಷಯಂಗಳನರಿವುದು. ಇದು ಪ್ರೇರಕಾವಸ್ಥೆಯೆಂದೆನಿಸುವದು. ಇನ್ನು ಅಧೋವಸ್ಥೆ ಐದಕ್ಕೆ ವಿವರ: ಪ್ರಥಮದಲ್ಲಿ ಜಾಗ್ರಾವಸ್ಥೆ ಅದಕ್ಕೆ ಪ್ರೇರಿಸುವ ತತ್ತ್ವಂಗಳು ಬಿಟ್ಟಿಹವಾವುವೆಂದಡೆ: ಶಿವತತ್ತ್ವ ಐದು, ಮಾಯಾತತ್ತ್ವ ಒಂದು, ವಿದ್ಯಾತತ್ತ್ವ ಆರು, ಭೂತಂಗಳು ಐದು ಇಂತು ಹದಿನೇಳು ಬಿಟ್ಟಿಹುದು. ಇನ್ನು ಜಾಗ್ರಾವಸ್ಥೆಯಲ್ಲಿಹ ತತ್ತ್ವಗಳೆಷ್ಟೆಂದಡೆ: ಕರಣ ನಾಲ್ಕು, ಬುದ್ಧೀಂದ್ರಿಯ ಐದು, ಕರ್ಮೇಂದ್ರಿಯ ಐದು, ವಿಷಯ ಹತ್ತು, ವಾಯು ಹತ್ತು. ಇಂತು ಮೂವತ್ತನಾಲ್ಕು ತತ್ತ್ವಂಗಳಲ್ಲಿ ಆ ತನು ಕೇಳದೆ ಕೇಳುವ, ಮಾತಾಡದ ಹಾಂಗೆ ಆಲಸ್ಯದಲ್ಲಿ ಮಾತನಾಡುತ್ತಿಹನು, ಇಂತು ಜಾಗ್ರಾವಸ್ಥೆ. ಇನ್ನು ಸ್ವಪ್ನಾವಸ್ಥೆ. ಅದಕ್ಕೆ ಹತ್ತು ತತ್ತ್ವಂಗಳು ಬಿಟ್ಟಿಹವು. ಅವಾವುವೆಂದಡೆ:ಬುದ್ಧೀಂ್ರಯ ಐದು, ಕರ್ಮೇಂದ್ರಿಯ ಐದು. ಲಲಾಟದಲ್ಲಿ ನಿಲುವು ಕಂಠಸ್ಥಾನದಲ್ಲಿ ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡಿಹುದು. ಅದೆಂತೆಂದಡೆ:ಮಾಯೆ ಒಂದು, ವಾಯು ಹತ್ತು, ವಿಷಯ ಹತ್ತು, ಕರಣ ನಾಲ್ಕು ಇಂತು ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡು ಸ್ವಪ್ನಂಗಳ ಕಾಣುತಿಹನು. ಇದು ಸ್ವಪ್ನಾವಸ್ಥೆ. ಇನ್ನು ಸುಷುಪ್ತಾವಸ್ಥೆಗೆ ಬಹಲ್ಲಿ ಕಂಠಸ್ಥಾನದಲ್ಲಿ ನಿಂದ ತತ್ತ್ವಂಗಳಾವಾವವೆಂದಡೆ- ಮಾಯೆ ಒಂದು, ವಾಯು ಒಂಬತ್ತು ವಿಷಯ ಹತ್ತು, ಕರಣ ಮೂರು- ಇಂತು ಇಪ್ಪತ್ತಮೂರು ತತ್ತ್ವ. ಇನ್ನು ಹೃದಯಸ್ಥಾನದಲ್ಲಿ ಕೂಡಿಹ ತತ್ತ್ವ ಆವಾವೆಂದಡೆ: ಪ್ರಾಣವಾಯು ಒಂದು, ಪ್ರಕೃತಿ ಒಂದು, ಚಿತ್ತ ಒಂದು -ಇಂತು ಸುಷುಪ್ತಾವಸ್ಥೆಯಲ್ಲಿ ತತ್ತ್ವ. ಇನ್ನು ತೂರ್ಯಾವಸ್ಥೆಗೆ ಬಹಾಗ ಹೃದಯದಲ್ಲಿ ನಿಂದ ತತ್ತ್ವ ಚಿತ್ತ ಒಂದು. ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿಹ ತತ್ತ್ವ ಪ್ರಾಣವಾಯು ಒಂದು, ಪ್ರಕೃತಿ ಒಂದು. ಅತೀತಾವಸ್ಥೆಗೆ ಹೋಹಾಗ ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿ ಪ್ರಾಣವಾಯುವುಳಿದು ಅತೀತಾವಸ್ಥೆಯಲ್ಲಿ ಪ್ರಕೃತಿಗೂಡಿ ಮೂಲಾಧಾರದಲ್ಲಿ ಆಣವಮಲಯುಕ್ತವಾಗಿ ಏನೆಂದರಿಯದೆ ಇಹುದು, ಇಂತಿದು ಅಧೋವಸ್ಥೆ. ಇನ್ನು ಊಧ್ರ್ವಾವಸ್ಥೆ, ಅತೀತದಲ್ಲಿ ಪ್ರಕೃತಿಕಾರ್ಯಂಗಳೆಲ್ಲವನೂ ಬಿಟ್ಟು, ತತ್ತ್ವಂಗಳೊಂದೂ ಇಲ್ಲದೆ, ಅಣವಮಲಸ್ವರೂಪವಾಗಿ ಮೂಲಾಧಾರದಲ್ಲಿ ಬ್ದಿರ್ದ ಆತ್ಮನಿಗೆ ಪರಮೇಶ್ವರನ ಕರುಣದಿಂದ ಕ್ರಿಯಾಶಕ್ತಿ, ಶಕ್ತಿತತ್ತ್ವಮಂ ಪ್ರೇರಿಸುವುದು. ಆ ಶಕ್ತಿ ಕಲೆ, ಕಾಲ, ನಿಯತಿಗಳಂ ಪ್ರೇರಿಸುವುದು. ಆ ವೇಳೆಯಲ್ಲಿ ಸೂಕ್ಷೆ ್ಮಯೆಂಬ ವಾಕ್ಕು ಕೂಡುವುದು. ಇಂತು ಅತೀತದಲ್ಲಿ ಅರುಹಿಸುವ ತತ್ತ್ವಂಗಳು: ಶಕ್ತಿತತ್ತ್ವ, ಕಲೆ, ಕಾಲ, ನಿಯತಿ, ಸೂಕ್ಷೆ ್ಮ ಇಂತು ತತ್ತ್ವಂಗಳು ಐದು. ಇನ್ನು ತೂರ್ಯಾವಸ್ಥೆಗೆ ಬಹಾಗ ಹಿಂದೆ ಹೇಳಿದ ತತ್ತ್ವ ಐದು, ಪಶ್ಯಂತಿಯೆಂಬ ವಾಕ್ಕು, ಪ್ರಾಣವಾಯು ಕೂಡಿ ತತ್ತ್ವ ಏಳು ತೂರ್ಯಾವಸ್ಥೆಯಲ್ಲಿ ಪ್ರೇರಿಸುವುದು: ಹಿಂದೆ ಹೇಳಿದ ತತ್ತ್ವ ಏಳು ಕೂಡಿ, ಹೃದಯಸ್ಥಾನದಲ್ಲಿ ಮಧ್ಯಮೆ, ಚಿತ್ತ - ಎರಡು ಕೂಡುತ್ತಿಹವು. ಆ ವೇಳೆಯಲ್ಲಿ ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಪ್ರೇರಿಸುವುದು. ಆ ಶುದ್ಧವಿದ್ಯಾತತ್ತ್ವ ಆತ್ಮಂಗೆ ಅರಿವನೆಬ್ಬಿಸುವುದು. ಇಚ್ಛಾಶಕ್ತಿ ಈಶ್ವರತತ್ತ್ವಮಂ ಪ್ರೇರಿಸುವುದು; ಈಶ್ವರತತ್ತ್ವ ರಾಗತತ್ತ್ವಮಂ ಪ್ರೇರಿಸುವುದು; ರಾಗತತ್ತ್ವ ಆತ್ಮಂಗೆ ಇಚ್ಛೆಯನೆಬ್ಬಿಸುವುದು. ಆಶಕ್ತಿ ಸಾದಾಖ್ಯತತ್ತ್ವಮಂ ಪ್ರೇರಿಸುವುದು; ಸಾದಾಖ್ಯತತ್ತ್ವ ಪ್ರಕ್ಕೃತಿತ್ತ್ವಮಂ ಪ್ರೇರಿಸುವುದು; ಪರಾಶಕ್ತಿ ಶಿವತತ್ತ್ವಮಂ ಪ್ರೇರಿಸುವುದು; ಶಿವತತ್ತ್ವ ಗುಣತತ್ತ್ವಮಂ ಪ್ರೇರಿಸುವುದು. ಇಂತು ಹದಿನೆಂಟು ತತ್ತ್ವ ಆವಾವವೆಂದಡೆ: ಪಂಚಶಕ್ತಿ ಹೊರಗಾಗಿ ಶಿವತತ್ತ್ವ ಐದು, ವಿದ್ಯಾತತ್ತ್ವ ಐದು, ಪ್ರಾಣವಾಯು ಒಂದು, ಪ್ರಕೃತಿ ಒಂದು, ಗುಣ ಮೂರು, ಚಿತ್ತ ಒಂದು, ಪುರುಷ ಒಂದು. ಇಂತು ತತ್ತ್ವ ಹದಿನೇಳು ಸುಷುಪ್ತಾವಸ್ಥೆಯಲ್ಲಿ ಅರುಹಿಸುವುವು. ಇನ್ನು ಸ್ವಪ್ನಾವಸ್ಥೆಯ ಕಂಠದಲ್ಲಿಹ ತತ್ತ್ವ: ಜ್ಞಾನೇಂದ್ರಿಯ ವಿಷಯ ಹತ್ತು, ಕರ್ಮೇಂದ್ರಿಯ ವಿಷಯ ಹತ್ತು, ಪ್ರಾಣವಾಯು ಉಳಿಯೆ, ವಾಯುಚಿತ್ತ ಉಳಿಯೆ, ತ್ರಿಕರಣ ಅಹಂಕಾರ ಮೂರು, ವೈಖರಿಯ ವಾಕ್ಕು ಒಂದು ಇಂತು ಇಪ್ಪತ್ತನಾಲ್ಕು ತತ್ತ್ವ. ಸುಷುಪ್ತಾವಸ್ಥೆಯಲ್ಲಿ ಹಿಂದೆ ಹೇಳಿದ ತತ್ತ್ವ ಹದಿನೇಳು ಕೂಡಿ ತತ್ತ್ವ ನಲವತ್ತೊಂದು ಸ್ವಪ್ನಾವಸ್ಥೆಯಲ್ಲಿ ಕೂಡಿಹವು. ಆಗ ತನ್ನೊಳಗೆ ಅರುಹಿಸುವ ಪ್ರಕಾರವೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ, ಹೃದಯ ಈ ಐದು. ಚಿತ್ತವನು ಆಕಾರ ಪ್ರೇರಿಸುವುದು. ಆ ಅಕಾರವನು ಬ್ರಹ್ಮ ಪ್ರೇರಿಸುವನು, ಬುದ್ಧಿಯನು ಉಕಾರ ಪ್ರೇರಿಸುವುದು; ಉಕಾರವನು ವಿಷ್ಣು ಪ್ರೇರಿಸುವನು, ಅಹಂಕಾರವನು ಮಕಾರ ಪ್ರೇರಿಸುವುದು; ಮಕಾರವನು ರುದ್ರ ಪ್ರೇರಿಸುವನು, ಮನವನು ಬಿಂದು ಪ್ರೇರಿಸುವುದು; ಬಿಂದುವನು ಈಶ್ವರ ಪ್ರೇರಿಸುವನು; ಹೃದಯವನು ನಾದ ಪ್ರೇರಿಸುವುದು; ನಾದವನು ಸದಾಶಿವ ಪ್ರೇರಿಸುವನು. ಈ ಹದಿನೈದು ತನ್ನೊಳಗೆ ಸೂಕ್ಷ ್ಮಶರೀರದಲ್ಲಿಹುದು. ...........ಗೀ(?) ಅಷ್ಟತನುವಿನಿಂದ ಸ್ವರ್ಗನರಕವನರಿವನು. ಮುಂದೆ ಜಾಗ್ರಾವಸ್ಥೆಯಲ್ಲಿ ಅರುಹಿಸುವ ತತ್ತ್ವ ಅವಾವವೆಂದಡೆ- ಭೂತ ಐದು, ಉಭಯೇಂದ್ರಿಯ ಹತ್ತು, ಭೂತಕಾರ್ಯ ಇಪ್ಪತ್ತೈದು, ನಾಡಿ ಹತ್ತು, ಅಂತು ತತ್ತ್ವ ನಲವತ್ತೊಂದು. ಅಂತು ಕೂಡಿ ತತ್ತ್ವ ತೊಂಬತ್ತೊಂದು. ಇಂತಿದು ಊಧ್ರ್ವಾವಸ್ಥೆ. ಇನ್ನು ಸಕಲಾವಸ್ಥೆಯೆಂತೆಂದಡೆ: ತೊಂಬತ್ತೊಂದು ತತ್ತ್ವ ಅವರಲ್ಲಿ ಪ್ರೇರಕತತ್ವವೊಂದು ಪ್ರೇರಿಸುವಲ್ಲಿ ಸಕಲಾವಸ್ಥೆ. ಅದು ಶಿವನನೂ ತನ್ನನೂ ಪಾಶಪಂಚಕವನು ಅರಿಯದೆ ಎಲ್ಲ ವಿಷಯಂಗಳನು ಅರಿವುತ್ತಿಹುದು. ಇನ್ನು ಮಧ್ಯಮಾವಸ್ಥೆಯೆಂತೆಂದಡೆ- ಹಿಂದೆ ಕಂಡವನ ಈಗಲೆಂದು ಅರಿಯಹುದೀಗ ಜಾಗ್ರ ಅತೀತ. ಹಿಂದೆ ಕಂಡವನ ಅರಿದ ಹಾಂಗಿಹುದೀಗ ಜಾಗ್ರ ತುರೀಯ. ಹಿಂದೆ ಕಂಡವನ ಮೆಲ್ಲನೆಚ್ಚತ್ತು ಅರಿವುದು ಜಾಗ್ರದ ಸುಷುಪ್ತಿ. ಹಿಂದೆ ಕಂಡವನ ಕಂಡಾಗಲೆ ಅರಿವುದು ಜಾಗ್ರದ ಸ್ವಪ್ನ. ಹಿಂದೆ ಕಂಡವನ ಹೆಸರು, ಇದ್ದ ಸ್ಥಲ, ಅವನ ಕಾಯಕ ಮುಂತಾಗಿ ಚೆನ್ನಾಗಿ ಅರಿವುದು ಜಾಗ್ರದ ಜಾಗ್ರ. ಅದೆಂತೆಂದಡೆ, ಜಾಗ್ರದಲ್ಲಿ ಪುರುಷತತ್ತ್ವದಲ್ಲಿ ಎಲ್ಲ ತತ್ತ್ವಗಳು ಕೂಡಿದ ಕಾರಣಂದ ತಾನೇನ ನೆನೆದಿದ್ದುದನು ಮರೆವುದು ಜಾಗ್ರ ಅತೀತ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಕೂಡಲು ನೆನೆದುದನು ಹೇಳಿಹೆನೆಂದಡೆ ತೋರುವ ಹಾಂಗೆ ಇಹುದು ತೋರದಿಹುದು ಜಾಗ್ರದ ತುರೀಯ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಚಿತ್ತವು ಕೂಡಲು ನೆನೆದುದನು ಮೆಲ್ಲನೆಚ್ಚತ್ತು ಅರಿದು ಹೇಳುವುದು ಜಾಗ್ರದ ಸುಷುಪ್ತಿ, ಆ ಪುರುಷತತ್ತ್ವದಲ್ಲಿ ಕರಣ ನಾಲ್ಕು, ಇಂದ್ರಿಯ ಹತ್ತು, ವಾಯು ಹತ್ತು, ವಿಷಯ ಹತ್ತು ಅಂತೂ ತತ್ತ್ವ ಮೂವತ್ತನಾಲ್ಕು ಕೂಡಲಾಗಿ, ತಾ ನೆನೆದುದನು ಇದ್ದುದನು ಚೆನ್ನಾಗಿ ಅರಿದು ವಿವರದಿಂದ ಹೇಳುವುದು ಇದು ಜಾಗ್ರದ ಜಾಗ್ರ. ಇಂತಿದು ಮಾಧ್ಯಮಾವಸ್ಥೆ. ಇನ್ನು ಕೇವಲಾವಸ್ಥೆಯೆಂತೆಂದಡೆ: ಶುದ್ಧತತ್ತ್ವ ವಿದ್ಯಾತತ್ತ್ವವನೆಲ್ಲವ ಬಿಟ್ಟು ಆಣವಮಲದಲ್ಲಿ ಆಣವಸ್ವರೂಪಾಗಿ ಕಣ್ಗತ್ತಲೆಯಲ್ಲಿ ಏನೂ ಕಾಣದ ಕಣ್ಣಿನ ಹಾಂಗೆ ಇದ್ದುದೀಗ ಕೇವಲಾವಸ್ಥೆ. ಇನ್ನು ಶುದ್ಧಾವಸ್ಥೆಯೆಂತೆಂದಡೆ: ಕರ್ಮಸಮಾನದಲ್ಲಿ ಶಕ್ತಿಪಾತವಾಗಿ,ತ್ರಿಪದಾರ್ಥಜ್ಞಾನವಾಗಿ, ದಿಟವೆಂಬಂತೆ ತೋರುತ್ತಿಹ ದೇಹಾಪ್ರಪಂಚುವನು ಸಟೆಯೆಂದು ಕಸವ ಕಳೆವ ಹಾಂಗೆ ಕಳೆದು, ತತ್ತ್ವಂಗಳೊಳಗೆ ಇದ್ದು ತತ್ತ್ವಂಗಳಿಗೆ ಅನ್ಯವಾಗಿ, ಆ ತತ್ತ್ವಂಗಳನು ಅರಿದ ಸಕಲಾವಸ್ಥೆಯೆಂಬ ಕೇವಲಾವಸ್ಥೆಯೆಂಬ ಈ ಎರಡು ಅವಸ್ಥೆಗಳೂ ತನ್ನನು ಶಿವನನು ಅರಿವುದಕ್ಕೆ ಪ್ರಯೋಜನವಲ್ಲವೆಂದು ಎರಡವಸ್ಥೆಯನೂ ಬಿಟ್ಟು ಸಕಲವನೂ ಹೊದ್ದದೆ ಕೇವಲವನೂ ಹೊದ್ದದೆ ತ್ರಾಸಿನ ಮುಳ್ಳು ನಿಂದ ಹಾಂಗೆ ನಿಂದುದು ಶುದ್ಧಾವಸ್ಥೆ. ಇದು ಶಿವನ ಶರಣರಿಗಲ್ಲದೆ ಇಲ್ಲ. ಇನ್ನು ನಿರ್ಮಲಾವಸ್ಥೆ ಎಂತೆಂದಡೆ- ಶಿವಜ್ಞಾನದಲ್ಲಿ ಬೋಧವನಳಿದು ಜ್ಞೇಯದೊಳು ಕೂಡಿಹ ಜೀವನ್ಮುಕ್ತರಿಗೆ ಪಂಚಾವಸ್ಥೆಗಳು. ಆ ಅವಸ್ಥೆಗಳಲ್ಲಿ ತತ್ತ್ವಗಳಾವಾವೆಂದಡೆ: ಶಿವತತ್ತ್ವ, ಶಕ್ತಿತತ್ತ್ವ, ಸಾದಾಖ್ಯತತ್ತ್ವ, ಈಶ್ವರತತ್ತ್ವ, ಶುದ್ಧ ವಿದ್ಯಾತತ್ತ್ವ ಈ ಐದು ಮೊದಲಾಗಿ ಪರಾ, ಆದಿ, ಇಚ್ಛೆ, ಜ್ಞಾನ, ಕ್ರಿಯೆಯೆಂಬ ಶಕ್ತಿ ಪಂಚಕಗಳು ಉಸುರಾಗಿ ಜಾಗ್ರಾವಸ್ಥೆಯಲ್ಲಿ ಅರಿವುತ್ತಿಹನು. ಕ್ರಿಯಾಶಕ್ತಿ ಶಕ್ತಿತತ್ತ್ವಮಂ ಬಿಟ್ಟು ಉಳಿದ ಶಕ್ತಿ ನಾಲ್ಕು ಒಡಲುಸುರಾಗಿ ಅರಿಯೆ ಸ್ವಪ್ನಾವಸ್ಥೆ. ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಮೂರರಲ್ಲಿ ಅರಿಯೆ ಸುಷುಪ್ತಾವಸ್ಥೆ. ಇಚ್ಛಾಶಕ್ತಿ ಈಶ್ವರತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಎರಡರಲ್ಲಿ ಅರಿವುದು ತೂರ್ಯಾವಸ್ಥೆ. ಆಶಕ್ತಿ ಸಾದಾಖ್ಯತತ್ತ್ವವೂ ಬಿಟ್ಟು ಕಳೆದು ಉಳಿದ ಪರಾಶಕ್ತಿ ಒಂದು ಶಿವತತ್ತ್ವ ಒಂದರಲ್ಲಿ ಅರಿಯೆ ನಿರ್ಮಲದ ಅತೀತಾವಸ್ಥೆ. ಇನ್ನು ಈ ಶಕ್ತಿ ಶಿವತತ್ತ್ವಂಗಳೆ ಒಡಲುಸುರಾಗಿ ಇದ್ದಲ್ಲಿ ಶಿವನಲ್ಲದೆ ಮತ್ತೊಂದು ಏನೂ ತೋರದು. ಅಂಥ ಜೀವನ್ಮುಕ್ತರು ನಿರ್ಮಲಜಾಗ್ರದಲ್ಲಿ ಎಂತು ಅರಿವುತ್ತಿಪ್ಪರೆಂದಡೆ ಆ ಪರಮಾವಸ್ಥೆಯನೂ ಅನುಭವದಲ್ಲಿ ಅರಿವುದು, ಮಲಪಂಚಕಗಳನು ಅರುಹಿಸುವ ಸದಮಲ ಶಿವಜ್ಞಾನ ಪರೆ ಮೊದಲಾದ ಪೂರ್ಣ ಬೋಧದಲ್ಲಿ ಕೂಡಿ ತಾನು ಇಲ್ಲದಿರುವಂಧು ಏನೂ ತೋರದ ಪೂರ್ಣ ಬೋಧವಾಗಿ ನಿಂದುದು ನಿರ್ಮಲಜಾಗ್ರ. ಇನ್ನು ಪರಾಶಕ್ತಿಯನೂ ಶಿವತತ್ತ್ವವನೂ ಮೀರಿ, ಪರದಲಿ ಬೆರೆದು, ಅದ್ವೆ ೈತವೂ ಅಲ್ಲದೆ, ದ್ವೆ ೈತವೂ ಅಲ್ಲದೆ, ದ್ವೆ ೈತಾದ್ವೆ ೈತವೂ ಅಲ್ಲದೆ ಇನತೇಜದಲ್ಲಿ ಕಣ್ಣು ತೇಜ ಕೂಡಿದ ಹಾಂಗೆ ಆಣವದ ಅಣುವಿನ ಹಾಂಗೆ ತಾನು ಇಲ್ಲದೆ ಇಹನು. ಇದು ಶಿವಾದ್ವೆ ೈತ. ಇಂತಲ್ಲದೆ ಆತ್ಮ ಆತ್ಮ ಕೆಟ್ಟಡೆ, ಆತ್ಮವರ್ಗ ಮುಕ್ತಿಸುಖವಿಲ್ಲ, ಅಳಿದ ಠಾವಿನಲ್ಲಿ ಹುಟ್ಟುವುದಾಗಿ, ಶಿವ ತಾನೆ ಆತ್ಮನಾಗಿ ಹುಟ್ಟುವನಹುದು: ಶಿವನಲ್ಲಿ ಹುಟ್ಟಿ ಮಲ ಉಳ್ಳದಹುಲ್ಲ. ಶಿವ ತಾನೆ ಹುಟ್ಟಿಸಿ ನರಕ - ಸ್ವರ್ಗದ ಮಾನವನಹನು, ಪಕ್ಷಪ್ಕಾಯಹನು, ನಿಃಕರುಣಿಯಹನು, ವಿಕಾರಿಯಹನು. ಶಿವನ್ಲ ಕೂಡದೆ ಬೇರಾಗಿ ಇಹನೆಂದಡೆ, ಮುಕ್ತಿಯೆಂಬ ಮಾತು ಇಲ್ಲವಹುದು. ಪಂಚಕೃತ್ಯವ ಮಾಡಲು ಕಾರಣವಿಲ್ಲ ಒಂದಾಗೆ! ಎರಡಾಗದೆ ಭೇದಾಭೇದವಾಗಿಹನೆಂದಡೆ ಶಿವಭಕ್ತಿಯನೂ ಶಿವಕ್ರಿಯೆಗಳನೂ ಮಾಡಿ ಶಿವನ ಕೂಡಿಹನೆಂದೆನ್ನಬೇಡ! ಮುನ್ನವೆ ಒಂದಾಗಿ ಇದ್ದನಾಗಿ, ಈ ಭೇದವ ತಿಳಿಯಬಲ್ಲಡೆ ಆತನೆ ಶರಣ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಅಂಗದಾಸೆಯುಳ್ಳನ್ನಕ್ಕ ಭಯ ಬಿಡದು ನೋಡಾ ಅಯ್ಯಾ. ಜೀವನ ಭ್ರಾಂತುಳ್ಳನ್ನಕ್ಕ ಪ್ರಕೃತಿ ಹಿಂಗದು ನೋಡಾ ಅಯ್ಯಾ. ಮನದ ಸಂಚಲ ಉಳ್ಳನ್ನಕ್ಕ ಕರ್ಮವಳಿಯದು ನೋಡಾ ಅಯ್ಯಾ. ಕಾಮಾದಿ ಭೋಗಂಗಳುಳ್ಳನ್ನಕ್ಕ ಪುಣ್ಯಪಾಪಂಗಳು ತೊಲಗವು ನೋಡಾ ಅಯ್ಯಾ. ಇಹಪರಂಗಳ ಸಾರುವನ್ನಕ್ಕ ಭವ ಹಿಂಗದು ನೋಡಾ ಅಯ್ಯಾ. ಆನೆಂಬುದುಳ್ಳನ್ನಕ್ಕ ನೀನೆಂಬುದು ಬಿಡದು ನೋಡಾ ಅಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ತಾನೆಂಬನ್ನಕ್ಕ ಲಿಂಗಸಾಹಿತ್ಯವಿಲ್ಲ ನೋಡಾ ಅಯ್ಯಾ.
--------------
ಆದಯ್ಯ
ಭಕ್ತಿ ಜ್ಞಾನವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ `ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ. ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ ನಿಜಮುಕ್ತಿಯನರಸುವ ಅಣ್ಣಗಳಿರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪ್ರಾಣವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ, ಸುಖದುಃಖ ಭಯವು ತನಗಿಲ್ಲದಿಹುದೀಗ ಪ್ರಾಣಲಿಂಗಿಸ್ಥಲ ನೋಡಾ. ಇದಕ್ಕೆ ಈಶ್ವರೋýವಾಚ : ``ತಥಾ ಪ್ರಾಣೇ ಗುಣೇ ಲಿಂಗೇ ಲಿಂಗಪ್ರಾಣಸಮಾಹಿತಃ | ಸುಖದುಃಖೇ ಭಯಂ ನಾಸ್ತಿ ಪ್ರಾಣಲಿಂಗಿಸ್ಥಲಂ ಭವೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರುಷ ಸೋಂಕಿಯೂ ಪಾಷಾಣ ಶುದ್ಧವಾಗದಿದ್ದರೆ ಆ ಪರುಷದ ಗೊಡವೆ ಏತಕಯ್ಯ? ಅಗ್ನಿ ಸೋಂಕಿಯೂ ಕಾಷ*ದ ಗುಣವಳಿಯದಿದ್ದರೆ ಆ ಅಗ್ನಿಯ ಗೊಡವೆ ಏತಕಯ್ಯ? ಗರುಡನಿದ್ದೂ ಸರ್ಪದ ಭಯ ಹಿಂಗದಿದ್ದರೆ ಆ ಗರುಡನ ಗೊಡವೆ ಏತಕಯ್ಯ? ವಜ್ರಾಂಗಿಯ ತೊಟ್ಟಿರ್ದೂ ಬಾಣದ ಭಯ ಹಿಂಗದಿದ್ದರೆ ಆ ವಜ್ರಾಂಗಿಯ ಗೊಡವೆ ಏತಕಯ್ಯ? ಆನೆಯನೇರಿಯೂ ಶ್ವಾನನ ಭಯಹಿಂಗದಿದ್ದರೆ ಆ ಆನೆಯ ಗೊಡವೆ ಏತಕಯ್ಯ? ಜ್ಯೋತಿಯಿದ್ದೂ ಕತ್ತಲೆ ಹರೆಯದಿದ್ದರೆ ಆ ಜ್ಯೋತಿಯ ಗೊಡವೆ ಏತಕಯ್ಯ? ಅಂಗದ ಮೇಲೆ ಚಿದ್ಘನಲಿಂಗವ ಧರಿಸಿದ್ದು ತನುಮನದ ಅವಗುಣ ಹಿಂಗದಿದ್ದರೆ ಆ ಲಿಂಗದ ಗೊಡವೆ ಏತಕಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನೀವು ಸೋಂಕಿಯೂ ಭವ ಹಿಂಗದಿದ್ದರೆ ನಿಮಗೆ ಕುಂದಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಂಸಾರವೆಂಬ ಘೋರಾರಣ್ಯದೊಳಗೊಬ್ಬಳು, ಜಗವ ನುಂಗಿ ಉಗುಳುವ ಬಲು ರಕ್ಕಸಿಯಿದ್ದಾಳೆ. ಗಜ ವ್ಯಾಘ್ರ ಕ್ರೂರ ಮೃಗಂಗಳ ಭಯ ಘನ. ಹುಲ್ಲ ಬಿಲ್ಲಿನವ, ಕೈಯ ಹಗ್ಗದವ ಇವರಿಬ್ಬರು ಬಲುವ್ಯಾಧರು ಕಣುವೆಯ ಕಟ್ಟಿ ಐದಾರೆ ಆ ಕಡೆಗಡಿಯಿಡದಿರಣ್ಣ. ಭಕ್ತಿಗ್ರಾಮದತ್ತ ನಡೆಯಿರಣ್ಣ. ಎಡರಾಪತ್ತುಗಳಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಕ್ತಿಗ್ರಾಮದಲ್ಲಿ.
--------------
ಸ್ವತಂತ್ರ ಸಿದ್ಧಲಿಂಗ
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ, ಮಂತ್ರದಿಂದ ಅನ್ನ ಉದಕವ ಹಾಕಿ, ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು, ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ, ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ, ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ, ಜಂಗಮದ ಪಾದೋದಕದಿಂದ ಆ ಭಸ್ಮವ ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ, ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ ಲಿಂಗಾರ್ಚನೆಯ ಮಾಡಿದವರಿಗೆ ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು. ಆ ಫಲಪದ ಪಡೆದವರು ವೃಕ್ಷದ ಮೇಲೆ ಮನೆಯ ಕಟ್ಟಿದವರು ಉಭಯರು ಒಂದೆ. ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು. ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ ನೆಲಕ್ಕೆ ಬೀಳುವರಲ್ಲದೆ, ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಫಲಪದವ ಪಡೆದವರು ಆ ಫಲಪದವಿ ಇರುವ ಪರ್ಯಂತರವು ಸ್ಥಿರವಾಗಿ ಇರುವರಲ್ಲದೆ, ಆ ಫಲಪದವಿ ಕಾಲೋಚಿತದ ಮೇಲೇರಿ ಅಳಿದು ನಾಶವಾದ ಮೇಲೆ ಮರಳಿ ಭವಕ್ಕೆ ಬೀಳುವರಲ್ಲದೆ, ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು ತನ್ನ ಪರಮಜ್ಞಾನದಿಂ ಭೇದಿಸಿ ಚಿದ್‍ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ, ಶಿಖಿ-ಕರ್ಪುರದ ಸಂಯೋಗದ ಹಾಗೆ ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->