ಅಥವಾ

ಒಟ್ಟು 64 ಕಡೆಗಳಲ್ಲಿ , 28 ವಚನಕಾರರು , 59 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು, ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ ಮೂರ್ತಿಗೊಳಿಸಿ_ ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂಧಿಸಿ ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ ಝಲ್ಲಿ ಪಟ್ಟೆಯನಲಂಕರಿಸಿ ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ ಮಹಾನಾದವೆಂಬ ಭೇರಿ ವಾದ್ಯಂಗಳಿಂ ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ_ಪಿಡಿಸಿ,_ ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ_ ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ ಪ್ರವೇಶವಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸ್ವಸ್ಥಿರವೆಂಬ ಭೂಮಿಯಲ್ಲಿ ಸ್ತಂಭಂಗಳು ಮೂರಾಗಿ, ಫಲಂಗಳಾರಾದವು. ಆ ಫಲ ಮೀರಿತ್ತು, ಮೇಲಣ ಮೂವತ್ತಾರ ಮೀರಿ, ಅವ್ವೆಗೆ ಯೋಗ್ಯವಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತತ್ವವಿದೆಂದರಿತು ತತ್ವಮಸಿಯಾದಳವ್ವೆ.
--------------
ಸಿದ್ಧರಾಮೇಶ್ವರ
ಮೆಟ್ಟಿಲಿಲ್ಲದ ಭೂಮಿಯಲ್ಲಿ ಹುಟ್ಟಿಲಿಲ್ಲದ ಹೆಮ್ಮರ ಹುಟ್ಟಿತ್ತು ನೋಡಾ. ಮೆಟ್ಟಿ ಹತ್ತೆಹೆನೆಂದರೆ ಕೊಂಬಿಲ್ಲ; ಮುಟ್ಟಿ ಹಿಡಿದಿಹೆನೆಂದರೆ ಮೂರ್ತಿಯಲ್ಲ. ಅದರಲ್ಲಿ ಕಟ್ಟಣೆಗೆಯ್ದದ ಹಣ್ಣು ರಸತುಂಬಿ, ತೊಟ್ಟು ಬಿಡದು ನೋಡಾ. ತೊಟ್ಟ ಮುಟ್ಟದೆ ಕಟ್ಟಣೆಗೆಯ್ದದ ಹಣ್ಣು ಮುಟ್ಟಿ ಸವಿಯಬಲ್ಲಾತನ ಹುಟ್ಟರತಾತನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ. ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ. ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ. ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ, ಅದು ಬೀಜ ನಾಮ ನಿಂದು, ಸಸಿಯೆಂಬ ನಾಮವಾಯಿತ್ತು. ಸಸಿ ಬಲಿದು ಬೆಳೆದು, ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು. ಬೀಜ ಒಂದೋ, ಎರಡೋ ? ಎಂಬುದನರಿದಲ್ಲಿ, ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು. ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು.
--------------
ಮೆರೆಮಿಂಡಯ್ಯ
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ, ನಿಮ್ಮ ಬಲ್ಲತನವ ಪೇಳಿರಯ್ಯಾ. ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ, ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ. ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ. ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ. ಶಾಸ್ತ್ರಸಂದ್ಥಿಗಳರಿರಾನಿಮ್ಮಶಾಸ್ತ್ರ ಸಾದ್ಥಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ ಒರಲಿ ಒರಲಿ ಹೋದವು ಕೇಳಿರಯ್ಯಾ. ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ ಹೋರಾಡಿ ಮಥನದಿಂದ ಹೊಡೆದಾಡಿ ಪರಶಿವನ ಕಾಣದೆ ಸತ್ತು ಹೋದರಲ್ಲಾ ! ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು ಶಿವನ ನಿಲುಕಡೆಯನೆಂದಿಗೂ ಅರಿಯವು. ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು ಮುನ್ನವೆ ಅರಿಯರು, ಅದೇನು ಕಾರಣವೆಂದಡೆ- ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ? ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ ಫಲವ ಬಯಸಿದರುಂಟೆ ? ಈ ದೃಷ್ಟಾಂತದಂತೆ ತಿಳಿದು ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ. ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ. ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಾನಾಪಮಾನವೆಂಬುದು ಮನದ ಭ್ರಮೆ ನೋಡಯ್ಯಾ. ಮೇಲಕ್ಕೆ ಕರೆದಡೆ ಮಾನವೆಂಬುದೀ ಲೋಕ; ಮೂಗುವಟ್ಟಡೆ ಅಪಮಾನವೆಂಬುದೀ ಲೋಕ. ತಿರುಗುವ ಭೂಮಿಯೆಲ್ಲ ನಕಾರ ಪ್ರಣವವಾಯಿತ್ತು. ಏಕೈಕವಾದ ಭೂಮಿಯಲ್ಲಿ ಪೀಠವ ಕೊಟ್ಟು ಮನ್ನಿಸುವ ಅಣ್ಣಗಳ ಬಾಯಲ್ಲಿ ಹುಡಿಮಣ್ಣ ಹೊಯ್ಯದೆ ಮಾಬನೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಸಾಲ ಮಾಡಲಿಲ್ಲ, ಕಡ ಕೊಡಲಿಲ್ಲ, ಊರನಾಶ್ರೈಸಲಿಲ್ಲ, ಕಾಂತಾರಕ್ಕೆ ಹೋಗಲಿಲ್ಲ. ನೆಲವಿಲ್ಲದ ಭೂಮಿಯಲ್ಲಿ ಬೀಜವಿಲ್ಲದೆ ಬಿತ್ತಲು, ಅದು ಅಂಕುರಿಸಿ ಎರಡಾಯಿತ್ತು, ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು, ಕುಸುಮ ಮೂವತ್ತಾರಾಯಿತ್ತು ಫಲ ಇನ್ನೂರಾ ಹದಿನಾರಾಯಿತ್ತು, ಹಣ್ಣು ವಿಶ್ವಪರಿಪೂರ್ಣವಾಯಿತ್ತು, ಆ ಹಣ್ಣನು ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಪರಿಣಾಮಿಸಿ, ಜಿಹ್ವೆ ಇಲ್ಲದೆ ರುಚಿಸಿ ಸುಖಿಯಾಗಿರ್ದು ಸಂಸಾರವ ಮಾಡುತಿರ್ದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ. ಆ ಪಟ್ಟಣಕ್ಕೆ ಒಡೆಯನಾದ ನಿರಂಜನನೆಂಬ ರಾಜನು ಸಂಗವಿಲ್ಲದ ಸ್ತ್ರೀಸಂಯೋಗದಿಂ ಶಿಶುವ ಪಡೆದು, ಆ ಶಿಶು ತಂಗಿಯನೊಡಗೂಡಿ ಪಂಚಮುಖವುಳ್ಳಾತನ ಪಡೆದು, ಆ ಪುತ್ರನ ಮಮಕಾರಶಕ್ತಿಯಿಂದ ಮೂವರು ಪುಟ್ಟಿದರು. ಆ ಮೂವರು ಮೂರುಪುರವ ನಿರ್ಮಿಸಿದರು. ಆ ಮೂರುಪುರ ಈರೈದು ನಾಲ್ಕು ದೇಶ, ಆ ದೇಶದಲ್ಲಿ ಎರಡು ಕುಲ, ಎಂಬತ್ತುನಾಲ್ಕು ಕುಲವಾಯಿತ್ತು. ಇಂತೀ ಎಲ್ಲವು ಯಾತರಿಂದಾಯಿತ್ತೆಂದರಿದು ಅದ ನುಂಗಿ ತಾನಳಿದುಳಿದು ಇರ್ಪಾತನೇ ಶರಣ. ಅಂಗಲಿಂಗಸಂಬಂದ್ಥಿ ಸರ್ವಾಂಗಲಿಂಗಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ : ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ : ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.
--------------
ಪುರದ ನಾಗಣ್ಣ
ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮøತಿ ತತ್ವದಿಂದ ಇದಿರಿಗೆ ಬೋದ್ಥಿಸಿ ಹೇಳುವ ಹಿರಿಯರೆಲ್ಲರೂ ಹಿರಿಯರಪ್ಪರೆ ? ನುಡಿದಂತೆ ನಡೆದು, ನಡೆದಂತೆ ನುಡಿದು, ನಡೆನುಡಿಸಿದ್ಧಾಂತವಾಗಿಯಲ್ಲದೆ ಅರುಹಿರಿಯರಾಗಬಾರದು. ಗೆಲ್ಲಸೋಲಕ್ಕೆ ಹೋರಿ ಬಲ್ಲಿದರಾದೆವೆಂದು ತನ್ನಲ್ಲಿದ್ದ ಹುಸಿಯ ಹುಸಿವ ಕಲ್ಲೆದೆಯವನ ನೋಡಾ. ಇವರೆಲ್ಲರ ಬಲ್ಲತನವ ಕಂಡು ನಿಲ್ಲದೆ ಹೋದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಕಾಳಮೇಘನೆಂಬ ಭೂಮಿಯಲ್ಲಿ ಕಾಳರಾತ್ರಿಯೆಂಬ ಏರಿ [ಕಟ್ಟೆ], ಮಂಜಿನ ನೀರು ತೊರೆಗಟ್ಟಿ ಹಾಯ್ದು ತುಂಬಿತ್ತು. ಆ ಕೆರೆಗೆ ತೂಬು ಬಿಸಿಲ ಸಂಭ್ರಮದ ಕಲ್ಲು, ಕಂಜನಾಳದ ನೂಲಿನ ಕಂಬ ಆ ತಲಪಿಂಗೆ. ಅಂದಿನ ಮುಚ್ಚುಳು, ಇಂದಿನ ದ್ವಾರದಲ್ಲಿ ಸೂಸುತ್ತಿರಲಾಗಿ ಸಾಳಿವನ ಬೆಳೆಯಿತ್ತು, ಕೊಯ್ದು ಅರಿಯ ಹಾಕಲಾಗಿ ಒಂದಕ್ಕೆ ಎರಡಾಗಿ ಎರಡಕ್ಕೆ ಮೂರುಗೂಡಿ ಹೊರೆಗಟ್ಟಿತ್ತು. ಹಾಕುವುದಕ್ಕೆ ಕಳನಿಲ್ಲದೆ, ನೆಡುವುದಕ್ಕೆ ಮೇಟಿಯಿಲ್ಲದೆ ಒಕ್ಕುವುದಕ್ಕೆ ಎತ್ತಿಲ್ಲದೆ, ಹೊರೆಯೆತ್ತ ಹೋಯಿತೆಂದರಿಯೆ ನಾ ಹೋದೆ, ಸದ್ಯೋಜಾತಲಿಂಗದಲ್ಲಿಗಾಗಿ.
--------------
ಅವಸರದ ರೇಕಣ್ಣ
ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು ಲಿಂಗವೆಂದು ಹೆಸರಿಟ್ಟು, ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತರ ಸಂಯೋಗದಿಂದ ಪುಟ್ಟಿದ ಮನುಜರಿಗೆ ಭಕ್ತನೆಂದು ಹೆಸರಿಟ್ಟು, ಇಂತಪ್ಪ ಭಕ್ತಂಗೆ ಅಂತಪ್ಪ ಲಿಂಗವನು ವೇಧಾ, ಮಂತ್ರ, ಕ್ರಿಯೆ ಎಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ, ಅಂಗದ ಮೇಲೆ ಲಿಂಗಧಾರಣವ ಮಾಡಿದಡೆ, ಅದು ಲಿಂಗವಲ್ಲ, ಅವನು ಭಕ್ತನಲ್ಲ. ಅದೇನು ಕಾರಣವೆಂದಡೆ: ಅವನು ಮರಣಕ್ಕೆ ಒಳಗಾಗಿ ಹೋಗುವಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲ್ಲಿ ಉಳಿಯಿತು. ಭಕ್ತಿ ಭ್ರಷ್ಟವಾಗಿ ಹೋಯಿತು ಬಿಡಾ ಮರುಳೆ. ಇದು ಲಿಂಗಾಂಗಸ್ವಾಯುತವಲ್ಲ. ಲಿಂಗಾಂಗದ ಭೇದವ ಹೇಳ್ವೆ ಲಾಲಿಸಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ. ಚರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಇಷ್ಟಲಿಂಗ. ಅರಿವಿನ ಮನದ ಕೊನೆಯಲ್ಲಿ ನಿತ್ಯನಿವಾಸವಾಗಿ ಪೂಜಿಸಿಕೊಂಬುದು ವೀರಶೈವಲಿಂಗ ಇಂತೀ ಲಿಂಗತ್ರಯದ ಆದಿ ಆಧಾರವನರಿಯದೆ ಹೋದರಲ್ಲಾ ಹೊಲಬುದಪ್ಪಿ ಇನ್ನಾರಿಗೆ ಹೇಳುವೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ
--------------
ಘಟ್ಟಿವಾಳಯ್ಯ
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ. ಅದು ಎಂತೆಂದರೆ : ಶ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ, ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು, ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು, ಭಂಗ ಬಡುತ್ತಿದ್ದುದಯ್ಯಾ ಶರೀರ. ಸಾಕ್ಷಿ :``ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ | ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||'' ಎಂದುದಾಗಿ, ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->