ಅಥವಾ

ಒಟ್ಟು 61 ಕಡೆಗಳಲ್ಲಿ , 22 ವಚನಕಾರರು , 60 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶುದ್ಧಪ್ರಸಾದಿಯಾದಡೆ ತನು ಸತ್ಕ್ರಿಯಾ ಸನ್ನಿಹಿತನಾಗಿ, ಅಣುಮಾತ್ರ ದ್ವೈತಿಯಾಗದೆ ಚರಿಸಬೇಕು. ಸಿದ್ಧಪ್ರಸಾದಿಯಾದಡೆ ಮನ ಜ್ಞಾನಸನ್ನಿಹಿತನಾಗಿ, ಕಿಂಚಿತ್ತು ಮಲವಿಷಯಕ್ಕೆ ಜಿನುಗದೆ ಚರಿಸಬೇಕು. ಪ್ರಸಿದ್ಧಪ್ರಸಾದಿಯಾದಡೆ ಭಾವ ಮಹಾನುಭಾವಸನ್ನಿಹಿತನಾಗಿ, ಒಂದಿನಿತು ಭ್ರಾಂತನಾಗದೆ ಚರಿಸಬೇಕು. ಈ ಭೇದವನರಿಯದೆ ಅವರವರಂತೆ, ಇವರಿವರಂತೆ, ತಾನು ತನ್ನಂತೆ ನಡೆನುಡಿ ಕೊಡುಕೊಳ್ಳಿಯುಳ್ಳರೆ ಕಡೆ ಮೊದಲಿಲ್ಲದೆ ನರಕವನೈಯ್ದುವ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಷ್ಟಲಿಂಗದ ಭೇದವನರಿಯದೆ ಪ್ರಾಣಲಿಂಗದ ಭೇದವ ಬಲ್ಲೆನೆಂಬ ಭ್ರಷ್ಟಾಚಾರಿಗಳು ನೀವು ಕೇಳಿರೋ. ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗಸಂಬಂದ್ಥಿಯಾಗಿ, ದೃಷ್ಟಲಿಂಗವ ಕಾಣಬಲ್ಲಾತನೆ ಅನಾದಿ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು. ಆರರ ತಿರುಳ ತೆಗೆದು ಒದೂರೊಳಗೆ ನಿಲಿಸಬೇಕು. ಐದರ ಮುಸುಕನುಗಿದು, ಐದರ ಕೆಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು, ನಾಲ್ಕರೊಳಗೆ ನಿಲ್ಲದೆ ಮೂರು ಮುಖವು ಒಂದೆ ಭಾವವಾಗಿರಬೇಕು. ಈ ಭೇದವನರಿಯದೆ ಸುಳಿವವರ ಕಂಡು ಬೆರಗಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪದಾರ್ಥವನರ್ಪಿಸಿ ಪ್ರಸಾದವ ಪಡೆದೆವೆಂದೆಂಬರು ನಾವಿದನರಿಯೆವು. ಪದಾರ್ಥವಾವುದು ಪ್ರಸಾದವಾವುದೆಂದರಿಯರು. ಪದಾರ್ಥವೆ ಆತ್ಮನು. ಪ್ರಸಾದವೇ ಪರವಸ್ತುವು. ಪದಾರ್ಥವ ಪರಮಸ್ತುವಿನಲ್ಲಿ ಅರ್ಪಿಸಿ, ಪದಾರ್ಥಭಾವವಿಲ್ಲದೆ ಪ್ರಸಾದಭಾವವಾದುದೆ, ಪ್ರಸಾದವ ಪಡೆದುದು ಈ ಭೇದವನರಿಯದೆ, ಪರದ್ರವ್ಯವಾದ ಸಕಲ ಪದಾರ್ಥವನರ್ಪಿಸಿ, ಪ್ರಸಾದವ ಪಡೆದೆವೆಂಬ ಭ್ರಾಂತಬಾಲಕರಿಂದ ಬಿಟ್ಟು ಬಾಲಕರುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ ಸದ್ಗತಿ ಸತ್ಕ್ರಿಯೆ ಸದ್ಧರ್ಮವೆಂಬ ಪೀಠತ್ರಯದ ಮೇಲೆ ವಿಚಾರಗುರು ವಿನಯಗುರು ಕೃಪಾಗುರುವೆಂಬ ಗುರುತ್ರಯವ ಧರಿಸಿ ಘನಭಕ್ತಿಯ ಕುರುಹಬಲ್ಲರೆ ಆತ ಸತ್ಯಭಕ್ತನೆಂಬೆ. ಸುಬುದ್ಧಿ ನಿಃಕಾಮ ಅನುಕೂಲೆಯೆಂಬ ಮನತ್ರಯದ ವಿಶೇಷಗತಿ ಸುಜ್ಞಾನ ವಿಮಲಜ್ಞಾನವೆಂಬ ಪೀಠತ್ರಯದಮೇಲೆ ಸಗುಣಲಿಂಗ ನಿರ್ಗುಣಲಿಂಗ ನಿರ್ಭೇದ ಲಿಂಗವೆಂಬ ಲಿಂಗತ್ರಯವ ಧರಿಸಿ, ಚಿನ್ಮಯಭಕ್ತಿಯ ಕುರುಹ ಬಲ್ಲರೆ ಆತ ನಿತ್ಯಭಕ್ತನೆಂಬೆ. ಸಂವಿತ್‍ಕಳಾ ಸಂಧಾನಕಳಾ ಸಮರಸಕಳಾಯೆಂಬ ಭಾವತ್ರಯದಲ್ಲಿ, ಮತಿಗಮನ, ರತಿಗಮನ, ಮಹಾರತಿಗಮನವೆಂಬ ಭಾವತ್ರಯದ ಸತ್ಪ್ರೇಮ ಸುಖಮಯ ಆನಂದವೆಂಬ ಪೀಠತ್ರಯದ ಮೇಲೆ ಜ್ಞಾನಜಂಗಮ, ಮಹಾಜ್ಞಾನಜಂಗಮ, ಪರಮಜ್ಞಾನಜಂಗಮವೆಂಬ ಜಂಗಮತ್ರಯವ ಧರಿಸಿ, ಪರಿಪೂರ್ಣಭಕ್ತಿಯ ಕುರುಹ ಬಲ್ಲರೆ ಆತ ನಿಜಭಕ್ತನೆಂಬೆ. ಈ ಭೇದವನರಿಯದೆ ಬರಿಯ ಕಾಯ ಮನ ಭಾವದಲ್ಲಿ ಹುಸಿನೆರವಿಯ ತುಂಬಿ ಹುಸಿಯ ಡಂಬ್ಥಿನ ಭಕ್ತಿಯ ಕಿಸುಕುಳತ್ವಕ್ಕೆ ಬಿಸಿಯನಿಟ್ಟು, ತಪ್ಪಿಸಿ ತೋರುತಿರ್ದನು ಗಂಬ್ಥೀರ ಭಕ್ತಿಯ ನೆರೆದು ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಸಂಬಂದ್ಥಿಗಳೆಂದು ಹೇಳಿಕೊಂಬ ಹೆಂಗಳೆ ಹೇಮಲೋಷ್ಠ್ರ ರತಿಸಂಯುಕ್ತ ಮತಿನಾಶ ಮಲಭುಂಜಕರು, ಅತೀತಪ್ರಸಾದವನರಿದರ್ಪಿಸಿಕೊಂಬ ಭೇದವನರಿಯದೆ ಹಸುವಿನೊಡಲಿಗೆ ಹವಣವರಿಯದೆ ಜಿನುಗುವ ಜಿಹ್ವೆಲಂಪಟಗೂಡ್ಥಿ ಕೈದುಡುಕಿಗಳಿಂದೆ ನೆಗೆನೆಗೆದು ಕೊಂಬ ಅಘಬಂಧರೆತ್ತ? ಅಪ್ರತಿಮನೆತ್ತ? ಸಲೆ ತತ್ವವೆತ್ತ? ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಅನುಪಮ ಪ್ರಸಾದಿಯೇ ನಿತ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ ಕಕ್ಷದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಪರಸ್ತ್ರೀಯರ ಅಪ್ಪುಗೆ ಇಲ್ಲದಿರ್ದಡೆ ಉರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಎಂದೆಂದೂ ಹುಸಿಯನಾಡದಿರ್ದಡೆ ಜಿಹ್ವಾಪೀಠದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ನಪಾನಂಗಳಿಗೆ ಬಾಯ್ದೆರೆಯದಿರ್ದಡೆ ಅಮಳೋಕ್ಯದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ಯರಾಜರಿಗೆ ತಲೆವಾಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯ ಶಿವಲಿಂಗವ. ಇಂತೀ ಷಡ್‍ವಿಧಾಚಾರ ನೆಲೆಗೊಂಡು ಷಡ್‍ವಿಧ ಸ್ಥಾನದಲ್ಲಿ ಶಿವಲಿಂಗವ ಧರಿಸಬಲ್ಲಡೆ, ಭಕ್ತನೆಂಬೆನು, ಮಹೇಶ್ವರನೆಂಬೆನು, ಪ್ರಸಾದಿಯೆಂಬೆನು, ಪ್ರಾಣಲಿಂಗಿಯೆಂಬೆನು, ಶರಣನೆಂಬೆನು, ಐಕ್ಯನೆಂಬೆನು. ಇಂತೀ ಭೇದವನರಿಯದೆ ಲಿಂಗವ ಧರಿಸಿದಡೆ ಮಡಿಲಲ್ಲಿ ಕಲ್ಲ ಕಟ್ಟಿಕೊಂಡು ಕಡಲ ಬಿದ್ದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು. ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು. ಕಂಡವರ ಕಂಡು ಮಂಡೆಯ ಬೋಳಿಸಿಕೊಂಬುವರು. ಉಂಬುವರ ಕಂಡು ಉಂಬುವರು. ಪುಣ್ಯಕ್ಷೇತ್ರ ಪುರುಷಕ್ಷೇತ್ರ, ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಲ್ಲದೆ ತಮ್ಮ ನಿಧಾನವ ಸಾಧಿಸುವ ಭೇದವನರಿಯದೆ ಷಡುಸ್ಥಲಜ್ಞಾನಿಗಳೆಲ್ಲಾ ಸತ್ತರಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗಬ್ರ್ಥೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ. ಇಂತಪ್ಪ ಪಾದೋದಕದ ಭೇದ ಬಲ್ಲವರು ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ, ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ? ಇಂತಪ್ಪ ಪರಾಪರ ನಾಮವನುಳ್ಳ ಪರಂಜ್ಯೋತಿಸ್ವರೂಪವಾದ ಪರತತ್ವ ಪಾದೋದಕವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆಂದೆನ್ನಬಹುದು. ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ ಸತ್ಯಸದ್ಭಕ್ತರೆಂದೆನ್ನಬಹುದು. ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು ಆಣವಾದಿ ಕಾಮಿಕಾಂತ್ಯಮಾದ ಮಲತ್ರಯದ ಬಲೆಯಲ್ಲಿ ಶಿಲ್ಕಿ, ದೇಹಾದಿ ಮನಾಂತ್ಯಮಾದ ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ, ಮಂದಮತಿ ಅಧಮ ಜಂಗಮದ ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ ಮೂಗ ತುಟಿತನಕ ಕೊಯ್ದು ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಗೆ ಹುಟ್ಟಿದ ಕಲ್ಲು, ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ ಶಿಲೆಯನೆಂತು ಲಿಂಗವೆಂದೆಂಬೆನಯ್ಯ? ಕೊಟ್ಟಾತ ಗುರುವೆ? ಕೊಂಡಾತ ಶಿಷ್ಯನೆ? ಅಲ್ಲ ಕಾಣಿರಯ್ಯ. ಶಿಲಾಲಿಖಿತವ ಕಳೆದು, ಕಳಾಭೇದವನರಿದು ಕಳೆಯ ತುಂಬಿಕೊಡಬಲ್ಲರೆ ಗುರುವೆಂಬೆ; ಕೊಂಡಾತ ಶಿಷ್ಯನೆಂಬೆನಯ್ಯ `ಯಥಾ ಕಲಾ ತಥಾ ಭಾವೋ| ಯಥಾ ಭಾವಸ್ತಥಾ ಮನಃ|| ಯಥಾ ಮನಸ್ತಥಾ ದೃಷ್ಟಿ| ರ್ಯಥಾ ದೃಷ್ಟಿಸ್ತಥಾ ಸ್ಥಲಂ||' ಎಂದುದಾಗಿ ಈ ಭೇದವನರಿಯದೆ ಇಷ್ಟವ ಮಾರುವಾತಂಗೂ ಕೊಂಬಾತಂಗೂ ನಾಯಕನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರು ಚಕ್ರದಲ್ಲಿ ಅರಿತೆನೆಂದು ನುಡಿವ ಅರಿವುಗೇಡಿಗಳು ನೀವು ಕೇಳಿರೋ. ಆಧಾರಚಕ್ರ ಪೃಥ್ವಿಗೆ ಸಂಬಂಧ ; ಅಲ್ಲಿಗೆ ಬ್ರಹ್ಮ ಅದ್ಥಿದೇವತೆ, ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ. ಸ್ವಾದ್ಥಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅದ್ಥಿದೇವತೆ, ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ. ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ ; ಅಲ್ಲಿಗೆ ರುದ್ರನದ್ಥಿದೇವತೆ, ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ. ವಿಶುದ್ಧಿಚಕ್ರ ವಾಯುವಿಗೆ ಸಂಬಂಧ ; ಅಲ್ಲಿಗೆ ಸದಾಶಿವನದ್ಥಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ. ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ ; ಅಲ್ಲಿಗೆ ಪರಶಿವನದ್ಥಿದೇವತೆ, ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ. ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ. ಆ ಲಿಂಗವು ನಿಮಗೆ ತಪ್ಪಿದವು, ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು ನಾಚಿತ್ತು ಎನ್ನ ಮನವು ಗೊಹೇಶ್ವರಪ್ರಿಯ ನಿರಾಳಲಿಂಗಾ
--------------
ಗುಹೇಶ್ವರಯ್ಯ
ಪರಿಪಾಕವಾದ ಸಕಲಪದಾರ್ಥಂಗಳ ಹಸ್ತಪರುಷದಿಂದೆ ಶುದ್ಧಸಂಸ್ಕಾರವ ಮಾಡಿದಲ್ಲದೆ ಲಿಂಗಕ್ಕೆ ಅರ್ಪಿಸಲಾಗದು. ಅದೇನು ಕಾರಣವೆಂದಡೆ : ಹಸ್ತಪರುಷವಿಲ್ಲದ ಪದಾರ್ಥ ಉಚ್ಛಿಷ್ಟವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಪಂಚಭೂತ ಪ್ರಕೃತ ಜೀವಮಯವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಜೀರ್ಣಗೋಮಾಂಸವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಅಶುದ್ಧ ಕಿಲ್ಬಿಷವೆನಿಸಿತ್ತು. ಅದೆಂತೆಂದೊಡೆ : ``ಜಂಗಮಸ್ಯ ಕರಸ್ಪರ್ಶಾತ್ ಸರ್ವದ್ರವ್ಯಂ ಚ ಶುದ್ಧ್ಯತೇ | ಹಸ್ತಸ್ಪರ್ಶಂ ವಿನಾ ಪಾಕಂ ಕಿಲ್ಬಿಷಂ ಪ್ರೋಚ್ಯತೇ ಬುಧೈಃ ||'' ಎಂದುದಾಗಿ, ಇಂತಪ್ಪ ಪದಾರ್ಥದ ಪೂರ್ವಾಶ್ರಯವನು ಶಿವಮಂತ್ರ ಶ್ರೀ ವಿಭೂತಿಯಿಂದೆ ಕಳೆದು, ಶುದ್ಧಸಂಸ್ಕಾರವೆನಿಸಿ ಶಿವನೇತ್ರದಿಂದೆ ನೋಡಿ, ಶಿವಹಸ್ತದಿಂದೆ ಮುಟ್ಟಿ, ಶಿವಲಿಂಗಕ್ಕೆ ಅರ್ಪಿಸಿದಲ್ಲಿ ಶಿವಪ್ರಸಾದವೆನಿಸಿತ್ತು. ಆ ಶಿವಪ್ರಸಾದವನು ಶಿವಲಿಂಗಸನ್ನಿಹಿತನಾಗಿ ಶಿವಜಿಹ್ವೆಯಲ್ಲಿ ಭೋಗಿಸುವಾತನೆ ಶಿವಶರಣನು. ಆತನೆ ಶಿವಪ್ರಸಾದಿ, ಆತನೆ ಶಿವಾನುಭಾವಿ. ಇಂತಪ್ಪ ಭೇದವನರಿಯದೆ ಮಾಡುವ ಮಾಟವೆಲ್ಲವು ಜೀವಗಡಣದೊಳಗಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->