ಅಥವಾ

ಒಟ್ಟು 77 ಕಡೆಗಳಲ್ಲಿ , 19 ವಚನಕಾರರು , 70 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು. ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು. ಅದೇ ಭಾವದಲ್ಲಿ ತೋರಿತ್ತು ; ಅದೇ ಪ್ರಾಣವಾಯಿತ್ತು ; ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು. ಅದಕ್ಕೆ ವಾಯುವೇ ಅಂಗವಾಗಿ ಕರ್ಮಾದ್ಥೀನಮೆನಿಸಿ, ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು, ಅನೇಕಜನ್ಮ ಸಂಚಿತಕರ್ಮ ಸಮೆದು, ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ, ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ, ತಾನೇ ಪ್ರಸನ್ನಮಾಗಿರ್ದ ಮಹಾಜಾÕನಶಕ್ತಿಯಂ ಕಂಡದರೊಳಗೆ ಕೂಡಿ, ಸಾಧಕಕ್ಕೊಳಗಾದ ಮನವೇ ಘನವಾಯಿತ್ತು. ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು, ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನಾದಲಕ್ಷವ ನೋಡಿದರೇನಯ್ಯ ? ಬಿಂದುಲಕ್ಷವ ನೋಡಿದರೇನಯ್ಯ ? ಕಲಾಲಕ್ಷವ ನೋಡಿದರೇನಯ್ಯ ? ಇಂತಿವನೊಳಗೊಂಡು ಪರಬ್ರಹ್ಮವೆಂಬ ಲಕ್ಷವ ನೋಡಬಲ್ಲಾತನೆ ನಿಮ್ಮ ಲಿಂಗೈಕ್ಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗೈಕ್ಯವಿಲ್ಲದವರನೊಲ್ಲ ಲಿಂಗಧಾರಿ. ಲಿಂಗಾರ್ಚನೆಯ ಕಾಲದಲ್ಲಿ ಪ್ರಸಾದ ಭೋಗದ ಕಾಲದಲ್ಲಿ, ಅಂಗದ ಮೇಲೆ ಲಿಂಗವಿಲ್ಲದ ಭವಿಯ ನೇಮಸ್ತನೆಂದುಕೊಂಡರೆ. ಪಂಚಮಹಾಪಾತಕವೆಂದುದಾಗಿ ಲಿಂಗೈಕ್ಯಂ ಲಿಂಗಧಾರೀಣಾಂ ಅಂಗಬಾಹ್ಯೇ ವಿಧೀಯತೇ. ಭವೀನಾಂ ಪಾಪದೃಷ್ಟೀನಾಂ ಪ್ರಚ್ಛನ್ನಪಟಮುತ್ತಮಂ ಎಂದುದಾಗಿ-ಭವಿಮಾರ್ಗ ನೇಮಸ್ತಗುಂಟಾಗಿ ಭವಿಯ ಸಂಗವ ಕಳೆದ ಲಿಂಗೈಕ್ಯರನಲ್ಲದೊಲ್ಲ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ, ಬೀಜದೊಳಗಣ ವೃಕ್ಷ ಉಲಿಯದ ಪರಿಯಂತೆ, ಪುಷ್ಪದ ಕಂಪು ನನೆಯಲ್ಲಿ ತೋರದಂತೆ, ಚಂದ್ರಕಾಂತದ ಉದಕ ಒಸರದ ಪರಿಯಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ಲಿಂಗೈಕ್ಯ. ಇಹವೆನ್ನ ಪರವೆನ್ನ ಸಹಜವೆನ್ನ ತಾನೆನ್ನ.
--------------
ಹಾವಿನಹಾಳ ಕಲ್ಲಯ್ಯ
ಭಾವಿಸಿ ನೋಡಿದಡೆ ಅಂಗವಾಯಿತ್ತು, ಅಂಗಸಂಗವಾಗಿ ಸಂಯೋಗವ ಮರೆದು, ಲಿಂಗಸೈವೆರಗಾದೆ. ಲಿಂಗೈಕ್ಯ, ನಿಮ್ಮನಗಲದೆ ಅಂಗರುಚಿಗಳ ಮರೆದು, ಲಿಂಗರುಚಿಗಳಲ್ಲಿ ಸೈವೆರಗಾದೆ. ಲಿಂಗ ಸೈವೆರಗಾದ ಬಳಿಕ ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ.
--------------
ಅಕ್ಕಮಹಾದೇವಿ
ಗುರುಸ್ಥಲವುಳ್ಳನ್ನಕ್ಕರ ಶಿಷ್ಯ, ಲಿಂಗಸ್ಥಲವುಳ್ಳನ್ನಕ್ಕರ ಭಕ್ತ, ಜಂಗಮಸ್ಥಲವುಳ್ಳನ್ನಕ್ಕರ ಶರಣ, ಇಂತು ಗುರುಲಿಂಗಜಂಗಮವನರಿದು ಮರೆದಲ್ಲಿ ಲಿಂಗೈಕ್ಯ ತಾನೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕವಡೆ ಕಟಕವ ನುಂಗಿತ್ತು, ಕುಡಿಕೆ ಹಿರಿದಪ್ಪ ಮಡಕೆಯ ನುಂಗಿತ್ತು. ಅಡಕೆ ಮರನ ನುಂಗಿದ ಮತ್ತೆ ಫಲವುಂಟೆ? ಅರ್ಚನೆ ಭಕ್ತಿಯಲಡಗಿ, ಭಕ್ತಿ ಮುಕ್ತಿಯಲಡಗಿ, ಮುಕ್ತಿ ಜ್ಞಾನದಲಡಗಿ, ಜ್ಞಾನ ನಾನೆಂಬಲ್ಲಿ ಅಡಗಿದ ಮತ್ತೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
``ನೇತ್ರಂ ದೇವೋ ನ ಚಾಪರಃ'' ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವಲಿಂಗ ಪರಬ್ರಹ್ಮವು. ``ನೇತ್ರಂ ಸರ್ವಜ್ಞ ಮೇ ವಪುಃ'' ಎಂಬ ಶ್ರುತಿಯುಂಟಾಗಿ, ನೇತ್ರವು ಶಿವಲಿಂಗಕ್ಕೆ ದೇಹವು. ``ನೇತ್ರಮಧ್ಯೋದ್ಭವಂ ಲಿಂಗಂ'' ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಮೂರ್ತಿಯ ಹೆತ್ತ ತಾಯಿ. ``ನೇತ್ರಮಧ್ಯಜಚಿತ್ಸುಖಂ'' ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವೇಷ್ಟಲಿಂಗದ ಗುಹ್ಯಕ್ಕೆ ರಾಣಿವಾಸಮಕ್ಕುಂ. ``ದ್ವಿನೇತ್ರಕುಚಯೋರ್ಲಿಂಗಂ'' ಎಂಬ ಶ್ರುತಿಯುಂಟಾಗಿ ನೇತ್ರವು ಪ್ರಾಣಲಿಂಗದ ಹಸ್ತಂಗಳಿಗೆ ಪಿಡಿವ ಕುಚಂಗಳಕ್ಕುಂ. ``ಚಕ್ಷುಶ್ಚ ಶಿವ ಪುಷ್ಪಂ ಚ'' ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಕ್ಕೆ ಅವಿರಳ ಪುಷ್ಪಮಕ್ಕುಂ. ``ಲಿಂಗಜ್ಯೋತಿಶ್ಚ ನೇತ್ರಯೋಃ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ, ಅಖಂಡ ಜ್ಯೋತಿಯಕ್ಕುಂ. ``ಲಿಂಗಾಭಿಷೇಕಂ ಚಕ್ಷುಶ್ಚ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ ಅಭಿಷೇಕವ ಮಾಡುವ ಕಳಸಂಗಳಕ್ಕುಂ ``ಲಿಂಗಸ್ಯ ಸಾಯಕಂ ನೇತ್ರಂ'' ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗವನೊಳಗುಮಾಡಿಕೊಂಬುದಕ್ಕೆ ಹಾಕುವ ಬಾಣಂಗಳಕ್ಕುಂ. ``ಚಕ್ಷುರ್ಲಿಂಗಸ್ಯ ಚಾಕ್ಷುಷಿ'' ಎಂಬ ಶ್ರುತಿಯುಂಟಾಗಿ, ನೇತ್ರಂಗಳು ಲಿಂಗಮೂರ್ತಿಯ ನೇತ್ರಂಗಳಲ್ಲದೇ ಸ್ವಯಕ್ಕೆ ನೇತ್ರವಿಲ್ಲ. ಈ ನೇತ್ರಂಗಳು ಲಿಂಗಮೂರ್ತಿಯ ನೋಟ ಬೇಟ ಕೂಟದಿಂ, ಭಾವ ಮನ ದೃಕ್ಕೀಲೈಸಿ ನಟ್ಟ ದೃಷ್ಟಿಯಿಂ ನೋಳ್ವ (ನೋಟ) ಲಿಂಗೈಕ್ಯ ಶರಣಂಗಲ್ಲದೆ ಲೋಗರಿಗೆಲ್ಲಿಯದೊ ? ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ ಈ ನೇತ್ರದ ಮಹಿಮೆಯ ಗುಹೇಶ್ವರನೇ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳಿವರೆತ್ತ ಬಲ್ಲರು ನೋಡಾ.
--------------
ಅಲ್ಲಮಪ್ರಭುದೇವರು
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು . ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು . ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ, ಪಂಚವಕ್ತ್ರ ದಶಭುಜಂಗಳನು ಧರಿಸಿ, ತನ್ನ ನಿಜಧರ್ಮವನೆ ತನಗಾಧಾರಮಪ್ಪ ವಾಹನಮಂ ಮಾಡಿಕೊಂಡು, ಪಂಚಮುಖಂಗಳಲ್ಲಿ ಪಂಚಭೂತಂಗಳಂ ಸೃಷ್ಟಿಸಿ, ಅವನೇ ಬಂದು ಬ್ರಹ್ಮಾಂಡವಂ ಮಾಡಿಕೊಂಡು, ತನ್ನ ಲೀಲಾಶಕ್ತಿಯ ಸಂಗದಿಂದ ಅನಂತಕೋಟಿ ಜೀವಂಗಳಂ ಸೃಷ್ಟಿಸಿ, ತನ್ನ ಗೂಢಮಪ್ಪ ಮನೋಭಂಡಾರವಂ ತೆಗೆದು, ಆ ಜೀವಂಗಳಿಗದನೇ ಜೀವನವಂ ಮಾಡಿ, ಈ ಬ್ರಹ್ಮಾಂಡವೆಂಬ ತನ್ನ ಪಟ್ಟಣಕ್ಕೂ ಈ ಜೀವಜಾಲಕ್ಕೂ ನಿಜಮನೋಭಂಡಾರವನೆ ಆಧಾರಮಂ ಮಾಡಿ, ತಾನೇ ಸೇವ್ಯನಾಗಿ, ಜೀವಂಗಳೇ ಸೇವಕರಾಗಿ ಕ್ರೀಡಿಸುತ್ತಿರಲಾ ಪರಮಾತ್ಮನಿಂದ ಸಲಿಗೆವಡೆದ ಕೆಲವು ಜೀವಂಗಳು ಅಹಂಕರಿಸಿ, ಆ ಪರಶಿವನಲ್ಲಿರ್ಪ ಮನೋಭಂಡಾರದಲ್ಲಿ ತಮ್ಮ ಶಕ್ತಿಗೆ ತಕ್ಕಷ್ಟು ಸತ್ಕರಿಸಿಕೊಂಡು, ತದ್ವಂಚನಾಮನದಿಂ ಪಂಚಭೂತಂಗಳನ್ನು ಸಾದ್ಥಿಸಿ, ಅದರಿಂದ ಒಂದು ಪಿಂಡಾಂಡವೆಂಬ ಪಟ್ಟಣಮಂ ಮಾಡಿಕೊಂಡು, ಇಂದ್ರಿಯಂಗಳೆಂಬ ಕೊತ್ತಲಂಗಳಂ ನಿರ್ಮಿಸಿ, ನವದ್ವಾರಂಗಳೆಂಬ ಹುಲಿಮುಖಂಗಳಿಂದ ಅಜ್ಞಾನವೆಂಬತಿ ಘಾತಮಾದಗಳಂ ಕಲ್ಪಿಸಿ, ಆಶೆಯೆಂಬಾಳ್ವೇರಿಯಂ ಸೃಜಿಸಿ, ತನ್ಮಧ್ಯದಲ್ಲಿ ಅಂತರಂಗವೆಂಬುದೊಂದು ಅರಮನೆಯಂ ಕಟ್ಟಿ, ಅಲ್ಲಿದ್ದುಕೊಂಡು, ಜೀವನು ತನ್ನ ಮನೋವಂಚನಾಭಂಡಾರವಂ ವೆಚ್ಚಿಸುತ್ತಾ, ವಿಷಯಂಗಳೆಂಬ ಮನ್ನೆಯರಂ ಸಂಪಾದಿಸಿ, ನಿಜಪುರದ್ವಾರಂಗಳಲ್ಲಿ ಕಾಹನಿಟ್ಟು, ಅಂತಃಕರಣಚತುಷ್ಟಯವೆಂಬ ಶಿರಃಪ್ರಧಾನರಂ ಸಂಪಾದಿಸಿ, ತನ್ಮಂತ್ರಾಲೋಚನೆಯಿಂ ಸಾಮ, ಭೇದ, ದಾನ, ದಂಡವೆಂಬ ಕರಿ, ತುರಗ, ರಥ, ಪದಾತಿಗಳಂ ಕೂಡಲಿಟ್ಟು, ಕರ್ಮವೆಂಬ ಸೇನಾನಿಗೆ ಪಟ್ಟಮಂ ಕಟ್ಟಿ, ತನ್ನಲ್ಲಿರ್ಪ ನಾನಾ ದಳಂಗಳಂ ಸೇನಾಪತಿಯ ವಶಮಂ ಮಾಡಿ, ನಾದ ಬಿಂದು ಕಳೆಗಳೆಂಬ ಶಕ್ತಿಗಳಂ ಪರಿಣಯಮಾಗಿ, ಜಾಗ್ರತ್ಸ್ವಪ್ನಸುಷುಪ್ತಿಗಳೆಂಬರಮನೆಗಳೊಳಗೆ ಕಳೆಯ ನಾದದಲ್ಲಿ ಕೆಲವುತ್ತಂ, ಬಿಂದುವಿನಲ್ಲಿ ಫಲಿಸಿ ಫಲಸುಖಂಗಳನನುಭವಿಸುತಿರ್ಪ ಜೀವನೆಂಬರಸಿನನುಮತವಿಡಿದು, ಕರ್ಮಸೇನಾನಿಯು ಸಕಲದಳಂಗಳೊಳಗೆ ಕೂಡಿ, ವಿಷಯಂಗಳೆಂಬ ಮನ್ನೆಯರಂ ಮುಂದುಮಾಡಿಕೊಂಡು, ಪ್ರಪಂಚವೆಂಬ ರಾಜ್ಯವಂ ಸಾದ್ಥಿಸಿ, ತದ್ರಾಜ್ಯದಲ್ಲಿ ಬಂದ ಪುತ್ರ ಮಿತ್ರ ಕಳತ್ರ ಧನ ಧಾನ್ಯ ವಸ್ತುವಾಹನಾಲಂಕಾರಾದಿಗಳನ್ನು ಕಾಯಪುರಕ್ಕೆ ತಂದು, ಜೀವನೆಂಬರಸಿಗೆ ಒಪ್ಪಯಿಸುತ್ತಿರಲು, ಜೀವನು ಸಂತೋಷಿಸಿ, ತಾನು ಸಂಪಾದಿಸಿದ ಸಕಲದ್ರವ್ಯವನ್ನು ತನ್ನ ಮೂಲಮನೋಭಂಡಾರದಲ್ಲಿ ಬೆರಸಿ, ಬಚ್ಚಿಟ್ಟು, ಅಹಂಕರಿಸಿ, ಸಕಲಕ್ಕೂ ತಾನೇ ಕರ್ತೃವೆಂದು ಬೆರತು, ಪರಮಾತ್ಮನಂ ಮರೆತು, ಸೇವ್ಯಸೇವಕರೆಂಬ ವಿವೇಕವರತು, ಅಧರ್ಮ ವಾಹನಾರೂಢನಾಗಿ, ತನ್ನ ತಾನರಿಯದೆ, ಕಾಮವಶನಾಗಿ ಸಂಚರಿಸುತಿರ್ಪ ಈ ಜೀವನ ಅಹಂಕಾರಮಂ ಸಂಹರಿಸುವ ನಿಮಿತ್ತವಾಗಿ ಪರಮಾತ್ಮನು ಕಾಲನೆಂಬ ಸುಬೇದಾರನಂ ಸೃಷ್ಟಿಸಿ, ವ್ಯಾದ್ಥಿಪೀಡನಗಳೆಂಬ ಬಲಂಗಳಂ ಕೂಡಲಿಟ್ಟು, ದುಃಖವೆಂಬ ಸಾಮಗ್ರಿಯಂ ಒದಗಿಸಿಕೊಟ್ಟು, ಕ್ರೋಧವೆಂದು ಮನೆಯಾಳಿಂಗೆ ತಮೋಗುಣಂಗಳೆಂಬ ಬಲುಗಾರರಂ ಕೂಡಿಕೊಟ್ಟು, ಈ ಕಾಯಪುರಮಂ ಸಾದ್ಥಿಸೆಂದು ಕಳುಹಲು, ಆ ಸದಾಶಿವನಾಜ್ಞಾಶಕ್ತಿಯಿಂದ ಕಾಲಸುಭೇದಾರನು ಸಕಲ ಬಲಸಮೇತವಾಗಿ ಬಂದು, ಕಾಯಪುರಕ್ಕೆ ಸಲುವ ಪ್ರಪಂಚರಾಜ್ಯವಂ ನೆರೆಸೂರೆಮಾಡಲು, ಕರಣಂಗಳೆಂಬ ಪ್ರಜೆಗಳು ಕೆಟ್ಟೋಡಿಬಂದು, ಜೀವನೆಂಬ ಅರಸಿಗೆ ಮೊರೆಯಿಡಲು, ಅದಂ ಕೇಳಿ, ಆಗ್ರಹಪಟ್ಟು, ಕರ್ಮಸೇನಾನಿಗೆ ನಿರೂಪಿಸಲು, ತತ್ಸೇನಾನಿಯು ಕಾಯಪುರದಲ್ಲಿರ್ಪ ಸಕಲದಳ ಸಮೇತಮಾಗಿ ಬಂದು ಕಾಲಸುಬೇದಾರನೊಡನೆ ಯುದ್ಧವಂ ಮಾಡಿ, ಜಯಿಸಲಾರದೆ ವಿಮುಖನಾಗಿ ಉಪಭೋಗಾದಿ ಸಕಲ ಸುಖಂಗಳಂ ಕೋಳುಕೊಟ್ಟು ಬಂದು ಕೋಟೆಯಂ ಹೊಗಲು, ಜೀವನು ಪಶ್ಚಾತ್ತಾಪದಿಂ ಸಂಶಯಯುಕ್ತನಾಗಿ ಕಳವಳಿಸುತ್ತಿರಲು, ಆ ಕಾಲಸುಬೇದಾರನು ಕಾಯಪುರಮಂ ಒತ್ತರಿಸಿ ಮುತ್ತಿಗೆಯಂ ಹಾಕಿ, ವಿಷಯಮನ್ನೆಯರಂ ಹಸಗೆಡಿಸಿ ಕೊಂದು, ಕರ್ಮವಂ ನಿರ್ಮೂಲವಂ ಮಾಡಿ, ಅಂತರಂಗ ಮನೆಯಂ ಕೊಳ್ಳೆಯವಂ ಮಾಡಿ, ನಾದಬಿಂದುಕಳಾಶಕ್ತಿಯಂ ಸೆರೆವಿಡಿದು, ಕಾಯಪುರಮಂ ಕಟ್ಟಿಕೊಳ್ಳಲು, ಜೀವನು ಭಯಭ್ರಾಂತನಾಗಿ, ಆ ಮೂಲಮನೋಭಂಡಾರಮಾತ್ರಮಂ ಕೊಂಡು, ತತ್ಪುರಮಂ ಬಿಟ್ಟು, ಅನೇಕ ಯಾತನೆಪಟ್ಟು ಓಡಿ, ಮರಳಿಮರಳಿ ಜೀವನು ಪುರಂಗಳಂ ಸಂಪಾದಿಸಲು, ತತ್ಸಂಪಾದಿತಪುರಂಗಳಂ ಕಾಲನು ಸಾದ್ಥಿಸುತ್ತಿರಲು, ಜೀವನು ಅಹಂಕಾರವಳಿದು, ಆಸ್ಪದವಿಲ್ಲದೆ, ತನಗೆ ಕರ್ತೃವಾರೆಂಬುದಂ ಕಾಣದೆ, ವಿಚಾರಪಟ್ಟು ದುಃಖಿಸುತಿರ್ಪ ಜೀವನಿಗೆ ಕರುಣದಿಂ ಪರಮಾತ್ಮನು ಜ್ಞಾನದೃಷ್ಟಿಯಂ ಕೊಡಲು, ತದ್ಬಲದಿಂ ಶಿವನೇ ಕರ್ತೃ ತಾನೇ ಭೃತ್ಯನೆಂಬುದಂ ತಿಳಿದು, ಶಿವಧ್ಯಾನಪರಾಯಣನಾಗಿ, ಶಿವಧಾರಣ ಧರ್ಮಪದಮಂ ಪಿಡಿದು ಪಲುಗುತ್ತಿರಲು, ತದ್ಧರ್ಮಮೇ ಗುರುರೂಪಮಾಗಿ, ತನ್ನಲ್ಲಿರ್ಪ ಶಿವನಂ ಜೀವಂಗೆ ತೋರಿಸಲು, ಜೀವಂ ಹಿಗ್ಗಿ, ತಾನು ಸಂಪಾದಿಸಿದ ಪುರವನೆ ಶಿವಪುರಮಂ ಮಾಡಿ, ಧರ್ಮಾದಿ ಸಕಲವಿಷಯಬಲಂಗಳಂ ಶಿವನ ವಶಮಂ ಮಾಡಿ, ಆ ಪಟ್ಟಣದೊಳಯಿಂಕೆ ಬಿಜಯಂಗೈಸಿಕೊಂಡು ಹೋಗಿ, ಅಂತರಂಗದ ಅರಮನೆಯೊಳಗೆ ಜ್ಞಾನಸಿಂಹಾಸನದ ಮೇಲೆ ಕುಳ್ಳಿರಿಸಿ, ಪಟ್ಟಮಂ ಕಟ್ಟಿ, ತನ್ನ ಸರ್ವಸ್ವಮಂ ಶಿವನಿಗೆ ಸಮರ್ಪಿಸಿ, ತಾನು ಸತ್ಕರಿಸಿಕೊಂಡುಬಂದ ಮನೋಭಂಡಾರಮಂ ಶಿವನಡಿಯಂ ಸೇರಿಸಲು, ಸದಾಶಿವನು ಪ್ರಸನ್ನಮುಖನಾಗಿ, ದಯೆಯಿಂ ಪರಿಗ್ರಹಿಸಿ, ಜೀವನನು ಸಜ್ಜೀವನನಮಾಡಿ ಕೂಡಿಕೊಂಡುದೆ ಲಿಂಗೈಕ್ಯ ಕಾಣಾ | ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಲೋಹ ಪರುಷವ ಮುಟ್ಟುವುದಲ್ಲದೆ, ಪರುಷ ಪರುಷವ ಮುಟ್ಟುವುದೆ ಅಯ್ಯಾ ? ಅಂಗವಿಡಿದಂಗೆ ಪ್ರಸಾದವಲ್ಲದೆ ಲಿಂಗವಿಡಿದಂಗೆ ಪ್ರಸಾದವುಂಟೆ ? `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ ಕಿರಿದಿಂಗೆ ಕಿರಿದು ಹಿರಿದಕ್ಕೆ ಹಿರಿದು, ವಾಙ್ಮನಕ್ಕಗೋಚರ. ಕೂಡಲಚೆನ್ನಸಂಗಮದೇವ [ಕೇಳಯ್ಯಾ] ಸ್ವರೂಪು ಪ್ರಸಾದಿ, ನಿರೂಪು ಲಿಂಗೈಕ್ಯ !
--------------
ಚನ್ನಬಸವಣ್ಣ
ತನ್ನೊಳಿಹ ಮೂರು ಲೋಕವ ನುಂಗಿ ಮುಂದೆ ತೋರುತಿಹ ಪರಬ್ರಹ್ಮ ಕಿರಣವು ಆ ಕಿರಣದೊಳು ನೆನವನಡಗಿಸಿ ಸುಷುಪ್ತಿಯ ನಿಲವ ಕಾಣಬಲ್ಲಾತನೆ ಪರಮ ಲಿಂಗೈಕ್ಯ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾರ್ಗಕ್ರಿಯಾಸಮಯದಲ್ಲಿ ಶಿವಶಕ್ತಿಸಂಪುಟ. ವಿೂರಿದಕ್ರಿಯಾಸಮಯದಲ್ಲಿ ಶಿವಲಿಂಗಸಂಪುಟ. ಉಭಯಕ್ರಿಯಾನುಭಾವ ನೆಲೆಗೊಂಡಲ್ಲಿ ಮನಲಿಂಗಸಂಪುಟ. ಮನ ಲಿಂಗ ಲೀಯವಾದ ಬಳಿಕ ತೆರಹಿಲ್ಲದೆ ಕುರುಹಳಿದ ಲಿಂಗೈಕ್ಯ. ಸುತ್ತಿದ ಪ್ರಪಂಚು ಮೆಲ್ಲಮೆಲ್ಲನೆ ಅಚ್ಚುಗವಿಲ್ಲದೆ ಹಿಂಗಿದವು ಕೂಡಲಚೆನ್ನಸಂಗಾ ಲಿಂಗೈಕ್ಯಂಗೆ.
--------------
ಚನ್ನಬಸವಣ್ಣ
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ, ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ, ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ, ತಾಳಸಂಪುಟಕ್ಕೆ ಬಾರದ ಘನವ ? ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ, ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ, ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
--------------
ಚನ್ನಬಸವಣ್ಣ
ಲಿಂಗಾರ್ಚಕನಾದ ಬಳಿಕ, ಲಿಂಗ ವಿದ್ಥಿವಿಧಾನಂಗಳನರಿದರಿದು ಮಾಡಬೇಕು. ಲಿಂಗದೇಹಿ ತಾನಾದ ಬಳಿಕ, ಅಂಗಿಗಳ ಸಂಗವಳಿದಿರಬೇಕು. ಲಿಂಗಧ್ಯಾನಿ ತಾನಾದ ಬಳಿಕ, ಅಂಗನೆಯರ ನೋಡದಿರಬೇಕು. ಲಿಂಗೈಕ್ಯ ತಾನಾದ ಬಳಿಕ, ಕರುಣಾಕರ ಅಭಯಕರ ಕಪಿಲಸಿದ್ಧಮಲ್ಲಿಕಾರ್ಜುನನ ಕಾರ್ಯದಲ್ಲಿ ಅಭೇದವಿರಬೇಕು ಕಾಣಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->