ಅಥವಾ

ಒಟ್ಟು 1423 ಕಡೆಗಳಲ್ಲಿ , 87 ವಚನಕಾರರು , 1130 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ವಿಶ್ವನ ಕಾರ್ಯವ ಕೆಡಿಸಿ ಕಂಡಲ್ಲಿ ತೈಜಸನ ಕಾರ್ಯಕಳವಳ ಕಡೆಗಾಯಿತ್ತು. ಪ್ರಾಜÕನ ಪರಿಣಾಮ ನಿಜ ಪರಿಣಾಮದ ನಿಲವು ನಿಜವಾದಲ್ಲಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು ! ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು. ರಂಜನೆಗೊಳಗಪ್ಪುದೆ ? _ಆಗರದ ಸಂಚವನರಿಯರು ! ರಂಜಕನೂ ಅಲ್ಲ, ಭುಂಜಕನೂ ಅಲ್ಲ, ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು !
--------------
ಅಲ್ಲಮಪ್ರಭುದೇವರು
ಶರಣ ಸಕಾಯನೆಂಬೆನೆ ಸಕಾಯನಲ್ಲ. ಅಕಾಯನೆಂಬೆನೆ ಅಕಾಯನಲ್ಲ. ಅದೇನು ಕಾರಣವೆಂದಡೆ; ಶಿವಕಾಯವಾದ ನಿಜಬೋಧವೆ ಕಾಯವಾದ ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು, ಪರಕಾಯರೂಪನು.
--------------
ಸ್ವತಂತ್ರ ಸಿದ್ಧಲಿಂಗ
ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾರಿದ್ಥಿಯ ಹೊಯ್ದು ಬೇರ್ಪಡಿಸಬಹುದೆ ? ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ? ಮಹಾಘನವನರಿವುದಕ್ಕೆ ಮೊದಲೆ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ? ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ? ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುರ್ಲಾಭ. ಬಂದ ಬಳಿಕ ಶಿವಭಕ್ತಜನ್ಮ ಸಾಧ್ಯವಾಯಿತು. ಶಿವಭಕ್ತ ಜನ್ಮದಲ್ಲಿ ಬಂದು ಶಿವಲಿಂಗೈಕ್ಯರ ನಿಂದೆಮಾಡಿ ಕೆಡದಿರು ಕೆಡದಿರು. ಎಲೋ ವೇಷಧಾರಿಗಳಿರಾ, ಶಿವಭಕ್ತ ಬ್ರಹ್ಮವೆಂಬುದು, ಶಿವನ ಸಾಕಾರವೆ ಜಂಗಮದೇವ. ಇಂತೆಂಬ ಉಭಯಭೇದ ನಿಮಗೆ ತಿಳಿಯದು. ವೇಷಾಧಾರಿಗಳು ನೀವು ಕೇಳಿರೋ, ಶುನಕ ಬೆಟ್ಟಕ್ಕೆ ಬೊಗಳಿದಂತೆ ಭಕ್ತಂಗೆ ಜಾತಿಸೂತಕವುಂಟೆ ಎಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ, ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ, ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ, ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗದಲ್ಲಿ ಕೊಡಲುಂಟು, ಕೊಳಲುಂಟಾಗಿ ಅರ್ಪಿತ, ಜಂಗಮದಲ್ಲಿ ಕೊಟ್ಟು ಕೊಳಲಿಲ್ಲಾಗಿ ಅನರ್ಪಿತ, ಪ್ರಸಾದದಲ್ಲಿ ಕೊಡಲು ಕೊಳಲಿಲ್ಲಾಗಿ ಉಭಯನಾಸ್ತಿ. ಈ ತ್ರಿವಿಧ ಸಂಚದ ಸನುಮತವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಇನ್ನು ವಿಶ್ವಾದ್ಥಿಕ ಮಹಾರುದ್ರನುತ್ಪತ್ಯವೆಂತೆಂದಡೆ : ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ ಪರಾಪರನಾದ ಮಹಾಸದಾಶಿವನಾದವನು ತನ್ನ ನಿಜಜಾÕನ ಹಿರಿಣ್ಯಗರ್ಭದಲ್ಲಿ ವಿಶ್ವಾದ್ಥಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು, ಮಹಾಪ್ರಸಾದವೆಂದು ಕೈಕೊಂಡು ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ : ಜಲದ ಮೇಲೆ ಕಮಠನ ನಿರ್ಮಿಸಿದ. ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ. ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು ಆ ವಿಶ್ವಾದ್ಥಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು. ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ. ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ, ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು. ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು, ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ, ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ, ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ, ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ ಜಾÕನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ ಗಿರಿಯ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು. ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು. ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು. ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು. ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು. ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ ; ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು. ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು. ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ ಅನಂತ ಯೋಗಿಗಳಿಗೂ ಜೋಗಿಗಳಿಗೂ ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿಗೆ ನಾಲ್ಕು ಬಾಗಿಲು, ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು, ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ ಶಿವಪುರಮಂ ನಿರ್ಮಿಸಿದನು. ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ, ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ, ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ. ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ, ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು, ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ ಸರಸ್ವತಿಸಮೇತವಾಗಿ ಬ್ರಹ್ಮದೇವರು ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಪೂರ್ವದೆಸೆಯಲ್ಲಿ ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು. ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ ಸಿಂಹಾವತಿಯ ಪುರಮಂ ನಿರ್ಮಿಸಿದನು. ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು. ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು. ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ ಧವಳಾವತಿಪುರಮಂ ಮೊದಲಾಗಿ ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾದ್ಥಿಯಕಮಹಾರುದ್ರನು. ಆ ಮಹಾಮೇರುವಿಂಗೆ ವಳಯಾಕೃತವಾಗಿ ಲವಣ ಇಕ್ಷು ಸುರೆ ಘೃತ ದದ್ಥಿ ಕ್ಷೀರ ಶುದ್ಧಜಲಂಗಳೆಂಬ ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ, ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ದ್ವೀಪಂಗಳಿಗೆ ವಳಯಾಕೃತವಾಗಿ ಮಲಯಜಪರ್ವತ, ನೀಲಪರ್ವತ, ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ, ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ, ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ, ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ, ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ, ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ, ನಿರಾಚಲಪರ್ವತ, ಗಂಧಾಚಲಪರ್ವತ, ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ, ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ, ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ, ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ, ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ, ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇದಕ್ಕೆ ದೇಶಂಗಳಾಗಬೇಕೆಂದು ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ, ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ, ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು, ಮುಖಸರ, ಕೌಸಯಿವರ್ಣ, ಆವಂತಿ, ಲಾಳ, ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು, ಶಾಂತಕ, ತುರಾದ್ರ, ಮಗಧಾದ್ರ, ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ, ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ, ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ ಶಿವಾಂಡ ಚಿದ್ಬ ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ, ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ: ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು. ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು. ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ, ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ, ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯರ್ಲೋಕ-ಇಂಥ ಲೋಕಂಗಳೆಂಬ ಹದಿನಾಲ್ಕು ಲೋಕಂಗಳಂ ನಿರ್ಮಿಸಿ ಮತ್ತೆ ಸ್ವರ್ಗ-ಮತ್ರ್ಯ-ಪಾತಾಳಗಳ ವಿವರಿಸಿ ನೋಡಿ ಆ ಲೋಕದವರಿಗೆ ವೇದಶಾಸ್ತ್ರಂಗಳಂ ನಿರ್ಮಿಸಿದನದೆಂತೆಂದಡೆ : ವೇದ ವೇದಾಂಗ, ಮಂತ್ರಶಾಸ್ತ್ರ, ತರ್ಕಶಾಸ್ತ್ರ, ಯೋಗಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ, ಶಕುನಶಾಸ್ತ್ರ, ಶಸ್ತ್ರಶಾಸ್ತ್ರ, ಶಿಲ್ಪಶಾಸ್ತ್ರ, ಜಲಶಾಸ್ತ್ರ, ಸಾಮುದ್ರಿಕಶಾಸ್ತ್ರ, ನೃಪತಿಶಾಸ್ತ್ರ, ಅಂಜನಶಾಸ್ತ್ರ, ರಸವೈದ್ಯಶಾಸ್ತ್ರ, ಬಿಲ್ಲುಶಾಸ್ತ್ರ, ಗೋಪಶಾಸ್ತ್ರ, ಮನುಷ್ಯಶಾಸ್ತ್ರ, ರಥಿಕಶಾಸ್ತ್ರ, ಅಂಗುಲಿಶಾಸ್ತ್ರ, ಶ್ರವಣಶಾಸ್ತ್ರ, ಗಂಧಪಾದ್ಯಶಾಸ್ತ್ರ, ಭುಜಗಶಾಸ್ತ್ರ, ಯೋಗಿಣಿಶಾಸ್ತ್ರ, ಯಕ್ಷಿಣಿಶಾಸ್ತ್ರ, ಶಬ್ದನೀತಿಶಾಸ್ತ್ರ, ಅಲಂಕಾರಶಾಸ್ತ್ರ, ವಿಶ್ವಶಾಸ್ತ್ರ, ಗಂಡಶಾಸ್ತ್ರ, ವ್ಯಾದ್ಥಿಶಾಸ್ತ್ರ, ಯುದ್ಧಶಾಸ್ತ್ರ, ಹಸರಶಾಸ್ತ್ರ, ಶುಂಭನಶಾಸ್ತ್ರ, ಮುಖಶಾಸ್ತ್ರ, ಬಂಧಶಾಸ್ತ್ರ, ಜಲಸ್ತಂಭಶಾಸ್ತ್ರ, ಅಗ್ನಿಶಾಸ್ತ್ರ, ಕರ್ಮಶಾಸ್ತ್ರ, ಪುರಾಣಿಕಶಾಸ್ತ್ರ, ಇಂಗಶಾಸ್ತ್ರ, ವೈದ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ ಶಾಸ್ತ್ರಂಗಳು ಮೊದಲಾದ ಚೌಷಷ್ಠಿ ವಿದ್ಯಂಗಳ ನಿರ್ಮಿಸಿದನು ನೋಡಾ [ಅಪ್ರಮಾಣ] ಕೂಡಲಸಂಗಯ್ಯನ ಶರಣ ವಿಶ್ವಾದ್ಥಿಕಮಹಾರುದ್ರನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ. ಎನಗೆ ಐವರು ಸ್ತ್ರೀಯರ ಮದುವೆಯ ಮಾಡಿದರು. ಅವರ ಸಂಗದಲ್ಲಿರಲೊಲ್ಲದೆ ಒಬ್ಬಳ ಬ್ರಹ್ಮಂಗೆ ಕೊಟ್ಟೆ, ಒಬ್ಬಳ ವಿಷ್ಣುವಿಂಗೆ ಕೊಟ್ಟೆ, ಒಬ್ಬಳ ರುದ್ರಂಗೆ ಕೊಟ್ಟೆ, ಒಬ್ಬಳ ಈಶ್ವರಂಗೆ ಕೊಟ್ಟೆ, ಮತ್ತೊಬ್ಬಳ ಸದಾಶಿವಂಗೆ ಕೊಟ್ಟು ತಾಯಿಯ ಒಡನಾಡಿ ಸಂಸಾರ ಮಾಡುತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->