ಅಥವಾ

ಒಟ್ಟು 54 ಕಡೆಗಳಲ್ಲಿ , 20 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮಪಾದದಲ್ಲಿ ಒಂಕಾರಕ್ಕೆ ನಕಾರ ಬೀಜಾಕ್ಷರ. ಆ ನಕಾರ ಉಭಯ ಕೂಡಿದ ಮತ್ತೆ ಮಕಾರ ಬೀಜಾಕ್ಷರ. ಇಂತೀ ತ್ರಿವಿಧಾಕ್ಷರ ಒಡಗೂಡಿ ಒಡಲಾದ ಮತ್ತೆ ಶಿಕಾರ ಬೀಜಾಕ್ಷರ. ಇಂತೀ ಶಿಕಾರ ಮೂರನೊಡಗೂಡಿ ನಾಲ್ಕೆಂಬಲ್ಲಿಗೆ ಯಕಾರ ಬೀಜಾಕ್ಷರ. ಇಂತೀ ಪಂಚಾಕ್ಷರಿಯ ಮೂಲಮಂತ್ರ ಸಂಬಂಧವಾಗಲಾಗಿ ಪ್ರಣಮದ ಬೀಜ. ಆ ಪ್ರಣಮವು `ಒಂ ಭರ್ಗೋ ದೇವಃ' ಜಗಕ್ಕೆ ಕರ್ತೃ ನೀನಲಾ ಎಂದು. ಸಾಮ ಅರ್ಥವಣ ಯಜಸ್ಸು ಋಕ್ಕು ಉತ್ತರ ಖಂಡನ. ಇಂತೀ ಪಂಚವೇದಂಗಳಲ್ಲಿ ಚತುರ್ವೇದಿಗಳಪ್ಪರಲ್ಲದೆ, ಐಕ್ಯೋತ್ತರ ಚಿಂತನೆಯನೀ ವಿಪ್ರಕುಲ ಮಿಥ್ಯವಂತರು ಬಲ್ಲರೆ ? ಕಣ್ಣಿನಲ್ಲಿ ನೋಡುತ್ತ ಕಣ್ಗಾಣೆನೆಂಬವನಂತೆ ಶಾಪಹತರಿಗೆಲ್ಲಕ್ಕೂ ಲಲಾಮಬ್ಥೀಮಸಂಗಮೇಶ್ವರಲಿಂಗವು ಅಸಾಧ್ಯ ನೋಡಾ.
--------------
ವೇದಮೂರ್ತಿ ಸಂಗಣ್ಣ
ಪೃಥ್ವಿಯನರಿಯಲುಬಾರದು ನಕಾರ, ಅಪ್ಪುವನರಿಯಲುಬಾರದು ಮಕಾರ, ಅಗ್ನಿಯನರಿಯಲುಬಾರದು ಶಿಕಾರ, ವಾತವನರಿಯಲುಬಾರದು ವಕಾರ, ಅಂಬರವನರಿಯಲುಬಾರದು ಯಕಾರ, ಭಾವವನರಿಯಲುಬಾರದು ಓಂಕಾರ. ಇದು ಕಾರಣ ಷಡ್ಬ್ರಹ್ಮರೂಪ ಚನ್ನಬಸವಲಿಂಗ ಅರಿದು ಅರಿಯದಿರಲುಬೇಕು ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಕಾರ ನರಜನ್ಮದ ಹೊಲೆಯ ಕಳೆದು, ಮಕಾರ ಮಾಂಸಪಿಂಡದ ಹೊಲೆಯ ಕಳೆದು ಮಂತ್ರಪಿಂಡವ ಮಾಡಿತಯ್ಯಾ. ಶಿಕಾರ ಶಿವದೇಹಿಯ ಮಾಡಿತಯ್ಯ, ವಕಾರ ಒಳಹೊರಗೆ ತೊಳಗಿ ಬೆಳಗಿ ಶುದ್ಧನಮಾಡಿತಯ್ಯ, ಯಕಾರ ಎನ್ನ ಭವವ ಹಿಂಗಿಸಿತಯ್ಯ. ಓಂಕಾರ ಪ್ರಾಣ ಜೀವಾತ್ಮ ದೇಹದ ಮಧ್ಯದೊಳು ಸರ್ವಪೂರ್ಣಮಯವಾಗಿದ್ದಿತಯ್ಯಾ. ಇಂತೀ ಷಡಕ್ಷರಿಯ ಮಂತ್ರವ ಜಪಿಸಿ, ಅಂತಕನ ಪಾಶವ ಸುಟ್ಟು ನಿಟ್ಟೊರಸಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ನಕಾರ ಮಕಾರವನೆಯ್ದಿ, ಮಕಾರ ಶಿಕಾರವನೆಯ್ದಿ, ಶಿಕಾರ ವಕಾರವನೆಯ್ದಿ, ವಕಾರ ಯಕಾರವನೆಯ್ದಿ, ಯಕಾರ ಓಂಕಾರವನೆಯ್ದಿ, ಓಂಕಾರ ನಿರಂಜನವನೆಯ್ದಿ, ನಿರಾಮಯವಾಗಿ ನಿಸ್ಥಲ ನಿಜವಾದುದ ಗುರುನಿರಂಜನ ಚನ್ನಬಸವಲಿಂಗ ತಾನೆ ಬಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಚಾಕ್ಷರವೆ ಶಿವನ ಪಂಚಮುಖದಿಂದಲುದಯವಾಗಿ ಪಂಚತತ್ವಸ್ವರೂಪವಾಯಿತ್ತು ನೋಡಾ. ಆ ಪಂಚಸ್ವರೂಪಿಂದಲೆ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಅದು ಎಂತೆಂದರೆ ಹೇಳುವೆ ಕೇಳಿರಣ್ಣಾ : ಸದ್ಯೋಜಾತಮುಖದಲ್ಲಿ ನಕಾರ ಪುಟ್ಟಿತ್ತು , ಆ ನಕಾರದಿಂದ ಪೃಥ್ವಿ ಪುಟ್ಟಿತ್ತು , ವಾಮದೇವಮುಖದಲ್ಲಿ ಮಕಾರ ಪುಟ್ಟಿತ್ತು. ಆ ಮಕಾರದಿಂದ ಅಪ್ಪು ಪುಟ್ಟಿತ್ತು , ಅಘೋರಮುಖದಲ್ಲಿ ಶಿಕಾರ ಜನನ. ಆ ಶಿಕಾರದಿಂದ ಅಗ್ನಿ ಪುಟ್ಟಿತ್ತು , ತತ್ಪುರುಷಮುಖದಲ್ಲಿ ವಕಾರ ಪುಟ್ಟಿತ್ತು , ಆ ವಕಾರದಿಂದ ವಾಯು ಪುಟ್ಟಿತ್ತು , ಈಶಾನಮುಖದಲ್ಲಿ ಯಕಾರ ಜನನ, ಆ ಯಕಾರದಿಂದ ಆಕಾಶ ಹುಟ್ಟಿತ್ತು , ಈ ಪಂಚತತ್ವಸ್ವರೂಪಿಂದ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಹೇಗೆ ನಿರ್ಮಿತವಾಯಿತ್ತೆಂದರೆ, ಪೃಥ್ವಿ ಅಪ್ ತೇಜ ವಾಯು ಆಕಾಶವೆಂಬ ಪಂಚಭೂತಂಗಳಿಂದವೆ ಪಂಚವಿಂಶತಿತತ್ವಂಗಳುತ್ಪತ್ಯವಾದವು. ಆ ಪಂಚವಿಂಶತಿ ತತ್ವಂಗಳಿಂದವೆ ಶರೀರವಾಯಿತ್ತು. ನಕಾರದಿಂದ ಕರ್ಮೇಂದ್ರಿಯಂಗಳ ಜನನ. ಮಕಾರದಿಂದ ಪಂಚವಿಷಯಂಗಳುತ್ಪತ್ಯ. ಶಿಕಾರದಿಂದ ಬುದ್ಧೀಂದ್ರಿಯಗಳು ಜನನ. ವಕಾರದಿಂದ ಐದು ಪ್ರಾಣವಾಯುಗಳ ಜನನ. ಯಕಾರದಿಂದ ಅಂತಃಕರಣಚತುಷ್ಟಯಂಗಳು `ನಮಃ ಶಿವಾಯ' `ನಮಃ ಶಿವಾಯ'ವೆಂಬ ಪಂಚಾಕ್ಷರದಿಂದವೆ ಉತ್ಪತ್ಯವೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ನಿಜವೀರಶೈವ ಸಂಪನ್ನರು ತಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ ಭವಿಶೈವ ಭಿನ್ನ ಕರ್ಮಿಗಳಂತೆ ಅಂಗನ್ಯಾಸ ಪಂಚಮಶುದ್ಧಿ ಮೊದಲಾದ ಅಶುದ್ಧಭಾವವಪ್ಪ ಕ್ಷುದ್ರ ಕರ್ಮಂಗಳ ಹೊದ್ದಲಾಗದು. ಅದೆಂತೆಂದೊಡೆ:``ನಕಾರಮಾತ್ಮಶುದ್ಧಿಶ್ಚ ಮಕಾರಂ ಸ್ನಾನಶೋಧನಂ ಶಿಕಾರಂ ಲಿಂಗಶುದ್ಧಿಶ್ಚ ವಾಕಾರಂ ದ್ರವ್ಯಶೋಧನಂ ಯಕಾರಂ ಮಂತ್ರಶುದ್ಧಿಶ್ಚ ಪಂಚಶುದ್ಧಿಃ ಪ್ರಕೀರ್ತಿತಾಃ ಕಾಯಶುದ್ಧಿಶ್ಚಾತ್ಮಶುದ್ಧಿಶ್ಚಾಂಗನ್ಯಾಸಕರಸ್ಯ ಚ ಸರ್ವಶುದ್ಧಿರ್ಭವೇ ನಿತ್ಯಂ ಲಿಂಗಧಾರಣಮೇವ ಚ'_ ಇಂತೆಂದುದಾಗಿ. ಅವಲ್ಲದೆ ಅಘ್ರ್ಯ ಪಾದ್ಯ ಆಚಮನಂಗಳು ಮೊದಲಾದ ಉಪಪಾತ್ರಗ?ಲ್ಲಿ ಅಗಣಿತಂಗೆ ಅಳತೆಯ ನೀರನೆರೆದು ಸುಖಮುಖಾರ್ಪಿತಕ್ಕೆ ಸಲುವ ಸುರಸದ್ರವ್ಯಂಗಳಪ್ಪ ಪಂಚಾಮೃತಂಗಳ ನಿರ್ಮಲನಪ್ಪ ನಿಜಲಿಂಗದ ಮಸ್ತಕಕ್ಕೆರೆದು ಜಿಡ್ಡು ಮಾಡಿ ತೊಳೆವ ಅಜ್ಞಾನಿ ನರಕಜೀವಿಗಳ ಮುಖವ ನೋಡಲಾಗದು. ಅದೇನುಕಾರಣವೆಂದಡೆ: ``ಅಘ್ರ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಂ ಯದಿ ಲಿಂಗದೇಹೀ ಸ್ವಲಿಂಗೇಷು ಕೃತ್ವಾಚ್ರ್ಯಂತೇ ಬಹಿರ್ನರಾಃ ತೇ ಪಾಷಂಡಾಃ ಕೃತಾಸ್ತೇನ ಕೃತಂಕರ್ಮನರಂ ನಾರಕಂ ಇಂತೆಂದುದಾಗಿ. ಇದು ಕಾರಣ ಸ್ವಯಾಂಗಲಿಂಗದೇಹಿಗಳು ತಮ್ಮ ಲಿಂಗಮಂತ್ರವಿಡಿದು ಬಂದು ಲಿಂಗೋದಕ ಪಾದೋದಕಂಗಳಲ್ಲಿ ತಮ್ಮ ಕರ ಮುಖ ಪದ ಪ್ರಕ್ಷಾಲನವ ಮಾಡಿಕೊಂಬುದೆ ? ಅಂಗಲಿಂಗಿಗಳಿಗೆ ಸ್ವರ್ಯಾಘ್ರ್ಯ ಪಾದ್ಯಾಚಮನವೆಂಬುದನರಿಯದೆ ಕೃತಕರ್ಮ ಭವಿಜೀವಿ ಶೈವಪಾಷಂಡರಂತೆ ಭಿನ್ನವಿಟ್ಟು ಮಾಡಿ ಫಲಪದಂಗಳನೈದಿಹೆನೆಂಬ ನರಕಜೀವಿಗಳನು ಕೂಡಲಚೆನ್ನಸಂಗಯ್ಯ ರವಿ ಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಆಧಾರಚಕ್ರದಲ್ಲಿ ನಕಾರ ಸ್ವಾಯತ. ಸ್ವಾಧಿಷಾ*ನಚಕ್ರದಲ್ಲಿ ಮಃಕಾರ ಸ್ವಾಯತ. ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ. ಅನಾಹತಚಕ್ರದಲ್ಲಿ ವಾಕಾರ ಸ್ವಾಯತ. ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ. ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ. ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ, ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ, ಕುಂಡಲಾಕೃತಿ, ಶಿಕಾರಪ್ರಣಮ, ಭೇರಿನಾದ, ಮಣಿಪೂರಚಕ್ರ, ಹರಿತವರ್ಣ, ಪ್ರಸಾದಿಸ್ಥಲ, ಕಾರಣತನು, ನಿರಹಂಕಾರಹಸ್ತ, ಶಿವಲಿಂಗ, ನೇತ್ರಮುಖ, ಸಾವಧಾನಭಕ್ತಿ, ಸುರೂಪುಪದಾರ್ಥ, ಸುರೂಪಪ್ರಸಾದ, ರುದ್ರಪೂಜಾರಿ, ರುದ್ರನಧಿದೇವತೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಉತ್ತರದಿಕ್ಕು, ಸಾಮವೇದ, ಅಗ್ನಿಯ ಅಂಗ, ಪರಮಾತ್ಮ, ಇಚ್ಛಾಶಕ್ತಿ, ವಿದ್ಯಾಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕುಂಡು ಎನ್ನ ಮಣಿಪೂರಕಚಕ್ರವೆಂಬ ಪಂಪಾಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ನಿರೀಕ್ಷಣಸ್ವರೂಪವಾದ ಶಿವಲಿಂಗನೆ ಶ್ರೀವಿರೂಪಾಕ್ಷಲಿಂಗವೆಂದು ಆತ್ಮತ್ರಯನ ಮಡಿಮಾಡಿ, ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರದು, ಅಗ್ನಿ ನಿವೃತ್ತಿಯಾದ ಗಂಧವ ಧರಿಸಿ, ಅಹಂಕಾರ ನಿರಹಂಕಾರವಾದಕ್ಷತೆಯನಿಟ್ಟು, ಅಲ್ಲಿಹ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಹರಿತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಸುಷುಪ್ತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಲೋಭವೆಂಬಾಭರಣವ ತೊಡಿಸಿ, ಸುರೂಪವೆಂಬ ನೈವೇದ್ಯವನರ್ಪಿಸಿ, ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಶಿವಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಶಿವಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಃಕಳಂಕನಾಗಿ ಆಚರಿಸಬಲ್ಲಾತನೆ ಸಾವಧಾನಭಕ್ತಿಯನುಳ್ಳ ಶಿವಪ್ರಸಾದಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಪಂಚಾಂಗವೆಂಬ ಶಬ್ದಕ್ಕೆ ಅರ್ಥ : ಪಂಚವೆಂದರೆ ಐದು ; ಅಂಗವೆಂದರೆ ದೇಹ. ಈ ಉಭಯ ಕೂಡಿದರೆ ದೇಹವಾಯಿತ್ತು. ಈ ದೇಹವೆ ಪಂಚಾಂಗವೆನಿಸಿತ್ತು. ಅದು ಹೇಗೆಂದಡೆ : ನಕಾರ ಮಕಾರ ಶಿಕಾರ ವಕಾರ ಯಕಾರದ ನಿಕ್ಷೇಪವನರಿವುದೇ ಪಂಚಾಂಗ. ಕ್ರಿಯಾ ಜ್ಞಾನ ಇಚ್ಫಾ ಆದಿ ಪರಾ ಚಿಚ್ಫಕ್ತಿಯ ಎಚ್ಚರನರಿವುದೆ ಪಂಚಾಂಗ. ಇಚ್ಫೆಯೊಳಗಿರುವುದೆ ಪಂಚಾಂಗವಯ್ಯ. ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ನಕಾರ ಮಕಾರಗಳಿಲ್ಲದಂದು, ಶಿಕಾರ ವಕಾರಗಳಿಲ್ಲದಂದು, ಯಕಾರ ಓಂಕಾರಗಳಿಲ್ಲದಂದು, ಪ್ರಣವ ನಿಃಪ್ರಣವಂಗಳಿಲ್ಲದಂದು, ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ಸಮಾಧಿ ಸಮಾಧಿ ಎಂಬರಯ್ಯಾ, ಸಮಾಧಿಯ ಬಗೆಯ ಪೇಳ್ವೆ. ಅದೆಂತೆಂದಡೆ: ಪಂಚಭೂತಮಿಶ್ರವಾದ ದೇಹವೆಂಬುವುದೆ ಸಮಾಧಿ. ಅಂತಪ್ಪ ದೇಹದ ಪೃಥ್ವಿತತ್ವದಲ್ಲಿ ನಕಾರಪ್ರಣವ ಸ್ವಾಯತ. ಅಪ್ಪುತತ್ವದಲ್ಲಿ ಮಕಾರಪ್ರಣವ ಸ್ವಾಯತ. ತೇಜತತ್ವದಲ್ಲಿ ಶಿಕಾರಪ್ರಣವ ಸ್ವಾಯತ. ವಾಯುತತ್ವದಲ್ಲಿ ವಕಾರಪ್ರಣವ ಸ್ವಾಯತ. ಆಕಾಶತತ್ವದಲ್ಲಿ ಯಕಾರಪ್ರಣವ ಸ್ವಾಯತ. ಆತ್ಮದಲ್ಲಿ ಓಂಕಾರಪ್ರಣವ ಸ್ವಾಯತ. ಮತ್ತಂ, ಬಲಪಾದದಲ್ಲಿ ನಕಾರ, ಎಡಪಾದದಲ್ಲಿ ಮಕಾರ, ಮಧ್ಯನಾಭಿಸ್ಥಾನದಲ್ಲಿ ಶಿಕಾರ, ಬಲಹಸ್ತದಲ್ಲಿ ವಕಾರ, ಎಡಹಸ್ತದಲ್ಲಿ ಯಕಾರ, ಮಸ್ತಕದಲ್ಲಿ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಸ್ಥೂಲತನುವಿನಲ್ಲಿ ಬಕಾರಪ್ರಣವ ಸ್ವಾಯತ. ಸೂಕ್ಷ್ಮತನುವಿನಲ್ಲಿ ನಕಾರಪ್ರಣವ ಸ್ವಾಯತ. ಕಾರಣತನುವಿನಲ್ಲಿ ವಕಾರಪ್ರಣವ ಸ್ವಾಯತ. ಮತ್ತಂ, ವಿಶ್ವನಲ್ಲಿ ಅಕಾರಪ್ರಣವಸಂಬಂಧ. ತೈಜಸನಲ್ಲಿ ಉಕಾರಪ್ರಣವಸಂಬಂಧ. ಪ್ರಾಜ್ಞದಲ್ಲಿ ಮಕಾರಪ್ರಣವಸಂಬಂಧ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಬ್ರಹ್ಮರಂಧ್ರದಲ್ಲಿ ಬಕಾರ, ಅಕಾರ, ವಕಾರ, ಶಿಖೆಯಲ್ಲಿ ಕ್ಷಕಾರ, ಉಕಾರ, ಸಕಾರ. ಪಶ್ಚಿಮದಲ್ಲಿ ಹಕಾರ, ಮಕಾರ, ವಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದಲ್ಲಿ ಓಂಕಾರ, ಎಡಭಾಗದಲ್ಲಿ ಮಕಾರ, ಮುಂಭಾಗದಲ್ಲಿ ಅಕಾರ, ಹಿಂಭಾಗದಲ್ಲಿ ಮಕಾರ, ಊಧ್ರ್ವಭಾಗದಲ್ಲಿ ಹಕಾರ. ಮತ್ತಂ, ಬಲಹಸ್ತದ ಮಧ್ಯದಲ್ಲಿ ಓಂಕಾರ, ಹೆಬ್ಬೆರಳಿನಲ್ಲಿ ಯಕಾರ, ಉಳಿದ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಗಳು. ಆ ಹಸ್ತದ ಮೇಲುಭಾಗದಲ್ಲಿ ಅಕಾರ, ಮುಂಗೈಯಲಿ ಬಕಾರ, ಮೊಳಕೈಯಲ್ಲಿ ಉಕಾರ, ರಟ್ಟೆಯಲ್ಲಿ ಸಕಾರ, ಭುಜದಲ್ಲಿ ಮಕಾರ, ಹೆಗಲಲ್ಲಿ ವಕಾರ, ಇಂತೀ ಪರಿಯಲ್ಲಿ ಉಭಯ ಹಸ್ತ ತೋಳಿನಲ್ಲಿ ಹಿಂದೆ ಹೇಳಿದ ಪಂಚಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಉಭಯ ತಳಪಾದದಲ್ಲಿ ಓಂಕಾರ, ಉಭಯ ಪಾದಾಂಗುಷ*ದಲ್ಲಿ ಯಕಾರ, ಉಭಯ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಂಗಳು. ಉಭಯ ಪಾದದ ಮೇಲುಭಾಗದಲ್ಲಿ ಅಕಾರ, ಉಭಯ ಪಾದದ ಬಾಹ್ಯ ಹರಡಿನಲ್ಲಿ ಉಕಾರ, ಉಭಯ ಪಾದದಂತರ ಹರಡಿನಲ್ಲಿ ಬಕಾರ. ಉಭಯ ಪಾದದ ಹಿಂಬಡದಲ್ಲಿ ಮಕಾರ, ಉಭಯ ಕಣಕಾಲಲ್ಲಿ ಸಕಾರ, ಮೊಳಕಾಲಲ್ಲಿ ಪಕಾರ, ಉಭಯ ಕಿರಿದೊಡೆಯಲ್ಲಿ ಅಕಾರ. ಹಿರಿದೊಡೆಯಲ್ಲಿ ಉಕಾರ, ಉಭಯಾಂಗದಲ್ಲಿ ಮಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಉಭಯ ಬರಕಿಯಲ್ಲಿ ಓಂ ನಮಃಶಿವಾಯ ಎಂಬ ಮೂಲ ಷಡಕ್ಷರ. ಉಭಯ ಮೊಲೆಯಲ್ಲಿ ಓಂಕಾರ, ಉಭಯ ಬಗಲಲ್ಲಿ ಬಕಾರ, ಕಕ್ಷೆಯಲ್ಲಿ ಅಕಾರ, ಹೃದಯದಲ್ಲಿ ಉಕಾರ, ಕಂಠದಲ್ಲಿ ಮಕಾರ, ಹೆಡಕಿನಲ್ಲಿ ಸಕಾರ, ಹೆಡಕಿನ ಎಡಬಲದಲ್ಲಿ ವಕಾರ, ಉಭಯ ಕರ್ಣದ ಮಧ್ಯದಲ್ಲಿ ಓಂಕಾರ, ಹಾಲಿಯಲ್ಲಿ ಯಕಾರ, ಕಿರಿಹಾಲಿಯಲ್ಲಿ ವಕಾರ, ಕರ್ಣದ ಊಧ್ರ್ವಭಾಗದಲ್ಲಿ ಶಿಕಾರ, ಬಲ ಎಡಭಾಗದಲ್ಲಿ ಮಕಾರ, ಕರ್ಣದ ಹಿಂಭಾಗದಲ್ಲಿ ನಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದ ನಯನದಲ್ಲಿ ಅಕಾರ, ಬಕಾರ. ಎಡಭಾಗದ ನಯನದಲ್ಲಿ ಉಕಾರ, ಸಕಾರ, ಉಭಯ ನಯನದ ಮಧ್ಯದಲ್ಲಿ ಮಕಾರ, ವಕಾರ, ಉಭಯ ಗಲ್ಲದಲ್ಲಿ ಓಂಕಾರ. ನಾಶಿಕದ ತುದಿಯಲ್ಲಿ ಮಕಾರ. ಬಲಭಾಗದ ಹೊಳ್ಳಿಯಲ್ಲಿ ಅಕಾರ, ಎಡಭಾಗದ ಹೊಳ್ಳಿಯಲ್ಲಿ ಉಕಾರ. ಮೇಲುಭಾಗದ ತುಟಿಯಲ್ಲಿ ಬಕಾರ. ಕೆಳಭಾಗದ ತುಟಿಯಲ್ಲಿ ಸಕಾರ. ಉಭಯಮಧ್ಯದಲ್ಲಿ ವಕಾರ. ನಾಲಿಗೆಯಲ್ಲಿ ಓಂ ನಮಃಶಿವಾಯವೆಂಬ ಮೂಲ ಷಡಕ್ಷರ. ದಂತಪಂಕ್ತಿಗಳೇ ಹಂ ಕ್ಷಂ ಎಂಬ ಶೂನ್ಯಪ್ರಣಮಂಗಳು. ಚರ್ಮವೆ ವಕಾರ, ಅಸ್ತಿಯೇ ಮಕಾರ, ಮಾಂಸವೇ ಶಿಕಾರ, ಮಜ್ಜವೇ ವಕಾರ, ರಕ್ತವೇ ಯಕಾರ, ಪ್ರಾಣವೇ ಓಂಕಾರ. ರೇಚಕ ಪೂರಕ ಕುಂಭಕವೆಂಬ ಸ್ವರದಲ್ಲಿ ಅಕಾರ, ಉಕಾರ, ಮಕಾರ. ಮತ್ತಂ, ಅಪಾದಮಸ್ತಕದ ಪರಿಯಂತರವು ರೋಮನಾಳಂಗಳಲ್ಲಿ ನಿರಂಜನ ಮೂಲಪ್ರಣಮವೆಂಬ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣಮಸಂಬಂಧವಾದುದೇ ಸಮಾಧಿ. ಇಂತೀ ಕ್ರಮದಲ್ಲಿ ಕೀಯವಿಟ್ಟು ಬಾಹ್ಯದಲ್ಲಿ ದೇಹಕ್ಕೆ ಪ್ರಣಮಸಂಬಂಧಿಸಿದಡೆಯು ಆ ದೇಹವು ಭೂಮಿಯ ಮರೆಯಲ್ಲಿ ಒಂದು ಕ್ಷಣಕ್ಕೆ ನಿರ್ವಯಲಾಗುವುದು. ಇಂತೀ ಕ್ರಮದಲ್ಲಿ ಅಂತರಂಗದಲ್ಲಿ ಪ್ರಾಣಕ್ಕೆ ಪ್ರಣಮಸಂಬಂಧವ ಸುಜ್ಞಾನ ಕ್ರಿಯೆಗಳಿಂದ ಸಂಬಂಧಿಸಿದಡೆಯು ದೇಹದಲ್ಲಿರಲಿಕ್ಕೆಯು ಜೀವನ್ಮುಕ್ತನಾಗುವನು. ಅದೆಂತೆಂದಡೆ: ಚಿದಂಶಿಕನಾದ ಜ್ಞಾನಕಲಾತ್ಮಂಗೆ ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿ ಮಾಡಿ, ಶ್ರೀಗುರುಕಾರುಣ್ಯವ ಹಡೆದು ಅಂಗದ ಮೇಲೆ ಇಷ್ಟಲಿಂಗವು ಧಾರಣವಾದಾಕ್ಷಣವೇ ಹಿಂದೆ ಹೇಳಿದ ನಿರ್ಣಯದಲ್ಲಿ ಸರ್ವಾಂಗದಲ್ಲಿ ಮೂಲಪ್ರಣಮಾದಿ ಕ್ಷಕಾರ ಪ್ರಣಮಾಂತ್ಯವಾದ ಸಕಲನಿಃಷ್ಕಲಪ್ರಣಮಂಗಳು ಬೆಲ್ಲದ ಕುಳ್ಳಿಗೆ ಇರುವೆ ಮುತ್ತಿದಂತೆ ತನ್ನಿಂದ ತಾನೆ ಸಂಬಂಧವಾಗಿ ಜೀವನ್ಮುಕ್ತನಾಗಿ ಲೀಲೆಯಲ್ಲಿರುವ ಪರಿಯಂತರದಲ್ಲಿ ಉದಕದೊಳಗೆ ಇರ್ಪ ತಾವರೆಯಂತೆ ನಿರ್ಲೇಪನಾಗಿ ಪ್ರಪಂಚವನಾಚರಿಸುವನು. ಈ ಭೇದವನು ಶಿವಜ್ಞಾನಿ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾಮರೂಪು ಕ್ರೀಗಳೇನುಯೇನೂ ಇಲ್ಲದ ನಿತ್ಯನಿರಂಜನ ಪರವಸ್ತು ತಾನೆ ನಿರಂಜನಪ್ರಣವ ನೋಡಾ. [ಆ] ನಿರಂಜನ ಪರವಸ್ತುವಿನಲ್ಲಿ ಪರಮ ಚಿತ್ಕಲೆ ಉದಯವಾಗಿ, ಆ ಚಿದ್ರೂಪ ಕಲೆಯ ಶುದ್ಧಪ್ರಣವವೆನಿಸಿತ್ತು ನೋಡಾ. ಆ ಶುದ್ಧ ಪ್ರಣವದಲ್ಲಿ ಚಿತ್ತು; ಆ ಚಿತ್ತೇ ಸಚ್ಚಿದಾನಂದಸ್ವರೂಪವನುಳ್ಳುದಾಗಿ, ಚಿತ್‍ಪ್ರಣವವೆನಿಸಿತ್ತು ನೋಡಾ. ಆ ಚಿತ್ ಪ್ರಣವಸ್ವರೂಪವಪ್ಪ ಪರತತ್ವದಲ್ಲಿ ಪರಶಕ್ತಿ ಉದಯವಾಯಿತ್ತು. ಆ ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವಯ್ಯ. ಆಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಇಂತೀ ಮೂರಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಪ್ರಣವವಾಯಿತ್ತಯ್ಯ. ಆ ಪ್ರಣವವೇ ಪಂಚಲಕ್ಷಣವಾಯಿತ್ತು; ಅದೆಂತೆಂದಡೆ: ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ ಬಿಂದುಕೃತಿ. ಇಂತೀ ಪಂಚಾಕೃತಿಯಾಯಿತ್ತಯ್ಯ. ತಾರಕಾಕೃತಿಯಲ್ಲಿ ನಕಾರ ಜನನ; ದಂಡಕಾಕೃತಿಯಲ್ಲಿ ನಕಾರ ಜನನ. ಕುಂಡಲಾಕೃತಿಯಲ್ಲಿ ಶಿಕಾರ ಜನನ. ಅರ್ಧಚಂದ್ರಾಕೃತಿಯಲ್ಲಿ ವಕಾರ ಜನ. ಬಿಂದುಕೃತಿಯಲ್ಲಿ ಯಕಾರ ಜನನ. ಇಂತೀ ಪ್ರಣವದಿಂದ ಪಂಚಾಕ್ಷರ[ಂ]ಗಳುತ್ಪತ್ತಿಯಾದವಯ್ಯ. ಪ್ರಣವವೇ ಕೂಡಿ, ಷಡಕ್ಷರವೆಂದು ಹೇಳಲ್ಪಟ್ಟಿತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿಗಳ ದೇವರೆಂದು ಗಟ್ಟಿಯತನದೊಳು ಬೊಗಳುವ ಮಿಟ್ಟೆಯಭಂಡರು ನೀವು ಕೇಳಿರೊ. ಅವರ ಹುಟ್ಟನರಿಯಿರಿ, ಹೊಂದನರಿಯಿರಿ. ಅವರ ಹುಟ್ಟು ಕೇಳಿರಣ್ಣಾ ! ಏನೇನೂ ಇಲ್ಲದಂದು, ಶೂನ್ಯ ನಿಃಶೂನ್ಯಕ್ಕೆ ನಿಲುಕದ ಘನವು ಕೋಟಿಚಂದ್ರಸೂರ್ಯರ ಬೆಳಗಾಗಿ ಬೆಳಗುತ್ತಿಪ್ಪಲ್ಲಿ , ಒಂಕಾರವೆಂಬ ನಿರಕ್ಷರ ಹುಟ್ಟಿತ್ತು . ಒಂಕಾರದಿಂದ ನಕಾರ, ಮಕಾರ, ಶಿಕಾರ, ವಕಾರ, ಯಕಾರವೆಂಬ ಪಂಚಾಕ್ಷರ ಹುಟ್ಟಿದವು. ಆ ಪಂಚಾಕ್ಷರಿಗೆ ಪರಾಶಕ್ತಿ ರೂಪಾದಳು. ಆ ಪಂಚಾಕ್ಷರಕ್ಕೂ ಪರಾಶಕ್ತಿಗೂ ಇಬ್ಬರಿಗೂ ಸದಾಶಿವನಾದ. ಆ ಸದಾಶಿವಂಗೆ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆ ಜ್ಞಾನಶಕ್ತಿಯರಿಬ್ಬರಿಗೂ ಶಿವನಾದ. ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೂ ಇಚ್ಛಾಶಕ್ತಿಗೂ ಇಬ್ಬರಿಗೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೂ ಕ್ರಿಯಾಶಕ್ತಿಗೂ ಇಬ್ಬರಿಗೂ ವಿಷ್ಣುವಾದ. ಆ ವಿಷ್ಣು ಪಡೆದ ಸತಿ ಲಕ್ಷಿ ್ಮೀಯು. ಆ ವಿಷ್ಣುವಿಂಗೂ ಮಹಾಲಕ್ಷಿ ್ಮೀಗೂ ಇವರಿಬ್ಬರಿಗೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಕೊಟ್ಟು, ಬರೆವ ಸೇವೆಯ ಕೊಟ್ಟ. ಬ್ರಹ್ಮಂಗೂ ಸರಸ್ವತಿಗೂ ಇಬ್ಬರಿಗೂ ಮನುಮುನಿದೇವರ್ಕಳಾದರು. ಆ ಮನುಮುನಿದೇವರ್ಕಳಿಗೆ ಸಕಲ ಸಚರಾಚರವಾಯಿತ್ತು . ಇಹಲೋಕಕ್ಕೆ ನರರು ಆಗಬೇಕೆಂದು ಬ್ರಹ್ಮನು ಹೋಗಿ, ಹರನಿಗೆ ಬಿನ್ನಹಂ ಮಾಡಲು, ಹರನು ಪರಮಜ್ಞಾನದಿಂದ ನೋಡಿ, ತನ್ನ ಶರೀರದಿಂದಲೆ ನಾಲ್ಕು ಜಾತಿಯ ಪುಟ್ಟಿಸಿ ಇಹಲೋಕಕ್ಕೆ ಕಳುಹಿಸಿದನು. ಆ ಶಿವನ ಶರೀರದಲ್ಲಿ ಪುಟ್ಟಿದವರು ಶಿವನನ್ನೇ ಅರ್ಚಿಸಿ, ಶಿವನನ್ನೇ ಪೂಜಿಸಿ, ಶಿವನನ್ನೇ ಭಾವಿಸಿ, ಶಿವನೊಳಗಾದರು. ಅದರಿಂದಾದ ಭವಬಾಧೆಗಳು ತಾವು ತಮ್ಮ ಹುಟ್ಟನರಿಯದೆ, ಹುಟ್ಟಿಸುವಾತ ಬ್ರಹ್ಮ , ರಕ್ಷಿಸುವಾತ ವಿಷ್ಣು , ಶಿಕ್ಷಿಸುವಾತ ರುದ್ರನೆಂದು ಹೇಳಿದರು. ಈ ಭ್ರಷ್ಟರ ಮಾತ ಕೇಳಿ ಕೆಟ್ಟಿತ್ತು ಜಗವೆಲ್ಲ . ಆಗ ಶಿವನು ಕೊಟ್ಟು ಕಳುಹಿದ ಮಾಯೆಗೆ ಮರವೆಂಬ ಪಾಶ. ಅವಳು ಕಟ್ಟಿ ಕೆಡಹಿದಳು ಮೂರುಜಗವೆಲ್ಲವನು. ಇವಳ ಕಟ್ಟಿಗೊಳಗಾದ ಭ್ರಷ್ಟರೆತ್ತಬಲ್ಲರೋ ನಿಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->