ಅಥವಾ

ಒಟ್ಟು 77 ಕಡೆಗಳಲ್ಲಿ , 19 ವಚನಕಾರರು , 70 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರ ಪ್ರಾಣವಾದ ಬಳಿಕ ಅನ್ಯಕ್ಕೆರಗದಿರಬೇಕು. ಅರಿಷಡ್ವರ್ಗಂಗಳು ಒಳಗಾದ ಕರಣಂಗಳ ಕರವಾಗಿ ಅರ್ಚಿಸಬೇಕು. ಆತನೀಗ ಲಿಂಗೈಕ್ಯ. ಆತನೀಗ ಪಾದೋದಕ ಪ್ರಮಾಣನರಿದಾತ. ಭಕ್ತಿಯ ತಾತ್ಪರಿಯವನರಿದಾತ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತಾತ್ಪರ್ಯವಾದಾತ
--------------
ಸಿದ್ಧರಾಮೇಶ್ವರ
ತನುಶೂನ್ಯಶರಣಂಗೆ ಕುಲವೆಂಬುದೇನು ಹೇಳಾ. ಮನಶೂನ್ಯಶರಣಂಗೆ ಛಲವೆಂಬುದೇನು ಹೇಳಾ. ಪ್ರಾಣಶೂನ್ಯಶರಣಂಗೆ ಧನವೆಂಬುದೇನು ಹೇಳಾ. ಭಾವಶೂನ್ಯಶರಣಂಗೆ ತಪವೆಂಬುದೇನು ಹೇಳಾ. ತ್ರಿಪುಟಿಶೂನ್ಯಶರಣಂಗೆ ಭಿನ್ನವೆಂಬುದೇನು ಹೇಳಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನು ಸರ್ವಶೂನ್ಯ ಲಿಂಗೈಕ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂದ : ಬಣ್ಣಿಪರಳವೆ ಶ್ರೀ ಪಂಚಾಕ್ಷರಿ ಉನ್ನತ ಮಹಿಮೆಯ ತ್ರಿಜಗದೊಳಗಂ ಎನ್ನಯ ಬಡಮತಿಯುಳ್ಳಷ್ಟಂ ಇನ್ನಂ ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. ರಗಳೆ :ಗುರು ಮಹಿಮೆಯನೋಪ ಪಂಚಾಕ್ಷರಿಯು ನಾಗಭೂಷಣನರ್ತಿನಾಮ ಪಂಚಾಕ್ಷರಿಯು | 1 | ನಡೆವುತಂ ನುಡಿವುತಂ ಶಿವನೆ ಪಂಚಾಕ್ಷರಿಯು ಕುಡುತಲಿ ಕೊಂಬುತಲಿ ಹರನೆ ಪಂಚಾಕ್ಷರಿಯು ಉಡುತಲಿ ಉಂಬುತಲಿ ಸದ್ಗುರುವೇ ಪಂಚಾಕ್ಷರಿಯು ಬಿಡದೆ ಜಪಿಸಲು ಸದ್ಯೋನ್ಮುಕ್ತಿ ಪಂಚಾಕ್ಷರಿಯು. | 2 | ಸಟೆ ಠಕ್ಕು ಠೌಳಿಯಲ್ಲಿ ಬಿಡದೆ ಪಂಚಾಕ್ಷರಿಯು ದಿಟಪುಟದಲ್ಲಿ ಆವಾ ಪಂಚಾಕ್ಷರಿಯು ಕುಟಿಲ ವಿಷಯಂಗಳೊಲಿದು ಪಂಚಾಕ್ಷರಿಯು ನಟಿಸಿ ಜಪಿಸಲು ಮುಕ್ತಿ ಈವ ಪಂಚಾಕ್ಷರಿಯು. | 3 | ಮಂತ್ರಯೇಳ್ಕೋಟಿಗೆ ತಾಯಿ ಪಂಚಾಕ್ಷರಿಯು ಅಂತ್ಯಜಾಗ್ರಜ ವಿಪ್ರರೆಲ್ಲ ಪಂಚಾಕ್ಷರಿಯು ಸಂತತಂ ಬಿಡದೆ ಜಪಿಸುವದು ಪಂಚಾಕ್ಷರಿಯು ಎಂತು ಬಣ್ಣಿಪರಳವಲ್ಲ ಪಂಚಾಕ್ಷರಿಯು. | 4 | ಆದಿ ಪಂಚಾಕ್ಷರಿಯು ಅನಾದಿ ಪಂಚಾಕ್ಷರಿಯು ಭೇದ್ಯ ಪಂಚಾಕ್ಷರಿಯು [ಅಭೇದ್ಯ ಪಂಚಾಕ್ಷರಿಯು] ಸಾಧಿಸುವಗೆ ಸತ್ಯ ನಿತ್ಯ ಪಂಚಾಕ್ಷರಿಯು ಬೋಧೆ ಶೃತಿತತಿಗಳಿಗೆ ಮಿಗಿಲು ಪಂಚಾಕ್ಷರಿಯು. | 5 | ಪಂಚಾನನದುತ್ಪತ್ಯದಭವ ಪಂಚಾಕ್ಷರಿಯು ಪಂಚಮಯ ಬ್ರಹ್ಮಮಯಂ ಜಗತ್ ಪಂಚಾಕ್ಷರಿಯು ಪಂಚವಿಂಶತಿತತ್ವಕಾದಿ ಪಂಚಾಕ್ಷರಿಯು ಪಂಚಶತಕೋಟಿ ಭುವನೇಶ ಪಂಚಾಕ್ಷರಿಯು. | 6 | ಹರಿಯಜರ ಗರ್ವವ ಮುರಿವ ಪಂಚಾಕ್ಷರಿಯು ಉರಿಲಿಂಗವಾಗಿ ರಾಜಿಸುವ ಪಂಚಾಕ್ಷರಿಯು ಸ್ಮರಣೆಗೆ ಸರಿಯಿಲ್ಲ ಪ್ರಣಮಪಂಚಾಕ್ಷರಿಯು ಸ್ಮರಿಸುವಾತನೆ ನಿತ್ಯಮುಕ್ತ ಪಂಚಾಕ್ಷರಿಯು. | 7 | ಪರಮ ಮುನಿಗಳ ಕರ್ಣಾಭರಣ ಪಂಚಾಕ್ಷರಿಯು ಹರನ ಸಾಲೋಕ್ಯದ ಪದವನೀವ ಪಂಚಾಕ್ಷರಿಯು ಉರಗತೊಡೆಶಿವನನೊಲಿಸುವರೆ ಪಂಚಾಕ್ಷರಿಯು ಕರ್ಮಗಿರಿಗೊಜ್ರ ಸುಧರ್ಮ ಪಂಚಾಕ್ಷರಿಯು. | 8 | ನಾನಾ ಜನ್ಮದಲ್ಲಿ ಹೊಲೆಯ ಕಳೆವ ಪಂಚಾಕ್ಷರಿಯು ಮನಸ್ಮರಣೆಗೆ ಸರಿಯಿಲ್ಲ ಪಂಚಾಕ್ಷರಿಯು ಜ್ಞಾನವೇದಿಕೆ ಮುಖ್ಯ ಪಂಚಾಕ್ಷರಿಯು ಧ್ಯಾನಿಸುವ ನೆರೆವ ತಾನೆ ಪಂಚಾಕ್ಷರಿಯು. | 9 | ಏನ ಬೇಡಿದಡೀವ ದಾನಿ ಪಂಚಾಕ್ಷರಿಯು ಸ್ವಾನುಜ್ಞಾನದಲ್ಲು[ದಿ]ಸಿದಂಥ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಕ್ಷಿತಿಭುವನಗಳ ಬೇಡಲೀವ ಪಂಚಾಕ್ಷರಿಯು. | 10 | ಕಾನನ ಭವತರು ವಹ್ನಿ ಪಂಚಾಕ್ಷರಿಯು ಯತಿಗೆ ಯತಿತನವೀವ ಗತಿಯು ಪಂಚಾಕ್ಷರಿಯು ಉನ್ನತ ಸಿದ್ಧತ್ವವನೀವ ಸಿದ್ಧಿ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಗತಿ ಮೋಕ್ಷಗಳ ಬೇಡೆ ಕುಡುವ ಪಂಚಾಕ್ಷರಿಯು. | 11 | ಅವಲಂಬಿಗೆ ಅವಲಂಬ ಪಂಚಾಕ್ಷರಿಯು ನಿರಾವಲಂಬಿಗೆ ನಿರಾವಲಂಬ ಪಂಚಾಕ್ಷರಿಯು ಕಾವ ಸಂಹರ ಭಜಿಪರಿಗೆ ಪಂಚಾಕ್ಷರಿಯು ಮಾವದ್ಯುಮಣಿಧರನನೊಲಿಪ ಪಂಚಾಕ್ಷರಿಯು. | 12 | ಅರಿವರ್ಗಗಳ ಮುರಿವ ಶತೃ ಪಂಚಾಕ್ಷರಿಯು ಕರಿಗಳೆಂಟನು ಹೊಡೆವ ಸಿಂಹ ಪಂಚಾಕ್ಷರಿಯು ಹರಿವ ದಶವಾಯುಗಳನಳಿವ ಪಂಚಾಕ್ಷರಿಯು ನೆರೆ ಸಪ್ತವ್ಯಸನಗಳಿಗೊಹ್ನಿ ಪಂಚಾಕ್ಷರಿಯು. | 13 | ತ್ರಿಗುಣಗಳ ಕೆಡಿಪ ನಿರ್ಗುಣವು ಪಂಚಾಕ್ಷರಿಯು ಅಘವೈದೇಂದ್ರಿಯಕೆ ಲಿಂಗೇಂದ್ರಿಯ ಪಂಚಾಕ್ಷರಿಯು ಮಿಗೆ ಕರ್ಮೇಂದ್ರಿಗಳ ತೆರೆತೆಗೆವ ಪಂಚಾಕ್ಷರಿಯು ಝಗಝಗಿಸಿ ಸರ್ವಾಂಗಪೂರ್ಣ ಪಂಚಾಕ್ಷರಿಯು. | 14 | ಷಡೂರ್ಮಿಗಳ ಗಡವನಳಿವ ಪಂಚಾಕ್ಷರಿಯು ಷಡುಕರ್ಮಗಳ ಮೆಟ್ಟಿನಿಲುವ ಪಂಚಾಕ್ಷರಿಯು ಷಡುವೇಕದಂತಿಗೆ ನಾಥ ಪಂಚಾಕ್ಷರಿಯು ಬಿಡದೆ ಜಪಿಸಿದಡವ ಮುಕ್ತ ಪಂಚಾಕ್ಷರಿಯು. | 15 | ಸಂಸಾರಸಾಗರಕೆ ಹಡಗ ಪಂಚಾಕ್ಷರಿಯು ವಂಶಗಳನಳಿವ ನಿರ್ವಂಶ ಪಂಚಾಕ್ಷರಿಯು ಸಂಶಯವಿಲ್ಲದಲಿ ನಿಸ್ಸಂಶಯ ಪಂಚಾಕ್ಷರಿಯು ವಿಂಶಾರ್ಥ ಬಿಡದೆ ಜಪಿಸುವದು ಪಂಚಾಕ್ಷರಿಯು. | 16 | ಗುರುಕೃಪಕಧಿಕದಿ ಭವದಗ್ಧ ಪಂಚಾಕ್ಷರಿಯು ಕರದ ಲಿಂಗಬೆಳಗು ಪ್ರಣಮಪಂಚಾಕ್ಷರಿಯು ನೆರೆಶ್ರೋತ್ರಬೋಧೆ ನಿರ್ಬೋಧೆ ಪಂಚಾಕ್ಷರಿಯು ನಿರುತ ಜಪಿಸುವನೆ ನಿರಾಪೇಕ್ಷ ಪಂಚಾಕ್ಷರಿಯು. | 17 | ದೀಕ್ಷಾ ಪಂಚಾಕ್ಷರಿಯು ದೀಕ್ಷ ಪಂಚಾಕ್ಷರಿಯು ಮೋಕ್ಷಾ ಪಂಚಾಕ್ಷರಿಯು ಮೋಕ್ಷ ಪಂಚಾಕ್ಷರಿಯು ಶಿಕ್ಷಾ ಪಂಚಾಕ್ಷರಿಯು ಶಿಕ್ಷ ಪಂಚಾಕ್ಷರಿಯು ಭಿಕ್ಷಾ ಪಂಚಾಕ್ಷರಿಯು ಭಿಕ್ಷ ಪಂಚಾಕ್ಷರಿಯು | 18 | ಚಿದ್ಭಸ್ಮದೊಳುವಾಭರಣ ಪಂಚಾಕ್ಷರಿಯು ಚಿದ್ಮಣಿಗಳ ಸ್ಥಾನ ಸ್ಥಾನ ಪಂಚಾಕ್ಷರಿಯು ಚಿದಂಗ ಸರ್ವದೊಳು ಪೂರ್ಣ ಪಂಚಾಕ್ಷರಿಯು ಚಿದಂಗ ಲಿಂಗಸಂಗಸಂಯೋಗ ಪಂಚಾಕ್ಷರಿಯು. | 19 | ಪಾದಸಲಿಲಂ ಪ್ರಸಾದಾದಿ ಪಂಚಾಕ್ಷರಿಯು ಆದಿಕ್ಷೇತ್ರಕ್ಕೆ ವೀರಶೈವ ಪಂಚಾಕ್ಷರಿಯು ಸಾಧಿಸುವ ಸದ್ಭಕ್ತಿಯನೀವ ಪಂಚಾಕ್ಷರಿಯು ಓದುವಾತನ ವೇದವಿತ್ತು ಪಂಚಾಕ್ಷರಿಯು. | 20 | ಅಷ್ಟಾವರಣಕೆ ಮಹಾಶ್ರೇಷ* ಪಂಚಾಕ್ಷರಿಯು ದುಷ್ಟನಿಗ್ರಹ ಶಿಷ್ಟಪಾಲ ಪಂಚಾಕ್ಷರಿಯು ಮುಟ್ಟಿ ನೆನದರೆ ಮುಕ್ತಿಸಾರ ಪಂಚಾಕ್ಷರಿಯು ಇಷ್ಟಪ್ರಾಣಭಾವದೀಶ ಪಂಚಾಕ್ಷರಿಯು. | 21 | ಭಕ್ತಿಯುಕ್ತಿಯು ಮಹಾಬೆಳಗು ಪಂಚಾಕ್ಷರಿಯು ನಿತ್ಯನೆನೆವರಿಗೆ ತವರ್ಮನೆಯು ಪಂಚಾಕ್ಷರಿಯು ಸತ್ಯಸದ್ಗುಣಮಣಿಹಾರ ಪಂಚಾಕ್ಷರಿಯು ವಿತ್ತ ಸ್ತ್ರೀ ನಿರಾಸೆ ಮಹೇಶ ಪಂಚಾಕ್ಷರಿಯು. | 22 | ಪರಧನ ಪರಸ್ತ್ರೀಗೆಳಸ ಪಂಚಾಕ್ಷರಿಯು ನಿರುತ ಮಹೇಶ್ವರಾಚಾರ ಪಂಚಾಕ್ಷರಿಯು ಪರಮ ಪ್ರಸಾದಿಸ್ಥಲ ತಾನೆ ಪಂಚಾಕ್ಷರಿಯು | 23 | ಈ ಪರಿಯ ತೋರೆ ಮಹಾಮೂರುತಿ ಪಂಚಾಕ್ಷರಿಯು ತಾ ಪರಬ್ರಹ್ಮ ನಿನಾದ ಪಂಚಾಕ್ಷರಿಯು | 24 | ತಟ್ಟಿ ಮುಟ್ಟುವ ರುಚಿ ಶಿವಾರ್ಪಣ ಪಂಚಾಕ್ಷರಿಯು ಕೊಟ್ಟುಕೊಂಬುವ ಪ್ರಸಾದಾಂಗ ಪಂಚಾಕ್ಷರಿಯು ನಷ್ಟ ಶರೀರಕೆ ನೈಷೆ*ವೀವ ಪಂಚಾಕ್ಷರಿಯು ಭ್ರಷ್ಟ ಅದ್ವೈತಿಗತೀತ ಪಂಚಾಕ್ಷರಿಯು. | 25 | ಸ್ಥೂಲತನುವಿಗೆ ಇಷ್ಟಲಿಂಗ ಪಂಚಾಕ್ಷರಿಯು ಮೇಲೆ ಸೂಕ್ಷ್ಮಕೆ ಪ್ರಾಣಲಿಂಗ ಪಂಚಾಕ್ಷರಿಯು ಲೀಲೆ ಕಾರಣ ಭಾವಲಿಂಗ ಪಂಚಾಕ್ಷರಿಯು ಬಾಳ್ವ ತ್ರಿತನುವಿಗೆ ತ್ರಿಲಿಂಗ ಪಂಚಾಕ್ಷರಿಯು. | 26 | ಪ್ರಾಣಲಿಂಗದ ಹೊಲಬು ತಾನೆ ಪಂಚಾಕ್ಷರಿಯು ಕಾಣಿಸುವ ಇಷ್ಟರೊಳು ಭಾವ ಪಂಚಾಕ್ಷರಿಯು ಮಾಣದೊಳಹೊರಗೆ ಬೆಳಗು ಪಂಚಾಕ್ಷರಿಯು ಕ್ಷೋಣಿಯೊಳು ಮಿಗಿಲೆನಿಪ ಬಿರಿದು ಪಂಚಾಕ್ಷರಿಯು. | 27 | ಆರು ಚಕ್ರಕೆ ಆಧಾರ ಪಂಚಾಕ್ಷರಿಯು ಆರು ಅಧಿದೈವಗಳ ಮೀರ್ದ ಪಂಚಾಕ್ಷರಿಯು ಆರು ವರ್ಣಗಳ ಬಗೆದೋರ್ವ ಪಂಚಾಕ್ಷರಿಯು ಆರು ಚಾಳ್ವೀಸೈದಕ್ಷರಂಗ ಪಂಚಾಕ್ಷರಿಯು. | 28 | ಆರು ಶಕ್ತಿಗಳ ಆರಂಗ ಪಂಚಾಕ್ಷರಿಯು ಆರು ಭಕ್ತಿಗಳ ಚಿದ್ರೂಪ ಪಂಚಾಕ್ಷರಿಯು ಆರು ಲಿಂಗದ ಮೂಲ ಬೇರು ಪಂಚಾಕ್ಷರಿಯು ಆರು ತತ್ವವಿಚಾರ ಪಂಚಾಕ್ಷರಿಯು. | 29 | ಯೋಗಷ್ಟ ಶಿವಮುಖವ ಮಾಡ್ವ ಪಂಚಾಕ್ಷರಿಯು ನಾಗಕುಂಡಲ ಊಧ್ರ್ವವಕ್ತ್ರ ಪಂಚಾಕ್ಷರಿಯು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಪಂಚಾಕ್ಷರಿಯು ಸಾಗಿಸಿ ಸುಜ್ಞಾನವೀವ ಪಂಚಾಕ್ಷರಿಯು. | 30 | ಇಷ್ಟ ಪ್ರಾಣಲಿಂಗ ಹೊಲಿಗೆ ಪಂಚಾಕ್ಷರಿಯು ಅಷ್ಟದಳಕಮಲದ ಪೀಠ ಪಂಚಾಕ್ಷರಿಯು ದೃಷ್ಟಿ ಅನುಮಿಷಭಾವ ಪಂಚಾಕ್ಷರಿಯು ಕೊಟ್ಟು ಸಲಹುವದಷ್ಟ ಪಂಚಾಕ್ಷರಿಯು. | 31 | ತನು ಸೆಜ್ಜೆ ಪ್ರಾಣವೆ ಲಿಂಗ ಪಂಚಾಕ್ಷರಿಯು ಮನ ಪೂಜಾರಿಯು ಭಾವ ಪುಷ್ಪ ಪಂಚಾಕ್ಷರಿಯು ಇನಿತು ಕೂಡುವುದು ಶಿವಶರಣ ಪಂಚಾಕ್ಷರಿಯು ಬಿನುಗಿಗಳವಡದ ಈ ಸತ್ಯ ಪಂಚಾಕ್ಷರಿಯು. | 32 | ಶರಣಸ್ಥಲದಂಗ ವೈರಾಗ್ಯ ಪಂಚಾಕ್ಷರಿಯು ಶರಣಸತಿ ಲಿಂಗಪತಿ ತಾನೆ ಪಂಚಾಕ್ಷರಿಯು ಶರಣುವೊಕ್ಕರ ಕಾವ ಬಿರಿದು ಪಂಚಾಕ್ಷರಿಯು ಶರಣಗಣರಿಗೆ ಮಾತೆಪಿತನು ಪಂಚಾಕ್ಷರಿಯು. | 33 | ಶರಣಂಗೆ ಸುಜ್ಞಾನದಿರವು ಪಂಚಾಕ್ಷರಿಯು ಶರಣಂಗೆ ಮುಕ್ತಿಯಾಗರವು ಪಂಚಾಕ್ಷರಿಯು ಶರಣಂಗೆ ಭಕ್ತಿಯ ಸೋಪಾನ ಪಂಚಾಕ್ಷರಿಯು ಶರಣಂಗೆ ಪರಮಜಲಕೂಪ ಪಂಚಾಕ್ಷರಿಯು. | 34 | ಶರಣಂಗೆ ಶೈವದ ಗೃಹವು ಪಂಚಾಕ್ಷರಿಯು ಶರಣರಿಗೆ ಸುರಧೇನು ಅಮೃತ ಪಂಚಾಕ್ಷರಿಯು ಶರಣರಿಗೆ ಕಲ್ಪತರು ಫಲವು ಪಂಚಾಕ್ಷರಿಯು ಶರಣರಿಗೆ ಚಿಂತಾಮಣಿ ತಾನೆ ಪಂಚಾಕ್ಷರಿಯು. | 35 | ಶರಣಪದ ಬೇಡುವರಿಗೀವ ಪಂಚಾಕ್ಷರಿಯು ಶರಣ ನಡೆನುಡಿ ಪೂರ್ಣಮಯವು ಪಂಚಾಕ್ಷರಿಯು ಶರಣರಿಗೆ ಶಿವನಚ್ಚು ಮೆಚ್ಚು ಪಂಚಾಕ್ಷರಿಯು ಶರಣರ್ದೂಷಣರೆದೆಗಿಚ್ಚು ಪಂಚಾಕ್ಷರಿಯು. | 36 | ಶರಣು ಶಿವಾನಂದ ಜಲಗಡಲು ಪಂಚಾಕ್ಷರಿಯು ಶರಣರ ಶರೀರ ಮೇಲೆ ಹೊದಿಕೆಯು ಪಂಚಾಕ್ಷರಿಯು ಶರಣು ಕೃತ್ಯಕೆ ವೈದ್ಯ ಕಾಣಾ ಪಂಚಾಕ್ಷರಿಯು ಶರಣು ಸುಜ್ಞಾನದರ್ಪಣವು ಪಂಚಾಕ್ಷರಿಯು. | 37 | ಶರಣ ಚಿದ್ರೂಪದ ಬಯಕೆಯಳಿದ ಪಂಚಾಕ್ಷರಿಯು ಶರಣಷ್ಟೈಶ್ವರ್ಯದೊಳಗಿಡದ ಪಂಚಾಕ್ಷರಿಯು ಶರಣಪೂಜಿಸಿ ಫಲವ ಬೇಡು[ವ] ಪಂಚಾಕ್ಷರಿಯು ಶರಣೊಜ್ರಪಂಜರದ ಬಿರಿದು ಪಂಚಾಕ್ಷರಿಯು. | 38 | ಶರಣಾಸೆ ರೋಷವನಳಿವ ಪಂಚಾಕ್ಷರಿಯು ಶರಣಾಸೆಯ ಮೋಹಲತೆ ಚಿವುಟುವ ಪಂಚಾಕ್ಷರಿಯು ಶರಣಜ್ಞಾನದತರು ಕುಠಾರ ಪಂಚಾಕ್ಷರಿಯು ಶರಣರುದಯಾಸ್ತಮಾನ ತಾನೆ ಪಂಚಾಕ್ಷರಿಯು. | 39 | ಶರಣರ ನಡೆನುಡಿ ಒಂದು ಮಾಡಿ[ದ] ಪಂಚಾಕ್ಷರಿಯು ಶರಣ ಸಂಸಾರಕಿಕ್ಕಿಡದ ಪಂಚಾಕ್ಷರಿಯು ಶರಣಗುಣ ಚಿಹ್ನಕೊರೆ ಶಿಲೆಯು ಪಂಚಾಕ್ಷರಿಯು ಶರಣರೊಡಗೂಡಿದಾನಂದ ಪಂಚಾಕ್ಷರಿಯು. | 40 | ಶರಣರ ಕರ್ಣದಾಭರಣ ಪಂಚಾಕ್ಷರಿಯು ಶರಣ ನುಡಿವ ಮಹಾವಸ್ತು ಪಂಚಾಕ್ಷರಿಯು ಶರಣ ಕೇಳುವ ಕೀರ್ತಿವಾರ್ತೆ ಪಂಚಾಕ್ಷರಿಯು ಶರಣಾಸರ ಬೇಸರಗಳ ಕಳೆವ ಪಂಚಾಕ್ಷರಿಯು. | 41 | ಶರಣರ ಚರಿತ್ರೆಯ ಬರೆವ ಲಿಖಿತ ಪಂಚಾಕ್ಷರಿಯು ಶರಣೀಶ ಲಾಂಛನಕಿಡದ ಪಂಚಾಕ್ಷರಿಯು ಶರಣ ತನು ಬಾಳಳಿದ ಬೋಧೆ ಪಂಚಾಕ್ಷರಿಯು ಶರಣನ ಮನ ಬೋಳಮಾಡಿರುವ ಪಂಚಾಕ್ಷರಿಯು. | 42 | ಶರಣಂಗೆ ಪರತತ್ವಬೋಧವೆ ಪಂಚಾಕ್ಷರಿಯು ಶರಣ ಪರವು ಶಾಂತಿ ಭಸ್ಮಧೂಳ ಪಂಚಾಕ್ಷರಿಯು ಶರಣ ಪರಬ್ರಹ್ಮಮಣಿ ಪಂಚಾಕ್ಷರಿಯು ಶರಣ ಪರಾತ್ಪರವು ಪಂಚಾಕ್ಷರಿಯು, | 43 | ಶರಣಂಗೆ ದೃಢವೆಂಬ ದಂಡ ಪಂಚಾಕ್ಷರಿಯು ಶರಣ ಕರ್ಮವ ಸುಟ್ಟಗ್ನಿ ಪಂಚಾಕ್ಷರಿಯು ಶರಣ ತೃಪ್ತಿಗೆ ನಿತ್ಯಾಮೃತ ಪಂಚಾಕ್ಷರಿಯು ಶರಣ ಹಿಡಿದ ವ್ರತವೈಕ್ಯ ಪಂಚಾಕ್ಷರಿಯು. | 44 | ಶರಣ ಪೂಜಿಪ ಪೂಜೆ ಐಕ್ಯ ಪಂಚಾಕ್ಷರಿಯು ಶರಣಂಗೆ ಐಕ್ಯಪದವೀವ ಪಂಚಾಕ್ಷರಿಯು ಶರಣ ಮಾಡುವ ಕ್ರಿಯಾದ್ವೈತ ಪಂಚಾಕ್ಷರಿಯು ಶರಣಂಗೆ ಇವು ನಾಸ್ತಿ ಪಂಚಾಕ್ಷರಿಯು. | 45 | ನೇಮ ನಿತ್ಯಂಗಳು ಲಿಂಗೈಕ್ಯ ಪಂಚಾಕ್ಷರಿಯು ಕಾಮ ಧರ್ಮ ಮೋಕ್ಷತ್ರಯಕ್ಕೆ ಪಂಚಾಕ್ಷರಿಯು ಕಾಮಿಸುವ ಬಾಹ್ಯಕ್ಕಿಲ್ಲದೈಕ್ಯ ಪಂಚಾಕ್ಷರಿಯು ನಾಮರೂಪಿಲ್ಲದ ನಿರ್ನಾಮ ಪಂಚಾಕ್ಷರಿಯು. | 46 | ಮಾನಸ್ವಾಚಕ ತ್ರಿಕರಣೈಕ್ಯ ಪಂಚಾಕ್ಷರಿಯು ಜ್ಞಾನ ಜ್ಞಾತೃಜ್ಞೇಯದೈಕ್ಯ ಪಂಚಾಕ್ಷರಿಯು ಸ್ವಾನುಭಾವವು ಲಿಂಗದೊಳೈಕ್ಯ ಪಂಚಾಕ್ಷರಿಯು ಮೋನಮುಗ್ಧಂ ತಾನಾದೈಕ್ಯ ಪಂಚಾಕ್ಷರಿಯು. | 47 | ನಡೆವ ಕಾಲ್ಗೆಟ್ಟ ಲಿಂಗೈಕ್ಯ ಪಂಚಾಕ್ಷರಿಯು ಷಡುರೂಪುಗೆಟ್ಟ ನೇತ್ರೈಕ್ಯ ಪಂಚಾಕ್ಷರಿಯು ಜಡ ಘ್ರಾಣೇಂದ್ರಿಲ್ಲದ ಲಿಂಗೈಕ್ಯ ಪಂಚಾಕ್ಷರಿಯು ಷಡುಯಿಂದ್ರಿಯಕೆ ಷಡುಲಿಂಗೈಕ್ಯ ಪಂಚಾಕ್ಷರಿಯು ಷಡುಸ್ಥಲವ ಮೀರಿರ್ದ ಲಿಂಗೈಕ್ಯ ಪಂಚಾಕ್ಷರಿಯು. | 48 | ಭಕ್ತಿ ಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ವ್ಯಕ್ತ ಮಹೇಶ್ವರ ಭಜನೈಕ್ಯ ಪಂಚಾಕ್ಷರಿಯು ಮುಕ್ತಪ್ರಸಾದಿ ಸ್ಥಲದೈಕ್ಯ ಪಂಚಾಕ್ಷರಿಯು ಸತ್ಯ ಪ್ರಾಣಲಿಂಗವೆನ್ನದೈಕ್ಯ ಪಂಚಾಕ್ಷರಿಯು. | 49 | ಶರಣಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ನಿರವಯಲ ಬೆರದ ಮಹಾಐಕ್ಯ ಪಂಚಾಕ್ಷರಿಯು ಉರಿವುಂಡ ಕರ್ಪುರದ ತೆರನು ಪಂಚಾಕ್ಷರಿಯು ಸರ[ವು] ಸರವು ಬೆರದಂತೆ ಮಾಡ್ವ ಪಂಚಾಕ್ಷರಿಯು. | 50 | ಪರಿಮಳ ವಾಯು ಸಂಗದಂತೆ ಪಂಚಾಕ್ಷರಿಯು ನಿರವಯಲಪ್ಪಿದಂತೆ ಪಂಚಾಕ್ಷರಿಯು ನೆರೆ ಮಾಡಿತೋರುವ ನಿತ್ಯ ಪಂಚಾಕ್ಷರಿಯು ಪರಮ ಬೋಧೆಯನೇನ ಹೇಳ್ವೆ ಪಂಚಾಕ್ಷರಿಯು. | 51 | ನಕಾರ ಮಕಾರ ಭಕ್ತ ಮಹೇಶ ಪಂಚಾಕ್ಷರಿಯು ಶಿಕಾರವೆ ಪ್ರಸಾದಿಸ್ಥಲದಂಗ ಪಂಚಾಕ್ಷರಿಯು ವಕಾರವೆ ಪ್ರಾಣಲಿಂಗಿ ತಾನೆ ಪಂಚಾಕ್ಷರಿಯು ಯಕಾರಂ ಓಂಕಾರಂ ಶರಣೈಕ್ಯ ಪಂಚಾಕ್ಷರಿಯು. | 52 | ಷಡಕ್ಷರ ಷಡುಸ್ಥಲದ ಬೀಜ ಪಂಚಾಕ್ಷರಿಯು ಷಡುಭಕ್ತಿಗಳ ಮುಖವು ಪಂಚಾಕ್ಷರಿಯು ಬಿಡದೆ ಸರ್ವತೋಮುಖವಾದ ಪಂಚಾಕ್ಷರಿಯು ಷಡುದರುಶನಕೆ ಮುಖ್ಯವಾದ ಪಂಚಾಕ್ಷರಿಯು. | 53 | ಪರಮ ಪಂಚಾಕ್ಷರಿಯು ಪ್ರಣಮ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು ಚರವು ಪಂಚಾಕ್ಷರಿಯು ಸಿರಿಯು ಪಂಚಾಕ್ಷರಿಯು ಕರುಣ ಪಂಚಾಕ್ಷರಿಯು ಹರುಷ ಪಂಚಾಕ್ಷರಿಯು ನಿಧಿಯು ಪಂಚಾಕ್ಷರಿಯು. | 54 | ನಿತ್ಯ ಪಂಚಾಕ್ಷರಿಯು ಮುಕ್ತ ಪಂಚಾಕ್ಷರಿಯು ಸತ್ಯ ಪಂಚಾಕ್ಷರಿಯು ವ್ಯಕ್ತ ಪಂಚಾಕ್ಷರಿಯು ಭಕ್ತ ಪಂಚಾಕ್ಷರಿಯು ಯುಕ್ತ ಪಂಚಾಕ್ಷರಿಯು ಮೌಕ್ತಿಕ ಮಾಣಿಕಹಾರ ಪಂಚಾಕ್ಷರಿಯು. | 55 | ಹರನೆ ಪಂಚಾಕ್ಷರಿಯು ಗುರುವೆ ಪಂಚಾಕ್ಷರಿಯು ಇರವೆ ಪಂಚಾಕ್ಷರಿಯು ಪರವೆ ಪಂಚಾಕ್ಷರಿಯು ಸರ್ವ ಪಂಚಾಕ್ಷರಿಯು ಹೊರೆವ ಪಂಚಾಕ್ಷರಿಯು ಸ್ಥಿರವೇ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು. | 56 | ಸ್ಥೂಲ ಪಂಚಾಕ್ಷರಿಯು ಸೂಕ್ಷ್ಮ ಪಂಚಾಕ್ಷರಿಯು ಲೀಲೆ ಪಂಚಾಕ್ಷರಿಯು ಕಾರಣ ಪಂಚಾಕ್ಷರಿಯು ಶೂಲಿ ಪಂಚಾಕ್ಷರಿಯು ಪೀಠ ಪಂಚಾಕ್ಷರಿಯು ಲೋಲ ಪಂಚಾಕ್ಷರಿಯು ಚರ್ಯ ಪಂಚಾಕ್ಷರಿಯು. | 57 | ಯಂತ್ರ ಪಂಚಾಕ್ಷರಿಯು ಮಂತ್ರ ಪಂಚಾಕ್ಷರಿಯು ಸಂತು ಪಂಚಾಕ್ಷರಿಯು ನಿಸ್ಸಂತು ಪಂಚಾಕ್ಷರಿಯು ಚಿಂತ ಪಂಚಾಕ್ಷರಿಯು ನಿಶ್ಚಿಂತ ಪಂಚಾಕ್ಷರಿಯು ಇಂತು ಪಂಚಾಕ್ಷರಿಯು ಜಪಿಸಿ ಪಂಚಾಕ್ಷರಿಯು. | 58 | ಕಂದ :ನಮಃ ಶಿವಾಯಯೆಂಬೀ ಅಮಲ ತೆರದ ನಾಮವ ನೋಡಿ ಜಪಿಸಲಿರುತಂ ಉಮೆಯರಸನನ್ನೊಲಿಸುವ ಕ್ರಮವಿದೆಂದು ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. | 1 | ಷಡುಸ್ಥಲ ಪಂಚಾಕ್ಷರಿಯನು ಬಿಡದೆ ಜಪಿಸಲು ಮುಕ್ತಿಯೆಂದು ಪೊಗಳ್ದ ಹೇಮಗಲ್ಲಂ ತನ್ನ ದೃಢಮೂರ್ತಿ ಶಂಭು ಗುರುರಾಯ ಪಡುವಿಡಿ ಸಿದ್ಧಮಲ್ಲಿನಾಥ ಕೃಪೆಯಿಂ. | 2 | ಷಡುಸ್ಥಲ ಪಂಚಾಕ್ಷರಿಯ ರಗಳೆ ಸಂಪೂರ್ಣಂ
--------------
ಹೇಮಗಲ್ಲ ಹಂಪ
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದು ಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ. ನಿಷೆ* ನಿಬ್ಬೆರಸಿ ಗಟ್ಟಿಗೊಂಡು ಅಭಿಲಾಷೆಯ ಸೊಮ್ಮು ಸಮನಿಸದೆ ಪರಿಚ್ಛೇದ ಬುದ್ಧಿಯು?್ಳಲ್ಲಿ ಮಾಹೇಶ್ವರ. ಅನರ್ಪಿತ ಸಮನಿಸದೆ ಬಂದುದ ಕಾಯದ ಕರಣದ ಕೈಯಲು ಕೊಟ್ಟು, ಲಿಂಗಸಹಿತ ಭೋಗಿಸುವಲ್ಲಿ ಪ್ರಸಾದಿ. ಪ್ರಾಣಕ್ಕೆ ಪ್ರಾಣವಾಗಿ ಇದ್ದು ಕಾಯಸ್ಥಿತಿಯರಿದು ಎಚ್ಚರಿಕೆಗುಂದದಿಪ್ಪಲ್ಲಿ, ಪ್ರಾಣಲಿಂಗಸಂಬಂಧಿ. ತನಗೆ ಲಿಂಗವಾಗಿ, ಲಿಂಗಕ್ಕೆ ತಾನಾಗಿ ಬೆಚ್ಚು ಬೇರಿಲ್ಲದ ಬೆಡಗಿನ ಒಲುಮೆಯಲ್ಲಿ ಶರಣ. ಸದಾಚಾರ ಸಂಪತ್ತಿನಲ್ಲಿ ಬಂದ ಅನುಭಾವವ ಮೀರಿ ಹೆಸರಡಗಿದ ಸುಖವದು ಲಿಂಗೈಕ್ಯ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಬಸವಣ್ಣಂಗಲ್ಲದೆ ಷಡುಸ್ಥಲವಪೂರ್ವ.
--------------
ಚನ್ನಬಸವಣ್ಣ
ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ, ನಿಂದ ನಿಲವನರಿದು ಭಕ್ತ, ಗುರುಪ್ರಸನ್ನವಿಡಿದು ಮಾಹೇಶ್ವರ, ಲಿಂಗಪೂಜೆಯವಿಡಿದು ಪ್ರಸಾದಿ, ಸ್ವಾನುಭಾವ ವಿವೇಕವಿಡಿದು ಪ್ರಾಣಲಿಂಗಿ, ಸ್ವಯಾನಂದವಿಡಿದು ಶರಣ,_ ಸೋಹಂ ಬ್ರಹ್ಮಾಸ್ಮಿನ್ನೆಂದು ಲಿಂಗೈಕ್ಯ. ಇಂತೀ ಷಟ್ಸ್ಥಲ ಸಂಪನ್ನನಾಗಿ, ನಿಂದ ನಿಲವ ನೀ ಬಲ್ಲೆಯಲ್ಲದೆ ಲೋಕದ ಸಂದೇಹಿಮಾನವರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮೂಲಬ್ರಹ್ಮದಲ್ಲಿ ಮೊನೆದೋರಿದ ಪ್ರಸಾದವೆ ಪರಮಪ್ರಣಮ. ಆ ಪ್ರಮಣದ ಪರಮಪ್ರಕಾಶವೆ ಪ್ರಸಿದ್ಧಪ್ರಸಾದ, ಆ ಪ್ರಸಿದ್ಧಪ್ರಸಾದದಿಂದಲೆ ಬ್ರಹ್ಮಾಂಡ ರೂಪುದೋರಿತ್ತು. ಆ ಸ್ವರೂಪವೆ ಪ್ರಸಾದ, ನಿರೂಪೇ ಲಿಂಗೈಕ್ಯ, ಅದಕ್ಕೆ ದೃಷ್ಟ : ತತ್ತ್ವ ಪ್ರದೀಪಿಕಾಯಾಂ : ಪ್ರಸಾದಂ ಮುಕ್ತಿ ಮೂಲಂಚ ಯತ್ಪ್ರಸಾದಂ ಶಿವಸ್ಯ ಚ | ಶಿವಸ್ಸರ್ವಾಧಿದೇವಸ್ಯಾದ್ ವೇದಕವೆರ್Åೀಷು ತದ್ಘನಂ || ಎಂದುದಾಗಿ, ಇಂತಿದೀಗ ಪ್ರಸಾದ ಮಹಾತ್ಮೆ. ಇದೇ ಪ್ರಸನ್ನಪ್ರಸಾದ, ಇಂತೀ ಪ್ರಸಾದವ ಕೊಂಡವನೆ ಶಿವಕುಲ. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ,
--------------
ಹಡಪದ ಅಪ್ಪಣ್ಣ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ಲಿಂಗದಲ್ಲಿ ಅಂಗವು ಸವೆದು, ಅಂಗದಲ್ಲಿ ಲಿಂಗವು ಸವೆದು, ಲಿಂಗಾಂಗದಲ್ಲಿ ಸಂಗಸಮನಿಸಿ ಸಮರಸವಾದ ಶರಣನೇ ಲಿಂಗೈಕ್ಯ. ಇಂತಲ್ಲದೆ ಸಂತೆಯ ಸ್ಥಲಕ್ಕೆಡೆಯಾಡುವ ಭ್ರಾಂತುಭವಿಗಳು ಬಂದ ಭಾವದಲ್ಲಡಗುವ ಸುಖವನರಿವರೆ ಗುರುನಿರಂಜನ ಚನ್ನಬಸವಲಿಂಗಾ.?
--------------
ದೇಶಿಕೇಂದ್ರ ಸಂಗನಬಸವಯ್ಯ
ಸೂತಕವಿರಹಿತ ಲಿಂಗಾರಾಧನೆ ತನುಮೂರ್ತಿಯಾದಲ್ಲಿ ಲಿಂಗೈಕ್ಯ. ಪಾತಕವಿರಹಿತ ಜಂಗಮಾರಾಧನೆ ಮನಮೂರ್ತಿಯಾದಲ್ಲಿ ಲಿಂಗೈಕ್ಯ. ಸೂತಕ ಪಾತಕವೆಂಬ ಉಭಯ ಸಂಗ ಹಿಂಗಿತ್ತು, ಕೂಡಲಚೆನ್ನಸಂಗಾ ನಿಮ್ಮ ಲಿಂಗೈಕ್ಯಂಗೆ.
--------------
ಚನ್ನಬಸವಣ್ಣ
ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು, ವಿಷಯಸ್ವರೂಪಮಾದ ಮನವೇ ಸ್ವಪ್ನವು, ಅನುಭವಸ್ವರೂಪಮಾದ ಜೀವನಲ್ಲಿ ಸುಷುಪ್ತಿಯು. ಪಾಪವೆಂಬ ಪಂಕದಲ್ಲಿ ಹುಟ್ಟಿ ಆಸೆಯೆಂಬ ಬಿಸದೊಳಗೆ ಕೂಡಿ ಅಷ್ಟಭೂತಂಗಳೆಂಬಷ್ಟದಳಂಗಳಿಂ ಚಿತ್ತವೆಂಬ ಮೇರುವಿನಿಂ ಯುಕುತಮಾಗಿರ್ಪ ಹೃತ್ಕಮಲದಲ್ಲಿ ಜೀವನು ಸುಷುಪ್ತಿಯಂ ಹೊಂದಿ, ತನುವಿನ ಜಾಗ್ರವು ಮನದ ಸ್ವಪ್ನವಲ್ಲದೆ, ತನ್ನ ನಿಜವೆಲ್ಲವೂ ಸುಷುಪ್ತಿಯಂ ಹೊಂದಿ ತನು ಸೋಂಕಿದಲ್ಲಿ ತಿಳುವುತ್ತಂ, ಮರಳಿ ನಿದ್ರಾರೂಪದಿಂ ಮರವುತ್ತಲಿರ್ಪ ಜೀವನ ಪರಿಯ ನೋಡಾ. ಇಂತು ಭವಭವಂಗಳಲ್ಲಿ ತೊಳಲುವ ಜೀವಂಗೆ ಗುರುಸಂಸ್ಕಾರದಿ ಲಿಂಗವೆಂಬ ಪೂರ್ವಾಚಲದಲ್ಲಿ ಜ್ಞಾನಾರ್ಕೋದಯಮಾಗಿ, ಭಾವವೆಂಬ ಮೋಹ ಬಯಲಲ್ಲಿ ಗಮಿಸುತ್ತಿರಲು, ಹೃತ್ಕಮಲಂ ವಿಕಸಿತಮಾಗಿ ಆನಂದಮಕರಂದದೊಡನೆ ಕೂಡಿ, ಗುರುಮಂತ್ರಮಲಯಾನಿಲನು ನಿಜವಾಸನೆವಿಡಿದು ಬೀಸುತ್ತಿರಲು, ಜೀವ ಸುಷುಪ್ತಿಭ್ರಾಂತಿಯಳಿದು, ಪರಮಜಾಗ್ರತ್ಸ್ವರೂಪನಪ್ಪ ಪರಮಾತ್ಮನಾಗಿ, ತನುವಿನ ಜಾಗ್ರ, ಮನದ ಸ್ವಪ್ನಗಳಳಿದು, ಪರಮನ ಮಧ್ಯಾವಸ್ಥೆಯಲ್ಲಿ ಲೀನಮಾಗಲು, ಅಷ್ಟಭೂತಂಗಳುಂ ಅಷ್ಟಾವರಣಂಗಳಾದವದೆಂತೆಂದೊಡೆ : ಪೃಥ್ವಿಯೇ ಭಸ್ಮವು, ಜಲವೇ ಪಾದೋದಕವು, ಅಗ್ನಿಯೇ ರುದ್ರಾಕ್ಷವು, ವಾಯುವೇ ಪ್ರಸಾದವು, ಆಕಾಶವೇ ಮಂತ್ರವು, ಅಹಂಕಾರವೇ ಲಿಂಗವು, ಮಹವೇ ಗುರುವು, ಚಿತ್ತವೇ ಜಂಗಮವು, ನಿಜವು ಪ್ರಸನ್ನಮಾಗಿ ಮನವೇ ವೃಷಭೇಶ್ವರನಾಗಿ ತನುವೇ ಕೈಲಾಸಪರ್ವತಮಾಗಿ ಸಕಲ ಗುಣಂಗಳೇ ಶಿವಗಣಂಗಳಾಗಿ; ಸಕಲಜನ್ಮಕರ್ಮಪ್ರಪಂಚಪರದೊಳಡಗಿತ್ತೆಂತೆಂದೊಡೆ ಕಾಲದಲ್ಲಿ ಬ್ರಹ್ಮಾಂಡಂಗಳಡಗಿ ರೂಪುದೋರದಿರ್ಪಂತೆ, ಚಿದಾಕಾಶದಲ್ಲಿ ಲೀನಮಾಗೆ, ತಾನೇ ಶಿವನಾಗಿ, ಅಭೇದ ಬ್ರಹ್ಮವಾಯಿತ್ತೆಂತೆಂದೊಡೆ : ವಸ್ತುಸ್ವರೂಪಮಾದ ಸುವರ್ಣವ ಕಾಸಿ, ಕರಗಿಸಿ ; ಉಳಿದ ನಿಜಮಂ ತೆಗೆದು, ಬೆಳುಗಾರ ಮಿಕ್ಕಿ, ಮಹದೊಳಗೆ ಬೆರಸಿ, ಎರಡನ್ನೂ ಒಂದುಮಾಡಿ, ತಾನದರೊಳಗೆ ಬೆರೆದು ಭೇದದೋರದಿರ್ಪಂತೆ, ಮನಸ್ಸು ಜೀವ ಪರಮರನೊಂದುಮಾಡಿ, ತಾನದರೊಳಗೆ ಬೆರೆದು, ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ. ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕ್ರಿಯೆಯಿಲ್ಲದ ಭಕ್ತ ಮನುಜ, ಕ್ರಿಯೆಯಿಲ್ಲದ ಮಹೇಶ ರಾಕ್ಷಸ, ಕ್ರಿಯೆಯಿಲ್ಲದ ಪ್ರಸಾದಿ ಯವನ, ಕ್ರಿಯೆಯಿಲ್ಲದ ಪ್ರಾಣಲಿಂಗಿ ಭವಿ, ಕ್ರಿಯೆಯಿಲ್ಲದ ಶರಣ ಅಜ್ಞಾನಿ, ಕ್ರಿಯೆಯಿಲ್ಲದ ಲಿಂಗೈಕ್ಯ ಜನನಕ್ಕೊಳಗು ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪೃಥ್ವಿಯೇ ಸ್ಥಾವರ, ಜಲವೇ ಜಂಗಮ, ಅಗ್ನಿಯೇ ಸ್ಥಾವರ, ವಾಯುವೇ ಜಂಗಮ. ಆಕಾಶವೇ ಸ್ಥಾವರ, ಜೀವನೇ ಜಂಗಮ. ಪೃಥ್ವಿಯೇ ಸ್ಥೂಲ, ಜಲವೇ ಸೂಕ್ಷ್ಮ. ಅಗ್ನಿಯೇ ಸ್ಥೂಲ, ವಾಯುವೇ ಸೂಕ್ಷ್ಮ ಆಕಾಶವೇ ಸ್ಥೂಲ, ಆತ್ಮನೇ ಸೂಕ್ಷ್ಮ. ಸ್ಥೂಲವಸ್ತುಗಳಿಂದ ಸೂಕ್ಷ್ಮ ವಸ್ತುಗಳೇ ಪ್ರಾಣಮಾಗಿಹವು. ತತ್ಸಂಗಂಗಳಿಂ ಬಿಂದುಕಳಾನಾದಗಳು ಸೃಷ್ಟಿಯಾಗುತ್ತಿಹವು. ಸ್ಥೂಲವಸ್ತುಗಳು ಆ ಸೂಕ್ಷ್ಮವಸ್ತುಗಳಲ್ಲೇ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿಹವು. ಪೃಥಿವ್ಯಾದಿ ಪಂಚಭೂತಂಗಳೇ ಘ್ರಾಣಾದಿ ಪಂಚೇಂದ್ರಿಯಂಗಳಾಗಿ, ಆಯಾ ಗುಣಂಗಳಂ ಗ್ರಹಿಸುವಂತೆ ಆತ್ಮನಿಗೆ ಮನಸ್ಸೇ ಇಂದ್ರಿಯಮಾಗಿ, ಆತ್ಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಪರಮಾತ್ಮನಿಗೆ ಭಾವೇಂದ್ರಿಯಮಾಗಿ, ಆ ಪರಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಮುಖಂಗಳಾವುವೆಂದೊಡೆ: ಘ್ರಾಣಕ್ಕೇ ವಾಯುವೇ ಮುಖ, ಜಿಹ್ವೆಗೆ ಅಗ್ನಿಯೇ ಮುಖ, ನೇತ್ರಕ್ಕೆ ಜಲವೇ ಮುಖ, ತ್ವಕ್ಕಿಗೆ ಪೃಥ್ವಿಯೇ ಮುಖ, ಶ್ರೋತ್ರಕ್ಕಾತ್ಮವೇ ಮುಖ, ಮನಸ್ಸಿಗೆ ಚಿದಾಕಾಶವೆ ಮುಖ, ಭಾವಕ್ಕೆ ನಿಜವೇ ಮುಖವಾದಲ್ಲಿ. ಪಂಚೇದ್ರಿಯಂಗಳು ಪಂಚಭೂತಗುಣಂಗಳಂ ಗ್ರಹಿಸುವಂತೆ, ಮನಸ್ಸು ಆತ್ಮಗುಣವನ್ನು ಜ್ಞಾನಮುಖದಿಂ ಗ್ರಹಿಸಿ, ಗುರುದತ್ತಲಿಂಗವೂ ಆತ್ಮನೂ ಏಕಮೆಂದು ತಿಳಿದು, ತೂರ್ಯಭಾವದಲ್ಲಿ ಸ್ವಭಾವಮಾಗಿ, ನಿಜಾನಂದ ತೂರ್ಯಾತೀತದಲ್ಲಿ ಎರಕವೆರದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ತನುವಿಂಗೆ ಲಿಂಗ ಬಾಹಾಗ ಕಂಕುಳ ಕೂಸೆ ? ಮನಕ್ಕೆ ಲಿಂಗ ಬಾಹಾಗ ತೊಂಡಿನ ದನವೆ ? ಕಂಡಕಂಡವರಂಗದಲ್ಲಿ ಹಿಂಗಿಹನೆಂದಡೆ, ಬಂಧುಗಳ ಮನೆಯ ಲಂದಣಗಾರನೆ ? ಇವರಂದದ ಮಾತು ಸಾಕು. ಲಿಂಗವಿಪ್ಪೆಡೆಯ ಹೇಳಿಹೆ ಕೇಳಿರಣ್ಣಾ. ಸುಖಿಯಲ್ಲದೆ ದುಃಖಿಯಲ್ಲದೆ, ಆಗಿಗೆ ಮನಗುಡದೆ, ಚೇಗೆಗೆ ದುಃಖಿತನಾಗದೆ, ಕಂಡಕಂಡವರಲ್ಲಿ ಭಂಡ ಗೆಲಿಯದೆ, ತೊಂಡಿನ ಜೀವದನದಂತೆ, ಬಂದು ಹೊಯ್ವವರನರಿಯದೆ, ಇವರಂದವನರಿಯ ಮತ್ತೆ ಉಭಯದ ಸಂದಳಿದು, ಒಂದೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಂಸಾರಸಾರಾಯದ ತನಿರಸವ ಹಿಂಡಿ ಹಿಳಿದಾಡಿದ. ಕೈಯ ಸವರಿಕೊಂಡು ಹರಿದು ಹತ್ತುವನಲ್ಲ, ಮರಳಿ ನೋಡುವನಲ್ಲ. ಇಂತಪ್ಪ ವೀರರುಂಟೆ? ಇಂತಪ್ಪ ಧೀರರುಂಟೆ? ಇಂತಪ್ಪ ಪೌರುಷದ ಚರಿತನಾಗಿ ಮಾಯೆಯಂ ಹಿಂಗಿಸಿ, ಮುಯ್ಯಾಂತು ಮುಂದಣ ನಿಲವನಾಗುಮಾಡಿದ ನಿಜೈಕ್ಯ. ನಿರ್ವಯಲ ನಿಃಪತಿಗೆ ನಿಜವಾಗಿ, ನಿರಾಳದೊಳಗೆ ತಾನೆ ತೊಳಲುತಿರ್ದನು. ಕಲಿದೇವಾ, ನಿಮ್ಮ ಲಿಂಗೈಕ್ಯ ಪ್ರಭುದೇವರ ಶ್ರೀಪಾದಕ್ಕೆ ಭೃಂಗವಾಗಿರ್ದೆನು.
--------------
ಮಡಿವಾಳ ಮಾಚಿದೇವ
ನಾಲ್ಕು ಗ್ರಾಮದ ಪಟ್ಟಣಕ್ಕೆ ಪಂಚೈವರ ಕಾಹು. ಅವರ ಸಂಚವಿಡಿದು ಲಿಂಗಾರ್ಚನೆಯ ಮಾಡಿದರೆ ಲೋಕದ ಬಳಕೆ ಕಂಡಯ್ಯಾ. ಪಂಚೈವರ ಪಂಚಸ್ಥಳವಳಿದು ಏಕಸ್ಥಳವಾಗಿ ನವನಾಳದ ಭೇದದ ಪರಿಯರಿದಡೆ ಲಿಂಗೈಕ್ಯ ನೋಡಾ. ನಾಳ ಮಧ್ಯದಲಿಪ್ಪ ಜೀವಪ್ರಾಣನ ನೆಲೆಯನರಿದಡೆ ಕೂಡಲಚೆನ್ನಸಂಗನೊಬ್ಬ ಸಾಹಿತ್ಯವಾಗಿಹನು.
--------------
ಚನ್ನಬಸವಣ್ಣ
ಇನ್ನಷ್ಟು ... -->