ಅಥವಾ

ಒಟ್ಟು 29 ಕಡೆಗಳಲ್ಲಿ , 16 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನಿಂದ ಲಿಂಗವ ಕಂಡೆನಲ್ಲದೆ ಲಿಂಗದ ಲಿಂಗವ ಕಾಣಲಿಲ್ಲಯ್ಯಾ. ಲಿಂಗದಿಂದ ಫಲಪದಂಗಳ ಕಂಡೆನಲ್ಲದೆ ಫಲಪದಗಳಿಂದ ಫಲಪದಂಗಳ ಕಾಣಲಿಲ್ಲಯ್ಯಾ. ಜಂಗಮದಿಂದ ಮೋಕ್ಷವ ಕಂಡೆನಲ್ಲದೆ ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುರುಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ; ಲಿಂಗಬಿದ್ದಡೆ ಸಮಾಧಿಯ ಹೊಕ್ಕಹೆವೆಂಬರು. ಗುರುವಿಂದ ಲಿಂಗವಾಯಿತ್ತೆ ? ಲಿಂಗದಿಂದ ಗುರುವಾದನೊ ? ಅದೆಂತೆಂದಡೆ: ಪೃಥ್ವಿಯಲ್ಲಿ ಹುಟ್ಟಿತ್ತು, ಕಲ್ಲುಕುಟಿಗನಿಂದ ರೂಪಾಯಿತ್ತು, ಗುರುವಿನ ಹಸ್ತದಿಂದ ಲಿಂಗವಾಯಿತ್ತು. ಇಂತೀ ಮೂವರಿಗೆ ಹುಟ್ಟಿದ ಲಿಂಗವ ಕಟ್ಟಿ ಜಗವೆಲ್ಲ ಭಂಡಾಯಿತ್ತು ನೋಡಿರೊ ! ಅಣ್ಣಾ, ಲಿಂಗ ಬಿದ್ದಿತ್ತು ಬಿದ್ದಿತ್ತೆಂದು ನೋಯಲೇಕೆ ? ಬಿದ್ದ ಲಿಂಗವನೆತ್ತಿಕೊಂಡು ಷೋಡಶೋಪಚಾರವ ಮಾಡುವುದು. ಹೀಗಲ್ಲದೆ ಶಸ್ತ್ರಸಮಾಧಿ ದುರ್ಮರಣವ ಮಾಡಿಕೊಂಡಿಹೆನೆಂಬ ಪಂಚಮಹಾಪಾತಕಂಗೆ ನಾಯಕನರಕ. ಲಿಂಗವು ಬೀಳಬಹುದೆ ? ಭೂಮಿಯು ಆನ ಬಲ್ಲುದೆ ? ಸದ್ಗುರುನಾಥನಿಲ್ಲವೆ ? ಇಂತೀ ಕಟ್ಟುವ ತೆರನ, ಮುಟ್ಟುವ ಭೇದವ ಆರು ಬಲ್ಲರೆಂದಡೆ: ಈರೇಳು ಭುವನ, ಹದಿನಾಲ್ಕುಲೋಕದೊಡೆಯ ಪೂರ್ವಾಚಾರಿ ಕೂಡಲಚೆನ್ನಸಂಗಯ್ಯನಲ್ಲದೆ ಮಿಕ್ಕಿನ ಮಾತಿನ ಜ್ಞಾನಿಗಳೆತ್ತ ಬಲ್ಲರು ?
--------------
ಚನ್ನಬಸವಣ್ಣ
ಒಂದು ಲಿಂಗದಿಂದ ಉದ್ಭವಿಸಿತ್ತು, ನಾದ ಬಿಂದು ಕಳೆ. ಆ ನಾದ ಬಿಂದು ಕಳೆಗೆ ಉದ್ಭವಿಸಿತ್ತು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನು. ಈ ಪಂಚಬ್ರಹ್ಮದ ಬೆಳೆಯ [ಉತ್ಪತ್ಯವ] ಪೇಳುತಿದನು ಕಾಣಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಲಿಂಗದಿಂದ ಕಂಡೆಹೆನೆಂಬುದು, ಮನದ ಸೂತಕ. ಮನದಿಂದ ಅರಿದೆಹೆನೆಂಬುದು, ಅರಿವಿನ ಸೂತಕ. ಅರಿವಿನಿಂದ ಅರಿದೆಹೆನೆಂಬುದು, ಮಹತ್ತಪ್ಪ ಘನದ ಸೂತಕ. ಕಾಯದಿಂದ ಕರ್ಮವ ಮಾಡಿ, ಲಿಂಗವನರಿದೆಹೆನೆಂಬುದು ಭಾವದ ಭ್ರಮೆ. ಭ್ರಮೆಯಳಿದು, ಅರಿವನರಿದೆಹೆನೆಂಬುದು ಉಭಯದ ಬೀಜ. ಬೀಜ ನಷ್ಟವಾಗಿ, ಅಂಕುರ ಮಳೆದೋರದೆ, ಶಂಕೆಯೆಂಬ ಸಂದೇಹ ನಂದಿದಲ್ಲಿ, ಅದೇ ನಿಸ್ಸಂಗದ ಇರವೆಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಲಿಂಗವನರಿದು ಮುಟ್ಟಬೇಕೆಂಬಲ್ಲಿ ಅರಿವುದು ಲಿಂಗಕ್ಕೆ ಹೊರಗೆ ? ಲಿಂಗದಿಂದ ಅರಿದ ಅರಿವು ತಾನಾಗಿ ಬೇರೆ ದ್ವೈತವೆನಲಿಲ್ಲ, ಅದ್ವೈತವೆನಲಿಲ್ಲ. ಅದು ತರುವಿನ ತಿಗುಡಿನ ಸಾರದಂತೆ, ಆ ತರುವಿನ ಒಡಗೂಡಿಯೆ ಸುಖದುಃಖವ ಅನುಭವಿಸುವಂತೆ, ಅರಿದು ಅರ್ಪಿಸುವ ಕ್ರೀ ಸದ್ಯೋಜಾತಲಿಂಗದಲ್ಲಿ ಲೇಪ.
--------------
ಅವಸರದ ರೇಕಣ್ಣ
ಬಂಧಿಸಿ ಘಟವ ಬಿಟ್ಟಿಹೆನೆಂದಡೆ ಅಭಿಸಂಧಿಯಲ್ಲಿ ನೋವುದು ಜೀವ. ಕಂದದೆ ಕುಂದದೆ ನಿಜದಲ್ಲಿ ಹೊಂದಿಹೆನೆಂದಡೆ ಸರ್ವೇಂದ್ರಿಯ ಬಂಧುವಿನೊಳಗಿದೆ ಜೀವ. ಒಂದ ಮರೆದು ಒಂದನರಿದು ಮುಂದಣ ಅಡಿಯ ಮೆಟ್ಟಿಹೆನೆಂದಡೆ ಸಂದೇಹದ ಸಂದಣಿಗೊಳಗಿದೆ ಜೀವ. ಗುರುವಿಂದ ಕಂಡೆಹೆನೆಂದಡೆ ಅದು ಧರ್ಮಬೀಜ, ನಾನು ಕರ್ಮಬೀಜ. ಲಿಂಗದಿಂದ ಕಂಡೆಹೆನೆಂದಡೆ ಚತುರ್ವಿಧಫಲ ಭವಬೀಜ. ಜ್ಞಾನದಿಂದ ಕಂಡೆಹೆನೆಂದಡೆ ನಾನು ಸಾವಯ, ಅದು ನಿರವಯ. ಎನಗಿನ್ನೇತರಿಂದ ಕೂಟರಿ ಈ ಭಕ್ತಿಜಗದಾಟದ ಕಾಟ. ನಿನ್ನ ಕೂಟವ ಕೂಡಿಹೆನೆಂಬ ಕೋಟಲೆಯ ಬಿಡಿಸಿ ಎನ್ನಲ್ಲಿ ನೀನು ಅಲೇಖನಾಗು. ಭಿನ್ನಭಾವವಿಲ್ಲದಂತೆ, ಅನ್ಯ ಅನನ್ಯವೆಂಬುದ ನಿನ್ನ ಭಾವದಲ್ಲಿಯೆ ಮರೆಸಿ ನಾನುಗೂಡಿ ನೀನು ಬಟ್ಟಬಯಲು, ಸದ್ಯೋಜಾತಲಿಂಗವೆ.
--------------
ಅವಸರದ ರೇಕಣ್ಣ
ಲಿಂಗದಿಂದ ಉದಯಿಸಿ ಅಂಗವಿಡಿದವರ ಇಂಗಿತವನೇನೆಂಬೆನಯ್ಯಾ ? ಅವರ ನಡೆಯೆ ಆಗಮ, ಅವರ ನುಡಿಯೆ ಪರಮಾಮೃತ ಅವರ ಲೋಕದ ಮಾನವರೆನಬಹುದೆ ಅಯ್ಯಾ ? ವೃಕ್ಷಾದ್ಭವತಿ ಬೀಜಂ ಹಿ ತದ್ ವೃಕ್ಷೇ ಲೀಯತೇ ಪುನಃ ರುದ್ರಲೋಕಂ ಪರಿತ್ಯಜ್ಯ ಶಿವಲೋಕಂ ಪ್ರವಿಶ್ಯತಿ ಅಂಕೋಲೆಯ ಬೀಜ ತರುವನಪ್ಪುವಂತೆ ಅಪ್ಪುವರಯ್ಯಾ ಕೂಡಲಚೆನ್ನಸಂಗಾ ನಿಮ್ಮ ಶರಣರು
--------------
ಚನ್ನಬಸವಣ್ಣ
ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು. ಅದೆಂತೆಂದಡೆ:ಆತ್ಮರುಗಳಲ್ಲಿ ಪರಮಾತ್ಮನ ಕಳೆ ವೇದ್ಯವಾಗಿರೆ, ತನುವ ರುಧಿರವ ಕೂಡಿಕೊಂಡು ಅಷ್ಟತನುಮೂರ್ತಿಯೆನಿಸಿಕೊಂಡು, ಸಪ್ತಧಾತು ಬೆರೆಸಿಕೊಂಡು, ಷಡುವರ್ಣವ ಕೂಡಿಕೊಂಡು, ಪಂಚತತ್ವವ ಪ್ರವೇಶಿಸಿಕೊಂಡು, ಚತುಷ್ಟಯ ಕರಣವ ದಳಕುಳವ ಮಾಡಿಕೊಂಡು, ಸ್ಥೂಲಸೂಕ್ಷ್ಮಕಾರಣವ ಅಂಗವ ಮಾಡಿಕೊಂಡು, ಕಾಯ ಜೀವವೆರಡು ದಳಕುಳವ ಮೆಟ್ಟಿಕೊಂಡು, ಏಕದಳದ ಮೇಲೆ ಪರಮಾತ್ಮ ತಾ ನಿಂದು, ಸಾಕ್ಷಿಕನಾಗಿ ಸಾವು ಹುಟ್ಟನರಿವುತ್ತ, ಜ್ಞಾನವಿದು ಅಜ್ಞಾನವಿದು ಎಂದು ಕಾಣುತ್ತ, ಸಂಸಾರ ಹೇಯವ ಮಾಡುತ್ತ, ಲಿಂಗವ ಹಾಡುತ್ತ, ಲಿಂಗವ ಹಾಡುತ್ತ, ಜಂಗಮವ ಹರಸುತ್ತ, ಲಿಂಗವಾಗಿ ಬಂದು ಗುರುಪಾದವಿಡಿದಾತನೀಗ ತತ್‍ಶಿಷ್ಯ. ಆ ಶಿಷ್ಯಂಗೆ ಶ್ರೀ ಗುರುಸ್ವಾಮಿ, ಕಾಯವಿದು ಕರಣವಿದು ಜೀವವಿದು ವಾಯುವಿದು, ಮನವಿದು ಪ್ರಾಣವಿದು ಮಾಯವಿದು ಮದವಿದು ಮಲವಿದೆಂದು ಆತನಾದಿಯನುರುಹಿ, ತನ್ನಾದಿಯ ಕುರುಹಿದೇಕೋ ಮಗನೇ ಎಂದು, ಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗ ಮಾಡಿ, ಕರ್ಣದಲಿ ಮಂತ್ರವ ಹೇಳಿ, ಕರಸ್ಥಲಕ್ಕೆ ಲಿಂಗವ ಕೊಡುವಲ್ಲಿ, ಮಗನೆ ಹಸ್ತವೆಂದರೆ ಮಂತ್ರಲಿಂಗವಾಗಿ ಇದೇನೆ, ಮಸ್ತಕವೆಂದರೆ ಚಿದ್ಬ್ರಹ್ಮದಲ್ಲಿ ತೋರುವ ಸುನಾದಕಳೆ ನಾನೇಯಾಗಿ ಇದೇನೆ. ಸಂಯೋಗವೆಂದರೆ ಸರ್ವಾಂಗದಲ್ಲಿ ಪ್ರಾಣಜಂಗಮನಾಗಿ ನಾನೇ ಇದೇನೆ. ತ್ರಿವಿಧ ಉಪದೇಶವೆ ತ್ರಿವಿಧ ಪ್ರಣವವಾಗಿ ಅದಾವೆ. ತ್ರಿವಿಧ ಪ್ರಣವವೆ ಗುರುಲಿಂಗಜಂಗಮವೆಂದು, ಆ ಗುರುಲಿಂಗಜಂಗಮವೆ ಇಷ್ಟ ಪ್ರಾಣ ತೃಪ್ತಿಯೆಂದು, ಆ ಇಷ್ಟ ಪ್ರಾಣ ತೃಪ್ತಿಯೆ ಆಚಾರಾದಿ ಮಹಾಲಿಂಗವೆಂದು, ಆ ಆಚಾರಾದಿ ಮಹಾಲಿಂಗವೆ ಮೂವತ್ತಾರು ಲಿಂಗವೆಂದು, ಆ ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವೆಂದರಿದು, ಇಂತಿವೆಲ್ಲಕ್ಕೆ ಇಷ್ಟ ಗುರುವೆ ಆದಿ, ಇಷ್ಟೆ ಲಿಂಗವೆ ಮಧ್ಯ, ಇಷ್ಟಜಂಗಮವೆ ಅವಸಾನ. ಇದು ಕಾರಣ, ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ಈ ತ್ರಿವಿಧವು ತ್ರಿವಿಧ ಮುಖದಲ್ಲಿ ಗುರುವಿಂದ ತನು ಶುದ್ಧಪ್ರಸಾದವಾಯಿತ್ತು. ಲಿಂಗದಿಂದ ಮನ ಸಿದ್ಧಪ್ರಸಾದವಾಯಿತ್ತು. ಜಂಗಮದಿಂದ ಪದಾರ್ಥ ಪ್ರಸಿದ್ಧಪ್ರಸಾದವಾಯಿತ್ತು. ಈ ತ್ರಿವಿಧ ಪ್ರಸಾದವೆ ಅಂಗವಾದ ಶರಣಂಗೆ ಅರಿವೇ ಗುರು, ಜ್ಞಾನವೆ ಲಿಂಗ, ಭಾವನೆ ಜಂಗಮ. ಇಂತಪ್ಪ ಶರಣ ಮತ್ತೆ ಗುರುವೆನ್ನ, ಲಿಂಗವೆನ್ನ, ಜಂಗಮವೆನ್ನ, ಆಚಾರವೆನ್ನ, ತಾನೆನ್ನ ನಾನೆನ್ನ, ಏನೂ ಎನ್ನ, ಬಸವಪ್ರಿಯ ಕೂಡಲಚೆನ್ನಸಂಗಮದೇವ ತಾನೆ ತನ್ಮಯವಾಗಿ.
--------------
ಹಡಪದ ಅಪ್ಪಣ್ಣ
ಸೋಹಂ ಹೊಕ್ಕು ದಾಸೋಹವೆಂಬ ಅಂಜನವ ಹಚ್ಚಿ, ಮುಂದೆ ನೋಡಲಾಗಿ ಅರುಹ ಕಂಡೆ, ಆ ಅರುಹಿಂದ ಆಚಾರವ ಕಂಡೆ, ಆಚಾರದಿಂದ ಗುರುವ ಕಂಡೆ, ಗುರುವಿಂದ ಲಿಂಗವ ಕಂಡೆ, ಲಿಂಗದಿಂದ ಜಂಗಮವ ಕಂಡೆ, ಜಂಗಮದಿಂದ ಪ್ರಸಾದವ ಕಂಡೆ, ಪ್ರಸಾದದಿಂದ ಪರವ ಕಂಡೆ, ಪರದೊಳಗೆ ವಿಪರೀತ ಸ್ವರೂಪವ ಕಂಡೆ. ವಿಪರೀತ ಸ್ವರೂಪದೊಳಗೆ ನಿರ್ಲೇಪವಾದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಲಿಂಗಗಂಭೀರದೊಳಗೆ ಜಗ ಹುಟ್ಟಿದಡೇನು, ಆ ಲಿಂಗದಿಂದ ಘನವೆ ಶಿವಲಿಂಗದೊಳಗೆ ಜಗ, ಜಗದೊಳಗೆ ಶಿವಲಿಂಗ, ಲೋಕಾದಿ ಲೋಕಂಗಳಿಗೆ ನೀನು ಭಕ್ತಿಯ ಕಂದೆರೆದು ತೋರಿದೆ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಾ, ನಿನ್ನ ಶ್ರೀಪಾದಕ್ಕೆ ನಮೋ ನಮೋ ಎನುತ್ತಿರ್ದೆನು.
--------------
ಬಸವಣ್ಣ
ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ, ಲಿಂಗದಿಂದ ಶಿಷ್ಯ, ಶಿಷ್ಯನಿಂದ ಗುರು, ಗುರುವಿನಿಂದ ಗುರುತ್ವ, ಗುರುತ್ವದಿಂದ ಸಕಲವೈಭವಂಗಳ ಸುಖ. ಈ ಗುಣ ಅವರೋಹಾರೋಹಾಗಿ ಬಂದು, ಆ ವಸ್ತು ವಸ್ತುಕವಾಗಿ ಬಂದುದನರಿದು ಪಿಂಡಜ್ಞಾನಸ್ಥಲವ ಕಂಡು ರತ್ನ ರತ್ನ ಕೂಡಿದಂತೆ, ರತಿ ರತಿ ಬೆರಸಿದಂತೆ, ಸುಖ ಸುಖವನಾಧರಿಸಿದಂತೆ, ಬೆಳಗು ಬೆಳಗಿಂಗೆ ಇದಿರಿಟ್ಟಂತೆ, ಅಂಡ ಪಿಂಡ ಜ್ಞಾನ ತ್ರಿವಿಧ ನೀನಲಾ, ಸದ್ಯೋಜಾತಲಿಂಗದ ಲೀಲಾಭಾವ.
--------------
ಅವಸರದ ರೇಕಣ್ಣ
ಮದ್ಗುರುವೆ ಸದ್ಗುರುವೆ ತ್ರಿಜಗದ್ಗುರುವೆ ಶಿವಂಗೆ ಮಾತೆಯಾದ ಮನೋರಥವೀವ ಮಹದ್ಗುರುವೆ ಶಿವ ಇವ ಉಪಮಾತೀತನೆ ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಶ್ರೀಗುರುವೆ, ನಿನ್ನ ನಿರೀಕ್ಷಣೆ ಮಾತ್ರದಲ್ಲಿ ಸಕಲಯೋನಿಜರು ಪಶುಪಾಶಹರರು, ಪಶುರ್ನಾಥಃ ಶಿವಸ್ತಸ್ಮಾತ್ ಪಶೂನಾಂ ಪತಿರಿತ್ಯಭೂತ್ ಎಂದುದಾಗಿ ಪಶುಪಾಶವಿನಿರ್ಮುಕ್ತೈ ಗುರೋರಾಜ್ಞಾಂ ನಿರೀಕ್ಷಯೇತ್ ಸಂಸ್ಕಾರಿಗಳಿಗಲ್ಲದೆ ಅಪ್ಪುದೆ ನಿನ್ನ ನಿರೀಕ್ಷಣೆ? ಹೋಹುದೆ ಅವನ ಭವಪಾಶವು ? ``ಅಣುರೇಣುತೃಣಕಾಷ* ಶಿಲಾಗುಲ್ಮಲತಾವಳಿ ಭೂತೋಯಾನಲಮರುದಾಕಾಶಸ್ಥಃ ``ಏಕ ಏವ ನ ದ್ವಿತೀಯಾವಸ್ಥೇ ಎಂದುದಾಗಿ, ಇದು ಕಾರಣ, ಪರಿಪೂರ್ಣ ಶಿವನು. ಅದು ಹೇಗೆಂದಡೆ : ಘಟದೊಳಗೆ ಇದ್ದ ಜಲಕ್ಕೆ ಉಷ್ಣವಿಸಿ ಆ ಜಲವು ತದ್ರೂಪಹಂಗೆ ಸದ್ಗುರುಸ್ವಾಮಿ ಅಂಗಲಿಂಗವ ಸಂಬಂಧಮಾಡಿದ ಬಳಿಕ ಪ್ರಾಣಲಿಂಗಸಂಬಂಧವಾದ ಭೇದ : ಸ್ವಾನುಭಾವೇ ತು ಸಂಬಂಧಿ ಕ್ರಿಯಾಲಿಂಗಸ್ಯ ಪೂಜನಂ ನಿಷ್ಕ್ರಿಯಂ ಪ್ರಾಣಲಿಂಗಂ ತು ಕ್ರಿಯಾಲಿಂಗಸ್ಯ ಪೂಜನಂ ಬಾಹ್ಯಲಿಂಗಾರ್ಚನಂ ಯತ್ ಸ್ಯಾತ್ ತತ್ ಕ್ರಿಯಾಲಿಂಗಪೂಜನಂ ಎಂದುದಾಗಿ, ಕ್ರಿಯಾಕಾರದಿಂ ಗುರು ತೋರಿದ ಲಿಂಗದಿಂದ ಸ್ವಾನುಭಾವಲಿಂಗವ ಕಂಡರಿತು ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
-->