ಅಥವಾ

ಒಟ್ಟು 32 ಕಡೆಗಳಲ್ಲಿ , 16 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನು ಅಷ್ಟದಳ ಕಮಲದಳಂಗಳ ಮೆಟ್ಟಿ ಚರಿಸಿ ಆಡುವ ವಿಧವೆಂತೆಂದಡೆ; ಇಂದ್ರದಳವೇರಿದಲ್ಲಿ ಗುಣಿಯಾಗಿಹನು. ಅಗ್ನಿದಳವೇರಿದಲ್ಲಿ ಕ್ಷುಧಾತುರದಿಂ ಹಸಿದಿರುತ್ತಿಹನು. ಯಮದಳವೇರಿದಲ್ಲಿ ಕ್ರೋಧದಿಂ ದುರಿತ ಚೇಷ್ಟಿತನಾಗಿಹನು. ನೈಋತ್ಯದಳವೇರಿದಲ್ಲಿ ದ್ವೇಷಿಸುತ್ತಲಿಹನು. ವರುಣದ?ವೇರಿದಲ್ಲಿ ನಿದ್ರೆಗೈವುತ್ತಿಹನು. ವಾಯುವ್ಯದಳವೇರಿದಲ್ಲಿ ಸಂಚಲಚಿತ್ತದಿಂ ಗಮನಿಯಾಗಿಹನು. ಕುಬೇರದಳವೇರಿದಲ್ಲಿ ಧರ್ಮಬುದ್ಧಿಯಿಂ ಪರಹಿತಾರ್ಥಿಯಾಗಿಹನು. ಈಶಾನ್ಯದಳವೇರಿದಲ್ಲಿ ಸ್ತ್ರೀಗೋಷಿ* ವಿಷಯಾತುರನಾಗಿಹನು. ಮಧ್ಯಸ್ಥಾನಕ್ಕೆ ಬಂದು ನಿಂದಲ್ಲಿ ಸದ್ಭಾವಿಯಾಗಿ ಉತ್ತರಪಥ ಪರಮಾರ್ಥ ಮೋಕ್ಷಗಾಮಿಯಾಗಿಹನು. ಇಂತೀ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನ ನೆಲೆಗೆಡಿಸಿ ಸದ್ಭಾವಿಯಾಗಿರಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣನು
--------------
ಚನ್ನಬಸವಣ್ಣ
ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ, ನೀವು ಪ್ರಾಣಲಿಂಗಿಗಳು ಎಂತಾದಿರಿ ಹೇಳಿರಣ್ಣ? ಅರಿಯದಿರ್ದಡೆ ಕೇಳಿರಣ್ಣ, ಪ್ರಾಣಲಿಂಗವಾದ ಭೇದಾಭೇದವ. ಕಾಯದ ಕಳವಳದಲ್ಲಿ ಕೂಡದೆ, ಮನದ ಭ್ರಾಂತಿಗೊಳಗಾಗದೆ, ಕರಣಂಗಳ ಮೋಹಕ್ಕೀಡಾಗದೆ, ಪ್ರಾಣನ ಪ್ರಪಂಚಿನಲ್ಲಿ ಬೆರೆಯದೆ, ಜೀವನ ಬುದ್ಧಿಯಲ್ಲಿ ಮೋಹಿಸದೆ, ಹಂಸನ ಆಸೆಗೊಳಗಾಗದೆ ನಿಷ್ಪ್ರಪಂಚಿಯಾಗಿ, ಗುರುಲಿಂಗಜಂಗಮದ ಪಾದೋದಕಪ್ರಸಾದದಲ್ಲಿ ಅತಿಕಾಂಕ್ಷೆವುಳ್ಳಾತನಾಗಿ, ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ, ಎರಕತ್ವವುಳ್ಳಾತನಾಗಿಪ್ಪಾತನೆ ಲಿಂಗಪ್ರಾಣಿ ನೋಡಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಭೂಮಿಯಲ್ಲಿ ಲಿಂಗಸ್ಥಾಪನೆಯಿಲ್ಲದೆ ಶ್ಮಶಾನಭೂಮಿಯಲ್ಲಿ ಶವವ ಸಂಚಗರಿಸಲಾಗದು ಎಂಬಿರಿ. ಭೂಮಿಯ ಶುದ್ಧಮಾಡಿ ಸಂಚಗರಿಸುವ ಕ್ರಮವಂ ಪೇಳ್ವೆ, ಅದೆಂತೆಂದೊಡೆ : ಆರೂ ಇಲ್ಲದ ಅರಣ್ಯದ ಬೆಟ್ಟವನೊಡದು, ಚಂದ್ರ ಸೂರ್ಯ ಅಗ್ನಿ ಪ್ರಕಾಶವನುಳ್ಳ ನಾನಾ ವರ್ಣದ ಕಲ್ಲು ತಂದು, ಸಪ್ತಚರಣದ ಭೂಮಿಯ ಮೂರಾರು ಕೋಣೆಗೆ ಹಾಕಿ, ಹಂಚು ಹರಳು ಎಲುವು ನೋಡಿ ತೆಗೆದು, ಹುಲ್ಲುಕೊಯ್ದು ಭೂಮಿಯ ಹಸನ ಮಾಡಿ, ಕಳ್ಳಿ ಮುಳ್ಳ ಹಚ್ಚದೆ ಬೇಲಿಯ ಬಂಧಿಸಿ, ಆ ನಿರ್ಮಳವಾದ ಭೂಮಿಯಲ್ಲಿ ಶವಸಂಚಗರಿಸಿದಾಕ್ಷಣವೇ ಬಯಲಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರೊ. ಪವನದ ಉತ್ಪತ್ಯದಲ್ಲಿದ್ದ ಮೂಲವನರಿದು ಆ ನಾಲ್ಕು ಪವನ ಒಂದುಗೂಡಿ ಪೃಥ್ವಿಯ ಗುಣವನರಿಯಬಲ್ಲರೆ ಭಕ್ತಯೆಂದೆನಿಸಬಹುದು. ಎಂಟಸಳ ಕಮಲದಲ್ಲಿ ಮೆಟ್ಟಿ ಆಡುವ ಹಂಸನ ಸ್ಥಳವನರಿಯದೆ ಪಟ್ಟಗಟ್ಟಿದರಸನ ಸಂದರುಶನವ ಮಾಡಬಲ್ಲರೆ ಜ್ಞಾನಿಯೆಂದೆಸಬಹುದು. ಮಾರ್ಗ ಇಲ್ಲದೆ ಹಾದಿಯ ನಡದು ಇಪ್ಪತ್ತೊಂದುಮಣಿಯ ಯಜ್ಜನಮಾಡಿ ಪೋಣಿಸಿ ಸುಮಾರ್ಗದಲ್ಲಿ ಬೆರಸ್ಯಾಡುತಿರ್ದ ತ್ರಿವಿಧಮಣಿಯ ಮೇರುವೆಯಂ ಕಟ್ಟಿ ಜಪವ ಮಾಡಬಲ್ಲರೆ, ಜಪವು ಬಲಿದು ಸ್ಥೂಲಕರ್ಮವೆಂಬ ಜಾಡ್ಯವನಳಿದುದು ವೈರಾಗ್ಯವಲ್ಲದೆ, ಇಂತೀ ಭೇದಂಗಳನರಿಯದೆ ಕುಲುಮದ, ಧನಮದ, ವಿದ್ಯಾಮದ, ಪ್ರಾಯಮದವೆಂಬ ಮದಂಗಳೊಳು ಮುಳುಗಿ ಕ್ರೋಧ, ಇಂದ್ರಿಯ ಕಪಟ, ವ್ಯಸನದಲ್ಲಿ ವೈರಾಗ್ಯವೆಂದೆನಿಸುವ ದ್ರೋಹಿಗಳಿಗೆ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಪೃಥ್ವೀಚಕ್ರಕ್ಕೆ ಶರೀರವೇ ಪೂರ್ವ, ಶರೀರದೊಳಗಣ ಪೃಥ್ವಿಯೇ ಪಶ್ಚಿಮ, ಜಿಹ್ವೆಯಲ್ಲಿ ಕೊಂಬ ಆಹಾರಾದಿಪೃಥ್ವಿಯೇ ಉತ್ತರ, ಅಧೋಮುಖದಲ್ಲಿ ವಿಸರ್ಜನರೂಪಮಾದ ಪುತ್ರಾದಿಪೃಥ್ವಿಯೇ ದಕ್ಷಿಣ, ಪೂರ್ವರೂಪವಾದ ಶರೀರಕ್ಕೂ ದಕ್ಷಿಣರೂಪವಾದ ಪುತ್ರಾದಿಗಳಿಗೂ ಸಂಧಿಕಾಲಮಾಗಿರ್ಪ ಅರ್ಥಾದಿಪೃಥ್ವಿಯೇ ಆಗ್ನೇಯ, ಪುತ್ರಾದಿ ದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ಮಲವಿಸರ್ಜನರೂಪಮಾದ ಪೃಥ್ವಿಯೇ ನೈರುತ್ಯ, ಆ ಶರೀರದೊಳಗಣ ಪೃಥ್ವಿಗೂ ಆಹಾರರೂಪವಾದ ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಗೂ ಸಂಧಿಕಾಲದಲ್ಲಿ ಪರಮಪವಿತ್ರಮಾಗಿ ಪರಿಪಕ್ವಮಯವಾಗಿ ಪ್ರಸಾದರೂಪವಾದ ಅನ್ನಾದಿ ಭೋಜನಕ್ರಿಯೆಯೆಂಬ ಪೃಥ್ವಿಯೇ ಈಶಾನ್ಯ. ಜಲಚಕ್ರಕ್ಕೆ ಗುಹ್ಯಜಲವೇ ಪೂರ್ವ, ಶರೀರಜಲವೇ ದಕ್ಷಿಣ, ಜಿಹ್ವಾಜಲವೇ ಪಶ್ಚಿಮ, ನೇತ್ರಜಲವೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಕಾಲದಲ್ಲಿರ್ಪ ಬಿಂದುಜಲವೇ ಆಗ್ನೇಯ, ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಸಂಧಿಯಲ್ಲಿರ್ಪ ವಾತ ಪಿತ್ತ ಶ್ಲೇಷ್ಮಜಲವೇ ನೈರುತ್ಯ, ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಸಂಧಿಯಲ್ಲಿರ್ಪ ಉಚ್ಛ್ವಾಸವಾಯುಮುಖದಲ್ಲಿ ದ್ರವಿಸುತ್ತಿರ್ಪ ಜಲವೇ ವಾಯವ್ಯಜಲ, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯದಲ್ಲಿರ್ಪ ಜಲಕ್ಕೂ ಸಂಧಿಯಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಈಶಾನ್ಯಜಲ. ಅಗ್ನಿಚಕ್ರಕ್ಕೆ ಗುಹ್ಯದಲಿರ್ಪ ತೇಜೊರೂಪಮಾದ ಆಗ್ನಿಯೇ ಪೂರ್ವ, ಉದರದಲ್ಲಿರ್ಪ ಅಗ್ನಿಯೇ ದಕ್ಷಿಣ, ನೇತ್ರದಲ್ಲಿರ್ಪ ಆಗ್ನಿಯೇ ಪಶ್ಚಿಮ, ಹಸ್ತದಲ್ಪಿರ್ಪ ಸಂಹಾರಾಗ್ನಿಯೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಾಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನದಲ್ಲಿರ್ಪ ಕಾಮಾಗ್ನಿಯೇ ಆಗ್ನೇಯಾಗ್ನಿ, ಉದರದಲ್ಲಿರ್ಪ ಅಗ್ನಿಗೂ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಗೂ ಸಂಧಿಯಲ್ಲಿರ್ಪ ಕ್ರೋಧ ಮತ್ಸರ ರೂಪವಾಗಿರ್ಪ ತಾಮಸಾಗ್ನಿಯೇ ನೈರುತ್ಯಾಗ್ನಿ, ನೇತ್ರದಲ್ಲಿರ್ಪ ಅಗ್ನಿಗೂ ಹಸ್ತದಲ್ಲಿರ್ಪ ಉತ್ತರಾಗ್ನಿಗೂ ಸಂಧಿಯಲ್ಲಿ ವಸ್ತುಗ್ರಹಣಚಲನೋದ್ರೇಕಾಗ್ನಿಯೇ ವಾಯವ್ಯಾಗ್ನಿ, ಆ ಹಸ್ತಕ್ಕೂ ಗುಹ್ಯಕ್ಕೂ ಸಂಧಿಯಲ್ಲಿ ಧರ್ಮಪ್ರಜಾಸೃಷ್ಟಿನಿಮಿತ್ತ ಪಾಣಿಗ್ರಹಣಮಪ್ಪಲ್ಲಿ ಸಾಕ್ಷಿರೂಪಮಾದ ಹೋಮಾಗ್ನಿಯೇ ಈಶಾನ್ಯಾಗ್ನಿ. ವಾಯುಚಕ್ರಕ್ಕೆ ನಾಸಿಕಚಕ್ರದಲ್ಲಿರ್ಪ ಪ್ರಾಣವಾಯುವೇ ಪೂರ್ವವಾಯು, ಹೃದಯವೇ ಪಶ್ಚಿಮ, ಚಲನಾತ್ಮಕವಾದ ಚೈತನ್ಯವಾಯುಮುಖವಿಕಸನವೇ ಉತ್ತರವಾಯು, ಗಂಧವಿಸರ್ಜನೆಯೇ ದಕ್ಷಿಣವಾಯು, ನಾಸಿಕದಲ್ಲಿರ್ಪ ಪೂರ್ವವಾಯುವಿಗೂ ಗಂಧದಲ್ಲಿರ್ಪ ದಕ್ಷಿಣವಾಯುವಿಗೂ ಸಂಧಿಯಲ್ಲಿರ್ಪ ಗಂಧವಾಯುವೇ ಆಗ್ನೇಯವಾಯು, ಗುದದಲ್ಲಿರ್ಪ ವಾಯುವಿಗೂ ಹೃದಯದಲ್ಲಿರ್ಪ ಪಶ್ಚಿಮವಾಯುವಿಗೂ ಸಂಧಿಯಲ್ಲಿ ಆದ್ಯನಾದಿವ್ಯಾಧಿಗಳಂ ಕಲ್ಪಿಸಿ ದೀಪನಾಗ್ನಿಯಲ್ಲಿ ಕೂಡಿಸಿ ಅನಂತಮಲವಂ ಮಾಡಿ ಅಧೋಮುಖದಲ್ಲಿ ಕೆಡವುತ್ತಿರ್ಪ ತಾಮಸವಾಯುವೇ ನೈರುತ್ಯವಾಯು, ಹೃದಯವಾಯುವಿಗೂ ವದನದಲ್ಲಿರ್ಪ ಉತ್ತರವಾಯುವಿಗೂ ಸಂಧಿಯಲ್ಲಿರ್ಪ ಕಂಠದಲ್ಲಿ ಹಸನ ರೋದನ ಗರ್ಜನಾದಿಗಳಂ ಮಾಡುತ್ತಿರ್ಪ ವಾಯುವೇ ವಾಯವ್ಯವಾಯು, ವದನದಲ್ಲಿರ್ಪ ವಾಯುವಿಗೂ ನಾಸಿಕದಲ್ಲಿರ್ಪ ವಾಯುವಿಗೂ ಸಂಧಿಯಲ್ಲಿರ್ಪ ಅಕ್ಷರಾತ್ಮಕವಾಯುವೇ ಈಶಾನ್ಯ. ಆಕಾಶಚಕ್ರಕ್ಕೆ ಶ್ರೋತ್ರದಲ್ಲಿರ್ಪ ಆಕಾಶವೇ ಪೂರ್ವ, ಶರೀರದಲ್ಲಿರ್ಪ ಆಕಾಶವೇ ಪಶ್ಚಿಮ, ಪಾದದಲ್ಲಿರ್ಪ ಆಕಾಶವೇ ದಕ್ಷಿಣ, ಜಿಹ್ವೆಯಲ್ಲಿರ್ಪ ಆಕಾಶವೇ ಉತ್ತರ, ಶ್ರೋತ್ರದಲ್ಲಿರ್ಪ ಪೂರ್ವಾಕಾಶಕ್ಕೂ ಪಾದದಲ್ಲಿರ್ಪ ದಕ್ಷಿಣಾಕಾಶಕ್ಕೂ ಕಿವಿಯಲ್ಲಿ ಪಾದದಲ್ಲಿ ಗಮಿಸುತ್ತಿರ್ಪಲ್ಲಿ ಮುಂದೆ ಗಮಿಸುತ್ತಿರ್ಪಾಕಾಶವೇ ಆಗ್ನೇಯಾಕಾಶ, ಪಾದದಲ್ಲಿರ್ಪ ಆಕಾಶಕ್ಕೂ ಶರೀರದಲ್ಲಿರ್ಪ ಪಶ್ಚಿಮಾಕಾಶಕ್ಕೂ ಸಂಧಿಯಲ್ಲಿ ಮಲಮೂತ್ರ ವಿಸರ್ಜನಾಕಾಶವೇ ನೈರುತ್ಯಾಕಾಶ, ಆ ಶರೀರದೊಳಗಿರ್ಪ ಆಕಾಶಕ್ಕೂ ಜಿಹ್ವೆಯಲ್ಲಿರ್ಪ ಉತ್ತರಾಕಾಶಕ್ಕೂ ಸಂಧಿಯಲ್ಲಿ ಗುಣಗ್ರಹಣವಂ ಮಾಡುತ್ತಿರ್ಪ ಹೃದಯವೇ ವಾಯವ್ಯಾಕಾಶ, ಜಿಹ್ವೆಯಲ್ಲಿರ್ಪ ಆಕಾಶಕ್ಕೂ ಶ್ರೋತ್ರದಲ್ಲಿರ್ಪ ಆಕಾಶಕ್ಕೂ ಸಂಧಿಯಲ್ಲಿ ಗುರುವು ಮುಖದಿಂದುಪದೇಶಿಸಲು, ಶಿಷ್ಯನು ಕರ್ಣಮುಖದಲ್ಲಿ ಗ್ರಹಿಸಲು, ತನ್ಮಂತ್ರಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಆಕಾಶವೇ ಈಶಾನ್ಯಾಕಾಶ, ಆತ್ಮಚಕ್ರಕ್ಕೆ ವಾಸನಾಜ್ಞಾನವೇ ಪಶ್ಚಿಮ, ರುಚಿಜ್ಞಾನವೇ ಉತ್ತರ, ಸ್ಪರ್ಶಜ್ಞಾನವೇ ಪೂರ್ವ, ರೂಪಜ್ಞಾನವೇ ದಕ್ಷಿಣ. ಸ್ಪರ್ಶನರೂಪಮಾದ ಪೂರ್ವಜ್ಞಾನವೇ ಜೀವನು, ರೂಪಜ್ಞತ್ವಮುಳ್ಳ ದಕ್ಷಿಣಜ್ಞಾನವೇ ಶರೀರ. ಸ್ಪರ್ಶನದಲ್ಲಿ ಜೀವನು ವ್ಯಾಪ್ತನಾದಂತೆ ರೂಪಜ್ಞಾನದಲ್ಲಿ ಶರೀರವು ವ್ಯಾಪ್ತಮಾಗಿರ್ಪುದರಿಂ ರೂಪಜ್ಞಾನತ್ವವೇ ಶರೀರ, ಸ್ಪರ್ಶನಜ್ಞಾನತ್ವವೇ ಜೀವ. ತತ್ಸಂಧಿಯಲ್ಲಿ ತೇಜೋವಾಯುರೂಪಮಾಗಿರ್ಪ ಮನೋಜ್ಞಾನತ್ವವೇ ಆಗ್ನೇಯಾತ್ಮನು. ಮನೋಜ್ಞಾನಕ್ಕೂ ಪಶ್ಚಿಮದಲ್ಲಿರ್ಪ ವಾಸನಾಜ್ಞಾನಕ್ಕೂ ಸಂಧಿಯಲ್ಲಿ ಜನ್ಮಾಂತರವಾಸನಾಜ್ಞಾನವೇ ಪರೋಕ್ಷಜ್ಞಾನ, ರೂಪಜ್ಞಾನವೇ ಪ್ರತ್ಯಕ್ಷಜ್ಞಾನ. ಈ ಎರಡರ ಮಧ್ಯದಲ್ಲಿ ಭಾವಜ್ಞತ್ವಮಿರ್ಪುದು. ಜಾಗ್ರತ್ಸ್ವಪ್ನಗಳ ಮಧ್ಯದಲ್ಲಿ ಸುಷುಪ್ತಿಯು ಇರ್ಪಂತೆ ಸುಷುಪ್ತಿಗೆ ತನ್ನಲ್ಲಿರ್ಪ ಸ್ವಪ್ನವೇ ಪ್ರತ್ಯಕ್ಷಮಾಗಿ ತನಗೆ ಬಾಹ್ಯಮಾಗಿರ್ಪ ಜಾಗ್ರವು ಪ್ರತ್ಯಕ್ಷಮಾಗಿಹುದು. ಅಂತು ಭಾವಜ್ಞತ್ವಕ್ಕೆ ರೂಪಜ್ಞಾನಪ್ರತ್ಯಕ್ಷಮಾಗಿ ವಾಸನಾಜ್ಞಾನಕ್ಕೆ ತಾನೇ ಮರೆಯಾಗಿರ್ಪುದರಿಂ ಆ ಭಾವಜ್ಞಾನವೇ ನೈರುತ್ಯಾತ್ಮನು. ಆ ವಾಸನಾಜ್ಞಾನಕ್ಕೂ ಉತ್ತರದಲ್ಲಿರ್ಪ ರುಚಿಜ್ಞಾನಕ್ಕೂ ಸಂಧಿಯಲ್ಲಿ ರುಚಿಯೆಂದರೆ ಅನುಭವಪದಾರ್ಥ, ತಜ್ಞಾನವೇ ರುಚಿಜ್ಞಾನ. ವಾಸನಾಜ್ಞಾನವೇ ಪರೋಕ್ಷಜ್ಞಾನ, ಅದೇ ಭೂತಜ್ಞಾನ, ಆ ರುಚಿಜ್ಞಾನವೇ ಭವಿಷ್ಯಜ್ಞಾನ. ಅಂತಪ್ಪ ಭೂತಭವಿಷ್ಯತ್ತುಗಳ ಮಧ್ಯದಲ್ಲಿ ವಾಯುರೂಪಮಾದ ಶಬ್ದಮುಖದಲ್ಲಿ ತಿಳಿವುತ್ತಿರ್ಪ ಶಬ್ದಜ್ಞಾನವೇ ವಾಯವ್ಯಾತ್ಮನು. ರುಚಿಜ್ಞಾನಕ್ಕೂ ಸ್ಪರ್ಶನಜ್ಞಾನಕ್ಕೂ ಮಧ್ಯದಲ್ಲಿ ಜೀವನು ರುಚಿಗಳನನುಭವಿಸುವ ಸಂಧಿಯಲ್ಲಿರ್ಪ ಶಿವಜ್ಞಾನಮಧ್ಯದಲ್ಲಿರುವನೇ ಈಶಾನ್ಯಾತ್ಮನು. ಜ್ಞಾನಾನಂದಮೂರ್ತಿಯೇ ಕರಕಮಲದಲ್ಲಿ ಇಷ್ಟಲಿಂಗಮಾಗಿ, ಆ ಶಿವಜ್ಞಾನವೇ ಹೃತ್ಕಮಲಮಧ್ಯದಲ್ಲಿ ರುಚ್ಯನುಭವಸಂಧಿಯಲ್ಲಿ ಪ್ರಾಣಲಿಂಗಮಾಗಿ, ಪ್ರತ್ಯಕ್ಷ ಪರೋಕ್ಷಂಗಳಿಗೆ ತಾನೇ ಕಾರಣವಾಗಿ, ಆ ಶಿವಜ್ಞಾನಂಗಳು ಭಾವದಲ್ಲೊಂದೇ ಆಗಿ ಪ್ರಕಾಶಿಸಿದಲ್ಲಿ ಭಾವದಲ್ಲಿರ್ಪ ತಾಮಸವಳಿದು, ಪ್ರತ್ಯಕ್ಷ ಪರೋಕ್ಷಂಗಳೊಂದೇ ಆಗಿ, ಪರೋಕ್ಷಜ್ಞಾನದಲ್ಲಿ ಪ್ರತ್ಯಕ್ಷಭಾವಂಗಳಳಿದು, ಭೂತಭವಿಷ್ಯಂಗಳೊಂದೇ ಆಗಿ ಅಖಂಡಮಯಮಾಗಿ ಎಲ್ಲವೂ ಒಂದೆಯಾಗಿರ್ಪುದೇ ಆಗ್ನೇಯ. ಅದಕ್ಕೆ ಇಷ್ಟಪ್ರಾಣಂಗಳೆಂಬೆರಡು ದಳಂಗಳು. ವಿಶುದ್ಧದಲ್ಲಿ ಪ್ರಮಾಣಕ್ಕೆ ಪೂರ್ವಾತ್ಮನಾದ ಜೀವನೇ ಸ್ಥಾನ, ಸಂಶಯಕ್ಕೆ ಆಗ್ನೇಯಾತ್ಮವಾದ ಮನವೇ ಸ್ಥಾನ, ದೃಷ್ಟಾಂತಕ್ಕೆ ದಕ್ಷಿಣಾತ್ಮಕವಾದ ಶರೀರವೇ ಸ್ಥಾನ, ಅವಯವಕ್ಕೆ ನೈರುತ್ಯವಾದ ಭಾವವೇ ಸ್ಥಾನ, ನಿರ್ಣಯಕ್ಕೆ ಪಶ್ಚಿಮಾತ್ಮಕವಾದ ಶಬ್ದಜ್ಞಾನವೇ ಸ್ಥಾನ, ಜಲ್ಪಕ್ಕೆ ವಾಯುವ್ಯಾತ್ಮವಾದ ಶಬ್ದಜ್ಞಾನವೇ ಸ್ಥಾನ, ಹೇತ್ವಭಾವಕ್ಕೆ ರುಚಿಜ್ಞತ್ವವೇ ಸ್ಥಾನ. ಜಾತಿಯೆಂದರೆ ಪದಾರ್ಥನಿಷ*ಧರ್ಮ. ಆ ಧರ್ಮಕ್ಕೆ ಈಶಾನ್ಯಾತ್ಮನಾದ ಶಿವನೇ ಸ್ಥಾನ, ಪ್ರಮೇಯಕ್ಕೆ ಶ್ರೋತ್ರದಲ್ಲಿರ್ಪ ವಿಶುದ್ಧರೂಪಮಾದ ಪೂರ್ವಾಕಾಶವೇ ಸ್ಥಾನ, ಪ್ರಯೋಜನಕ್ಕೆ ಧಾವತೀರೂಪಮಾದ ಆಗ್ನೇಯಾಕಾಶವೇ ಸ್ಥಾನ, ಸಿದ್ಧಾಂತಕ್ಕೆ ಪದದಲ್ಲಿರ್ಪ ದಕ್ಷಿಣಾಕಾಶವೇ ಸ್ಥಾನ, ತರ್ಕಕ್ಕೆ ಮಲವಿಸರ್ಜನರೂಪವಾದ ನೈರುತ್ಯಾಕಾಶವೇ ಸ್ಥಾನ, ಛಲಕ್ಕೆ ಜಿಹ್ವೆಯಲ್ಲಿ ವಾಗ್ರೂಪಮಾಗಿರ್ಪ ಉತ್ತರಾಕಾಶವೇ ಸ್ಥಾನ, ನಿಗ್ರಹಕ್ಕೆ ಉಪದೇಶಮಧ್ಯದಲ್ಲಿರ್ಪ ಈಶಾನ್ಯಾಕಾಶವೇ ಸ್ಥಾನ. ಇಂತು ಆತ್ಮಾಕಾಶಮಾಗಿರ್ಪ ಷೋಡಶದಳಂಗಳಿಂ ಪ್ರಕಾಶಿಸುತ್ತಿರ್ಪುದೇ ವಿಶುದ್ಧಿಚಕ್ರವು. ತದ್ಬೀಜಮಾಗಿರ್ಪ ಷೋಡಶಸ್ವರಂಗಳಲ್ಲಿ ಹ್ರಸ್ವಸ್ವರಂಗಳೆಲ್ಲವೂ ಆತ್ಮಚಕ್ರಬೀಜ ದೀರ್ಘಸ್ವರಂಗಳೆಲ್ಲವೂ ಆಕಾಶಚಕ್ರಬೀಜ, ಮುಕುಳನವೇ ಹ್ರಸ್ವ ; ಅದು ಆತ್ಮರೂಪಮಾದ ಸಂಹಾರಮಯಮಾಗಿಹುದು. ವಿಕಸನವೇ ದೀರ್ಘ; ಅದು ಮಿಥ್ಯಾರೂಪಮಾದ ಸೃಷ್ಟಿಮಯಮಾಗಿಹುದು. ಇಂತಪ್ಪ ಆತ್ಮಾಕಾಶಚಕ್ರಗಳೆರಡೂ ಏಕಾಕಾರಮಾಗಿರ್ಪುದೇ ವಿಶುದ್ಧಿಚಕ್ರವು. ಅನಾಹತದಲ್ಲಿ ತನುವಿಗೆ ಪೂರ್ವರೂಪಮಾದ ವಾಯುವೇ ಸ್ಥಾನ, ನಿಧನಕ್ಕೆ ವಾಸನಾಗ್ರಹಣರೂಪಮಾದ ಆಗ್ನೇಯವಾಯುವೇ ಸ್ಥಾನ, ಸಹಜವೆಂದರೆ ಪ್ರಕೃತಿ, ಆ ಸಹಜಕ್ಕೆ ದಕ್ಷಿಣರೂಪಮಾದ ವಿಸರ್ಜನವಾಯುವೇ ಸ್ಥಾನ, ಸೂಹೃತಿಗೆ ನೈರುತ್ಯರೂಪಮಾದ ಗರ್ಭವಾಯುವೇ ಸ್ಥಾನ, ಸುತಕ್ಕೆ ಪಶ್ಚಿಮದಲ್ಲಿರ್ಪ ಹೃದಯವಾಯುವೇ ಸ್ಥಾನ, ರಿಪುವಿಗೆ ಕಂಠದಲ್ಲಿ ವಾಯವ್ಯರೂಪಮಾಗಿರ್ಪ ಉತ್ಕøಷ್ಟಘೋಷವಾಯುವೇ ಸ್ಥಾನ, ಜಾಯಕ್ಕೆ ಉತ್ತರದಲ್ಲಿರ್ಪ ಜಿಹ್ವಾಚಲನವಾಯುವೇ ಸ್ಥಾನವಾಯಿತ್ತು. ನಾದವಿಸರ್ಜನಸ್ಥಾನವೇ ಜಿಹ್ವಾಚಲನ, ಬಿಂದುವಿಸರ್ಜನಸ್ಥಾನವೇ ಜಾಯೆ, ಜಾಯೆಯಿಂದಾದ ಸುತಾದಿ ರೂಪಗಳಿಗೆ ಜಿಹ್ವಾವಾಯುವಿನಿಂದಾದ ನಾಮವೇ ಕ್ರಿಯಾಸಂಬಂಧಮಾದುದರಿಂದಲೂ ಪತಿವಾಕ್ಯವನನುಸರಿಸುವುದೇ ಸತಿಗೆ ಧರ್ಮವಾದುದರಿಂದಲೂ ಜಾಯಿಗೆ ಜಿಹ್ವಾವಾಯುವೇ ಸ್ಥಾನವಾಯಿತ್ತು . ನಿಧನಕ್ಕೆ ಜಿಹ್ವಾವಾಯುವಿಗೂ ನಾಸಿಕಾವಾಯುವಿಗೂ ಸಂಧಿಯಲ್ಲಿ ಕ್ಷಯರಹಿತಮಾದ ಅಕ್ಷರವಾಯುವೇ ಸ್ಥಾನವಾಯಿತ್ತು. ಪೂರ್ವದಲ್ಲಿರ್ಪ ಅನಾಹತಚಕ್ರದಲ್ಲಿ ಪಶ್ಚಿಮದಲ್ಲಿರ್ಪ ಪೃಥ್ವೀಚಕ್ರದ ನಾಲ್ಕುದಳಂಗಳು ಕೂಡಿರ್ಪುದರಿಂ ಅನಾಹತನಲ್ಲಿ ಹನ್ನೆರಡು ದಶಗಳಾದವು. ಅನಾಹತದಲ್ಲಿ ಬೆರೆದ ನಾಲ್ಕು ದಳಂಗಳಾವುವೆಂದರೆ : ಶರೀರರೂಪಮಾದ ಪೂರ್ವಪೃಥ್ವಿಗೂ ಪುತ್ರಾದಿರೂಪಮಾದ ದಕ್ಷಿಣಪೃಥ್ವಿಗೂ ಮಧ್ಯದಲ್ಲಿರ್ಪ ಧನರೂಪಮಾದ ಆಗ್ನೇಯಪೃಥ್ವಿಯೇ ಧರ್ಮಸ್ಥಾನಮಾಯಿತ್ತು. ಪುತ್ರಾದಿದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ನೈರುತ್ಯಪೃಥ್ವಿಯೇ ಕರ್ಮಸ್ಥಾನಮಾಯಿತ್ತು. ಶೌಚವೇ ಕರ್ಮಕ್ಕೆ ಆದಿಯಾದುದರಿಂದ ಆ ಶರೀರದೊಳಗಿರ್ಪ ಪೃಥ್ವಿಗೂ ಜಿಹ್ವೆಯಲ್ಲಿರ್ಪ ಆಹಾರೋತ್ತರಪೃಥ್ವಿಗೂ ಸಂಧಿಯಲ್ಲಿರ್ಪ ವಾಯವ್ಯಪೃಥ್ವಿಯೇ ಲಯಸ್ಥಾನಮಾಯಿತ್ತು. ಆ ಜಿಹ್ವೆಯಲ್ಲಿರ್ಪ ಪೃಥ್ವಿಗೂ ಶರೀರದಲ್ಲಿರ್ಪ ಪೃಥ್ವಿಗೂ ಸಂಧಿಯಲ್ಲಿರ್ಪ ಅನ್ನರೂಪಮಾದ ಈಶಾನ್ಯಪೃಥ್ವಿಯೇ ವ್ಯಯಸ್ಥಾನಮಾಯಿತ್ತು. ಇಂತು ಭಾವರೂಪಮಾದ ದ್ವಾದಶದಳಗಳುಳ್ಳುದೇ ಅನಾಹತಚಕ್ರವು. ಮಣಿಪೂರಕಚಕ್ರದಲ್ಲಿ ಪೂರ್ವರೂಪಮಾದ ಅಗ್ನಿಯೇ ಸ್ಥಾನವು, ಅದು ಆದಿಯಲ್ಲಿ ಶ್ರೋತ್ರವಿಷಯದಿಂದುತ್ಪನ್ನಮಾಗುತ್ತಿರ್ಪುದರಿಂ ಅದಕ್ಕೆ ಶ್ರೋತ್ರವೇ ಸ್ಥಾನಮಾಯಿತ್ತು. ಗುಹ್ಯೆಯಲ್ಲಿರ್ಪ ಅಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನವಾಗಿ ಪ್ರಕಾಶಿಸುತ್ತಿರ್ಪ ಕಾಮರೂಪಮಾದ ಆಗ್ನೇಯಾಗ್ನಿಗೆ ತ್ವಕ್ಕೇ ಸ್ಥಾನಮಾಯಿತ್ತು , ಉದರದಲ್ಲಿರ್ಪ ದಕ್ಷಿಣಾಗ್ನಿಯು ರೂಪಮಾಗಿಹುದು. ದೀಪನವೆಂದರೆ ವಾಂಛೆ, ಅಂತಪ್ಪ ವಾಂಛೆಯು ನೇತ್ರಮೂಲಕಮಾದುದರಿಂದಲೂ ರೂಪಕ್ಕೆ ನೇತ್ರವೇ ಕಾರಣಮಾದುದರಿಂದಲೂ ರೂಪಮಾಗಿರ್ಪ ಆಹಾರದಿಂದಾ ದೀಪನವೇ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಯಾಗಿ ನಾಸಿಕಾಗ್ರದಲ್ಲೇಕಮಾಗಿ ಕೂಡುತ್ತಿರ್ಪುದರಿಂದ ನಾಸಿಕಾಗ್ರದಲ್ಲಿರ್ಪ ಸಮದೃಷ್ಟಿಯು ಸಕಲಯೋಗಕ್ಕೂ ಕಾರಣಮಾಗಿರ್ಪುದರಿಂ ನೇತ್ರಾಗ್ನಿಗೆ ನಾಸಿಕವೇ ಸ್ಥಾನಮಾಯಿತ್ತು. ಪಾಣಿಗೂ ಗುಹ್ಯಕ್ಕೂ ಸಂಧಿಕಾಲಮಾಗಿರ್ಪ ಸ್ವಸ್ತ್ರೀ ವಿವಾಹಸಾಕ್ಷಿಕವಾದ ಈಶಾನ್ಯಹೋಮಾಗ್ನಿಗೂ ಜಾಯಾಪಾದವೇ ಸ್ಥಾನಮಾಯಿತ್ತು. ಲಾಜಾಹೋಮಕಾಲದಲ್ಲಿ ಜಾಯಾಪಾದದಿಂದಗ್ನಿ ಸಿದ್ಧವಾಗುತ್ತಿರ್ಪುದರಿಂ ಆ ಹೋಮಾಗ್ನಿಯನ್ನು ಪಾದದಲ್ಲಿ ತಂದು ಶಿಲೆಯಲ್ಲಿ ಆವಾಹನೆಯಂ ಮಾಡುತ್ತಿರ್ಪುದರಿಂ ಈಶ್ವರರೂಪಮಾದ ಅಗ್ನಿಗೂ ಗಿರಿಜಾರೂಪಮಾದ ಶಿಲೆಗೂ ಆ ಪಾದವೇ ಕಾರಣಮಾಗಿರ್ಪುದರಿಂ ಈಶಾನ್ಯಾಗ್ನಿಗೆ ಪಾದವೇ ಸ್ಥಾನಮಾಯಿತ್ತು . ಈ ಮಣಿಪೂರಕದಶದಳಗಳಲ್ಲಿ ಅಗ್ನಿದಳಗಳೆಂಟು, ಜಲದಳಗಳೆರಡು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಗುಹ್ಯದಳವೇ ಸ್ಥಾನಮಾಯಿತ್ತು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಯಲ್ಲಿರ್ಪ ಆಗ್ನೇಯಬಿಂದುಜಲಕ್ಕೂ ಗುದವೇ ಸ್ಥಾನಮಾಯಿತ್ತು, ಆ ಬಿಂದುವು ಗುದಸ್ಥಾನದಲ್ಲಿ ನಿಂತು ಗುಹ್ಯಮುಖದಲ್ಲಿ ನಿವೃತ್ತಿಯಾಗುತ್ತಿರ್ಪುದರಿಂ ಆ ಬಿಂದುವಿಗೆ ಗುದವೇ ಸ್ಥಾನಮಾಯಿತ್ತು. ಇಂತಪ್ಪ ದಶದಳಂಗಳುಳ್ಳುದೇ ಮಣಿಪೂರಕ. ಸ್ವಾಧಿಷಾ*ನದಲ್ಲಿ ಯಜನಕ್ಕೆ ಕರ್ಮಾಯಾಸದಿಂದುತ್ಪನ್ನಮಾಗುವ ಪೂರ್ವಜಲವೇ ಸ್ಥಾನಮಾಯಿತ್ತು. ಯಾಜನಕ್ಕೆ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಮಧ್ಯದಲ್ಲಿರ್ಪ ಜಲವೇ ಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಪಶ್ಚಿಮಜಲವೇ ಅಧ್ಯಯನಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಮಧ್ಯದಲ್ಲಿ ನಾಸಿಕದಲ್ಲಿ ವಾಸನಾಮುಖದಿಂ ದ್ರವಿಸುತ್ತಿರ್ಪ ವಾಯವ್ಯಜಲವೇ ಅಧ್ಯಾಪನಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಆನಂದಜಲವೇ ದಾನಕ್ಕೆ ಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯೆಯಲ್ಲಿರ್ಪ ಜಲಕ್ಕೂ ಮಧ್ಯದಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಪ್ರತಿಗ್ರಹಸ್ಥಾನಮಾಯಿತ್ತು. ಇಂತಪ್ಪ ಆರುದಳಂಗಳುಳ್ಳುದೇ ಸ್ವಾಧಿಷಾ*ನಚಕ್ರವು, ಆಧಾರದಲ್ಲಿ ಬ್ರಹ್ಮಚರ್ಯಕ್ಕೆ ತನುವೇ ಸ್ಥಾನಮಾಯಿತ್ತು. ಬ್ರಹ್ಮಚರ್ಯವೆಂದರೆ ಕರ್ಮ. ``ಶರೀರಮಾಧ್ಯಂ ಖಲು ಧರ್ಮಸಾಧನಂ'' ಎಂದಿರುವುದರಿಂದ ಆ ಕರ್ಮಮೂಲವೇ ಶರೀರಮಾದುದರಿಂದದಕ್ಕೆ ದೇಹವೇ ಸ್ಥಾನಮಾಯಿತ್ತು. ಪುತ್ರಾದಿ ದಕ್ಷಿಣಪೃಥ್ವಿಯೇ ಗೃಹಸ್ಥಸ್ಥಾನಮಾಯಿತ್ತು. ಶರೀರದೊಳಗೆ ಮಾಂಸಾದಿಧಾತುರೂಪಮಾಗಿರ್ಪ ಪಶ್ಚಿಮಪೃಥ್ವಿಯೇ ವಾನಪ್ರಸ್ಥಮಾಯಿತ್ತು. ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಯೇ ಪರಿಶುದ್ಧಮಾಗಿ ಶಿವಪ್ರಸಾದಕಾರಣಮಾಗಿರ್ಪುದು. ಜಿಹ್ವೆಯಲ್ಲಿರ್ಪ ಅನ್ನವೇ ದೀಪನಹರಣವೂ ತೃಪ್ತಿಕಾರಣವೂ ಜ್ಞಾನಾನಂದಕಾರಣವೂ ಆಗಿರ್ಪುದು. ಅಂತಪ್ಪ ಅನ್ನವೇ ಕೇವಲ ಸತ್ವಸ್ವರೂಪಮಾಗಿ ರಕ್ಷಣರೂಪಮಾದುದರಿಂದಾ ಸತ್ವವು ಸ್ಥಾನಮಾಗಿರ್ಪುದೇ ಸಂನ್ಯಾಸವು, ಇಂತಪ್ಪ ಚತುರ್ದಳಂಗಳಿಂದೊಪ್ಪುತ್ತಿರ್ಪುದೇ ಆಧಾರಚಕ್ರವು. ಪೃಥ್ವಿಗೆ ಈಶಾನ್ಯರೂಪಮಾಗಿರ್ಪ ಅನ್ನವೇ ಆಧಾರಚಕ್ರದಲ್ಲಿ ಆಚಾರಲಿಂಗಮಾಯಿತ್ತು. ಆ ಅನ್ನವೇ ಪ್ರಾಣಮಾಗಿರ್ಪುದರಿಂ ನಾಸಿಕವನನುಸರಿಸುತ್ತಿರ್ಪುದು. ಜಲಕ್ಕೆ ಈಶಾನ್ಯಮಾಗಿರ್ಪ ದಯಾರಸವೇ ಸ್ವಾಧಿಷಾ*ನದಲ್ಲಿ ಗುರುಲಿಂಗಮಾಯಿತ್ತು. ಅದು ಜಿಹ್ವಾಮುಖದಿಂ ರಕ್ಷಿಸುತ್ತಿರ್ಪುದರಿಂ ಜಿಹ್ವೆಯನನುಸರಿಸುತ್ತಿರ್ಪುದು. ಅಗ್ನಿಗೆ ಈಶಾನ್ಯವಾದ ಹೋಮಾಗ್ನಿಯೇ ಮಣಿಪೂರಕದಲ್ಲಿ ಶಿವಲಿಂಗಮಾಯಿತ್ತು. ಅದು ಯಾವಜ್ಜೀವವೂ ಅಗ್ನಿಗಿಂತಲೂ ಭಿನ್ನಮಾಗದೆ ಪ್ರಕಾಶಿಸುತ್ತಿರುವುದರಿಂ ತೇಜೋಮಯವಾದ ನೇತ್ರವನನುಸರಿಸುತ್ತಿರ್ಪುದು. ವಾಯುವಿಗೆ ಈಶಾನ್ಯರೂಪಮಾದ ಅಕ್ಷರಮಯಮಾದ ಮಂತ್ರವಾಯುವೇ ಅನಾಹತದಲ್ಲಿ ಜಂಗಮಲಿಂಗಮಾಯಿತ್ತು. ಅದು ಕ್ಷಯವಿಲ್ಲದ್ದು ; ಆ ಮಂತ್ರವು ಶರೀರವನ್ನು ಪವಿತ್ರವಂ ಮಾಡಲು, ಶರೀರ ಪೂರ್ವವಾಸನೆಯಳಿದು ಮಂತ್ರಮಯಮಾಗಿರ್ಪುದರಿಂ ತ್ವಕ್ಕನ್ನನುಸರಿಸಿರ್ಪುದು. ಆಕಾಶಕ್ಕೆ ಈಶಾನ್ಯಮಾದ ಉಪದೇಶಾಕಾಶವೇ ವಿಶುದ್ಧದಲ್ಲಿ ಪ್ರಸಾದಲಿಂಗಮಾಯಿತ್ತು. ಅದು ಪರತತ್ವಮಯಮಾಗಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು. ಆತ್ಮನಿಗೆ ಈಶಾನ್ಯದಲ್ಲಿರ್ಪ ಶಿವಜ್ಞಾನವೇ ಆಗ್ನೇಯದಲ್ಲಿ ಮಹಾಲಿಂಗಮಾಯಿತ್ತು . ಅದು ಮನದೊಳ್ಕೂಡಿ ಪಂಚೇಂದ್ರಿಯಂಗಳಿಗೂ ಮನಸ್ಸೇ ಚೈತನ್ಯಮಾಗಿರ್ಪಂತೆ, ಪಂಚಲಿಂಗಂಗಳಿಗೆ ತಾನೇ ಚೈತನ್ಯಮಾಗಿ ದೃಷ್ಟವಶದಿಂದುದಿಸಿದ ಕಾರಣ ಆ ದೃಷ್ಟಕಾರಣಮಾದ ಲಲಾಟವನನುಸರಿಸಿರ್ಪುದು. ಆ ಶಿವಜ್ಞಾನದಿಂ ಗುರುಮುಖದಿಂದುದಿಸಿದ ಕರ್ಮಯೋಗ್ಯಮಾದುದೇ ಇಷ್ಟಲಿಂಗವು. ಆತ್ಮತೇಜಸ್ಸನ್ನೇ ಬಹಿಷ್ಕರಿಸಿ ಹೋಮಾಗ್ನಿಯಂ ಪ್ರಬಲವಂ ಮಾಡಿ ಇಷ್ಟಲಿಂಗಪ್ರಸಾದಸಾಮಗ್ರಿಯನಾಹುತಿಗೊಟ್ಟು, ಆ ತೇಜಸ್ಸನ್ನಾತ್ಮಸಮಾರೋಪಣೆಯಂ ಮಾಡಿ, ತದ್ಯಜನಶೇಷಮಾಗಿರ್ಪ ರುಚಿಮಯದಿವ್ಯತೇಜಸ್ಸೇ ಶಿವಧ್ಯಾನರೂಪಮಾದ ಪ್ರಾಣಲಿಂಗಾನುಭವವು. ಆ ಶಿವಧ್ಯಾನದಿಂದ ಗುರೂಪದೇಶಸಿದ್ಧಮಾಗಿರ್ಪ ಮಹಪ್ರಕಾಶವೇ ಪ್ರಾಣಲಿಂಗವು. ತೃಪ್ತಿರೂಪಮಾದ ತತ್ವಾನುಭಾವವೇ ನಿಜಾನುಭವಮಾಗಿರ್ಪುದೇ ಭಾವಲಿಂಗವು. ಗುರುದತ್ತವಾದಿಷ್ಟಲಿಂಗದಿಂ ಶರೀರವು ಪೂತಮಾಗಿ, ಜಂಗಮದತ್ತ ಶಿವಧ್ಯಾನತೇಜಸ್ಸಿನಿಂ ಪ್ರಾಣವು ಪವಿತ್ರಮಾಗಿ ಮಹಾಚಿದ್ರೂಪಮಾದ ಶಿವಜ್ಞಾನನಿಮಿತ್ತಸಿದ್ಧಿಯಿಂ ಭಾವವು ಪರಿಶುದ್ಧಮಾಗಿ, ಆ ಶರೀರವೇ ಇಷ್ಟಲಿಂಗಕರಣಮಾಗಿಯೂ ಪ್ರಾಣವೇ ಧ್ಯಾನಕರಣಮಾಗಿಯೂ ಭಾವವೇ ಸಿದ್ಧೀಕರಣಮಾಗಿಯೂ ಆ ಕರಣಂಗಳ್ಗೆ ಶಕ್ತಿಯಾಗಿಯೂ ಇರ್ಪುದರಿಂದಾ ಲಿಂಗವೇ ಪತಿ ತಾನೇ ಸತಿಯಾಗಿರ್ಪುದರಿಂದೆರಡರಸಂಗವೇ ಪರಮಾನಂದಮಯಮಾಗಿರ್ಪುದೇ ಪರಿಣಾಮವು. ಅಂತಪ್ಪ ಲಿಂಗಸಂಗಪರಮಾನಂದರಸದಿಂ ಪರವಶನಾಗುವಂತೆನ್ನಂ ಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಹಸನ ಮಾಡಿ ಹರಗಿ ಹೊಲದಲ್ಲಿ ಕಸವ ಬಿತ್ತುವ ಮರುಳರಂತೆ, ವಿಷಯಸುಖಂಗಳಿಗೆ ಹುಸಿಯನೆ ನುಡಿದು, ಗಸಣೆಗೊಳಗಾಗುವ ಮನುಜರೆತ್ತ ಬಲ್ಲರೊ, ಮಹಾಘನಗುರುವಿನ ನೆಲೆಯ ? ಮರಣಬಾಧೆಗೊಳಗಾದವರು ನಿಮ್ಮನೆತ್ತ ಬಲ್ಲರೊ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ನೀರಗೋಳಿಯ ನೆತ್ತರವ ಕುಡಿದವನು, ಹಂಸನ ಪಾಕವನೆತ್ತ ಸೇವಿಸಬಲ್ಲ ಹೇಳಾ ! ಮಿಥ್ಯಸಂಸಾರದೊಳ್ಮುಳುಗಿ ತೇಕ್ಯಾಡುವ ಅನಿತ್ಯ ಮೂಢಪ್ರಾಣಿ ತಾನೆತ್ತಬಲ್ಲುದು ಹೇಳಾ ಗುರುನಿರಂಜನ ಚನ್ನಬಸವಲಿಂಗೈಕ್ಯ ನಿಜಗಡಲಸುಖವನು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂಬತ್ತು ಬಾಗಿಲ ಮನೆಯೊಳಗೆ ಒಂದು ಪಕ್ಷಿ ಇಂಬನರಿತು ಗೂಡನಿಕ್ಕುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕ್ಕೆ ಬುಡವೊಂದು, ಕೊನೆ ಮೂರು, ಆರು ಕಂಬದ ಶಿವಾಲಯವ ರಚಿಸಿ, ಇಪ್ಪತ್ತೈದು ಸೋಪಾನಂಗಳ ಮಾಡಿ, ಐವತ್ತೆರಡು ಎಸಳಿನಿಂದ ರಚಿಸಿ ಆಡುವ ಹಂಸನ ಒಬ್ಬ ಸತಿಯಳು ಹಿಡಿದು, ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಈರೇಳು ಭುವನ Zõ್ಞರಾಸಿಲಕ್ಷ ಯೋನಿಮುಖಜೀವರಾಶಿಗಳೊಳಗೆ ಓರಂತೆ ತೊಳಲುತ್ತಿಪ್ಪ ಹಂಸನ ಗತಿಗೆಡಿಸುವ ರಮ ಪಶುಪಾಶಪತಿ ಜ್ಞಾನದ ಪದವನರುಹುವ ಗುರುವಿನ ಮಥನವೆ ಗುರುವಿನ ಶೇಷ. ಹೃತ್ಕುಂಡಲದ್ವಾದಶಾಂತತ್ರಿತತ್ವದ ಮೇಲೆ ತನ್ನ ಜೀವವು ಶಾಂತ್ಯತೀತವಾದ ತಾನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಗುರುಭಕ್ತಪ್ರಸಾದಿಯ ಹೊಲಬಿನ ಸಂಗದಿಂದ ಲಿಂಗಸುಸಂಗವೇದ್ಯ.
--------------
ಉರಿಲಿಂಗಪೆದ್ದಿ
ಪರೀಕ್ಷೆಯನಾರು ಬಲ್ಲರು ? ಪರೀಕ್ಷೆಯನಾರು ಬಲ್ಲರು ? ನಾದಬಿಂದುವಿನ ವಿಕೃತಿಯೊಳಗಣ ಹಂಸನ ಸ್ಥಳವಿಟ್ಟಾತ, ಶಶಿಧರನಲ್ಲದೆ ಮತ್ತೊಬ್ಬನಿಲ್ಲ. ಲೋಲುಪ್ತರಾದವರೆಲ್ಲ, ಹಂಸನ ವಂಶಿಕರಲ್ಲದೆ, ಸುಪ್ಪಾಣಿಯಂತೆ ಸುಪಥವಾದ ಶರಣಂಗೆ ಹತ್ತೂದೆ ಲೌಕಿಕಾರ್ಥ ? ಮುತ್ತ ಹುಳಿತಡೆ, ನಾತ ಹುಟ್ಟುವದೆ ಲೋಕದಲ್ಲಿ ? ಬಯಕೆವಂತರೆಲ್ಲ ಐಕ್ಯವಂತರಹರೆ ? ಹೊನ್ನು ಧರೆಯ ಮೇಲೆ ಬಿದ್ದರೆ, ನಿಟ್ಟೈಸುವದೆ ? ಗಂಭೀರದ ತೆರನನರಿಯದವನ ನಿಧಿ, ಪರಮಪರೀಕ್ಷೆಯನರಿಯದೆ, ಪರುಷದಂತಿಪ್ಪ ಮಹಂತ ಧರೆಯ ಮೇಲೆ, ಕಾರಮೇಘ ಸುರಿದು, ನದಿಯ ಬೆರಸುವಂತೆ, ಧರೆಯೊಳಗೆ ಹುಟ್ಟಿದ ಪುಣ್ಯಲಂಗಳ ಮಾಡಿ. ನಿಮ್ಮ ಬೆರಸುವನೆ, ಸಕಳೇಶ್ವರದೇವಾ ನಿಮ್ಮ ಶರಣ.
--------------
ಸಕಳೇಶ ಮಾದರಸ
ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ? ಶಿವಜ್ಞಾನವೆಂಬ ಕೊಡಲಿಗೆ ನಿಶ್ಚಿತವೆಂಬ ಕಾವನಿಕ್ಕಿ ಅಷ್ಟದುಡಿಯೆಂಬ ಅಡವಿಯನೆ ಕಡಿದು ಕುಟಿಲ ಕುಹಕವೆಂಬ ಕಿಚ್ಚ ಹತ್ತಿಸಿ ಸುಟ್ಟು ಲೋಭತ್ವವೆಂಬ ಬಟ್ಟೆಯನೆ ಕಟ್ಟಿ ಶಿವಭಕ್ತರ ನುಡಿಯೆಂಬ ಹಿಂಗಲ್ಲನಿಕ್ಕಿ ವೈರಾಗ್ಯವೆಂಬ ಹಡಗಂ ಹತ್ತಿಸಿ ದೃಷ್ಟ ಮುಟ್ಟಿಯೆಂಬ ನೇಗಿಲಿಗೆ ಅವಧಾನವೆಂಬ ಮೀಣಿಯನಳವಡಿಸಿ ಜೀವಭಾವವೆಂಬ ಎರಡೆತ್ತುಗಳ ಹೂಡಿ ಅರುಹೆಂಬ ಹಗ್ಗವನೆ ಹಿಡಿದು ಎಚ್ಚರಿಕೆಯೆಂಬ ಬಾರುಕೋಲ ತಳೆದುಕೊಂಡು ಒತ್ತಿನೂಕಿ ಭೂಮಿಯ ಹಸನ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ಅನೀತಿಯೆಂಬ ಗಾಳಿ ಬೀಸಿ ವಿಷಯವೆಂಬ ಮಳೆ ಸುರಿದು ಹದನಾರದ ಮುಂಚೆ ಅರುಹೆಂಬ ಬೀಜವನೆ ಬಿತ್ತಿ ಪ್ರಸಾದವೆಂಬ ಗೊಬ್ಬರವನೆ ತಳೆದು ಆಚಾರವೆಂಬ ಸಸಿಹುಟ್ಟಿ ಪ್ರಪಂಚೆಂಬ ಹಕ್ಕಿ ಬಂದು ಹಕ್ಕಲ ಮಾಡದ ಮುನ್ನ ನೆನಹೆಂಬ ಕವಣೆಯನೆ ತೆಕ್ಕೊಂಡು ನಾಲ್ಕು ದಿಕ್ಕಿನಲ್ಲಿ ನಿಂತು ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯಯೆಂದು ಅರ್ಭಟಿಸುತಿರ್ದನಯ್ಯ ಇಂತು ಈ ಬೆಳಸು ಸಾಧ್ಯವಾಯಿತ್ತು. ಉಳಿದವರಿಗಸಾಧ್ಯಕಾಣಾ, ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಹಾದಿಹೊಲವ ಮಾಡಿ, ಮೂರೆತ್ತು ಹೂಡಿ, ಆ ಮೂರೆತ್ತಿಗೆ ಒಂದು ನೊಗ ಕಟ್ಟಿ, ನೇಗಲಿಯ ಹೂಡಿ, ಕರಕಿಯ ಬಿಟ್ಟು ಕಣಗಿಲ ತೆಗೆದು, ಹೊಲ ಹಸನ ಮಾಡಿ, ಗೋದಿ, ಕಡಲೆ, ಜೋಳ ಮೊದಲಾದ ಹದಿನೆಂಟು ಧಾನ್ಯ ಜೀನಸವಿಲ್ಲದೆ ಬಿತ್ತಿಬೆಳೆದು ಹಕ್ಕಿ ಹೊಡೆಯದೆ ಹೊಲವ ಮಾಡಿ ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->