ಅಥವಾ

ಒಟ್ಟು 26 ಕಡೆಗಳಲ್ಲಿ , 10 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ, ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ, ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ, ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ, ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ, ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ, ಅಜ್ಞಾನದಿಂದ ಹುಟ್ಟಿತ್ತು ಸಂಸಾರ, ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ, ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚು, ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ, ಕೂಡಲಸಂಗಮದೇವಾ, ಈ ಅಜ್ಞಾನಭ್ರಮೆಯ ಕೆಡಿಸಿದಲ್ಲದೆ ನಿಮ್ಮನೊಡಗೂಡಬಾರದಯ್ಯಾ.
--------------
ಬಸವಣ್ಣ
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ ಇರುವುದಕ್ಕೆಯಿಂಬುಗಾಣದವಂಗೆ ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯಾ, ಗುರುದ್ರವ್ಯ, ಗಣದ್ರವ್ಯ, ಭಕ್ತದ್ರವ್ಯ, ಚರದ್ರವ್ಯ, ಪರದ್ರವ್ಯ, ರಾಜದ್ರವ್ಯ, ತಂದೆ-ತಾಯಿ ಬಂಧು-ಬಳಗ ಭಾವ-ಮೈದುನ ನಂಟುತನದ ದ್ರವ್ಯ, ಕುಂತ ನಿಂತ ಸಹಾಸದ್ರವ್ಯ, ನೋಡಕೊಟ್ಟದ್ರವ್ಯ, ನೂರೊಂದುಕುಲ ಹದಿನೆಂಟು ಜಾತಿಯ ದ್ರವ್ಯ, ಬೀದಿ ಬಾಜಾರದಲ್ಲಿ ಬಿದ್ದ ದ್ರವ್ಯ, ಹಾದಿಪಥದಲ್ಲಿ ಬಿದ್ದ ದ್ರವ್ಯ, ಹಕ್ಕಿಪಕ್ಕಿ ತಂದಿಟ್ಟ ದ್ರವ್ಯ, ಮದುವೆ ಶುಭಶೋಭನದಾಸೋಹದ ದ್ರವ್ಯ ಮೊದಲಾಗಿ ಕಳ್ಳಕಾಕರ ಸಂಗದಿಂದ ಚೋರತನದಿಂದಪಹರಿಸಿ, ಜನ್ಮ ಜನ್ಮಾಂತರದಲ್ಲಿ ಭವಪಾತಕಕ್ಕೆ ಗುರಿಯಾಯಿತಯ್ಯ ಎನ್ನ ಪಾಣೇಂದ್ರಿಯವು. ಇಂಥ ಅಜ್ಞಾನದಿಂದ ತೊಳಲುವ ಜನ್ಮ ಜಡತ್ವವನಳಿದುಳಿದು ನಿಮ್ಮ ಸದ್ಭಕ್ತ ನಿಜಶರಣ ದೇವರದಾಸಿಮಯ್ಯನ ದಾಸಿಯ ಪಾದವನೊರಸಿ ಬಾಳುವಂತೆ ಮಾಡಯ್ಯ ಕರುಣಾಳಿ ಎನ್ನಾಧಾರಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ತನುಲಿಂಗವೆಂದೆಂಬ ಅದ್ವೈತಿಯ ಮಾತ ಕೇಳಲಾಗದು. ಮನಲಿಂಗವೆಂದೆಂಬ ಮೂರ್ಖನ ಮಾತ ಕೇಳಲಾಗದು. ಪ್ರಾಣಲಿಂಗವೆಂದೆಂಬ ಪ್ರಪಂಚಿಗಳ ಮಾತ ಕೇಳಲಾಗದು. ತನುಲಿಂಗವಾದರೆ ಹೊನ್ನು ಹೆಣ್ಣು ಮಣ್ಣು ಮೂರೆಂಬ ಅನ್ಯವಿಷಯಕ್ಕೆ ಸಿಲ್ಕಿ ಅನಂತ ಪಾಡಿಗೆ ಗುರಿಯಾಗಬಹುದೇ ? ಮನಲಿಂಗವಾದರೆ ಮನವಿಕಾರದ ಭ್ರಮೆಯಲ್ಲಿ ತೊಳಲಿ ಬಳಲಿ ಅಜ್ಞಾನಕ್ಕೆ ಗುರಿಯಾಗಬಹುದೇ ? ಪ್ರಾಣಲಿಂಗವಾದರೆ ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹೂಳಿಸಿಕೊಳಬಹುದೇ ? ತನು ಮನ ಪ್ರಾಣಲಿಂಗವಾದರೆ ಜನನ ಮರಣವೆಂಬ ಅಣಲಿಂಗೆ ಗುರಿಯಾಗಿ ನಾನಾ ಯೋನಿಯಲ್ಲಿ ತಿರುಗಬಹುದೇನಯ್ಯಾ ? ತನು ಮನ ಪ್ರಾಣವಾ ಘನಮಹಾಲಿಂಗಕ್ಕೆ ಸರಿಯೆಂದು ಅಜ್ಞಾನದಿಂದ ತನುವೆ ಲಿಂಗ ಮನವೆ ಲಿಂಗ ಪ್ರಾಣವೆ ಲಿಂಗವೆಂದು ಇಷ್ಟಲಿಂಗವ ಜರಿದು ನುಡಿವ ಭ್ರಷ್ಟ ಬಿನುಗು ದುರಾಚಾರಿ ಹೊಲೆಯರ ನಾಯಕನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭವತಿಮಿರವೆಂಬ ಅಜ್ಞಾನದಿಂದ ಮುಸುಕಿಕೊಂಡು, ಕಾಣಬಾರದೆಯಿದ್ದ ಕಣ್ಣಿಂಗೆ ಜ್ಞಾನವೆಂಬ ಅಂಜನವನೆಚ್ಚು ಶಿವಪಥವಿದೆಂದು ತೋರಿಸಿದ ಸದ್ಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಜ್ಞಾನದಿಂದ ಮೋಕ್ಷಕರ್ತೃ ಇಲ್ಲವೆಂದು ಸುಜ್ಞಾನಕ್ಕೆ ಗುರುವಿನ ದಯವಾಗಿ, ಸಕೀಲವರಿಯಲಾಗಿ ಒಂಬತ್ತು ಬಾಗಿಲ ಮುಚ್ಚಿ ಒಳಯಕ್ಕೆ ಒಬ್ಬರನೂ ಬಿಡಬೇಡೆಂದು ಒಮ್ಮನ ಮಾಡು, ಸುಮ್ಮನೆ ನೀಡು, ಗಮ್ಮನೆ ಕಳುಹು ಎಂದರು. ಮುಂದೆ ನಮ್ಮ ದೇವನ ಬಳಿಯಲ್ಲಿ ಸಂಭ್ರಮದ ಪೂಜೆಯಾಗಿಟ್ಟ ಎಡಬಲನ ಮುರಿದು ಬೀಗದ ಕೈಕೊಂಡು ಕುಂಭಿನಿ ಬಾಗಿಲ ಕದವ ತೆಗೆದು, ಒಳಪೊಕ್ಕು ಒಂದಾನೊಂದು ಕಟ್ಟಳೆಯ ಮಾಡಿ ಪರತತ್ವದಲ್ಲಿ ಬೆರಸಿದ ನಿಷ*ಕ್ಕೆ ದೇವನೆಂದು ನಮೋ ನಮೋ ಎಂದು ನಂಬುವರು ಕಾಣಾ ಎಂದು ನುಡಿವ ಮದೃಷ್ಟವುಳ್ಳವರು ದೃಷ್ಟಿಯಲಿ ನೋಡಿದುದೆಲ್ಲ ಲಯದಲ್ಲಿ ಅಡಗಿತು ಕಾಣಾ. ಲಯವಾದವರಿಗೆ ಇನ್ನೆಲ್ಲಿ ಮುಕ್ತಿಯೋ ? ಲಯಭಯಕ್ಕೆ ವಿರಹಿತನಾಗಿ ವೇದಾಂತ ಮಹಾನುಭಾವದಿಂದ ತಿಳಿದು ತನ್ನ ತಾನರಿದು ತಾನಾರೆಂದು ತಿಳಿದು ತಮ್ಮುವಳಿದು ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಮುನ್ನ ಶಿವ ಕೊಟ್ಟ ಆಯುಷ್ಯವುಂಟೆಂದು, ವ್ಯಾಘ್ರವ ಗುಹೆಯಿಂ ಇನ್ನು ತೆಗೆವರುಂಟೆ ? ಉನ್ನತ ಉತ್ಪತ್ಯವೆಲ್ಲಾ ಶಿವನಿಂದಾಯಿತ್ತು. ನಿನ್ನ ಧನವನುಂಡು, ತಮ್ಮ ಅಜ್ಞಾನದಿಂದ ತಾವರಿಯದೆ ಹೋಗಿ, ತನ್ನ ಕಾಡಿನ ಮೇಲೆ ಕಾಗೆಗೆ ಕಾಳ ಚಲ್ಲಿ, ಪಿತರುಂಡೆರೆಂದು ಕುನ್ನಿಗಳು ಮರುಳಾದರು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ, ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ ಇರುವುದಕ್ಕೆಯಿಂಬುಗಾಣದವಂಗೆ, ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ, ನಮೋನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯಾ, ಚಂದಚಂದವುಳ್ಳ ವೃಷಭ, ಚಂದಚಂದವುಳ್ಳ ವಾಜಿ, ಚಂದಚಂದವುಳ್ಳ ಆನೆ, ಚಂದಚಂದವುಳ್ಳ ಅಂದಳ, ಚಂದಚಂದವುಳ್ಳ ಪರಿಯಂಕ, ಚಂದಚಂದವುಳ್ಳ ಮೇಲುಪ್ಪರಿಗೆ, ಚಂದಚಂದವುಳ್ಳ ಜಾಡಿ-ಜಮಕಾನ-ಚಿತ್ರಾಸನ, ಚಂದಚಂದವುಳ್ಳ ಮಣಿಪೀಠ, ಚಂದಚಂದವುಳ್ಳ ಲೇಪು ಸುಪ್ಪತ್ತಿಗೆ, ಚಂದಚಂದವುಳ್ಳ ಪಟ್ಟುಪಟ್ಟಾವಳಿ ಹಾಸಿಗೆಯ ಮೇಲೆ ನಿಮ್ಮ ಶರಣಗಣಂಗಳ ಸಮೂಹವ ಮೂರ್ತವ ಮಾಡಿಸಿ, ಭೃತ್ಯಭಕ್ತಿಯ ಮಾಡದೆ ಮೂಲಹಂಕಾರದಿಂದ ತಾನೆ ಕುಂತು ನಿಂತು ಮಲಗಿ ನಿಜಗೆಟ್ಟಿತಯ್ಯ ಎನ್ನ ಪಾಯ್ವೇಂದ್ರಿಯವು. ಇಂಥ ಅಜ್ಞಾನದಿಂದ ಕೆಡಗುಡದೆ ನಿಮ್ಮ ಸದ್ಭಕ್ತ ಸದಾಚಾರಿ ಶಿವಶರಣ ಮೇದಾರಕೇತಯ್ಯಗಳ ಮನೆಯ ತೊತ್ತಿನ ರಕ್ಷೆಯ ಕಾಯ್ವಂತೆ ಮಾಡಯ್ಯ ಶ್ರೀಗುರುಲಿಂಗಜಂಗಮವೆ ! ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಕೇಳಿ ಭೋ ! ಕೇಳಿ ಭೋ ! ವಿಪ್ರರೆಲ್ಲರೂ ಬ್ರಹ್ಮಾಂಡಪುರಾಣದಲ್ಲಿ ನಿಮ್ಮ ಬ್ರಹ್ಮ ನುಡಿದ ವಾಕ್ಯವು; ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞಾನವೇದಿನಾಂ ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಬಭೂ ಎಂದುದಾಗಿ ನಂಬಿ ಧರಿಸಿ ಭೋ ! ವಿಪ್ರರೆಲ್ಲರೂ ಶ್ರೀಮಹಾಭಸಿತವ. ಇದ ನಂಬಿಯೂ ನಂಬದೆ ಅಜ್ಞಾನದಿಂದ ಶ್ರೀಮಹಾಭಸಿತವ ಬಿಟ್ಟು, ಮಣ್ಣು ಮಸಿ ಮರದ ರಸಂಗಳ ಮೋಹದಿಂದ ನಿಮ್ಮ ಹಣೆಯಲ್ಲಿ ಬರೆದುಕೊಂಡಿರಾದಡೆ ನಮ್ಮ ಕೂಡಲಸಂಗಮದೇವರಲ್ಲಿ, ನಿಮ್ಮ ಅಧಿದೈವವೇ ನಿಮ್ಮ ಕಿವಿ ಮೂಗ ಕೊಯಿದು, ಇಟ್ಟಿಗೆಯಲೊರಸಿ, ಕನ್ನಡಿಯ ತೋರಿ, ನಡೆಸಿ ನರಕದಲ್ಲಿ ಕೆಡುಹದೆ ಬಿಡ ಕಾಣಿ ಭೋ ! ಇದನರಿದು ಮರೆಯದೆ ಧರಿಸಿ ಭೋ ! ಕೆಡಬೇಡ, ಕೆಡಬೇಡ, ಮಹತ್ತಪ್ಪ ಶ್ರೇಮಹಾಭಸಿತವ ಧರಿಸಿ ಮುಕ್ತರಾಗಿರೇ.
--------------
ಬಸವಣ್ಣ
ಅಯ್ಯಾ, ಚಂದಚಂದವುಳ್ಳ ವೃಷಭ, ಚಂದಚಂದವುಳ್ಳ ವಾಜಿ, ಚಂದಚಂದವುಳ್ಳ ಆನೆ, ಚಂದಚಂದವುಳ್ಳ ಅಂದಳ, ಚಂದಚಂದವುಳ್ಳ ಪರಿಯಂಕ, ಚಂದಚಂದವುಳ್ಳ ಮೇಲುಪ್ಪರಿಗೆ, ಚಂದಚಂದವುಳ್ಳ ಜಾಡಿ-ಜಮಕಾನ-ಚಿತ್ರಾಸನ, ಚಂದಚಂದವುಳ್ಳ ಮಣಿಪೀಠ, ಚಂದಚಂದವುಳ್ಳ ಲೇಪು ಸುಪ್ಪತ್ತಿಗೆ, ಚಂದಚಂದವುಳ್ಳ ಪಟ್ಟುಪಟ್ಟಾವಳಿ ಹಾಸಿಗೆಯ ಮೇಲೆ ನಿಮ್ಮ ಶರಣಗಣಂಗಳ ಸಮೂಹವ ಮೂರ್ತವ ಮಾಡಿಸಿ, ಭೃತ್ಯಭಕ್ತಿಯ ಮಾಡದೆ ಮೂಲಹಂಕಾರದಿಂದ ತಾನೆ ಕುಂತು ನಿಂತು ಮಲಗಿ ನಿಜಗೆಟ್ಟಿತಯ್ಯ ಎನ್ನ ಪಾಯ್ವೇಂದ್ರಿಯವು. ಇಂಥ ಅಜ್ಞಾನದಿಂದ ಕೆಡಗುಡದೆ ನಿಮ್ಮ ಸದ್ಭಕ್ತ ಸದಾಚಾರಿ ಶಿವಶರಣ ಮೇದಾರಕೇತಯ್ಯಗಳ ಮನೆಯ ತೊತ್ತಿನ ರಕ್ಷೆಯ ಕಾಯ್ವಂತೆ ಮಾಡಯ್ಯ ಶ್ರೀಗುರುಲಿಂಗಜಂಗಮವೆ ! ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ ಸಂಪನ್ನರಾದ ಭಕ್ತಜಂಗಮಕೆ ಗುರುವೊಂದು ಲಿಂಗವೊಂದು ಜಂಗಮವೊಂದು, ಪಾದೋದಕವೊಂದು, ಪ್ರಸಾದವೊಂದು ಸತ್ಯ ಸದಾಚಾರ ಸತ್ಕ್ರೀಸಮ್ಯಜ್ಞಾನಯುಕ್ತವಾದ ಸದ್‍ಭಕ್ತಿ ಒಂದಲ್ಲದೇ ಭಿನ್ನವುಂಟೆ ? ಇಲ್ಲವಾಗಿ. ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ ಗುರುಭಕ್ತಿ ಒಂದಲ್ಲದೇ ಭಿನ್ನವುಂಟೆ ? ಇಲ್ಲವಾಗಿ. ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ ಗುರುಭಕ್ತಿ ಲಿಂಗನಿಷಾ*ವಧಾನ ಜಂಗಮವಿಶ್ವಾಸ ಪ್ರಸಾದಪರಿಣತೆ ಭಕ್ತಾಚಾರವರ್ತನೆಯಿಂ ನಿಜಮುಕ್ತಿಯನೈದಲರಿಯದೆ ಅಜ್ಞಾನದಿಂದ ಅಹಂಕರಿಸಿ ಮುನ್ನ ತನ್ನ ಅನ್ವಯವಿಡಿದು ಬಂದ ನಿಜಗುರುವನನ್ಯವ ಮಾಡಿ ಭಿನ್ನವಿಟ್ಟು ಕರೆವ ಕುನ್ನಿಗಳು ನೀವು ಕೇಳಿರೋ ಗುರು ಭಿನ್ನವಾದಲ್ಲಿ ದೀಕ್ಷೆ ಭಿನ್ನ, ದೀಕ್ಷೆ ಭಿನ್ನವಾದಲ್ಲಿ ಲಿಂಗ ಭಿನ್ನ ಲಿಂಗ ಭಿನ್ನವಾದಲ್ಲಿ ಪೂಜೆ ಭಿನ್ನ, ಪೂಜೆ ಭಿನ್ನವಾದಲ್ಲಿ ಅರ್ಪಿತ ಪ್ರಸಾದ ಭಿನ್ನ ಅರ್ಪಿತ ಪ್ರಸಾದ ಭಿನ್ನವಾದಲ್ಲಿ ಅಂಗಲಿಂಗ ಸಂಬಧವನ್ನುಳ್ಳ ನಿಜವೀರಶೈವ ಷಡುಸ್ಥಲ ಆಚಾರಕ್ಕೆ ಹೊರಗಾಗಿ ನರಕಕ್ಕೆ ಇಳಿವ. ಗುರುವಾಕ್ಯವ ಮೀರಿ ಗುರುವನನ್ಯವ ಮಾಡಿ ಲಿಂಗವ ಭಿನ್ನವಿಟ್ಟು ಕಂಡು ಜಂಗಮದ ಜಾತಿವಿಡಿದು ನೇತಿಮಾಡಿ ಪ್ರಸಾದವ ಎಂಜಲೆಂದು ಅತಿಗಳೆದು ಗುರುಮಾರ್ಗವ ತಪ್ಪಿನಡೆದು ಗುರುಭಕ್ತಿ ಪರಾಙ್ಮುಖರಾದವರ ಭಕ್ತ ಜಂಗಮವೆಂದಾರಾಧಿಸಿ ಪ್ರಸಾದವ ಕೊಳಲಾಗದು ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ, ಮಲತ್ರಯಯುಕ್ತವಾದ ಒಬ್ಬ ಹೊಲಸು ಪೃಷ*ದ ನರಮನುಜನ ಜಂಗಮನೆಂದು ಕರತಂದು ಗದ್ದುಗೆಯ ಮೇಲೆ ಕುಳ್ಳಿರಿಸಿ, ಅವರ ಎದುರಿಗೆ ತಪ್ಪುತಡಿಯ ಮಾಡಿದ ಪಾತಕರ ಅಡ್ಡಗೆಡವಿ ಮೂಗಿನ ದಾರಿ ತೆಗೆವರಂತೆ, ಹೊಟ್ಟೆಗಿಲ್ಲದೆ ಒಬ್ಬ ಬಡವನು ಧನಿಕನ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವಂತೆ, ಇಂತೀ ದೃಷ್ಟಾಂತದಂತೆ ಆಶೆ ಆಮಿಷ ತಾಮಸದಿಂದ ಮಗ್ನರಾದ ಭೂತದೇಹಿಗಳ ಮುಂದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಕಚ್ಚಿ, ಸಂಸಾರವಿಷಯದಲ್ಲಿ ಮಗ್ನರಾದ ಪಾತಕ ಮನುಜರು ಅಡ್ಡಬಿದ್ದು ಪಾದಪೂಜೆಯ ಮಾಡಿ ಪಾದೋದಕಪ್ರಸಾದ ಕೊಂಬುವರು. ಇವರು ಭಕ್ತರಲ್ಲ, ಅವನು ಜಂಗಮನಲ್ಲ. ಇಂತವರು ಕೊಂಬುವದು ಪಾದೋದಕಪ್ರಸಾದವಲ್ಲ. ಇಂತಪ್ಪ ದೇವಭಕ್ತರ ಆಚರಣೆ ನಡತೆಯೆಂತಾಯಿತೆಂದೊಡೆ ದೃಷ್ಟಾಂತ: ಒಬ್ಬ ಜಾರಸ್ತ್ರಿ ತನ್ನ ಉದರಪೋಷಣಕ್ಕೆ ಆಶೆಯ ಮಾಡಿ, ಒಬ್ಬ ವಿಟಪುರುಷನ ಸಂಗವಮಾಡಿದರೆ ಅವನು ಪರುಷನಾಗಲರಿಯನು, ಅವಳು ಸತಿಯಾಗಲರಿಯಳು. ಅದೇನು ಕಾರಣವೆಂದೊಡೆ ಹೊನ್ನಿಗಲ್ಲದೆ. ಮತ್ತಂ, ಆವನೊಬ್ಬ ಜಾತಿಹಾಸ್ಯಗಾರನು ರಾಜರ ಮುಂದೆ ತನ್ನ ಜಾತಿಆಟದ ಸೋಗನ್ನೆಲ್ಲ ತೋರಿ ಆ ರಾಜರ ಮುಂದೆ ನಿಂತು ಮಜುರೆಯ ಮಾಡಿ ಮಹಾರಾಜಾ ಎನ್ನೊಡೆಯ ಎನ್ನ ತಂದೆಯೇ ಎಂದು ಹೊಗಳಿ ನಿಮ್ಮ ಹೆಸರು ತಕ್ಕೊಂಡು ದೇಶದಮೇಲೆ ಕೊಂಡಾಡೇನೆಂದು ಬೇಡಿಕೊಂಡು ಹೋಗುವನಲ್ಲದೆ ಅವನು ತಂದೆಯಾಗಲರಿಯನು, ಇವನು ಮಗನಾಗಲರಿಯನು. ಅದೇನು ಕಾರಣವೆಂದೊಡೆ: ಒಡಲಕಿಚ್ಚಿಗೆ ಬೇಡಿಕೊಳ್ಳುವನಲ್ಲದೆ. ಇಂತೀ ದೃಷ್ಟಾಂತದಂತೆ ಒಡಲ ಉಪಾಧಿಗೆ ಪೂಜೆಗೊಂಬರು ವ್ರತನಿಯಮನಿತ್ಯಕ್ಕೆ ಪೂಜೆಯ ಮಾಡುವರು ಅವರು ದೇವರಲ್ಲ, ಇವರು ಭಕ್ತರಲ್ಲ. ಅದೇನು ಕಾರಣವೆಂದೊಡೆ- ಉಪಾಧಿ ನಿಮಿತ್ಯಕಲ್ಲದೆ. ಇಂತಪ್ಪ ವೇಷಧಾರಿಗಳಾದ ಭಿನ್ನ ಭಾವದ ಜೀವಾತ್ಮರ ಪ್ರಸಾದವೆಂತಾಯಿತೆಂದಡೆ ತುರುಕ ಅಂತ್ಯಜರೊಂದುಗೂಡಿ ಸರ್ವರೂ ಒಂದೇ ಆಗಿ ತೋಳ ಬೆಕ್ಕು ನಾಯಿಗಳ ತಿಂದ ಹಾಗೆ, ಸರ್ವರೂ ತಿಂದು ಹೋದಂತೆ ಆಯಿತಯ್ಯ. ಇಂತಪ್ಪವರಿಗೆ ಭವಹಿಂಗದು ಮುಕ್ತಿದೋರದು. ಮತ್ತಂ, ಅದೆಂತೆಂದೊಡೆ: ತನುವೆಂಬ ಭೂಮಿಯ ಮೇಲೆ ಮನವೆಂಬ ಕರಿಕಂಬಳಿಯ ಗದ್ದುಗೆಯ ಹಾಕಿ, ಅದರ ಮೇಲೆ ಪರಮಶಾಂತಿ ಜ್ಞಾನವೆಂಬ ಮೇಲುಗದ್ದುಗೆಯನಿಕ್ಕಿ, ಅಂತಪ್ಪ ಪರಮಶಾಂತಿಯೆಂಬ ಮೇಲುಗದ್ದಿಗೆಯ ಮೇಲೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತವಾದ ಪರಮನಿರಂಜನವೆಂಬ ಜಂಗಮವ ಮೂರ್ತವ ಮಾಡಿಸಿ, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಆತ ಆನಾದಿ ಭಕ್ತ. ಇಂತೀ ಭೇದವ ತಿಳಿದು ಕೊಡಬಲ್ಲರೆ ಆತ ಅನಾದಿ ಜಂಗಮ. ಇಂತಪ್ಪವರಿಗೆ ಭವಬಂಧನವಿಲ್ಲ, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವದು. ಇಂತಪ್ಪ ವಿಚಾರವನು ಸ್ವಾನುಭಾವಜ್ಞಾನದಿಂ ತಿಳಿಯದೆ ಅಜ್ಞಾನದಿಂದ ಮಾಡುವ ಮಾಟವೆಲ್ಲ ಜೊಳ್ಳು ಕುಟ್ಟಿ ಹೊಳ್ಳು ಗಾಳಿಗೆ ತೂರಿದಂತೆ ಆಯಿತ್ತು ನೋಡೆಂದ ನಿಮ್ಮ ಶರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವನೊಡ್ಡಿದ ಮಾಯಾಗುಣದಿಂದ ತನ್ನ ತಾನರಿಯದೆ, ಅಜ್ಞಾನದಿಂದ ಎಂಬತ್ತನಾಲ್ಕುಲಕ್ಷ ಜೀವರಾಶಿಗಳ ಯೋನಿಯಲ್ಲಿ ಹುಟ್ಟಿ ಹುಟ್ಟಿ, ಶಿವಕಾರುಣ್ಯದಿಂದ ಮನುಷ್ಯಜನ್ಮಕ್ಕೆ ಬಂದು, ಆ ಮನುಷ್ಯಜನ್ಮದೊಳಗಧಿಕವಾದ ಶಿವಭಕ್ತಿಯ ಪಡೆದು, ಆ ಶಿವಭಕ್ತಿಯ ನೆಮ್ಮಿ ಸತ್ಯಸದಾಚಾರವಿಡಿದು ನಡೆದು. ಏಕಲಿಂಗನಿಷೆ*ಯಿಂದ ತನ್ನ ಕಷ್ಟ ಭವಂಗಳ ಗೆಲದಿರ್ದಡೆ, ಮೆಟ್ಟುವ ನರಕದೊಳಗೆ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಜ್ಞಾನಗುರುವಿನ ಶ್ರೀಪಾದವಿಡಿದ ಶಿವಕವಿ ಅತೀತನೆಂತೆನೆ : ``ಪರಬ್ರಹ್ಮಸ್ವರೂಪ ಉತ್ತಮಂ ಮುಕ್ತಿ ಸಂತತಃ ದೇವದೂತಿ ಪ್ರಸನ್ನಿತೆ ಉಭಯಮಾರ್ಗ ವರಕವಿ ಮುದಿಮಮ್ ಪ್ರಳಯಕಾಲಸ್ಯ | ಆತ್ಮತೃಪ್ತಿ ನರಕವಿ ರಾಜವಂದಿತಾ ತನ್ನಿಷ್ಟ ನರಕಪಿತಃ ತ್ರಿವಿಧ ಶಬ್ದ ಶಾಸ್ತ್ರಯಿತಾರ್ಥ ಸಮೋದ್ದಿಷ್ಟ ವಚನಧಾರಿ ನಿಷ್ಕಳಂ ||''(?) ಶ್ರೀ ಶ್ರೀ ಕವಿಗಳೆಂದು ಪೆಸರಿಟ್ಟುಕೊಂಡು ನುಡಿವಣ್ಣಗಳಿರಾ ಕಾಯದ ಕೀಲನರಿತು ಕಾವ್ಯತ್ವವನು ಮಾಡಿ ಭೇದವ ಬಲ್ಲರೆ ಹೇಳಿ, ಅರಿಯದಿರ್ದೊಡೆ ಕೇಳಿ. ನಿಮ್ಮ ಅಂಗ ಪಾತಾಳವೆಂಬ ಪವನಸೂತ್ರವನು ಮೆಟ್ಟಿ ಬಿಡುವಿಲ್ಲದಂತಾ ಉಯ್ಯಾಲೆಯನಾಡುತಿಹುದು. ನಿಮ್ಮ ಅಂಗ ಭುವಿಯೆಂಬ ಭೂಚಕ್ರದ ಮೂಲ ತಿಳಿದು ನಾಭಿಮಂಡಲವೆಂಬ ಹುತ್ತದೊಳಗಿರ್ದ ನಾಗಕೂರ್ಮನೆಂಬ ಘಟಸರ್ಪನ ತಲೆಕೆಳಗಾಗಿ ಬಾಲ ಮೇಲಕಾಗಿರುವುದು ಕಾಣಿರೋ. ಯೋಗದೃಷ್ಟಿಯೆಂಬ ನಾಗೇಶ್ವರನನು ಹಿಡಿದುಕೊಂಡು ಊದಲಾಗಿ ಆಗ ನಾಗಕೂರ್ಮನೆಂಬ ಸರ್ಪ ಸಭೆಯನು ತಿಳಿಯಲಿಕ್ಕೆ ಇಳುಹಿ ತಲೆಯ ಮೇಲಕ್ಕೆ ಮಾಡಿ ಗಗನಾಕಾರವೆಂಬ ಮಂಡಲಕ್ಕೆ ಹೆಡೆಯೆತ್ತಿ ಆರ್ಭಟಿಸಿ ಝೇಂಕರಿಸಿ ನಲಿದಾಡುವಂತೆ, ನಾದವನು ತನ್ನಲ್ಲಿ ಜ್ಞಾನೋದಯದಿಂದ ಲಾಲಿಸಿ ಕೇಳಬಲ್ಲರೆ ಆತನಿಗೆ ಝೇಂಕಾರ ಮೊದಲಾದ ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪಶಾಸ್ತ್ರಂಗಳಲ್ಲಿ ಗೀತ ಗಾಯನ ಯತಿ ಪ್ರಾಸ ದೀರ್ಘ ಗುರು ಲಘು ಬತ್ತೀಸ ರಾಗವನು ಎತ್ತಿ ಹಾಡುವಂತ ಮೂಲದ ಕೀಲ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಪಂಚಶತಕೋಟಿ ಭುವನದಲ್ಲಿ ಚಲಿಸ್ಯಾಡುವಂಥ ಮನದ ಚಂಚಲವೆಂಬ ಪಕ್ಷಿಯ ಪಕ್ಕವನು ಹರಿದು, ತನುವೆಂಬ ಪಂಜರದೊಳಗೆ ಇಂಬಿಟ್ಟುಕೊಂಡು, ತಾಮಸ ಮದಗುಣಾದಿಗಳೆಂಬ ಹುಳುಗಳ ಜಾತಿಗಳ ತೂಗಡಿಕೆ ಮದನಿದ್ರೆ ವಾಹಡಿಕೆ ಆಕಳಿಕೆ ಸೀನು ಬಿಕ್ಕಳಿಕೆ ಬದಗರ ತೇಗು ಮೊದಲಾದ ತಾಮಸಗುಣಾದಿ ಗುಣಂಗಳೆಂಬ ಹುಳುಜಾತಿಗಳನ್ನೆಲ್ಲ ತಿಂದು ನುಂಗಿ ನಿರ್ಮಲ ದೇಹಿಯಾಗಿರಬಲ್ಲರೆ ಆತನಿಗೆ ಒಂ ನಮಃಶಿವಾಯ ಎಂಬ ಷಡಕ್ಷರದ ಭೇದವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮಗೆ ಅಷ್ಟದಿಕ್ಕಿನಲ್ಲಿ ಆಡುವಂಥ ದಶರೂಪಗಳನ್ನೆಲ್ಲ ಚಿತ್ತ ಏಕ ಮಾಡಿ, ಸುಜ್ಞಾನವೆಂಬ ಹಸ್ತದಲ್ಲಿ ಹಿಡಿದು, ಮುಖದ ಮೇಲುಗಿರಿಮಂದರಪರ್ವತದ ಶಿಖರದ ತುದಿಯಲ್ಲಿ ನಿಲ್ಲಿಸಿ, ಕ್ಷೀರಸಾಗರವೆಂಬ ಸಮುದ್ರದೊಳಗೆ ಹುಚ್ಚೆದ್ದು ಸೂಸಿ ಆಡುವಂಥ ತೆರೆಗಳನ್ನೆಲ್ಲ ನಿಲ್ಲಿಸಬಲ್ಲರೆ ಆತನಿಗದು ತ್ರಿಕಾಲ ಮರಣಾದಿಗಳನ್ನೆಲ್ಲ ಗೆಲಿಯಬಲ್ಲಂಥ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಆತನಿಗೆ ಜ್ಞಾನ ಅರ್ಥ ಪದದ ಕೀಲ ವಚನಂಗಳ ಅರ್ಥ ಅನುಭಾವಂಗಳ ಮಾಡಬಲ್ಲನೆಂದೆನ್ನಬಹುದು ಕಾಣಿರೋ ! ಇಂತು ಮಂತ್ರದ ಕೀಲನರಿಯದ ಕವಿಗಳು ಕಂದಯ್ಯಗೆ ಮಹಾಪ್ರಭುಲಿಂಗಲೀಲೆ, ಕರಣಹಸಿಗೆ, ಮಿಶ್ರಾರ್ಪಣ, ನವಚಕ್ರಕೋಟಿಗಳೆಂಬ ಇಂತೀ ಭುವಿಯಲ್ಲಿ ಶಿವಾಗಮವೆಂದು ಬರಿಯ ಮಾತಿನ ಮತಿಯ ಪತ್ರವನು ಹಿಡಕೊಂಡು ಓದಿ, ಅದರೊಳಗಿನ ಅರ್ಥವನು ಭಾವಂಗಳಲಿ ತಿಳಿತಿಳಿದು ನೋಡಿ, ಜ್ಞಾತತ್ವದ ವಚನಂಗಳ ಮಾಡಿ ಇಡುವಂಥ ಕವಿಗಳು ತಮ್ಮ ಆತ್ಮದ ಶುದ್ಧಿಯ ತಾವರಿಯದೆ ಭೂತವೊಡೆದವರು ಬೊಗಳಾಡಿದಂತೆ ಆಯಿತ್ತು ಕಾಣಿರೋ. ಅದೆಂತೆಂದರೆ :ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹಂಚಿನ ಕುಡಿಕೆಯೊಳಗೆ ತುಂಬಿದ ಅರ್ಥ ಅನುಭಾವಂಗಳ ತಿಳಿತಿಳಿದು ನೋಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ರವಿಶಶಿಯಾದಿಗೂ ಹೆಸರದೆಸೆಯ ಕೊಂಡುಕೊಂಡು, ಇಂತಿವು ಮೂರನು ಕೂಡಿಕೊಂಡು, ಒಂದಕ್ಕೆ ಒಂದು ಕಟ್ಟಿ ಹಾಕಿ ಪ್ರಾಸ ಬಿದ್ದಿತೊ ಬೀಳದೊ ಎಂದು ತಮ್ಮನದಲ್ಲಿ ತಾವು ಅಳದಾಡುವಂತೆ ಒಂದು ಹೊದವಿದ ಪದ್ಯವನು ಮಾಡಿ ಇಡುವಂತಹ ಕಲಿಕೆಯ ಕವಿಗಳು ಮುಂದೆ ಅಜ್ಞಾನದಿಂದ ಮುಕ್ತಿಯ ದಾರಿಯ ಕಾಣಲರಿಯದೆ ಮುಂದುಗಾಣದ ತುರುಕರು ಅಘೋರವೆಂಬ ನರಕದ ಕಿಚ್ಚಿನ ಕೊಂಡದೊಳಗೆ ಬಿದ್ದು ಹೋರಟೆಗೊಳ್ಳುತ್ತಿದ್ದರು ಕಾಣಿರೋ. ಅದೆಂತೆಂದರೆ ; ಛಂದಸ್ಸು ನಿಘಂಟು ಅಮರ ವ್ಯಾಕರಣ ನಾನಾರ್ಥಂಗಳೆಂಬುವೆಲ್ಲ ಕವಿಯೆಂಬ ಕುಂಬಾರ ಮಾಡಿ ಸವಿದುಂಡು ಬೀದಿಯೊಳಗೆ ಬಿಟ್ಟಿರ್ದ ಎಂಜಲ ಪತ್ರಾವಳಿಯೊಳಗಿನ ಭೋಜನಕ್ಕೆ ಕವಿಗಳೆಂಬುವ ಆರುಮಂದಿ ಸೊಣಗಗಳು ಕೂಗಿಡುತಿರ್ದವು ಕಾಣಿರೋ. ಅದೆಂತೆಂದರೆ:ಕಾಮ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಕ್ರೋಧ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮದ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮೋಹ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಮಚ್ಚರ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಲೋಭ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಇಂತಿವರು ಆರು ಮಂದಿ ಕವಿಗಳೆಂಬ ಶ್ವಾನಗಳು ಕೂಡಿ ನಾ ಹೆಚ್ಚು ತಾ ಹೆಚ್ಚು ಎಂದು ಒಂದಕ್ಕೊಂದು ಕಾದಾಡಿ ಚಿತ್ತಪಲ್ಲಟವಾಗಿ, ಆ ಪತ್ರದೊಳಗಿನ ಬೋನದ ಸವಿಯನು ಬಿಟ್ಟು ಚಿತ್ತಪಲ್ಲಟವಾಗಿ, ಆ ಪತ್ರದ ತುಳಿಯನು ಹರಿದುಕೊಂಡು ತಿಂದು ಹಲವು ಕಡೆಗೆ ಹರಿದಾಡುತ್ತಿದ್ದವು ಕಾಣಿರೋ. ಅದು ಎಂತೆಂದರೆ :ಇಂತು ಕಾಯದ ಕೀಲನರಿಯದೆ ಮಾಡಿದ ಕವಿಗಳು ಕಾಲನ ಬಾಧೆಗಳೆಂಬ ಮರಣಕ್ಕೆ ಒಳಗಾಗಿ ಹೋದಂತೆ ಕುರುಡ ಕವಿಗಳಂ ಕಂಡು ನಗುತ್ತಿದ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಇನ್ನಷ್ಟು ... -->