ಅಥವಾ

ಒಟ್ಟು 21 ಕಡೆಗಳಲ್ಲಿ , 16 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾದ್ಥಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಬ್ಥಿನ್ನರೂಪೋ, ಅಬ್ಥಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.
--------------
ಮಾದಾರ ಧೂಳಯ್ಯ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಎಲಾ, ಶೈವ ವೀರಶೈವ ಎಂಬುವವು ಉಭಯ ಮತಗಳುಂಟು. ಅವು ಎಂತೆಂದಡೆ, ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ; ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ. ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ : ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ ? ಈಗ ಯತಿಯ ನುಡಿದ ಜಿಹ್ವೆ ಪೋಗಿ ಪರಸ್ತ್ರೀಯರ ಅಧರಪಾನ ಮಾಡಬಹುದೆ ? ಮಹಾಮಂತ್ರವ ಕೇಳಿದ ಕರ್ಣ ಪೋಗಿ ಪರತಂತ್ರವ ಕೇಳಬಹುದೆ ? ಲಿಂಗಪೂಜಕರ ಅಂಗ ಪೋಗಿ ಪರರಂಗವನಪ್ಪಬಹುದೆ ? ಇವನು ಶೈವ ಭಕ್ತನಲ್ಲಾ ! ಶೈವನಾಗಲಿ ವೀರಶೈವನಾಗಲಿ ಏಕಲಿಂಗನಿಷ್ಠಾಪರನಾಗಿ, ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ, ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು, ಆರು ಚಕ್ರವ ಹತ್ತಿ ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ವೀರಶೈವನೆಂದು ನಮೋ ಎಂಬುವೆನಯ್ಯಾ ಬರಿದೆ ವೀರಶೈವನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಬ್ರಹ್ಮಯ್ಯನವರು ನಿತ್ಯದಲ್ಲಿ ಹಾದರವನಾಡಿ ಹಾಗದ ಕಾಯಕದ ಹಣವ ತಂದು, ಜಂಗಮಾರ್ಚನೆಯ ಮಾಡುವರು. ಅದರೊಳಗೆ ಒಂದು ದಿವಸ ಬ್ರಹ್ಮಯ್ಯನವರು ಹಾದರಕಾಯಕವ ತಡೆಯಲು, ಆತನ ಸತಿಯಳು ಪುರುಷನ ಅಪ್ಪಣೆಯಕೊಂಡು ಪೋಗಿ ಹಾದರವನಾಡಿ ಹಾಗದ ಕಾಯಕವ ತಂದು, ಜಂಗಮಾರ್ಚನೆ ಮಾಡುವರೆಂದು ವೇದ ಶ್ರುತಿ ಪುರಾಣ ವಾಕ್ಯದಲ್ಲಿ ಪೇಳುವರು. ಇದರ ಅನುಭಾವವನು ಬಲ್ಲಿದರೆ ಪೇಳಿ, ಅರಿಯದಿದ್ದರೆ ಕೇಳಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಪ್ರಣಮಮಂತ್ರಸಂಬಂಧವನು ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ, ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು. ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ, ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ, ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ ಹಕಾರ ಪ್ರಣಮವ ಸಂಬಂಧಿಸಿ, ಉದಯ ಮಧ್ಯಾಹ್ನ ಸಾಯಂಕಾಲವೆಂಬ ತ್ರಿಕಾಲದಲ್ಲಿ ಸ್ನಾನವ ಮಾಡಿ, ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ, ಶುಭ್ರ ರೋಮಕಂಬಳಿಯಾಗಲಿ, ತೃಣದಾಸನವಾಗಲಿ, ನಾರಾಸನವಾಗಲಿ, ಇಂತೀ ಪಂಚಾಸನದೊಳಗೆ ಆವುದಾನೊಂದು ಆಸನ ಬಲಿದು, ಮೂರ್ತವ ಮಾಡಿ, ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ, ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ ಉಭಯದೊಳಗೆ ದಾವುದಾದರೇನು ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು. ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ ಅಜ್ಞಾನಿಗಳೊಳಗಣ ಜ್ಞಾನಿಗಳು ಊಧ್ರ್ವಮುಖವಾಗಿ ರುದ್ರಾಕ್ಷಿ ಜಪಿಸೆಂದು ಪೇಳುವರು. ಇಂತಪ್ಪ ಸಂಶಯದಲ್ಲಿ ಮುಳುಗಿ ಮೂರುಲೋಕವು ಭವಭವದಲ್ಲಿ ಎಡೆಯಾಡುವುದು ಕಂಡು, ಶಿವಜ್ಞಾನ ಶರಣನು ವಿಸರ್ಜಿಸಿ ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ, ಅಧೋ ಊಧ್ರ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ ನಿಮಿಷ ನಿಮಿಷವನಗಲದೆ ಮರಿಯದೆ ಜಪಿಸಿ ಸದ್ಯೋನ್ಮುಕ್ತನಾಗಿ ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರತ್ನ ಪಾಷಾಣದ ಕುಲದಲ್ಲಿದ್ದು ಸ್ವಜಾತಿಗೆ ಸಿಕ್ಕದಂತೆ, ಗಂಧ ಕುಸುಮದಲ್ಲಿದ್ದು ಅದರೊಳಗೆ ಬಂಧಿತವಾಗದಂತೆ, ವಾಯುಸಕಲ ಚೇತನದೊಳಗಿದ್ದು ರೂಪಿಂಗೊಡಲಿಲ್ಲದೆ ಅಲೆಯಲಿಕ್ಕೆ ಉಂಟಾಗಿ, ಆ ತೆರದಂತೆ, ಹಿಡಿವಲ್ಲಿ ಬಿಡುವಲ್ಲಿ ಒಡಗೂಡುವ ಸುಖವನರಿತಡೆ; ಕಾಲಾಂತಕ ಭೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು. ಆ ಗಡಹವ ನೋಡ ಹೋಗಲು, ಆ ಗಡಹದ ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ ಮೊದಲಾದ ಅನಂತ ಪರಿವಾರ ಆರೈಸಿರುವದು. ಅಲ್ಲಿ ವೇದ ಆಗಮ ಪುರಾಣ ಮೊದಲಾದ ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು. ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ ಮೊದಲಾದ ಅನಂತ ಪ್ರಕಾಶವಿರ್ಪುದು. ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕರ್ಣಿ ಮೊದಲಾದ ಅನಂತ ನಾದವಿರ್ಪುದು. ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ ಚಿತ್ರವಿಚಿತ್ರವಾದ ಮಂಟಪವಿರ್ಪುದು. ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು. ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು. ಅದರೊಳಗೆ ನೋಡಬೇಕೆಂದು ಹೋಗಲು ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು. ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ ಎಂಥಾತ ಆತನ ಆತುರದಿ ನೋಡಬೇಕೆಂದು ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ. ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ. ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ ಅಲ್ಲೇ ಇರ್ದಂತೆ ಇರುತಿರ್ದೆನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ, ಅದಕ್ಕೆ, ಜಲತ್ಕಾರನೆಂಬ ಗಡಿಗೆ ಇದ್ದಿತ್ತು. ಅದರೊಳಗೆ ಮಧುರ ಮಾಂದಿರ ವಿಮಲ ಜಲತುಂಬಿ. ಒಂದಕ್ಕೊಂದು ಹೊದ್ದದೆ ಕುಂಭವೊಂದರಲ್ಲಿ ನಿಂದ ಭೇದವ ನೋಡಾ. ಆ ಗಡಿಗೆಯ ತೆಗೆವುದಕ್ಕೆ ಮಹದಾಕಾಶವನೇರುವುದಕ್ಕೆ ನೆಲೆಯಿಲ್ಲ. ನೆಲಹಿಂಗೆ ಮೊದಲಿಲ್ಲ, ಕುಂಭಕ್ಕಂಗವಿಲ್ಲ, ಒಳಗಳ ಭೇದವ ವಿವರಿಸಬಾರದು. ಇಂತೀ ಘಟಮಠ ಆಧಾರದಲ್ಲಿ ಪರಿಪೂರ್ಣನಾದೆಯಲ್ಲಾ, ಸದಾಶಿವಮೂರ್ತಿಲಿಂಗವೆ ಅವಿರಳನಾಗಿ.
--------------
ಅರಿವಿನ ಮಾರಿತಂದೆ
ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ (ಮಾಡಿ) ಧರಿಸುವ ಭೇದವೆಂತೆಂದಡೆ : ಆವ ವರ್ಣದ ಗೋವಾದಡೆಯೂ ಸರಿಯೆ, ಅವಯವಂಗಳು ನೂನು-ಕೂನಿಲ್ಲದೆ, ಬರೆಗಳ ಹಾಕದೆ ಇರುವಂತಹ ಗೋವ ತಂದು, ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ; ಧೂಳಪಾದೋದಕಸೇವನೆಯೆ ಮಹಾತೀರ್ಥ. ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು. ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ, ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ ಪೂರ್ವದಲ್ಲಿ (ಗುರು) ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ ಗುರುದೀಕ್ಷೆಯುಂಟಾಗುವುದಯ್ಯಾ, ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ, ನಿರುಪಾಧಿಭಕ್ತಂಗೆ ತ್ರಿವಿಧಪಾದೋದಕ ಪ್ರಸಾದ ದೊರೆಯುವುದಯ್ಯಾ ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ ನಿರ್ವಂಚಕ ಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ, ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಯ್ಯಾ, ಜಗತ್ಪಾವನ ನಿಮಿತ್ಯರ್ಥವಾಗಿ ಸಾಕಾರೀಲೆಯ ಧರಿಸಿದ ಸ್ವಯಚರಪರಗುರುಚರಮೂರ್ತಿಗಳ ಅರ್ಪಿತಾವಧಾನದ ನಿಲುಕಡೆಯೆಂತೆಂದೆಡೆ: ಲಿಂಗಾಚಾರ ಮೊದಲಾದ ಸದ್ಭಕ್ತ ಶರಣಗಣಂಗಳಲ್ಲಿ ಲಿಂಗಾರ್ಪಿತಭಿಕ್ಷಲೀಲೆಯ ಧರಿಸಿ ಹೋದ ವ್ಯಾಳ್ಯದೊಳು ಆ ಭಕ್ತಗಣಂಗಳು ಶರಣುಹೊಕ್ಕು ಸಮಸ್ತ ಆಚರಣೆಯ ಒದಗಿಸಿಕೊಟ್ಟ್ಲ ದಶವಿಧ ಪಾದೋದಕ ಏಕಾದಶ ಪ್ರಸಾದದಾಚರಣೆಯಾಗುವದಯ್ಯಾ. ಇಂತು ಲಿಂಗಾಚಾರ ಭಕ್ತಗಣಂಗಳು ದೊರೆಯದಿರ್ದಡೆ ವೇದಾಂತಿ ಸಿದ್ಧಾತಿ ತಿನ್ನಯೋಗಿ ಮೊದಲಾದ ಸಮಸ್ತಮತದಿಂದ ಏಕಶಬ್ದಭಿಕ್ಷವ ಸಪ್ತಗೃಹವ ಬೇಡಿ ದುರ್ಗುಣಯುಕ್ತವಾದ ಅಯೋಗ್ಯದ್ರವ್ಯವನುಳಿದು ಸದ್ಗುಣಯುಕ್ತವಾದ ಯೋಗ್ಯದ್ರವ್ಯವ ಕೈಕೊಂಡು, ಧೂಳಪಾದಜಲದಿಂದ ಭವಿತನವ ಕಳೆದು ಭಕ್ತಪದಾರ್ಥವೆನಿಸಿ ಅಘ್ರ್ಯಪಾದ್ಯಾಚಮನವ ಮಾಡಿ ಧಾನ್ಯವಾದಡೆ ಪರಿಣಾಮಜಲಂ ಶೋಧಿಸಿ ಪಾಕವ ಮಾಡಿ, ಫಲಾಹಾರವಾದಡೆ ಶೋಧಿಸಿ ಪಕ್ವವ ಮಾಡಿಟ್ಟು ಆಮೇಲೆ, ಅಯ್ಯಾ, ನಿನಗೆ ಭಕ್ತಗಣಂಗಳು ದೊರೆಯದ ಸಮಯದಲ್ಲಿ ಚತುರ್ವಿಧ ಪಾದೋದಕವೆಂತುಟೆಂದಡೆ: ಏಕಾಂತವಾಸದಲ್ಲಿ ಪರಿಣಾಮತರವಾದ ಹಳ್ಳ ಹೊಳೆ ಕೆರೆ ಬಾವಿ ಮಡು ಹೊಂಡ ಚಿಲುಮೆ ಕೊಳ ಮೊದಲಾದ ಸ್ಥಾನಕ್ಕೆ ಹೋಗಿ ಪ್ರಥಮದಲ್ಲಿ `ಶಿವ ಶಿವ! ಹರಹರ! ಗುರುಬಸವಲಿಂಗ!' ಎಂಬ ಮಂತ್ರಧ್ಯಾನದಿಂದ ಪಾದವನಿಟ್ಟು ಚರಣಸೋಂಕಿನಿಂ ಪವಿತ್ರವಾದುದಕವೆ ಧೂಳಪಾದೋದಕವೆನಿಸುವದಯ್ಯ; ಆ ಮೇಲೆ ತಂಬಿಗೆಯೊಳಗೆ ಶೋಧಿಸಿ ಬಸವಾಕ್ಷರವ ಲಿಖಿಸುವದೆ ಗುರುಪಾದೋದಕವೆನಿಸುವದಯ್ಯ; ಆ ಮೇಲೆ ಅರ್ಚನಾಕ್ರಿಯೆಗಳ ತೀರ್ಚಿಸಿಕೊಂಡು ನಿಚ್ಚಪ್ರಸಾದಿ ಸಂಬಂಧಾಚರಣೆಯಂತೆ ಮುಗಿದಲ್ಲಿ ಜಂಗಮ ಪಾದೋದಕವೆನಿಸುವದಯ್ಯ. ಇಂತು ಚತುರ್ವಿಧ ಪಾದೋದಕದೊಳಗೆ ಷಡ್ವಿಧ ಪಾದೋದಕ ಉಂಟಯ್ಯ. ಅದೆಂತೆಂದಡೆ: ಹಸ್ತವಿಟ್ಟು ಸ್ಪರ್ಶನವ ಮಾಡೆ ಸ್ಪರ್ಶನೋದಕವೆನಿಸುವದಯ್ಯ; ಲಿಂಗಕ್ಕೆ ಧಾರೆಯಿಂದ ಅಭಿಷೇಕವ ಎರೆದಲ್ಲಿ ಅವಧಾರೋದಕವೆನಿಸುವದಯ್ಯ; ಲಿಂಗಾರ್ಪಿತವ ಮಾಡಬೇಕೆಂಬ ಆನಂದವೆ ಆಪ್ಯಾಯನೋದಕವೆಂದೆನಿಸುವದಯ್ಯ; ಅರ್ಪಿತಮುಖದಲ್ಲಿ ಹಸ್ತವ ಪ್ರಕ್ಷಾಸಿ ಖಂಡಿತವ ಮಾಡಿದಲ್ಲಿಗೆ ಹಸ್ತೋದಕವೆನಿಸುವದಯ್ಯ; ಲಿಂಗಕ್ಕೆ ಸಂತೃಪ್ತಿಪರಿಯಂತರವು ಅರ್ಪಿತವ ಮಾಡಿ[ದಲ್ಲಿ] ಪರಿಣಾಮೋದಕವೆನಿಸುವದಯ್ಯ; ತಟ್ಟೆ ಬಟ್ಟಲ ಲೇಹವ ಮಾಡಿದಲ್ಲಿ ನಿರ್ನಾಮೋದಕವೆನಿಸುವದಯ್ಯ; ಲೇಹವ ಮಾಡಿದ ಮೇಲೆ ದ್ರವ್ಯವನಾರಿಸಿ ಸರ್ವಾಂಗದಲ್ಲಿ ಲೇಪಿಸುವದೆ ಸತ್ಯೋದಕವೆನಿಸುವದಯ್ಯ. ಇಂತೀ ದಶವಿಧ ಪಾದೋದಕದ ವಿಚಾರವ ತಿಳಿದು ಆ ಮೇಲೆ ನಿಚ್ಚಪ್ರಸಾದಿಯ ಸಂಬಂಧಾಚರಣೆಯಂತೆ ಪ್ರಸಾದವ ಮುಗಿವದಯ್ಯ. ಅದರೊಳಗೆ ಏಕಾದಶಪ್ರಸಾದದ ವಿಚಾರವೆಂತೆಂದಡೆ: ಪ್ರಥಮದಲ್ಲಿ ಹಸ್ತಸ್ಪರ್ಶ ಮಾಡಿದಂತಹದೆ ಗುರುಪ್ರಸಾದವೆನಿಸುವದಯ್ಯ; ಇಷ್ಟ ಮಹಾಲಿಂಗಕ್ಕೆ ಮಂತ್ರಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡು ವೇಳೆ ಇಷ್ಟಮಹಾಂಗದೇವಂಗೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡುವೇಳೆ ಇಷ್ಟಮಹಾಂಗದೇವಂಗೆ ರೂಪನರ್ಪಿಸಿ ಜಿಹ್ವೆಯಲ್ಲಿಟ್ಟ್ಲ ಜಂಗಮ ಪ್ರಸಾದವೆನಿಸುವದಯ್ಯ; ಆ ಮೇಲೆ ಲಿಂಗದೇವರಿಗೆ ತೋರಿ ಬೋಜೆಗಟ್ಟಿ ಲಿಂಗದೇವಂಗೆ ತೋರಿ ಜಿಹ್ವೆಯ್ಲಟ್ಟಂತಹದೆ ಪ್ರಸಾದಿಯ ಪ್ರಸಾದವೆನಿಸುವದಯ್ಯ; ಆ ಭೋಜ್ಯರೂಪಾದ ಪ್ರಸಾದಿಯ ಪ್ರಸಾದದೊಳಗೆ ಮಧುರ ಒಗರು ಕಾರ ಆಮ್ಲ ಕಹಿ ತೃಪ್ತಿ-ಮಹಾತೃಪ್ತಿಯೆ ಆಪ್ಯಾಯನ, ಸಮಯ, ಪಂಚೇಂದ್ರಿಯವಿರಹಿತ, ಕರಣಚತುಷ್ಟಯವಿರಹಿತ, ಸದ್ಭಾವ, ಸಮತೆ, ಜ್ಞಾನಪ್ರಸಾದ ಮೊದಲಾದವು ಸಪ್ತವಿಧಪ್ರಸಾದವೆನಿಸುವದಯ್ಯ. ಇಂತು ಪರಾಧೀನತೆಯಿಂ ಭಿಕ್ಷವ ಬೇಡಲಾರದಿರ್ದಡೆ, ಅರಣ್ಯದಲ್ಲಿ ಫಲರಸಯುಕ್ತವಾದ ಹಣ್ಣು ಕಾಯಿಗಳ ಲಿಂಗಾರ್ಪಿತ ಭಿಕ್ಷೆಯೆಂದು ಆ ಫಲಾದಿಗಳ ತೆಗೆದುಕೊಂಡು ಶೋಧಿಸಿ, ಪವಿತ್ರವ ಮಾಡಿ ಲಿಂಗಾರ್ಪಿತ ಭೋಗಿಯಾದಾತನೆ ಸ್ವಯಂಭು ಪ್ರಸಾದ ಭಕ್ತನಾದ ಚಿತ್ಕಲಾಪ್ರಸಾದಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು, ತದ್ರಕ್ಷಣಹೇತುವಾದುದೇ ಜಲವು, ಇವೆರಡನ್ನೂ ಸಂಬಂಧಿಸಿ, ಏಕಮಾಗಿ ಘನೀಭವಿಸುವಂತೆ ಮಾಡಿ, ತತ್ಸಂಹಾರಕ್ಕೆ ತಾನೇ ಕಾರಣಮಾಗಿರ್ಪ ಮನಸ್ಸೇ ಅಗ್ನಿಯು. ಆ ಮನಸ್ಸನ್ನು ಪ್ರಕಾಶಗೊಳಿಸಿ ಅದರೊಳಗೆ ಕೂಡಿ ಅಭೇದಮಾಗಿರ್ಪ ಜೀವನೇ ವಾಯುವು, ಅಗ್ನಿಯು ಪೃಥ್ವಿಯೊಳಗೆ ಬದ್ಧಮಾಗಿರ್ಪಂತೆ, ಮನವು ಸಂಸಾರಬದ್ಧಮಾಗಿರ್ಪುದು. ವಾಯುವು ಜಲದೊಳಗೆ ಬದ್ಧಮಾಗಿರ್ಪಂತೆ, ಜೀವನು ಶರೀರದಲ್ಲಿ ಬದ್ಧಮಾಗಿರ್ಪನು. ಜೀವನು ತಾನು ಸಂಸಾರದೊಳ್ಕೂಡಿ ಸ್ಥೂಲವಾಗಿಯೂ ಮನದೊಳ್ಕೊಡಿ ಸೂಕ್ಷ್ಮವಾಗಿಯೂ ಇರ್ಪನು. ಸಂಸಾರ ಶರೀರ ಮನೋಜೀವಗಳಿಗಾಧಾರಮಾಗಿರ್ಪ ಕರ್ಮವೇ ಆಕಾಶವು, ಆ ಕರ್ಮವನಾವರಿಸಿರ್ಪ ಮಹಾಮೋಹವೆಂಬ ಸುಷುಪ್ತಿಯ ಒಳಹೊರಗೆ ಪ್ರಕಾಶಿಸುತ್ತಿರ್ಪ ಜಾಗ್ರತ್ಸ್ವಪ್ನಜ್ಞಾನಂಗಳೇ ಚಂದ್ರಸೂರ್ಯರು. ಮನಸ್ಸೆಂಬ ಅಗ್ನಿಯು ಜೀವಾನಿಲನಿಂ ಪಟುವಾಗಿ ಸಂಸಾರಶರೀರಂಗಳಂ ಕೆಡಿಸಿ, ಕರ್ಮವೆಂಬಾಕಾಶದೊಳಗೆ ಜೀವಾನಿಲನಿಂ ಕೂಡಿ ಧೂಮರೂಪಮಾಗಿ ಶರೀರಸಂಸಾರಗಳೆಂಬ ಮೇಘÀಜಲವರ್ಷವಂ ನಿರ್ಮಿಸಿ, ಜೀವನಿಗವಕಾಶವಂ ಮಾಡಿಕೊಟ್ಟು, ತಾನಲ್ಲಿಯೇ ಬದ್ಧನಾಗಿ, ಜೀವನಿಂದ ಪ್ರಕಾಶಮಾಗುತ್ತಿರ್ಪುದು. ಇಂತಪ್ಪ ಕರ್ಮವೆಂಬಾಕಾಶಕ್ಕೆ ಜೀವನೆಂಬ ವಾಯುವೇ ಕಾರಣವು. ಇವು ಒಂದಕ್ಕೊಂದು ಕಾರಣಮಾಗಿ, ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ ತೋರುತ್ತಾ ಅಡಗುತ್ತಾ ಬಳಲುತ್ತಾ ತೊಳಲುತ್ತಿರ್ಪ ಭವರೋಗದಲ್ಲಿ ಜೂಗುತ್ತಿರ್ಪ ಬಂಧನದ ಈ ದಂದುಗವಿನ್ನೆಂದಿಗೆ ಪೋಪುದು ಎಂದು ಮುಂದುಗಾಣದೆ ಇರ್ಪೆನ್ನ ತಾಪವಂ ನೀಂ ದಯೆಯಿಂ ತಣ್ಣನೆ ಮಾಳ್ಪೊಡೆ, ಸತ್ಯಜ್ಞಾನಾನಂದಮೂರ್ತಿಯಾದ ಪರಮಾತ್ಮನೇ ಗುರು ಲಿಂಗ ಜಂಗಮ ಸ್ವರೂಪಿಯಾಗಿ, ಜ್ಞಾನದಿಂದ ನಿಜವೂ ನಿಜದಿಂದಾನಂದವೂ ಪ್ರಕಾಶಮಾಗಿರ್ಪಂತೆ, ಗುರುವಿನಿಂದ ಲಿಂಗವಂ ಲಿಂಗದಿಂದ ಜಂಗಮವಂ ಕಂಡೆನು. ಅಂತಪ್ಪಾ ನಿಜಾತ್ಮಲಿಂಗವನು ಕರ್ಮವೆಂಬ ಆಕಾಶದಲ್ಲಿ ಬೆರೆಸಲು, ಅದೇ ಕಾರಣಮಾಯಿತ್ತು. ಆ ಕರ್ಮವೆಂಬ ಶಕ್ತಿಯು ಲಿಂಗವೆಂಬ ಶಿವನೊಳಗೆ ಕೂಡಲು, ಲಿಂಗತೇಜಸ್ಸಿನಿಂ ಕರ್ಮಗರ್ಭದಲ್ಲಿ ಜೀವನಿಗೆ ಪುನರ್ಭವಮಾದುದರಿಂದ ಪ್ರಾಣಲಿಂಗಮಾಯಿತ್ತು. ಅದೆಂತೆಂದೊಡೆ : ಲಿಂಗವೆಂಬ ಮಹಾಲಿಂಗದಿಂ ಜನಿಸಿದ ಕರ್ಮವೇ ಪ್ರಸಾದಲಿಂಗವು, ಆ ಕರ್ಮದಿಂ ಜನಿಸಿದ ಜೀವನೇ ಜಂಗಮಲಿಂಗವು, ಅಂತಪ್ಪ ಲಿಂಗದಿಂದುಸಿದ ಮನಸ್ಸೇ ಶಿವಲಿಂಗವು, ಅಂತಪ್ಪ ಮನಸ್ಸಿನಿಂದ ಪರಿಶುದ್ಧಮಾಗಿರ್ಪ ಶರೀರವೇ ಗುರುಲಿಂಗವು. ಅಂತಪ್ಪ ಗುರುಲಿಂಗಮಾಗಿರ್ಪ ಶರೀರದಿಂದನುಭವಿಸುತ್ತಿರ್ಪ ಸಂಸಾರವೇ ಆಚಾರಲಿಂಗವು. ಇಂತು ಸಂಸಾರಶರೀರಂಗಳಿಗೆ ಇಷ್ಟಲಿಂಗವೇ ಕಾರಣವೂ ಮನೋಜೀವರಿಗೆ ಪ್ರಾಣಲಿಂಗವೇ ಕಾರಣವೂ ಆಗಿ, ಕರ್ಮಲಿಂಗಂಗಳಿಗೆ ಭಾವಲಿಂಗಂಗಳೇ ಕಾರಣಮಾಗಿ, ಕಾರಣವೇ ಐಕ್ಯಸ್ಥಾನವಾದುದರಿಂ ಸಂಸಾರ ಶರೀರಂಗಳು ಇಷ್ಟಲಿಂಗದೊಳಗೂ ಮನೋಜೀವಂಗಳು ಪ್ರಾಣಲಿಂಗದೊಳಗೂ ಐಕ್ಯವಂ ಹೊಂದಿದವು. ಕರ್ಮಲಿಂಗಗಳು ಭವಲಿಂಗದೊಳಗೈಕ್ಯಮಾಗಿ, ಪ್ರಾಣವು ಭಾವದೊಳಗೆ ಬೆರೆದು, ಭೇದವಡಗಿ ತಾನು ತಾನಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮೂರರಿಂದ ಮುನ್ನಾದ, ಮೂರು ಮತ್ತೆ ತಾನಾದ. ಆರನ್ಕಗಳೆದ ತತ್ವ ಸೀಮೆಯಾದ, ಆರು ತಾನಾಗಿ ಆರಾರುನತಿಗಳೆದ. ಸಂಬಂಧದ ಮೇಲಣ ಕ್ರಿಯಾಳಾಪ ತವಕಿಸುವ ಸಂಯೋಗ ಅದರೊಳಗೆ ವಿಯೋಗಿ ಕಪಿಲಸಿದ್ಧಮಲ್ಲೇಶ್ವರ.
--------------
ಸಿದ್ಧರಾಮೇಶ್ವರ
ನಿರಾಳಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು; ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು; ತನುವಿನಲ್ಲಿ ಮರಹಿಲ್ಲದಿರಬೇಕು; ಕಾಳಿಕೆ ಹೊಗದಿರಬೇಕು. ಇಂತು ನಿಶ್ಚಿಂತವಾಗಿ ಚಿತ್ತಾರದ ಬಾಗಿಲವ ತೆರೆದು ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಿಹ ಉಪ್ಪರಿಗೆ ಮೇಗಳ ಶಿವಾಲಯವ ಕಂಡು, ಅದರೊಳಗೆ ಮನ ಅಚ್ಚೊತ್ತಿದಂತಿದ್ದು, ಇತ್ತ ಮರೆದು ಅತ್ತಲೆ ನೋಡಿ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಹಾಮನೆಯೊಳಗೊಂದು ಮಂದಿರವಾಡ: ಅದರೊಳಗೆ ಹದಿನಾರು ಕೋಣೆ, ಒಂಬತ್ತು ಬಾಗಿಲು ಮುಚ್ಚಿ, ಒಂದು ಬಾಗಿಲು ತೆಗೆದಿಹುದು. ತೆಗೆದ ಬಾಗಿಲಲ್ಲಿ ಮೂರು ಮುಖದ ಸರ್ಪ, ಊಧ್ರ್ವಮುಖವಾಗಿ ತಿರುಗಾಡುತ್ತಿಹುದು. ಮಿಕ್ಕ ಆರು ಬಾಗಿಲಲ್ಲಿ ಮೂರು ಬಾಗಿಲು ಕೀಳಾಗಿ, ಕೀಳಿನೊಳಗೆ ಅಧೋಮುಖದ ಸರ್ಪವುಡುಗಿಹುದು. ಮೇಲಣ ಮೂರು ಬಾಗಿಲು ಊಧ್ರ್ವದ ತ್ರಿಗುಣದ ಸರ್ಪ ಬಾಲ ಮೊದಲು ತಲೆ ಕಡೆಯಾಗಿ ಎದ್ದು ನಿಂದಾಡುತ್ತಿರಲಾಗಿ, ವಿಶ್ವಮಯವೆಂಬ ಆಕಾಶದ ಹದ್ದು ಹೊಯಿದು ಎತ್ತಿತ್ತು, ಅದರೊಳಗೆ ಎರಡು ತಲೆಯ ಮರೆದು, ಒಂದು ತಲೆಯೆಚ್ಚತ್ತು, ಹದ್ದಿನ ಕೊಕ್ಕ ತಪ್ಪಿ, ಕಾಲುಗುರ ಹೆಜ್ಜೆಯ ಘಾಯವ ತಪ್ಪಿ ಗರಿಯ ಅಡುಹ ತೊಲಗಿಸಿ ಹಿಡಿಯಿತ್ತು. ಅಡಿಹೊಟ್ಟೆಯ ನೋಡಿಯೇರಿತ್ತು, ವಿಷ ಹದ್ದಿನ ಅಸುವ ಬಿಡಿಸಿತ್ತು, ಹದ್ದು ಹಾವು ಕೂಡಿ ಘಟಕರ್ಮಕ್ಕೊಳಗಾಯಿತ್ತು. ಕರ್ಮದ ಒಳಗಾದ ಜ್ಞಾನ ಸದಾಶಿವಮೂರ್ತಿಲಿಂಗವ ಮುಟ್ಟಿದುದಿಲ್ಲ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->