ಅಥವಾ

ಒಟ್ಟು 25 ಕಡೆಗಳಲ್ಲಿ , 14 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ, ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ. ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ, ಗುರುಕಾರುಣ್ಯವಾಯಿತ್ತೆಂದು ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ. ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು. ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ, ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು, ಸಮಯಾಚಾರಕ್ಕೆ ಮುನ್ನವೇ ಸಲ್ಲ. ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ, ನಾಗಪ್ರಿಯ ಚೆನ್ನರಾಮೇಶ್ವರಾ.
--------------
ಶಿವನಾಗಮಯ್ಯ
ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ ಕರ್ಮಿಯ ಮಾತ ಕೇಳಲಾಗದು. ಅದೆಂತೆಂದಡೆ : ಅದು ಪವಿತ್ರವಾದ ಕಾರಣ ಪವಿತ್ರವೆನಿಸುವ ಮೂರ್ತಿ ಮಹಾಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಸಮರ್ಪಿಸಿ ಪ್ರಸಾದಭೋಗೋಪಭೋಗಿಯಾಗಿರ್ಪ ಭಕ್ತನೆ ಬಸವಣ್ಣ. ಅದಲ್ಲದೆ ಅಪವಿತ್ರವ ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ-ಸಾಕ್ಷಿ: ಜಂಗಮಂ ಚ ಪ್ರಸಾದಂತು ನಿವೇದ್ಯಂ ಚ ಸಮರ್ಪಣಂ | ಪ್ರಸಾದಿ ಸತ್ಯ ಶುದ್ಧಾತ್ಮ ಪ್ರಸಾದಿಸ್ಥಲಮುತ್ತಮಂ || ಇಂತಲ್ಲದೆ ಅಪವಿತ್ರದ್ರವ್ಯವ, ಉಚ್ಫಿಷ್ಟ ಚಾಂಡಾಲ ಕಾಯವ ಮುಟ್ಟಿ ಪವಿತ್ರಲಿಂಗಕ್ಕೆ ಅರ್ಪಿಸಿ ಭುಂಜಿಸುವ ಚಾಂಡಾಲನ ಮುಖವ ನೋಡಲಾಗದು, ರೇಕಣ್ಣಪ್ರಿಯ ನಾಗಿನಾಥಾ
--------------
ಬಹುರೂಪಿ ಚೌಡಯ್ಯ
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ. ಸಂಸಾರದಲ್ಲಿ ತೊಳಲುವ ಭಾವ ಮುಂದೆ ಮರಣಬಾಧೆಯಲ್ಲಿ ಮುಳುಗುವುದೇ ಸಾಕ್ಷಿ. ಅದಲ್ಲದೆ ಗುರುವಿನಲ್ಲಿ ಜನಿಸಿದ ಭಾವ ಸರ್ವಾಚಾರ ಸಂಪತ್ತಿನೊಳಗೆ ಭೋಗೋಪಭೋಗಿಯಾಗಿಹುದೇ ಸಾಕ್ಷಿ. ಸರ್ವಾಚಾರಸಂಪತ್ತಿನೊಳಗೆ ಭೋಗೋಪಭೋಗಿಯಾಗಿರ್ದ ಭಾವ ಮಹಾಲಿಂಗೈಕ್ಯಪದಲೋಲವಾದುದೇ ಸಾಕ್ಷಿ. ಇದು ಕಾರಣ ಆ ಭಾವಕ್ಕೆ ಸಂದುಸಂಶಯದ ಗೊಂದಣವುಂಟಲ್ಲದೆ ಈ ಭಾವಕ್ಕೆ ಸಂದುಸಂಶಯದ ಗೊಂದಣವುಂಟೆ ? ಇದೇ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಸದ್ಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು, ಆರೈದು ಅಂಗಪ್ರಾಣಾತ್ಮ ಸಂಗಸಮರಸಾನಂದ ಶರಣಂಗೆ ಒಂದೂ ಆಶ್ಚರ್ಯ ತೋರದು, ಅದೇನು ಕಾರಣವೆಂದೊಡೆ, ತಾನೆ ಹರಿ ವಿದ್ಥಿ ಸುರಾದಿ ಮನುಮುನಿ ಸಕಲಕ್ಕೂ ಆಶ್ಚರ್ಯವಾದ ಕಾರಣ. ಅಂತಪ್ಪ ಶರಣನೇ ಶಿವನಲ್ಲದೆ ಬೇರಿಲ್ಲ ಕಾಣಾ. ಅದಲ್ಲದೆ ಮತ್ತೆ ಗಿರಿಗೋಪುರ ಗಂವರ ಶರದ್ಥಿತಾಣ ಸ್ಥಾವರಕ್ಷೇತ್ರ ನರಕುಶಲ ಕುಟಿಲ ಭೂತಾದಿ ಕಿಂಚಿತಕ್ಕಾಶ್ಚರ್ಯವೆಂಬ ಬಾಲಮರುಳ ಅಜ್ಞಾನಿಗಳಿಗೆ ಲಿಂಗಶರಣರೆಂಬ ನಾಮ ಬಹು ಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಲಿಂಗ ಜಂಗಮವೆಂಬರಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ. ಕರುವ ಕಟ್ಟಿ ಎರದಲ್ಲದೆ ಕಂಚಿನ ಸ್ವರೂಪು ಅಪ್ಪುದೆ ? ಸ್ಥಿರಚಿತ್ತದಿಂದ ಜೀವನೆ ಪರಮ, ಪರಮನೆ ಜೀವನೆಂದು ಅರಿವುದು. ಪರಿಪೂರ್ಣವಪ್ಪುದೇ ವಿರಹಿತ ಲೋಕಕ್ಕೆ ? ಅದಲ್ಲದೆ ಏಕವಾಕ್ಯನು ಅಲ್ಲ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಪ್ರಾಣಲಿಂಗ ಸಂಗ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಪ್ರಸಾದ ಪ್ರಸಾದವೆಂಬರು ಪ್ರಸಾದದ ಕುಳವೆಂತಿಪ್ಪುದೆಂದರೆ: ಕೊಟ್ಟವ ಗುರುವಲ್ಲ, ಕೊಂಡವ ಶಿಷ್ಯನಲ್ಲ, ಅಂಜಿಕೆಯಿಂದ ಕೊಂಡುದು ಎಂಜಲ ಪ್ರಸಾದ, ಅದೆಂತೆಂದರೆ; ಈಡಾಪಿಂಗಳನಾಳಮಂ ಕಟ್ಟಿ, ಸುಷುಮ್ನಾನಾಳದಲ್ಲಿ ಇಪ್ಪಪರಿಚಾರಕನು ಅಗ್ನಿಯೆಂಬ ಸುವ್ವಾರನನೆಬ್ಬಿಸಲು, ಮಸ್ತಕದಲ್ಲಿ ಇದ್ದ ಉತ್ತಮ ಪ್ರಸಾದ ದಾಳೂದೂಳಿಯೆನುತ್ತ (ದಳದಳನಿಳಿಯುತ್ತ?) ಮಹಾಘನವೆಂಬ ಪ್ರಸಾದಿಯೆದ್ದು, ಮುಯ್ಯಾಂತು ಉಂಡು ಭೋಗಿಸ ಬಲ್ಲರೆ ನಿತ್ಯಪ್ರಸಾದಿ. ಅದಲ್ಲದೆ, ಧನವುಳ್ಳವರ ಕಂಡು ಬೋಧಿಸಿ ಬೋಧಿಸಿಕೊಂಬ ಪ್ರಸಾದಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಶ್ವಾನ ಬೊಗಳುವುದೇ ಸುಳುಹುಕಾಣದೆ ? ಅಳಿದುಳಿದು ಗುರುವಿನಿಂದುದಿಸಿಬಂದೆವೆಂದು ನುಡಿದು ಬಂದ ಬಳಿಕ ನುಡಿನಡೆಯೊಳೊಪ್ಪಿ ಕಾಣಿಸಿಕೊಳ್ಳಬೇಕಲ್ಲದೆ ತಮದ ಮರೆಯಲ್ಲಿ ಮಡುಗಿ ಇತರರ ಗುಣವನರಸಿ ತಂದು ಆಡುವರು. ಅದಲ್ಲದೆ ಕಾಣದೆ ಕಂಡೆವೆಂದು ಹುಸಿ ನೇವರಿಸಿ ನುಡಿವ ಕಸಮೂಳರ ಕೆಡಹಿ ಬಸುರಲ್ಲಿ ಮಲವ ತುಂಬುವರು ಕಾಲನವರು. ಈ ಶ್ವಾನನ ಬೊಗಳಿಕೆಗೆ ಕಡೆಯಾದ ಕರ್ಮಿಗಳ ನೆನೆಯಲಾಗದು ಕಾಲತ್ರಯದಲ್ಲಿ ಕಂಡ ಮಹಿಮರು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಪ್ರಸಾದವ ಬೀಸರವೋಗಬಾರದೆಂದು ಎಚ್ಚರಿಕೆ ಅವಧಾನದಿಂದರ್ಪಿಸಿ ಪ್ರಕ್ಷಾಳನ ಲೇಹ್ಯ ಅಂಗಲೇಪನದಿಂದ ಅವಧಾನವ ಮಾಡುತಿಪ್ಪ ಪರಮ ವಿರಕ್ತರೇ ಪದಾರ್ಥವಂ ತಂದು ಕರದಲ್ಲಿ ಕೊಟ್ಟರೇನ ಮಾಡುವಿರಯ್ಯ? ಭಕ್ತರು ಕ್ರೀವಿಡಿದು ಪದಾರ್ಥವ ಪರಿಯಾಣದಲ್ಲಿ ತಂದರೆ ಭಕ್ತಿ ಭಕ್ತಿಯಿಂದ ವೈಯಾರದಲ್ಲಿ ಪ್ರಸಾದವ ಸಲಿಸುವುದೇ ಎನ್ನ ಕ್ರೀಗೆ ಸಂದಿತು. ಅದಲ್ಲದೆ ಎನ್ನ ಕರಪಾತ್ರೆಗೆ ತಂದು ಭಿಕ್ಷವ ನೀಡಿದರೆ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ. ಅದು ಎನ್ನ ಜ್ಞಾನಕ್ಕೆ ಸಂದಿತು. ಅದು ಹೇಗೆಂದೊಡೆ ಹರಿಶಬ್ದವ ಕೇಳೆನೆಂದು ಭಾಷೆಯಂ ಮಾಡಿದ ಶಿವಭಕ್ತೆ ಸತ್ಯಕ್ಕನ ಮನೆಗೆ ಶಿವನು ಜಂಗಮವಾಗಿ ಭಿಕ್ಷಕ್ಕೆ ಬಂದು `ಹರಿ' ಎನ್ನಲೊಡನೆ ಹರನ ಬಾಯ ಹುಟ್ಟಿನಲ್ಲಿ ತಿವಿದಳು. ಅದು ಅವಳ ಭಾಷೆಗೆ ಸಂದಿತು. ಅವಳು ಶಿವದ್ರೋಹಿಯೇ? ಅಲ್ಲ. ನಾನು ಸಂಸಾರ ಸಾಗರದಲ್ಲಿ ಬಿದ್ದು ಏಳುತ್ತ ಮುಳುಗುತ್ತ ಕುಟುಕುನೀರ ಕುಡಿಯುವ ಸಮಯದಲ್ಲಿ ಶಿವನ ಕೃಪೆಯಿಂದ ನನ್ನಿಂದ ನಾನೇ ತಿಳಿದು ನೋಡಿ ಎಚ್ಚತ್ತು ಮೂರು ಪಾಶಂಗಳ ಕುಣಿಕೆಯ ಕಳೆದು ಭೋಗ ಭುಕ್ತ್ಯಾದಿಗಳನತಿಗಳೆದು ಅಹಂಕಾರ ಮಮಕಾರಗಳನಳಿದು ಉಪಾಧಿಕೆ ಒಡಲಾಶೆಯಂ ಕೆಡೆಮೆಟ್ಟಿ ಪೊಡವಿಯ ಸ್ನೇಹಮಂ ಹುಡಿಗುಟ್ಟಿ ಉಟ್ಟುದ ತೊರೆದು ಊರ ಹಂಗಿಲ್ಲದೆ ನಿರ್ವಾಣಿಯಾಗಿ ನಿಜಮುಕ್ತಿ ಸೋಪಾನವಾಗಿಪ್ಪ ಕರಪಾತ್ರೆ ಎಂಬ ಬಿರಿದು ಬಸವಾದಿಪ್ರಮಥರರಿಕೆಯಾಗಿ ಶಿವನ ಮುಂದೆ ಕಡುಗಲಿಯಾಗಿ ನಾನು ಕಟ್ಟದೆ ಆ ಬಿರುದಿಂಗೆ ಹಿಂದು ಮುಂದಾದರೆ ಶಿವನು ಮೂಗುಕೊಯ್ದು ಕನ್ನಡಿಯ ತೋರಿ ಅಣಕವಾಡಿ ನಗುತಿಪ್ಪನೆಂದು ನಾನು ಕರಪಾತ್ರೆಯಲ್ಲಿ ಸಂದೇಹವಿಲ್ಲದೆ ಸಲಿಸುತ್ತಿಪ್ಪೆನು. ಆ ಸಮಯದಲ್ಲಿ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ ಇದು ಎನ್ನ ಸಮ್ಯಜ್ಞಾನದ ಬಿರುದಿಗೆ ಸಂದಿತು. ನಾನು ಪ್ರಸಾದದ್ರೋಹಿಯೆ? ಅಲ್ಲ. ಇಂತಲ್ಲದೆ. ನಾನು ಮನಸ್ಸಿಗೆ ಬಂದಂತೆ ಉಂಡುಟ್ಟಾಡಿ ರೂಪ ರಸ ಗಂಧವೆಂಬ ತ್ರಿವಿಧಪ್ರಸಾದದಲ್ಲಿ ಉದಾಸೀನವ ಮಾಡಲಮ್ಮೆನು. ಮಾಡಿದೆನಾದಡೆ ವರಾಹ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು. ಇದ ಕಡೆಮುಟ್ಟಿ ನಡೆಸು ನಡೆಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು ? `ನ ದೇವಃ ಕೇಶವಾತ್ಪರಂ' ಎಂದ ವ್ಯಾಸ, ತನ್ನ ತೋಳುಗಳನೆರಡನು ಹೋಗಲಾಡನೆ ? ಹಿಡಿಯರೆ ಅಂದು ಆಕಾಶಗಣಂಗಳು ? ಮರಳಿ ಈಶ್ವರನಲ್ಲದೆ ದೈವವಿಲ್ಲೆಂದು ಶ್ರುತ್ಯರ್ಥವನರಿದು ದೇವಾರ್ಚನೆಯಂ ಮಾಡಲಾಗಿ ಆ ವ್ಯಾಸನ ಎರಡು ಕರಂಗಳು ಬಂದು, ಅಶೇಷವಹಂತಹ ಚರ್ಮ ಈಶ್ವರನ ಆಲಯದ ಮುಂದೆ ಧ್ವಜಪತಾಕೆಗಳಾಗದೆ ? ಈರೇಳು ಲೋಕವು ಅರಿಯೆ. ಅನಂತಪುರಾಣಾಗಮಗಳಲ್ಲಿ ಕೇಳಿರೆ: ಈಶ್ವರಾರ್ಚನೆಯ ಮಾಡಿ ಮರಳಿ ವಿತಥವಾಗಿ ಪರದಾರಕಿಚ್ಚೈಸಿದಡೆ ಇವಂಗಿದೆ ಪ್ರಿಯವೆಂದು ಆ ಇಂದ್ರನ ಮೈಯೆಲ್ಲಾ ಅನಂಗನಹಂತಹ ಅಂಗವಾಗದೆ ? ಈರೇಳು ಭುವನವರಿಯೆ. ಮರಳಿ ಈಶ್ವರಾರ್ಚನೆಯ ಮಾಡಲು ಆ ಅಂಗದ ಯೋನಿ[ಕೂ]ಪೆಲ್ಲಾ ನಯನಂಗಳಾಗವೆ ಇಂದ್ರಂಗೆ ? ಇದನರಿದು ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ. ಅರಿದರಿದು ಬರಿದೊರೆ ಹೋಗಬೇಡ. ಋಷಿಗಳ ಶಿವಾರ್ಚನೆಯ ವಿಶೇಷವಹಂತಹ ಫಲವ ಕೇಳಿರಣ್ಣಾ: ಕೀಳುಗುಲದ ಋಷಿಗಳ ಕುಲನಾಮಂಗಳ ತೊಡೆದು ಮೇಲುಗುಲನಾಮವ ಕೇಳಿರಣ್ಣಾ. ಅದು ಹೇಗೆಂದಡೆ: ಮುಖದಿಂದುತ್ಪತ್ಯವಾದ ಬ್ರಾಹ್ಮಣನು ಆ ಋಷಿಗಳ ಶಾಖೆಯಾದನು, ಅವರ ಗೋತ್ರವಾದನು. ಶಿವಾಚಾರ ವಿಶೇಷವೊ ? ಕುಲ ವಿಶೇಷವೊ ? ಹೇಳಿರಣ್ಣಾ. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಕ್ರೂರಹೃದಯರ ಮಾತ ಕೇಳಲಾಗದು. ಹೋಹೋ ಶಿವನ ಮುಖದಿಂದ ಹುಟ್ಟಿ ಉತ್ತಮವಹಂತಹ ಬ್ರಾಹ್ಮಣಧರ್ಮದಲ್ಲಿ ಜನಿಸಿದಂತಹ ವರ್ಣಿಗಳು ಕ್ಷತ್ರಿಯನ ಭಜಿಸ ಹೇಳಿತ್ತೆ ಈ ವೇದ ? `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್' ಎಂದುದಾಗಿ_ ಶಿವನನೆ ಧ್ಯಾನಿಸಿ, ಇತರ ದೇವತೆಗಳ ಬಿಡಹೇಳಿತ್ತಲ್ಲವೆ ? ಅದಂತಿರಲಿ, ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಸತ್ತ ಕಪಿಲೆಯ ಕಡಿದು ಹಂಚಿ ತಿನ್ನ ಹೇಳಿತ್ತೆ ವೇದ ? ಆಗದು ಅವದಿರ ಸಂಗ. ಅಧಮರ ವರ್ಣಾಶ್ರಮಹೀನರ ಕರ್ಮವ ಕಳೆದೆಹೆವೆಂದು ದತ್ತಪುತ್ರರಾಗಿ ಹೊರಸಿ[ನಡಿ]ಯಲಿ ನುಸುಳ ಹೇಳಿತ್ತೇ ಆ ವೇದ ? ಭುಂಜಿಸಿ ಮುಕ್ತಿಯನಿತ್ತಿಹೆವೆಂದಡೆ ಅದಂತಿರಲಿ, ಹಲ ಕೆಲ ಕಾಲ ವಂದಿಸಿದ ಗೌತಮಂಗೆ ಬಾರದೆ ಅಂದು ಗೋವಧೆ ? ಅದಂತಿರಲಿ, ಬ್ರಾಹ್ಮಣರೆ ದೈವವೆಂದು ದಾನಾದಿಗಳ ಮಾಡಿದ ಕರ್ಣನ ಶಿರಕವಚ ಹೋಗದೆ ಜಗವರಿಯೆ ? ವಿಷ್ಣುದೈವವೆಂದರ್ಚಿಸಿದ ಬಲಿ ಬಂಧನಕ್ಕೆ ಬಾರನೆ ಮೂಜಗವರಿಯೆ ? ಶಿಬಿಯ ಮಾಂಸವ ಕೊಂಡು ಇತ್ತ ಮುಕ್ತಿಯ ಕೇಳಿರಣ್ಣಾ. ಅವಂಗೆ ಬಂದ ವಿಧಿಯ ಹೇಳಲಾಗದು. ಅದಂತಿರಲಿ, ಶಿವನ ಭಕ್ತರಿಗೆ ಪರಮಾಣುವಿನಷ್ಟು ಕಾಂಚನವನೀಯೆ ಅಣಿಮಾದ್ಯಷ್ಟಮಹದೈಶ್ವರ್ಯವನೀವರು, ಮೇಲೆ ಮುಕ್ತಿಯಹುದು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವ ಸಾಯುಜ್ಯಮಾಪ್ನುಯಾತ್ ಎಂದುದಾಗಿ, ಅದಲ್ಲದೆ ಮತ್ತೆ ದಾನಪರಿಗ್ರಹಂಗಳಂ ಕೊಂಡ ಕೆಲಬರ ಮುಕ್ತರ ಮಾಡಿ ಶಿವಲೋಕಕ್ಕೆ ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ ? ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣಮಹಾತ್ಮೆಯನ್ನು ಯಜುರ್ವೇದ ಸಾಕ್ಷಿಯಾಗಿ ಪೇಳುವೆ ಕಾಶಿಯ ಕಾಂಡದಲ್ಲಿ.
--------------
ಉರಿಲಿಂಗಪೆದ್ದಿ
ಅಜಾತನೆಂದೆನಬೇಡ, ಜಾತನೆಂದೆನಬೇಡ. ಹದಿನೆಂಟುಜಾತವಾದರಾವುದು ? ಒಂದೇ ಗುರುವಿನ ವೇಷವಿದ್ದವರಿಗೆ ದಾಸೋಹವ ಮಾಡುವುದೆ ಶಿವಾಚಾರ. ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು ಮರಳಿ ವೇಷವಳಿದು ಬಂದವರಿಗೆ ದಾಸೋಹವ ಮಾಡುವದು, ಶಿವಾಚಾರಕ್ಕೆ ಹೇಸಿಕೆ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅರ್ಥದ ಮೇಲಣ ಆಶೆಯುಳ್ಳನ್ನಕ್ಕರ, ಮತ್ರ್ಯಲೋಕದ ಮಹಾಜಂಜರಿ ಬಿಡದಯ್ಯ. ನಾನು ಮತ್ರ್ಯಲೋಕದ ಹಂಬಲ ಹರಿದು, ನಿನ್ನ ನಂಬಿ ನಚ್ಚಿದೆನೆಂಬುದಕ್ಕೆ ಪ್ರತ್ಯಕ್ಷಮಂ ತೋರುತಿರ್ಪೆ ನೋಡಯ್ಯ ಲಿಂಗವೆ. ಅನಘ್ರ್ಯವಾದ ಮುತ್ತು ರತ್ನಂಗಳು ಹೊಂಗೊಡದಲ್ಲಿ ತುಂಬಿ, ನಾನಿರ್ದ ಏಕಾಂತವಾಸಕ್ಕೆ ಉರುಳಿ ಬರಲು, ಹಾವ ಕಂಡ ಮರ್ಕಟನಂತೆ, ನಾನು ಅಡ್ಡಮೊಗವನಿಕ್ಕಿದೆನೆನೆ, ನಿನಗೊಲಿದ ಶರಣನೆಂದು ಭಾವಿಸಿ, ಎನ್ನ ಮತ್ರ್ಯಲೋಕದ ಸಂಕಲೆಯಂ ತರಿದು, ನಿನ್ನ ಗಣಂಗಳ ಒಳಗುಮಾಡು. ಅದಲ್ಲದೆ, ಅದರ ಮೇಲೆ ಕಿಂಚಿತ್ತು ಆಶೆಯಂ ಮಾಡಲೊಡನೆ, ಚಂದ್ರಸೂರ್ಯಾದಿಗಳುಳ್ಳನ್ನಕ, ಎನ್ನ ಹಂದಿ ನಾಯಿ ಬಸುರಲ್ಲಿ ಹಾಕದಿದ್ದೆಯಾದರೆ, ನಿನಗೆ ಅಲ್ಲಮಪ್ರಭುವಿನಾಣೆ ಆಳಿನಪಮಾನ ಆಳ್ದಂಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅರ್ಥ ಪ್ರಾಣ ಅಭಿಮಾನದೊಳಣುಮಾತ್ರವಿಲ್ಲದೆ ಮಾಡುವ ಭಕ್ತನಂಗಳ ಪಾವನಕ್ಷೇತ್ರ. ಆತನ ಮಂದಿರ ಶಿವನಮನೆ. ಆತನೊಡನೆ ದರ್ಶನ ಸ್ಪರ್ಶನ ಸಂಭಾಷಣೆ ಮಾಡಿದ ಸಜ್ಜನರೆಲ್ಲ ಅಮರಗಣ ಮನು ಮುನಿಗಳು. ಆ ಮಹಾಪುರುಷನೇ ಸಾಕ್ಷಾತ್ ಪರಮೇಶನೆಂಬೆನಯ್ಯಾ. ಅದಲ್ಲದೆ ಹೊನ್ನು, ಹೆಣ್ಣು, ಮಣ್ಣುಗಳ ಮೋಹವೇ ಪ್ರಾಣವಾಗಿ ಚನ್ನಗುರುಲಿಂಗಜಂಗಮವೇ ಅನ್ಯವಾಗಿ ದಂಡಕ್ಕನುಗೈದ ರಾಜನ ದರ್ಶನದಂತೆ ಮುಖವನಡಗಿಸಿಕೊಂಬ ದ್ರೋಹಿಗಳ ತೆರಹಿಲ್ಲದೆ ನರಕವನುಂಡು ಕಡೆಗಾಣದ ಸೊಣಗರೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->