ಅಥವಾ

ಒಟ್ಟು 86 ಕಡೆಗಳಲ್ಲಿ , 26 ವಚನಕಾರರು , 85 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ. ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ. ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ._ ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಆ ಸಹಸ್ರದಳ ಪದ್ಮವ ಪೊಕ್ಕು ನೋಡಿ ಸಾದ್ಥಿಸಿ, ``ಸಹಸ್ರಶಿರ್ಷಾಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋವೃತ್ವಾ ಅತ್ಯತಿಷ್ಠದ್ದಶಾಂಗುಲಂ ||'' ಎಂಬ ಪರಮಪುರುಷನ ಕಂಡು ನಮೋ ನಮೋ ಎನುತಿರ್ದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ ಸರ್ವಕಲಾಬ್ಥಿಜ್ಞತೆಯೆಂಬ ಅನುಗ್ರಹವೇ ಭಾವಲಿಂಗವಾಗಿ ಎನ್ನ ಭಾವದ ಕರಸ್ಥಲದಲ್ಲಿ ನಿಂದು, ಭಾವ ತನುಮನಯುಕ್ತವಾದ ಕಾರ್ಮಿಕಮಲ ಭ್ರಾಂತಿಯನಳಿಸಿ ನಿಭ್ರಾಂತನಾದೆ. ಅಯ್ಯಾ, ಶ್ರೀಗುರುವಿನ ಮಂತ್ರದೀಕ್ಷೆಯಿಂದೆ ವಿದ್ಯಾವಿನಯ ಸಂಪನ್ನತೆಯೆಂಬ ಅನುಗ್ರಹವೇ ಪ್ರಾಣಲಿಂಗವಾಗಿ ಎನ್ನ ಮನದ ಕರಸ್ಥಲದಲ್ಲಿ ನಿಂದು, ಮನ ಭಾವ ತನುಯುಕ್ತವಾದ ಮಾಯಾಮಲಸಂಕಲ್ಪನಳಿಸಿ ಅಕಲ್ಪಿತನಾದೆ. ಅಯ್ಯಾ, ಶ್ರೀ ಗುರುವಿನ ಕ್ರಿಯಾದೀಕ್ಷೆಯಿಂದೆ ವೀರಶೈವೋತ್ತಮತೆಯೆಂಬ ಅನುಗ್ರಹವೇ ಇಷ್ಟಲಿಂಗವಾಗಿ ಎನ್ನ ಕಾಯದ ಕರಸ್ಥಲದಲ್ಲಿ ನಿಂದು, ತನು ಮನ ಭಾವಯುಕ್ತವಾದ ಆಣವಮಲದನಿಷ್ಟವನಳಿಸಿ ಅಕಾಯಚರಿತನಾದೆ. ಅಯ್ಯಾ, ನಿರಂಜನ ಚನ್ನಬಸವಲಿಂಗವ ಕರ, ಕಕ್ಷ, ಕಂಠ, ಉರಸಜ್ಜೆ, ಉತ್ತುಮಾಂಗ, ಅಮಳೊಕ್ಯದಲ್ಲಿ ಧರಿಸಿ ಪರಮಸುಖಿಯಾಗಿ ನಮೋ ನಮೋ ಎನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ಬಸವ. ಶತಕೋಟಿಬ್ರಹ್ಮಾಂಡಂಗಳು ನಿನ್ನ ರೋಮದ ತುದಿಯಲ್ಲಿಪ್ಪವು ಬಸವ. ಎನ್ನ ಭವವೆಂಬ ವಾರಿದ್ಥಿಯ ದಾಂಟುವುದಕ್ಕೆ ನಿನ್ನ ಬಾಲತುದಿಯ ಎಯ್ದಿದೆನು ಬಸವ. ಆರಾಧ್ಯಪ್ರಿಯ ಸಕಳೇಶ್ವರಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಸಕಳೇಶ ಮಾದರಸ
ಬಸವಣ್ಣನ ಡಿಂಗರಿಗನಯ್ಯಾ, ಚನ್ನಬಸವಣ್ಣನ ಹಳೆಯನಯ್ಯಾ, ಪ್ರಭುದೇವರ ಬಂಟನಯ್ಯಾ, ಮಡಿವಾಳಯ್ಯನ ಲೆಂಕನಯ್ಯಾ, ಸಿದ್ಭರಾಮಯ್ಯನ ಭೃತ್ಯನಯ್ಯಾ. ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು, ಬದುಕಿದೆನಯ್ಯಾ. ಕಾಮಧೂಮ ಧೂಳೇಶ್ವರಾ. ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ, ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ನಿರಂಜನಜಾಗ್ರದಲ್ಲಿನಿಂದಡೆ ಭಕ್ತನೆಂಬೆ. ನಿರಂಜನಸ್ವಪ್ನದಲ್ಲಿನಿಂದಡೆ ಮಹೇಶ್ವರನೆಂಬೆ ನಿರಂಜನಸುಷುಪ್ತಿಯಲ್ಲಿ ನಿಂದಡೆ ಪ್ರಸಾದಿಯೆಂಬೆ. ನಿರಂಜನತೂರ್ಯದಲ್ಲಿ ನಿಂದಡೆ ಪ್ರಾಣಲಿಂಗಿಯೆಂಬೆ. ನಿರಂಜನವ್ಯೋಮದಲ್ಲಿ ನಿಂದಡೆ ಶರಣನೆಂಬೆ. ನಿರಂಜನವ್ಯೋಮಾತೀತದಲ್ಲಿ ನಿಂದಡೆ ಐಕ್ಯನೆಂಬೆ. ನಿರಂಜನವ್ಯೋಮಾತೀತಕತ್ತತ್ತವಾಗಿಹ ಮಹಾಘನ ನಿರ್ವಾಣಾತೀತವೆ ಅಂಗವಾದ ಮಹಾಶರಣಂಗೆ ಭವಹಿಂಗಿತ್ತಾಗಿ, ಅವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ. ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ. ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಸರ್ವಾವಧಾನಿ ಸಮಯಪ್ರಸಾದಿ ನೋಡಯ್ಯಾ, ಲಿಂಗಾರ್ಪಿತದಲ್ಲಿ ಸರ್ವಾವಧಾನಿ ನೋಡಯ್ಯಾ, ಅಯ್ಯಾ, ಅನಾಹತಂಗಳ ಮುನ್ನವೆ ಇರಲೀಯ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಬಸವಣ್ಣ
ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ ತಾಯಿ ಮೊಲೆಯನೂಡಿದಳು. ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ ! ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ ! ಈ ನಿಜದ ನಿರ್ಣಯವ ಎನಗೆ ತೋರಿದ ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಕೆಳಗೇಳು ಲೋಕಂಗಳಿಲ್ಲದ ಮುನ್ನ, ಮೇಲೇಳು ಲೋಕಂಗಳಿಲ್ಲದ ಮುನ್ನ ಸಹಸ್ರ (ಸಮಸ್ತ ?) ಬ್ರಹ್ಮಾಂಡಗಳಿಲ್ಲದ ಮುನ್ನ, ಅಲ್ಲಿಂದತ್ತತ್ತ; ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ ! ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ, ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು ನಾನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
[ಪರಮಂ]ಗೆ ನಾನು ಮದವಳಿಗೆ. ಆರುನೆಲೆಯ ಕರುಮಾಡವ ಮಾಡಿ, ಎಂಟು ಗುಣವ ಸುನಿಗೆಯ ಮಾಡಿ, ಎನ್ನ ನೊಸಲ ತಂಪನೆರೆದು ಚಿಕ್ಕಯ್ಯಪ್ರಿಯ ಸಿದ್ಧಲಿಂಗಪ್ರಭುವಿಂಗೆ ನಮೋ ನಮೋ ಎನುತಿರ್ದೆನು [ಕಾಣಾ]
--------------
ಘಟ್ಟಿವಾಳಯ್ಯ
ಉರಿಯ ಸೀರೆಯನುಟ್ಟು, ಕಡೆಸೆರಗ ಬಿಡುಬೀಸಿ, ಮಡದಿ ತನ್ನ ಕೆಳದಿಯರನೊಡಗೊಂಡು ಆಡುತ್ತಿರೆ, ಪತಿ ಬಂದು ಮುಡಿಯ ಹಿಡಿದು ಸೀರೆಯನುಗಿಯೆ, ಮಡದಿಯೊಡಗೂಡುತ್ತಿರೆ; ಸಮರಸದಲ್ಲಿ ಸತಿಯಳಿದು ಪತಿಯಾಗಿ, ಪತಿಯಳಿದು ನಿಃಪತಿಯಾಗಿ, ಸತಿ ಪತಿ ನಿಃಪತಿ- ಎಂಬ ತ್ರಿವಿಧವು ಏಕಾರ್ಥವಾದ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ, ಗುರುವೆಂದಲ್ಲಿಯೆ ನೀನೆಂದು ನಡೆದವನ, ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ, ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು. ಎನ್ನ ಮನವ ನಿರ್ಮಲ ಮಾಡಿದನಯ್ಯಾ, ಚೆನ್ನಬಸವಣ್ಣನು. ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ, ಪ್ರಭುದೇವರು. ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ, ತಮ್ಮೊಳಿಂಬಿಟ್ಟುಕೊಂಡ ಕಾರಣ, ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಇನ್ನಷ್ಟು ... -->