ಅಥವಾ

ಒಟ್ಟು 14 ಕಡೆಗಳಲ್ಲಿ , 12 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು ? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ? ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ? ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ? ನಿಮ್ಮ ಶಿವಾಚಾರವೇನಾಯಿತು ? ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಅಯ್ಯಾ, ನಾವು ಗುರು ಲಿಂಗ ಜಂಗಮದ ಪಾದೋದಕ ಪ್ರಸಾದಸಂಬಂದ್ಥಿಗಳೆಂದು ನುಡಿದುಕೊಂಬ ಪಾತಕರ ಮುಖವ ನೋಡಲಾಗದು. ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ, ಜನನದ ಬೇರ ಕಿತ್ತೊರಸಬೇಕು. ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು. ಇಂತಪ್ಪ ಚಿದ್ರಸ ಪಾದೋದಕ ಚಿತ್‍ಪ್ರಕಾಶ ಪ್ರಸಾದ. ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ ಸಂಬಂದ್ಥಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು, ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ, ಸದಾಚಾರದಿಂದ ಆಚರಿಸಲರಿಯದೆ, ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ, ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ ಅಷ್ಟಾವರಣವೆಂತು ಸಿದ್ಧಿಯಹುದೋ? ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ ಉಪಮಂತ್ರ ಕೋಟ್ಯಾನುಕೋಟಿಗೆ ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು. ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು. ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು. ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು. ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು. ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ ಇಂಥವರಿಗೆಂತು ಸಾಧ್ಯವಹುದು? ಆಗದೆಂದಾತ ನಮ್ಮ ಶರಣ ಕಲಿದೇವರದೇವ
--------------
ಮಡಿವಾಳ ಮಾಚಿದೇವ
ಅಜಾತನೆಂದೆನಬೇಡ, ಜಾತನೆಂದೆನಬೇಡ. ಹದಿನೆಂಟುಜಾತವಾದರಾವುದು ? ಒಂದೇ ಗುರುವಿನ ವೇಷವಿದ್ದವರಿಗೆ ದಾಸೋಹವ ಮಾಡುವುದೆ ಶಿವಾಚಾರ. ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು ಮರಳಿ ವೇಷವಳಿದು ಬಂದವರಿಗೆ ದಾಸೋಹವ ಮಾಡುವದು, ಶಿವಾಚಾರಕ್ಕೆ ಹೇಸಿಕೆ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಗುರುಕೊಟ್ಟ ಕುರುಹ ಬಿಟ್ಟು ನರರು ನಟ್ಟಕಲ್ಲಿಂಗೆ, ಒಟ್ಟಿದ ಮಣ್ಣಿಂಗೆ ನಿಷೆ*ವೆರದು ನುಡಿವ ಭ್ರಷ* ಕನಿಷ* ಕರ್ಮಿಗಳ ಮುಖವ ನೋಡಲಾಗದು. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶಿವಯೋಗಿ ಶಿವಯೋಗಿ ಎಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಅಂಗಕುಳ ಒಳಗೊಂಡು ಕಾಮಿನಿಯರ ಬೆಳೆದ ಹೊಲನ ಹೊಕ್ಕು ಕೂಡಿಸಿ ತಿಂಬುವ ಪಶುವಿನ ನಾಲ್ಕು ಕಾಲನು ಮುರಿದು, ಘಟ್ಟವೆಂಬ ಗವಿಯೊಳಗೆ ಮನದ ದಿಟ್ಟವೆಂಬ ಗೂಟಕ್ಕೆ ಕಟ್ಟಿ, ತನುವೆಂಬ ಗಿರಿಗಹ್ವರದೊಳಗೆ ಬೆಳೆದಿದ್ದ ನಾನಾ ಪರಿಪರಿಯ ಗಿಡ, ಕಸಾದಿಗಳೆಲ್ಲವ ಭಾನುವೊಲು ಮಂತ್ರದಿಂದ್ಹಲ್ಲ ಕಿತ್ತು ಸುಟ್ಟು ಬೂದಿಯನು ಮಾಡಿ ಸರ್ವಕ್ಕೆಲ್ಲ ಪಣಮಾಡಿಕೊಂಡು ಇರಬಲ್ಲರೆ, ಹಲವು ಕಡೆಗೆ ಹರಿದಾಡುವಂತೆ ಮನವನೆಲ್ಲ ನೆಲೆಗೊಳಿಸಿ ನಿಲಿಸಿದಂತಾ ಮಹಿಮನ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೊ ! ನಿಮ್ಮ ಅಂಗ ಗುರುಕೊಟ್ಟ ಅರಿವಿನ ಅರಿವೆಯನು ಬಿಟ್ಟು, ಮರವಿನ ಮನೆಯೊಳಗೆ ಮೂರ್ಛೆಗೈದರೆ, ನಿಮ್ಮನ್ನು ಹರಕೊಂಡು ತಿಂದೆನೆಂದು ಬರುವ ಕಾಳೋರಗನೆಂಬ ಸರ್ಪನ ಉತ್ತರದ ಬಾಯ ಮುಚ್ಚಿ ನವದ್ವಾರಂಗಳನ್ನೆಲ್ಲ ಹೊಲಿದು, ಒಂಬತ್ತು ಬಾಗಿಲಿಗೆ ಬೀಗಮುದ್ರೆಯ ಮಾಡಿ, ತುಂಬಿದಾ ಕುಂಭದೊಳಗಿನ ಉದಕದಂತೆ ಇರಬಲ್ಲರೆ ಅಂತಹವನಿಗಾ ಕಾಲನ ಬಾಧೆಯ ಗೆಲಿದಂಥ ಮಹಿಮನೆಂದೆನ್ನಬಹುದು ಕಾಣಿರೊ! ನಿಮ್ಮಂಗ ಆಧಾರವೆಂಬ ಗದ್ದಿಗೆಯ ಮೇಲೆ ಪದ್ಮಾಸನವೆಂಬ ಪವನಗ್ರಂಥಿಯ ಹೊಲಿದು, ನಿರ್ಮಳ ಸುಚಿತ್ತದಲ್ಲಿ ಮೂರ್ತವನು ಮಾಡಿಕೊಂಡು, ಪೂರ್ವದಿಕ್ಕಿನಲ್ಲಿ ಮುಖವನಿಕ್ಕಿ ಪಂಚಮಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ, ಅಡರೇರಿ ಬರುವ ಸಿಡಿಲು ಮಿಂಚಿನ ಅವಸ್ಥೆ ಶೌರ್ಯವನು ಕಂಡು, ಪಶ್ಚಿಮಕ್ಕೆ ಮುಖವ ತಿರುವಿ ಪೂರ್ವಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ ಭಾನುವಿನ ಸಮೀಪದಲ್ಲಿ ಇದ್ದ ಬಯಲಿಗೆ ಬಯಲು ಆಕಾರಗೆಟ್ಟ ಪುರುಷನ ನಿಲವು ನಿಧಾನವ ನೋಡಿಕೊಂಡು ಸರ್ವಮುನಿಜನಂಗಳಿಗೆಲ್ಲ ಅರ್ತಿಯನು ಮಾಡಿ ಹೇಳಿ ನಿರ್ಮಾಯವಾಗಿ ಹೋಗಬಲ್ಲರೆ ಆತನಿಗಾ ಮರಣಕ್ಕೆ ವಿಧಿಹಿತನಾದಂಥ ಮಹಾಮಹೇಶ್ವರನೆಂದೆನ್ನಬಹುದು ಕಾಣಿರೊ ! ಇಂತು ಇದನರಿಯದೆ ಯೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿಗಳೆಂಬ ಹೆಸರಿಟ್ಟುಕೊಂಡು ದೇಶವ ತಿರುಗುವ ಶಿವಯೋಗಿಗಳೆಂಬುವ ಮೋಸ ಡಂಬಕರ ಕುಟಿಲಗಳ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ನಿಜಮುಕ್ತಿಗೆ ಸದಾ ಸಂಧಾನದಲ್ಲಿರಬೇಕೆಂದು ಶಿವಶರಣರು ನುಡಿಯುತ್ತಿಪ್ಪರು. ಆ ಸಂಧಾನದ ಹೊಲಬ ನಾನರಿಯೆ, ಎನಗೆ ಮುಕ್ತಿಯಿಲ್ಲ. ಇನ್ನೇವೆನೆಂದು ಕಂಬನಿದುಂಬಿ ಕರಗುತಿಪ್ಪೆ ಮನವೇ. ಗುರು ಕೊಟ್ಟ ಸಂಧಾನವೆ ಕರಕಮಲದಲ್ಲಿ ಪ್ರಸನ್ನ ಪ್ರಸಾದಮಂ ಪ್ರತ್ಯಕ್ಷವಾಗಿ ತೋರುತ್ತಿದೆ. ಗುರು ಕೊಟ್ಟ ಸಂಧಾನವೆ ಎಂಟೆಸಳಿನ ಚೌದಳದ ಮಧ್ಯದಲ್ಲಿ ಹೊಂಗಲಶದಂತೆ ಥಳಥಳನೆ ಹೊಳೆಯುತ್ತಿದೆ. ಗುರುಕೊಟ್ಟ ಸಂಧಾನವೆ ಮುಪ್ಪುರದ ಮಧ್ಯದಲ್ಲಿ ರತ್ನ ಮಿಂಚಿನಂತೆ ಕುಡಿವರಿದು ಉರಿಯುತ್ತಿದೆ. ಗುರು ಕೊಟ್ಟ ಸಂಧಾನವೆ ಪಂಚಪತ್ರದ ಮಧ್ಯದಲ್ಲಿ ಬೆಳ್ದಿಂಗಳ ಲತೆಯಂತೆ ಬೀದಿವರಿದು ಬೆಳಗ ಬೀರುತ್ತಿದೆ. ಈ ಪ್ರಕಾರದ ಬೆಳಗೆ ಮುಕ್ತಿಸಂಧಾನವಾಗಿ ಒಪ್ಪುತ್ತಿಹವು. ಇವನೆ ಕಣ್ದುಂಬಿ ನೋಡು ಇವನೆ ಮನದಣಿವಂತೆ ಹಾಡು ಇವನೆ ಅಪ್ಪಿ ಅಗಲದಿಪ್ಪುದೇ ನಿಜಮುಕ್ತಿ. ತಪ್ಪದು ನೀನಂಜಬೇಡ. ಗುರು ಕೊಟ್ಟ ಸಂಧಾನವಂ ಮರೆದು ಭಿನ್ನವಿಟ್ಟು ಲಕ್ಷಿಪರ ಸಂಧಾನವೆಲ್ಲಾ ಭವಸಂಧಾನವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುರುಕೊಟ್ಟ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಪ್ರಣವಪಂಚಾಕ್ಷರಿಯ ಅನ್ಯರಿಗೆ ಕೊಡಬಹುದೆ ? ಕೊಡಬಾರದು. ಆ ಗುರುವಿಂಗೆ ಕೊಡಬೇಕು; ಆ ಗುರುವಲ್ಲದೆ ಈಸಿಕೊಳ್ಳಲರಿಯನಾಗಿ, ಇಂತಲ್ಲದೆ ಗುರುಸಂಬಂಧಕ್ಕೆ ಬೆರೆವ ಗುರುದ್ರೋಹಿಯನೇನೆಂಬೆ ಮಸಣಯ್ಯಪ್ರಿಯ ಗಜೇಶ್ವರಾ !
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಕರ್ಲಭೂಮಿ ಸವುಳ ಭೂಮಿ ಕಲ್ಲು ಭೂಮಿ ಈ ಮೂರು ಭೂಮಿಯ ಹುಲ್ಲಿನ ಹೊಡೆಯ ರಸವ ಸೇವಿಸದೆ, ಕೆಂಪು ಬಿಳುಪು ಮಸಬು ಎಂಬ ಭೂಮಿಯ ಹುಲ್ಲಹೊಡೆಯ ರಸವ ಸೇವಿಸಿ, ಗುರುಕೊಟ್ಟ ಕಾಯಕದಲ್ಲಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಣಿಗೆ ಹೋರಿ ಕಡವರವ ನೀಗಲೇತಕ್ಕೆ ? ಅಲುಗಾಡಿ ತುಂಬಿದ ಕೊಡನ ಹೊಡೆಗೆಡಹಲೇತಕ್ಕೆ ? ನಿನ್ನಂಗದಲ್ಲಿ ಗುರುಕೊಟ್ಟ ಲಿಂಗವೆಂಬುದೊಂದು ಕುರುಹು ಇರುತ್ತಿರಲಿಕ್ಕೆ ಆ ನಿಜಲಿಂಗದ ಸಂಗವನರಿಯದೆ ಸಂದಿಗೊಂದಿಯಲ್ಲಿ ಹೊಕ್ಕೆಹೆನೆಂಬ ಗೊಂದಣವೇತಕ್ಕೆ ? ತಾ ನಿಂದಲ್ಲಿ ಕೆಡಹಿದ ಒಡವೆಯ, ಆಚೆಯಲ್ಲಿ ನೆನೆದು ಅರಸಿದಡಿಲ್ಲ. ಅದು ಮತ್ತೆ ತನಗೆ ಸಂದಿಸುವುದೆ ? ಘನಲಿಂಗ ನಿನ್ನಂಗದಲ್ಲಿದ್ದಂತೆ ಕಂಡೆ ಕಾಣೆನೆಂಬ ನಿನ್ನ ನಿಜ ನಿಂದಲ್ಲಿಯೆ ಸಂದೇಹವ ತಿಳಿದುಕೊ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಇಷ್ಟಲಿಂಗಪ್ರಾಣಿಗಳೆಂದು ಅರ್ಚಿಸಿ ಪೂಜಿಸಿ ಮತ್ತೆ, ನಿಜವಸ್ತು ಬೇರುಂಟೆಂದು ಆತ್ಮಂಗೆ ಗೊತ್ತ ಬೇರೆ ಅರಸುವಲ್ಲಿ ಇಷ್ಟಲಿಂಗದ ವಿಶ್ವಾಸ ಇತ್ತಲೆ ಉಳಿಯಿತ್ತು. ಆ ಗುಣ ವರ್ತನ ಹಾನಿ ಗುರುಕೊಟ್ಟ ವಸ್ತುವಿಗೆ ದೂರ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕರ್ಮಕಾಂಡಿ[ಗಳಿ]ಗೆ ಕತ್ತಲೆಕರ್ಮಿಗಳೆಂದು ನುಡಿವರು ನೋಡಾ. ಅವರು ಮಾಯಾಮೋಹಕ್ಕೆ ಸಿಲ್ಕಿ ಕೆಟ್ಟರು ಕಾಣಾ ಎಂದು ನುಡಿವರು ಕೇಳಾ. ಸಗುಣಸ್ಥಲದ ಮನೋಜ್ಞಾನಿಗಳವರು ಕೆಟ್ಟಂತೆ ನಾವು ಕೆಡಬಾರದು. ತಮ್ಮ ಮನಕ್ಕೆ ಬುದ್ಧಿಯಂ ಕೊಟ್ಟು ಆಸೆಯಂ ಬಿಟ್ಟು ತನುವೆಂಬ ಬಿಲ್ಲಿಗೆ ಮನವೆಂಬ [ಹೆದೆ]ಯನೇರಿಸಿ, ಉರಿನರಿಯಂಬ ಅಳವಡಿಸಿ ವಾರಿ ಮೋರೆಯನೆ ತಿದ್ದಿಕೊಂಡು ಗುರುಕೊಟ್ಟ ಬಿಲ್ಲ ದೃಢವಾಗಿ ಹಿಡಿದು ಶ್ರೀಗಿರಿಯೆಂಬ ಗುರಿಯ ನೋಡಿ ಎಸೆವಾಗ, ಭವ ಹರಿಯಿತ್ತು, ಕಾಲಕರ್ಮವೆಂಬ ಶಿರ ಹರಿಯಿತ್ತು. ಅರಸು ಪ್ರಧಾನಿ ಪ್ರಜೆ ಪರಿವಾರ ಓಡಿ ಹೋಯಿತ್ತು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಅಂದೇ ಬೆಳಗಾಯಿತ್ತು. ಇಂತಪ್ಪ ಪ್ರಸಾದ ಆ ಗುರು ಲಿಂಗ ಜಂಗಮ ತಮ್ಮೊಳಗಾಯಿತ್ತು. ಇಂತಪ್ಪ ಪ್ರಸಾದವು ಯಾರಿಗೂ ಅಳವಡದು. ಪ್ರಭುವಿನೊಳ್ ಐಕ್ಯವಾದ ಬಸವಸಂಪತ್ತಿಗಲ್ಲದೆ ಮಿಕ್ಕ ಪ್ರಪಂಚಿಗಳಿಗೆ ಅಳವಡದೆಂದು ಹೇಳುವ ಸಗುಣದ ಭ್ರಮಿತರು ಅವರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ ನೋಡಾ. ಮುಂದೆ ಇಷ್ಟವ ಕಂಡು ಮುಳುಗಿದವರಿಗೆ ಮುಕ್ತಿ ಎಂದೆಂದಿಗೂ ಇಲ್ಲ ಕಾಣಾ. ಇನ್ನು ಕೈವಲ್ಯಾನ್ವಯ ಪ್ರವರ್ತಕ ನಿಸ್ಸೀಮಾಂಬುಧಿ ನಿರ್ಲೇಪ ತಾನಾದಂಥ ದೇವ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಗುರುಕೊಟ್ಟ ಲಿಂಗ ತನ್ನ ನಚ್ಚಿ ನನಿಂದಫ ಆಯತವಾಯಿತ್ತಯ್ಯಾ, ಪ್ರಾಣ ನಚ್ಚಿನಿಂದ ಸ್ವಾಯತವಾಯಿತ್ತಯ್ಯಾ, ಉಭಯ ನಚ್ಚಿನಿಂದ ಸಂಗವಾಯಿತ್ತು, ಕೂಡಲಚೆನ್ನಸಂಗಾ ನಿಮ್ಮಲ್ಲಿ.
--------------
ಚನ್ನಬಸವಣ್ಣ
ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, ನೂರೊಂದು ಕುಲ, ಹದಿನೆಂಟು ಜಾತಿಯವರಿಗೆ ಶಿರಬಾಗಿ ಶರಣುಮಾಡುವರು. ಗುರುಕೊಟ್ಟ ಇಷ್ಟಲಿಂಗದ ಪೂಜೆಯ ಬಿಟ್ಟು, ಶೈವರು ಸ್ಥಾಪಿಸಿದ ನಟ್ಟಕಲ್ಲು ಸ್ಥಾವರ ಶೈವಲಿಂಗವ ಪೂಜಿಸುವವರು, ಮರಳಿ ವಿಪ್ರ ಪಂಚಾಳ ಕುಲದವರು ಮೊದಲಾಗಿ ಅನೇಕ ಭವಿಗಳಲ್ಲಿ ಜನಿಸಿ, ಹುಲಿಗಿ, ಎಲ್ಲಿ, ಬನಶಂಕರಿ, ಕಾಳಿ, ಜಟ್ಟಿಂಗ, ಹಿರಿಯೊಡಿಯ ಲಕ್ಕಿ, ದುರ್ಗಿದೇವಿ ಮೊದಲಾದ ಬೀದಿಬಜಾರದಲ್ಲಿರುವ ಅಧಮ ಕ್ಷೀಣ ದೇವತೆಗಳ ಪೂಜಿಸುವವರು. ಜಂಗಮವ ಕಂಡು ಜರಿದು ಜಂಗುಳಿದೈವಕ್ಕೆ ಜನಿಗಿಯ ಬಿಟ್ಟು, ಒಂದ್ಹೊತ್ತು ಉಪವಾಸ ಮಾಡಿ ಮಡಿಗಳನುಟ್ಟು, ಎಡಿಯ ಕೊಟ್ಟುಂಬುವವರು ಮರಳಿ ಆ ದೇವತೆಗಳ ಸೇವಕರಾಗಿ ಪುಟ್ಟುವರು. ಅನ್ನೋದಕದ ಪೂರ್ವಾಶ್ರಯವನಳಿಯದೆ ಲಿಂಗಕ್ಕೆ ತೋರಿ ಉಂಬವರೆಲ್ಲ ಮರಳಿ ಹೆಂಡಗಾರ ಕಟುಕರಲ್ಲಿ ಜನಿಸಿ ಕಂಡ ಹೆಂಡ ಸೇವಿಸುವರು. ಇಂತಪ್ಪರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿವನಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರು ಕರುಣಿಸಿಕೊಟ್ಟ ಮಂತ್ರವೆ ಸಕಲಬಯಕೆಯನುಂಟುಮಾಡುವುದಲ್ಲದೆ, ತನ್ನ ತಾ ನೆನೆದ ಮಂತ್ರವು ಸಿದ್ಧಿಯನುಂಟುಮಾಡದು ನೋಡಾ ! ಗುರುಕೊಟ್ಟ ಲಿಂಗವೆ ಮುಕ್ತಿಯನೀವುದಲ್ಲದೆ, ತನ್ನ ತಾನೆ ಕಟ್ಟಿಕೊಂಡ ಲಿಂಗವು ಮುಕ್ತಿಯನೀಯದು ನೋಡಾ ! ಇದು ಕಾರಣ, ಗುರೂಪದೇಶವ ಪಡೆಯಲರಿಯದೆ ಬರಿದೆ ಭಕ್ತರೆನಿಸಿಕೊಂಬ ಶೈವಮತದ ಭವಿಗಳಿಗೆ ಭವಜಾಲದಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->