ಅಥವಾ

ಒಟ್ಟು 16 ಕಡೆಗಳಲ್ಲಿ , 6 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರದಲ್ಲಿ ಲಿಂಗವ ಪಿಡಿದುಕೊಂಡು, ಕಣ್ಣುಮುಚ್ಚಿ ಸರಜಪಮಾಲೆಯ ಬೆರಳಿಂದ ಎಳೆದೆಳೆದು ಎಣಿಸುತ್ತ, ಗುರುಮೂರ್ತಿಯ ಧ್ಯಾನಿಸುತ್ತ ಕಂಡೆನೆಂಬುತ್ತ ಇರುವರೆ ಮೂಳರಿರಾ ? ನಿಮಗೆಲ್ಲಿಯದೊ ಗುರುಧ್ಯಾನ ? ವರ ಪರವಸ್ತುವಿಂಗೆ ಸರಿ ಎನಿಸಿಕೊಂಬ ಗುರುಸ್ವಾಮಿ ನಿಮ್ಮ ನೆರೆಹೊರೆಯ ಸರಿಸಮೀಪ ಗ್ರಾಮದಲ್ಲಿರಲು ಅವರನ್ನು ಲೆಕ್ಕಿಸದೆ, ಉದಾಸೀನವ ಮಾಡಿ ಕಂಡು ನಿನ್ನ ಉಂಬ ಉಡುವ ಸಿರಿ ಸಂಪತ್ತಿನೊಳು ಅವರನು ಸತ್ಕರಿಸದೆ, ಕರದಲ್ಲಿ ನೋಡಿ ಕಂಡಿಹೆನೆಂದು ಶಿರವಂ ಬಿಗಿದು, ಕಣ್ಣನೆ ತೆರೆಯದೆ, ಸ್ವರದಲಾಗ ಪಿಟಿಪಿಟಿ ಎನ್ನುತ್ತ ಅರಿದೆವೆಂಬ ಅರಿವಿಂಗೆ ಶಿರದೂಗಿ ಬೆರಗಾಗಿ ನಗುತಿರ್ದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುಸ್ವಾಮಿ ಧರಿಸುವ ಮಡಿಯ ನಾ ಸುತ್ತಿದೆನಾದಡೆ, ಶಿರವು ಬಿರಿದು ಬೀಳಾಗಲಿ ದೇವಾ. ಗುರುಸ್ವಾಮಿ ಧರಿಸುವ ಕಂಠಮಾಲೆಯ ನಾ ಧರಿಸಿದೆನಾದಡೆ, ಕಂಠ ಕತ್ತರಿಸಿ ಹೋಗ ದೇವಾ. ಗುರುಸ್ವಾಮಿ ಪಾನವ ಮಾಡುವ ಗಿಂಡಿಯ ನಾ ಪಾನವ ಮಾಡಿದೆನಾದಡೆ ನಾಲಗೆ ಸೀಳಿಹೋಗ ದೇವಾ. ಗುರುಸ್ವಾಮಿ ಶಯನಿಸುವ ಸುಪ್ಪಿತ್ತಿಗೆಯಲ್ಲಿ ನಾ ಶಯನ ಮಾಡಿದೆನಾದಡೆ ಎನ್ನಂಗದಲಿ ಕ್ರಿಮಿಗಳು ಬೀಳ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.
--------------
ಸಿದ್ಧರಾಮೇಶ್ವರ
ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ: ಆಚಾರಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ. ಈ ಕ್ರಮವರಿದು ಮಹಾಪ್ರಸಾದವೆಂದು ಕೈಕೊಂಡ ಬಳಿಕ ಪರಪಾಕಂ ನ ಕರ್ತವ್ಯಂ ಲಿಂಗನೈವೇದ್ಯಕಿಲ್ಬಿಷಂ ಸ್ವಯಂಪಾಕಂ ಪವಿತ್ರಾಣಾಂ ಲಿಂಗನೈವೇದ್ಯಮುತ್ತಮಂ ಎಂಬುದಾಗಿ, ಒಡಲ ಕಕ್ಕುಲತೆಗೆ, ಭಕ್ತನ ದಾಕ್ಷಿಣ್ಯಕ್ಕೆ ಅನ್ಯದೈವ ಭವಿನೇಮಸ್ತರುಳ್ಳಲ್ಲಿ ಹೊಕ್ಕರೆ, ಕೂಡಲಚೆನ್ನಸಂಗಾ ಅವರಂದೆ ದೂರ.
--------------
ಚನ್ನಬಸವಣ್ಣ
`ಏಕೋ ದೇವೋ ನ ದ್ವಿತೀಯಃ' ಎಂದೆನಿಸುವ ಶಿವನೊಬ್ಬನೆ, ಜಗಕ್ಕೆ ಗುರುವೆಂಬುದನರಿಯದೆ, ವಿಶ್ವಕರ್ಮ ಜಗದ ಗುರುವೆಂದು ನುಡಿವ ದುರಾಚಾರಿಯ ಮುಖವ ನೋಡಲಾಗದು. ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು ? ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು ? ಅವಂಗೆ ತೊಟ್ಟಿಲವ ಕಟ್ಟಿದರಾರು ? ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು ? ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು ? ಅವಂಗೆ ಅರುಹು ಮರಹು ಹುಟ್ಟಿಸಿದರಾರು ? ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ, ಮೊದಲಾದ ಸಂಪಾದನೆಗಳ ಕೊಟ್ಟವರಾರು ? ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ ದುರಾಚಾರಿಯೆಂದು ಭಾವಿಸುವುದು. ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು. ಅದೆಂತೆಂದಡೆ; ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ, ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ, ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೆ, ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ. ``ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ ಅರಿತರಿತು ಅನಾಚಾರವ ಗಳಹಿ, ಗುರುಲಿಂಗಜಂಗಮವೆ ಘನವೆಂದು ಅರಿಯದ ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ವೇದ ನಾಲ್ಕರ ಮೇಲೆ ಆದ ಪಂಚಮವಾಕ್ಯ ಆದ ಷಷ*ಮ ಬ್ರಹ್ಮವನು ಜಪಿಸುವ ಆಮೋದವನು ಮೀರಿ ಹೋಯಿತೈ ಕೈವಲ್ಯದಾದಿಪದ ತಾನೆ ನಿತ್ಯ. ನಿತ್ಯ ಅನಾದಿ ಸಂಸಿದ್ಧ ಯೋಗಮೂರ್ತಿ ಗುರುಸ್ವಾಮಿ ಮೂದೇವರಿಗೆ ದೀಕ್ಷೆಮಾಡಲೆಂದು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಲಕುಂಭಚಂದ್ರವತ್ತೆಂಬ ಯಥಾ ನ್ಯಾಯವನರುಹಿಸಿ ಕುಂಭ ಹಲವಾದಡೆ ಚಂದ್ರನೊಬ್ಬನೊ? ಇಬ್ಬರೊ? ಬಲ್ಲರೆ, ನೀವು ಹೇಳಿರೆ. ಆ ಭೂಮಿಯಲ್ಲಿ ಅಡಿಗೊಂದೊಂದು ಸ್ಥಲವಾಗಿ ಸ್ಥಲಕ್ಕೊಂದು ಬಣ್ಣವಪ್ಪ ಮೃತ್ತಿಕೆಯ ತಂದು ಘಟವಂ ಮಾಡಿ ಆ ಘಟವ, ಬಹುವಿಧಮಂ ಕೂಡಿ ದಗ್ಧವ ಮಾಡಿ ಏಕಶಾಯಿಯಂ ಮಾಡೆ, ಉಪಯೋಗಕ್ಕೆ ಸಂದುದೊ ಘಟವು? ಇಂತೀ ಪರಿಯಲ್ಲಿ ತಿಳಿದು ಕೇಳಿರೆ. ಇಂತು ಗುರುಕಾರುಣ್ಯವುಳ್ಳ ದೇಹಕ್ಕೆ ವರ್ಣಾಶ್ರಮವನತಿಗಳೆಯದಿದ್ದಡೆ ಆ ಗುರುಕಾರುಣ್ಯ ತಾನೆಂತಿಪ್ಪುದು ಹೇಳಿರೆ? ಆ ಗುರುಸ್ವಾಮಿ ಹಸ್ತಮಸ್ತಕಸಂಯೋಗವ ಮಾಡಿ, ಮಾಂಸಪಿಂಡವ ಕಳೆದು ಮಂತ್ರಪಿಂಡವಂ ಮಾಡಿ, ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ. ಶಿವಜನ್ಮಕುಲಯುತರಾಗಿ ಶಿವನ ಶರಣರು ವಾಙõïಮಾನಸಾಗೋಚರರೆನ್ನದಿದ್ದಡೆ ಕುಂಭೀಪಾತಕನಾಯಕನರಕ ತಪ್ಪದು, ಸತ್ಯಸತ್ಯ ಅವರಿಗಿದೇ ಗತಿ. ಇನ್ನು ಅನಂತಕೋಟಿಬ್ರಹ್ಮಕಲ್ಪ ಉಳ್ಳನ್ನಕ್ಕರ ಇಹರು ಕಾಣಾ ನರಕದಲ್ಲಿ, ಇದಕಿನ್ನು ಶ್ರುತಿ: ಪಾತಕಂತು ಮನುಷ್ಯಾಣಾಂ ತನುಭಾವೇಷು ವರ್ಧನಂ ಜನ್ಮಕರ್ಮಾಮರಣಾಂತಂ ಅಜಕಲ್ಪಾವಧಿಂ ಭವೇತ್ ಮುಕ್ತಿ ಎಂಬುದು ಉಂಟಾದುದಕ್ಕೆ ಉಪದೃಷ್ಟವ ಹೇಳಿಹೆನು: ಹಿಂದೆ ಅರಿಯಿರೆ, ನಿಮ್ಮ ಋಷಿ ಮೂಲಾಂಕುರವನು, ಉಪದೇಶಗಮ್ಯರಾಗಿ ಅಷ್ಟಾದಶಕುಲಂಗಳನೂ ಏಕವರ್ಣವ ಮಾಡಿರೆ ಉಪದೇಶಗಮ್ಯದಿಂದಲೂ ಇನ್ನರಿದು ಹಡೆದ ಪದಫಲಾದಿಗಳ ನೋಡಿರೆ. ಜನ್ಮಕರ್ಮನಿವೃತ್ತಿಯಾಗದೆ ಒಬ್ಬ ಋಷಿಗೆ? ಜೀವನದ ಮೊದಲಲ್ಲಿ ಆವ ಬೇಡ ಕಾಣಾ. ಜ್ಞಾನದಿಂದ ಅಂತಂತು ಮಾಡಿದಡೆ, ಶಿವಭಕ್ತನಿಂದೆಯಿಂದ ಒಂದು ಬ್ರಹ್ಮಕಲ್ಪಪರಿಯಂತರ ಕುಂಭೀಪಾತಕನಾಯಕನರಕದಲ್ಲಿ ಅಯಿದಾನೆ ಎಂದುದು ಶ್ರುತಿ: ಲಿಂಗಸ್ಯಾರಾಧನೇ ವಿಘ್ನಂ ಯತ್ಕೃತಂ ಸ್ವಾರ್ಥಕಾರಣಾತ್ ನಿಮೇಷಮಪಿ ತತ್ಪಾಪಂ ಕರೋತಿ ಚ ಕುಲಕ್ಷಯಂ ಸೂಕರಃ ಕೋಟಿಜನ್ಮಾನಿ ಲಭತೇ ಶತಕೋಟಿಭಿಃ ಮೃಗಶ್ಚ ಕೋಟಿಜನ್ಮಾನಿ ಶೃಗಾಲಃ ಕೋಟಿಜನ್ಮಭಿಃ ಅಂಧಶ್ಚ ಲಕ್ಷಜನ್ಮಾನಿ ಕುಬ್ಜಸ್ಸ್ಯಾದಬ್ಜಜನ್ಮಭಿಃ ಪಂಗುಲಃ ಕೋಟಿಜನ್ಮಾನಿ ಶಿಖಂಡೀ ಜಾಯತೇ ತಥಾ ಉಲೂಕೋ ವಾಯಸೋ ಗೃಧ್ರಶ್ಸೂಕರೋ ಜಂಬುಕಸ್ತಥಾ ಮಾರ್ಜಾಲೋ ವಾನರಶ್ಚೈವ ಯುಗಕೋಟಿ ಶತ ನರಃ ಲಿಂಗಾರ್ಚನರತಂ ವಾಚಾ ಸಕೃಲ್ಲಿಂಗಂ ಚ ದೂಷಯನ್ ಯುಗಕೋಟಿಕ್ರಿಮಿರ್ಭೂತ್ವಾ ವಿಷ್ಟಾಯಾಂ ಜಾಯತೇ ಪುನಃ ಕೀಟಃ ಪತಂಗೋ ಜಾಯೇತ ಕೃತವೃಶ್ಚಿಕದರ್ದುರಃ ಜಾಯಂತೇ ಚ ಮ್ರಿಯಂತೇ ಚ ನರಾಸ್ತೇ ನಾಸ್ತಿ ವೈ ಸುಖಂ ಇಂತೆಂದುದಾಗಿ- ಅಂದೊಮ್ಮೆ ಬಂದುದು ದೂರ್ವಾಸನೆಂಬ ಋಷಿಗೆ ಮತ್ರ್ಯಲೋಕದಲ್ಲಿ ಮಹಾಪವಾದ. ಅದ ಮರಳಿ ಪರಿಹರಿಸಿಕೊಳನೆ ಮತ್ರ್ಯಲೋಕದಲ್ಲಿ ಶಿವಾರ್ಚನೆಯಂ ಮಾಡಿ? ಶಿವಭಕ್ತರಿಗೆ ಮನೋಹರವಂತಹ ಪೂಜೆಯ ಮಾಡಿ ಆ ಪರಶಿವನ ಘನಲಿಂಗವೆಂದರಿದು ಅರ್ಚಿಸಿ, ಪರಮಭಕ್ತರ ಪಾದತೀರ್ಥಪ್ರಸಾದದಿಂದ ಆ ಋಷಿ ಅಮರಕಾಯನೆಂಬ ನಾಮವ ಪಡೆಯನೆರಿ ಆಕಾರಾಧ್ಯಕ್ಷರಂಗಳಿಗೆ ನಾಯಕವಂತಹ ಅಕ್ಷರ ಪಂಚಾಕ್ಷರವೆಂಬುದನರಿದು ಶಿವನೇ ಸರ್ವದೇವರಿಗೆ ಅಧಿದೈವವೆಂದರಿದು ವೇದಶಾಸ್ತ್ರಪುರಾಣಾನಿ ಸ್ಪಷ್ಟಾ ವೇಶ್ಯಾಂಗನಾ ಇವ ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ ಎಂದುದಾಗಿ: ಶಿವಾರ್ಚಕಪದದ್ವಂದ್ವಸ್ಯಾರ್ಚನಾತ್ ಸ್ಮರಣಾದಪಿ ಕೋಟಿಜನ್ಮಸು ಸೌಖ್ಯಂ ಸ್ಯಾತ್ ಸ ರುದ್ರೋ ನಾತ್ರ ಸಂಶಯಃ ಎಂಬರ್ಥವನರಿದು ಆಂಗಿರಸ, ಶಾಂಡಿಲ್ಯ, ವೇದವ್ಯಾಸ, ವಾಲ್ಮೀಕಿ, ಮಾಂಡವ್ಯ ಮೊದಲಾದ ಋಷಿಗಳೆಲ್ಲರೂ ಶಿವನಿಂದೆ, ಶಿವಭಕ್ತರ ನಿಂದೆಯ ಮಾಡಿ ಶಿವನ ಕ್ಷೇತ್ರವಹ ವೇದಾದಿಶಾಸ್ತ್ರಗಮಂಗಳಿಗೆ ಪ್ರತಿಯಿಟ್ಟು ಕರ್ಮಶಾಸ್ತ್ರಂಗಳನೆಸಗಿ ಅಕ್ಷಯನರಕವನೈದಿರಲಾಗಿ, ತ್ರ್ಯಕ್ಷನ ಶರಣ ಕೃಪಾವರದಾನಿ ಏಕನಿಷ* ಪರಮಮಾಹೇಶ್ವರ ಸಾನಂದನು ಕರುಣದಿಂದಲೆತ್ತನೆ ಅವರೆಲ್ಲರ ನರಕಲೋಕದಿಂದ? ಇಂತಿವಕ್ಕೆ ಸಾಕ್ಷಿದೃಷ್ಟಾಂತಗ್ರಂಥಗಳ ಪೇಳುವಡೆ, ಅಂತಹವು ಅನಂತ ಉಂಟು, ಆಗಮ ಪುರಾಣದಲ್ಲಿ ಅರಿವುಳ್ಳವರು ತಿಳಿದು ನೋಡುವುದು. ಶಾಪಹತರೆನಿಸುವ ಪಾಪಿಗಳು ಅವ ಮುಚ್ಚಿ ವಿತಥವ ನುಡಿವರು. ಇದನರಿದು ನಿತ್ಯಸಹಜ ಶಿವಲಿಂಗರ್ಚನೆಯಂ ಮಾಡಿ `ತತ್ವಮಸಿ' ವಾಕ್ಯಂಗಳನರಿದು ತತ್ಪದೇನೋಚ್ಯತೇ ಲಿಂಗಂ ತ್ವಂಪದೇನಾಂಗಮುಚ್ಯತೆ ಲಿಂಗಾಂಗಸಂಗೋ[s]ಸಿಪದಂ ಪರಮಾರ್ಥನಿರೂಪಣೇ ಎಂಬುದನರಿದು ನಿತ್ಯನಿರ್ಮಳಜ್ಞಾನಾನಂದ ಪ್ರಕಾಶವೆಂಬ ಮಹಾಮನೆಯಲ್ಲಿ ಪರಮಸುಖದಲ್ಲಿ ಆಕಾರಂಗಳ ಲಯವನು ತಮ್ಮಲ್ಲಿ ಎಯ್ದಿಸಿ ಮಹಾನುಭಾವರನೆನಗೆ ತೋರಯ್ಯಾ. ನಾ ನಿನ್ನನರಿದುದಕ್ಕೆ ಫಲವಿದು ನೀನೆನ್ನ ನೋಡಿದುದಕ್ಕೆ ಫಲವಿದು. ಸುಖಸಚ್ಚಿದಾನಂದಸ್ವರೂಪ ಅನಿತ್ಯವ ಮೀರಿದ ನಿತ್ಯ ನೀನಲ್ಲದೆ ಮತ್ತೊಂದುಂಟೆ? ಎನಗೆ ನಿನ್ನಂತೆ ನಿರ್ಮಲಜ್ಞಾನಾನಂದಪದವನಿತ್ತು ಎನ್ನ ನಿನ್ನಂತೆ ಮಾಡಿ ಉದ್ಧರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಾಯುಪ್ರಾಣಿಯ ಕಳೆದು, ಗುರುಸ್ವಾಮಿ ಲಿಂಗಪ್ರಾಣಿಯ ಮಾಡಿದಠಾವನುದಾಸೀನವ ಮಾಡಿ ನಡೆವರು. ಇದನಾನೇನೆಂದರಿಯೆನಯ್ಯಾ. ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದನಾಗಿ ಮುಂದೆ ಅರ್ಪಿತವೆಂಬುದನಾನರಿಯೆನಯ್ಯಾ. ಶಿವಾತ್ಮಕಂ ಸುಖಂ ಜೀವಃ ಜೀವಾತ್ಮಕಂ ಸುಖಂ ಶಿವಃ ಶಿವಾತ್ಮನಾಪಿ ಸಂತುಷ್ಟಂ ಪ್ರಾಣಲಿಂಗಪ್ರಸಾದಿನಾಂ ಇಂತೆಂಬ ವಚನವ ಕೇಳಿ ನಂಬೂದು. ನಂಬದಿದ್ದರೆ ಪ್ರಾಣಲಿಂಗವೆಂಬ ಶಬ್ದಕ್ಕೆ ಭಂಗ ಹೊದ್ದಿತ್ತು. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಸ್ಥೂಲ ಸೂಕ್ಷ ್ಮ ಕಾರಣನೆಂದೆಂಬರಲ್ಲಾ ನಿನ್ನನು. ಅದರ ಹಿಂದು ಮುಂದನರಿಯರು:ಬಂದ ಹಾಂಗೆ ನುಡಿವರು. ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ. ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು; ಅದು ಸ್ಥೂಲವೆ? ಅಲ್ಲ, ಹಾಂಗಿರಲಿ. ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು ಕೊಟ್ಟ ಲಿಂಗವೀಗ ಸ್ಥೂಲ. ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ ಕಾರಣ ಸೂಕ್ಷ ್ಮವಾದ. ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ. ಎಲೆ ಗುರುವೆ, ಲಿಂಗವೆ, ಜಂಗಮವೆ, ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು? ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ ಶ್ರೀಗುರುವಿನ ಕರುಣಾಕಟಾಕ್ಷದಿಂದ ಪ್ರಾಣಲಿಂಗೋಪದೇಶವ ಪಡೆದು ಸದ್ಭಕ್ತರಾಗಿ ಶಿವಲಿಂಗ ದರ್ಶನ ಸ್ಪರ್ಶನವ ಮಾಡಿ ಆ ಲಿಂಗವನಂಗದಲ್ಲಿ ಧರಿಸಿಕೊಂಡು ಅಂಗವೇ ಲಿಂಗ ಲಿಂಗವೇ ಅಂಗ ಪ್ರಾಣವೇ ಲಿಂಗ ಲಿಂಗವೇ ಪ್ರಾಣವಾಗಿ ಅಂತರಂಗ ಬಹಿರಂಗ ಸರ್ವಾಂಗವೆಲ್ಲವೂ ಲಿಂಗವಾದ ಬಳಿಕ ಇಂತೀ ಶ್ರೀಗುರು ಕೊಟ್ಟ ಲಿಂಗವ ಬಿಟ್ಟು ಬೋರೆ ಮತ್ತೆ ಆತ್ಮತತ್ತ್ವವ ವಿಚಾರಿಸಿ ನೋಡಬೇಕೆಂದು ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾಗಿ ಮುಕ್ತರಾದೆವೆಂಬಿರಿ. ಶಿವಶಿವಾ, ಆತ್ಮನನು ಪರಮಾತ್ಮನನು ಶ್ರೀ ಗುರುಸ್ವಾಮಿ ಒಂದು ಮಾಡಿ ಇದೇ ನಿನ್ನ ನಿಜತತ್ತ್ವವೆಂದು ಅರುಹ ಹೇಳಿ ತೋರಿಸಿಕೊಟ್ಟ ಬಳಿಕ ಇಂತಹ ಗುರುಸ್ವಾಮಿಯ ಆಜ್ಞೆಯ ಮೀರಿ ಲಿಂಗವನರಿಯದೆ ಲಿಂಗಬಾಹಿರರಾದ ದ್ವಿಜರನು ಯೋಗಿಯನು ಸನ್ಯಾಸಿಯನು ಗುರುವೆಂದು ಭಾವಿಸಬಹುದೆ ? ಶಿವ ಶಿವಾ, ಅದು ಗುರುದ್ರೋಹ. ಪರಶಿವಮೂರ್ತಿಯಾದ ಗುರುಸ್ವಾಮಿಯು ಷಡ್ದರ್ಶನಗಳಿಗೂ ಸಮಸ್ತಮತಂಗಳಿಗೂ ಸಮಸ್ತಾಗಮಂಗಳಿಗೆಯೂ ಶಿವನೊಬ್ಬನೇ ಕರ್ತನೆಂದು, ಶಿವದರ್ಶನವೇ ವಿಶೇಷವೆಂದು, ಅಧಿಕವೆಂದು ಹೇಳಿ ತೋರಿ ಕೊಟ್ಟ ಬಳಿಕ ಶೈವವೆಂದು ಶಾಕ್ತೇಯವೆಂದು ವೈಷ್ಣವವೆಂದು ಗಾಣಪತ್ಯವೆಂದು ¸õ್ಞರವೆಂದು ಕಾಪಾಲಿಕವೆಂದು ಇಂತೀ ಷಡ್ದರ್ಶನಂಗಳಿಗೆಯೂ ಶಿವನೊಬ್ಬನೇ ಕರ್ತ, ಇಂತೀ ಷಡ್ದರ್ಶನಕ್ಕೆ ಶಿವದರ್ಶನವೇ ಅಧಿಕವೆಂದು, ಇಂತೀ ಶಿವದರ್ಶನ ಮಾರ್ಗವಿಲ್ಲದೆ ಮುಕ್ತಿಯಿಲ್ಲವೆಂದು, ಆ ಪರಶಿವನೆಂಬ ಗುರುಮೂರ್ತಿ ಅರುಹಿ ಕಾಣಿಸಿ ಹೇಳಿ ತೋರಿ ಕೊಟ್ಟ ಬಳಿಕ ಅದೆಂತೆಂದಡೆ ಶಿವಧರ್ಮೇ_ ದರ್ಶನ ಷಡ್ವಿಧಂ ಪ್ರೋಕ್ತಂ ಶೈವಂ ಶಾಕ್ತಂ ವೈಷ್ಣವಂ ಗಣಾಪತ್ಯಂ ಚ ¸õ್ಞರಂ ಚ ಕಾಪಾಲಿಕಮಿತಿ ಸ್ಮೃತಮ್ ಮತ್ತಂ ಷಡ್ದರ್ಶನಾದಿ ದೇವೋ ಹಿ ಮಹಾದೇವೋ ನ ಸಂಶಯಃ ಮಂತ್ರಪೂಜಾದಿ ಭಿನ್ನಾನಾಂ ಮೂಲಂ ಪರಶಿವಸ್ತಥಾ ಎಂಬುದಾಗಿ, ಇನ್ನು ವೈಷ್ಣವವೆಂದು ಆತ್ಮಯೋಗವೆಂದು ಶಾಕ್ತಿಕವೆಂದು ವೈದಿಕವೆಂದು ಇಂತೀ ಭ್ರಾಂತಿನ ದರ್ಶನಮತಂಗಳನು ಕೇಳಿ, ಅಲ್ಲಿಯ ಧರ್ಮಾಧರ್ಮಂಗಳನು ಕೇಳಿ, ಅಲ್ಲಿ ಉಪದೇಶವ ಮಾಡಿಸಿಕೊಳ್ಳಬಹುದೇ ? ಶಿವಶಿವಾ, ಅದು ಗುರುದ್ರೋಹ, ಆ ಶ್ರೀಗುರುವಿನಾಜ್ಞೆಯ ಮೀರದಿರಿ. ಆ ಪರಶಿವಮೂರ್ತಿತತ್ತ್ವವೇ ಗುರುಸ್ವಾಮಿಯಾಗಿ ಚೆನ್ನಾಗಿ ಅರುಹಿ ತೋರಿ ಹೇಳಿ ಕೊಟ್ಟನಲ್ಲದೆ ಆ ಗುರುಸ್ವಾಮಿ ಏನು ತಪ್ಪಿ ಹೇಳಿದುದಿಲ್ಲ. ಶ್ರುತಿ ``ಏಕೋ ದೇವೋ ನ ದ್ವಿತೀಯಾಯ ತಸ್ಥೇ' ಎಂದುದಾಗಿ ಶಿವನೊಬ್ಬನೇ ದೈವವೆಂದು ತೋರಿಕೊಟ್ಟ ಶ್ರೀಗುರು. ಶ್ರುತಿ ``ಏಕೋ ಧ್ಯೇಯಃ' ಎಂದು ಶಿವನೊಬ್ಬನನ್ನೇ ಧ್ಯಾನಿಸಿ ಪೂಜಿಸೆಂದು ಹೇಳಿ ತೋರಿಕೊಟ್ಟನು ಶ್ರೀಗುರು. ಶ್ರುತಿ ``ನಿರ್ಮಾಲ್ಯಮೇವ ಭಕ್ಷಯಂತಿ' ಎಂದುದಾಗಿ ಶಿವಪ್ರಸಾದವನೆ ಗ್ರಹಿಸಿಯೆಂದು ಪ್ರಸಾದವ ಕರುಣಿಸಿದ ಶ್ರೀಗುರು ಇಂತಹ ಶ್ರೀಗುರು ಮರುಳನು, ನೀನು ಬುದ್ಧಿವಂತನೇ ? ಕೇಳಾ, ನಿಮ್ಮ ಗುರುವ ಮರುಳ ಮಾಡಿದಿರಿ, ಅದೆಂತೆಂದಡೆ: ನಿಮ್ಮಿಚ್ಛೆಯಲ್ಲಿಯೇ ಬಂದುದಾಗಿ, ಅದಲ್ಲದೆ ಮತ್ತೆ ಕೇಳು: ಪೂರ್ವದ ಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತ ? ಕೇಳೋ: ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ ಮೊದಲಾದ ಋಷಿಗಳೆಲ್ಲ ಶಿವಾರ್ಚನೆಯಂ ಮಾಡಿದರು. ಬ್ರಹ್ಮವಿಷ್ಣು ಮೊದಲಾದವರೆಲ್ಲರೂ ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ನೋಡಿರೇ ದೃಷ್ಟವನು. ಮತ್ಸ್ಯಕೇಶ್ವರ ಕೂರ್ಮೇಶ್ವರ ವರಾಹೇಶ್ವರ ನಾರಸಿಂಹೇಶ್ವರ ರಾಮೇಶ್ವರ ಎಂಬ ದಶಾವತಾರಗಳಲ್ಲಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚಾನೆಯಂ ಮಾಡಿದರು. ಅನೇಕ ವೇದಶಾಸ್ತ್ರಾಗಮಪುರಾಣಂಗಳ ಕೇಳಿರೇ ನೋಡಿರೇ. ಯಂ ಯಂ ಕಾಮಯತೇ ಕಾಮಂ ತಂ ತಂ ಲಿಂಗಾರ್ಚನಾಲ್ಲಭೇತ್ ನ ಲಿಂಗೇ [ನ] ವಿನಾ ಸಿದ್ದಿದುರ್ಲಭಂ ಪರಮಂ ಪದಂ ಮತ್ತಂ ಅಸುರಾ ದಾನವಾಶ್ಚೈವ ಪಿಶಾಚೋರಗರಾಕ್ಷಸಾಃ ಆರಾಧ್ಯಂ ಪರಮಂ ಲಿಂಗಂ ಪ್ರಾಪುಸ್ತೇ ಸಿದ್ಧಿಮುತ್ತಮಾಮ್ ಮತ್ತಂ ಅಗ್ನಿಹೋತ್ರಶ್ಚವೇದಶ್ಚ ಯಜ್ಞಾಶ್ಚ ಬಹುದಕ್ಷಿಣಾಃ ಶಿವಲಿಂಗಾರ್ಚನಸ್ಯೈತೇ ಕೋಟ್ಯಂಶೇನಾಪಿ ನೋ ಸಮಾಃ ಎಂದುದಾಗಿ, ಇಂತು ಇದು ಮೊದಲಾದ ದೇವಜಾತಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದುದಕ್ಕೆ ದೃಷ್ಟ ನೋಡಿರೇ: ಕಾಶೀಕ್ಷೇತ್ರದಲ್ಲಿ ಬ್ರಹ್ಮೇಶ್ವರ ಇಂದ್ರೇಶ್ವರ ಯಕ್ಷಸಿದ್ದೇಶ್ವರ ಎಂಬ ಲಿಂಗಂಗಳಂ ಪ್ರತಿಷಿ*ಸಿ ಶಿವಲಿಂಗಾರ್ಚನೆಯಂ ಮಾಡಿದರು. ತಾರಕ ರಾವಣಾದಿಗಳೆಲ್ಲ ಶಿವಲಿಂಗಾರ್ಚನೆಯಂ ಮಾಡಿದರು. ಇಂತವರೆಲ್ಲರು ಮರುಳರು, ನೀನೊಬ್ಬನೇ ಬುದ್ಧಿವಂತನೆ ? ಅದು ಕಾರಣ, ಆ ಶ್ರೀಗುರುವಿನಾಜ್ಞೆಯಂ ಮೀರಿ ಕೆಡದಿರಿ ಕೆಡದಿರಿ. ಆ ಮಹಾ ಶ್ರೀಗುರುವಿನ ವಾಕ್ಯವನೇ ನಂಬಿ, ಗುರುಲಿಂಗಜಂಗಮವನೊಂದೇಯೆಂದು ನಿಶ್ಚಯಿಸಿ, ಇದೇ ಅಧಿಕ, ಇದರಿಂದ ಬಿಟ್ಟು ಮತ್ತಾವುದು ಅಧಿಕವಿಲ್ಲ. ಅಂದು ಗುರುಲಿಂಗಜಂಗಮದಲ್ಲಿಯ ಭಕ್ತಿಯೆ ಭಕ್ತಿ, ಅರ್ಚನೆಯೇ ಅರ್ಚನೆ, ಆ ಸಂಗವೇ ಶಿವಯೋಗ, ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ಧಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು. ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು. ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು; ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು; ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು. ನಿಜವ ನೆಮ್ಮಿ ನೋಡುವನ್ನಕ್ಕ, ಎನ್ನ ಅತ್ತೆ ಮಾವರು ಅರತುಹೋದರು; ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು, ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ, ಎನ್ನ ಮನಕ್ಕೆ ಸಿಕ್ಕಿತ್ತು; ಅಂಗಲಿಂಗವೆಂಬ ಉಭಯವಳಿಯಿತ್ತು; ಸಂಗಸುಖ ಹಿಂಗಿತ್ತು. ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು. ಅದೆಂತೆಂದಡೆ:ಆತ್ಮರುಗಳಲ್ಲಿ ಪರಮಾತ್ಮನ ಕಳೆ ವೇದ್ಯವಾಗಿರೆ, ತನುವ ರುಧಿರವ ಕೂಡಿಕೊಂಡು ಅಷ್ಟತನುಮೂರ್ತಿಯೆನಿಸಿಕೊಂಡು, ಸಪ್ತಧಾತು ಬೆರೆಸಿಕೊಂಡು, ಷಡುವರ್ಣವ ಕೂಡಿಕೊಂಡು, ಪಂಚತತ್ವವ ಪ್ರವೇಶಿಸಿಕೊಂಡು, ಚತುಷ್ಟಯ ಕರಣವ ದಳಕುಳವ ಮಾಡಿಕೊಂಡು, ಸ್ಥೂಲಸೂಕ್ಷ್ಮಕಾರಣವ ಅಂಗವ ಮಾಡಿಕೊಂಡು, ಕಾಯ ಜೀವವೆರಡು ದಳಕುಳವ ಮೆಟ್ಟಿಕೊಂಡು, ಏಕದಳದ ಮೇಲೆ ಪರಮಾತ್ಮ ತಾ ನಿಂದು, ಸಾಕ್ಷಿಕನಾಗಿ ಸಾವು ಹುಟ್ಟನರಿವುತ್ತ, ಜ್ಞಾನವಿದು ಅಜ್ಞಾನವಿದು ಎಂದು ಕಾಣುತ್ತ, ಸಂಸಾರ ಹೇಯವ ಮಾಡುತ್ತ, ಲಿಂಗವ ಹಾಡುತ್ತ, ಲಿಂಗವ ಹಾಡುತ್ತ, ಜಂಗಮವ ಹರಸುತ್ತ, ಲಿಂಗವಾಗಿ ಬಂದು ಗುರುಪಾದವಿಡಿದಾತನೀಗ ತತ್‍ಶಿಷ್ಯ. ಆ ಶಿಷ್ಯಂಗೆ ಶ್ರೀ ಗುರುಸ್ವಾಮಿ, ಕಾಯವಿದು ಕರಣವಿದು ಜೀವವಿದು ವಾಯುವಿದು, ಮನವಿದು ಪ್ರಾಣವಿದು ಮಾಯವಿದು ಮದವಿದು ಮಲವಿದೆಂದು ಆತನಾದಿಯನುರುಹಿ, ತನ್ನಾದಿಯ ಕುರುಹಿದೇಕೋ ಮಗನೇ ಎಂದು, ಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗ ಮಾಡಿ, ಕರ್ಣದಲಿ ಮಂತ್ರವ ಹೇಳಿ, ಕರಸ್ಥಲಕ್ಕೆ ಲಿಂಗವ ಕೊಡುವಲ್ಲಿ, ಮಗನೆ ಹಸ್ತವೆಂದರೆ ಮಂತ್ರಲಿಂಗವಾಗಿ ಇದೇನೆ, ಮಸ್ತಕವೆಂದರೆ ಚಿದ್ಬ್ರಹ್ಮದಲ್ಲಿ ತೋರುವ ಸುನಾದಕಳೆ ನಾನೇಯಾಗಿ ಇದೇನೆ. ಸಂಯೋಗವೆಂದರೆ ಸರ್ವಾಂಗದಲ್ಲಿ ಪ್ರಾಣಜಂಗಮನಾಗಿ ನಾನೇ ಇದೇನೆ. ತ್ರಿವಿಧ ಉಪದೇಶವೆ ತ್ರಿವಿಧ ಪ್ರಣವವಾಗಿ ಅದಾವೆ. ತ್ರಿವಿಧ ಪ್ರಣವವೆ ಗುರುಲಿಂಗಜಂಗಮವೆಂದು, ಆ ಗುರುಲಿಂಗಜಂಗಮವೆ ಇಷ್ಟ ಪ್ರಾಣ ತೃಪ್ತಿಯೆಂದು, ಆ ಇಷ್ಟ ಪ್ರಾಣ ತೃಪ್ತಿಯೆ ಆಚಾರಾದಿ ಮಹಾಲಿಂಗವೆಂದು, ಆ ಆಚಾರಾದಿ ಮಹಾಲಿಂಗವೆ ಮೂವತ್ತಾರು ಲಿಂಗವೆಂದು, ಆ ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವೆಂದರಿದು, ಇಂತಿವೆಲ್ಲಕ್ಕೆ ಇಷ್ಟ ಗುರುವೆ ಆದಿ, ಇಷ್ಟೆ ಲಿಂಗವೆ ಮಧ್ಯ, ಇಷ್ಟಜಂಗಮವೆ ಅವಸಾನ. ಇದು ಕಾರಣ, ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ಈ ತ್ರಿವಿಧವು ತ್ರಿವಿಧ ಮುಖದಲ್ಲಿ ಗುರುವಿಂದ ತನು ಶುದ್ಧಪ್ರಸಾದವಾಯಿತ್ತು. ಲಿಂಗದಿಂದ ಮನ ಸಿದ್ಧಪ್ರಸಾದವಾಯಿತ್ತು. ಜಂಗಮದಿಂದ ಪದಾರ್ಥ ಪ್ರಸಿದ್ಧಪ್ರಸಾದವಾಯಿತ್ತು. ಈ ತ್ರಿವಿಧ ಪ್ರಸಾದವೆ ಅಂಗವಾದ ಶರಣಂಗೆ ಅರಿವೇ ಗುರು, ಜ್ಞಾನವೆ ಲಿಂಗ, ಭಾವನೆ ಜಂಗಮ. ಇಂತಪ್ಪ ಶರಣ ಮತ್ತೆ ಗುರುವೆನ್ನ, ಲಿಂಗವೆನ್ನ, ಜಂಗಮವೆನ್ನ, ಆಚಾರವೆನ್ನ, ತಾನೆನ್ನ ನಾನೆನ್ನ, ಏನೂ ಎನ್ನ, ಬಸವಪ್ರಿಯ ಕೂಡಲಚೆನ್ನಸಂಗಮದೇವ ತಾನೆ ತನ್ಮಯವಾಗಿ.
--------------
ಹಡಪದ ಅಪ್ಪಣ್ಣ
ಶ್ರೀ ಗುರುವಿನ ಕೃಪಾದೃಷ್ಟಿ ತತ್‍ಶಿಷ್ಯನ ಹೃದಯದಲ್ಲಿ ಪ್ರವೇಶಿಸಿ, ಆ ತತ್ ಶಿಷ್ಯಂ ಗುರೂಪಾವಸ್ಥೆಯ ಮಾಡುತ್ತಿರಲು ಆ ಶ್ರೀ ಗುರುಸ್ವಾಮಿ ಪ್ರಸನ್ನರಾಗಿ, ಹತ್ತಿರಕ್ಕೆ ಕರೆದು, ಬತ್ತಿನಲ್ಲಿ ಕುಳ್ಳಿರಿಸಿ, ಮಸ್ತಕದ ಮೇಲೆ ಹಸ್ತವನ್ನಿರಿಸಲು ಅವಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ ಲಲಾಟದಲ್ಲಿ ವಿಭೂತಿಯ ಧರಿಸಲು ಮುಕ್ತಿರಾಜ್ಯ ಕ್ಕೊಡೆತನವನಿತ್ತಂತಾಯಿತ್ತಯ್ಯಾ ಸಂಚಿತ ಪ್ರಾರಬ್ಧ ಆಗಾಮಿ ಜಾರಿ ಹೋದವಯ್ಯಾ. ಕರ್ಣದಲ್ಲಿ ಮಂತ್ರವ ಹೇಳಲೊಡನೆ ಪಂಚಾಕ್ಷರವೆ ಸ್ಥಾಪ್ಯವಾಗಿ ಪಂಚಭೂತಂಗಳು ಬಿಟ್ಟುಹೋದವಯ್ಯಾ. ಕರಸ್ಥಲಕ್ಕೆ ಲಿಂಗವ ಕೊಡಲೊಡನೆ ಅಂಗವೆ ಲಿಂಗಾರ್ಪಣವಾಗಿ ಸರ್ವಾಂಗ ಲಿಂಗವಾಗಿ ಅಂಗಕರಣಂಗಳಲ್ಲಿ ಲಿಂಗಕಿರಣಂಗಳಾಗಿ ಆಡುವುದು ಲಿಂಗದ ಲೀಲೆ ಎಂದಂದು ಆ ತತ್‍ಶಿಷ್ಯ ತಲೆಯೆತ್ತಿ ನೋಡಿ ತಾನನಾದಿ ಶಿವತತ್ವವಲ್ಲದಿದ್ದರೆ ಆ ಪರಶಿವನಪ್ಪ ಗುರುವೆ ಪ್ರಸನ್ನರಪ್ಪರೆ ಎಂದರಿದು, ಪಾದದ ಮೇಲೆ ಬಿದ್ದು ಬೇರಾಗದಿರಲು ಆತನು ಗುರುವ ಸೋಂಕಿ ಕಿಂಕುರ್ವಾಣ ಭಯಭಕ್ತಿಯಿಂದ ಅಹಂಕಾರವಳಿದು ಭಕ್ತನಾದ. ಮನ ಲಿಂಗವ ಸೋಂಕಿ ಭಯ ಭಕ್ತಿಯಿಂದ ಚಿತ್ತಗುಣವಳಿಸು ಮಹೇಶ್ವರನಾದ, ಧನ ಜಂಗಮವ ಸೋಂಕಿ ಪ್ರಕೃತಿಯಳಿದು, ಪರಮಾನಂದರಸಭರಿತನಾಗಿ ಮನ ಮನನ ಲೀಯವಾಗಿ ಪ್ರಾಣಲಿಂಗಿಯಾದ. ಭಾವ ಪ್ರಸಾದವ ಸೋಂಕಿಯೆ ಭ್ರಮೆಯಳಿದು ನಿರ್ಭಾವಿಯಾಗಿ ಜೀವಗುಣವಳಿದು ಶರಣನಾದ. ಅರಿವು ತನುಕರಣ ಮನ ಇಂದ್ರಿಯನವಗಿವಿಸಿ ಸರ್ವಾಂಗಲಿಂಗವಾಗಿ ಅರಿವಡಗಿ ಮರಹು ನಷ್ಟವಾಗಿ ತೆರಹಿಲ್ಲದ ಬಯಲಿನೊಳಗೆ ಕುರುಹಳಿದುನಿಂತ ಬಸವಪ್ರಿಯ ಕೂಡಲಸಂಗಮದೇವನೆಂಬ ಶ್ರೀಗುರುವಿನ ಚರಣಕ್ಕೆ ನಮೋ ನಮೋ ಎನುತಿರ್ದೆನು.
--------------
ಹಡಪದ ಅಪ್ಪಣ್ಣ
-->