ಅಥವಾ

ಒಟ್ಟು 125 ಕಡೆಗಳಲ್ಲಿ , 45 ವಚನಕಾರರು , 106 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ? ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ? ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ ಮನೋನಾಥನ ಅನುವ ವಿಚಾರಿಸಿ ಮನ ಮನನೀಯ ಭಾವ ಭಾವನೆ ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ. ಇಂತಿವನೆಲ್ಲವನೂ ತೆರದರಿಶನದಿಂದರಿದು ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.
--------------
ಬಾಲಸಂಗಣ್ಣ
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ ಪುರಾಣದ ಅಬ್ಥಿಸಂದ್ಥಿಯ ತಿಳಿದು ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ, ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ. ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ. ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು. ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು.
--------------
ಪ್ರಸಾದಿ ಭೋಗಣ್ಣ
ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ ಹೊಟ್ಟೆಬೇನೆ ಕೆಟ್ಟ ಹುಣ್ಣು ಮೈಕುಷ್ಠ ಮೊದಲಾದ ಮುನ್ನೂರರುವತ್ತು ವ್ಯಾದ್ಥಿಗಳ, ಶಿವನು ಹರಿಯಬಿಟ್ಟು ನೋಡುವ. ಇವೆಲ್ಲ ಶಿವನ ಕರುಣವಾದಲ್ಲದೆ ಹೋಗವು. ಇದನರಿಯದೆ, ನಾರು ಬೇರ ನಚ್ಚಿದ ಅವಿದ್ಯ ಸಾಧಕರೆಲ್ಲ ಹತವಾಗಿ ಹೋದರಂದೆ. ಇಂತಿದ ವಿಚಾರಿಸಿ ತಿಳಿಯದೆ, ಲೋಕದ ಬುದ್ಧಿಗೇಡಿ ಮನುಜರು, ಸಜ್ಜನಶುದ್ಧಶಿವಾಚಾರಸಂಪನ್ನರಾದ ಜಂಗಮಲಿಂಗದ ಮಾತ ಕೇಳದೆ, ಅದ್ದನ ಜೋಳ, ಅರಪಾವು ಎಣ್ಣೆಯ ಕೊಂಡು, ನೋಟಕಾರ್ತಿಯ ಮನೆಗೆ ಹೋಗಿ, ಅವಳು ಹೇಳಿದ ತಾತುಭೂತದ ಕೋಟಲೆಯ ಕೈಕೊಂಡು ಬಂದು, ಅವಕ್ಕೂಟವನಟ್ಟಿಕ್ಕಿ,. ಮಿಕ್ಕಿದ ಕೂಳ ತನ್ನಿಷ್ಟಲಿಂಗಕ್ಕೆ ತೋರಿ ತಿಂಬ, ಲಿಂಗದ್ರೋಹಿಗಳಿಗೆ ಕುಂಬ್ಥೀಪಾತಕ ನಾಯಕನರಕ, ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಲವಣವ ಕೊಂಬುದೆಲ್ಲವು ಒಂದೆ ಶೀಲ. ಸರ್ವ ಸಪ್ಪೆ ಎಂಬುದು ಒಂದೆ ಶೀಲ. ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು ಮೂರನೆಯ ಶೀಲ. ಮೂರು ಕೂಡಿ ಒಂದಾಗಿ ನಿಂದುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ.
--------------
ಅಕ್ಕಮ್ಮ
ಷಟ್‍ಸ್ಥಲ ಮುಂತಾದ ಪಂಚವಿಂಶತಿತತ್ವ, ಏಕೋತ್ತರಶತಸ್ಥಲ ಮುಂತಾದ ಕ್ರಿಯಾಧರ್ಮಂಗಳಲ್ಲಿ ಆಚರಿಸುವುದು ಪೂರ್ವಕಕ್ಷೆಯ ಭೇದ. ಉತ್ತರಕಕ್ಷೆಯಲ್ಲಿ ಲಕ್ಷಿಸಿ ನೋಡಿಹೆನೆಂದಡೆ, ದ್ವೈತಾದ್ವೈತಂಗಳ ತಿಳಿದು, ಸಕಲ ನಿಃಕಲವ ವಿಚಾರಿಸಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳ ಕಂಡು, ಇಷ್ಟಕಾಮ್ಯಮೋಕ್ಷಂಗಳ ಗೊತ್ತಗೆಟ್ಟು ತೂರ್ಯಾತುರೀಯವೆಂಬವ ಪರಿಹರಿಸಿ, ತೀತ ಅತೀತವಪ್ಪುದನು ಕುರುಹಿಟ್ಟು, ಸುರಾಳ ನಿರಾಳ ನಿರವಯಸ್ಥಾನವ ಭೇದಿಸಿ ವೇದಿಸಿ, ಘೃತಪಾನವ ಸ್ವೀಕರಿಸಿದ ನಾಲಗೆಯಂತೆ ಬಂಧವಿಲ್ಲದೆ ತತ್ವಮಸಿಯೆಂಬ ಬ್ಥಿತ್ತಿಯ ಮೆಟ್ಟದೆ ಜಲವ ಹೊಯಿದಡೆ ಆ ಜಲಕ್ಕೆ ಆಯುಧದ ಕಲೆದೋರದಂತೆ ನಿಂದ ನಿಜದೊಳಗು ಉತ್ತರಕಕ್ಷೆಯ ಭೇದ. ಇಂತೀ ಉಭಯಕಕ್ಷೆಯಲ್ಲಿ ರಾಗವಿರಾಗವನರಿದು, ನಿಶ್ಶಬ್ದ ನಿರ್ಲೇಪವಾಗಿ ಸದ್ಯೋಜಾತಲಿಂಗವ ಕೊಡಬೇಕು.
--------------
ಅವಸರದ ರೇಕಣ್ಣ
ಶಿವಶಿವಾ, ನಾವು ಗುರುಗಳು, ನಾವು ಜಂಗಮಲಿಂಗಪ್ರೇಮಿಗಳು, ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು, ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ. ಅದೆಲ್ಲಿಯದೊ ಸದಾಚಾರ? ಮಣ್ಣುಹಿಡಿದವಂಗೆ ಗುರುವಿಲ್ಲ, ಹೆಣ್ಣುಹಿಡಿದವಂಗೆ ಲಿಂಗವಿಲ್ಲ, ಹೊನ್ನುಹಿಡಿದವಂಗೆ ಜಂಗಮವಿಲ್ಲ. ಇಂತೀ ತ್ರಿವಿಧಮಲವ ಕಚ್ಚಿದ ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ? ಇಲ್ಲವಾಗಿ, ಅಷ್ಟಾವರಣವು ಇಲ್ಲ. ಇಂತಪ್ಪ ಪಂಚಮಹಾಪಾತಕರು ನಾವು ಮೋಕ್ಷವ ಹಡೆಯಬೇಕೆಂದು ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚರ್ತುವಿಧ ಖಂಡಿತಫಲಪದವ ಪಡೆದು, ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ ಭವಮಾಲೆಯಲ್ಲಿ ಬಪ್ಪುದು ತಪ್ಪುದು. ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ ದ್ವೈತಾದ್ವೈತವ ನಷ್ಟವ ಮಾಡಿ, ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು, ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸಬೇಕಲ್ಲದೆ ಇದನರಿಯದೆ ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ ಮಾತಾಪಿತರು, ಸತಿಸುತರು, ಸ್ನೇಹಿತರು, ಬಾಂಧವರು ಎನ್ನವರು ಎಂದು ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು ಸಂಸಾರ ರಸೋದಕವೆಂಬ ನೀರು ಕುಡಿದು ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೈ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು. ನೇತ್ರದಲ್ಲಿ ತನ್ನ ರೂಪು ತುಂಬಿ ನೇತ್ರವ ಗುರು ಮಾಡಿದನು. ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ ಶ್ರೋತ್ರವ ಗುರು ಮಾಡಿದನು. ಘ್ರಾಣದಲ್ಲಿ ಮಹಾಗಂಧವ ತುಂಬಿ ಘ್ರಾಣವ ಗುರು ಮಾಡಿದನು. ಜಿಹ್ವೆಯಲ್ಲಿ ಕರುಣಪ್ರಸಾದವ ತುಂಬಿ ಜಿಹ್ವೆಯ ಗುರು ಮಾಡಿದನು. ಕಾಯವ ಮಹಾಕಾಯವೆನಿಸಿ, ಪ್ರಸಾದಕಾಯವೆನಿಸಿ, ಕಾಯವ ಗುರು ಮಾಡಿದನು. ಪ್ರಾಣವನೂ ಲಿಂಗಪ್ರಾಣಸಂಬಂಧವ ಮಾಡಿ ಪ್ರಾಣವ ಗುರು ಮಾಡಿದನು. ಇಂತು ಅಂತರಂಗ ಬಹಿರಂಗವನು ಗುರು ಮಾಡಿದನು. ಸರ್ವಾಂಗವನು ಗುರುವ ಮಾಡಿದ ಗುರುವಿಂಗೆ ನಾನಿನ್ನೇನ ಮಾಡುವೆನಯ್ಯಾ? ಗುರುಪೂಜೆಗನುವಾದ ದ್ರವ್ಯಂಗಳನೂ, ಆವಾವ ಪದಾರ್ಥಂಗಳನೂ ಆವಾವ ಪುಷ್ಪಫಲಾದಿಗಳನೂ ವಿಚಾರಿಸಿ ನೋಡಿದಡೆ ಆವುವು ಗುರುತ್ವವಿಲ್ಲ. ಸರ್ವದ್ರವ್ಯಮೂಲವೂ ಸರ್ವಪದಾರ್ಥಮೂಲವೂ ಸರ್ವರಸಪುಷ್ಪಫಲಾದಿಗಳಿಗೆ ಎಲ್ಲದಕ್ಕೂ ಮೂಲಿಗ ಮನವು ಗುರುತ್ವವನ್ನುಳ್ಳದ್ದು. ತನ್ನ ಮನೋವಾಕ್‍ಸಹಿತ ಕಾಯವನೂ ಸದ್ಗುರುವಿಂಗಿತ್ತು ಶ್ರೀಗುರು ದರ್ಶನ ಸ್ಪರ್ಶನ ಮಾಡಿ ಸುಖಿಯಪ್ಪೆ ನಾನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂಗ ಪಿಂಡದಲ್ಲಿ ತೋರುವ ನೆಲೆ ಆತ್ಮನೋ, ಅರಿವೋ ? ಎಂಬುದ ತಿಳಿದಲ್ಲಿ, ಅರಿದು ಮಾಡುವ ಅರಿಕೆ ಮರೆದಿಹಲ್ಲಿ ಮಗ್ನ. ಉಭಯವಂ ವಿಚಾರಿಸಿ ತೊಲಗಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇಂತೀ ಮರ್ತ್ಯಲೋಕದ ಮಹಾಗಣಂಗಳು ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ, ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮಾರ್ಗಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯವಾದರು ನೋಡ ! ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ ನಡೆನುಡಿಗಳ ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮೀರಿದ ಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯ ನಿರಂಜನರಾದರು ನೋಡ ! ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕಿ[ಯೆ]ಯ ನಡೆ_ನುಡಿ_ಪರಿಣಾಮ_ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ ! ಗುಹೇಶ್ವರಲಿಂಗಪ್ರಭುವೆಂಬ ನಾಮರೂಪುಕ್ರಿಯವಳಿದು ಸಂಗನಬಸವಣ್ಣನ ಬೆಳಗಿನೊಳಗೆ ಮಹಾಬಯಲಾದರು ನೋಡ !
--------------
ಅಲ್ಲಮಪ್ರಭುದೇವರು
ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ? ಅಶನವ ಬಿಟ್ಟಡೇನು, ಪರಾಕಿಯಂತೆ ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ? ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ? ಏನ ಮಾಡಿದಡೇನು ? ಏನ ಕೇಳಿದಡೇನು ? ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->