ಅಥವಾ

ಒಟ್ಟು 65 ಕಡೆಗಳಲ್ಲಿ , 26 ವಚನಕಾರರು , 61 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಂದು ಮುಂದು ಸಂದಳಿದ ಬಳಿಕ ಆನು ನೀನೆಂಬ ಭೇದವೇತಕಯ್ಯ? ಆನಂದ ಅಪರಸ್ಥಾನದಲ್ಲಿ ಶುದ್ಧ ಸಂಯೋಗವಾದ ಬಳಿಕ ದಳ ಪ್ರತಿಷ್ಠೆಯ ಮಾಡಿನೆಂದು ಏನೆಂಬೆನಯ್ಯ? ಪೂರ್ವದಳದಲ್ಲಿ ಲಕ್ಷವು ಇಪ್ಪತ್ನಾಲ್ಕುಸಾವಿರ ಎಸಳು, ಅಪರದಳದಲ್ಲಿ ಹದಿನಾಲ್ಕುಸಾವಿರ ಎಸಳು, ನಾನಾ ವರ್ಣ ಆನಂದನೆಂಬ ಅದ್ಥಿದೇವತೆ ಮಧ್ಯಮಸ್ಥಾನದಲ್ಲಿ, ಸಿದ್ಧ ಸಂಯೋಗವೆಂಬ ಸರೋವರದಲ್ಲಿ, ವೈನೈಯೆಂಬ ಕೊಳಂಗಳು ಹನಾರೆಸಳಿನ ಕಮಳ ಬೀಜಾಕ್ಷರಂಗಳೆಂಟು, ಅದ್ಥಿದೇವತೆ ಸಚ್ಚಿದಾನಂದನೆಂಬ ಗಣೇಶ್ವರ ಆನಂದ ಬ್ರಹ್ಮಲೋಕದಲ್ಲಿ ಗುರುವೆಂಬ ಸರೋವರದಲ್ಲಿ ನಿತ್ಯವೆಂಬ ಕೊಳ. ಶುದ್ಥಶ್ವೇತನೆಂಬ ಅಮೃತ ಪ್ರವಾಹ, ದಳವೊಂದು, ಮೂಲ ಮೂರು, ಫಲವಾರು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅದ್ಥಿದೇವತೆ.
--------------
ಸಿದ್ಧರಾಮೇಶ್ವರ
ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ, ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ, ಇಂತು ಶ್ರೀಗುರುವಾಕ್ಯವ ನಿಜನೈಷ್ಠಯಿಂದರಿದು, ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ ಸ್ವಪಾಕವಾದಡು ಸರಿಯೆ, ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ ಪದಾರ್ಥವಾದಡು ಸರಿಯೆ, ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ, ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ, ನಿರ್ವಂಚಕತ್ವದಿಂದ ಸಂಚಲಚಿತ್ತವನಳಿದು, ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು, ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ ದ್ವಿತೀಯ ಕೈಲಾಸ ಶಿವಮಂದಿರವೆಂದು ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು, ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ ಷಡ್ಗುಣೈಶ್ವರ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು, ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ತನ್ನಿಂದ ತಾನುದಿಸಿದ ಬಿಂದುವಿನಿಂದಾಗಿ ನಿಂದುದೊಂದು ಬಿಂದು. ಬಿಂದು ಬೇರಾಗಿ ಬೆರಸಿಕೊಂಡಲ್ಲಿ ಬಿಂದು ಬಿಚ್ಚಿ ಹಿಂದು ಮುಂದು ನಿಲಿಸಿದರೆ ಬಂಧ ಆಗ ಬಯಲಾಯಿತ್ತು. ತಂದೆಯು ನೋಡಿ ಕಂದನ ಕೈವಿಡಿದಲ್ಲಿ ಮುಂದುಗಂಡೆನು ಮೂದೇವರರಿಯದ ಬೇಹಾರವನು. ಕೊಡಲಿಲ್ಲ ಕೊಳಲಿಲ್ಲದ ಸಡಗರ ಸ್ವಯವಾದಲ್ಲಿ ಸತಿಭಾವತಪ್ಪಿ ಗುರುನಿರಂಜನ ಚನ್ನಬಸವಲಿಂಗಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು, ಸಂಚರಿಸುವಡೆ ಆವೆಡೆಯೂ ಇಲ್ಲ. ನಿಂದ ಚಿತ್ತಿನ ಪ್ರಭೆ ಅಂಗವನು ನೆರೆ ನುಂಗೆ, ಹಿಂದು ಮುಂದು ಎಡಬಲನೆಂಬುದಿಲ್ಲ ! ಅಡಿಯಾಕಾಶವೆಂಬುದಿಲ್ಲ ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ ಕಡೆಗೆ ಸಾರುವೆನೆನಲು ಊಧ್ರ್ವವಿಲ್ಲ. ನಡುವೆ ನಾನಿದ್ದಿಹೆನೆಂದಡೆ, ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು ! ಈ ಬೆಡಗು ಬಿನ್ನಾಣವ ಬಡವರರಿವರೆ ? ಇದನರಿದು ನುಡಿದು ತೋರಿದನು ಗುಹೇಶ್ವರನ ಶರಣ ಚನ್ನಬಸವಣ್ಣನು.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗವನು ಮಾಣದೆ ನೋಡಿ, ಹೂಣಿಹೋದ ಜಾಣರ ಕಾಣೆನಯ್ಯಾ ಮೂರುಲೋಕದೊಳಗೆ. ಇರ್ದು ಇಲ್ಲದ, ಬಂದು ಬಾರದ, ನಿಂದು ನಿಲ್ಲದ ಚಂದ ಚಂದದ ನಡೆಯೊಳೆಸೆಯುತ, ನುಡಿಯೊಳೊಂದಿದ ಬಿಂದು ಅಲಸದೆ ಹಿಂದು ಹಿಂದನು ಮುಂದು ಮುಂದನು ತಂದು ಆರಾದ್ಥಿಸಿ ಸುಖಿಸುವ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನುಭಾವಿಭಕ್ತನಲ್ಲದೆ ಮತ್ತಾರನು ಕಾಣೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ? ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ ಬರಿಯ ಶುದ್ಧಶೈವವಂ ಬಿಟ್ಟು, ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ ದುಃಕರ್ಮ ಮಿಶ್ರವಂ ಬಿಟ್ಟು, ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ, ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ ಪೂರ್ವಶೈವಮಂ ತೊಲಗಿ, ಅಂಗದಲನವರತ ಲಿಂಗಮಂ ಧರಿಸಿರ್ದು ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ, ಸದ್ಗುರುಕಾರುಣ್ಯಮಂ ಪಡೆದು, ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು, ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು, ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ ಅಹಂ ಮಮತೆಗೆಟ್ಟು ಸಂದು ಸಂಶಯವರಿತು ಹಿಂದು ಮುಂದ ಹಾರದಿಪ್ಪುದೆ ವೀರಶೈವ. ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ ಎಂದುದಾಗಿ, ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇಂದೆನ್ನ ಮನದೊಡೆಯ ಬಂದ ತಾ ಕರಸ್ಥಳಕೆ, ಹಿಂದು ಮುಂದಿಲ್ಲದ ಪದವನಿತ್ತ. ಗಂಧವಾಸನೆ ಚಂದವೊಂದಾದ ಬಸವನ ಬಂಧುವಾದೆನು ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭವಾರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ, ಬೆಂದಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡ ಬಲ ಆದಿ ಆಕಾಶ ನಡುಮಧ್ಯ ಆವುದೆಂದರಿಯದವಂಗೆ, ಇರುವುದಕ್ಕೆ ಇಂಬುಗಾಣದವಂಗೆ, ಶಿವತತ್ವವೆ ಆಶ್ರಯ ಇದೆಯೆಂದು ತೋರಿದ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುವಿನ ಗುರುವಿನ ಕೈಯ ಶಿಷ್ಯರ ಶಿಷ್ಯ ಪಾದಾರ್ಚನೆಯ ಮಾಡಿಕೊಂಬುದ ಕಂಡು ಎನ್ನ ಮನ ಬೆರಗಾಯಿತ್ತು ! ಮುಂದು ಹಿಂದಾಯಿತ್ತು, ಹಿಂದು ಮುಂದಾಯಿತ್ತು ! ಕೂಡಲಚೆನ್ನಸಂಗಮದೇವಾ, ನಿಮ್ಮ ಗುರುಶಿಷ್ಯರ ಸಂಬಂಧ ಎನಗೆ ವಿಪರೀತವಾಯಿತ್ತು.
--------------
ಚನ್ನಬಸವಣ್ಣ
ಮಲೆತು ಮೆಟ್ಟುತ್ತ, ತನುವನೊಲೆವುತ್ತ, ತಲೆದೂಗಿ ಮನವನಲ್ಲಾಡಿಸಿ ನೋಡಿದ. ಭುವನ ಭುವನೇಶ್ವರನ ಹಿಂದು ಮುಂದ ನೋಡಿ ನಗುತ್ತ, ಮುತ್ತಿನ ತೋರಣಕ್ಕೆ ಹಾರೈಸಿ, ಬಸವನರಮನೆಯ ಹೊಕ್ಕ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ ಇರುವುದಕ್ಕೆಯಿಂಬುಗಾಣದವಂಗೆ ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಯೋಗದ ನೆಲೆಯನರಿದೆನೆಂಬವರಿಗೆ ಹೇಳಿಹೆವು ಕೇಳಿರೇ. ಪೃಥ್ವಿ, ಅಪ್ಪುಗಳೆರಡ ಆಧಾರಗೊಳಿಸಿ, ಅಗ್ನಿ ವಾಯುಗಳೆರಡ ಅಂಬರಸ್ಥಾನಕ್ಕೊಯ್ದು, ಆತ್ಮ ಆಕಾಶವೆರಡ ಅನುಭಾವ ಮುಖಕ್ಕೆ ತಂದು, ಮನದೆ ಅನುಮಾನವಳಿದು, ನೆನಹು ನಿಶ್ಚಲವಾಗಿ, ಒಳಗೆ ಜ್ಯೋರ್ತಿಲಿಂಗವ ನೋಡುತ್ತ, ಹೊರಗೆ ಎರಡು ಹುಬ್ಬಿನ ನಡುವೆ ಉಭಯ ಲೋಚನವಿರಿಸಿ, ಹಿಂದು ಮುಂದನೆಣಿಸದೆ ಸಂದೇಹವಿಲ್ಲದೆ ಖೇಚರಿಯನಾಚರಿಸಲು, ಲೋಚನ ಮೂರುಳ್ಳ ಶಿವ ತಾನಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಶಿವಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಶೂನ್ಯದ ಕಳೆಬೆಳೆಯನರಿದು ನಿಶ್ಶೂನ್ಯದ ಕಳೆಬೆಳೆಯೊಳು ನಿಂದು, ಕುರುಹಿಂಗೆ ಹಿಂದು ಮುಂದೆ ತೋರಲೆಡೆಯಿಲ್ಲ. ಹಿಂದಣತ್ತ ಮುಂದಣತ್ತ ಗುರುನಿರಂಜನ ಚನ್ನಬಸವಲಿಂಗದೊಡಲಿಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವರಿಯದೆ ಲಿಂಗವಿದ್ದಲ್ಲಿಯೆ ಸಂಗವ ಮಾಡಿ, ಹಿಂದು ಮುಂದಳ ಸಂದೇಹವ ಮರೆಯಬೇಕು. ಅಂಗವರತಲ್ಲಿಯೆ ಲಿಂಗವ ಮರೆಯಿತ್ತು. ಸೆಲೆಯಿಲ್ಲದ ಬಾವಿಯ ತೋಡಿ ಸಂದೇಹಕ್ಕೊಳಗಾಹನಂತಾಗಬೇಡ. ಉಭಯವು ರೂಪಾಗಿದ್ದಲ್ಲಿ ಅರಿ ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->