ಇಷ್ಟಲಿಂಗವೆ ಅನಾದಿಯು, ಪ್ರಾಣಲಿಂಗವೆ ಆದಿಯು.
ಇದು ಮಾರ್ಗಕ್ರೀಯೆನಿಸುವುದು.
ಪ್ರಾಣಲಿಂಗವೆ ಅನಾದಿಯು, ಇಷ್ಟಲಿಂಗವೆ ಆದಿಯು.
ಇದು ಮೀರಿದ ಕ್ರಿಯಾಮಾರ್ಗವೆನಿಸುವುದು.
ಈ ಉಭಯದ ಭೇದವ ಸದ್ಗುರು ಮುಖದಿಂ ತಿಳಿದು,
ಆದಿ ಅನಾದಿಯೆಂಬ ಉಭಯವನುಳಿದು,
ಒಂದೇಪರಾತ್ಪರವಸ್ತುವೆಂದು ಅರಿದು,
ಸಮಭಾಜನದಿಂದ ಪ್ರಸಾದಕ್ಕೆ ಪ್ರಸಾದವನರ್ಪಿಸಿ,
ಪಾದೋದಕಕ್ಕೆ ಪಾದೋದಕವನರ್ಪಿಸಿ,
ತಾನುಭಯಮಧ್ಯದಲ್ಲಿ ಭಾವಲಿಂಗರೂಪದಿಂದ
ಪರಿಣಾಮಪಾದೋದಕ ಪ್ರಸಾದವನಪ್ಪಿ ಅಗಲದಿಪ್ಪಾತನೆ
ಮಹಾಶಿವಕಲಾಚೈತನ್ಯ ನಿಜಪ್ರಸಾದಿ ನೋಡಾ.
ಭಕ್ತ ಜಂಗಮವೆಂಬ ಉಭಯಭಾವವಳಿದು,
ದುರ್ಮಾರ್ಗ ಅನಾಚಾರ ಅಜ್ಞಾನವ ತ್ಯಜಿಸಿ,
ಶರಣಗಣಂಗಳು ಹೋದ ಮಾರ್ಗವನರಿದು,
ಉಭಯಭಾವವಳಿದು,
ಸತ್ಕ್ರಿಯಾ ಸಮ್ಯಜ್ಞಾನ ಸಮರಸಾನಂದವನರಿದು,
ಜಂಗಮದ ತೀರ್ಥಪ್ರಸಾದವ ಜಂಗಮಕ್ಕರ್ಪಿಸಿ,
ಲಿಂಗತೀರ್ಥಪ್ರಸಾದವ ಲಿಂಗಕ್ಕರ್ಪಿಸಿ,
ಉಭಯಸಂಬಂಧದಾಚರಣೆಯ ತಿಳಿದು,
ಅಂಗಲಿಂಗವೆಂಬ ಉಭಯವನಳಿದು,
ಅಂಗಲಿಂಗವಾದುದೊಂದೆ ವಸ್ತುವೆಂದರಿದು,
ಕೊಟ್ಟು ಕೊಳಬಲ್ಲಾತನೆ ಮಹಾಪ್ರಸಾದಿ ನೋಡಾ.
ಇದನರಿಯದೆ ಕೊಟ್ಟು, ಕೊಂಡು ಪಾದೋದಕ ಪ್ರಸಾದವ
ಬಹಿರಂಗಕ್ಕಿಕ್ಕಿ ಅಹಂಕರಿಸುವ ಮೂಳರಿಗೆ
ಮಹಾಪ್ರಸಾದವಿಲ್ಲ ಕಾಣಾ.
ಅವರಿಗೆ ರೌರವನರಕ ತಪ್ಪದು ನೋಡಾ.
ಅದರಿಂದ ನಿನ್ನ ನೀನರಿದು, ನಿನ್ನ ನಿಜವ ನೀ ತಿಳಿದು,
ಭೋಗಿಸೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.