ಏನೂ ಏನೂ ಇಲ್ಲದೆ ತಾನೆ ತಾನಾಗಿರ್ದ
ಭಾನುಕೋಟಿಪ್ರಭೆ ಒಂದಾದ ಪ್ರಸಾದ.
ವರ್ಣ ವಸ್ತು ನಾದ ಬಿಂದು ಕಳೆಗಳಿಲ್ಲದಂದು
ಸುರಾಳ ನಿರಾಳವಿಲ್ಲದಂದು
ಪಿಂಡಾಂಡ ಬ್ರಹ್ಮಾಂಡಂಗಳು ಮೊಳೆದೋರದಂದು
ಪಂಚಮೂರ್ತಿಗಳ ನಾಮವಿಲ್ಲದಂದು
ಪಂಚಪ್ರಣಮದ ಘೋಷಧ್ವನಿದೋರದಂದು
ಮಹಾಪ್ರಸಾದ ಆಕಾಶವೆ ತಾನೆಯಾದ ಚಿತ್ಪ್ರಸಾದದ ಪ್ರಕಾಶವೆ
ಅನಂತಕೋಟಿ ಸೋಮಸೂರ್ಯಪ್ರಭೆಯನೊಳಕೊಂಡಿತ್ತು.
ಸಾಕಾರವೆ ಚಿಚ್ಫಕ್ತಿ[ಗೆ] ಆದಿಯಾಗಿ ಅನಂತಕೋಟಿಶಕ್ತಿಗಳಿಗೆ
ಆಶ್ರಯಸ್ಥಾನವಾಗಿದ್ದಿತ್ತು.
ದಕಾರವೆ ದಶದಿಶಭರಿತಪೂರ್ಣಾಕಾರ ಲಿಂಗವಾಗಿ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣನಾಮವೆಂದುದಾ ಪ್ರಸಾದ ಶಬ್ದ.
ಈ ಭೇದವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆನಬಹುದು.
ಈ ಭೇದವನರಿದು ಕೊಳಬಲ್ಲರೆ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆನಬಹುದು.
ಇದನರಿಯದೆ ಕೊಟ್ಟ ಜಂಗಮಕ್ಕೆ, ಕೊಂಡ ಭಕ್ತಂಗೆ
ರೌರವ ನರಕವೆಂದುದು ನೋಡಾ.
ಇದಕ್ಕೆ ಸಾಕ್ಷಿ:
'ಜ್ಞಾನಹೀನಂ ಗುರುಂ ಪ್ರಾಪ್ಯ ಶಿಷ್ಯೋ ಜ್ಞಾನವಿವರ್ಜಿತಃ |
ಅಂಧ್ಯೋಂಧಕರಯುಕ್ತಶ್ಚದ್ವಿವಿಧಂ ಪಾತಕಂ ಭವೇತ್ ||'
ಎಂದುದಾಗಿ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವು
ಶ್ರುತಿ ಸಾಕ್ಷಿಯಾಗಿ ಛೀ ಎನ್ನದೆ ಮಾಣ್ಬನೆ ನಿಮ್ಮ ಶರಣನು ?