ನಿರವಯರ್ಪಿತವಾದ ತದನಂತರದೊಳು
ಚಿದ್ಭಸ್ಮಧಾರಣಂಗೈದು, ಸರ್ವೋಪಚಾರವನುಳಿದು,
ಪತ್ರಿ ಪುಷ್ಪಗಳ್ಯಾವುದಾದರೂ ಒಂದೇ ಧರಿಸಿ,
ತನ್ನ ಹೃನ್ಮಂದಿರದಲ್ಲಿ ನೆಲೆಸಿರುವ ವಸ್ತುವು ಬೇರೆ, ನಾ ಬೇರೆಂಬ
ಉಭಯಭಾವಮಂ ಭಾವಸ್ಥಲ ಮನಸ್ಥಲ ಕರಸ್ಥಲ ಪರಿಪೂರ್ಣಸ್ಥಲವ ಕಾಣದೆ
ಇದ್ದಾಗೆ ಸರಿಮಾಡಿ, ಈ ತತ್ಸಮಯವೆಂತಾಯಿತೆಂದೊಡೆ :
ಕ್ಷೀರ ಕ್ಷೀರ ಕೂಡಿದಂತೆ, ಘೃತ ಘೃತ ಕೂಡಿದಂತೆ,
ಜ್ಯೋತಿ ಜ್ಯೋತಿ ಒಂದಾದಂತೆ, ಉದಕ ಉದಕವ ಕೂಡಿದಂತೆ,
ಕೇವಲ ಅಂಗ ಲಿಂಗದಲ್ಲಿ ಲಿಂಗಗುರುಚರಪಾದೋದಕ
ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರವೆಂಬ
ಚಿದಾಬ್ಧಿಸಂಗ ಚಿದ್ಬೆಳಗಿನ ಸಮರಸದಲ್ಲಿ
ಆ ಸಮರಸಪರಮಾಣುಮಹಾಂತದೈಕ್ಯದಲ್ಲಿ
ಆ ಐಕ್ಯ ನಿರವಯಬ್ರಹ್ಮವೆಂಬ ಕುರುಹು ನಷ್ಟವಾಗಿ,
ತಾನೆ ತಾನಾದಂತೆಯೆಂದು, ಒಳಹೊರಗೆನ್ನದೆ,
ಈ ಕೂಟವೆ ನಿರಂಜನ ಚಿನ್ಮಯರೂಪ ಘನಗಂಭೀರ ಜಂಗಮಮೂರ್ತಿ
ಭಾವಲಿಂಗಾರ್ಚನೆ ಇದೆಯೆಂದು,
ಮಹಾಜ್ಞಾನ ಪರಿಪೂರ್ಣಾನುಭಾವದಿಂದ ಪರಮಕಾಷಿ*ಯನೈದು,
ಹಿಂದುಮುಂದಣ ಭವಮಂ ನೀಗಿ, ತನ್ನ ಘನಮನೋಲ್ಲಾಸ ನಿಜನೈಷೆ* ಬೆಳಗೆ,
ಅಷ್ಟವಿಧಾರ್ಚನೆ ಷೋಡಶೋಪಚಾರವಾಗಿ,
ಭಕ್ತಜಂಗಮವೆಂಬುಭಯವಳಿದುಳಿದು ನಿಂದ ನಿರ್ವಾಣಪದಸ್ಥಾನಿಗಳೆ
ನಿರವಯಪ್ರಭು ಮಹಾಂತರೆಂದವರಲ್ಲಿ ಅಚ್ಚೊತ್ತಿದಂತಿರ್ಪರು ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.