ಅಥವಾ

ಒಟ್ಟು 135 ಕಡೆಗಳಲ್ಲಿ , 25 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

``ದಂಡಶ್ಚ ತಾರಕಾಕಾರೋ ಭವತಿ | ಓಂ ಸಾರ್ವತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಪಂಚದಶಮೇ ಪ್ರಣವಾಂಶಕೇ ||'' ಅಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋ ಭವತಿ | ಓಂ ಪರಮಾತ್ಮಾ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ಷೋಡಶೇ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ಜ್ಯೋತಿಶ್ಚ ದರ್ಪಣಾಕಾರೋ ಭವತಿ | ಓಂ ಶಿವಾತ್ಮಾ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಸಪ್ತದಶ ಪ್ರಣವಾಂಶಕೇ ||'' ``ಮಕಾರೇ ಚ ಅಕಾರೇಚ ಉಕಾರೇಚ ನಿರಾಮಯಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಅರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿರೂಪಕಂ | ಇತಿ ಪ್ರಣವಃ ಜ್ಞೇಯಂ ಏತದ್ಗೋಪ್ಯಂ ವರಾನನೇ || ಓಂಕಾರ ಪ್ರಭವೋ ವೇದಃ ಓಂಕಾರಂ ಪ್ರಭವ ಸ್ವರಃ | ಓಂಕಾರಪ್ರಭವಾ ಭೂಃ ಓಂಕಾರಪ್ರಭವಾ ಭುವಃ || ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವಾ ಮಹಃ | ಓಂಕಾರಪ್ರಭವೋ ಜನಃ ಓಂಕಾರ ಪ್ರಭವಂ ತಪಃ || ಓಂಕಾರಪ್ರಭವಂ ಸತ್ಯಂ ಓಂಕಾರ ಪ್ರಭವೋ ರವಿ ಃ | ಓಂಕಾರಪ್ರಭವಸ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರಸ್ಯಾತ್ರ ನ ಸಂಭವೇತ್ | ಪ್ರಣವೋಹಿ ಪರಬ್ರಹ್ಮ ಪ್ರಣವಃ ಪರಮಂ ಪದಂ || ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ | ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ || ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇತಿ ಪ್ರಣವಃ ವಿಜ್ಞೇಯಃ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯನರಿಯಲುಬಾರದು ನಕಾರ, ಅಪ್ಪುವನರಿಯಲುಬಾರದು ಮಕಾರ, ಅಗ್ನಿಯನರಿಯಲುಬಾರದು ಶಿಕಾರ, ವಾತವನರಿಯಲುಬಾರದು ವಕಾರ, ಅಂಬರವನರಿಯಲುಬಾರದು ಯಕಾರ, ಭಾವವನರಿಯಲುಬಾರದು ಓಂಕಾರ. ಇದು ಕಾರಣ ಷಡ್ಬ್ರಹ್ಮರೂಪ ಚನ್ನಬಸವಲಿಂಗ ಅರಿದು ಅರಿಯದಿರಲುಬೇಕು ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾsಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಪೃಥ್ವಿ, ಸದ್ಯೋಜಾತನ ಹಂಗು. ಜಲ, ವಾಮದೇವನ ಹಂಗು. ಅಗ್ನಿ, ಅಘೋರನ ಹಂಗು. ವಾಯು, ತತ್ಪುರುಷನ ಹಂಗು. ಆಕಾಶ, ಈಶಾನ್ಯನ ಹಂಗು. ಪಂಚಬ್ರಹ್ಮನ ಮರೆದು, ಓಂಕಾರ ಬ್ರಹ್ಮವನರಿ, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ನಕಾರ ನರಜನ್ಮದ ಹೊಲೆಯ ಕಳೆದು, ಮಕಾರ ಮಾಂಸಪಿಂಡದ ಹೊಲೆಯ ಕಳೆದು ಮಂತ್ರಪಿಂಡವ ಮಾಡಿತಯ್ಯಾ. ಶಿಕಾರ ಶಿವದೇಹಿಯ ಮಾಡಿತಯ್ಯ, ವಕಾರ ಒಳಹೊರಗೆ ತೊಳಗಿ ಬೆಳಗಿ ಶುದ್ಧನಮಾಡಿತಯ್ಯ, ಯಕಾರ ಎನ್ನ ಭವವ ಹಿಂಗಿಸಿತಯ್ಯ. ಓಂಕಾರ ಪ್ರಾಣ ಜೀವಾತ್ಮ ದೇಹದ ಮಧ್ಯದೊಳು ಸರ್ವಪೂರ್ಣಮಯವಾಗಿದ್ದಿತಯ್ಯಾ. ಇಂತೀ ಷಡಕ್ಷರಿಯ ಮಂತ್ರವ ಜಪಿಸಿ, ಅಂತಕನ ಪಾಶವ ಸುಟ್ಟು ನಿಟ್ಟೊರಸಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇದಕ್ಕೆ ಮಹದೋಂಕಾರೋಪನಿಷತ್ತು : ಉಕಾರವೆಂಬ ಪ್ರಣವದಲ್ಲಿ- ``ದಂಡಶ್ಚ ತಾರಾಕಾಕಾರೋ ಭವತಿ ಓಂ ಸ್ವಯಂಭುಲಿಂಗ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಏಕಾದಶಮೇ ಪ್ರಣವಾಂಶಕೇ || '' ಮಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಶಿವತತ್ವಂ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ || '' ಅಕಾರವೆಂಬ ಪ್ರಣವದಲ್ಲಿ- ``ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಗುರುತತ್ವಂ ದೇವತಾ| ಅಕಾರೇ ಚ ಲಯಂ ಪ್ರಾಪ್ತೇ ತ್ರಯೋದಶಮೇ ಪ್ರಣವಾಂಶಕೇ ||'' ``ಉಕಾರೇ ಚ ಮಕಾರೇ ಚ ಅಕಾರಂ ಚಾಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂ ಕಲಾ ಚೈವ ನಾದಬಿಂದುಕಲಾತ್ಮನೇ || ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ | ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ || ಓಂಕಾರಂ ನಾದರೂಪಂಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||'' ಇಂತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಒಂದರಲ್ಲಿ ಓಂಕಾರ ಭವಿಸಿತ್ತು. ಎರಡರಲ್ಲಿ ವ್ಯಾಪ್ತಿ ಭವಿಸಿತ್ತು. ಮೂರರಲ್ಲಿ ಮುಕ್ತ್ಯಂಗನೆಯ ಸಂಗ ಸಮನಿಸಿತ್ತು. ನಾಲ್ಕರಲ್ಲಿ ಆ ಎಂಬ ಅಕ್ಷರದಂತುವನರಿದೆ. ಅಯ್ದರಲ್ಲಿ ಆ ಬ್ರಹ್ಮತಾತ್ಪರ್ಯಶುದ್ಧವ ನಿರೀಕ್ಷಿಸಿದೆ. ಆರರಲ್ಲಿ ಅವ್ಯಯ ಅನಿಮಿಷಸ್ಥಾನವ ಕಂಡೆ. ಮೀರಿದೆ ಮೂವತ್ತಾರ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ `ತತ್ವಮಸಿ' ಸಂಗಮದಲ್ಲಿ ಸಂಯೋಗಿಯಾದೆ.
--------------
ಸಿದ್ಧರಾಮೇಶ್ವರ
ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿಯಃ ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ನಮಂತಿ ಋಷಯೋ ದೇವಾ ನಮಂತ್ಯಪ್ಸರಸಾಂಗಣಾಃ ನಮಂತಿ ದೇವಾ ದೇವೇಶಂ `ನ' ಕಾರಾಯ ನಮೋ ನಮಃ ಮಹಾದೇವಂ ಮಹಾತ್ಮಾನಂ ಮಹಾಜ್ಞಾನಪರಾಯಣಂ ಮಹಾಪಾಪ ಹರಂ ನಿತ್ಯಂ `ಮ' ಕಾರಾಯ ನಮೋ ನಮಃ ಶಿವಂ ಶಾಂತಧರಂ ದೇವಂ ಲೋಕಾನುಗ್ರಹ ಕಾರಣಂ ಶಿವಮೇಕಂ ಪರಬ್ರಹ್ಮ `ಶಿ'ಕಾರಾಯ ನಮೋ ನಮಃ ವಾಹನಂ ವೈಷಭೋ ಯಸ್ಯ ವಾಸುಕಿಃ ಕಂಠಭೂಷಣಂ ವಾಮಶಕ್ತಿಧರಂ ದೇವಂ `ವ'ಕಾರಾಯ ನಮೋ ನಮಃ ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪಿ ಮಹೇಶ್ವರಃ ಯೋ ಗುರುಃ ಸರ್ವದೇವಾನಾಂ `ಯ'ಕಾರಾಯ ನಮೋ ನಮಃ ವೇದ: ನಕಾರಾಯ ಮಕಾರಾಯ ಶಿಕಾರಾಯ ತಥೈವ ಚ ವಕಾರಾಯ ಯಕಾರಾಯ ಓಂಕಾರಾಯ ನಮೋ ನಮಃ ವೇದಮಾತಾ ಚ ಗಾಯಿತ್ರೀ ಮಂತ್ರಮಾತಾ ಷಡಕ್ಷರೀ ಸರ್ವದೇವಪಿತಾ ಶಂಭುಃ ಭರ್ಗೋ ದೇವಸ್ಯ ದ್ಥೀಮಹಿ ಷಡಕ್ಷರಮಿದಂ ಪುಣ್ಯಂ ಯಃ ಪಠೀತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎನ್ನದಿರ್ದಡೆ ಭವಬಂಧನ ಇಹಪರ ಸಂಸಾರಾದಿ ಪ್ರಪಂಚಬಂಧನ ಬಿಡದು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದಡೆ ಮೋಕ್ಷಸಿದ್ಧಿ. ಸಾಕ್ಷಿ: ಷಡಕ್ಷರಜಪಾನ್ನಾಸ್ತಿ ಸರ್ವೇಷಾಂ ಬಂಧನಂ ತಥಾ ತನ್ಮಂತ್ರಂ ಚ ಜಪನ್ ಭಕ್ತ್ಯಾ ಸದ್ಯೋ ಮುಕ್ತೋ ನ ಸಂಶಯಃ ಎಂಬುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯ ಬಂದು ಮೋಕ್ಷ ತಾನೇ ಓಂ ನಮಃ ಶಿವಾಯ.
--------------
ಉರಿಲಿಂಗಪೆದ್ದಿ
ಪ್ರಣವಮಂತ್ರರೂಪ ಪರಶಿವನ ಚೈತನ್ಯ ಎಲ್ಲಾ ಮಂತ್ರಂಗಳಿಗೆ ಚೈತನ್ಯವು. ಎಲ್ಲಾ ತಂತ್ರಂಗಳಿಗೆ ಚೈತನ್ಯವು. ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ || ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು. ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮಥ್ರ್ಯವು. ಅದು ಕಾರಣ, ಮಂತ್ರವೆ ಅವಯವವು ರೇಕಣ್ಣಪ್ರಿಯ ನಾಗಿನಾಥಂಗೆ.
--------------
ಬಹುರೂಪಿ ಚೌಡಯ್ಯ
ನಕಾರ ಮಕಾರವನೆಯ್ದಿ, ಮಕಾರ ಶಿಕಾರವನೆಯ್ದಿ, ಶಿಕಾರ ವಕಾರವನೆಯ್ದಿ, ವಕಾರ ಯಕಾರವನೆಯ್ದಿ, ಯಕಾರ ಓಂಕಾರವನೆಯ್ದಿ, ಓಂಕಾರ ನಿರಂಜನವನೆಯ್ದಿ, ನಿರಾಮಯವಾಗಿ ನಿಸ್ಥಲ ನಿಜವಾದುದ ಗುರುನಿರಂಜನ ಚನ್ನಬಸವಲಿಂಗ ತಾನೆ ಬಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿರ್ಗಮನಿಯಾದ ಶರಣಂಗೆ ಸಂಧಾನವಲ್ಲದೆ ಗಮನಿಯಾದ ಶರಣಂಗೆ ಅನುಗೊಳದೆಂಬ ಅಣ್ಣಗಳು ನೀವು ಕೇಳಿರೇ. ಸೂರ್ಯನು ರಥವನೇರಿ ಪದಾರ್ಥಂಗಳ ಚಬುಕುಮಾಡಿ ಮನೋವೇಗದಿಂ ಪಶ್ಚಿಮ ಸಮುದ್ರಕ್ಕೆ ದಾಳಿಯಿಡಲು ರವಿಕಿರಣಂಗಳು ಹಿಂದುಳಿದಿಪ್ಪವೇ? ಅದು ಕಾರಣ- ಪುಷ್ಪವಿದ್ದಲ್ಲಿ ಪರಿಮಳವಿಪ್ಪುದು. ಅಂಗವಿದ್ದಲ್ಲಿ ಲಿಂಗವಿಪ್ಪುದು. ಲಿಂಗವಿದ್ದಲ್ಲಿ ಆ ಲಿಂಗದ ಮೇಲೆ ಮನವಿಪ್ಪುದು. ಲಿಂಗದ ಮೇಲೆ ಮನವಿಪ್ಪಲ್ಲಿಯೇ ಶರಣ. ಆ ಶರಣ ನಡೆದಲ್ಲಿಯೇ ಉರಿವಗ್ನಿಯ ಮೇಲೆ ತಂಗಾಳಿ ಬೀಸಿದಂತೆ. ತ್ರಿಪುಟಿಯ ಮೇಲೆ ಚಿದ್ಭೆಳಗು ಓಲಾಡುತ್ತಿದೆ. ಆ ಶರಣ ನೋಡುವಲ್ಲಿಯೇ ಪ್ರಣವದ ಬಳ್ಳಿ ಮನವ ಸುತ್ತುತ್ತಿದೆ. ಆ ಶರಣ ನೋಡುವಲ್ಲಿಯೇ ಪಂಚವರ್ಣಂಗಳ ಸ್ವರೂಪು ಲಿಂಗಾರ್ಪಿತವಾಗುತ್ತಿದೆ. ಶರಣ ಕುಂಬ್ಥಿಸುವಲ್ಲಿಯೇ ಓಂಕಾರ ಒಡಗೂಡುವುದಯ್ಯ. ಶರಣ ರೇಚಿಸುವಲ್ಲಿಯೇ ಪಂಚಾಕ್ಷರಂಗಳು ಎಡೆಯಾಡುತ್ತಿವೆ. ಶರಣ ಸುಳಿವಲ್ಲಿಯೇ ಹಲವು ಪ್ರಕಾರದ ವಸ್ತುಗಳ ತನುಸೋಂಕು ಲಿಂಗಮನವ ತುಂಬುತ್ತಿದೆ. ಇದು ಕಾರಣ ತೋಂಟದಾರ್ಯನ ಕರುಣಪ್ರಸಾದಮಂ ಪಡೆದು ತತ್ವಸ್ವರೂಪ ಧ್ಯಾನ ಧಾರಣ ಅರ್ಪಿತಾವಧಾನವನರಿದ ಶರಣಂಗೆ ಗಮನಾಗಮನವೆಂಬುಭಯವುಂಟೇ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ, ಅಂಗ-ಪ್ರತ್ಯಂಗಸ್ವರೂಪ ಸ್ವಭಾವಗಳೆಂತೆಂದಡೆ : ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ, ಮಹಾಘನವಾಗಿಹ ಪ್ರಣವವೆ ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ. ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಚಕ್ಷು. ನಿರಾಕಾರಪ್ರಣವ, ನಿರಾಳಪ್ರಣವವೆ ಆ ಅಖಂಡ ಮೂಲಸ್ವಾಮಿಯ ಪುರ್ಬು. ಅಚಲಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ. ಸಹಜ ನಿರಾಲಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ನಾಸಿಕ. ನಿರಾಲಂಬಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ. ನಿರಾಮಯಪ್ರಣವ ನಿರಾಮಯಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ. ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ. ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ. ನಾದ ಬಿಂದು ಕಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ*ಸಂಪುಟ ನೋಡಾ. ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ, ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ, ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ, ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ, ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ, ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ. ಆ ಒಂದೊಂದು ದಂತಂಗಳ ಕಾಂತಿಯೆ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ಕುಳವಿಲ್ಲದ ನಿರಾಕುಳಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕೊರಳು. ಅಪ್ರಮಾಣ ಅಗೋಚರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ. ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ, ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ. ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ. ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ. ನಿರುಪಮಪ್ರಣವ, ನಿರುಪಮಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾಶ್ರ್ವಂಗಳು. ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು. ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನಿನೆಲುವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ. ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು, ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು, ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು, ಅನೇಕಕೋಟಿ ಆದಿಪಾಶಂಗಳೆಂಬ ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು, ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್‍ಪದ, ಅನೇಕಕೋಟಿ ಅನಾದಿ ತ್ವಂಪದ, ಅನೇಕಕೋಟಿ ಅನಾದಿ ಅಸಿಪದಂಗಳೆಂಬ ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್‍ಪದ, ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು, ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ ವೇದಾಂತ ಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು, ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು, ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು, ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು, ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು, ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಆದಿದೇವರ್ಕಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು, ಅನೇಕಕೋಟಿ ಮಹಾಬ್ರಹ್ಮಾಂಡಂಗಳು, ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ನಡುವೇ ವ್ಯೋಮಾತೀತಪ್ರಣವವು. ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ ಚಿತ್ಕಲಾತೀತಪ್ರಣವ. ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ ಅನಾದಿಪ್ರಣವ ಆದಿಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ ಮೊದಲಾದ ಅನೇಕಕೋಟಿ ದೇವರ್ಕಳಿಗೂ ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ. ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ. ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ. ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ. ಓಂಕಾರಪ್ರಣವ ಮಹದೋಂಕಾರಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ. ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ ಪ್ರಣವದತ್ತತ್ತ ಸ್ಥಾನಂಗಳೇ ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ. ಆ ಓಂಕಾರಪ್ರಣವದ ಮಹದೋಂಕಾರಪ್ರಣವದ ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಾಂಗುಷಾ*ಂಗುಲಿಗಳು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಮಾತೇ ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ ಅತಿಮಹಾಜ್ಯೋತಿಪ್ರಣವ ನೋಡಾ. ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯಲ್ಲಿ ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ ಆ ನಿರಾಳಸ್ವಯಂಭುಲಿಂಗಂಗಳೇ ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ. ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ. ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->