ಅಥವಾ

ಒಟ್ಟು 173 ಕಡೆಗಳಲ್ಲಿ , 46 ವಚನಕಾರರು , 145 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು. ಸಕಲ ನೀನು ನಿಷ್ಕಲ ನೀನು. ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ ? ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ ! ಅದೆಂತೆಂದಡೆ: ``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ'' _ ಇಂತೆಂದುದಾಗಿ_ನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ ಸಧರ್ಮಿಗಳ ಕಂಡು, ಗಮನಾಗಮನವೆಂದು ನಡೆವಲ್ಲಿ ಬೆಳಗುಗತ್ತಲೆಯಪ್ಪಿ ಸುಳುಹು ಸೂಕ್ಷ್ಮಗೆಟ್ಟು, ಕಳೆ ಕಸವಗೂಡಿ ಕಷ್ಟಕಲ್ಪನೆಯೊಳಗೆ ಕಡೆಗಾಣದಾದರು. ಮತ್ತೆ ಅವರಂಗಚರಿತೆಯನರಿಯದಿರ್ದನು ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ನಿಜಮಾರ್ಗ ನಿಜಮಾರ್ಗ ನಿಲುವಿನೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾನಾ ಭೇದವ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ ನಾನಾ ಜೀವದ ಕಳೆ ನಿನ್ನ ಕಾರುಣ್ಯದಲ್ಲಿ ಬೆಳೆವುತಿಪ್ಪ ಮೂರುತಿ ನೀನೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ ಆ ಪುಷ್ಪ ಕರಣದೊಳಗಡಗಿತ್ತಯ್ಯ. ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು. ಪುರುಷ ಪುಷ್ಪದ ಮರನು, ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು. ನಿದ್ರೆಯ ಕಪ್ಪೊತ್ತದು. ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ ಲಿಂಗವೆ ಧರೆಯಾಗಿ ಬೆಳೆಯಿತ್ತು, ಆ ಪುಷ್ಪ ನೋಡಾ ! ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ.
--------------
ಅಲ್ಲಮಪ್ರಭುದೇವರು
ಗಂಬ್ಥೀರ ಗುರುವೆನ್ನ ಸಂಗಸಮರಸವ ಮಾಡಿ, ಅಂಗದೊಳಡಗಿರ್ದ ಕಂಗಳ ಬೆಳಗ ಕರುಣದಿಂದೆತ್ತಿ ಪಣೆಗಿಡಲು, ಗಣಿತಲಿಖಿತವು ಕಾಣದೋಡಿದವು, ಕಳೆ ಬಿಂದು ನಾದ ಸಂಭ್ರಮೆಯಗೊಂಡು, ನಿರಂಜನ ಚನ್ನಬಸವಲಿಂಗಕ್ಕೆ ತಲೆಯಿಡಲಮ್ಮದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು, ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು, ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ ಅಯಿದರಾಟಿ, ಆರರ ಕೂಟ, ಏಳರ ಬೇಟ, ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು. ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು. ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ.
--------------
ಶಿವಲೆಂಕ ಮಂಚಣ್ಣ
ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ ತಾಗಿತು ಮನ ಸಂದ ಗುರಿಯ. ಅದೇತರ ಗುಣದಿಂದ? ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ ಚಿತ್ತ ಹಸ್ತದ ಲಿಂಗದ ದೃಷ್ಟ. ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು ಕಾಯದ ನೆಮ್ಮುಗೆಯಲ್ಲಿ ಕಾಣಬೇಕು. ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಪ್ರಣವಸ್ವರೂಪಮಾದ ಪರಬ್ರಹ್ಮವೇ ತಾನು ತನ್ನ ನಿಜಲೀಲಾನಿಮಿತ್ತ ತ್ರಿವರ್ಣರೂಪಕಮಾಗಿ, ಅದೇ ಹರಿಹರಬ್ರಹ್ಮಸ್ವರೂಪಮಾಗಿ, ಹರಿಯೇ ಶರೀರಮಾಗಿ, ಹರನೇ ಜೀವಮಾಗಿ, ಬ್ರಹ್ಮನೇ ಮನಸ್ಸಾಗಿ, ಆ ಬ್ರಹ್ಮಸ್ವರೂಪಮಾದ ಕಲೆಯೇ ಶರೀರಕ್ಕೆ ಶಕ್ತಿಯಾಗಿ, ಆ ಶರೀರಸ್ವರೂಪಮಾದ ಬಿಂದುವೇ ಪ್ರಾಣಕ್ಕೆ ಶಕ್ತಿಯಾಗಿ, ಆ ಪ್ರಾಣಸ್ವರೂಪಮಾದ ನಾದವೇ ಮನಶ್ಶಕ್ತಿಯಾಗಿ, ಆ ಪ್ರಾಣಕ್ಕೆ ನಾಸಿಕವೇ ಸ್ಥಾನಮಾಗಿ, ಮನಸ್ಸಿಗೆ ಜಿಹ್ವೆಯೇ ಸ್ಥಾನಮಾಗಿ, ಶರೀರಕ್ಕೆ ನೇತ್ರವೇ ಸ್ಥಾನಮಾಗಿ, ತನು ಸ್ಪರುಶನಸ್ವರೂಪು, ಮನಸ್ಸು ಶಬ್ದಸ್ವರೂಪು, ಪ್ರಾಣ ಆತ್ಮಸ್ವರೂಪು. ಈ ತನು ಮನಃಪ್ರಾಣಂಗಳಿಂದೊಗೆದ ಆತ್ಮಾದಿ ಷಡ್ಭೂತಂಗಳಿಗೆ ಆತ್ಮಾದಿ ಷಡ್ಭೂತವೇ ಕಾರಣಮಾಗಿ, ಜೀವನದಲ್ಲಿ ಹುಟ್ಟಿದ ಸತ್ವಗುಣವು ಶರೀರವನಾವರಿಸಿ, ಆ ಜೀವನಿಗೆ ತಾನೇ ಸ್ಥಿತಿಕರ್ತೃವಾಯಿತ್ತು. ಶರೀರದಲ್ಲಿ ಹುಟ್ಟಿದ ತಮೋಗುಣವು ಜೀವನನಾವರಿಸಿ, ಆ ಶರೀರಕ್ಕೆ ತಾನೇ ಸಂಹಾರಕರ್ತೃವಾಯಿತ್ತು. ಆ ಶರೀರ ಜೀವಸಂಗದಿಂದೊಗೆದ ಅಹಂಕಾರಸ್ವರೂಪಮಾದ ರಜೋಗುಣವು ಮನಮನಾವರಿಸಿ, ಈ ಎರಡಕ್ಕೂ ತಾನೇ ಸೃಷ್ಟಿಕರ್ತೃವಾಯಿತ್ತು. ಆ ನಾದವೇ ವಾಗ್ದೇವಿಯಾಗಿ, ಬಿಂದುವೇ ಮಹಾದೇವಿಯಾಗಿ, ಕಳೆಯೇ ಮಹಾಲಕ್ಷ್ಮಿಯಾಗಿ, ಈ ತನು ಮನಃಪ್ರಾಣಂಗಳನು ಮರುಳುಮಾಡಿತ್ತು. ಜಾಗ್ರತ್ಸ್ವಪ್ನಸುಷುಪ್ತ್ಯಾದ್ಯವಸ್ಥೆಗಳೊಳಗೆ ಹೊಂದಿಸಿ, ಮುಂದುಗಾಣಲೀಯದೆ, ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ತೊಳಲಿಬಳಲಿಸುತ್ತಿರಲು, ಆ ಕಳೆಯಲ್ಲಿ ಕೂಡಿ ಶರೀರವು ಉಬ್ಬುತ್ತಾ, ಆ ನಾದದಲ್ಲಿ ಕೂಡಿ ಮನಸ್ಸು ಕೊಬ್ಬುತ್ತಾ, ಆ ಶಕ್ತಿಯಲ್ಲಿ ಕೂಡಿ ಪ್ರಾಣ ಬೆಬ್ಬನೆ ಬೆರೆವುತ್ತಾ, ಭವಭವದೊಳು ತೊಳಲುತ್ತಿರಲು, ಗುರುಕಟಾಕ್ಷದಿಂ ಕರ್ಮವು ಸಮೆದು ಧರ್ಮವು ನೆಲೆಗೊಳ್ಳಲು, ಆ ಮೇಲೆ ಮಹಾಜ್ಞಾನಶಕ್ತಿಯಾಯಿತ್ತು ಆ ಬಿಂದುವೇ ಆನಂದಶಕ್ತಿಯಾಯಿತ್ತು ಆ ಕಳೆಯೇ ನಿಜಶಕ್ತಿಯಾಯಿತ್ತು ಇಂತು ಸತ್ಯಜ್ಞಾನಾನಂದಸ್ವರೂಪಮಾದ ಶಕ್ತಿಮಹಿಮೆಯಿಂದ ಶರೀರವೇ ವಿಷ್ಣುವಾಗಲು, ಅಲ್ಲಿ ಶ್ರೀಗುರುಸ್ವರೂಪಮಾದ ಇಷ್ಟಲಿಂಗವು ಸಾಧ್ಯಮಾಯಿತ್ತು. ಆ ಪ್ರಾಣವೇ ರುದ್ರಸ್ವರೂಪವಾಗಲು, ಜಂಗಮಮೂರ್ತಿಯಾದ ಪ್ರಾಣಲಿಂಗವು ಸಾಧ್ಯವಾಯಿತ್ತು. ಮನಸ್ಸೇ ಬ್ರಹ್ಮಸ್ವರೂಪವಾಗಲು, ಲಿಂಗಾಕಾರಮಾದ ಭಾವಲಿಂಗವು ಸಾಧ್ಯಮಾಯಿತ್ತು. ಆ ಲಿಂಗಗಳೇ ಆತ್ಮಾದಿ ಷಡ್ಭೂತಂಗಳಲ್ಲಿ ಆಚಾರಾದಿ ಮಹಾಲಿಂಗಂಗಳಾದವು. ಆ ಶಕ್ತಿಗಳೇ ಕ್ರಿಯಾದಿ ಶಕ್ತಿಯರಾದರು. ಆ ಶಕ್ತಿಮುಖದಲ್ಲಿ ತಮ್ಮಲ್ಲಿ ಹುಟ್ಟಿದ ನಾನಾವಿಷಯ ಪದಾರ್ಥಂಗಳನ್ನು ಆಯಾ ಲಿಂಗಂಗಳಿಗರ್ಪಿಸಿ, ತತ್ಸುಖಾನುಭವದೊಳೋಲಾಡುತ್ತಿರಲು, ಆ ಶಕ್ತಿಗಳೇ ಲಿಂಗಶಕ್ತಿಗಳಾಗಿ, ತಾವೇ ಆಯಾ ಲಿಂಗಸ್ವರೂಪ ಶರೀರ ಪ್ರಾಣ ಮನೋಭಾವಂಗಳಳಿದು, ಲಿಂಗಭಾವ ನೆಲೆಗೊಂಡಲ್ಲಿ, ಸತ್ವರಜಸ್ತಮೋಗುಣಗಳು ಜ್ಯೋತಿಯೊಳಗಡಗಿದ ಕತ್ತಲೆಯಂತೆ, ತಮ್ಮ ನಿಜದಲ್ಲಿ ತಾವೇ ಲೀನವಾದವು. ಬಿಂದು, ಶರೀರದೊಳಗೆ ನಿಂದು ಆನಂದರೂಪಮಾಯಿತ್ತು. ನಾದವು ಪ್ರಾಣದೊಳಗೆ ಬೆರೆದು ನಿಶ್ಶಬ್ದನಿರೂಪಮಾದ ಜ್ಞಾನಮಾಯಿತ್ತು. ಕಳೆ ಮನದೊಳಗೆ ಬೆರದು, ಪರಬ್ರಹ್ಮ ಸ್ವರೂಪಮಾಗಿ ನಿಜಮಾಯಿತ್ತು . ಆ ಆನಂದವೇ ಇಷ್ಟಲಿಂಗರೂಪಮಾಗಿ, ಜ್ಞಾನವೇ ಪ್ರಾಣಲಿಂಗಸ್ವರೂಪಮಾಗಿ, ಆ ನಿಜವೇ ಭಾವಲಿಂಗಮೂರ್ತಿಯಾಗಲು, ಆ ಕರ್ಮ ಧರ್ಮ ವರ್ಮಂಗಳಡಗಿದವು. ಆತ್ಮಾದಿ ಷಡ್ಭೂತಂಗಳು ಆಚಾರಾದಿ ಮಹಾಲಿಂಗಂಗಳೊಳಗೆ ಲೀನಮಾಗಲು, ಆ ಆರುಲಿಂಗಂಗಳೇ ಈ ಮೂರುಲಿಂಗಂಗಳೊಳಗೆ ಬೆರೆದು, ಇಷ್ಟವೇ ಪ್ರಾಣಮಾಗಿ, ಭಾವಸಂಗದೊಳಗೆ ಪರವಶಮಾಗಿ, ತಾನುತಾನೆಯಾಗಿ, ತನ್ನಿಂದನ್ಯವೇನೂ ಇಲ್ಲದೆ ನಿಬ್ಬೆರಗಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ. ನಾದ ಬಿಂದು ಮಹೇಶ್ವರಸ್ಥಲ. ಕಳೆ ಬೆಳಗು ಪ್ರಸಾದಿಸ್ಥಲ. ಅರಿವು ನಿರವಯವು ಪ್ರಾಣಲಿಂಗಿಸ್ಥಲ. ಜ್ಞಾನ ಸುಜ್ಞಾನ ಶರಣಸ್ಥಲ. ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಆಗಮ್ಯದ ಐಕ್ಯಸ್ಥಲ_ ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ, ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು ! ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ.
--------------
ಅಲ್ಲಮಪ್ರಭುದೇವರು
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು . ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು . ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು. ಎಂಟುರತ್ನದ ಕಾಂತಿ, ಜೀವರತ್ನದ ಕಳೆ ಭಾವಿಸಿ ಏಕವ ಮಾಡಿ ನಡೆವುದು. ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು. ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
--------------
ಆನಂದಯ್ಯ
ಬಿಂದು ನಾದವ ನುಂಗಿತ್ತೆಂಬರು, ನಾದ ಬಿಂದುವ ನುಂಗಿತ್ತೆಂಬರು. ಕಳೆ ಬಿಂದುವ ನುಂಗಿತ್ತೆಂಬರು, ಬಿಂದು ಕಳೆಯ ನುಂಗಿತ್ತೆಂಬರು. ಈ ಮೂರರ ಅಂದವ ಅತೀತ ತಿಂದಿತ್ತು, ತಿಂದವನ ತಿಂದ ಅಂದವ ನೋಡಾ. ಇದಕ್ಕೊಂದೂ ಇಲ್ಲಾ ಎಂದೆ, ಸಂದನಳಿದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->