ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ
ನೀವು ಶಿವಪ್ರಸಾದಿಗಳೆಂತಾದಿರಿ ಹೇಳಿರಣ್ಣ.
ಅರಿಯದಿರ್ದಡೆ ಶಿವಪ್ರಸಾದದ ಕಲೆನೆಲೆಯ ಕೇಳಿರಣ್ಣ.
ಗುರುಲಿಂಗಜಂಗಮದಿಂದ
ವೇಧಾಮಂತ್ರಕ್ರಿಯಾದೀಕ್ಷೆಯ ಬೆಸಗೊಂಡು,
ತನುಮನಪ್ರಾಣಂಗಳ
ಇಷ್ಟಪ್ರಾಣಭಾವಲಿಂಗಂಗಳಿಗೆ ಮೀಸಲ ಮಾಡಿ,
ನಿರ್ವಂಚಕತ್ವದಿಂದ ಸಮರ್ಪಿಸಿ,
ಭೇದಭಾವವನಳಿದು, ಕ್ಷೀರಕ್ಷೀರ ಬೆರೆದಂತೆ,
ಗುರುಮಾರ್ಗಾಚಾರದಲ್ಲಿ ಆಚರಿಸಬಲ್ಲಾತನೆ
ಶಿವಪ್ರಸಾದಿ ನೋಡಾ, ಕಲಿದೇವರದೇವ.