ಮತ್ತೆ ಕೇಳಿರೋ, ಸತ್ಪಾತ್ರಜಂಗಮಕ್ಕೆ ಇತ್ತ ಪುಣ್ಯವು
ಸಾವಿರಕೊಡವಾಲು ದಾನದ ಫಲವು,
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ!
ನೂರುಕೊಡ ತುಪ್ಪದ ದಾನದ ಫಲವು,
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ!
ಕೋಟಿಯಜ್ಞಂಗಳ ಮಾಡಿದ ಫಲವು,
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ !
ಅದೆಂತೆಂದೊಡೆ :
``ಕ್ಷೀರಕುಂಭಸಹಸ್ರೇಣ ಘೃತಕುಂಭಶತೈರಪಿ|
ಭಸ್ಮಾಂಗಿಭಿಕ್ಷಮಾತ್ರೇಣ ಕೋಟಿಯಜ್ಞಫಲಂ ಭವೇತ್ ||''
ಎಂದುದಾಗಿ,
ಜಂಗಮಕ್ಕೆ ನೀಡಿ ನಮ್ಮ ಅಖಂಡೇಶ್ವರಲಿಂಗವನೊಲಿಸಿರೋ.